ಸಂಪಾದಕೀಯ

ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ಜಾತಿಗಣತಿ ವರದಿ ಮಂಡನೆ

ಕರ್ನಾಟಕ ರಾಜಕಾರಣ ಐತಿಹಾಸಿಕ ತಿರುವು ಪಡೆದ ಆ ಕ್ಷಣ ನಲವತ್ತೈದು ವರ್ಷಗಳ ಹಿಂದೆ ಆ ಬೆಳವಣಿಗೆ ಸಂಭವಿಸದೆ ಹೋಗಿದ್ದರೆ ಕರ್ನಾಟಕದ ರಾಜಕಾರಣ ಅಂತಹದೊಂದು ಐತಿಹಾಸಿಕ ತಿರುವು ಪಡೆಯುತ್ತಿತ್ತೇ?  ಈ ಪ್ರಶ್ನೆ ರಾಜ್ಯ ರಾಜಕೀಯದ ಒಳವಲಯಗಳಲ್ಲಿ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ.

ಅಂದ ಹಾಗೆ  ನಲವತ್ತೈದು ವರ್ಷಗಳ ಹಿಂದೆ ಆ ಬೆಳವಣಿಗೆ ನಡೆದ ಕೆಲವೇ ಕಾಲದಲ್ಲಿ, ಅಂದರೆ ೧೯೮೩ರಲ್ಲಿ ಕರ್ನಾಟಕ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ನೋಡಿತು. ಒಂದು ವೇಳೆ ೧೯೮೦ರಲ್ಲಿ ಈ ನಿರ್ದಿಷ್ಟ ಬೆಳವಣಿಗೆ ನಡೆಯದೆ ಹೋಗಿದ್ದರೆ ೧೯೮೩ರಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬರಲು ಸಾಧ್ಯವಿರಲಿಲ್ಲ ಅಂತ ಈಗಲೂ ಬಹುತೇಕ ರಾಜಕೀಯ ತಜ್ಞರು ವಾದಿಸುತ್ತಾರೆ.

ಅಂದ ಹಾಗೆ ೧೯೮೦ರಲ್ಲಿ  ನಡೆದ ಆ  ಬೆಳವಣಿಗೆ ಎಂದರೆ ಮುಖ್ಯಮಂತ್ರಿ ದೇವರಾಜ ಅರಸರ  ಪದಚ್ಯುತಿ. ೧೯೭೨ರಿಂದ ೧೯೮೦ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸರು ಇತಿಹಾಸದ ಚಕ್ರಕ್ಕೆ ವೇಗ ತಂದರು. ಶೋಷಿತ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದರು. ಅವರು ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ಮಂತ್ರವನ್ನು ಜಪಿಸಿದ ಪರಿಣಾಮವಾಗಿ ನಾಡಿನ ಭೂ ಸಂಪತ್ತಿನ ಒಂದು ಭಾಗ ಶೋಷಿತ ವರ್ಗಗಳ ಕೈ ಸೇರಿತು.

ಆರ್ಥಿಕವಾಗಿ, ರಾಜಕೀಯವಾಗಿ,  ಶೈಕ್ಷಣಿಕವಾಗಿ ಶೋಷಿತ ವರ್ಗಗಳು ಬಲಿಷ್ಠವಾಗದಿದ್ದರೆ ಅವು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ ಎಂಬ ಅರಿವಿನಿಂದ ಅವರು ಮಾಡಿದ ಕೆಲಸ ಸಹಜವಾಗಿಯೇ ಅವರನ್ನು ಸಾಮಾಜಿಕ ಕ್ರಾಂತಿಯ ಹರಿಕಾರ ಎಂದು ಗುರುತಿಸುವಂತೆ ಮಾಡಿತು. ಅರಸರ ಈ ಕೆಲಸದ ಫಲವನ್ನು ನೋಡಲು ಕಾಂಗ್ರೆಸ್ ಬಹುಕಾಲ ಕಾಯಬೇಕಾಗಲಿಲ್ಲ.

ಅಂದರೆ ೧೯೭೨ರಿಂದ ೧೯೭೮ರವರೆಗಿನ ಅವಧಿಯಲ್ಲಿ ಅವರು ಜಾರಿಗೆ ತಂದ ಕಾರ್ಯಕ್ರಮಗಳು ೧೯೭೮ರಲ್ಲಿ ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರದ ಗದ್ದುಗೆಗೇರಿಸಿದವು. ಹಾಗೆ ನೋಡಿದರೆ ೧೯೭೮ರ ಗೆಲುವು ಕೂಡಾ ಸಣ್ಣ ಸಾಧನೆಯಾಗಿರಲಿಲ್ಲ. ಏಕೆಂದರೆ ಆ ಹೊತ್ತಿಗಾಗಲೇ ದೇಶದಲ್ಲಿ ಇಂದಿರಾ ವಿರೋಧಿ ಅಲೆ ಸುನಾಮಿಯ ರೂಪ ಪಡೆದಿತ್ತು. ಅದರ ವೇಗಕ್ಕೆ ದೇಶದ ಬಹುತೇಕ  ಕಡೆ ಕಾಂಗ್ರೆಸ್ ಸರ್ಕಾರಗಳು ಮಗುಚಿ ಬಿದ್ದಿದ್ದವು.

ಆದರೆ ರಾಷ್ಟ್ರ ರಾಜಕಾರಣ ತಲುಪಿದ್ದ ಅಂತಹ ಸಂಕೀರ್ಣ ಕಾಲಘಟ್ಟದಲ್ಲೂ ಅರಸು ನೇತೃತ್ವದ ಕಾಂಗ್ರೆಸ್ ಕರ್ನಾಟಕದ ಅಧಿಕಾರ ಸೂತ್ರವನ್ನು ಮರುವಶ ಮಾಡಿಕೊಂಡಿತ್ತು. ಇದಾದ ನಂತರ ಕರ್ನಾಟಕದ ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಸತತ ಎರಡು ಬಾರಿ ಗೆದ್ದ ಉದಾಹರಣೆಯೇ ಇಲ್ಲ.  ಆದರೆ ಇಂತಹ  ಸಾಧನೆ ಮಾಡಿದ ದೇವರಾಜ ಅರಸರ ಬಗ್ಗೆ ಕಾಂಗ್ರೆಸ್‌ನ ಸರ್ವೋಚ್ಚ ನಾಯಕಿ ಇಂದಿರಾ  ಗಾಂಧಿ ಮನಸ್ಸಿನಲ್ಲಿ ಅಪನಂಬಿಕೆ ಶುರುವಾಯಿತು.

ಅರಸರು ತನಗೆ ನಿಷ್ಠರಾಗಿ ಉಳಿದಿಲ್ಲ ಎಂಬ ಅವರ ಅಪನಂಬಿಕೆ ದಿನಕಳೆದಂತೆ ಜ್ವಾಲಾಮುಖಿಯಾಯಿತು. ಪರಿಣಾಮ ಅರಸರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಲು  ನಿರ್ಧರಿಸಿದ ಇಂದಿರಾಗಾಂಧಿ ಪಟ್ಟು ಬಿಡದೆ ಆ ಕೆಲಸವನ್ನು ಮಾಡಿ ಮುಗಿಸಿದರು. ಆದರೆ ತಮ್ಮ ಅಹಂಅನ್ನು ತೃಪ್ತಿಪಡಿಸಿಕೊಂಡ ಅವರಿಗೆ ಕರ್ನಾಟಕದ ಸಾಮಾಜಿಕ  ಸಂರಚನೆ ಅರ್ಥವಾಗಲಿಲ್ಲ. ಸತತ ಎಂಟ್ಹತ್ತು ವರ್ಷಗಳ ಕಾಲ ದುಡಿದು ಅರಸರು ಕಟ್ಟಿದ ಬಲಾಢ್ಯ ಸೈನ್ಯದಲ್ಲಿ ಎಂತಹ ಬಿರುಕು ಮೂಡಬಹುದು ಎಂಬುದು ಅರ್ಥವಾಗಲಿಲ್ಲ.

ಯಾಕೆಂದರೆ ರಾಜ್ಯವನ್ನು ಆಳುತ್ತಾ ಬಂದ ಬಲಿಷ್ಠವರ್ಗಗಳ ಸೈನ್ಯಕ್ಕೆ ಪ್ರತಿಯಾಗಿ ಅರಸರು ಶೋಷಿತ ವರ್ಗಗಳ ಸೈನ್ಯ ಕಟ್ಟಿದ್ದರು. ಆದರೆ ಯಾವಾಗ ಇಂದಿರಾ ಗಾಂಧಿ ಅವರು  ಅರಸರನ್ನು ಪದಚ್ಯುತಗೊಳಿಸಿದರೋ ಇದಾದ ನಂತರ ಆ ಶೋಷಿತ ವರ್ಗಗಳ ಸೈನ್ಯದಲ್ಲಿ ಬಿರುಕು ಕಾಣಿಸಿಕೊಂಡಿತು. ಮತ್ತು ಅರಸರ ನಂತರ ಮುಖ್ಯಮಂತ್ರಿಯಾದ ಗುಂಡೂರಾಯರಿಗೆ ಈ ಬಿರುಕು ಸರಿಪಡಿಸುವ ಕೌಶಲವಾಗಲೀ,ಅದಕ್ಕೆ ಅಗತ್ಯವಾಗಿದ್ದ ಸೋಷಿಯಲ್ ಎಂಜಿನಿಯರಿಂಗ್  ಆಗಲೀ ಗೊತ್ತೇ ಇರಲಿಲ್ಲ. ಪರಿಣಾಮ!  ಅರಸರ ಪದಚ್ಯುತಿಯ ಸಂಪೂರ್ಣ ಲಾಭವನ್ನು ಪಡೆದ ಬಲಿಷ್ಠ ವರ್ಗಗಳು ಹೊಸ ಸೈನ್ಯವನ್ನು ಕಟ್ಟಿದವು.ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಆ ಸೈನ್ಯ ಅಖಂಡವಾಗಿ ನಿಲ್ಲದಿದ್ದರೂ ಪ್ರತ್ಯೇಕ ನೆಲೆಯಲ್ಲಿ ಅದಕ್ಕೆ ಬೇಕಾದ ಬ್ರಿಗೇಡ್‌ಗಳು ತಲೆ ಎತ್ತಿದವು.  ಅಷ್ಟೊತ್ತಿಗಾಗಲೇ ಕಾಂಗ್ರೆಸ್‌ನಿಂದ ಹೊರಬಂದ ಹಿಂದುಳಿದ ವರ್ಗಗಳ ನಾಯಕ ಸಾರೆಕೊಪ್ಪ ಬಂಗಾರಪ್ಪ ಕೂಡ ಅಂತ ಬ್ರಿಗೇಡ್ ಒಂದರ ನೇತೃತ್ವ ವಹಿಸಿದ್ದರು.

ಅರ್ಥಾತ್, ಕಾಂಗ್ರೆಸ್‌ನಿಂದ ಹೊರಬಂದು ದೇವರಾಜ ಅರಸರು ಕಟ್ಟಿದ  ಕ್ರಾಂತಿರಂಗವನ್ನು ಮುನ್ನಡೆಸುತ್ತಿದ್ದರು.  ಇದೇ ಕಾಲಕ್ಕೆ ಅರಸರ ಭೂ ಸುಧಾರಣಾ ಕಾಯ್ದೆಯಿಂದ ಹೊಡೆತ ತಿಂದ ಶಕ್ತಿಗಳು ರಾಜ್ಯದ ಕೆಲ ಭಾಗಗಳಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಬಿಜೆಪಿ ಜತೆ ನಿಂತಿದ್ದವು.

ಹೀಗಾಗಿ ಒಂದು ಕಡೆಯಿಂದ ಜನತಾ ಪಕ್ಷ, ಮತ್ತೊಂದು  ಕಡೆಯಿಂದ  ಬಿಜೆಪಿ, ಮಗದೊಂದು ಕಡೆಯಿಂದ ಕ್ರಾಂತಿರಂಗ ಎಂಬ ಶಕ್ತಿಗಳು ಸುತ್ತುವರಿದು ಕಾಂಗ್ರೆಸ್ ಸೈನ್ಯವನ್ನು ಪರಾಭವಗೊಳಿಸಿದವು.  ಪರಸ್ಪರ ಕೈಗೂಡಿಸಿ ಸರ್ಕಾರ ರಚಿಸಿದವು. ಮುಂದೆ ಜನತಾಪಕ್ಷ, ಕ್ರಾಂತಿರಂಗ  ಒಂದು ನೆಲೆಯಲ್ಲಿ ಬೆಸೆದು ಕೊಂಡುವಾದರೆ ಬಿಜೆಪಿ ಪ್ರತ್ಯೇಕ ಶಕ್ತಿಯಾಗಿ  ಉಳಿಯಿತು. ಯಾವಾಗ ಈ ಬೆಳವಣಿಗೆ ನಡೆಯಿತೋ ಇದಾದ ನಂತರ ಕಾಂಗ್ರೆಸ್ ಯಾವತ್ತೂ ಸತತವಾಗಿ ಎರಡನೇ ಬಾರಿ ಅಧಿಕಾರ ಹಿಡಿಯಲಿಲ್ಲ. ಒಂದು ವೇಳೆ ಅರಸರನ್ನು ಕೆಳಗಿಳಿಸುವ ಕೆಲಸವಾಗದಿದ್ದಿದ್ದರೆ, ಮತ್ತು  ಈ ಬೆಳವಣಿಗೆಯಿಂದ ಶೋಷಿತ ವರ್ಗಗಳ ಸೈನ್ಯ ದಿಕ್ಕೆಡದೆ ಹೋಗಿದ್ದರೆ ಜನತಾರಂಗ ಸರ್ಕಾರ ಮೇಲೆದ್ದು ನಿಲ್ಲುವುದು ಕಷ್ಟವಿತ್ತು.

ಅಂದ ಹಾಗೆ ಈ ಅಂಶವನ್ನೇಕೆ ಗಮನಿಸಬೇಕೆಂದರೆ ಇವತ್ತು ಕರ್ನಾಟಕದ ರಾಜಕಾರಣ ಪುನಃ  ಇದೇ ಹಳಿಯ ಮೇಲೆ ಬಂದು ನಿಂತಿದೆ. ಅವತ್ತು  ಅರಸರಂತೆ, ಇವತ್ತು ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಶೋಷಿತ ವರ್ಗಗಳ ಸೈನ್ಯ ಕಟ್ಟಿದ್ದಾರೆ.

ಈ ಮಧ್ಯೆ ಇಂದಿರಾ-ಅರಸರ ಮಧ್ಯೆ ಸಂಬಂಧ ಹಳಸಿದಂತೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್ ಮಧ್ಯೆ ಸಂಬಂಧ ಹಳಸಿಲ್ಲ. ಅಷ್ಟಾದರೂ ಅಧಿಕಾರ ಹಂಚಿಕೆಯ ಮಾತು ಜೀವಂತವಾಗಿರುವುದರಿಂದ ಮುಂದೇನು?  ಎಂಬ ವಿಷಯದಲ್ಲಿ ಅನುಮಾನ ಉಳಿದುಕೊಂಡೇ ಇದೆ.

ಆದರೆ ಸದ್ಯದ ಪರಿಸ್ಥಿತಿ ಹೇಗೆ ನಿರ್ಮಾಣವಾಗಿದೆ ಎಂದರೆ ಸಿದ್ದರಾಮಯ್ಯ ತಮ್ಮ ಕಾರ್ಯಕ್ರಮಗಳ ಮೂಲಕ, ಎಲ್ಲಕ್ಕಿಂತ ಮುಖ್ಯವಾಗಿ ಶೋಷಿತ ವರ್ಗಗಳಲ್ಲಿ ರಾಜಕೀಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಮೂಲಕ ಪ್ರಬಲ ಶಕ್ತಿಯಾಗಿ ನೆಲೆಯಾಗಿದ್ದಾರೆ. ಹೀಗಾಗಿ ಇವತ್ತಿನ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರನ್ನು ಯಾವುದೇ ಮಾರ್ಗದಿಂದಲೂ ಕೆಳಗಿಳಿಸುವುದು ಕಷ್ಟ. ಹಾಗೇನಾದರೂ ಮಾಡುವ ದುಸ್ಸಾಹಸ ನಡೆದರೆ ೨೦೨೮ರ ವಿಧಾನಸಭೆ ಚುನಾವಣೆ  ೧೯೮೩ರ ವಿಧಾನಸಭಾ ಚುನಾವಣೆಯ ಪ್ರತಿರೂಪವಾಗುತ್ತದೆ.

ಅರ್ಥಾತ್, ಅವತ್ತು ಅರಸರಿಲ್ಲದ ಕಾಂಗ್ರೆಸ್ ಸೈನ್ಯಕ್ಕೆ ಯಾವ ನಿಶ್ಶಕ್ತಿ ಆವರಿಸಿತೋ ಅದೇ ಬಗೆಯ  ನಿಶ್ಶಕ್ತಿ ೨೦೨೮ರ  ವಿಧಾನಸಭಾ ಚುನಾವಣೆಯಲ್ಲೂ ಆವರಿಸುತ್ತದೆ. ಕೌತುಕದ ಸಂಗತಿ ಎಂದರೆ ಅವತ್ತು ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಬಲಿಷ್ಠ ವರ್ಗಗಳ ಸೈನ್ಯ ಹೇಗೆ ಸಜ್ಜಾಗುತ್ತಿತ್ತೋ ಇವತ್ತೂ  ಅದೇ ರೀತಿ   ಅವು ಸಜ್ಜಾಗುತ್ತಿವೆ. ಇಂತಹ ದೈತ್ಯ ಶಕ್ತಿಯನ್ನು ಎದುರಿಸಲು ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ  ಎಂಬ ದಂಡನಾಯಕ ಅನಿವಾರ್ಯ.

ಒಂದು ವೇಳೆ ೨೦೨೮ರ ಮಹಾ ಸಂಗ್ರಾಮದಲ್ಲಿ ಕಾಂಗ್ರೆಸ್ ಸೈನ್ಯದ ಮುಂಚೂಣಿಯಲ್ಲಿ ಸಿದ್ಧರಾಮಯ್ಯ ಇಲ್ಲದಿದ್ದರೆ ನೋ ಡೌಟ್,ಕಾಂಗ್ರೆಸ್ ವಿರೋಧಿ ಸೈನ್ಯ ಕರ್ನಾಟಕವೆಂಬ ಕೋಟೆಯನ್ನು ನಿರಾಯಾಸವಾಗಿ  ತನ್ನ ವಶಕ್ಕೆ ತೆಗೆದುಕೊಳ್ಳಲಿದೆ.

” ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿಯನ್ನು ಜಾರಿಗೊಳಿಸುವ ಭರವಸೆ ನೀಡುತ್ತಿದ್ದಂತೆ, ಅತ್ತ ಒಕ್ಕಲಿಗರ ಸಂಘಟನೆಯೊಂದು ‘ಹೊಸದಾಗಿ ಸಮೀಕ್ಷೆ’ಯನ್ನು ಮಾಡಬೇಕು ಎನ್ನುವ ಬೇಡಿಕೆಯನ್ನು ಮುಂದಿಟ್ಟಿದೆ. ವರದಿಯೊಳಗೆ ಏನಿದೆ, ಎಲ್ಲಿ ತಪ್ಪಾಗಿದೆ ಎನ್ನುವುದು ಇನ್ನೂ ಸ್ಪಷ್ಟವಿಲ್ಲದೇ ಇರುವಾಗ ಸಂಘಟನೆ, ಸಮೀಕ್ಷೆ ಸರಿಯಿಲ್ಲ ಎಂದು ತಕರಾರು ತೆಗೆಯುವುದೇ ವಿಚಿತ್ರವಾಗಿದೆ. ಆ ಸಂಘಟನೆಗೆ ವರದಿಯಲ್ಲಿರುವ ಸತ್ಯಾಂಶಗಳು ಬಹಿರಂಗವಾಗುವುದು ಮತ್ತು ಜಾರಿಗೊಳ್ಳುವುದು ಬೇಡ ಅನಿಸಿರಬಹುದು.”

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ನಾನು ಹೈಕಮಾಂಡ್‌ ಹೇಳಿದಂತೆ ನಡೆದುಕೊಳ್ಳುತ್ತೇನೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿದ್ದರಾಮಯ್ಯ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂಬ ಮಾಜಿ ಸಂಸದ ಡಿ.ಕೆ.ಸುರೇಶ್‌ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಟಾಂಗ್‌ ಕೊಟ್ಟಿದ್ದಾರೆ. ಸಿಎಂ…

1 hour ago

ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ: ಡಿ.ಕೆ.ಸುರೇಶ್‌ ಪುನರುಚ್ಛಾರ

ಬೆಂಗಳೂರು: ನನಗೆ ಈಗಲೂ ಭರವಸೆಯಿದೆ. ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಹೇಳಿದರು. ಈ…

2 hours ago

ಸಚಿವ ಎಂ.ಬಿ.ಪಾಟೀಲ್‌ ನಡೆ ಸ್ವಾಗತಿಸಿದ ಸಚಿವ ಚಲುವರಾಯಸ್ವಾಮಿ: ಕಾರಣ ಇಷ್ಟೇ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 500 ಕೋಟಿ ವೆಚ್ಚದಲ್ಲಿ ಆಟೋ ಮೋಟಿವ್ ರಿಸರ್ಚ್ ಆಸೋಸಿಯೇಷನ್ ಆಪ್ ಇಂಡಿಯಾ ಸಂಶೋಧನಾ ಕೇಂದ್ರ…

2 hours ago

ಮಹಾಶಿವರಾತ್ರಿ ಜಾತ್ರೆಯ ಸಂಭ್ರಮ: ಮಲೆ ಮಹದೇಶ್ವರ ಬೆಟ್ಟಕ್ಕೆ ದ್ವಿಚಕ್ರ, ತ್ರಿಚಕ್ರ ವಾಹನಗಳ ಪ್ರವೇಶಕ್ಕೆ ಬ್ರೇಕ್‌

ಹನೂರು: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಮಹಾಶಿವರಾತ್ರಿ ಜಾತ್ರೆಯ ಹಿನ್ನೆಲೆಯಲ್ಲಿ ದ್ವಿಚಕ್ರ ಹಾಗೂ…

2 hours ago

ಭಕ್ತರ ಸುರಕ್ಷತೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ: ಶಾಸಕ ಮಂಜುನಾಥ್ ಸೂಚನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಫೆಬ್ರವರಿ.14ರಿಂದ ಆರಂಭಗೊಳ್ಳಲಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸಕ್ಕೆ ಲಕ್ಷಾಂತರ ಮಂದಿ ಭಕ್ತರು…

2 hours ago

ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಾಗೃತಿ ಜಾಥಾ

ಮೈಸೂರು: ಮೈಸೂರು ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಮಾದರಿ ಜಿಲ್ಲೆಯನ್ನಾಗಿಸುವ ಗುರಿಯೊಂದಿಗೆ ಇಂದು ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು…

3 hours ago