ಸಂಪಾದಕೀಯ

ನಾಯಕತ್ವದ ಚರ್ಚೆ ಹಗ್ಗಜಗ್ಗಾಟ ನಿಲ್ಲಲಿ; ಅಭಿವೃದ್ಧಿಯತ್ತ ಗಮನ ಹರಿಸಲಿ

ದೇಶದಲ್ಲೇ ಮಾದರಿಯಾದ ಹಾಗೂ ಶ್ರೀಸಾಮಾನ್ಯರ ಪರವಾದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ರಾಜ್ಯದ ಜನತೆಗೆ ಭರವಸೆ ನೀಡಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚಿಸಿದ ಮರು ಕ್ಷಣವೇ ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಮಾತು ತಪ್ಪದ ಸಿದ್ದರಾಮಯ್ಯ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಅಂದಿನಿಂದ ಇಂದಿನವರೆಗೆ ವಿರೋಧ ಪಕ್ಷಗಳಿಂದ ಅಪಸ್ವರ ಎದ್ದರೂ, ಆಡಳಿತದಲ್ಲಿ ಎಂತಹದ್ದೇ ಸವಾಲುಗಳು ಎದುರಾದರೂ ಐದು ಗ್ಯಾರಂಟಿ ಯೋಜನೆಗಳಿಗೆ ಯಾವುದೇ ತೊಡಕು ಉಂಟಾಗಿಲ್ಲ. ಸವಲತ್ತು ನಿರಂತರವಾಗಿ ಫಲಾನುಭವಿಗಳನ್ನು ತಲುಪುತ್ತಿವೆ. ಈ ನಡುವೆ ಗ್ಯಾರಂಟಿ ಯೋಜನೆಗಳ ನಿರ್ವಹಣೆಯಲ್ಲಿ ಕೊಂಚ ಏರುಪೇರು ಉಂಟಾ ದರೂ ಅದನ್ನು ಸರಿಪಡಿಸಿಕೊಂಡು ಸರ್ಕಾರ ಮುನ್ನಡೆಯುತ್ತಿದೆ.

ಅಲ್ಲದೆ ಎಂತಹದ್ದೇ ಪರಿಸ್ಥಿತಿ ಎದುರಾದರೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಘಂಟಾಘೋಷವಾಗಿ ಹೇಳಿರುವುದು ಈ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದ್ದ ವಿರೋಧಪಕ್ಷಗಳ ಬಾಯಿ ಮುಚ್ಚಿಸಿರುವುದಲ್ಲದೆ ಉಳಿದ ಮೂರು ವರ್ಷಗಳೂ ಗ್ಯಾರಂಟಿ ಯೋಜನೆಗಳು ನಿರಂತರ ಎಂಬುದನ್ನು ಸಾರಿ ಹೇಳುತ್ತಿದೆ. ಎದುರಾದ ಅಡೆತಡೆಗಳನ್ನು ಮುಲಾಜಿಲ್ಲದೆ ನಿವಾರಿಸಿಕೊಂಡು ಎರಡು ವರ್ಷ ಗಳ ಆಡಳಿತವನ್ನು ಯಶಸ್ವಿಯಾಗಿ ಪೂರೈಸಿ ಮೂರನೇ ವರ್ಷದತ್ತ ಕಾಲಿಟ್ಟಿರುವ ಕಾಂಗ್ರೆಸ್ ಸರ್ಕಾರದೊಳಗಿನ ಆಂತರಿಕ ಬೇಗುದಿಯನ್ನು ನಿವಾಳಿಸಿಕೊಂಡು ಆಡಳಿತ ಯಂತ್ರಕ್ಕೆ ಚುರುಕು ನೀಡಲು ಸಾಧ್ಯವಾಗದೆ ತಿಣುಕಾಡುತ್ತಿದೆ.

ಒಂದೆಡೆ ಗ್ಯಾರಂಟಿ ಯೋಜನೆಗಳಿಂದಾಗಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ನಿರೀಕ್ಷಿಸಿದಷ್ಟು ಅನುದಾನ ಸಿಗುತ್ತಿಲ್ಲ ಎಂದುಒಳಗೊಳಗೆ ಗೊಣಗಿಕೊಳ್ಳುತ್ತಿರುವ ಕೆಲ ಶಾಸಕರು ಸಾಕಷ್ಟು ಅನುದಾನವಿಲ್ಲದೆ ಕ್ಷೇತ್ರದ ಅಭಿವೃದ್ಧಿ ಹೇಗೆ ಮಾಡುವುದು, ಕಾಮಗಾರಿಗಳನ್ನು ನೀಡದೆ ಬೆಂಬಲಿಗರನ್ನು ಹೇಗೆ ನಿಭಾಯಿಸುವುದು ಹೇಗೆ ಎಂದು ಕ್ಷೇತ್ರಕಾರ್ಯಕ್ಕೆ ತಿಲಾಂಜಲಿ ಇಟ್ಟು ಕೈಕಟ್ಟಿ ಕುಳಿತಿದ್ದಾರೆ. ಮತ್ತೊಂದೆಡೆ ಕೆಲ ಹಿರಿಯ ಶಾಸಕರು ನಿಗಮ ಮಂಡಳಿಗಳು, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಅದನ್ನು ದಕ್ಕಿಸಿಕೊಳ್ಳುವುದು ಹೇಗೆ ಎಂಬ ಧಾವಂತದಲ್ಲಿ ಕ್ಷೇತ್ರವನ್ನು ಮರೆತು ರಾಜಕೀಯ ಮೇಲಾಟದಲ್ಲಿ ತೊಡಗಿದ್ದಾರೆ. ಇನ್ನೊಂದೆಡೆ ಪಕ್ಷದೊಳಗಿನ ರಾಜಕೀಯ ಚದುರಂಗದಾಟದಲ್ಲಿ ತಮ್ಮ ಪಾತ್ರವೇನೂ ಎಂಬ ಗೊಂದಲದಲ್ಲಿರುವವರು ಕಾಯಿ ನಡೆಸುವವರಿಗೆ ಕಾಯುತ್ತಿದ್ದಾರೆ.

ಎಲ್ಲವೂ ಅಂದುಕೊಂಡತೆ ನಡೆದರೆ, ಕೈಗೆ ಮೊತ್ತಮೊತ್ತವಾಗಿ ಅನುದಾನ ಸಿಕ್ಕಿದರೆ, ತಮಗೆ ತಕ್ಕಂತೆ ಅಧಿಕಾರ-ಸ್ಥಾನ ಮಾನ ದಕ್ಕಿದರೆ ಅಸಮಾಧಾನ ನೀಗಿ, ಸಮಾಧಾನವಾಗಿ ಸಾಗಿ ಸರ್ಕಾರ ಎಂಬ ಭಾರವಾದ ಬಂಡಿಯನ್ನು ಸರಾಗವಾಗಿ ಎಳೆಯುತ್ತಿದ್ದರು. ಅದು ಅಂದು ಕೊಂಡಂತೆ ಆಗದೇ ಇರುವುದರಿಂದಒಬ್ಬರನ್ನು ನೋಡಿ ಗೊಬ್ಬರ ಹೂಡಿದಂತೆ ಸಣ್ಣಪುಟ್ಟ ಅಸಮಾಧಾನವನ್ನೂ ದೊಡ್ಡದು ಮಾಡಿ ಅದರ ಕಮಟು ವಾಸನೆ ದಿಲ್ಲಿ ಹೈಕಮಾಂಡ್‌ನ ಮೂಗಿಗೆ ಬಡಿಯುವಂತೆ ಮಾಡಿದ್ದಾರೆ. ಅದರರ್ಥ ಮನೆಯೊಳಗೇ ಸರಿಪಡಿಸಿಕೊಳ್ಳಬಹುದಾದ ವಿಷಯನ್ನು ಪಂಚಾಯಿತಿ ಕಟ್ಟೆಗೆ ತಂದಿದಂತಾಗಿದೆ.

ಹಾಗಾಗಿ ಬುಸುಗುಟ್ಟುವ ಶಾಸಕರ ಗಾಳಿಮಾತು ಹೈಕಮಾಂಡ್ ನಾಯಕರನ್ನು ಮನೆಯೊಳಗೆ ಹಾವು ಕಂಡವರಂತೆ ಆಡಿಸಿತ್ತು. ಹಾವಿನ ಭಯ ಹಡಗನ್ನು ಮುಳುಗಿಸಿಬಿಟ್ಟೀತು ಎಂದು ಹೈಕಮಾಂಡ್ ಪುಂಗಿ ಊದಿ ಬುಸುಗುಟ್ಟುವ ಶಾಸಕರನ್ನು ಬುಟ್ಟಿಯೊಳಗೆ ಸೇರಿಸಿ ಕೈತೊಳೆದುಕೊಳ್ಳುವ ಪ್ರಯತ್ನ ಮಾಡಿದೆ. ಈ ಬುಸುಗುಟ್ಟುವ ಶಾಸಕರನ್ನು ಬುಟ್ಟಿಯಿಂದ ಹೊರತೆಗೆದು ಬಿಟ್ಟಿದ್ದವರು ಈಗ ಮತ್ತೊಂದು ಪಟ್ಟು ಹಾಕಲು ಅಂಕ ಸಿದ್ಧ ಪಡಿಸುತ್ತಿರಬಹುದು. ಅದನ್ನು ಕಾಲವೇ ಹೇಳುತ್ತದೆ.

ಆದರೆ ಈಗ ನಮ್ಮ ಮುಂದಿರುವ ಪ್ರಶ್ನೆ ಏನೆಂದರೆ, ರಾಜ್ಯದ ಜನ ಕಾಂಗ್ರೆಸ್‌ಗೆ ಪೂರ್ಣ ಬಹುಮತದ ಸರ್ಕಾರವನ್ನು ದಯಪಾಲಿಸಿದ್ದಾರೆ. ಇವರೂ ಕೂಡ ಜನರಿಗೆ ಭರವಸೆ ಇತ್ತಂತೆ ಐದು ಗ್ಯಾರಂಟಿಯೋಜನೆಗಳನ್ನು ಜಾರಿಗೊಳಿಸಿ ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿದ್ದಾರೆ. ಉಂಬವರನ್ನು ಕಂಡು ಹೊಟ್ಟೆ ತೀಡಿ ಕೊಂಡಂತೆ ಯಾರು ಏನೇ ಹೇಳಿದರೂ ಪಂಚ ಗ್ಯಾರಂಟಿ ಯೋಜನೆಗಳಿಂದ ಶ್ರೀಸಾಮಾನ್ಯರು ಕೊಂಚ ಸುಧಾರಿತ ಜೀವನ ಸಾಗಿಸುತ್ತಿದ್ದಾರೆ. ಅದನ್ನುನೋಡಿಯಾದರೂ ಯಾರಲ್ಲಿ ಏನೇ ಅಸಮಾಧಾನಗಳಿದ್ದರೂ ಅದನ್ನು ಬದಿಗೊತ್ತಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಕೈಜೋಡಿಸಬೇಕು.

ಅದನ್ನು ಬಿಟ್ಟು ಉಂಡ ಮನೆಯಲ್ಲಿ ಗಳ ಇರಿಯುವ ಕೆಲಸ ಮಾಡಬಾರದು. ಇರಲಿ ಈಗ ಶಕ್ತಿ(ಅಧಿಕಾರ, ಅನುದಾನ) ರಾಜಕಾರಣಕ್ಕೆ ಹಂಬಲಿಸಿ ದಾಳ ಉರುಳಿಸಿದವರು, ಇರುವ ಶಕ್ತಿಯನ್ನು ಉಳಿಸಿಕೊಳ್ಳಲು ಹೆಣಗುತ್ತಿರುವವರು ಅಧಿಕಾರ ಹಂಚಿಕೆ, ನಾಯಕತ್ವದ ಬದಲಾವಣೆ ಮುಂತಾದ ಚರ್ಚೆಗಳನ್ನು ಮುನ್ನೆಲೆಗೆ ತಂದಿದ್ದೂ ಆಯಿತು. ಅದಕ್ಕಾಗಿ ಹೊಸಹೊಸ ದಾಳಗಳನ್ನು ಉರುಳಿಸಿದ್ದೂ ಆಯಿತು. ಅದಕ್ಕೆ ಪ್ರತಿ ತಂತ್ರವೆಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಬಣ ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆದಂತೆ ಹೈಕಮಾಂಡ್ ಹಾಗೂ ರಾಜ್ಯದ ಬಣ ರಾಜಕೀಯಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಸದ್ಯಕ್ಕೆ ಅಧಿಕಾರ ಹಂಚಿಕೆ ಹಾಗೂ ನಾಯಕತ್ವ ಬದಲಾವಣೆ ಚರ್ಚೆಗೆ ಬ್ರೇಕ್ ಬಿದ್ದಿದೆ. ಹಾಗಾಗಿ ಇನ್ನಾದರೂ ಸರ್ಕಾರದ ಸಹಭಾಗಿತ್ವ ವಹಿಸಿರುವ ಜನಪ್ರತಿನಿಧಿಗಳು ವೈಯಕ್ತಿಕ ವರ್ಚಸ್ಸನ್ನೇ ನೋಡದೆ ತಮ್ಮ ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಲಿ. ಸಿದ್ದರಾಮಯ್ಯ ಅವರ ಸರ್ಕಾರ ಗ್ಯಾರಂಟಿ ಯೋಜನೆಗಳೊಂದಿಗೆ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲಿ.

ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲಿ; ಆ ಮೂಲಕ ತಮಗೆ ಬಹುಮತದ ಸರ್ಕಾರ ನೀಡಿದ ಶ್ರೀಸಾಮಾನ್ಯರ ಬದುಕನ್ನು ಹಸನಾಗಿಸಲಿ.

” ಯಾರು ಏನೇ ಹೇಳಿದರೂ ಪಂಚ ಗ್ಯಾರಂಟಿ ಯೋಜನೆಗಳಿಂದ ಶ್ರೀಸಾಮಾನ್ಯರು ಕೊಂಚಸುಧಾರಿತ ಜೀವನ ಸಾಗಿಸುತ್ತಿದ್ದಾರೆ. ಅದನ್ನು ನೋಡಿಯಾದರೂಯಾರಲ್ಲಿ ಏನೇ ಅಸಮಾಧಾನಗಳಿದ್ದರೂ ಅದನ್ನು ಬದಿಗೊತ್ತಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಕೈಜೋಡಿಸಬೇಕು. ಅದನ್ನು ಬಿಟ್ಟು ಉಂಡ ಮನೆಯಲ್ಲಿಗಳ ಇರಿಯುವ ಕೆಲಸ ಮಾಡಬಾರದು”

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌ : 5 ವರ್ಷ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಒಪ್ಪಿಗೆ!

ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ…

38 mins ago

ಇವಿ ವಾಹನ ಸವಾರರಿಗೆ ಸಿಹಿ ಸುದ್ದಿ : ಮಂಡ್ಯದಲ್ಲಿ ಮೊದಲ ಇವಿ ಫಾಸ್ಟ್‌ ಚಾರ್ಜಿಂಗ್‌ ಕೇಂದ್ರ ಆರಂಭ

ಮಂಡ್ಯ : ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಜಿಲ್ಲೆಯಲ್ಲಿ…

1 hour ago

ಜಾ.ದಳ ಓಡಿಸಲು ಚಲುವರಾಯಸ್ವಾಮಿಗೆ ಸಾಧ್ಯವೇ? : ಜೆಡಿಎಸ್‌ ನಾಯಕ ಸುರೇಶ್‌ ಗೌಡ ಪ್ರಶ್ನೆ

ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?.…

2 hours ago

ಜಮೀನು ಕಬಳಿಕೆ ಪ್ರಕರಣ | ಸಚಿವ ಚಲುವರಾಯಸ್ವಾಮಿಯೇ ನೇರ ಹೊಣೆ : ಸುರೇಶ್‌ಗೌಡ ಆರೋಪ

ನಾಗಮಂಗಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಮಂಡ್ಯ : ನಾಗಮಂಗಲ ತಾಲ್ಲೂಕಿನ ನಕಲಿ ದಾಖಲೆ ಸೃಷ್ಟಿ…

2 hours ago

ಕಣಿವೆಗೆ ಉರುಳಿದ ಸೇನಾ ವಾಹನ : 10 ಸೈನಿಕರ ಸಾವು

11 ಯೋಧರಿಗೆ ಗಂಭೀರ ಗಾಯ ಭದೇರ್ವಾ : ದೋಡಾ ಜಿಲ್ಲೆಯ ಥನಾಲಾದ ಮೇಲ್ಭಾಗದ ಪ್ರದೇಶದಲ್ಲಿನ ಭದೇರ್ವಾ-ಚಂಬಾ ರಸ್ತೆಯಲ್ಲಿ ಗುರುವಾರ ಸೇನಾ…

2 hours ago

‘ಬಿಗ್ ಬಾಸ್’ ಗಿಲ್ಲಿಗೆ ಸಿಎಂ ಅಭಿನಂದನೆ!

ಬೆಂಗಳೂರು : ಬಿಗ್ ಬಾಸ್ ಮುಗಿದ ಮೇಲೂ ಗಿಲ್ಲಿ ನಟನ ಕ್ರೇಜ್ ಕಮ್ಮಿಯಾಗಿಲ್ಲ. ಹೋದ ಕಡೆ, ಬಂದಕಡೆ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದು,…

2 hours ago