ಸಂಪಾದಕೀಯ

ಬಾಂಗ್ಲಾದಲ್ಲಿ ಪ್ರಜಾತಂತ್ರ ಮರುಸ್ಥಾಪನೆ ಆಗಲಿ

ಸಿಟ್ಟು ಮತ್ತು ಧೈರ್ಯದಿಂದ ಕೂಡಿದ ಚಳವಳಿ ಮುಖಾಂತರ ನಿರಂಕುಶ ಅಧಿಕಾರದತ್ತ ವಾಲುತ್ತಿದ್ದ ಬಾಂಗ್ಲಾ ದೇಶದ ಚುನಾಯಿತ ಸರ್ಕಾರವನ್ನು ವಿದ್ಯಾರ್ಥಿಗಳು ಕೆಳಗಿಳಿಸಿದ ಬಗ್ಗೆ ಜಗತ್ತಿಗೆ ತಿಳಿದಿದೆ. ಜುಲೈ 1ರಿಂದ ಬಾಂಗ್ಲಾ ದೇಶದಲ್ಲಿ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳನ್ನು ಇಡೀ ವಿಶ್ವ ಗಮನಿಸುತ್ತಿದೆ.

ಬಾಂಗ್ಲಾದೇಶದ ವಿಶ್ವವಿದ್ಯಾನಿಲಯದ ಪ್ರತಿನಿಧಿಗಳು ಈಗ ದೇಶದ ಮಧ್ಯಂತರ ಆಡಳಿತಗಾರರ ಭಾಗವಾಗಿ ಹೊರಹೊಮ್ಮಿರುವುದು, ಅಲ್ಲಿ ಇದುವರೆಗೆ ಒಂದರ ನಂತರ ಮತ್ತೊಂದು ಹೀಗೆ ಆಡಳಿತದ ಚುಕ್ಕಾಣಿ ಹಿಡಿಯುತ್ತಿದ್ದ ಎರಡು ಪ್ರಮುಖ ರಾಜಕೀಯ ಪಕ್ಷಗಳ ನಡುವಿನ ಹೊಯ್ದಾಟವೇ ಪ್ರಮುಖ ಕಾರಣವಾಗಿದೆ.

1971ರ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿದ್ದ ಹೋರಾಟಗಾರರ ವಂಶಸ್ಥರಿಗೆ ಶೇ.30ರಷ್ಟು ಸರ್ಕಾರಿ ಉದ್ಯೋಗ ಕೋಟಾವನ್ನು ಮರುಸ್ಥಾಪಿಸುವ ಬಗ್ಗೆ (2018ರಲ್ಲಿ ಅಂದಿನ ಆಡಳಿತ ಈ ಕೋಟಾವನ್ನು ಹಿಂಪಡೆದಿತ್ತು) ಜೂನ್ 5ರಂದು ಢಾಕಾದಲ್ಲಿನಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ವಿರೋಧಿಸಿ ಜುಲೈ 1ರಿಂದ ದೇಶಾದ್ಯಂತ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದರು. ಭಾರತದಲ್ಲಿ ನಡೆದಮಂಡಲ್ ಆಯೋಗ ಮತ್ತು ಚೀನಾದ ಟಿಯಾನನ್ನೆನ್ ಚೌಕ ಸೇರಿದಂತೆ ಪ್ರಪಂಚದಾದ್ಯಂತ ನಡೆದ ಅನೇಕ ಚಳವಳಿಗಳ ಮಾದರಿಯಲ್ಲಿ ಬಾಂಗ್ಲಾ ದೇಶದಾದ್ಯಂತ ವಿದ್ಯಾರ್ಥಿಗಳು ಈ ಕೋಟಾ ವ್ಯವಸ್ಥೆಯನ್ನು ಜಾರಿಗೆ ತರಬಾರದು. ಅದನ್ನು ರದ್ದುಪಡಿಸಬೇಕು, ಅದರ ಬದಲಾಗಿ ಮೆರಿಟ್ ಆಧಾರಿತ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿ ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದರು.

ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿದ್ದ ಅವಾಮಿ ಲೀಗ್ ರಾಜಕೀಯ ಪಕ್ಷದ ಸದಸ್ಯರು ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ ಎಂಬ ಆತಂಕ, ಭಯ ಪ್ರತಿಭಟನೆಗಳಿಗೆ ಮೂಲ ಕಾರಣವಾಯಿತು. ವಿದ್ಯಾರ್ಥಿಗಳ ಈ ಪ್ರತಿಭಟನೆಯನ್ನು ಹತ್ತಿಕ್ಕಲು ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಯಿತು. ಚಳವಳಿಯ ಕಾವು ಜೋರಾಗುತ್ತಿದ್ದಂತೆ ನಾಗರಿಕರು ದಾಳಿಗಳಿಗೆ ಒಳಗಾಗಬೇಕಾಯಿತು.

ವಿದ್ಯಾರ್ಥಿಗಳ ಚಳವಳಿಗೆ ಇಂಬು ನೀಡಿದ ವಿರೋಧ ಪಕ್ಷದ ನಾಯಕರು, ಕಾರ್ಯಕರ್ತರು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಬಂಧನಕ್ಕೆ ಒಳಗಾದರು. ಚಳವಳಿ ತೀವ್ರ ಸ್ವರೂಪ ಪಡೆಯುತ್ತಿರುವುದನ್ನು ಗಮನಿಸಿದ ಶೇಖ್ ಹಸೀನಾ ಸರ್ಕಾರ ಜುಲೈ 19ರ ಮಧ್ಯರಾತ್ರಿ ಕರ್ಪೂ ವಿಧಿಸಿತು.

ವಿದ್ಯಾರ್ಥಿ ಚಳವಳಿಯನ್ನು ಹತ್ತಿಕ್ಕಲು ಉಪಯೋಗಿಸಲಾದ ಸೈನ್ಯ ಮತ್ತು ಪೊಲೀಸ್ ಗುಂಡಿನ ದಾಳಿಗೆ ಸುಮಾರು 439ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಬಗೆಗಿನ ಚಿತ್ರಗಳು ಹೊರ ಜಗತ್ತಿಗೆ ಗೊತ್ತಾಗುತ್ತಿದ್ದಂತೆ, ವಿದ್ಯಾರ್ಥಿಗಳ ಹೋರಾಟ, ಒತ್ತಡವನ್ನು ಗಮನಿಸಿದ ಬಾಂಗ್ಲಾ ಸರ್ವೋಚ್ಚ ನ್ಯಾಯಾಲಯ ಕೋಟಾವನ್ನು ಮತ್ತೆ ಶೇಕಡಾ 5ಕ್ಕೆ ಇಳಿಸಿ ಆದೇಶ ನೀಡಿತು.

ನಿರಂಕುಶಾಧಿಕಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ದ ಆಳವಾದ ರಾಜಕೀಯ ಮತ್ತು ಸಾಮಾಜಿಕ ತಲ್ಲಣ ದಿಂದ ಹೊರಹೊಮ್ಮಿದ ವಿದ್ಯಾರ್ಥಿಗಳ ಚಳವಳಿಗೆ ದೇಶಾದ್ಯಂತ ಸಾವಿರಾರು ಜನರು ಸೇರಿಕೊಂಡರು.

ಅಷ್ಟು ಪ್ರಬಲವಾದ ಚಳವಳಿಯನ್ನು ಎದುರಿಸಲಾರದೇ ಶೇಖ್ ಹಸೀನಾ ಅವರು ಮೂರು ಸೇನಾ ಮುಖ್ಯಸ್ಥರ ಸಮ್ಮುಖದಲ್ಲಿ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದರು. ಸದ್ಯ ಭಾರತದಲ್ಲಿ ಆಶ್ರಯ ಪಡೆದಿರುವ ಅವರ ಭವಿಷ್ಯದ ಯೋಜನೆಗಳು ಅನಿಶ್ಚಿತವಾಗಿವೆ. ಪಲಾಯನ ಮಾಡಿದ ನಂತರ ಅವರ ಮನೆ ಚಳವಳಿಕಾರರ ಆಕ್ರೋಶದ ದಾಳಿಗೆ ತುತ್ತಾಗಿ ಎಲ್ಲ ಛಿದ್ರ ಛಿದ್ರವಾಗಿ ಉಳಿದಿದೆ.

ಬಾಂಗ್ಲಾ ದೇಶದ ಮಾನವ ಹಕ್ಕುಗಳ ಸಂಘಟನೆಗಳ ಪ್ರಕಾರ, ಹಸೀನಾ ಸರ್ಕಾರವನ್ನು ಪತನಗೊಳಿಸಿದ್ದು ಕೇವಲ ವಿದ್ಯಾರ್ಥಿ ರಾಜಕೀಯವಲ್ಲ. ಬದಲಾಗಿ ಭದ್ರತಾ ಪಡೆಗಳ ನಡೆಯಿಂದ ಆಗಿವೆ ಎಂದು ಹೇಳಲಾಗುತ್ತಿದೆ. ಆಳುವ ಸರ್ಕಾರದ ಆದೇಶದಂತೆ ಅಲ್ಲಿನ ಭದ್ರತಾ ಪಡೆಗಳು 2009ರಿಂದ ಸುಮಾರು 600 ಬಲವಂತದ ನಾಪತ್ತೆಗಳನ್ನು ಎಸಗಿದ್ದಾರೆ ಎನ್ನಲಾಗಿದೆ. ಬಾಂಗ್ಲಾ ಮಿಲಿಟರಿಯು ಶೇಖ್ ಹಸೀನಾ ಅವರ ರಾಜೀನಾಮೆಯನ್ನು ಘೋಷಿಸಿದ್ದಲ್ಲದೇ, ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದು ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನುಸ್ ಅವರನ್ನು ತಾತ್ಕಾಲಿಕವಾಗಿ ಸರ್ಕಾರದ ಆಡಳಿತ ನಡೆಸಲು ಒಪ್ಪಿಕೊಂಡಿದೆ.

ಬಾಂಗ್ಲಾ ದೇಶದಲ್ಲಿ ಹಸೀನಾ ಅವರು ಅಧಿಕಾರದಿಂದ ಇಳಿಯುವವರೆಗೆ ನಡೆದ ಚಳವಳಿಗೆ ಒಂದೇ ಉದ್ದೇಶ ಹಸೀನಾ ಅವರಿಂದ ರಾಜೀನಾಮೆ ಪಡೆಯುವುದಾಗಿತ್ತು. ಆ ಉದ್ದೇಶ ಸಫಲವಾದ ಬಳಿಕವೂ ಮುಂದುವರಿದ ಚಳವಳಿ ಮುಸ್ಲಿಮೇತರರನ್ನು ಗುರಿಯಾಗಿಸಿ ನಡೆದಿದೆ ಎನ್ನಲಾಗಿದೆ. ಅಲ್ಲದೆ, ಚಳವಳಿ ಆರಂಭಿಸಿದ ವಿದ್ಯಾರ್ಥಿಗಳನ್ನು ಮೊದಲಿಗೆ ನಿಯಂತ್ರಿಸಲು ಅಲ್ಲಿನ ಸೇನೆ ಮುಂದಾಗಿ, ಹಲವು ವಿದ್ಯಾರ್ಥಿಗಳ ಪ್ರಾಣಕ್ಕೆ ಎರವಾಯಿತು. ಹಸೀನಾ ಅವರ ಸರ್ಕಾರ ಪತನ ಬಳಿಕ ಸೇನೆ ಅಧಿಕಾರ ಹಿಡಿಯಲಿದೆ ಎನ್ನಲಾಗಿತ್ತು. ಆದರೆ, ಪ್ರತಿಭಟನಾಕಾರರು, ಪ್ರಜಾಪ್ರಭುತ್ವ ಪುನರ್ ಸ್ಥಾಪನೆ ಆಗುವವರೆಗೂ ಹೋರಾಟ ನಿಲ್ಲದು ಎಂದಿರುವ ಕಾರಣ ಸೇನೆ ಅಧಿಕಾರ ಹಿಡಿಯುವ ಸಾಧ್ಯತೆ ನೇಪಥ್ಯಕ್ಕೆ ಸರಿದಂತೆ ಕಾಣುತ್ತಿದೆ.

ಈ ಬಿಕ್ಕಟ್ಟು ಜನಾಂಗೀಯ ದ್ವೇಷ, ಅರಾಜಕತೆಗೆ ಅವಕಾಶ ಆಗಬಾರದು. ಶಾಂತಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಯೂನಸ್ ಅವರನ್ನು ಮುಖ್ಯ ಸಲಹೆಗಾರರಾಗಿ ನೇಮಕ ಮಾಡಿರುವುದು. ಬಾಂಗ್ಲಾದಲ್ಲಿ ಶಾಂತಿ, ಸುವ್ಯವಸ್ಥೆ, ಪ್ರಜಾಸತ್ತೆ ಮರು ಸ್ಥಾಪನೆಯ ಆಶಯಕ್ಕೆ ನೀರೆರೆದಿದೆ. ಅದರ ಅನುಷ್ಠಾನಕ್ಕೆ ಎಲ್ಲ ದೇಶಗಳೂ ಸಹಕಾರ ನೀಡಬೇಕಾಗಿದೆ.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

4 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

6 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

6 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

7 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

7 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

8 hours ago