ಸಂಪಾದಕೀಯ

ಬಾಂಗ್ಲಾದಲ್ಲಿ ಪ್ರಜಾತಂತ್ರ ಮರುಸ್ಥಾಪನೆ ಆಗಲಿ

ಸಿಟ್ಟು ಮತ್ತು ಧೈರ್ಯದಿಂದ ಕೂಡಿದ ಚಳವಳಿ ಮುಖಾಂತರ ನಿರಂಕುಶ ಅಧಿಕಾರದತ್ತ ವಾಲುತ್ತಿದ್ದ ಬಾಂಗ್ಲಾ ದೇಶದ ಚುನಾಯಿತ ಸರ್ಕಾರವನ್ನು ವಿದ್ಯಾರ್ಥಿಗಳು ಕೆಳಗಿಳಿಸಿದ ಬಗ್ಗೆ ಜಗತ್ತಿಗೆ ತಿಳಿದಿದೆ. ಜುಲೈ 1ರಿಂದ ಬಾಂಗ್ಲಾ ದೇಶದಲ್ಲಿ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳನ್ನು ಇಡೀ ವಿಶ್ವ ಗಮನಿಸುತ್ತಿದೆ.

ಬಾಂಗ್ಲಾದೇಶದ ವಿಶ್ವವಿದ್ಯಾನಿಲಯದ ಪ್ರತಿನಿಧಿಗಳು ಈಗ ದೇಶದ ಮಧ್ಯಂತರ ಆಡಳಿತಗಾರರ ಭಾಗವಾಗಿ ಹೊರಹೊಮ್ಮಿರುವುದು, ಅಲ್ಲಿ ಇದುವರೆಗೆ ಒಂದರ ನಂತರ ಮತ್ತೊಂದು ಹೀಗೆ ಆಡಳಿತದ ಚುಕ್ಕಾಣಿ ಹಿಡಿಯುತ್ತಿದ್ದ ಎರಡು ಪ್ರಮುಖ ರಾಜಕೀಯ ಪಕ್ಷಗಳ ನಡುವಿನ ಹೊಯ್ದಾಟವೇ ಪ್ರಮುಖ ಕಾರಣವಾಗಿದೆ.

1971ರ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿದ್ದ ಹೋರಾಟಗಾರರ ವಂಶಸ್ಥರಿಗೆ ಶೇ.30ರಷ್ಟು ಸರ್ಕಾರಿ ಉದ್ಯೋಗ ಕೋಟಾವನ್ನು ಮರುಸ್ಥಾಪಿಸುವ ಬಗ್ಗೆ (2018ರಲ್ಲಿ ಅಂದಿನ ಆಡಳಿತ ಈ ಕೋಟಾವನ್ನು ಹಿಂಪಡೆದಿತ್ತು) ಜೂನ್ 5ರಂದು ಢಾಕಾದಲ್ಲಿನಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ವಿರೋಧಿಸಿ ಜುಲೈ 1ರಿಂದ ದೇಶಾದ್ಯಂತ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದರು. ಭಾರತದಲ್ಲಿ ನಡೆದಮಂಡಲ್ ಆಯೋಗ ಮತ್ತು ಚೀನಾದ ಟಿಯಾನನ್ನೆನ್ ಚೌಕ ಸೇರಿದಂತೆ ಪ್ರಪಂಚದಾದ್ಯಂತ ನಡೆದ ಅನೇಕ ಚಳವಳಿಗಳ ಮಾದರಿಯಲ್ಲಿ ಬಾಂಗ್ಲಾ ದೇಶದಾದ್ಯಂತ ವಿದ್ಯಾರ್ಥಿಗಳು ಈ ಕೋಟಾ ವ್ಯವಸ್ಥೆಯನ್ನು ಜಾರಿಗೆ ತರಬಾರದು. ಅದನ್ನು ರದ್ದುಪಡಿಸಬೇಕು, ಅದರ ಬದಲಾಗಿ ಮೆರಿಟ್ ಆಧಾರಿತ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿ ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದರು.

ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿದ್ದ ಅವಾಮಿ ಲೀಗ್ ರಾಜಕೀಯ ಪಕ್ಷದ ಸದಸ್ಯರು ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ ಎಂಬ ಆತಂಕ, ಭಯ ಪ್ರತಿಭಟನೆಗಳಿಗೆ ಮೂಲ ಕಾರಣವಾಯಿತು. ವಿದ್ಯಾರ್ಥಿಗಳ ಈ ಪ್ರತಿಭಟನೆಯನ್ನು ಹತ್ತಿಕ್ಕಲು ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಯಿತು. ಚಳವಳಿಯ ಕಾವು ಜೋರಾಗುತ್ತಿದ್ದಂತೆ ನಾಗರಿಕರು ದಾಳಿಗಳಿಗೆ ಒಳಗಾಗಬೇಕಾಯಿತು.

ವಿದ್ಯಾರ್ಥಿಗಳ ಚಳವಳಿಗೆ ಇಂಬು ನೀಡಿದ ವಿರೋಧ ಪಕ್ಷದ ನಾಯಕರು, ಕಾರ್ಯಕರ್ತರು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಬಂಧನಕ್ಕೆ ಒಳಗಾದರು. ಚಳವಳಿ ತೀವ್ರ ಸ್ವರೂಪ ಪಡೆಯುತ್ತಿರುವುದನ್ನು ಗಮನಿಸಿದ ಶೇಖ್ ಹಸೀನಾ ಸರ್ಕಾರ ಜುಲೈ 19ರ ಮಧ್ಯರಾತ್ರಿ ಕರ್ಪೂ ವಿಧಿಸಿತು.

ವಿದ್ಯಾರ್ಥಿ ಚಳವಳಿಯನ್ನು ಹತ್ತಿಕ್ಕಲು ಉಪಯೋಗಿಸಲಾದ ಸೈನ್ಯ ಮತ್ತು ಪೊಲೀಸ್ ಗುಂಡಿನ ದಾಳಿಗೆ ಸುಮಾರು 439ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಬಗೆಗಿನ ಚಿತ್ರಗಳು ಹೊರ ಜಗತ್ತಿಗೆ ಗೊತ್ತಾಗುತ್ತಿದ್ದಂತೆ, ವಿದ್ಯಾರ್ಥಿಗಳ ಹೋರಾಟ, ಒತ್ತಡವನ್ನು ಗಮನಿಸಿದ ಬಾಂಗ್ಲಾ ಸರ್ವೋಚ್ಚ ನ್ಯಾಯಾಲಯ ಕೋಟಾವನ್ನು ಮತ್ತೆ ಶೇಕಡಾ 5ಕ್ಕೆ ಇಳಿಸಿ ಆದೇಶ ನೀಡಿತು.

ನಿರಂಕುಶಾಧಿಕಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ದ ಆಳವಾದ ರಾಜಕೀಯ ಮತ್ತು ಸಾಮಾಜಿಕ ತಲ್ಲಣ ದಿಂದ ಹೊರಹೊಮ್ಮಿದ ವಿದ್ಯಾರ್ಥಿಗಳ ಚಳವಳಿಗೆ ದೇಶಾದ್ಯಂತ ಸಾವಿರಾರು ಜನರು ಸೇರಿಕೊಂಡರು.

ಅಷ್ಟು ಪ್ರಬಲವಾದ ಚಳವಳಿಯನ್ನು ಎದುರಿಸಲಾರದೇ ಶೇಖ್ ಹಸೀನಾ ಅವರು ಮೂರು ಸೇನಾ ಮುಖ್ಯಸ್ಥರ ಸಮ್ಮುಖದಲ್ಲಿ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದರು. ಸದ್ಯ ಭಾರತದಲ್ಲಿ ಆಶ್ರಯ ಪಡೆದಿರುವ ಅವರ ಭವಿಷ್ಯದ ಯೋಜನೆಗಳು ಅನಿಶ್ಚಿತವಾಗಿವೆ. ಪಲಾಯನ ಮಾಡಿದ ನಂತರ ಅವರ ಮನೆ ಚಳವಳಿಕಾರರ ಆಕ್ರೋಶದ ದಾಳಿಗೆ ತುತ್ತಾಗಿ ಎಲ್ಲ ಛಿದ್ರ ಛಿದ್ರವಾಗಿ ಉಳಿದಿದೆ.

ಬಾಂಗ್ಲಾ ದೇಶದ ಮಾನವ ಹಕ್ಕುಗಳ ಸಂಘಟನೆಗಳ ಪ್ರಕಾರ, ಹಸೀನಾ ಸರ್ಕಾರವನ್ನು ಪತನಗೊಳಿಸಿದ್ದು ಕೇವಲ ವಿದ್ಯಾರ್ಥಿ ರಾಜಕೀಯವಲ್ಲ. ಬದಲಾಗಿ ಭದ್ರತಾ ಪಡೆಗಳ ನಡೆಯಿಂದ ಆಗಿವೆ ಎಂದು ಹೇಳಲಾಗುತ್ತಿದೆ. ಆಳುವ ಸರ್ಕಾರದ ಆದೇಶದಂತೆ ಅಲ್ಲಿನ ಭದ್ರತಾ ಪಡೆಗಳು 2009ರಿಂದ ಸುಮಾರು 600 ಬಲವಂತದ ನಾಪತ್ತೆಗಳನ್ನು ಎಸಗಿದ್ದಾರೆ ಎನ್ನಲಾಗಿದೆ. ಬಾಂಗ್ಲಾ ಮಿಲಿಟರಿಯು ಶೇಖ್ ಹಸೀನಾ ಅವರ ರಾಜೀನಾಮೆಯನ್ನು ಘೋಷಿಸಿದ್ದಲ್ಲದೇ, ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದು ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನುಸ್ ಅವರನ್ನು ತಾತ್ಕಾಲಿಕವಾಗಿ ಸರ್ಕಾರದ ಆಡಳಿತ ನಡೆಸಲು ಒಪ್ಪಿಕೊಂಡಿದೆ.

ಬಾಂಗ್ಲಾ ದೇಶದಲ್ಲಿ ಹಸೀನಾ ಅವರು ಅಧಿಕಾರದಿಂದ ಇಳಿಯುವವರೆಗೆ ನಡೆದ ಚಳವಳಿಗೆ ಒಂದೇ ಉದ್ದೇಶ ಹಸೀನಾ ಅವರಿಂದ ರಾಜೀನಾಮೆ ಪಡೆಯುವುದಾಗಿತ್ತು. ಆ ಉದ್ದೇಶ ಸಫಲವಾದ ಬಳಿಕವೂ ಮುಂದುವರಿದ ಚಳವಳಿ ಮುಸ್ಲಿಮೇತರರನ್ನು ಗುರಿಯಾಗಿಸಿ ನಡೆದಿದೆ ಎನ್ನಲಾಗಿದೆ. ಅಲ್ಲದೆ, ಚಳವಳಿ ಆರಂಭಿಸಿದ ವಿದ್ಯಾರ್ಥಿಗಳನ್ನು ಮೊದಲಿಗೆ ನಿಯಂತ್ರಿಸಲು ಅಲ್ಲಿನ ಸೇನೆ ಮುಂದಾಗಿ, ಹಲವು ವಿದ್ಯಾರ್ಥಿಗಳ ಪ್ರಾಣಕ್ಕೆ ಎರವಾಯಿತು. ಹಸೀನಾ ಅವರ ಸರ್ಕಾರ ಪತನ ಬಳಿಕ ಸೇನೆ ಅಧಿಕಾರ ಹಿಡಿಯಲಿದೆ ಎನ್ನಲಾಗಿತ್ತು. ಆದರೆ, ಪ್ರತಿಭಟನಾಕಾರರು, ಪ್ರಜಾಪ್ರಭುತ್ವ ಪುನರ್ ಸ್ಥಾಪನೆ ಆಗುವವರೆಗೂ ಹೋರಾಟ ನಿಲ್ಲದು ಎಂದಿರುವ ಕಾರಣ ಸೇನೆ ಅಧಿಕಾರ ಹಿಡಿಯುವ ಸಾಧ್ಯತೆ ನೇಪಥ್ಯಕ್ಕೆ ಸರಿದಂತೆ ಕಾಣುತ್ತಿದೆ.

ಈ ಬಿಕ್ಕಟ್ಟು ಜನಾಂಗೀಯ ದ್ವೇಷ, ಅರಾಜಕತೆಗೆ ಅವಕಾಶ ಆಗಬಾರದು. ಶಾಂತಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಯೂನಸ್ ಅವರನ್ನು ಮುಖ್ಯ ಸಲಹೆಗಾರರಾಗಿ ನೇಮಕ ಮಾಡಿರುವುದು. ಬಾಂಗ್ಲಾದಲ್ಲಿ ಶಾಂತಿ, ಸುವ್ಯವಸ್ಥೆ, ಪ್ರಜಾಸತ್ತೆ ಮರು ಸ್ಥಾಪನೆಯ ಆಶಯಕ್ಕೆ ನೀರೆರೆದಿದೆ. ಅದರ ಅನುಷ್ಠಾನಕ್ಕೆ ಎಲ್ಲ ದೇಶಗಳೂ ಸಹಕಾರ ನೀಡಬೇಕಾಗಿದೆ.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಗೊಂದಲಗಳಿಲ್ಲ: ಸಚಿವ ಎಚ್.ಸಿ.ಮಹದೇವಪ್ಪ

ಬೆಂಗಳೂರು: ನಾಯಕತ್ವ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಕಾಂಗ್ರೆಸ್‌ ಹೈಕಮಾಂಡ್‌ ತಾಕೀತು ಮಾಡಿದರೂ ಕ್ಯಾರೇ ಎನ್ನದ ಸಚಿವರು ಹಾಗೂ…

53 mins ago

ಬಾಗೇಪಲ್ಲಿ ಶಾಸಕ ಎಸ್.ಎನ್‌.ಸುಬ್ಬಾರೆಡ್ಡಿ ಆಯ್ಕೆ ಅಸಿಂಧು: ಹೈಕೋರ್ಟ್‌ ಆದೇಶ

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಕಾಂಗ್ರೆಸ್‌ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ಹೈಕೋರ್ಟ್‌ನಲ್ಲಿ ಭಾರೀ ಹಿನ್ನಡೆಯಾಗಿದೆ. ಅವರ ಚುನಾವಣಾ ಆಯ್ಕೆಯನ್ನು ಪ್ರಶ್ನಿಸಿ…

54 mins ago

ನಾಳೆ ವರ್ಷದ ಮೊದಲ ಕಂಕಣ ಸೂರ್ಯಗ್ರಹಣ: ಎಲ್ಲೆಲ್ಲಿ ಗೋಚರ?

ಬೆಂಗಳೂರು: ವರ್ಷದ ಮೊದಲ ಕಂಕಣ ಸೂರ್ಯಗ್ರಹಣ ನಾಳೆ ಸಂಭವಿಸಲಿದೆ.. ಇದನ್ನ ರಿಂಗ್ ಆಫ್ ಫೈರ್ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಕಂಕಣ…

1 hour ago

ಶಬರಿಮಲೆ ವಿವಾದ: ವಿಚಾರಣೆಗೆ ಸಾಂವಿಧಾನಿಕ ಪೀಠ ರಚನೆ

ನವದೆಹಲಿ: ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಪ್ರವೇಶದ ವಿರುದ್ಧ ಮತ್ತು ಧರ್ಮಗಳಲ್ಲಿ ಮಹಿಳೆಯರ ಮೇಲಿನ…

1 hour ago

ಗುಂಡ್ಲುಪೇಟೆ| ಕಾಡಿನಿಂದ‌ ದಾರಿ ತಪ್ಪಿ ಮನೆಗೆ ನುಗ್ಗಿದ ಜಿಂಕೆ ರಕ್ಷಣೆ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ಕಾಡಿನಿಂದ ದಾರಿತಪ್ಪಿ ಬಂದು ಮನೆಗೆ ನುಗ್ಗಿದ್ದ ಜಿಂಕೆಯನ್ನು ರಕ್ಷಣೆ ಮಡುವಲ್ಲಿ ಅರಣ್ಯ…

2 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಗೌಡಗೆ ಬಿಗ್‌ ಶಾಕ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಪವಿತ್ರಾ ಗೌಡ ಅವರಿಗೆ ನ್ಯಾಯಾಲಯದಿಂದ ಮತ್ತೊಮ್ಮೆ ಹಿನ್ನಡೆಯಾಗಿದೆ. ತಮ್ಮ ಮಗಳ…

4 hours ago