ಸಂಪಾದಕೀಯ

ಸಣ್ಣಪುಟ್ಟ ವ್ಯಾಪಾರಿಗಳಿಗೂ ಜಿಎಸ್‌ಟಿ ಅರಿವು ಅಗತ್ಯ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಂದರೇನು ಎಂಬುದನ್ನೇ ಇನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳದ ಬಹುತೇಕ ಸಣ್ಣಪುಟ್ಟ ವ್ಯಾಪಾರಿಗಳಿಗೆ ಲಕ್ಷಾಂತರ ರೂ. ತೆರಿಗೆ ಪಾವತಿಸಬೇಕು ಎಂಬುದಾಗಿ ನೋಟಿಸ್ ನೀಡಿದರೆ, ಅವರ ಸ್ಥಿತಿಅಯೋಮಯವಾಗಿರುತ್ತದೆ. ಬೇಕರಿ, ಚಹ ಅಂಗಡಿ, ತರಕಾರಿ ಅಂಗಡಿಗಳ ಮಾರಾಟಗಾರರೂ ಸೇರಿದಂತೆ ಅನೇಕ ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ಜಾರಿಯಾಗಿದ್ದು, ಆದರೆ, ರಾಜ್ಯ ಸರ್ಕಾರ ತೆರಿಗೆ ಬಾಕಿ ವಸೂಲಿ ಮಾಡುವುದಿಲ್ಲ ಎಂದು ಹೇಳಿದೆ.

ವಾಸ್ತವವಾಗಿ ವಾರ್ಷಿಕ ೪೦ ಲಕ್ಷ ರೂ. ವಹಿವಾಟು ನಡೆಸಿದ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ ಜಾರಿ ಮಾಡಲಾಗುತ್ತದೆ. ಆದರೆ, ಪೆಟ್ಟಿಗೆ ಅಂಗಡಿಯವರು, ಬೀದಿಬದಿಯ ವ್ಯಾಪಾರಿಗಳು,ಹೂ- ಹಣ್ಣು, ತರಕಾರಿ ಮಾರಾಟಗಾರರಿಗೆ ನೋಟಿಸ್ ನೀಡುವಂತಿಲ್ಲ. ರಾಜ್ಯ ವಾಣಿಜ್ಯ ಇಲಾಖೆಯು ಸಾವಿರಾರು ವ್ಯಾಪಾರಿಗಳಿಗೆ ನೋಟಿಸ್ ಕಳುಹಿಸಿದೆ ಎನ್ನಲಾಗಿದೆ. ಸದ್ಯಕ್ಕೆ ಸರ್ಕಾರ ಬಾಕಿ ತೆರಿಗೆ ಪಾವತಿಸುವ ಅಗತ್ಯ ಇಲ್ಲ ಎಂದು ಹೇಳಿರುವುದರಿಂದ ನೋಟಿಸ್ ಪಡೆದಿರುವ ವ್ಯಾಪಾರಿಗಳಿಗೆ ಸ್ವಲ್ಪ ಸಮಾಧಾನ ತಂದಿದೆ. ದೇಶದಲ್ಲಿ ಯುಪಿಐ ಆಧಾರಿತ ಡಿಜಿಟಲ್ ಪೇಮೆಂಟ್ ಆವರಿಸಿಕೊಳ್ಳುವುದಕ್ಕೆ ಮುಂಚೆ ಯಾವುದೇ ವ್ಯಾಪಾರಿಗಳ ವಹಿವಾಟು ನಗದು ರೂಪದಲ್ಲಿ ನಡೆಯುತ್ತಿತ್ತು. ಅದರಿಂದ ವ್ಯಾಪಾರಿಗಳ ಆದಾಯ ಎಷ್ಟು ಎನ್ನುವುದನ್ನು ಲೆಕ್ಕ ಹಾಕಲು ಸಾಧ್ಯವಾಗುತ್ತಿರಲಿಲ್ಲ. ಈಗ ಬಹುತೇಕ ವ್ಯವಹಾರ ಯುಪಿಐ ಮೂಲಕ ಆಗುತ್ತಿದ್ದು, ಪ್ರತಿ ರೂಪಾಯಿಯಲೆಕ್ಕವೂ ಲಭ್ಯವಾಗುತ್ತಿದೆ.

ಬಹುತೇಕ ಸಣ್ಣಪುಟ್ಟ ವ್ಯಾಪಾರಿಗಳು ತಮ್ಮ ವಹಿವಾಟಿನಲ್ಲಿ ನಗದು ಮತ್ತು ಚಿಲ್ಲರೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಎಂಬ ಏಕೈಕ ಉದ್ದೇಶದಿಂದ ಕ್ಯೂಆರ್ ಸ್ಕ್ಯಾನ್ ನ್ನು ಅಳವಡಿಸಿಕೊಂಡಿದ್ದಾರೆ. ಆದರೆ, ಲಕ್ಷಾಂತರ ರೂ. ತೆರಿಗೆ ಪಾವತಿಸಬೇಕು ಅಂತ ಜಿಎಸ್‌ಟಿ ನೋಟಿಸ್ ಬರುತ್ತಿದ್ದಂತ ಬೆಚ್ಚಿಬಿದ್ದರು.

ಅಷ್ಟೇ ಅಲ್ಲ. ಡಿಜಿಟಲ್ ಪೇಮೆಂಟ್ ವ್ಯವಸ್ಥೆಯಿಂದ ವಿಮುಖರಾಗಿದ್ದಾರೆ. ಚಿಲ್ಲರೆ ಸಮಸ್ಯೆ ತಪ್ಪಿಸಲು ಯುಪಿಐ ನೆರವಾಗಿತ್ತು. ಸದ್ಯದ ನೋಟಿಸ್ ಗೊಂದಲದಿಂದಾಗಿ ಈ ವವಸ್ಥೆಯ ಬಗ್ಗೆ ಜನರಲ್ಲಿ ಅನುಮಾನ ಮೂಡಿದೆ.

ಜಿಎಸ್‌ಟಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾನೂನು. ಇಡೀ ದೇಶ ದಲ್ಲಿ ಏಕ ರೂಪದ ತೆರಿಗೆ ಸಂದಾಯ ಪದ್ಧತಿ ಇರಬೇಕು. ಅಲ್ಲದೆ, ತೆರಿಗೆ ಪಾವತಿಯಿಂದ ಯಾರೂ ನುಣುಚಿಕೊಳ್ಳ ಬಾರದು ಎಂಬುದು ಈ ಕಾನೂನಿನ ಉದ್ದೇಶ. ಇದರಲ್ಲಿರುವ ಗೊಂದಲಗಳನ್ನು ಕೇಂದ್ರ ಸರ್ಕಾರವೇ ನಿವಾರಣೆ ಮಾಡಬೇಕು. ರಾಜ್ಯ ಸರ್ಕಾರಗಳು ಯಾವುದೇ ಉಪ ನಿಯಮಾವಳಿಗಳನ್ನು ರೂಪಿಸಲು ಸಾಧ್ಯವಿಲ್ಲ. ಜಿಎಸ್‌ಟಿಯಲ್ಲಿ ರಾಜ್ಯ ಸರ್ಕಾರವು ಮೂಕಪ್ರೇಕ್ಷಕನಂತೆ ಇರಬೇಕಾಗಿದೆ.

ಸಣ್ಣಪುಟ್ಟ ವ್ಯಾಪಾರಿಗಳು, ಜಿಎಸ್‌ಟಿ ಪರಿಗಣಿಸಿರುವ ಆದಾಯ ಮೊತ್ತದಲ್ಲಿ ಸಾಲ, ವೈಯಕ್ತಿಕ ವಹಿವಾಟು ಕೂಡ ಸೇರಿದೆ. ನೋಟಿಸ್ ನೀಡುವುದು ತಪ್ಪಲ್ಲ. ಆದರೆ ಮಧ್ಯವರ್ತಿಗಳಿಗೆ ಅವಕಾಶನೀಡದೆ, ನೇರವಾಗಿ ಇಲಾಖೆ ಸಂಪರ್ಕಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಮಾರ್ಗದರ್ಶನ ನೀಡಬೇಕು ಎಂದು ಮನವಿ ಮಾಡಿದ್ದು, ಇದರಲ್ಲಿ ಅರ್ಥವಿದೆ. ರಾಜ್ಯ ಸರ್ಕಾರಕ್ಕೆ ಜಿಎಸ್‌ಟಿ ವಿಷಯದಲ್ಲಿ ಯಾವುದೇ ಅಧಿಕಾರ ಇರದಿದ್ದರೂ, ಬೀದಿಬದಿ ವ್ಯಾಪಾರಿಗಳು, ತರಕಾರಿ ಮಾರಾಟಗಾರರಂತಹವರಿಗೆ ಜಿಎಸ್‌ಟಿ ಬಗ್ಗೆ ಅರ್ಥವಾಗುವಂತೆ ಸರಳ ವಿಧಾನದಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾರ್ಷಿಕ ೪೦ ಲಕ್ಷ ರೂ. ವಹಿವಾಟು ಹೊಂದಿರುವ ವ್ಯಾಪಾರಿಗಳು ಜಿಎಸ್‌ಟಿನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಬೇಕು ಎಂದು ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ರಾಜ್ಯಾದ್ಯಂತ ಜಿಎಸ್‌ಟಿ ಕುರಿತ ಅರಿವಿನ ಅಭಿಯಾನ ನಡೆಸುವ ಬಗ್ಗೆ ಸರ್ಕಾರ ಕೂಡ ಯೋಚಿಸಬೇಕು. ವಾಸ್ತವವಾಗಿ ಜಿಎಸ್‌ಟಿ ಕುರಿತು ಕೇವಲ ವ್ಯಾಪಾರಿಗಳಲ್ಲದೆ, ಜನಸಾಮಾನ್ಯರೂ ಅರ್ಥೈಸಿಕೊಳ್ಳುವುದು ಅಗತ್ಯ. ಪ್ರಸ್ತುತ ಕಾಲಘಟ್ಟದಲ್ಲಿ ಕಾರ್ಪೊರೇಟ್ ಕಂಪೆನಿಗಳಷ್ಟು ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ಸಾಕಷ್ಟು ವ್ಯಾಪಾರಿಗಳು ಜಿಎಸ್‌ಟಿ ವ್ಯಾಪ್ತಿಗೆ ಸೇರುತ್ತಿದ್ದಾರೆ.

ಆದರೆ, ಅವರಿಗೆ ಆ ಬಗ್ಗೆ ಮಾಹಿತಿ ಇರುವುದಿಲ್ಲ. ದಿಢೀರ್ ನೋಟಿಸ್ ಜಾರಿಯಾಗಿಬಿಟ್ಟರೆ ಕಕ್ಕಾಬಿಕ್ಕಿಯಾಗುವುದು ಖಂಡಿತ. ಇಂತಹ ಪ್ರಕರಣಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಹಾಗೂ ವಾಣಿಜ್ಯ ಇಲಾಖೆ ಜಾಗ್ರತೆವಹಿಸಬೇಕು. ಸಣ್ಣ ಪ್ರಮಾಣದ ವ್ಯಾಪಾರಿಗಳ ಅನುಕೂಲಕ್ಕಾಗಿ ಜಿಎಸ್‌ಟಿ ಸಹಾಯವಾಣಿಯನ್ನೂ ತೆರೆಯುವುದು ಸೂಕ್ತ. ಆ ಮೂಲಕ ಸಣ್ಣಪುಟ್ಟ ವ್ಯಾಪಾರಿಗಳಲ್ಲಿ ಉದ್ಭವಿಸಿರುವ ಜಿಎಸ್‌ಟಿ ಗೊಂದಲವನ್ನು ನಿವಾರಿಸಬೇಕು.

” ಜಿಎಸ್‌ಟಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾನೂನು. ಇಡೀ ದೇಶದಲ್ಲಿ ಏಕ ರೂಪದ ತೆರಿಗೆ ಸಂದಾಯ ಪದ್ಧತಿ ಇರಬೇಕು. ಅಲ್ಲದೆ, ತೆರಿಗೆ ಪಾವತಿಯಿಂದ ಯಾರೂ ನುಣುಚಿಕೊಳ್ಳಬಾರದು ಎಂಬುದು ಈ ಕಾನೂನಿನ ಉದ್ದೇಶ. ಇದರಲ್ಲಿರುವ ಗೊಂದಲಗಳನ್ನು ಕೇಂದ್ರ ಸರ್ಕಾರವೇ ನಿವಾರಣೆ ಮಾಡಬೇಕು. ರಾಜ್ಯ ಸರ್ಕಾರಗಳು ಯಾವುದೇ ಉಪ ನಿಯಮಾವಳಿಗಳನ್ನು ರೂಪಿಸಲು ಸಾಧ್ಯವಿಲ್ಲ. ಜಿಎಸ್‌ಟಿಯಲ್ಲಿ ರಾಜ್ಯ ಸರ್ಕಾರವು ಮೂಕಪ್ರೇಕ್ಷಕನಂತೆ ಇರಬೇಕಾಗಿದೆ.”

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್
Tags: Andolanagst

Recent Posts

ಜನಗಣತಿ | ಲಿವ್‌-ಇನ್‌ ಸಂಬಂಧದಲ್ಲಿರುವವರ ಪರಿಗಣನೆ ಹೇಗೆ? ಕೇಂದ್ರ ಸರ್ಕಾರ ಹೇಳಿದ್ದೇನು?

ನವದೆಹಲಿ : 2027ರ ಜನಗಣತಿಯಲ್ಲಿ ಲಿವ್-ಇನ್ ಸಂಬಂಧದಲ್ಲಿರುವ ಸಂಗಾತಿಗಳು ತಮ್ಮದು ಶಾಶ್ವತ ಸಂಬಂಧ ಎಂದು ಪರಿಗಣಿಸಿದರೆ, ಅವರನ್ನು ಜನಗಣತಿ ವೇಳೆ…

23 mins ago

ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ತುಮಕೂರು: ಶಿವೈಕ್ಯ ಡಾ.ಶಿವಕುಮಾರ ಶ್ರೀಗಳ 119ನೇ ಜನ್ಮದಿನೋತ್ಸವದ ಅಂಗವಾಗಿ ಇಂದು ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಿದರು.…

1 hour ago

ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ: ಸಿಎಂ ಸಿದ್ದರಾಮಯ್ಯ

ದಾವಣಗೆರೆ: ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ದಾವಣಗೆರೆಯಲ್ಲಿ ಇಂದು ಚುನಾವಣಾ ಪ್ರಚಾರದ…

2 hours ago

ಉಪಚುನಾವಣೆಯಲ್ಲಿ ಅಭಿವೃದ್ಧಿ ಹಾಗೂ ಗ್ಯಾರಂಟಿಗಳು ಕಾಂಗ್ರೆಸ್‌ಗೆ ನೆರವಾಗಲಿದೆ: ಸಿಎಂ ಸಿದ್ದರಾಮಯ್ಯ ವಿಶ್ವಾಸ

ದಾವಣಗೆರೆ: ಕೇಂದ್ರ ಬಜೆಟ್ ಗಿಂತ ರಾಜ್ಯದ ಬಜೆಟ್ ಉತ್ತಮವಾಗಿದ್ದು, ಬಿಜೆಪಿಯವರು ಕೇವಲ ರಾಜಕೀಯಕ್ಕಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

2 hours ago

ಗುಂಡ್ಲುಪೇಟೆ: ತ್ರಿವಿಧ ದಾಸೋಹಿ ಶ್ರೀ ಶಿವಕುಮಾರಸ್ವಾಮಿ ಜಯಂತಿ ಆಚರಣೆ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು  ಗುಂಡ್ಲುಪೇಟೆ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆದಾಡುವ ದೇವರು ತ್ರಿವಿಧ ದಾಸೋಹಿ, ಸಿದ್ದಗಂಗಾ ಮಠದ…

2 hours ago

ಸಿದ್ಧಗಂಗಾ ಶ್ರೀಗಳ ಜಯಂತಿ: ಕನ್ನಡದಲ್ಲೇ ಟ್ವೀಟ್‌ ಮಾಡಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು…

4 hours ago