ಸಂಪಾದಕೀಯ

ಸಚಿವ ಸಂಪುಟ ಸಭೆ: ಯೋಜನೆಗಳ ಅನುಷ್ಠಾನವೂ ತ್ವರಿತವಾಗಿ ಆಗಲಿ

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಇತ್ತೀಚೆಗೆ ನಡೆದ ಮೈಸೂರು ವಿಭಾಗೀಯ ಮಟ್ಟದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಮೈಸೂರು ವಿಭಾಗದ ಎಲ್ಲ ಏಳು ಜಿಲ್ಲೆಗಳ ಅಭಿವೃದ್ಧಿಯ ಕನಸಿಗೆ ನೀರೆರೆದಿದೆ. ಅದರಲ್ಲಿಯೂ ವಿಶೇಷವಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಪ್ರಗತಿಗಾಗಿ ೩,೬೪೭.೨೪ ಕೋಟಿ ರೂ. ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆದ ಈ ಸಂಪುಟ ಸಭೆಯಲ್ಲಿ ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಅಭಿವೃದ್ಧಿ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಮಾನವ – ವನ್ಯಜೀವಿ ಸಂಘರ್ಷ ತಡೆಗೆ ೨೧೦ ಕೋಟಿ ರೂ. ವೆಚ್ಚದಲ್ಲಿ ಬ್ಯಾರಿಕೇಡ್ ನಿರ್ಮಾಣ, ಕುಡಿಯುವ ನೀರಿಗಾಗಿ ೩೧೫ ಕೋಟಿ ರೂ., ಆರೋಗ್ಯ ಸುಧಾರಣೆಗೆ ೨೨೮ ಕೋಟಿ ರೂ., ಮೈಸೂರು ವಿಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ೩೦೦ ಕೋಟಿ ರೂ. … ಹೀಗೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಲಾಗಿದೆ.

ಸಂಪುಟ ಸಭೆಯಲ್ಲಿ ಘೋಷಿಸಿರುವ ಯೋಜನೆಗಳು, ಕಾರ್ಯಕ್ರಮಗಳು ಈ ವಿಭಾಗೀಯ ಮಟ್ಟದ ಅಭಿವೃದ್ಧಿಗೆ ಪೂರಕವಾಗಿವೆ. ಆದರೆ, ಈ ಎಲ್ಲ ಯೋಜನೆಗಳೂ ನಿಗದಿತ ಕಾಲಮಿತಿಯೊಳಗೆ ಮುಗಿಯುವಂತೆ ಕ್ರಮವಹಿಸುವುದು ರಾಜ್ಯ ಸರ್ಕಾರದ ಮುಂದಿರುವ ಸವಾಲು. ಸಚಿವ ಸಂಪುಟಸಭೆಯಲ್ಲಿ ಕೈಗೊಳ್ಳುವ ಎಲ್ಲ ನಿರ್ಧಾರಗಳೂ ಅನುಷ್ಠಾನಗೊಳ್ಳುವುದಿಲ್ಲ. ಅದಕ್ಕೆ ಅನುದಾನದ ಕೊರತೆ, ತಾಂತ್ರಿಕ ಅಡಚಣೆ ಇತ್ಯಾದಿ ಕಾರಣಗಳು ಇರುತ್ತವೆ. ಇನ್ನು ಹಲವು ಕಡೆ ಜನಪ್ರತಿನಿಧಿಗಳು, ಸ್ಥಳೀಯ ರಾಜಕಾರಣಿಗಳು ಅಡ್ಡಗಾಲು ಹಾಕುವುದು ಸಹಜ. ಮುಖ್ಯವಾಗಿ ಕಾಮಗಾರಿಗಳನ್ನು ಯಾರಿಗೆ ಅಥವಾ ಯಾವ ಸಂಸ್ಥೆಗೆ ಗುತ್ತಿಗೆ ನೀಡಲಾಗುತ್ತದೆ ಎಂಬುದು ಅಸಮಾಧಾನಕ್ಕೆ ಕಾರಣವಾಗುತ್ತದೆ.

ಒಬ್ಬರಿಗೆ ಗುತ್ತಿಗೆ ನೀಡಿದರೆ ಇನ್ನೊಬ್ಬರಿಗೆ ಅಸಹನೆ ಎನ್ನುವಂತಾಗಿದೆ. ಆಡಳಿತ ಪಕ್ಷದವರೇ ಆಗಿದ್ದರೂ ಗುಂಪುಗಾರಿಕೆ ಶುರುವಾಗುತ್ತದೆ. ಗುತ್ತಿಗೆ ಪಡೆಯಲು ಆನ್‌ಲೈನ್ನಲ್ಲಿ ಮುಕ್ತವಾಗಿ ಟೆಂಡರ್ ಕರೆಯಬಹುದು. ಆದರೆ, ಆತ ಅಥವಾ ಆ ಸಂಸ್ಥೆ ಉಪ ಗುತ್ತಿಗೆ ನೀಡುವಾಗ ಗೊಂದಲ, ಅಡ್ಡಿ ಎದುರಾಗುತ್ತವೆ. ಬೃಹತ್ ಯೋಜನೆಗಳ ಕಾಮಗಾರಿಗಳ ಗುತ್ತಿಗೆಯಲ್ಲಿ ಬಹುಶಃ ಈ ತರಹದ ಆತಂಕ ಇರುವುದಿಲ್ಲ. ಆದರೆ, ತುಂಡು ಗುತ್ತಿಗೆಗಳಲ್ಲಿ ಸ್ವಪಕ್ಷೀಯರು, ಬಂಧುಗಳು ಎಂಬ ವಾಂಛೆಯಿಂದ ನಿಯಮ ಮೀರಿ ಗುತ್ತಿಗೆ ನೀಡಲಾಗುತ್ತದೆ ಎಂಬ ಆರೋಪಗಳು ಇವೆ. ಅಲ್ಲದೆ, ‘ಪರ್ಸೆಂಟೇಜ್ ನಡೆಯುತ್ತದೆ’ ಎಂಬ ಆಪಾದನೆಗಳೂ ಜೋರಾಗಿಯೇ ಸದ್ದು ಮಾಡುತ್ತವೆ.

ಇಂತಹ ಸಂದಿಗ್ಧ ಸ್ಥಿತಿಯಿಂದ ಪಾರಾಗಲು ಕಾಮಗಾರಿಗಳನ್ನೇ ಸ್ಥಗಿತಗೊಳಿಸುವುದೂ ಉಂಟು. ಆದರೆ, ಈಗ ಸಚಿವ ಸಂಪುಟ ಸಭೆ ಪ್ರಕಟಿಸಿರುವ ಯೋಜನೆಗಳಿಗೆ ಅಂತಹ ದುಸ್ಥಿತಿ ಎದುರಾಗಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಕಟಿಬದ್ಧರಾಗಬೇಕಿದೆ. ಎಲ್ಲೋ ಗಲಾಟೆಯಾಯಿತು, ಬರಗಾಲ ಎದುರಾಯಿತು ಎಂಬ ಕಾರಣಕ್ಕೆ ಯೋಜನೆಗಳ ಜಾರಿ ಕುಂಠಿತಗೊಳ್ಳಬಾರದು. ಅದಕ್ಕೆ ನಿಗದಿತ ಗಡುವಿನೊಳಗೆ ಕಾಮಗಾರಿಗಳ ಎಲ್ಲ ಪ್ರಕ್ರಿಯೆಗಳನ್ನೂ ವೇಗವಾಗಿ ಸಂಪೂರ್ಣಗೊಳಿಸಿದರೆ, ಸಾರ್ವಜನಿಕರಿಗೆ ಅವುಗಳ ಅನುಕೂಲ ಸುಲಭವಾಗಿ ತಲುಪುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆಗಳು ಈ ಅಭಿವೃದ್ಧಿ ಕಾಮಗಾರಿಗಳಿಗೆ ದೊಡ್ಡ ತಡೆಯೊಡ್ಡಿಬಿಡುತ್ತವೆ. ಲೋಕಸಭೆಯಿಂದ ಗ್ರಾಮ ಪಂಚಾಯಿತಿವರೆಗೆ ಯಾವುದೇ ಚುನಾವಣೆ ಎದುರಾದರೂ ಚುನಾವಣಾ ನೀತಿ ಸಂಹಿತೆಯಿಂದ ಎಲ್ಲ ಕಾಮಗಾರಿಗಳೂ ನನೆಗುದಿಗೆ ಬೀಳುತ್ತವೆ. ಒಂದು ರೀತಿಯಲ್ಲಿ ಬಹುತೇಕ ಆಡಳಿತ ಪಕ್ಷಗಳಿಗೂ ಇದೊಂದು ರೀತಿಯಲ್ಲಿ ಅನುಕೂಲಕರವಾಗುತ್ತದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ, ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿರುವ ನಿರ್ಧಾರಗಳ ಅನುಷ್ಠಾನಕ್ಕೆ ಮುಂದಾಗಬೇಕು. ಆ ಮೂಲಕ ಮಹದೇಶ್ವರಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆ ಮಾದರಿಯಾಗಬೇಕು. ಈ ಬಗ್ಗೆ ರಾಜ್ಯ ಸರ್ಕಾರ, ಅಧಿಕಾರಿಗಳು ಹೆಚ್ಚು ಒತ್ತು ನೀಡುವುದು ಕೂಡ ಅತ್ಯಗತ್ಯ.

” ಬೃಹತ್ ಯೋಜನೆಗಳ ಕಾಮಗಾರಿಗಳ ಗುತ್ತಿಗೆಯಲ್ಲಿ ಬಹುಶಃ ಈ ತರಹದ ಆತಂಕ ಇರುವುದಿಲ್ಲ. ಆದರೆ, ತುಂಡು ಗುತ್ತಿಗೆಗಳಲ್ಲಿ ಸ್ವಪಕ್ಷೀಯರು, ಬಂಧುಗಳು ಎಂಬ ವಾಂಛೆಯಿಂದ ನಿಯಮ ಮೀರಿ ಗುತ್ತಿಗೆ ನೀಡಲಾಗುತ್ತದೆ ಎಂಬ ಆರೋಪಗಳು ಇವೆ. ಅಲ್ಲದೆ, ‘ಪರ್ಸೆಂಟೇಜ್ ನಡೆಯುತ್ತದೆ’ ಎಂಬ ಆಪಾದನೆಗಳೂ ಜೋರಾಗಿಯೇ ಸದ್ದು ಮಾಡುತ್ತವೆ. ಇಂತಹ ಸಂದಿಗ್ಧ ಸ್ಥಿತಿಯಿಂದ ಪಾರಾಗಲು ಕಾಮಗಾರಿಗಳನ್ನೇ ಸ್ಥಗಿತಗೊಳಿಸುವುದೂ ಉಂಟು. ಆದರೆ, ಈಗ ಸಚಿವ ಸಂಪುಟ ಸಭೆ ಪ್ರಕಟಿಸಿರುವ ಯೋಜನೆಗಳಿಗೆ ಅಂತಹ ದುಸ್ಥಿತಿ ಎದುರಾಗಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಕಟಿಬದ್ಧರಾಗಬೇಕಿದೆ.”

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಪೂರ್ಣ ಸಿದ್ಧವಾಗದ ಎಕ್ಸ್‌ಪ್ರೇಸ್‌ ವೇ : ಟೋಲ್‌ ಕಡಿತ

ಹೊಸದಿಲ್ಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಹತ್ವದ ಸುದ್ದಿಯೊಂದನ್ನು ನೀಡಿದೆ.…

6 hours ago

ಸೇವಾ ತೀರ್ಥ ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ : ಪ್ರಧಾನ ಮಂತ್ರಿ ಕಾರ್ಯಾಲಯ (ಪಿಎಂಒ), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಸಂಪುಟ ಸಚಿವಾಲಯಗಳನ್ನು ಒಳಗೊಂಡಿರುವ ‘ಸೇವಾ…

7 hours ago

T20 World Cup | ಕೆನಡಾ ವಿರುದ್ಧ ಯುಎಇಗೆ ರೋಚಕ ಜಯ

ಹೊಸದಿಲ್ಲಿ : ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ‘ಡಿ’ಗುಂಪಿನ ಪಂದ್ಯದಲ್ಲಿ ಯುಎಇ ಕ್ರಿಕೆಟ್ ತಂಡವು ಕೆನಡಾ ತಂಡವನ್ನು ಐದು…

7 hours ago

ದಳಪತಿ ವಿಜಯ್‌ ರ‍್ಯಾಲಿಯಲ್ಲಿ ನಿಲ್ಲದ ದುರಂತ : ಮತ್ತೊಬ್ಬನ ಸಾವು

ಸೇಲಂ : ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ರ‍್ಯಾಲಿ ವೇಳೆ ಕುಸಿದು ಬಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯೆ…

8 hours ago

ರೈಲ್‌ಒನ್‌ ಆಪ್‌ : ಒಂದೇ ಕಡೆ ಸಿಗಲಿದೆ ರೈಲು ಸೌಲಭ್ಯಗಳು

ಬೆಂಗಳೂರು : ಭಾರತೀಯ ರೈಲ್ವೆಯು ತನ್ನ ಅಧಿಕೃತ ಆಪ್ ‘ರೈಲ್‌ಒನ್’ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ರೈಲ್ವೆ ಸೇವೆಗಳೆಲ್ಲವೂ…

8 hours ago

ತಾರಿಖ್‌ ರೆಹಮಾನ್‌ ಬಾಂಗ್ಲಾದೇಶದ ನೂತನ ಪ್ರಧಾನಿ

ಢಾಕಾ : ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ(ಬಿಎನ್‌ಪಿ) ಗೆದ್ದು ಬೀಗಿದೆ. ಸಂಸತ್ತಿನ ಒಟ್ಟು 300 ಸ್ಥಾನಗಳ ಪೈಕಿ…

8 hours ago