ಸಂಪಾದಕೀಯ

ಆಂದೋಲನ ಸಂಪಾದಕೀಯ | ರೈಲ್ವೆ ಇಲಾಖೆಗೆ ಕನ್ನಡ, ಕನ್ನಡಿಗರ ಬಗ್ಗೆ ತಾತ್ಸಾರ ಸಲ್ಲದು

ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬುದು ಇಂದು ನಿನ್ನೆಯ ಆರೋಪವಲ್ಲ. ಮೊದಲಿನಿಂದಲೂ ಈ ಆರೋಪ ಇದೆ. ರೈಲ್ವೆಯಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕೆಂಬ ಹೋರಾಟಗಳೂ ನಡೆದಿವೆ. ರೈಲ್ವೆಯಲ್ಲಿ ಹಿಂದಿ ಭಾಷಿಕರ ಆಧಿಪತ್ಯ ಮೊದಲಿನಿಂದಲೂ ಇದೆ.

ಇತ್ತೀಚೆಗೆ ನೈಋತ್ಯ ರೈಲ್ವೆ ಇಲಾಖೆಯ 194 ಗೂಡ್ಸ್ ರೈಲು ಮ್ಯಾನೇಜರ್ ಹುದ್ದೆಗಳು ಹಾಗೂ ಹುಬ್ಬಳ್ಳಿ ವಿಭಾಗದಲ್ಲಿ ಎಲ್‌ಡಿಇ 101 ಹುದ್ದೆಗಳಿಗೆ ಮುಂಬಡ್ತಿ ನೀಡುವ ಸಂಬಂಧ ನಡೆಯಬೇಕಿದ್ದ ಪರೀಕ್ಷೆಗಳನ್ನು ಕನ್ನಡಿಗರು ಹಾಗೂ ಕನ್ನಡ ಸಂಘಟನೆಗಳ ಭಾರೀ ವಿರೋಧದ ಕಾರಣದಿಂದ ದಿಢೀರನೇ ರದ್ದುಪಡಿಸಲಾಯಿತು. ಆದರೆ, ಕೇಂದ್ರ ಸರ್ಕಾರ ಈ ಬಗ್ಗೆ ಮೌನವಹಿಸಿರುವುದು ಆಶ್ಚರ್ಯಕರ. ಬಡ್ತಿಯ ನಿರೀಕ್ಷೆಯಲ್ಲಿರುವ ಉದ್ಯೋಗಿಗಳಿಗೆ ಭರವಸೆಯ ಮಾತುಗಳನ್ನೂ ಆಡದಿರುವಷ್ಟು ನಿರ್ಲಕ್ಷ್ಯ ತೋರಿಸುತ್ತಿರುವುದು ವಿಪರ್ಯಾಸ.

ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದಿರುವ ಬಗ್ಗೆ ಈ ಮೊದಲೇ ಸಾವಿರಾರು ಕನ್ನಡಿಗ ಉದ್ಯೋಗಿಗಳು ಧ್ವನಿಯೆತ್ತಿದ್ದರು. ಆದರೂ ರೈಲ್ವೆ ಇಲಾಖೆ ಇದನ್ನು ನಿರ್ಲಕ್ಷಿಸುತ್ತಾ ಬಂದಿದೆ. ಇದು ದಕ್ಷಿಣ ಭಾರತೀಯರ ಮೇಲೆ ಹಿಂದಿ ಹೇರಿಕೆ ಮಾಡಲು ಕೇಂದ್ರ ಸರ್ಕಾರದ ಹುನ್ನಾರ ಎಂಬ ಆರೋಪಗಳಿಗೆ ಪುಷ್ಟಿ ನೀಡಿದೆ. ಈಗಾಗಲೇ ದಕ್ಷಿಣ ಭಾರತದ ಬಹುತೇಕ ಎಲ್ಲ ರಾಜ್ಯಗಳೂ ಇಂತಹ ತಾರತಮ್ಯಕ್ಕೆ ಒಳಗಾಗಿವೆ.

ರೈಲ್ವೆ ಇಲಾಖೆಯು ಕನ್ನಡಿಗರನ್ನು ತಾತ್ಸಾರ ಭಾವನೆಯಿಂದ ಕಾಣುತ್ತಿದೆ. ಈ ಬಾರಿ ಕೂಡ ಪ್ರತಿಭಟನೆಯ ಕಾವು ಹೆಚ್ಚಾದ ಕೂಡಲೇ ತರಾತುರಿಯಲ್ಲಿ ಪರೀಕ್ಷೆಯನ್ನು ರದ್ದುಪಡಿಸಿದೆ. ಕನ್ನಡಿಗರಿಗೆ ಕೇಂದ್ರ ಸರ್ಕಾರದ ಪರೀಕ್ಷೆಗಳಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಿದೆ. ಕೇಂದ್ರದ ವಿವಿಧ ಇಲಾಖೆಗಳ ಉದ್ಯೋಗಗಳಿಗೆ ನೇಮಕಾತಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಿಂದಿ ಹೇರಿಕೆಯ ಕುಟಿಲತನ ಪ್ರದರ್ಶಿಸುತ್ತಿದೆ. ಇದು ಕನ್ನಡಿಗ ಉದ್ಯೋಗಾಕಾಂಕ್ಷಿಗಳನ್ನು ಕೆರಳಿಸುತ್ತಿದೆ. ಇದರ ವಿರುದ್ಧ ಕನ್ನಡಿಗರು ಹಿಂದಿನಿಂದಲೂ ನ್ಯಾಯಕ್ಕಾಗಿ ಧ್ವನಿಯೆತ್ತುತ್ತಾ ಬಂದಿದ್ದಾರೆ. ಆದರೆ, ರೈಲ್ವೆ ಇಲಾಖೆಯು ಪದೇ ಪದೇ ತನ್ನ ಅಧಿಕ ಪ್ರಸಂಗತನವನ್ನು ಪ್ರದರ್ಶಿಸುತ್ತಿದೆ.

ಉತ್ತರ ಭಾರತದ ಹಿಂದಿ ಭಾಷಿಕರಿಗೆ ನೆರವಾಗಬೇಕೆಂಬ ಏಕೈಕ ಉದ್ದೇಶದಿಂದ ಕೇಂದ್ರದ ಪರೀಕ್ಷೆಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ಗೆ ಮಾತ್ರ ಅವಕಾಶ ನೀಡುವ ಕೇಂದ್ರ ಸರ್ಕಾರದ ನೀತಿಯು ದಕ್ಷಿಣ ಭಾರತದ ಮೇಲೆ ನಡೆಸುತ್ತಿರುವ ಭಾರತವು ರಾಜ್ಯಗಳ ಒಕ್ಕೂಟ, ಈ ರಾಜ್ಯಗಳು ಭಾಷೆಗಳ ಆಧಾರದಲ್ಲಿಯೇ ರಚನೆಯಾಗಿರುವುದನ್ನು ಮರೆಯಬಾರದು. ಕನ್ನಡಿಗರು ಉದ್ಯೋಗಕ್ಕಾಗಿ, ಬಡ್ತಿಗಾಗಿ ಹೋರಾಟ ಮಾಡುವಂತಹ ಪರಿಸ್ಥಿತಿಯನ್ನು ಸೃಷ್ಟಿಸುವುದು ಕೇಂದ್ರ ಸರ್ಕಾರಕ್ಕೆ ಒಳ್ಳೆಯದಲ್ಲ. ದಬ್ಬಾಳಿಕೆಯಾಗಿದೆ. ಹಿಂದಿಯನ್ನು ಕನ್ನಡಿಗರೂ ಸೇರಿದತೆ ಯಾವುದೇ ರಾಜ್ಯದ ಜನರ ಮೇಲೆ ಹೇರುವುದು ಸಮಂಜಸವಲ್ಲ. ಹಾಗಂತ ಹಿಂದಿ ಭಾಷೆಯನ್ನು ವಿರೋಧಿಸಬೇಕು ಎಂಬ ಇಂಗಿತವಲ್ಲ.

ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳು ಖಂಡಿತ ಹಿಂದಿಯನ್ನು ಸ್ವಯಂ ಇಚ್ಛೆಯಿಂದಲೇ ಕಲಿತಿರುತ್ತಾರೆ. ಅಷ್ಟೇ ಅಲ್ಲ, ಆ ಪೈಕಿ ಬಹುತೇಕರು ತಾವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಆ ಪ್ರಾದೇಶಿಕ ಭಾಷೆಯನ್ನೂ ಕಲಿತು, ತಮ್ಮ ಆಡಳಿತ ವ್ಯವಸ್ಥೆಯನ್ನು ಸುಲಲಿತಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಆದರೆ, ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ ತವರು ರಾಜ್ಯಗಳಲ್ಲೇ ಇರುವ ಅಧಿಕಾರಿಗಳ ಮೇಲೆ ಹಿಂದಿ ಭಾಷೆ ಹೇರಿಕೆಗೆ ಮುಂದಾಗಿರುವುದು ವಿವೇಚನೆಯ ಕ್ರಮವಲ್ಲ. ಹಾಗಾಗಿ ರಾಜ್ಯದ ಎಲ್ಲ ಸಂಸದರೂ ಪಕ್ಷಭೇದ ಮರೆತು ಈ ವಿಚಾರದಲ್ಲಿ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕಿದೆ.

ಭಾರತವು ರಾಜ್ಯಗಳ ಒಕ್ಕೂಟ, ಈ ರಾಜ್ಯಗಳು ಭಾಷೆಗಳ ಆಧಾರದಲ್ಲಿಯೇ ರಚನೆಯಾಗಿರುವುದನ್ನು ಮರೆಯಬಾರದು. ಕನ್ನಡಿಗರು ಉದ್ಯೋಗಕ್ಕಾಗಿ, ಬಡ್ತಿಗಾಗಿ ಹೋರಾಟ ಮಾಡುವಂತಹ ಪರಿಸ್ಥಿತಿಯನ್ನು ಸೃಷ್ಟಿಸುವುದು ಕೇಂದ್ರ ಸರ್ಕಾರಕ್ಕೆ ಒಳ್ಳೆಯದಲ್ಲ. ಕನ್ನಡಿಗ ಉದ್ಯೋಗಾಕಾಂಕ್ಷಿಗಳು ತಾವು ಶಿಕ್ಷಣ ಪಡೆದ ಭಾಷೆಯಲ್ಲೇ ಹಕ್ಕಿನ ಉದ್ಯೋಗ ಬಡ್ತಿಯನ್ನು ಕೇಳುತ್ತಿದ್ದಾರೆ.

ರೈಲ್ವೆ ಇಲಾಖೆಯು ಸ್ಥಳೀಯ ಭಾಷಿಕರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ನೈಋತ್ಯ ರೈಲ್ವೆ ವಲಯದಲ್ಲಿ ಸ್ಥಳೀಯ ಕನ್ನಡಿಗರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರೇ ಮಧ್ಯಪ್ರವೇಶಿಸಿ ಸಂಬಂಧಿತ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಉದ್ಯಮಗಳೂ ಅಷ್ಟೇ. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿದರೆ ಜನರು ಕೆಲಸಕ್ಕಾಗಿ ವಲಸೆ ಹೋಗುವುದನ್ನು ಸ್ವಲ್ಪಮಟ್ಟಿಗೆ ತಪ್ಪಿಸಬಹುದು.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಮಾಗುಡಿಲು ಗ್ರಾಮಕ್ಕೆ ಸಂಜೆಯ ನಂತರ ಬಸ್‌ ಇಲ್ಲದೆ ತೊಂದರೆ

ಸರಗೂರು ಕಡೆಯಿಂದ ಗ್ರಾಮಕ್ಕೆ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರ ಆಗ್ರಹ ದಾಸೇಗೌಡ ಸರಗೂರು : ತಾಲ್ಲೂಕಿನ ಮಾಗುಡಿಲು ಗ್ರಾಮದಲ್ಲಿ ಪ್ರತಿದಿನ ಕೆಎಸ್ಆರ್‌ಟಿಸಿ…

9 mins ago

ಬಾವಿ ನೀರಿಗಾಗಿ ಅನಸೂಯ ಅವಿಸ್ಮರಣೀಯ ಹೋರಾಟ

ಆನಂದ್ ತೇಲ್ತುಂಬ್ಡೆ ಅಮ್ಮನೂ ಹೋರಾಟಗಾರರು! ವಿ.ಎಲ್.ನರಸಿಂಹಮೂರ್ತಿ ಹೆಸರಾಂತ ಚಿಂತಕ, ಮಾನವ ಮಾನವ ಹಕ್ಕುಗಳ 'ಹೋರಾಟ ಗಾರ ಡಾ.ಆನಂದ್ ತೇಲ್ತುಂಬ್ಡೆಯವರ ತಾಯಿ…

2 hours ago

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ : ನಾಲ್ವರು ಸ್ಥಳದಲ್ಲೇ ಸಾವು

ರಾಮನಗರ : ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ ದುರ್ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ವ್ಯಾಪ್ತಿಯಲ್ಲಿ…

2 hours ago

ಗ್ಯಾಸ್‌ ಸಿಲಿಂಡರ್ ಅಭಾವ : ಗ್ರಾಹಕರ ಕಿಸೆಗೆ ಕತ್ತರಿ

ಹಲವು ಹೋಟೆಲ್‌ಗಳಲ್ಲಿ ತಿಂಡಿಗಳ ಬೆಲೆ ಶೇ.5 ಹೆಚ್ಚಳ ಫಾಸ್ಟ್ ಫುಡ್, ಜಂಕ್‌ಫುಡ್‌ಗಳ ದರವೂ ಗಗನಮುಖಿ   • ಚಿರಂಜೀವಿ ಸಿ…

3 hours ago

ಶತಮಾನ ಕಳೆದರೂ ಹೊಸತನ ಮೆರೆವ ಶಾಲೆ!

• ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ : ಹತ್ತಿರತ್ತಿರ ಒಂದೂ ಕಾಲು ಶತಮಾನದ ಚಿರನೂತನ ಶಾಲೆ... ವೃದ್ಧಾಪ್ಯದಲ್ಲೂ ಆಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಂಡು…

3 hours ago

ಸಿದ್ದಾಪುರ | ಉಪಟಳ ನೀಡುತ್ತಿದ್ದ ಒಂಟಿ ಸಲಗ ಸೆರೆ

ಕೃಷಿ ಫಸಲು ನಾಶ ಮಾಡಿ, ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ ಸಿದ್ದಾಪುರ : ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಸುತ್ತಮುತ್ತಲ…

13 hours ago