ಸಂಪಾದಕೀಯ

ವಿಮಾನ ದುರಂತದ ನೈಜ ಕಾರಣ ಬಹಿರಂಗವಾಗಬೇಕು

ಗುಜರಾತ್ ರಾಜ್ಯದ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್‌ವಿಟ್‌ಗೆ ಹೊರಟಿದ್ದ ಏರ್ ಇಂಡಿಯಾ ಸಂಸ್ಥೆಯ ಬೋಯಿಂಗ್ ೭೮೭ -೮ ಡ್ರೀಮ್ ಲೈನರ್ ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಘನಘೋರ ದುರಂತಕ್ಕೆ ಸಾಕ್ಷಿಯಾಯಿತು. ಒಬ್ಬ ಪ್ರಯಾಣಿಕರ ಹೊರತಾಗಿ ವಿಮಾನದಲ್ಲಿದ್ದ ಎಲ್ಲ ೨೪೧ ಮಂದಿ ಹಾಗೂ ವಿಮಾನ ಡಿಕ್ಕಿ ಹೊಡೆದು ಬೆಂಕಿಯುಗುಳಿದ ಬಿ.ಜೆ. ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಲಯದ ಹಲವು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೨೭೪ ಮಂದಿಯ ಸಾವಿಗೆ ಕಾರಣವಾಗಿದೆ.

ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪೈಲಟ್‌ಗಳ ನಿಯಂತ್ರಣ ಕಳೆದುಕೊಂಡು ಭೂಮಿಗೆ ಕುಸಿಯಲಾರಂಭಿಸಿದೆ. ಪೈಲಟ್, ಸಹಾಯಕ್ಕಾಗಿ ಯಾಚಿಸಿದ ತಕ್ಷಣವೇ ನಿಯಂತ್ರಣ ಕೊಠಡಿಯ ಸಂಪರ್ಕವನ್ನು ಕಳೆದುಕೊಂಡು ಅಪಘಾತಕ್ಕೀಡಾಗಿದೆ. ತಂದೆಯನ್ನು ನೋಡಿಕೊಳ್ಳುವುದಕ್ಕಾಗಿ ಕೆಲವೇ ದಿನಗಳಲ್ಲಿ ಕೆಲಸ ತೊರೆಯಲು ಉದ್ದೇಶಿಸಿದ್ದ ಪೈಲಟ್, ಲಂಡನ್‌ನಲ್ಲಿ ನೆಲೆಸಿದ್ದು, ಭಾರತಕ್ಕೆ ಬಂದು ವಾಪಸ್ಸಾಗುತ್ತಿದ್ದ ವೈದ್ಯ ದಂಪತಿ ಮತ್ತು ಅವರ ಮೂವರು ಪುಟ್ಟ ಮಕ್ಕಳು, ಪತಿಯನ್ನು ಕಾಣಲು ತೆರಳುತ್ತಿದ್ದ ಯುವತಿ… ಹೀಗೆ ಅನೇಕ ಕುಟುಂಬಗಳ ಸದಸ್ಯರು ಈ ದುರಂತದಲ್ಲಿ ಮೃತಪಟ್ಟರು. ಅಲ್ಲದೆ, ವೈದ್ಯರಾಗುವ ಆಸೆಯಿಂದ ವಿದ್ಯಾರ್ಥಿನಿಲಯದಲ್ಲಿದ್ದು ಅಧ್ಯಯನ ಮಾಡುತ್ತಿದ್ದ ಹಲವಾರು ವಿದ್ಯಾರ್ಥಿಗಳು ಅಸುನೀಗಿದ್ದಾರೆ.

ಈ ಪರಿಯ ಬೃಹತ್ ಅಪಘಾತಕ್ಕೆ ಕಾರಣಗಳೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೇಲ್ನೋಟಕ್ಕೆ ವಿಮಾನದಲ್ಲಿದ್ದ ತಾಂತ್ರಿಕದೋಷವೇ ಕಾರಣವಾಗಿದೆ. ದುರಂತ ಸಂಭವಿಸುವ ಕೆಲವೇ ಗಂಟೆಗಳ ಮುನ್ನ ಇದೇ ವಿಮಾನದಲ್ಲಿ ಹೊಸದಿಲ್ಲಿಯಿಂದ ಅಹಮದಾಬಾದ್‌ಗೆ ಪ್ರಯಾಣಿಸಿದ್ದ ಆಕಾಶ್ ವಸ್ತ ಎಂಬವರು, ವಿಮಾನದ ಅವ್ಯವಸ್ಥೆಯನ್ನು ಬಿಚ್ಟಿಟ್ಟಿದ್ದಾರೆ. ಹವಾನಿಯಂತ್ರಣ, ಎಂಟರ್‌ಟೈನ್‌ಮೆಂಟ್ ಸ್ಕ್ರೀನ್, ಕ್ಯಾಬಿನ್ ಕಮ್ಯುನಿಕೇಷನ್ ಬಟನ್ ಇತ್ಯಾದಿ ಅಸಮರ್ಪಕ ವ್ಯವಸ್ಥೆಯನ್ನು ಹಂಚಿಕೊಂಡಿದ್ದಾರೆ. ಇದು ವಿಮಾನದ ತಾಂತ್ರಿಕ ದೋಷವನ್ನು ಎತ್ತಿಹಿಡಿದಿದೆ.

ಏರ್ ಇಂಡಿಯಾದ ನಿರ್ಲಕ್ಷ ವನ್ನು ಸಾಬೀತುಪಡಿಸುವ ಮತ್ತೊಂದು ಪ್ರಕರಣ ಕೂಡ ದುರಂತದ ನಂತರ ಬೆಳಕಿಗೆ ಬಂದಿದೆ. ಈ ಡ್ರೀಮ್ ಲೈನರ್ ವಿಮಾನದಲ್ಲಿ ಮೇ ೧ರಂದು ಹೊಸದಿಲ್ಲಿಯಿಂದ ಲಂಡನ್‌ಗೆ ಪ್ರಯಾಣಿಸಿದ ಶರತ್ ರಾವಲ್ ಎಂಬವರು, ವಿಮಾನದಲ್ಲಿ ತಾವು ಅನುಭವಿಸಿದ ಅನನುಕೂಲಗಳನ್ನು ವಿವರಿಸಿ ಏರ್ ಇಂಡಿಯಾ ಸಂಸ್ಥೆಗೆ ಟ್ವೀಟ್ ಮಾಡಿದ್ದಾರೆ. ಅವರೇ ಹೇಳಿಕೊಂಡಿರುವಂತೆ, ಮೇ ೧ರಂದು ಲಂಡನ್‌ಗೆ ಪ್ರಯಾಣ ನಿಗದಿಯಾಗಿತ್ತು. ಆದರೆ, ಕಾರಣಾಂತರಗಳಿಂದ ಅಂದು ವಿಮಾನ ಹೊರಡಲಿಲ್ಲ. ಸಂಸ್ಥೆಯು ಎಲ್ಲ ಪ್ರಯಾಣಿಕರಿಗೂ ಹೊಸದಿಲ್ಲಿಯಲ್ಲೇ ತಂಗುವ ವ್ಯವಸ್ಥೆ ಮಾಡಿತ್ತು.

ಮಾರನೇ ದಿನ ಅಂದರೆ ಮೇ ೨ರಂದು ಬೆಳಿಗ್ಗೆ ವಿಮಾನ ಪ್ರಯಾಣ ಬೆಳೆಸಿದೆ. ವಿಮಾನದಲ್ಲಿ ಹವಾ ನಿಯಂತ್ರಣ ವ್ಯವಸ್ಥೆಯ ಅಧ್ವಾನ, ಶೌಚಾಲಯದಲ್ಲಿ ದೀಪಗಳಿಲ್ಲದೆ ಪರದಾಟ ಮುಂತಾದ ತಾಂತ್ರಿಕ ದೋಷಗಳನ್ನು ಅವರು ಪಟ್ಟಿ ಮಾಡಿದ್ದಾರೆ.

ವಿಮಾನದ ತಾಂತ್ರಿಕ ದೋಷಗಳ ಬಗ್ಗೆ ದೂರು ಕೇಳಿಬಂದಿದ್ದರೂ ಸಂಬಂಧ ಪಟ್ಟವರು ನಿರ್ಲಕ್ಷ  ವಹಿಸಿದ್ದರೆ ಎಂಬುದು ಖಚಿತವಾಗಬೇಕು. ಅದು ನಿಜವಾದರೆ, ಈ ದುರಂತಕ್ಕೆ ಸಂಸ್ಥೆಯೇ ಹೊಣೆ ಯಾಗಬೇಕು. ಏರ್ ಇಂಡಿಯಾ ಸಂಸ್ಥೆಮೃತರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ. ಪರಿಹಾರ ಘೋಷಣೆ ಮಾಡಿದೆ. ಅಲ್ಲದೆ, ವಿದ್ಯಾರ್ಥಿನಿಲಯದಲ್ಲಿ ಸಾವಿಗೀಡಾದವರ ಕುಟುಂಬಗಳಿಗೂ ಅಷ್ಟೇ ಪರಿಹಾರ ಘೋಷಿಸಿದೆ. ಅಲ್ಲದೆ, ಗಾಯಾಳುಗಳ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನೂ ಭರಿಸುವುದಾಗಿ ಹೇಳಿದೆ.

ವಿಮಾನಗಳಲ್ಲಿ ಪ್ರಯಾಣಿಸುವವರ ಸುರಕ್ಷತೆ ಬಗ್ಗೆ ಅತ್ಯಂತ ಜಾಗರೂಕತೆ ವಹಿಸಬೇಕಾದ ಸಂಸ್ಥೆ, ಉದಾಸೀನ ತೋರಿದ್ದೇಕೆ? ಮೇ ತಿಂಗಳಿನಲ್ಲೇ ವಿಮಾನದ ಅವ್ಯವಸ್ಥೆಯ ಬಗ್ಗೆ ದೂರು ಬಂದಿದ್ದರೂ ನಿರ್ಲಕ್ಷ  ವಹಿಸಿದ್ದು ನೂರಾರು ಜನರ ಪ್ರಾಣಕ್ಕೆ ಎರವಾಗಿದೆ.

ಈ ದುರಂತಕ್ಕೆ ಕಾರಣಗಳೇನು ಎಂಬುದನ್ನು ಪತ್ತೆಹಚ್ಚಲು ಮತ್ತು ಮುಂದೆ ಇಂತಹ ಭೀಕರ ವಿಮಾನ ಅಪಘಾತಗಳು ನಡೆಯದಂತೆ ತಡೆಗಟ್ಟಲು ಸೂಕ್ತ ಮಾರ್ಗಸೂಚಿ ರೂಪಿಸಲು ಕೇಂದ್ರ ಸರ್ಕಾರವು ಉನ್ನತ ಮಟ್ಟದ ಶಿಸ್ತು ಸಮಿತಿಯನ್ನು ರಚನೆ ಮಾಡಿದೆ. ಸಮಿತಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಅಲ್ಲದೆ, ಕೇಂದ್ರ ಸರ್ಕಾರ ಈಗ ಸಂಭವಿಸಿರುವ ದುರಂತಕ್ಕೆ ಕಾರಣರಾದವರಿಗೆ ಕಾನೂನಾತ್ಮಕ ಶಿಕ್ಷೆ ನೀಡಲು ಹಿಂಜರಿಯಬಾರದು. ವಿಮಾನಯಾನದ ಸುರಕ್ಷತೆ ಬಗ್ಗೆ ಪ್ರಯಾಣಿಕರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು.

” ವಿಮಾನಗಳಲ್ಲಿ ಪ್ರಯಾಣಿಸುವವರ ಸುರಕ್ಷತೆ ಬಗ್ಗೆ ಅತ್ಯಂತ ಜಾಗರೂಕತೆ ವಹಿಸಬೇಕಾದ ಸಂಸ್ಥೆ ಉದಾಸೀನ ತೋರಿದ್ದೇಕೆ? ಮೇ ತಿಂಗಳಿನಲ್ಲೇ ವಿಮಾನದ ಅವ್ಯವಸ್ಥೆಯ ಬಗ್ಗೆ ದೂರು ಬಂದಿದ್ದರೂ ನಿರ್ಲಕ್ಷ ವಹಿಸಿದ್ದು ನೂರಾರು ಜನರ ಪ್ರಾಣಕ್ಕೆ ಎರವಾಗಿದೆ.”

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ; ಸುಟ್ಟು ಹೋದ 6 ಎಕರೆ ಕಬ್ಬು

ಹನೂರು : ಅತಿಯಾದ ಗಾಳಿಯ ರಭಸಕ್ಕೆ ವಿದ್ಯುತ್ ತಂತಿ ಒಂದಕ್ಕೊಂದು ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡು ಜಮೀನಿನಲ್ಲಿದ್ದ 6 ಎಕರೆ ಕಬ್ಬು…

1 hour ago

ಆಷಾಢ ಶುಕ್ರವಾರ, ಶನಿವಾರ, ಭಾನುವಾರ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ

ಮೈಸೂರು: ಆಷಾಢ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಸಚಿವ ಯತೀಂದ್ರ…

4 hours ago

ಕಾರಂಜಿ ಕೆರೆ ಉದ್ಯಾನದಲ್ಲಿ ‘ಪರಿಸರ ಅನುಭವ ವಲಯ’

ಮೈಸೂರು: ಜೀವವೈವಿಧ್ಯ ತಾಣವಾಗಿರುವn ಹಾಗೂ ಪ್ರಕೃತಿಯ ಸೊಬಗಿನ ವಾತಾವರಣದಿಂದ ಕೂಡಿರುವ ಕಾರಂಜಿ ಕೆರೆ ಉದ್ಯಾನದಲ್ಲಿ ‘ಪರಿಸರ ಅನುಭವ ವಲಯ’ ನಿರ್ಮಾಣ…

6 hours ago

ಅಲೆಮಾರಿ ಜನಾಂಗ ನಾಡಿನ ಸಂಸ್ಕೃತಿಯ ಜೀವಂತಿಕೆ

ಟಿ.ಕೆ.ಹರೀಶ್ ಸಮುದಾಯಗಳಿಗೆ ಸೂರು, ಶಿಕ್ಷಣ ಒದಗಿಸುವುದು ಅತ್ಯಗತ್ಯ ಭಾರತೀಯ ಅಲೆಮಾರಿ ಜನಾಂಗಗಳು ಕೇವಲ ಸಂಚಾರಿಗಳಲ್ಲ; ಅವರು ನಮ್ಮ ಶ್ರೀಮಂತ ಸಾಂಸ್ಕೃತಿಕ…

11 hours ago

ಓದುಗರ ಪತ್ರ: ನೆಮ್ಮದಿ ಕೇಂದ್ರಕ್ಕೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ ಆಡಳಿತ ಸೌಧದಲ್ಲಿ ಇರುವ ನೆಮ್ಮದಿ ಕೇಂದ್ರದ ಮೂಲಕ ಜಾತಿ ಪ್ರಮಾಣ ಪತ್ರ, ಆದಾಯ…

12 hours ago

ಓದುಗರ ಪತ್ರ: ಆಹಾರ ಸರಬರಾಜಿಗೆ ಕಪ್ಪು ಪ್ಲಾಸ್ಟಿಕ್ ಡಬ್ಬಿಗಳನ್ನು ನಿಷೇಧಿಸಿ

ನಗರ ಪ್ರದೇಶಗಳ ಹೋಟೆಲ್‌ಗಳಲ್ಲಿ ನೀಡಲಾಗುವ ಆಹಾರ ಪಾರ್ಸೆಲ್‌ಗಳು ಹಾಗೂ ಆನ್ ಲೈನ್ ಮೂಲಕ ಸರಬರಾಜಾಗುವ ಶೇ.೯೦ ಕ್ಕಿಂತ ಹೆಚ್ಚು ಆಹಾರ…

12 hours ago