ಎಡಿಟೋರಿಯಲ್

ಸಂಪಾದಕೀಯ : ರೈಲು ಸುರಂಗ ಮಾರ್ಗ ಪ್ರಸ್ತಾಪ ಕೈಬಿಟ್ಟು ಹಳೇಯೋಜನೆಗೆ ಚಾಲನೆ ನೀಡಲಿ

ಕನಕಪುರ- ಮಳವಳ್ಳಿ, ಕೊಳ್ಳೇಗಾಲ- ಯಳಂದೂರು- ಈರೋಡ್ ಮೂಲಕ ಸೇಲಂಗೆ ಸಂಪರ್ಕ ಕಲ್ಪಿಸುವ ಹೊಸ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ಸರ್ವೆ ಕಾರ್ಯ ಆರಂಭವಾಗಿದೆ. ಚಾಮರಾಜನಗರ ಜಿಲ್ಲೆಯ ಯಳಂದೂರು ಮತ್ತು ತಮಿಳುನಾಡಿನ ಈರೋಡ್ ನಡುವೆ ಸಂರಕ್ಷಿತಾರಣ್ಯವಿದೆ. ಈ ಅರಣ್ಯದೊಳಗೆ ನೆಲದಡಿ ೯ ಕಿ.ಮೀ. ಸುರಂಗ ಮಾರ್ಗ ನಿರ್ಮಿಸಿ ರೈಲು ಓಡಿಸಲು ಉದ್ದೇಶಿಸಲಾಗಿದೆ. ಇದರಿಂದ ಅರಣ್ಯಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ವಸತಿ, ಮೂಲ ಸೌಕರ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಕಳೆದ ವಾರ ಬೆಂಗಳೂರಿನಲ್ಲಿ ಹೇಳಿಕೆ ನೀಡಿ ಸಂಚಲನ ಮೂಡಿಸಿದರು. ಪರಿಸರ ಪ್ರೇಮಿಗಳು, ಅರಣ್ಯಾಧಿಕಾರಿಗಳ ಹುಬ್ಬೇರುವಂತೆ ಮಾಡಿದರು.

ಇದು ಯಾವುದು ಹೊಸ ಯೋಜನೆ ಎಂದು ಜಿಲ್ಲೆಯ ಜನರು ಸಹ ಅಚ್ಚರಿಪಟ್ಟರು. ಹಾಗಾದರೆ ಬೆಂಗಳೂರು- ಸತ್ಯಮಂಗಲ ರೈಲು ಯೋಜನೆ (ಬೆಂಗಳೂರು- ಚಾಮರಾಜನಗರ ರೈಲು ಪರಿಷ್ಕೃತ ಯೋಜನೆ) ಮತ್ತು ಚಾಮರಾಜನಗರ- ಮೆಟ್ಟುಪಾಳ್ಯಂ ರೈಲು ಯೋಜನೆಗಳು ಎಲ್ಲಿ ಹೋದವು ಎಂಬ ಪ್ರಶ್ನೆಗಳು ಕೇಳಿಬಂದವು. ರಾಜ್ಯದ ದಕ್ಷಿಣ ಭಾಗದ ಕೊನೆಯ ರೈಲು ನಿಲ್ದಾಣಗಳಲ್ಲಿ ಚಾಮರಾಜನಗರವೂ ಒಂದು. ಇಲ್ಲಿಂದ ತಮಿಳುನಾಡಿನ ಮೆಟ್ಟುಪಾಳ್ಯಂಗೆ ಮತ್ತು ಸತ್ಯಮಂಗಲಕ್ಕೆ ರೈಲು ಯೋಜನೆ ರೂಪಿಸಬೇಕೆಂಬ ಕೂಗು ಮೂರು ದಶಕಗಳಿಂದಲೂ ಕೇಳಿಬರುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯಿಂದ ಈ ಎರಡು ಯೋಜನೆಗಳು ಮೂಲೆಗುಂಪಾಗುತ್ತಿವೆ. ಈ ನಡುವೆ ಸೋಮಣ್ಣ ಅವರು ಕನಕಪುರ- ಮಳವಳ್ಳಿ, ಕೊಳ್ಳೇಗಾಲ- ಯಳಂದೂರು- ಈರೋಡ್ ಮೂಲಕ ಸೇಲಂಗೆ ಸಂಪರ್ಕ ಕಲ್ಪಿಸುವ ಹೊಸ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಹೇಳಿಕೆ ನೀಡಿದ್ದಾರೆ. ಇದರ ಬದಲಿಗೆ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಮರುಜೀವ ನೀಡಬಹುದಿತ್ತು ಎಂಬ ಮಾತುಗಳೂ ಕೇಳಿಬಂದಿವೆ.
ಚಾಮರಾಜನಗರ- ಮೆಟ್ಟುಪಾಳ್ಯಂ ರೈಲು ಯೋಜನೆ ಏಕೆ ಜಾರಿಯಾಗಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಚಾಮರಾಜನಗರದಿಂದ ಮೆಟ್ಟು ಪಾಳ್ಯಂಗೆ ರೈಲು ಸಂಚರಿಸಬೇಕಾದರೆ ಬಿಳಿಗಿರಿರಂಗನಬೆಟ್ಟ, ಸತ್ಯಮಂಗಲ ಹುಲಿ ಸಂರಕ್ಷಿತಾರಣ್ಯದೊಳಗೆ ಹೋಗಬೇಕಿತ್ತು. ಹಾಗಾಗಿ ಪರಿಸರ ಸಚಿವಾಲಯ ಈ ಯೋಜನೆಗೆ ಅನುಮೋದನೆ ನೀಡಲಿಲ್ಲ, ಇದು ಕಸದಬುಟ್ಟಿ ಸೇರಿತು. ಇನ್ನು ಬೆಂಗಳೂರು- ಸತ್ಯಮಂಗಲ ರೈಲು ಯೋಜನೆಯನ್ನು ಕೇಂದ್ರ ಸರ್ಕಾರವು ೧೯೯೬ರಲ್ಲಿ ಘೋಷಿಸಿ ೨೦೦೨ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಿತ್ತು. ಈ ರೈಲು ಮಾರ್ಗವು ಸತ್ಯಮಂಗಲ ಹುಲಿ ಸಂರಕ್ಷಿತಾರಣ್ಯ ಮೂಲಕ ಹಾದು ಹೋಗಬೇಕಿದ್ದ ಕಾರಣ ತಮಿಳುನಾಡು ಸರ್ಕಾರ ಒಪ್ಪಿಗೆ ನೀಡಲಿಲ್ಲ. ಬದಲಿಗೆ ಪರಿಷ್ಕೃತ ಬೆಂಗಳೂರು- ಹೆಜ್ಜಾಲೆ- ಕನಕಪುರ- ಮಳವಳ್ಳಿ- ಕೊಳ್ಳೇಗಾಲ- ಚಾಮರಾಜನಗರ ರೈಲು ಯೋಜನೆ ರೂಪಿಸಿ ಅಂದಾಜು ವೆಚ್ಚ ೧೩೮೩ ಕೋಟಿ ರೂ. ಮೀಸಲಿಡಲಾಗಿದೆ. ಈ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಮಾಡಿ ಯೋಜನಾ ಮೊತ್ತದ ಶೇ.೫೦ರಷ್ಟನ್ನು ಭರಿಸಲು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಒಪ್ಪಿಕೊಂಡಿತ್ತು. ಯೋಜ ನೆಗಾಗಿ ೧೭೩೩ ಎಕರೆ ಜಾಗವನ್ನು ಭೂ ಸ್ವಾಧೀನ ಮಾಡಬೇಕಿತ್ತು. ಆದರೆ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಮನಸ್ಸು ಮಾಡಲಿಲ್ಲ. ನಂತರ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ ಅವರು ಸಹ ಇಚ್ಛಾಶಕ್ತಿ ತೋರಲಿಲ್ಲ ಹಾಗಾಗಿ ಯೋಜನೆಯು ಒಂದು ಹೆಜ್ಜೆಯೂ ಮುಂದಕ್ಕೆ ಹೋಗಲಿಲ್ಲ ಭೂ ಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ನಂತರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಬಿಜೆಪಿ ಸರ್ಕಾರ ಸುಮ್ಮನಾಯಿತು.
ರಾಜ್ಯದಲ್ಲಿ ಅಧಿಕಾರ ನಡೆಸಿದ ಜಾ.ದಳ- ಕಾಂಗ್ರೆಸ್ ಮೈತ್ರಿ ಸರ್ಕಾರ, ಬಿಜೆಪಿ ಸರ್ಕಾರ ಈ ರೈಲು ಯೋಜನೆ ಬಗ್ಗೆ ಯಾವುದೇ ಚಕಾರ ಎತ್ತಲಿಲ್ಲ. ಈಗ ಕನಕಪುರ- ಮಳವಳ್ಳಿ, ಕೊಳ್ಳೇಗಾಲ- ಯಳಂದೂರು- ಈರೋಡ್ ಮೂಲಕ ಸೇಲಂಗೆ ಸಂಪರ್ಕ ಕಲ್ಪಿಸುವ ಹೊಸ ಯೋಜನೆಯನ್ನು ತೇಲಿ ಬಿಡಲಾಗಿದೆ. ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶವು ವೈವಿಧ್ಯಮಯ ಕಾಡುಗಳು, ಬುಡಕಟ್ಟು ಗಿರಿಜನರನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ಇಲ್ಲಿ ೯ ಕಿ.ಮೀ.ಸುರಂಗ ಮಾರ್ಗ ಮಾಡಲು ಸಾಧ್ಯವೇ?
ರಾಷ್ಟ್ರೀಯ ಹೆದ್ದಾರಿ(೭೬೬)ಯು ಮೈಸೂರು- ನಂಜನಗೂಡು- ಗುಂಡ್ಲುಪೇಟೆ- ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಮಾರ್ಗವಾಗಿ ಕೇರಳಕ್ಕೆ ಸಂಪರ್ಕ ಕಲ್ಪಿಸುತ್ತದೆ. ಪ್ರಾಣಿಗಳ ಹಿತದೃಷ್ಟಿಯಿಂದ ಇಲ್ಲಿ ರಾತ್ರಿ ೯ ರಿಂದ ಬೆಳಿಗ್ಗೆ ೬ ಗಂಟೆ ತನಕ ಸಂಚಾರವನ್ನೇ ಬಂದ್ ಮಾಡಲಾಗಿದೆ. ಇದಲ್ಲದೆ ಜಿಲ್ಲೆಯ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ(೨೦೯) ಯು ಬಿಳಿಗಿರಿರಂಗನಬೆಟ್ಟ ಮತ್ತು ಸತ್ಯಮಂಗಲ ಹುಲಿ ಸಂರಕ್ಷಿತಾರಣ್ಯಗಳಲ್ಲಿ ಹಾದು ಹೋಗುತ್ತಿದ್ದು, ಇಲ್ಲಿಯೂ ರಾತ್ರಿ ಸಂಚಾರ ಬಂದ್ ಮಾಡಲಾಗಿದೆ. ಕೇರಳ ಸರ್ಕಾರ ರಾತ್ರಿ ಸಂಚಾರ ನಿಷೇಧ ತೆರವಿಗೆ ನಿರಂತರ ಪ್ರಯತ್ನ ನಡೆಸುತ್ತಲೇ ಇದೆ. ಅಲ್ಲದೆ ಬಂಡೀಪುರ ಅರಣ್ಯದೊಳಗೆ ಇರುವ ರಾಷ್ಟ್ರೀಯ ಹೆದ್ದಾರಿ (೭೬೬) ಉದ್ದಕ್ಕೂ ಎಲಿವೆಟೆಡ್ ರಸ್ತೆ ನಿರ್ಮಾಣ ಮಾಡಲು ಅವಕಾಶ ನೀಡಬೇಕೆಂಬ ಕೇರಳ ಸರ್ಕಾರದ ಮನವಿಯನ್ನು ತಿರಸ್ಕರಿಸಲಾಗಿದೆ.
ಸಂರಕ್ಷಿತಾರಣ್ಯಗಳಲ್ಲಿ ರಸ್ತೆ ವಿಸ್ತರಣೆ, ರೈಲು ಮಾರ್ಗಗಳಿಗೆ ಅವಕಾಶ ನೀಡದಂತೆ ಪರಿಸರ ಪ್ರೇಮಿಗಳು ಹೋರಾಟ ನಡೆಸುತ್ತ ಬಂದಿದ್ದಾರೆ. ಕಾನೂನು ಹೋರಾಟಕ್ಕೂ ಸಿದ್ದರಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಸುರಂಗ ರೈಲು ಮಾರ್ಗ ನಿರ್ಮಾಣ ಸಾಧ್ಯವೇ? ಕಾರ್ಯಸಾಧ್ಯವಲ್ಲದ ಹೊಸ ಯೋಜನೆಗಳನ್ನು ತೇಲಿಬಿಡುವ ಬದಲು ಕಾರ್ಯಸಾಧ್ಯವಾಗುವ ಹಳೇ ಯೋಜನೆಗಳನ್ನೇ ತ್ವರಿತ ಅನುಷ್ಠಾನಗೊಳಿಸಲು ಸರ್ಕಾರ ಆಸಕ್ತಿ ವಹಿಸಬೇಕಿದೆ.

andolanait

Recent Posts

ಎದೆಗೆ ಗನ್‌ ಇಟ್ಟು ತಾವೇ ಶೂಟ್‌ ಮಾಡಿಕೊಂಡ ಸಿ.ಜೆ.ರಾಯ್:‌ ಮರಣೋತ್ತರ ಪರೀಕ್ಷೆಯಲ್ಲಿ ದೃಢ

ಬೆಂಗಳೂರು: ಕಾನ್ಫಿಡೆಂಟ್‌ ಗ್ರೂಪ್‌ ಮುಖ್ಯಸ್ಥ, ಉದ್ಯಮಿ ಡಾ.ಸಿ.ಜೆ.ರಾಯ್‌ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಬೆಚ್ಚಿಬೀಳಿಸುವ ಮಾಹಿತಿ ಹೊರಬಂದಿದೆ. ಮರಣೋತ್ತರ…

45 mins ago

ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಕೆ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಸಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಇಂದು ವಿಧಾನಪರಿಷತ್ತಿನ ಅಧಿವೇಶನದ…

45 mins ago

ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಬಳಿಕ…

1 hour ago

ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಚಿರತೆ ಅಟ್ಯಾಕ್: ಮಗು ಸೇರಿ ಮೂವರಿಗೆ ಗಂಭೀರ ಗಾಯ

ನಂಜನಗೂಡು: ಜಮೀನಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ರೈತ ದಂಪತಿಗಳ ಮೇಲೆ ಚಿರತೆ ದಾಳಿ ನಡೆಸಿದ್ದು, ಮಗು ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿರುವ…

2 hours ago

ತಗಡೂರು ಖಾದಿ ಕೇಂದ್ರ ಪುನಶ್ಚೇತನಕ್ಕೆ ಪಣ

ನಂಜನಗೂಡು: ಮಹಾತ್ಮ ಗಾಂಧೀಯವರ ಸರ್ವೋದಯದ ದಿನದ ಅಂಗವಾಗಿ ಸ್ವಾತಂತ್ರ್ಯಹೋರಾಟಗಾರ ತಗಡೂರು ಗಾಂಧಿ ಎಂದೇ ಖ್ಯಾತರಾಗಿದ್ದ ರಾಮಚಂದ್ರರಾಯರಿಂದ ಸ್ಥಾಪಿತವಾದ ತಗಡೂರು ಖಾದಿ ಕೇಂದ್ರದಲ್ಲಿ…

2 hours ago

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 21ನೇ ಘಟಿಕೋತ್ಸವದ ಸಂಭ್ರಮ ಮನೆಮಾಡಿದ್ದು, ಒಟ್ಟು 8 ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್‌…

2 hours ago