ಎಡಿಟೋರಿಯಲ್

ಸಂಪಾದಕೀಯ : ಅವೈಜ್ಞಾನಿಕ ಹೋಂ ಮೇಡ್ ವೈನ್‌ಗಳ ವಿರುದ್ಧ ಕ್ರಮ ಅಗತ್ಯ

ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಕೊಡಗು, ಹೋಂ ಮೇಡ್ ವೈನ್‌ಗೂ ಅಷ್ಟೇ ಹೆಸರುವಾಸಿ. ಆದರೆ ಅದೇ ವೈನ್ ಕೊಡಗಿನ ಹೆಸರಿಗೆ ಕಳಂಕ ತರುವ ದಿನಗಳು ದೂರವಿಲ್ಲ. ಕೊಡಗಿನ ಮನೆಯಲ್ಲಿ ವೈನ್ ತಯಾರಿಸುವುದು ಇಂದು ನೆನ್ನೆಯದಲ್ಲ. ಹಲವು ವರ್ಷಗಳಿಂದ ಮನೆಗಳಲ್ಲಿ ವೈನ್ ತಯಾರಿಸಲಾಗುತ್ತಿದೆ. ಹಿಂದೆ ಕೊಡಗಿನಲ್ಲಿ ಮದುವೆ, ನಾಮಕರಣದಂತಹ ಕಾರ್ಯಕ್ರಮಗಳಲ್ಲಿ ವೈನ್‌ಗಳನ್ನು ಬಳಸುತ್ತಿದ್ದರು. ಇಂದಿಗೂ ಇಂತಹ ಸಮಾರಂಭದಲ್ಲಿ ವೈನ್ ಇದ್ದರೂ ಮದ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹಿಂದೆ ಮಹಿಳೆಯರು ತಯಾರಿಸುವ ವೈನ್‌ನಲ್ಲಿ ಆಲ್ಕೋಹಾಲ್ ಇರುತ್ತಿರಲಿಲ್ಲ. ತಮ್ಮ ಹವ್ಯಾಸಕ್ಕೆ ಮತ್ತು ತಮ್ಮ ಮನೆಯ ಸಮಾರಂಭಕ್ಕೆ ಮಾತ್ರ ತಯಾರಿಸುತ್ತಿದ್ದರು.
ಕೊಡಗಿನಲ್ಲಿ ಬದಲಾವಣೆ ತಂದ ಪ್ರವಾಸೋದ್ಯಮ ವೈನ್ ತಯಾರಿಕೆಯ ಮೇಲೆ ಭಾರಿ ಪರಿಣಾಮವಾಗುವಂತೆ ಮಾಡಿತು. ಜಿಲ್ಲೆಗೆ ಆಗಮಿಸುತ್ತಿದ್ದ ಪ್ರವಾಸಿಗರು ಕೊಡಗಿನಲ್ಲಿ ಸಿಗುವ ವೈನ್‌ಅನ್ನು ವಿಶೇಷ ಪಾನೀಯವೆಂದು ಸೇವಿಸಲಾರಂಭಿಸಿದರು. ಒಂದು ಕಾಲದಲ್ಲಿ ಕೇವಲ ಹವ್ಯಾಸಕ್ಕೆ ತಯಾರಾಗುತ್ತಿದ್ದ ವೈನ್ ನಂತರ ಪ್ರವಾಸಿಗರಿಗೆ ಮಾರಾಟವಾಗುವ ಅತ್ಯಂತ ಬೇಡಿಕೆಯ ವಸ್ತುವಾಯಿತು. ಇದರಿಂದಾಗಿ ಕೆಲವು ಮಹಿಳೆಯರ ಹವ್ಯಾಸವಾಗಿದ್ದ ವೈನ್ ತಯಾರಿಕೆ ವೃತ್ತಿಯಾಯಿತು. ಉತ್ತಮ ಗುಣಮಟ್ಟದ ವೈನ್ ಪ್ರವಾಸಿಗರನ್ನು ಆಕರ್ಷಿಸಿತು. ಜಿಲ್ಲೆಯಿಂದ ತೆರಳುವಾಗ ಕೊಡಗಿನ ನೆನಪಿಗಾಗಿ ವೈನ್ ಕೊಂಡೊಯ್ಯುತ್ತಿದ್ದ ಪ್ರವಾಸಿಗರು, ಮತ್ತೆ ಜಿಲ್ಲೆಯತ್ತ ಆಗಮಿಸುವಾಗ ವೈನ್ ಕೊಳ್ಳುವುದನ್ನು ಮರೆಯುತ್ತಿರಲಿಲ್ಲ.
ಆದರೆ ಈಗ ಕೊಡಗಿನ ವೈನ್‌ಗೆ ಉತ್ತಮ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಹೊರ ಜಿಲ್ಲೆಯ ವೈನ್‌ಗಳನ್ನು ತಂದು ಕೊಡಗಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಹೊರ ರಾಜ್ಯದ ವ್ಯಾಪಾರಿಗಳು ಕಳಪೆ ಗುಣಮಟ್ಟದ ವೈನ್‌ಗಳನ್ನು ತಂದು ಮಾರಾಟ ಮಾಡುವುದಲ್ಲದೆ, ಕಡಿಮೆ ಮೊತ್ತಕ್ಕೆ ಮಾರಾಟ ಮಾಡುವ ಮೂಲಕ ಪ್ರವಾಸಿಗರು ಹಾಗೂ ಸ್ಥಳೀಯರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ. ಪೈಪೋಟಿ ವ್ಯಾಪಾರದಿಂದಾಗಿ ಒಂದು ಬಾಟಲ್ ವೈನ್‌ಗೆ ೩-೪ ಬಾಟಲ್‌ಗಳನ್ನು ಉಚಿತವಾಗಿ ನೀಡುವುದೂ ಕಂಡುಬರುತ್ತಿದೆ. ೫೦ ರೂ., ೬೦ ರೂ.ಗೆ ಮಾರಾಟ ಮಾಡಿರುವ ಪ್ರಕರಣಗಳೂ ನಡೆಯುತ್ತಿವೆ. ಇದು ಕೊಡಗಿನ ವೈನ್ ಮಾರಾಟಗಾರರಿಗೆ ಸಂಕಷ್ಟ ತಂದೊಡ್ಡಿರುವುದಲ್ಲದೆ, ಕೆಳಪೆ ಗುಣಮಟ್ಟದ ವೈನ್‌ಗಳ ಮಾರಾಟದಿಂದ ಕೊಡಗಿನ ನೈಜ ಹೋಂ ಮೇಡ್ ವೈನ್ ಹೆಸರಿಗೆ ಕಳಂಕ ತಂದೊಡ್ಡುತ್ತಿದೆ.
ಈ ಹಿಂದೆಯೂ ವೈನ್‌ಗೆ ಬೇಡಿಕೆ ಹೆಚ್ಚುತ್ತಿದ್ದಂತೆ ಅವೈಜ್ಞಾನಿಕವಾಗಿ ವೈನ್ ತಯಾರಿಸಲಾಗುತ್ತಿತ್ತು. ಬಾಟಲಿಗಳಲ್ಲಿ ತಯಾರಿಸಿದವರ ವಿವರವಾಗಲಿ, ತಯಾರಿಕೆಯ ದಿನವಾಗಲಿ ಮುದ್ರಿತವಾಗುತ್ತಿರಲಿಲ್ಲ. ರಾಸಾಯನಿಕ ಬಳಸಿ ಮಾಡುವ ವೈನ್ ಹೆಚ್ಚು ದಿನ ಇಟ್ಟಲ್ಲಿ ಆಲ್ಕೋಹಾಲ್ ಅಂಶ ಹೆಚ್ಚುತ್ತಾ ಮದ್ಯದ ರೀತಿ ಪರಿವರ್ತನೆಯಾಗುತ್ತದೆ. ಅಲ್ಲದೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಬೆಲೆ ನಮೂದಿಸದ ಕಾರಣ ಮಾರಾಟಗಾರರು ಮನಸ್ಸಿಗೆ ಬಂದ ದರವನ್ನು ಪ್ರವಾಸಿಗರಿಗೆ ವಿಧಿಸುತ್ತಿದ್ದ ಕಾರಣಕ್ಕಾಗಿ ವೈನ್ ಮಾರಾಟದ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾದರು. ಹೋಂ ಮೇಡ್ ಎಂಬ ಹೆಸರಿನಲ್ಲಿ ಗುಣಮಟ್ಟ ಕಳೆದುಕೊಂಡ ವೈನ್‌ಗಳು ಪೂರೈಕೆಯಾಗುತ್ತಿದ್ದಾಗ ಅಬಕಾರಿ ಇಲಾಖೆ ಕ್ರಮ ತೆಗೆದುಕೊಂಡಿತು. ಇಂತಹ ವೈನ್‌ಗಳನ್ನು ನಿಷೇಧಿಸಿತು. ಆದರೂ ಗುಣಮಟ್ಟದ ವೈನ್ ತಯಾರಿಸುತ್ತಿದ್ದ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಿದ್ದ ಮಹಿಳೆಯರಿಗೆ ಕಾಳಸಂತೆಕೋರರಿಂದ ಅನ್ಯಾಯವಾಯಿತು.
ಸದ್ಯ ಈಗ ಮಾರಾಟ ಮಾಡಲಾಗುವ ವೈನ್ ಬಾಟಲಿಗಳಲ್ಲಿ ಎಲ್ಲಿ ತಯಾರಿಸಲಾಗುತ್ತದೆ? ಯಾವ ದಿನಾಂಕದಲ್ಲಿ ತಯಾರಿಸಲಾಗಿದೆ? ಯಾವ ದಿನಾಂಕದಲ್ಲಿ ಉಪಯೋಗಿಸಿದರೆ ಸೂಕ್ತ ಎನ್ನುವ ಮಾಹಿತಿ ಹಾಕುವುದನ್ನು ಕಡ್ಡಾಯ ಮಾಡಲಾಗಿದೆ. ಆದರೂ ಕೆಲವು ಕಡೆಗಳಲ್ಲಿ ಲೇಬಲ್ ಇಲ್ಲದೆಯೂ ವೈನ್ ಮಾರಾಟ ಮಾಡಲಾಗುತ್ತಿದೆ.
ಇನ್ನು ಈಸ್ಟ್ ಬಳಸದೆ ವೈನ್ ತಯಾರಿಸುವುದು ಕೊಡಗಿನ ವೈನ್‌ಗಳ ವಿಶೇಷತೆ. ಅದರ ಬದಲಿಗೆ ರಾಗಿ, ಗೋದಿ ಮತ್ತಿತರ ಪದಾರ್ಥ ಬಳಸಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ವ್ಯಾಪರೀಕರಣದಿಂದಾಗಿ ಈಸ್ಟ್ ಬಳಸುವ ಪದ್ಧತಿ ಬೆಳೆದಿದೆ.
೩೦ ದಿನಗಳ ಕಾಲ ಶೇಖರಣೆ, ಫಿಲ್ಟರಿಂಗ್ ಇದ್ಯಾವುದನ್ನೂ ಮಾಡದೆ ವಾರದೊಳಗಾಗಿ ವೈನ್ ತಯಾರಿಸಿಕೊಡುವ ಉದಾಹರಣೆಗಳೂ ಇವೆ. ಇದರಿಂದಾಗಿ ಕೊಡಗಿನ ವೈನ್ ಸಂಸ್ಕೃತಿ ಹಾಳಾಗುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ವೈನ್ ತಯಾರಿಕೆಗೆ ಸಂಪೂರ್ಣ ನಿಷೇಧ ಮಾಡುವ ಸಾಧ್ಯತೆಯನ್ನು ಕೂಡ ತಳ್ಳಿಹಾಕುವಂತಿಲ್ಲ.
ವ್ಯಾಪಾರೀಕರಣದಿಂದ ಇತ್ತೀಚಿನ ದಿನಗಳಲ್ಲಿ ವೈನ್ ಗುಣಮಟ್ಟ ಹಾಳಾಗುತ್ತಿದೆ. ಹೀಗಾಗಿ ಅಬಕಾರಿ ಇಲಾಖೆ ಮತ್ತೊಮ್ಮೆ ಈ ಬಗ್ಗೆ ಗಮನಹರಿಸಬೇಕಾದ ಅವಶ್ಯಕತೆ ಇದೆ. ಮಾರಾಟಕ್ಕಿಡಲಾಗಿರುವ ವೈನ್‌ಗಳ ಪರಿಶೀಲನೆ ನಡೆಸಿ ಸ್ಥಳೀಯ ವೈನ್ ಮಾರಾಟಗಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ.

andolanait

Recent Posts

ಓದುಗರ ಪತ್ರ: ಚರಂಡಿ ಸ್ವಚ್ಛಗೊಳಿಸಿ

ಮೈಸೂರು ತಾಲ್ಲೂಕು ಸಿದ್ದಲಿಂಗಪುರ ಗ್ರಾಪಂ ವ್ಯಾಪ್ತಿಯ ನಾಗನಹಳ್ಳಿ ಗ್ರಾಮದಲ್ಲಿ ಚರಂಡಿಯಲ್ಲಿ ಹೂಳುತುಂಬಿದ್ದು, ಸರಾಗವಾಗಿ ನೀರು ಹರಿಯದೇ ಇರುವುದರಿಂದ ಸೊಳ್ಳೆ, ನೊಣಗಳ…

28 mins ago

ಓದುಗರ ಪತ್ರ: ಮೊಬೈಲ್ ಬಿಟ್ಟು, ಪುಸ್ತಕ ಹಿಡಿಯಲಿ

ಇಂದು ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಒಳಗಾಗಿದ್ದು, ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್, ಫೇಸ್ ಬುಕ್, ಸ್ನಾಪ್ ಚಾಟ್, ಎಕ್ಸ್ , ಟೆಲಿಗ್ರಾಂಗಳನ್ನು…

31 mins ago

ಓದುಗರ ಪತ್ರ: ಇಷ್ಟೊಂದು ಸಿಗ್ನಲ್ ಲೈಟ್‌ಗಳು ಅಗತ್ಯವೇ?

ಮೈಸೂರಿನ ಬಹುತೇಕ ಎಲ್ಲ ವೃತ್ತಗಳಲ್ಲೂ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಿದ್ದು, ಸಾಂಸ್ಕೃತಿಕ ನಗರಿಯಾಗಿರುವ ಮೈಸೂರು ಸಿಗ್ನಲ್ ಲೈಟ್‌ಗಳ ನಗರಿಯಾಗಿ ಮಾರ್ಪಾಡಾಗಿದೆ. ಸಂಚಾರ…

34 mins ago

ಓದುಗರ ಪತ್ರ: ಪಿಜ್ಜಾ,ಬರ್ಗರ್ ಸೆಂಟರ್ ಕೆಲಸಗಳಲ್ಲಿ ಕನ್ನಡಿಗರಿಗೆ ಆದ್ಯತೆ ಇರಲಿ

ಮೈಸೂರಿನ ಜಯಲಕ್ಷ್ಮಿಪುರಂ ಮೂಲಕ ಹಾದು ಹೋಗುವ ಗೋಕುಲಂನ ಮುಖ್ಯರಸ್ತೆಯಲ್ಲಿ ಕೆಲ ರೆಸ್ಟೋರೆಂಟ್‌ಗಳು, ಕೆಫೆ,ಪಿಜ್ಜಾ ಹಾಗೂ ಬರ್ಗರ್ ಸೆಂಟರ್‌ಗಳು ಇವೆ. ಈ…

38 mins ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ದೆಹಲಿ ಶೃಂಗ ಸಭೆ ಹೊರ ಹಾಕಿದ ಎಐ ಒಳನೋಟ

ಇದು ಮಾಹಿತಿ ತಂತ್ರಜ್ಞಾನದ ಕ್ರಾಂತಿಯ ಯುಗ. ಅರವತ್ತರ ದಶಕದಲ್ಲಿ ಕೃಷಿ ಕ್ಷೇತ್ರದಲ್ಲಿ ಜಾರಿಗೆ ತಂದ ಜಪಾನ್ ಮಾದರಿಯ ನಾಟಿ, ಕಳೆಕೀಳುವ…

2 hours ago

ದ್ವಿತೀಯ ಪಿಯುಸಿ: 5, 255 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ

ನವೀನ್ ಡಿಸೋಜ ಮಡಿಕೇರಿ: ಫೆ.೨೮ರಿಂದ ಮಾ.೧೭ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯ ೧೮ ಪರೀಕ್ಷಾ ಕೇಂದ್ರಗಳಲ್ಲಿ ೫,೨೫೫ ವಿದ್ಯಾರ್ಥಿಗಳು…

2 hours ago