ಎಡಿಟೋರಿಯಲ್

ಸಂಪಾದಕೀಯ : ಸೂಕ್ತ ಭದ್ರತೆಯೊಂದಿಗೆ ಯಶಸ್ವಿಯಾಗಲಿ ಮಡಿಕೇರಿ ದಸರಾ..!

ಸೂಕ್ತ ಭದ್ರತೆಯೊಂದಿಗೆ ಯಶಸ್ವಿಯಾಗಲಿ ಮಡಿಕೇರಿ ದಸರಾ..! 

ಐತಿಹಾಸಿಕ ಮಡಿಕೇರಿ ಉತ್ಸವಕ್ಕೆ ಕರಗಗಳು ಹೊರಡುವುದರೊಂದಿಗೆ ಚಾಲನೆ ದೊರೆತಿದೆ. ಈ ಬಾರಿ ಸಂಪ್ರದಾಯಗಳೊಂದಿಗೆ ಅದ್ಧೂರಿ ದಸರಾ ಆಚರಣೆಗೆ ನಿರ್ಧರಿಸಲಾಗಿದ್ದು, ೨ ಲಕ್ಷಕ್ಕೂ ಅಧಿಕ ಮಂದಿ ಮಡಿಕೇರಿಗೆ ಆಗಮಿಸುವ ನಿರೀಕ್ಷೆ ಇದೆ. ಸೂಕ್ಷ್ಮ ಜಿಲ್ಲೆಯಾಗಿರುವ ಕೊಡಗಿನಲ್ಲಿ ಅಷ್ಟೊಂದು ಪ್ರಮಾಣದ ಜನತೆಗೆ ಸೂಕ್ತ ಭದ್ರತೆಯೊಂದಿಗೆ ಅಗತ್ಯ ಸೌಲಭ್ಯ ಕೂಡ ಒದಗಿಸಬೇಕಿದೆ.
ಹೌದು. ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಜನರು ರಾತ್ರಿ ಮಡಿಕೇರಿ ದಸರಾದ ದಶಮಂಟಪಗಳ ಶೋಭಾಯಾತ್ರೆ ವೀಕ್ಷಿಸಲು ಕೊಡಗಿನತ್ತ ಆಗಮಿಸುತ್ತಾರೆ. ಹತ್ತಾರು ಚಲನವಲನಗಳನ್ನೊಳಗೊಂಡ ಕಲಾಕೃತಿಗಳ ಕಥಾ ಹಂದರ ದೇವಲೋಕವೇ ಧರೆಗಿಳಿದಂತೆ ಭಾಸವಾಗಿಸುತ್ತದೆ.
ಕಳೆದ ನಾಲ್ಕು ವರ್ಷಗಳಿಂದ ಪ್ರಕೃತಿ ವಿಕೋಪ ಹಾಗೂ ಕೊರೊನಾದಿಂದಾಗಿ ದಸರಾವನ್ನು ಸರಳವಾಗಿ ಆಚರಿಸಲಾಗಿತ್ತು. ನಾಲ್ಕು ವರ್ಷಗಳ ಬಳಿಕ ಈ ಬಾರಿ ಅದ್ಧೂರಿ ದಸರಾ ನಡೆಯುತ್ತಿರುವುದರಿಂದ ಜನಸಂಖ್ಯೆ ಸಹಜವಾಗಿಯೇ ಹೆಚ್ಚಳವಾಗಲಿದೆ.
ರಾತ್ರಿ ಮಂಜಿನ ನಗರಿಯ ಪ್ರಮುಖ ಬೀದಿಗಳಲ್ಲಿ ನಡೆಯುವ ಅದ್ಧೂರಿ ದಶಮಂಟಪಗಳ ಶೋಭಾಯಾತ್ರೆ ಕಣ್ತುಂಬಿಕೊಳ್ಳಲು ಮಹಿಳೆಯರು, ಯುವತಿಯರು, ಮಕ್ಕಳು ಕೂಡ ಆಗಮಿಸುತ್ತಾರೆ. ಸಹಜವಾಗಿ ಶೋಭಾಯಾತ್ರೆ ಸಂದರ್ಭ ನೂಕುನುಗ್ಗಲು ಉಂಟಾಗುವುದರಿಂದ ಮಹಿಳೆಯರಿಗೆ ಹೆಚ್ಚು ಅಸುರಕ್ಷತೆ ಕಾಡುತ್ತದೆ. ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ಕಾರ್ಯೋನ್ಮುಖವಾಗಿದೆ.
ಈಗಾಗಲೇ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಸಮೀಪದ ಹಾಸನ, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಹೆಚ್ಚುವರಿ ಪೊಲೀಸರನ್ನು ಜಿಲ್ಲೆಗೆ ನಿಯೋಜಿಸಲಾಗುತ್ತದೆ. ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲು ನಿರ್ಧರಿಸಲಾಗಿದ್ದು, ಈ ಬಾರಿ ಜನಸಂಖ್ಯೆ ಹೆಚ್ಚಳವಾಗುವುದರಿಂದ ಇನ್ನಷ್ಟು ಹೆಚ್ಚುವರಿ ಪೊಲೀಸರ ನಿಯೋಜನೆ ಅನಿವಾರ್ಯವಾಗಿದೆ. ದಸರಾದಂದು ರಾತ್ರಿ ವೇಳೆ ಘರ್ಷಣೆ, ಕಲಹ, ಕೊಲೆಯಂತಹ ಅಹಿತಕರ ಘಟನೆಗಳು ನಡೆದಿರುವ ಉದಾಹರಣೆ ಇರುವುದರಿಂದ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಬೇಕಾಗಿದೆ. ಅಹಿತಕರ ಘಟನೆ ನಡೆಯದಂತೆ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ನಗರಲ್ಲಿ ಟ್ಯೂಬ್‌ಲೈಟ್ ಅಳವಡಿಕೆ, ಸಿಸಿ ಕ್ಯಾಮೆರಾ ಅಳವಡಿಕೆಯಂತಹ ಮುಂಜಾಗ್ರತಾ ಕ್ರಮಗಳು ನಡೆಯುತ್ತಿದೆ. ಇದರೊಂದಿಗೆ ಡ್ರೋನ್ ಸೇರಿದಂತೆ ಉತ್ತಮ ಗುಣಮಟ್ಟದ ಕ್ಯಾಮೆರಾಗಳಿಂದ ಚಿತ್ರೀಕರಣ ಮಾಡಬೇಕಿದೆ. ನಿರ್ಜನ ಪ್ರದೇಶಗಳಲ್ಲಿ ಹೆಚ್ಚಿನ ಗಮನಹರಿಸಬೇಕಿದೆ.
ಲಕ್ಷಾಂತರ ಮಂದಿ ಕೊಡಗು ಜಿಲ್ಲೆಗೆ ಆಗಮಿಸುವುದರಿಂದ ಗಡಿ ಭಾಗಗಳಲ್ಲೂ ಎಚ್ಚರಿಕೆ ವಹಿಸಬೇಕಿದೆ. ಜೊತೆಗೆ ಸಾವಿರಾರು ಸಂಖ್ಯೆಯ ವಾಹನಗಳು ಜಿಲ್ಲೆಯತ್ತ ಆಗಮಿಸುವುದರಿಂದ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಿದೆ. ನಗರ ಪ್ರದೇಶಗಳಲ್ಲಿ ವಾಹನ ದಟ್ಟಣೆ ಉಂಟಾಗುವುದನ್ನು ತಡೆಗಟ್ಟುವ ಪ್ರಯತ್ನವನ್ನು ಪೊಲೀಸ್ ಇಲಾಖೆ ಮಾಡಬೇಕಿದೆ.
ದಸರಾ ನಡೆದ ಮರುದಿನ ಮಡಿಕೇರಿ ನಗರ ಕಸದ ಕೊಂಪೆಯಾಗಿ ಮಾರ್ಪಾಡಾಗುತ್ತದೆ. ಪ್ರತಿವರ್ಷ ಕಸದ ಸಮಸ್ಯೆ ದಸರಾದಲ್ಲಿ ಕಾಡುತ್ತದೆ. ಹೀಗಾಗಿ ಅಗತ್ಯವಿರುವ ಕಡೆಗಳಲ್ಲಿ ಕಸದ ಬುಟ್ಟಿಗಳನ್ನು ತಾತ್ಕಾಲಿಕವಾಗಿ ಅಳವಡಿಸಬೇಕಿದೆ. ನಗರಸಭೆ ಈ ಸಂಬಂಧ ಗಮನಹರಿಸಬೇಕಿದ್ದು, ಸಾರ್ವಜನಿರಲ್ಲಿಯೂ ಅರಿವು ಮೂಡಿಸುವ ಫಲಕಗಳನ್ನು ಅಳವಡಿಸುವ ಮೂಲಕ ನಗರದ ಸ್ವಚ್ಛತೆಯನ್ನು ಕಾಪಾಡಬೇಕಿದೆ.
ದಸರಾ ಸಂದರ್ಭ ಮದ್ಯ ನಿಷೇಧ ಮಾಡಲಾಗುತ್ತದೆ. ಪ್ರತಿವರ್ಷ ಮದ್ಯ ನಿಷೇಧ ಮಾಡಿದರೂ ಶೋಭಾಯಾತ್ರೆ ಸಂದರ್ಭ ಮದ್ಯದ ಅಮಲು ಕಂಡುಬರುತ್ತದೆ. ಕೆಲವರು ಮದ್ಯ ಸೇವನೆ ಮಾಡಿ ಅತಿರೇಕದಿಂದ ವರ್ತಿಸುವ ಘಟನೆಗಳು ನಡೆಯುತ್ತವೆ. ಹೀಗಾಗಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ಬಗ್ಗೆ ಅಬಕಾರಿ ಇಲಾಖೆ ಕೂಡ ಮುನ್ನೆಚ್ಚರಿಕೆ ವಹಿಸಬೇಕಿದೆ.  ಹೊರ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯ ಯುವ ಸಮೂಹ ದಸರಾ ವೀಕ್ಷಣೆಗೆ ಕೊಡಗಿನತ್ತ ಆಗಮಿಸುತ್ತಾರೆ. ಕೆಲ ಯುವ ಸಮೂಹ ಮಾದಕ ವಸ್ತುಗಳನ್ನು ಜಿಲ್ಲೆಗೆ ತರುವ ಸಾಧ್ಯತೆ ಇದೆ. ಈ ಹಿಂದೆ ನಡೆದ ಕೊಲೆ ಪ್ರಕರಣದಲ್ಲಿ ಮಾದಕ ವಸ್ತು ಸೇವನೆ ಕಂಡುಬಂದಿರುವುದರಿಂದ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ.
ನಿರ್ಜನ ಪ್ರದೇಶಗಳಲ್ಲಿ ಸೇರುವ ಯುವ ಸಮೂಹದ ಬಗ್ಗೆಯೂ ಪೊಲೀಸರು ಗಮನ ಹರಿಸಬೇಕಿದೆ.
ದಶಮಂಟಪಗಳ ತೀರ್ಪುಗಾರಿಕಾ ಪ್ರದರ್ಶನದ ಸಂದರ್ಭ ಹೆಚ್ಚಿನ ನೂಕು ನುಗ್ಗಲು ಉಂಟಾಗುತ್ತದೆ. ಈ ಸಂದರ್ಭ ಸಾರ್ವಜನಿಕರು ಪರಸ್ಪರ ಕೈ ಮಿಲಾಯಿಸುವ ಘಟನೆಗಳೂ ನಡೆಯುತ್ತದೆ. ಹೀಗಾಗಿ ಮಂಟಪದ ಬಳಿಯೂ ಪೊಲೀಸ್ ಇಲಾಖೆ ಭದ್ರತೆ ಒದಗಿಸಬೇಕಿದೆ. ಮಂಟಪಗಳ ಸ್ವಯಂ ಸೇವಕರು ಕೂಡ ಪ್ರದರ್ಶನ ಸಮಯದಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ.
ಕಡೆಯದಾಗಿ ಈ ಬಾರಿಯ ದಸರಾ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಯಶಸ್ವಿಯಾಗಲು ಪೊಲೀಸರ ಸಹಕಾರ, ಕೊಡುಗೆ ಅತ್ಯಗತ್ಯವಾಗಿದೆ. ಹಾಗೆಯೇ ಭದ್ರತೆ ಒದಗಿಸುವ ಪೊಲೀಸರಿಗೆ ವಸತಿ ಹಾಗೂ ಊಟದ ವ್ಯವಸ್ಥೆಗೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು.
andolanait

Recent Posts

ಮುಂದಿನ ಚುನಾವಣೆಯಲ್ಲಿ NDA 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೆ : ನಿಖಿಲ್ ಕುಮಾರಸ್ವಾಮಿ ಭರವಸೆ

ಬೆಂಗಳೂರು : ಮುಂದಿನ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಎನ್ಡಿಎ ಮೈತ್ರಿಕೂಟವು 150 ಕ್ಷೇತ್ರಗಳಲ್ಲಿ ಜಯ…

29 mins ago

ಪ್ರತ್ಯೇಕವಾಗಿದ್ದ ದಂಪತಿ ನಡುವೆ ಕಿರಿಕ್ ; ಪತ್ನಿ ಕೊಲೆಯಲ್ಲಿ ಅಂತ್ಯ

ನಂಜನಗೂಡು : ಎರಡು ವರ್ಷಗಳಿಂದ ಪತ್ನಿಯಿಂದ ದೂರವಾಗಿದ್ದ ಪತಿ ರಾತ್ರೋರಾತ್ರಿ ದಿಢೀರನೆ ಪ್ರತ್ಯಕ್ಷವಾಗಿ ಪತ್ನಿಯನ್ನು ಕೊಂದಿರುವ ಘಟನೆ ನಂಜನಗೂಡು ತಾಲೂಕಿನ…

39 mins ago

ಸಿಎಂ ಕ್ಷೇತ್ರದಲ್ಲಿನ ಸಮಸ್ಯೆ ಬಗೆಹರಿಸಿ : ಅಧಿಕಾರಿಗಳಿಗೆ ಯತೀಂದ್ರ ಸೂಚನೆ

ನಂಜನಗೂಡು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಆದಷ್ಟು ಬೇಗ ಸಮಸ್ಯೆಗಳಿಗೆ ಸ್ಪಂದಿಸುವ…

44 mins ago

ಸಂಕ್ರಾಂತಿ ವಿಶೇಷ : ಮೈಸೂರು – ಟ್ಯುಟಿಕಾರನ್‌ ನಡುವೆ ವಿಶೇಷ ರೈಲು

ಮೈಸೂರು : ಮುಂದಿನ ವಾರ ಸಂಕ್ರಾಂತಿ/ಪೊಂಗಲ್‌ ಹಬ್ಬದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಹೆಚ್ಚು ಜನರು ಪ್ರಯಾಣಿಸುವುದರಿಂದ ಅವರಿಗೆ ಸೌಲಭ್ಯ ಕಲ್ಪಿಸಲು ಮೈಸೂರು-ಕೊಡಗು…

57 mins ago

ಸಂಶೋಧನೆಗೆ ಸಿಗದ ಪ್ರಾಮುಖ್ಯತೆ : ವಿಶ್ರಾಂತ ಕುಲಪತಿ ರಂಗಪ್ಪ ಬೇಸರ

ಮೈಸೂರು : ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಸಂಶೋಧನೆಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ, ಜೊತೆಗೆ ಸಂಶೋಧನೆಗೆ ಕಡಿಮೆ ಹಣವನ್ನು ವೆಚ್ಚ…

1 hour ago

ಆಹಾರದ ಮಹತ್ವ ಕುರಿತು ಅರಿವು ಅಗತ್ಯ : ಕೃಷಿ ಸಚಿವ.ಚಲುವರಾಯಸ್ವಾಮಿ

ಮಂಡ್ಯ : ಆಹಾರದ ಮಹತ್ವ ಹೆಚ್ಚಿದೆ. ಎಲ್ಲರೂ ಆಹಾರದ ಮಹತ್ವದ ಕುರಿತು ತಿಳಿದುಕೊಳ್ಳಬೇಕು. 30-40 ವರ್ಷಗಳ ಹಿಂದೆ ಭಾರತ ಆಹಾರದ…

2 hours ago