ಎಡಿಟೋರಿಯಲ್

ಈ ಜೀವ ಈ ಜೀವನ : ಸಾರ್ವಜನಿಕ ಶೌಚಾಲಯ ಸಮಸ್ಯೆಗೆ ಶಿಪ್ಪಿಂಗ್ ಕಂಟೈನರ್ ಪರಿಹಾರ

– ಪಂಜುಗಂಗೊಳ್ಳಿ

ಕಾಂಗ್ರೆಸಿನ ನಿರ್ಮಲ ಭಾರತ ಯೋಜನೆ ಇರಲಿ, ಬಿಜೆಪಿಯ ಸ್ವಚ್ಚ ಭಾರತ ಆಂದೋಲನ ಬರಲಿ ಇಂದಿಗೂ ಆನೇಕ ಗ್ರಾಮೀಣ ಪ್ರದೇಶಗಳಲ್ಲಿ ಹೆಂಗಸರು ಶೌಚಕ್ಕೆ ಹೋಗುವುದು ಒಂದು ಯಾತನಾಮಯ ದಿನಚರಿ. ಅದಕ್ಕಾಗಿ ಅವರು ಜನವಸತಿಯಿಂದ ದೂರವಿರುವ ಬಯಲು ಪ್ರದೇಶ, ಅರಣ್ಯ, ಗುಡ್ಡಬೆಟ್ಟಗಳ ಮರೆಗೆ ಹೋಗುವುದೋ, ಕತ್ತಲಾಗುವುದನ್ನು ಕಾಯುವುದೋ ಅಥವಾ ನಸುಕಿನಲ್ಲಿ ಇತರರು ಏಳುವ ಮೊದಲೇ ಶೌಚವನ್ನು ಮುಗಿಸುವುದೋ ಮಾಡಬೆಕಾಗುತ್ತದೆ. ಮಳೆಗಾಲದಲ್ಲಂತೂ ಮಹಿಳೆಯರಿಗೆ ಶೌಚದ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತದೆ. ಎಷ್ಟೋ ಜನ ಹೆಂಗಸರು ವಿಸರ್ಜನೆಗೆ ಸೂಕ್ತ ಸ್ಥಳವಿಲ್ಲದೆ ಹಗಲಿಡೀ ಮಲಮೂತ್ರಗಳನ್ನು ಕಟ್ಟಿಕೊಂಡು ಏನೇನೋ ಸಮಸ್ಯೆಗಳಿಗೆ ಒಳಗಾಗುವುದೂ ಇದೆ.

ತಮಿಳುನಾಡಿನ ಕುಂಭಕೋಣಂ ಹತ್ತಿರದ ಮಂಜಕ್ಕುಡಿ ಎಂಬ ಹಳ್ಳಿಯ 400 ಕುಟುಂಬಗಳ ಹೆಂಗಸರ ಪರಿಸ್ಥಿತಿಯೂ ಹೀಗೇ ಇತ್ತು. ಕೃಷಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಹಳ್ಳಿಯ ಯಾವ ಮನೆಯಲ್ಲೂ ಶೌಚಾಲಯವಾಗಲೀ, ಬಚ್ಚಲು ಮನೆಯಾಗಲೀ ಇರಲಿಲ್ಲ. ಹೆಣ್ಣುಮಕ್ಕಳು ಸ್ನಾನವಿಲ್ಲದೆ ಬೆವರು ವಾಸನೆ ಸೂಸುತ್ತ ಶಾಲೆಗಳಿಗೆ ಹೋಗಬೇಕಿತ್ತು. ಇವರಿಗೆ ಆಪತ್ಬಾಂಧವರಾಗಿ ಬಂದವರೇ ವೃತ್ತಿಯಲ್ಲಿ ಸಿನಿಮಾ ತಯಾರಕರು, ನಟರು ಆಗಿರುವ ಸುರೇಶ್ ಮೆನನ್ ಎಂಬುವವರು.

ಟಿವಿಎಸ್ ಕಂಪೆನಿ ನಡೆಡುವ `ಸ್ವಾಮಿ ದಯಾನಂದ ಸರಸ್ವತಿ ಎಜುಕೇಷನ್ ಟ್ರಸ್ಟ್’ನ ಎಂಡಿ ಆಗಿದ್ದ ಶೀಲಾ ಬಾಲಾಜಿ ಎಂಬುವವರಿಂದ ಕುಂಭಕೋಣಂನ ಹೆಂಗಸರ ಸಮಸ್ಯೆ ತಿಳಿದ ಸುರೇಶ್ ಮೆನನ್ ಕಡಿಮೆ ದರದಲ್ಲಿ 5 ಅಡಿ ಅಗಲ 20 ಅಡಿ ಉದ್ದದ ಕೆಲವು ನಿರುಪಯೋಗಿ ಕಂಟೈನರ್‍ಗಳನ್ನು ಖರೀದಿಸಿ, ಪ್ರತಿಯೊಂದರಲ್ಲಿ 8 ಅಡಿ ಉದ್ದ 4 ಅಡಿ ಅಗಲದ ಕೋಣೆಗಳನ್ನು ರೂಪಿಸಿದರು. ಪ್ರತಿಯೊಂದು ಶೌಚಾಲಯದಲ್ಲಿ ಓವರ್ ಹೆಡ್ ನೀರಿನ ಟ್ಯಾಂಕ್, ಭಾರತೀಯ ಅಥವಾ ಪಾಶ್ಚಿಮಾತ್ಯ ಶೈಲಿಯ ಕಮೋಡ್, ಸಿಂಕ್, ಬೇಸಿನ್, ಕನ್ನಡಿ, ಎಕ್ಸಾಸ್ಟ್ ಫ್ಯಾನ್ ಹಾಗೂ ಶವರ್ ಯೂನಿಟ್ ಇವೆ. ಶೌಚಾಲಯಗಳ ಮಲಮೂತ್ರ ಪೈಪ್ ಮೂಲಕ ತುಸು ದೂರದಲ್ಲಿ ತೋಡಿದ ಸೆಪ್ಟಿಕ್ ಟ್ಯಾಂಕಲ್ಲಿ ಶೇಖರಗೊಳ್ಳುತ್ತದೆ. ಪ್ರತಿದಿನ ಇವುಗಳನ್ನು ಸ್ವಚ್ಚಗೊಳಿಸಲು ಒಬ್ಬ ವ್ಯಕ್ತಿಯನ್ನು ನೇಮಿಸಲಾಗಿದೆ. ವಿದ್ಯುತ್ ಸಂಪರ್ಕಕ್ಕೆ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದೆ. ಈ ಕಂಟೈನರ್ ಶೌಚಲಯಗಳ ಡಿಸೈನ್ ಬಹಳ ಸರಳವಾದುದು. ಏನಾದರೂ ಹಾಳಾದರೆ ಸಾಮಾನ್ಯ ಪ್ಲಂಬರ್ ಕೂಡಾ ಇವುಗಳನ್ನು ದುರಸ್ತಿ ಮಾಡಬಹುದು. ಪ್ರಧಾನಿ ನರೇಂದ್ರ `ಮೋದಿ ಸ್ವಚ್ಚ ಭಾರತ್ ಅಭಿಯಾನ್’ ಶುರು ಮಾಡುವ ಹಲವು ವರ್ಷಗಳ ಹಿಂದೆಯೇ ಸುರೇಶ್ ಮೆನನ್ ಈ ಕಂಟೈನರ್ ಶೌಚಾಲಯ ಯೋಜನೆಯನ್ನು ಶುರು ಮಾಡಿದ್ದು, ಈಗಲೂ ಆ ಯೋಜನೆಯನ್ನು ಮುಂದುವರಿಸಿದ್ದಾರೆ.

ಕಂಟೈನರ್ ಶೌಚಾಲಯಗಳಿಂದಾಗಿ ಮಂಜಕ್ಕುಡಿಯ ಹೆಂಗಸರು ದಿನ, ರಾತ್ರಿ ಯಾವಾಗ ಬೇಕಾದರೂ ನಿರಾಳವಾಗಿ ಶೌಚಕ್ಕೆ ಹೋಗುತ್ತಾರೆ. ಹೆಣ್ಣುಮಕ್ಕಳು ದಿನಾ ಸ್ನಾನ ಮಾಡಿ ಉಲ್ಲಾಸದಿಂದ ಶಾಲೆಗೆ ಹೋಗುತ್ತಾರೆ. ಇದನ್ನು ಸಾಧ್ಯವಾಗಿಸಿದ ಆಪತ್ಬಾಂಧವ ಸುರೇಶ್ ಮೆನನ್‍ರನ್ನು ಅವರು ದಿನಾ ಸ್ಮರಿಸುತ್ತಾರೆ.

ನಗರಗಳಲ್ಲಿ ಅಲ್ಲಲ್ಲಿ ಸರಕಾರ ನಿರ್ಮಿತ ಸಾರ್ವಜನಿಕ ಶೌಚಾಲಯಗಳು ಇವೆಯಾದರೂ ಸ್ವಚ್ಚತೆಯ ಕೊರತೆಯಿಂದಾಗಿ ಅವುಗಳ ಬಳಿ ಹೋದಾಗ ಮೂಗು, ಕೆಲವೆಡೆ ಕಣ್ಣು ಕೂಡಾ ಮುಚ್ಚಿ ಕೊಳ್ಳಬೇಕಾಗಿ ಬರುವ ಪರಸ್ಥಿತಿ ಸಾಮಾನ್ಯ. ಆದರೂ, ಎಷ್ಟೇ ಬಿಗಿಯಾಗಿ ಮೂಗು ಮುಚ್ಚಿಕೊಂಡರೂ ಶೌಚಾಲಯಯಗಳ ಅಸಾಧ್ಯ ಅಮೋನಿಯಾ ವಾಸನೆ ಒಳ ಹೋಗುವುದನ್ನು ತಪ್ಪಿಸಲಾಗದು. ಇಂತಹ ಪರಿಸ್ಥಿತಿಯಲ್ಲಿ, ಒಂದು ಸಾರ್ವಜನಿಕ ಶೌಚಾಲಯದ ಬಳಿ ನಿಂತು ಸ್ಯಾಂಡ್‍ವಿಚ್ಚೋ, ಬರ್ಗರೋ ಅಥವಾ ನಿಮ್ಮ ನೆಚ್ಚಿನ ಇನ್ಯಾವುದಾದರೂ ತಿಂಡಿ ತಿನ್ನುವುದು ಬಿಡಿ, ಹಾಗೆ ಊಹಿಸಲೂ ಸಾಧ್ಯವೇ? ಹೈದರಾಬಾದಿಗೆ ಬಂದರೆ ಇದು ಸಾಧ್ಯ!

ಅಭಿಶೇಕ್ ನಾಥ್ `ಇಕ್ಸೊರಾ ಎಫ್‍ಎಮ್’ ಎಂಬ ಒಂದು ಸ್ಟಾರ್ಟ್ ಅಪ್ ಸಂಸ್ಥೆಯ ಸ್ಥಾಪಕರು. ಎರಡು ದಶಕಗಳ ಕಾಲ ಹೊಟೇಲ್ ಮತ್ತು ಮಾಲುಗಳ ಮೇಲ್ವಿಚಾರಣೆ ಮಾಡಿದ ಅನುಭವವಿರುವ ಅಭಿಶೇಕ್ ನಾಥ್ ಸಾರ್ವಜನಿಕ ಶೌಚಾಲಯಗಳ ಪರಿಸ್ಥಿತಿಯನ್ನು ಚೆನ್ನಾಗಿ ಬಲ್ಲವರು. ಸರ್ಕಾರಗಳು ಹಣ ವ್ಯಯಿಸಿ ಅಲ್ಲಲ್ಲಿ ಸಾರ್ವಜನಿಕರಿಗಾಗಿ ಶೌಚಾಲಯಗಳನ್ನು ಕಟ್ಟಿಸಿದರೂ ಅವುಗಳ ಮೇಲ್ವಿಚಾರಣೆಗೆ ಯಾವ ಮಹತ್ವವನ್ನೂ ಕೊಡುವುದಿಲ್ಲ. ಹಾಗೆಯೇ, ಕೆಲವು ಖಾಸಗೀ ಅಥವಾ ಸಾಮಾಜಿಕ ಸಂಸ್ಥೆಗಳು ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸಿದರೂ ಅವುಗಳಿಗೆ ವಿನಯೋಗಿಸಿದ ಬಂಡವಾಳವನ್ನು ವಾಪಾಸು ಪಡೆಯಲು ವಿಫಲವಾಗಿ, ಅವುಗಳ ಸ್ವಚ್ಚತೆ ಅಷ್ಟೇನೂ ಸಮರ್ಪಕವಾಗಿರುವುದಿಲ್ಲ. ಈ ವಾಸ್ತವವನ್ನು ಅರಿತಿರುವ ಅಭಿಶೇಕ್ ನಾಥ್‍ರು ಸುರೇಶ್ ಮೆನೆನ್‍ರಂತೆಯೇ ನಿರುಪಯೋಗಿ ಶಿಪ್ಪಿಂಗ್ ಕಂಟೈನರ್‍ಗಳನ್ನು ಬಳಸಿ, ಹೈದರಾಬಾದಿಗರಿಗೆ ಮನೆಯ ಶೌಚಾಲಯಗಳನ್ನೂ ನಾಚಿಸುವಂತಹ ವಿನೂತನ ಮಾದರಿಯ ನೂರಾರು ಉಚಿತ ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸಿಕೊಟ್ಟಿದ್ದಾರೆ.

ಈ ವಿನೂತನ ಶೌಚಾಲಯಗಳ ಹೆಸರು `ಲೂ ಕಫೆ’. ಈ ಶೌಚಾಯಗಳಲ್ಲಿ ಹೆಂಗಸರು ಮತ್ತು ಗಂಡಸರಿಗೆ ಪ್ರತ್ಯೇಕ ವಿಭಾಗಗಳಿವೆ. ಅಂಗವಿಕಲ ವ್ಯಕ್ತಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಿಸಲಾಗಿದೆ. ಸುತ್ತಲೂ ಸುವಾಸನೆ ಬಿರುವ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಈ ಶೌಚಾಲಯಗಳಲ್ಲಿ ಅತ್ಯಾಧುನಿಕ ಹೈ-ಟೆಕ್ ತಾಂತ್ರಿಕತೆಗಳನ್ನು ಅಳವಡಿಸಲಾಗಿದ್ದು, 24 ಗಂಟೆ ಒಂದು ತಂಡ ಕಂಟ್ರೋಲ್ ರೂಮಿನಲ್ಲಿ ಕುಳಿತು, ಸೆನ್ಸರ್‍ಗಳ ಸಹಾಯದಿಂದ ಶೌಚಾಲಯಗಳ ಸ್ವಚ್ಚತೆಯನ್ನು ನೋಡಿಕೊಳ್ಳುತ್ತದೆ. ಎಷ್ಟು ಉನ್ನತ ಮಟ್ಟದ ಸ್ವಚ್ಚತೆಯೆಂದರೆ, ಶೌಚಾಲಯಕ್ಕೆ ತಾಗಿಕೊಂಡು ಒಂದು ಕೆಫೆಯಲ್ಲಿ ಜನ ತಮಗಿಷ್ಟದ ಆಹಾರವಸ್ತುಗಳನ್ನು ಖರಿದೀಸಿ, ಅಲ್ಲಿಯೇ ಕುಳಿತು ತಿನ್ನಬಹುದು. ಈ ಕೆಫೆಯಿಂದ ಬಂದ ಲಾಭಾಂಶದಿಂದಲೇ ಶೌಚಾಲಯದ ನಿರ್ವಹಣಾ ವೆಚ್ಚವನ್ನು ನಿಭಾಯಿಸಲಾಗುತ್ತದೆ.

ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಹೈದರಾಬಾದ್ ನಗರದಲ್ಲಿ 200ಕ್ಕೂ ಹೆಚ್ಚು `ಲೂ ಕೆಫೆ’ಗಳನ್ನು ನಿರ್ಮಿಸಲಾಗಿದೆ. `ಗ್ರೇಟರ್ ಹೈದರಾಬಾದ್ ಮುನಿಸಿಪಾಲ್ ಕಾರ್ಪೋರೇಷನ್’ ಸ್ಥಳಾವಕಾಶವನ್ನು ಕೊಟ್ಟು ಎಕ್ಸೊರಾ ಎಫ್ ಎಮ್ ತನ್ನ ಖರ್ಚಿನಲ್ಲಿ ಶೌಚಾಲಯಗಳನ್ನು ಕಟ್ಟುತ್ತದೆ. ಮುಂದಿನ ದಿನಗಳಲ್ಲಿ ಮಳೆ ನೀರಿನ ಕೊಯ್ಲು, ಮಲಮೂತ್ರಗಳನ್ನು ಪರಿಷ್ಕರಿಸಲು ಬಯೋ-ಡೈಜೆಸ್ಟರ್, ವಿದ್ಯುತ್ಚಕ್ತಿಗೆ ಸೋಲಾರ್ ಮೊದಲಾದವುಗಳನ್ನು ಅಳವಡಿಸುವ ಯೋಜನೆಗಳು ರೂಪುಗೊಳ್ಳುತ್ತಿದೆ ಎಂದು ಅಭಿಶೇಕ್ ನಾಥ್ ಹೇಳುತ್ತಾರೆ.

andolanait

Recent Posts

ನಾಳೆಯಿಂದ ಐಪಿಎಲ್‌ ಶುರು : ಅಧಿಕಾರಿಗಳ ಜತೆ ಸಿಎಸ್‌ ಸುದೀರ್ಘ ಸಭೆ

ಬೆಂಗಳೂರು : ನಾಳೆಯಿಂದ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ…

9 hours ago

ಮದ್ದೂರು ಬಳಿ ಭೀಕರ ಅಪಘಾತ : 14 ಶಾಲಾ ಮಕ್ಕಳು ಸೇರಿದಂತೆ 20 ಮಂದಿಗೆ ಗಾಯ

ಮದ್ದೂರು : ಖಾಸಗಿ ಶಾಲೆ ಬಸ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ, 14 ವಿದ್ಯಾರ್ಥಿಗಳ ಜತೆಗೆ 6…

10 hours ago

ಮಹದೇಶ್ವರ ಬೆಟ್ಟ | 23 ದಿನದಲ್ಲಿ 2 ಕೋಟಿ ಒಡೆಯನಾದ ಮಾದಪ್ಪ

ಹನೂರು : ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ…

10 hours ago

ಜನಪರ ಆಡಳಿತ ನೀಡುವಲ್ಲಿ ಸರ್ಕಾರ ವಿಫಲ : ನಿಖಿಲ್‌ ಕಿಡಿ

ಎಚ್.ಡಿ.ಕೋಟೆ : ರಾಜ್ಯದಲ್ಲಿ ಜಾತ್ಯತೀತ ಜನತಾದಳ-ಬಿಜೆಪಿಯ ಮೈತ್ರಿಯ ಸರ್ಕಾರ ಅಧಿಕಾರಕ್ಕೆ ಬಂದು ಜನಪರ ಆಡಳಿತ ನೀಡುವ ದಿನಗಳು ಹತ್ತಿರವಾಗುತ್ತಿವೆ ಎಂದು…

10 hours ago

ದಾವಣಗೆರೆ ದಕ್ಷಿಣ ಉಪಚುನಾವಣೆ : ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್‌

ಬೆಂಗಳೂರು : ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ತಾವು ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.…

10 hours ago

SSLC | ಪರೀಕ್ಷೆ ಅಂಕ 625ರ ಬದಲಿಗೆ 525ಕ್ಕೆ ಇಳಿಕೆ ; ಲೆಕ್ಕಕ್ಕಿಲ್ಲ ತೃತೀಯ ಭಾಷೆ

ಬೆಂಗಳೂರು : ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಆಮೂಲಾಗ್ರ…

11 hours ago