– ಪಂಜುಗಂಗೊಳ್ಳಿ
ಕಾಂಗ್ರೆಸಿನ ನಿರ್ಮಲ ಭಾರತ ಯೋಜನೆ ಇರಲಿ, ಬಿಜೆಪಿಯ ಸ್ವಚ್ಚ ಭಾರತ ಆಂದೋಲನ ಬರಲಿ ಇಂದಿಗೂ ಆನೇಕ ಗ್ರಾಮೀಣ ಪ್ರದೇಶಗಳಲ್ಲಿ ಹೆಂಗಸರು ಶೌಚಕ್ಕೆ ಹೋಗುವುದು ಒಂದು ಯಾತನಾಮಯ ದಿನಚರಿ. ಅದಕ್ಕಾಗಿ ಅವರು ಜನವಸತಿಯಿಂದ ದೂರವಿರುವ ಬಯಲು ಪ್ರದೇಶ, ಅರಣ್ಯ, ಗುಡ್ಡಬೆಟ್ಟಗಳ ಮರೆಗೆ ಹೋಗುವುದೋ, ಕತ್ತಲಾಗುವುದನ್ನು ಕಾಯುವುದೋ ಅಥವಾ ನಸುಕಿನಲ್ಲಿ ಇತರರು ಏಳುವ ಮೊದಲೇ ಶೌಚವನ್ನು ಮುಗಿಸುವುದೋ ಮಾಡಬೆಕಾಗುತ್ತದೆ. ಮಳೆಗಾಲದಲ್ಲಂತೂ ಮಹಿಳೆಯರಿಗೆ ಶೌಚದ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತದೆ. ಎಷ್ಟೋ ಜನ ಹೆಂಗಸರು ವಿಸರ್ಜನೆಗೆ ಸೂಕ್ತ ಸ್ಥಳವಿಲ್ಲದೆ ಹಗಲಿಡೀ ಮಲಮೂತ್ರಗಳನ್ನು ಕಟ್ಟಿಕೊಂಡು ಏನೇನೋ ಸಮಸ್ಯೆಗಳಿಗೆ ಒಳಗಾಗುವುದೂ ಇದೆ.
ತಮಿಳುನಾಡಿನ ಕುಂಭಕೋಣಂ ಹತ್ತಿರದ ಮಂಜಕ್ಕುಡಿ ಎಂಬ ಹಳ್ಳಿಯ 400 ಕುಟುಂಬಗಳ ಹೆಂಗಸರ ಪರಿಸ್ಥಿತಿಯೂ ಹೀಗೇ ಇತ್ತು. ಕೃಷಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಹಳ್ಳಿಯ ಯಾವ ಮನೆಯಲ್ಲೂ ಶೌಚಾಲಯವಾಗಲೀ, ಬಚ್ಚಲು ಮನೆಯಾಗಲೀ ಇರಲಿಲ್ಲ. ಹೆಣ್ಣುಮಕ್ಕಳು ಸ್ನಾನವಿಲ್ಲದೆ ಬೆವರು ವಾಸನೆ ಸೂಸುತ್ತ ಶಾಲೆಗಳಿಗೆ ಹೋಗಬೇಕಿತ್ತು. ಇವರಿಗೆ ಆಪತ್ಬಾಂಧವರಾಗಿ ಬಂದವರೇ ವೃತ್ತಿಯಲ್ಲಿ ಸಿನಿಮಾ ತಯಾರಕರು, ನಟರು ಆಗಿರುವ ಸುರೇಶ್ ಮೆನನ್ ಎಂಬುವವರು.
ಟಿವಿಎಸ್ ಕಂಪೆನಿ ನಡೆಡುವ `ಸ್ವಾಮಿ ದಯಾನಂದ ಸರಸ್ವತಿ ಎಜುಕೇಷನ್ ಟ್ರಸ್ಟ್’ನ ಎಂಡಿ ಆಗಿದ್ದ ಶೀಲಾ ಬಾಲಾಜಿ ಎಂಬುವವರಿಂದ ಕುಂಭಕೋಣಂನ ಹೆಂಗಸರ ಸಮಸ್ಯೆ ತಿಳಿದ ಸುರೇಶ್ ಮೆನನ್ ಕಡಿಮೆ ದರದಲ್ಲಿ 5 ಅಡಿ ಅಗಲ 20 ಅಡಿ ಉದ್ದದ ಕೆಲವು ನಿರುಪಯೋಗಿ ಕಂಟೈನರ್ಗಳನ್ನು ಖರೀದಿಸಿ, ಪ್ರತಿಯೊಂದರಲ್ಲಿ 8 ಅಡಿ ಉದ್ದ 4 ಅಡಿ ಅಗಲದ ಕೋಣೆಗಳನ್ನು ರೂಪಿಸಿದರು. ಪ್ರತಿಯೊಂದು ಶೌಚಾಲಯದಲ್ಲಿ ಓವರ್ ಹೆಡ್ ನೀರಿನ ಟ್ಯಾಂಕ್, ಭಾರತೀಯ ಅಥವಾ ಪಾಶ್ಚಿಮಾತ್ಯ ಶೈಲಿಯ ಕಮೋಡ್, ಸಿಂಕ್, ಬೇಸಿನ್, ಕನ್ನಡಿ, ಎಕ್ಸಾಸ್ಟ್ ಫ್ಯಾನ್ ಹಾಗೂ ಶವರ್ ಯೂನಿಟ್ ಇವೆ. ಶೌಚಾಲಯಗಳ ಮಲಮೂತ್ರ ಪೈಪ್ ಮೂಲಕ ತುಸು ದೂರದಲ್ಲಿ ತೋಡಿದ ಸೆಪ್ಟಿಕ್ ಟ್ಯಾಂಕಲ್ಲಿ ಶೇಖರಗೊಳ್ಳುತ್ತದೆ. ಪ್ರತಿದಿನ ಇವುಗಳನ್ನು ಸ್ವಚ್ಚಗೊಳಿಸಲು ಒಬ್ಬ ವ್ಯಕ್ತಿಯನ್ನು ನೇಮಿಸಲಾಗಿದೆ. ವಿದ್ಯುತ್ ಸಂಪರ್ಕಕ್ಕೆ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದೆ. ಈ ಕಂಟೈನರ್ ಶೌಚಲಯಗಳ ಡಿಸೈನ್ ಬಹಳ ಸರಳವಾದುದು. ಏನಾದರೂ ಹಾಳಾದರೆ ಸಾಮಾನ್ಯ ಪ್ಲಂಬರ್ ಕೂಡಾ ಇವುಗಳನ್ನು ದುರಸ್ತಿ ಮಾಡಬಹುದು. ಪ್ರಧಾನಿ ನರೇಂದ್ರ `ಮೋದಿ ಸ್ವಚ್ಚ ಭಾರತ್ ಅಭಿಯಾನ್’ ಶುರು ಮಾಡುವ ಹಲವು ವರ್ಷಗಳ ಹಿಂದೆಯೇ ಸುರೇಶ್ ಮೆನನ್ ಈ ಕಂಟೈನರ್ ಶೌಚಾಲಯ ಯೋಜನೆಯನ್ನು ಶುರು ಮಾಡಿದ್ದು, ಈಗಲೂ ಆ ಯೋಜನೆಯನ್ನು ಮುಂದುವರಿಸಿದ್ದಾರೆ.
ಕಂಟೈನರ್ ಶೌಚಾಲಯಗಳಿಂದಾಗಿ ಮಂಜಕ್ಕುಡಿಯ ಹೆಂಗಸರು ದಿನ, ರಾತ್ರಿ ಯಾವಾಗ ಬೇಕಾದರೂ ನಿರಾಳವಾಗಿ ಶೌಚಕ್ಕೆ ಹೋಗುತ್ತಾರೆ. ಹೆಣ್ಣುಮಕ್ಕಳು ದಿನಾ ಸ್ನಾನ ಮಾಡಿ ಉಲ್ಲಾಸದಿಂದ ಶಾಲೆಗೆ ಹೋಗುತ್ತಾರೆ. ಇದನ್ನು ಸಾಧ್ಯವಾಗಿಸಿದ ಆಪತ್ಬಾಂಧವ ಸುರೇಶ್ ಮೆನನ್ರನ್ನು ಅವರು ದಿನಾ ಸ್ಮರಿಸುತ್ತಾರೆ.
ನಗರಗಳಲ್ಲಿ ಅಲ್ಲಲ್ಲಿ ಸರಕಾರ ನಿರ್ಮಿತ ಸಾರ್ವಜನಿಕ ಶೌಚಾಲಯಗಳು ಇವೆಯಾದರೂ ಸ್ವಚ್ಚತೆಯ ಕೊರತೆಯಿಂದಾಗಿ ಅವುಗಳ ಬಳಿ ಹೋದಾಗ ಮೂಗು, ಕೆಲವೆಡೆ ಕಣ್ಣು ಕೂಡಾ ಮುಚ್ಚಿ ಕೊಳ್ಳಬೇಕಾಗಿ ಬರುವ ಪರಸ್ಥಿತಿ ಸಾಮಾನ್ಯ. ಆದರೂ, ಎಷ್ಟೇ ಬಿಗಿಯಾಗಿ ಮೂಗು ಮುಚ್ಚಿಕೊಂಡರೂ ಶೌಚಾಲಯಯಗಳ ಅಸಾಧ್ಯ ಅಮೋನಿಯಾ ವಾಸನೆ ಒಳ ಹೋಗುವುದನ್ನು ತಪ್ಪಿಸಲಾಗದು. ಇಂತಹ ಪರಿಸ್ಥಿತಿಯಲ್ಲಿ, ಒಂದು ಸಾರ್ವಜನಿಕ ಶೌಚಾಲಯದ ಬಳಿ ನಿಂತು ಸ್ಯಾಂಡ್ವಿಚ್ಚೋ, ಬರ್ಗರೋ ಅಥವಾ ನಿಮ್ಮ ನೆಚ್ಚಿನ ಇನ್ಯಾವುದಾದರೂ ತಿಂಡಿ ತಿನ್ನುವುದು ಬಿಡಿ, ಹಾಗೆ ಊಹಿಸಲೂ ಸಾಧ್ಯವೇ? ಹೈದರಾಬಾದಿಗೆ ಬಂದರೆ ಇದು ಸಾಧ್ಯ!
ಅಭಿಶೇಕ್ ನಾಥ್ `ಇಕ್ಸೊರಾ ಎಫ್ಎಮ್’ ಎಂಬ ಒಂದು ಸ್ಟಾರ್ಟ್ ಅಪ್ ಸಂಸ್ಥೆಯ ಸ್ಥಾಪಕರು. ಎರಡು ದಶಕಗಳ ಕಾಲ ಹೊಟೇಲ್ ಮತ್ತು ಮಾಲುಗಳ ಮೇಲ್ವಿಚಾರಣೆ ಮಾಡಿದ ಅನುಭವವಿರುವ ಅಭಿಶೇಕ್ ನಾಥ್ ಸಾರ್ವಜನಿಕ ಶೌಚಾಲಯಗಳ ಪರಿಸ್ಥಿತಿಯನ್ನು ಚೆನ್ನಾಗಿ ಬಲ್ಲವರು. ಸರ್ಕಾರಗಳು ಹಣ ವ್ಯಯಿಸಿ ಅಲ್ಲಲ್ಲಿ ಸಾರ್ವಜನಿಕರಿಗಾಗಿ ಶೌಚಾಲಯಗಳನ್ನು ಕಟ್ಟಿಸಿದರೂ ಅವುಗಳ ಮೇಲ್ವಿಚಾರಣೆಗೆ ಯಾವ ಮಹತ್ವವನ್ನೂ ಕೊಡುವುದಿಲ್ಲ. ಹಾಗೆಯೇ, ಕೆಲವು ಖಾಸಗೀ ಅಥವಾ ಸಾಮಾಜಿಕ ಸಂಸ್ಥೆಗಳು ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸಿದರೂ ಅವುಗಳಿಗೆ ವಿನಯೋಗಿಸಿದ ಬಂಡವಾಳವನ್ನು ವಾಪಾಸು ಪಡೆಯಲು ವಿಫಲವಾಗಿ, ಅವುಗಳ ಸ್ವಚ್ಚತೆ ಅಷ್ಟೇನೂ ಸಮರ್ಪಕವಾಗಿರುವುದಿಲ್ಲ. ಈ ವಾಸ್ತವವನ್ನು ಅರಿತಿರುವ ಅಭಿಶೇಕ್ ನಾಥ್ರು ಸುರೇಶ್ ಮೆನೆನ್ರಂತೆಯೇ ನಿರುಪಯೋಗಿ ಶಿಪ್ಪಿಂಗ್ ಕಂಟೈನರ್ಗಳನ್ನು ಬಳಸಿ, ಹೈದರಾಬಾದಿಗರಿಗೆ ಮನೆಯ ಶೌಚಾಲಯಗಳನ್ನೂ ನಾಚಿಸುವಂತಹ ವಿನೂತನ ಮಾದರಿಯ ನೂರಾರು ಉಚಿತ ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸಿಕೊಟ್ಟಿದ್ದಾರೆ.
ಈ ವಿನೂತನ ಶೌಚಾಲಯಗಳ ಹೆಸರು `ಲೂ ಕಫೆ’. ಈ ಶೌಚಾಯಗಳಲ್ಲಿ ಹೆಂಗಸರು ಮತ್ತು ಗಂಡಸರಿಗೆ ಪ್ರತ್ಯೇಕ ವಿಭಾಗಗಳಿವೆ. ಅಂಗವಿಕಲ ವ್ಯಕ್ತಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಿಸಲಾಗಿದೆ. ಸುತ್ತಲೂ ಸುವಾಸನೆ ಬಿರುವ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಈ ಶೌಚಾಲಯಗಳಲ್ಲಿ ಅತ್ಯಾಧುನಿಕ ಹೈ-ಟೆಕ್ ತಾಂತ್ರಿಕತೆಗಳನ್ನು ಅಳವಡಿಸಲಾಗಿದ್ದು, 24 ಗಂಟೆ ಒಂದು ತಂಡ ಕಂಟ್ರೋಲ್ ರೂಮಿನಲ್ಲಿ ಕುಳಿತು, ಸೆನ್ಸರ್ಗಳ ಸಹಾಯದಿಂದ ಶೌಚಾಲಯಗಳ ಸ್ವಚ್ಚತೆಯನ್ನು ನೋಡಿಕೊಳ್ಳುತ್ತದೆ. ಎಷ್ಟು ಉನ್ನತ ಮಟ್ಟದ ಸ್ವಚ್ಚತೆಯೆಂದರೆ, ಶೌಚಾಲಯಕ್ಕೆ ತಾಗಿಕೊಂಡು ಒಂದು ಕೆಫೆಯಲ್ಲಿ ಜನ ತಮಗಿಷ್ಟದ ಆಹಾರವಸ್ತುಗಳನ್ನು ಖರಿದೀಸಿ, ಅಲ್ಲಿಯೇ ಕುಳಿತು ತಿನ್ನಬಹುದು. ಈ ಕೆಫೆಯಿಂದ ಬಂದ ಲಾಭಾಂಶದಿಂದಲೇ ಶೌಚಾಲಯದ ನಿರ್ವಹಣಾ ವೆಚ್ಚವನ್ನು ನಿಭಾಯಿಸಲಾಗುತ್ತದೆ.
ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಹೈದರಾಬಾದ್ ನಗರದಲ್ಲಿ 200ಕ್ಕೂ ಹೆಚ್ಚು `ಲೂ ಕೆಫೆ’ಗಳನ್ನು ನಿರ್ಮಿಸಲಾಗಿದೆ. `ಗ್ರೇಟರ್ ಹೈದರಾಬಾದ್ ಮುನಿಸಿಪಾಲ್ ಕಾರ್ಪೋರೇಷನ್’ ಸ್ಥಳಾವಕಾಶವನ್ನು ಕೊಟ್ಟು ಎಕ್ಸೊರಾ ಎಫ್ ಎಮ್ ತನ್ನ ಖರ್ಚಿನಲ್ಲಿ ಶೌಚಾಲಯಗಳನ್ನು ಕಟ್ಟುತ್ತದೆ. ಮುಂದಿನ ದಿನಗಳಲ್ಲಿ ಮಳೆ ನೀರಿನ ಕೊಯ್ಲು, ಮಲಮೂತ್ರಗಳನ್ನು ಪರಿಷ್ಕರಿಸಲು ಬಯೋ-ಡೈಜೆಸ್ಟರ್, ವಿದ್ಯುತ್ಚಕ್ತಿಗೆ ಸೋಲಾರ್ ಮೊದಲಾದವುಗಳನ್ನು ಅಳವಡಿಸುವ ಯೋಜನೆಗಳು ರೂಪುಗೊಳ್ಳುತ್ತಿದೆ ಎಂದು ಅಭಿಶೇಕ್ ನಾಥ್ ಹೇಳುತ್ತಾರೆ.
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…