ಎಡಿಟೋರಿಯಲ್

ಬಡತನ, ಜಾತಿಗೆ ಸಡ್ಡು ಹೊಡೆದು ಡಾಕ್ಟರಾಗುತ್ತಿರುವ ಸಾಂಗವಿ ಎಂಬ ಧೀರೆ

ತಮಿಳುನಾಡಿನ ಕೊಯಂಬತೂರು ಜಿಲ್ಲೆಯ ನಂಜಪ್ಪನೂರು ಎಂಬುದು ೪೦ ಕುಟುಂಬಗಳ ಒಂದು ಕುಗ್ರಾಮ. ಆ ಹಳ್ಳಿಯ ಮಲಾಸರ್ ಎಂಬ ಒಂದು ಚಿಕ್ಕ ಬುಡಕಟ್ಟು ಸಮುದಾಯಕ್ಕೆ ಸೇರಿದ ಸಾಂಗವಿ ಮುನಿಯಪ್ಪನ್ ಚಿಕ್ಕಂದಿನಿಂದಲೂ ತಾನೊಬ್ಬಳು ಡಾಕ್ಟರಾಗಬೇಕೆಂದು ಕನಸು ಕಾಣುತ್ತಿದ್ದಳು. ಅವಳ ಸುತ್ತಮುತ್ತಲ ಅವಳ ಸಮುದಾಯದ ಜನ ಕಾಯಿಲೆ ಬಿದ್ದು, ಸೂಕ್ತ ವೈದ್ಯಕೀಯ ಆರೈಕೆ ಇಲ್ಲದೆ ನರಳುವಾಗ, ಸಾಯುವಾಗ ತಾನೊಬ್ಬಳು ಡಾಕ್ಟರಾಗಿದ್ದರೆ ಅವರಿಗೆಲ್ಲ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದೆ ಎಂದು ಅಂದುಕೊಳ್ಳುತ್ತಿದ್ದಳು. ಆದರೆ, ಅವಳ ಕನಸು ಎಷ್ಟು ಅವಾಸ್ತವಿಕವಾದುದೆಂಬುದು ಎಲ್ಲರಿಗಿಂತ ಅವಳಿಗೇ ಹೆಚ್ಚು ತಿಳಿದಿತ್ತು. ಅವಳ ಊರಿಗೆ ಒಂದು ಸರಿಯಾದ ರಸ್ತೆಯಾಗಲೀ, ದಾರಿದೀಪಗಳಾಗಲೀ, ಕುಡಿಯುವ ನೀರಿನ ವ್ಯವಸ್ಥೆಯಾಗಲೀ ಇಲ್ಲ. ಅವಳ ಸಮುದಾಯದ ಇತರ ಎಷ್ಟೋ ಕುಟುಂಬಗಳಂತೆ ಅವಳ ಮನೆಗೂ ವಿದ್ಯುತ್ ಸಂಪರ್ಕವಿಲ್ಲ. ಅವಳ ಸಮುದಾಯದಲ್ಲಿ ೧೨ನೇ ತರಗತಿ ಪಾಸು ಮಾಡಿದವರಲ್ಲಿ ಅವಳೇ ಪ್ರಪ್ರಥಮಳು. ಆಕೆಯ ಸಮುದಾಯದ ಬಡತನ ಎಂತಹದೆಂದರೆ, ಶಾಲಾ ವಯಸ್ಸಿನ ಮಕ್ಕಳು ಕೂಡ ತಮ್ಮ ಹೆತ್ತವರೊಂದಿಗೆ ಕೂಲಿ ಕೆಲಸಕ್ಕೆ ಹೋಗುವಷ್ಟು.

ಸಾಂಗವಿಯ ತಂದೆ ಮುನಿಯಪ್ಪನ್ ಕೂಡ ಒಬ್ಬ ದಿನಗೂಲಿ ಕಾರ್ಮಿಕ. ಅವನೊಬ್ಬನ ಪುಡಿ ಸಂಪಾದನೆಯಲ್ಲಿಯೇ ಅವಳ ಕುಟುಂಬದ ಹೊಟ್ಟೆಪಾಡು ನಡೆಯಬೇಕು. ತಾಯಿ ವಸಂತಮಣಿಗೆ ಕಣ್ಣು ದೃಷ್ಟಿಯ ಸಮಸ್ಯೆ. ಅಂತಹ ಸನ್ನಿವೇಶದಲ್ಲೂ ಮುನಿಯಪ್ಪನ್ ತನ್ನ ಮಗಳ ಶಿಕ್ಷಣಕ್ಕೆ ಏನೂ ತಡೆಯಾಗದಂತೆ ನೋಡಿಕೊಂಡಿದ್ದನು. ಆದರೆ, ೨೦೨೦ರಲ್ಲಿ ಆತ ಹೃದಯ ಸ್ತಂಭನವಾಗಿ ತೀರಿಕೊಂಡಾಗ ಅವಳ ಕುಟುಂಬ ಅಕ್ಷರಶಃ ಅನಾಥವಾಯಿತು. ಸಾಲದ್ದಕ್ಕೆ, ಆತ ತೀರಿಕೊಂಡ ಕೆಲವೇ ವಾರಗಳಲ್ಲಿ ಕೋವಿಡ್ ಲಾಕ್‌ಡೌನ್ ಹೇರಲ್ಪಟ್ಟು, ಕುಟುಂಬದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ತಮಿಳುನಾಡು ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರತಿ ತಿಂಗಳು ಕೊಡುವ ೧,೦೦೦ ರೂ.ಗಳಲ್ಲಿ ಅವಳ ಕುಟುಂಬ ಬದುಕು ನಡೆಸಬೇಕಾಯಿತು. ಆಗ ಅವಳ ಕುಟುಂಬಕ್ಕೆ ಆಪದ್ಭಾಂಧವರಾಗಿ ಬಂದವರೇ ಶಿವಾ ಎಂಬ ಒಬ್ಬ ಸಾಮಾಜಿಕ ಕಾರ್ಯಕರ್ತರು.

ಸಾಂಗವಿ ಹನ್ನೆರಡನೇ ತರಗತಿ ಪರೀಕ್ಷೆಯಲ್ಲಿ ೧೨೦೦ ಮಾರ್ಕುಗಳಲ್ಲಿ ೮೭೫ ಮಾರ್ಕುಗಳನ್ನು ಪಡೆದು ತಾನು ಕಲಿಯುತ್ತಿದ್ದ ಸರ್ಕಾರಿ ಶಾಲೆಯಲ್ಲಿ ಅತ್ಯಧಿಕ ಮಾರ್ಕು ಪಡೆದ ಷೆಡ್ಯೂಲ್ಡ್ ಟ್ರೈಬ್ ವಿದ್ಯಾರ್ಥಿನಿ ಅನಿಸಿಕೊಂಡಿದ್ದಳು. ಅವಳು ೨೦೧೮ರಲ್ಲಿ ನೀಟ್ ಪರೀಕ್ಷೆ ಬರೆದಿದ್ದಳಾದರೂ ಕೆಲವೇ ಮಾರ್ಕುಗಳ ಅಂತರದಿಂದಾಗಿ ಕಟ್ ಆಫ್ ಹಂತವನ್ನು ದಾಟಲಾಗಲಿಲ್ಲ. ಆಗ ಅವಳಿಗೆ ಒಂದು ದೊಡ್ಡ ತೊಡಕು ಎದುರಾಗಿತ್ತು. ಆಕೆಯ ಮಲಾಸರ್ ಜಾತಿ ಶೆಡ್ಯೂಲ್ಡ್ ಟ್ರ್ತ್ಯೈಬ್ ಎಂದು ಪರಿಗಣಿಸಲ್ಪಟ್ಟಿದ್ದರೂ, ಆಕೆಯ ತಂದೆ ತಾಯಿ ಇಬ್ಬರ ಬಳಿಯೂ ತಾವು ಮಲಾಸರ್ ಜಾತಿಗೆ ಸೇರಿದವರೆಂದು ರುಜುವಾತುಪಡಿಸಲು ಜಾತಿ ಪ್ರಮಾಣಪತ್ರ ಇರಲಿಲ್ಲ. ಆ ಜಾತಿ ಪ್ರಮಾಣಪತ್ರ ಪಡೆಯಲು ಸಾಂಗವಿ ಎರಡು ವರ್ಷಗಳ ಕಾಲ ಹೋರಾಟ ನಡೆಸಿದರೂ ಸಫಲಳಾಗಿರಲಿಲ್ಲ. ಆಗ ಶಿವಾ ಮುಂದೆ ಬಂದು ಸಹಾಯ ಮಾಡಿದ ಕಾರಣ, ಸ್ವತಃ ಜಿಲ್ಲಾಽಕಾರಿಯೇ ಮಧ್ಯಪ್ರವೇಶಿಸಿ ಆಕೆಗೆ ಜಾತಿ ಪ್ರಮಾಣಪತ್ರ ಕೊಡಿಸಿದರು

ಸಾಂಗವಿಯ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡ ಶಿವಾ, ಅವಳನ್ನು ತಮ್ಮದೇ ಖರ್ಚಿನಲ್ಲಿ ಒಂದು ನೀಟ್ ಕೋಚಿಂಗ್ ಕ್ಲಾಸಿಗೆ ಸೇರಿಸಿದರು. ಕೋಚಿಂಗ್ ಕ್ಲಾಸು ಅವಳ ಹಳ್ಳಿಯಿಂದ 55 ಕಿಮೀ ದೂರದ ಶರವಣಂಪಟ್ಟಿಯಲ್ಲಿದ್ದ ಕಾರಣ ಅಲ್ಲಿಯೇ ಅವಳ ವಸತಿಗೂ ವ್ಯವಸ್ಥೆ ಮಾಡಿಕೊಟ್ಟರು. ಆದರೆ, ಕೋವಿಡ್ ಲಾಕ್‌ಡೌನ್ ಕಾರಣ ಮನೆಗೆ ವಾಪಸಾಗಬೇಕಾಯಿತು. ಮನೆಯಲ್ಲಿ ಅಭ್ಯಾಸ ಮಾಡಲು ವಿದ್ಯುತ್ ಬೆಳಕಿಲ್ಲ. ಅಷ್ಟೇ ಅಲ್ಲ, ಆಕೆಯ ಬಳಿ ಸರಿಯಾದ ಒಂದು ಮೊಬೈಲ್ ಫೋನ್ ಕೂಡ ಇಲ್ಲ. ಈ ಮಧ್ಯೆ, ಶಿವಾ ಒಬ್ಬ ತಜ್ಞ ವೈದ್ಯರನ್ನು ಕಂಡು, ವಸಂತಮಣಿಗೆ ಹಲವು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ ಪರಿಣಾಮವಾಗಿ, ಆಕೆಯ ಕಣ್ಣು ದೃಷ್ಟಿ ಬಹಳಷ್ಟು ಸುಧಾರಿಸಿತು. ತಾಯಿಯ ಕಣ್ಣು ದೃಷ್ಟಿ ಸುಧಾರಿಸಿದ ಸಂತೋಷ ವೈದ್ಯಳಾಗಬೇಕು ಎನ್ನುವ ಅವಳ ಚಲಕ್ಕೆ ಮತ್ತಷ್ಟು ಸ್ಛೂರ್ತಿ ನೀಡಿತು. ಪರೀಕ್ಷೆಗೆ ಒಂದೆರಡು ತಿಂಗಳಿರುವಾಗ ಕೋಚಿಂಗ್ ಕ್ಲಾಸಿಗೆ ಬಂದು ಕಲಿತು, ನೀಟ್ ಪರೀಕ್ಷೆ ಬರೆದಳು. ಈ ಬಾರಿ ಅವಳು 720 ಮಾರ್ಕುಗಳಲ್ಲಿ 202 ಮಾರ್ಕುಗಳನ್ನು ಗಳಿಸಿ, ಶೆಡ್ಯೂಲ್ಡ್ ಟ್ರೈಬ್ ಕೋಟಾದಡಿ ತನ್ನ ಆಯ್ಕೆಯ ಕಾಲೇಜಿನಲ್ಲಿ ಸೀಟು ಪಡೆದಳು.

ತಾಯಿಯ ಅನಾರೋಗ್ಯ, ತಂದೆಯ ಮರಣ, ಕಿತ್ತು ತಿನ್ನು ಬಡತನ ಇವೆಲ್ಲವನ್ನೂ ಮೀರಿ ಸಾಂಗವಿ ನಡೆಸಿದ ಸಾಧನೆ ಅವಳ ಸಮುದಾಯದಲ್ಲಿ ಒಂದು ಚಾರಿತ್ರಿಕ ಘಟನೆಯಾದುದರಲ್ಲಿ ವಿಶೇಷವೇನೂ ಇಲ್ಲ. ಸಾಂಗವಿಯಿಂದ ಸೂರ್ತಿ ಪಡೆದ ಮಲಾಸರ್ ಜಾತಿಯ ಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಈಗ ಶಾಲೆಗೆ ಹೋಗುತ್ತಿದ್ದಾರೆ; ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ ಮಕ್ಕಳು ಶಾಲೆಗೆ ಪುನರ್ ಸೇರ್ಪಡೆಗೊಂಡಿವೆ.

andolanait

Recent Posts

ಅಕ್ರಮ ಗಾಂಜಾ ಮಾರಾಟ: ಮಹಿಳೆ ಬಂಧನ

ಹನೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು…

2 mins ago

ಓದುಗರ ಪತ್ರ:  ಸಾಮಾಜಿಕ ಬಹಿಷ್ಕಾರಕ್ಕೆ ಜೈಲು ಶಿಕ್ಷೆ ಸ್ವಾಗತಾರ್ಹ

ಸಾಮಾಜಿಕ ಬಹಿಷ್ಕಾರ ಹಾಕಿದವರಿಗೆ ಜೈಲು ಶಿಕ್ಷೆ ಹಾಗೂ ಲಕ್ಷ ರೂ. ದಂಡವನ್ನು ವಿಧಿಸುವ ಮಸೂದೆಗೆ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ…

52 mins ago

ಓದುಗರ ಪತ್ರ: ಬಿಎಂಟಿಸಿ ಜನಹಿತ ಕಾಯಲಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆರ್ಥಿಕ ನಷ್ಟದಿಂದ ಹೊರಬರಲು ಬಸ್‌ಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಿದೆ. ಆದರೆ ಈ…

1 hour ago

ಓದುಗರ ಪತ್ರ: ಸಾರ್ವಜನಿಕ ಗ್ರಂಥಾಲಯದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಊಟಿ ರಸ್ತೆಯಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯ ಶಾಖೆಗೆ ಪ್ರತಿನಿತ್ಯ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಸ್ಪರ್ಧಾತ್ಮಕ…

1 hour ago

‘ಶಕ್ತಿ’ ಸ್ಕೀಮ್‌ನಿಂದ ಸಾರಿಗೆ ನಿಗಮಗಳಿಗೆ ನಿಶ್ಶಕ್ತಿ!

ನಿಗಮಗಳಿಗೆ ಸಕಾಲಕ್ಕೆ ಹಣ ಬಿಡುಗಡೆ ಮಾಡದ ಸರ್ಕಾರ; ಏದುಸಿರು ಬಿಡುತ್ತಿರುವ ನಿಗಮಗಳು ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ…

2 hours ago

ಇಂದು ಪೋಲೀಯೋ ಲಸಿಕಾ ಅಭಿಯಾನ

ನವೀನ್ ಡಿಸೋಜ ೧,೯೪೬ ಲಸಿಕೆದಾರರು, ೮೫ ಮೇಲ್ವಿಚಾರಕರು ೯೭೩ ಮನೆ ಭೇಟಿ ನೀಡುವ ತಂಡ ರಚನೆ ಪ್ರವಾಸಿಗರು, ವಲಸೆ ಕಾರ್ಮಿಕರ…

6 hours ago