ಎಡಿಟೋರಿಯಲ್

ಶಾಂತಿ, ಸಹನೆ, ಸಹಿಷ್ಣುತೆ ಸಾರಿದ ಸಂಭ್ರಮದ ನಾಡಹಬ್ಬ

ನಾಡ ದೇವಿ ಚಾಮುಂಡೇಶ್ವರಿಯನ್ನು ಹೊತ್ತ ಜಂಬೂಸವಾರಿ ಅರಮನೆಯಿಂದ ಬನ್ನಿಮಂಟಪಕ್ಕೆ ಸಾಗುವುದರೊಂದಿಗೆ ಹತ್ತು ದಿನಗಳ ಸಂಭ್ರಮ ಸಡಗರಗಳ ನಾಡ ಹಬ್ಬ ದಸರಾಕ್ಕೆ ತೆರೆ ಬಿದ್ದಿದೆ. ಕೋವಿಡ್ ಸಂಕಷ್ಟದಿಂದಾಗಿ ಹಿಂದಿನ ಎರಡು ವರ್ಷಗಳು ಸರಳವಾಗಿ ನಡೆದಿದ್ದ ದಸರಾ ಹಬ್ಬ ಈ ಬಾರಿ ಅದ್ಧೂರಿಯಾಗಿ ನಡೆದಿದೆ. ಜನರು ಅಮಿತೋತ್ಸಾಹದಿಂದ ಪಾಲ್ಗೊಂಡಿದ್ದಾರೆ.

ಬನ್ನಿಮರ ಮತ್ತು ನಂದಿಧ್ವಜಕ್ಕೆ ಯದುವೀರ್ ಒಡೆಯರ್ ಅವರು ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನರ ಹರ್ಷೋದ್ಗಾರಗಳ ನಡುವೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು. ಮೂರನೇ ಬಾರಿಗೆ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ಅಭಿಮನ್ಯು ವಿಶೇಷ ಆಕರ್ಷಣೆ.

ಹೆಸರೇ ಹೇಳುವಂತೆ ದಸರಾ ನಾಡ ಹಬ್ಬ. ನಾಡಿನ ಸಮಸ್ತ ಜನರೂ ಪಾಲ್ಗೊಂಡು ಸಂಭ್ರಮಿಸುವ ಹಬ್ಬ. ಈ ಬಾರಿ ಜಂಬೂಸವಾರಿ ನೋಡಲು ನೆರೆದಿದ್ದ ಜನಸ್ತೋಮವಂತೂ ಹಿಂದೆಂದಿಗಿಂತಲೂ ನಾಡ ಹಬ್ಬದ ಮೇಲಿನ ಪ್ರೀತಿ ಮತ್ತು ವಿಶ್ವಾಸ ಇಮ್ಮಡಿಯಾಗಿರುವುದಕ್ಕೆ ಸಾಕ್ಷಿಯಾಯಿತು. 31 ಜಿಲ್ಲೆಗಳನ್ನು ಪ್ರತಿನಿಧಿಸುವ 47 ಸ್ತಬ್ಧ ಚಿತ್ರಗಳು, 70ಕ್ಕೂ ಹೆಚ್ಚು ಕಲಾತಂಡಗಳು ಜಂಬೂಸವಾರಿಯೊಂದಿಗೆ ಸಾಗಿ ಕಿಕ್ಕಿರಿದು ನೆರೆದಿದ್ದ ಲಕ್ಷಾಂತರ ಜನರನ್ನು ಮನರಂಜಿಸಿದವು.

ದಸರಾ ಈ ನಾಡಿನ ಕಲೆ, ಸಂಸ್ಕೃತಿಯನ್ನು ಜೀವಂತವಾಗಿಡುವ, ಸರ್ವಧರ್ಮಗಳ ಜನರನ್ನು ಬೆಸೆಯುವ ಹಬ್ಬ. ಬೇರೆ ಬೇರೆ ಸಂದರ್ಭಗಳಲ್ಲಿನ ದ್ವೇಷ- ಅಸೂಯೆ, ಅಸಹನೆ, ಅಶಾಂತಿ, ಅಸಹಿಷ್ಣುತೆ ಏನೇ ಇದ್ದರೂ ದಸರಾ ಹಬ್ಬ ಅವೆಲ್ಲವನ್ನು ಮರೆಸಿಬಿಡುತ್ತದೆ. ಪ್ರೀತಿ, ವಿಶ್ವಾಸ, ಸಹನೆ, ಶಾಂತಿ, ಸಹಿಷ್ಣುತೆಯನ್ನು ಸಂಭ್ರಮದಿಂದ ಹೊತ್ತು ತರುತ್ತದೆ. ಆ ಕಾರಣದಿಂದಲೇ ಲಕ್ಷಾಂತರ ಜನರು ಪಾಲ್ಗೊಳ್ಳುವ ದಸರಾ ಸಂಭ್ರಮ ಸಡಗರಗಳೊಂದಿಗೆ ಮುಕ್ತಾಯವಾಗುತ್ತದೆ. ಅದು ದಸರಾ ಹಬ್ಬದ ಹೆಗ್ಗಳಿಕೆಯಷ್ಟೇ ಅಲ್ಲ ವಿಶ್ವಾಸದಿಂದ ದಸರಾ ಆಚರಣೆಯನ್ನು ನಂಬುವ, ಪ್ರೀತಿಸುವ, ಪಾಲ್ಗೊಳ್ಳುವ ಸಮಸ್ತ ಜನರ ಹೆಗ್ಗಳಿಕೆಯೂ ಹೌದು.

ಸ್ತಬ್ಧ ಚಿತ್ರಗಳು ನಾಡಿನ ಬಹುಸಂಸ್ಕೃತಿಯ ಕತೆಯನ್ನು ಹೇಳುತ್ತವೆ. ಆ ಮೂಲಕ ಸಂಸ್ಕೃತಿಯನ್ನು ಸದಾ ಜೀವಂತವಾಗಿಸುತ್ತವೆ. ಕಲಾ ತಂಡಗಳು ಕಲೆಗಳ ಶ್ರೀಮಂತಿಕೆಯನ್ನು, ಜೀವಂತಿಕೆಯನ್ನು ಮತ್ತೊಂದು ತಲೆಮಾರಿಗೆ ಒಯ್ಯುತ್ತವೆ. ಅಷ್ಟರಮಟ್ಟಿಗೆ ದಸರಾ ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಸದಾ ಜೀವಂತವಾಗಿಡುವ ಹಬ್ಬ. ಯಾವೊಂದು ಕಲೆಯೂ ಅವನತಿಯತ್ತ ಸಾಗಬಾರದು ಎಂಬ ಸದುದ್ದೇಶದಿಂದ ನಾಡಿನ ಎಲ್ಲಾ ಜನಪದ ಕಲೆಗಳ ಪ್ರದರ್ಶನಕ್ಕೆ ಅವಕಾಶ ಮತ್ತು ಪ್ರೋತ್ಸಾಹ ನೀಡಲಾಗುತ್ತದೆ. ದಸರಾ ಹಬ್ಬವೇ ಇಲ್ಲದಿದ್ದರೆ ಸಾಕಷ್ಟು ಜಾನಪದ ಕಲೆಗಳು ನಶಿಸಿ ಹೋಗಿಬಿಡು ತ್ತಿದ್ದವು. ವೀರಗಾಸೆ ಕುಣಿತ, ಪಟಕುಣಿತ, ಪುರವಂತಿಗೆ, ಕಂಸಾಳೆ ನೃತ್ಯ, ಕೀಲುಕುದುರೆ, ಕೋಲಾಟ, ಚಿಟ್ ಮೇಳ, ಕಣಿವಾದನ, ಹೂವಿನ ನೃತ್ಯ, ಹೆಜ್ಜೆಯ ಮೇಳ, ತಮಟೆ ನಗಾರಿ, ಪೂಜಾ ಕುಣಿತ, ಲಂಬಾಣಿ ನೃತ್ಯ, ಹಗಲುವೇಷ , ತಮಟೆವಾದನ ವೈಭವ, ಉಡುಪಿ ದಟ್ಟಿ ಕುಣಿತ ,ಕುಡುಬಿ ನೃತ್ಯ, ಉತ್ತರ ಕನ್ನಡದ ಗೊಂಡರ ಡಕ್ಕೆ, ತಲಕಾಡಿನ ಚಿಲಿಪಿಲಿ ಗೊಂಬೆ, ಪಾಂಡವಪುರದ ಮರಗಾಲು ಕುಣಿತ ಇತ್ಯಾದಿ ಕಲಾಪ್ರಕಾರಗಳು ಜೀವಂತಿಕೆಯಿಂದಿರುವುದಕ್ಕೆ ದಸರಾ ಹಬ್ಬ ಪ್ರಮುಖ ಕಾರಣ.

ದಸರಾ ಹಬ್ಬ ನಮ್ಮ ಬದುಕು ವಿಕಸಿತವಾಗುತ್ತಿರುವುದರ ಮತ್ತು ಆಧುನಿಕತೆಗೆ ತೆರೆದುಕೊಳ್ಳುವ ನಿರಂತರ ಪ್ರಕ್ರಿಯೆಯ ಸಂಕೇತ. ಆ ಕಾರಣಕ್ಕಾಗಿಯೇ ದಸರಾ ಹೊಸ ಹೊಸ ಆವಿಷ್ಕಾರಗಳನ್ನು ಒಳಗೊಳ್ಳುತ್ತದೆ. ಬನ್ನಿಮಂಟಪದಲ್ಲಿ ಸಾಂಪ್ರದಾಯಿಕ ಪಂಜಿನ ಕವಾಯತಿನ ಜತೆಗೆ ನಡೆದ ಡ್ರೋನ್ ಗಳ ಪ್ರದರ್ಶನ ಇದಕ್ಕೆ ಸಾಕ್ಷಿ. ಹೊಸ ತಲೆಮಾರಿನ ಅಭಿರುಚಿಗಳಿಗೆ ಸ್ಪಂದಿಸುವ ಯುವ ದಸರಾ ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಜನಪ್ರಿಯಗೊಳ್ಳುತ್ತಿದೆ.

ಲಕ್ಷಾಂತರ ಜನರು ಪಾಲ್ಗೊಳ್ಳುವ ದಸರಾ ಸಂಭ್ರಮ ಸಡಗರಗಳೊಂದಿಗೆ ಮುಕ್ತಾಯಗೊಳ್ಳುತ್ತದೆ ಎಂದರೆ, ಅದಕ್ಕೆ ನಮ್ಮ ಆಡಳಿತ ವ್ಯವಸ್ಥೆ, ಬಂದೋಬಸ್ತ್ ವ್ಯವಸ್ಥೆ ಮಾಡಿದ ಸಾವಿರಾರು ಪೊಲೀಸರ ಶ್ರಮ ಮತ್ತು ಸಂಯಮ ಕಾರಣ. ದಸರಾ ಯಶಸ್ಸಿನಲ್ಲಿ ಅವರದ್ದು ಸಿಂಹಪಾಲು. ದಸರಾ ಜಂಬೂಸವಾರಿಯನ್ನು ಹೊತ್ತೊಯ್ಯುವ ಆನೆ, ಆ ಆನೆಯ ಸಂಗಾತಿಗಳು ಮತ್ತು ಅವುಗಳನ್ನು ಮುನ್ನಡೆಸುವ ಮಾವುತರ ಶ್ರಮ ಮತ್ತು ಸಹನೆ ಅಪಾರವಾದದ್ದು.

ಎಲ್ಲಾ ಸಂಭ್ರಮ ಸಡಗರಗಳ ನಡುವೆ ಕೆಲ ಲೋಪಗಳ ಬಗ್ಗೆ ಪ್ರಸ್ತಾಪಿಸಬೇಕು. ದಸರಾ ಸಿದ್ಧತೆ ಪರಿಪೂರ್ಣವಾಗಿರಲಿಲ್ಲ, ರಾಜಬೀದಿ ಯನ್ನು ಸಂಪರ್ಕಿಸುವ ರಸ್ತೆಗಳಿಗೂ ಡಾಂಬರು ಭಾಗ್ಯ ಇರಲಿಲ್ಲ ಎಂದು ದೂರುಗಳು ಕೇಳಿಬಂದವು. ದಸರಾ ಪಾಸ್ ಹಂಚಿಕೆಯಲ್ಲಿ ಸ್ವಜನ ಪಕ್ಷಪಾತದ ಆರೋಪಗಳನ್ನು ಜನಸಾಮಾನ್ಯರಲ್ಲದೇ ಜನಪ್ರತಿನಿಧಿಗಳೂ ಮಾಡಿದ್ದರು. ಈ ಎಲ್ಲವೂ ನಿರೀಕ್ಷಿತ ಲೋಪಗಳೇ, ತಿದ್ದಿಕೊಳ್ಳಲಾರದಂತಹವೇನಲ್ಲ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಒಂದಷು ಕಾಳಜಿ ವಹಿಸಿದರೆ ಮುಂದಿನ ವರ್ಷ ಇಂತಹ ಲೋಪಗಳಾಗುವುದನ್ನು ತಡೆಯಬಹುದು.

andolana

Recent Posts

‘ಮಾದಾರಿ ಮಾದಯ್ಯ’ ವರ್ತಮಾನದ ಅವಶ್ಯ ರಂಗ ಪ್ರಯೋಗ

ಮಹದೇವ ಶಂಕನಪುರ ಎಚ್.ಎಸ್.ಶಿವಪ್ರಕಾಶ್ ಅವರ ನಾಟಕ ‘ಮಾದಾರಿ ಮಾದಯ್ಯ’ ಕಳೆದ ೩೫ ವರ್ಷಗಳಿಂದಲೂ ಕನ್ನಡ ನೆಲದಲ್ಲಿ ಅಭಿನಯಿಸಲ್ಪಡುತ್ತಿದೆ. ಮೊದಲಿಗೆ ೧೯೯೦ರಲ್ಲಿ…

39 mins ago

ಅಯೋಧ್ಯೆಯಲ್ಲಿ ಗಣಪತಿ ಆಶ್ರಮ ಶಾಖೆ ಉದ್ಘಾಟನಾ ಕಾರ್ಯಕ್ರಮ

ಮೈಸೂರು: ದೇಶ-ವಿದೇಶಗಳಲ್ಲಿ ಜನ ಸಮೂಹವನ್ನು ಹೊಂದಿರುವ ಅವಧೂತ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನೂತನ ಶಾಖೆಯನ್ನು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ…

4 hours ago

ಜನವರಿ.5ಕ್ಕೆ ಮೈಸೂರು ವಿವಿ 106ನೇ ಘಟಿಕೋತ್ಸವ

ಕುಲಪತಿ ಲೋಕನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ೧೦೬ನೇ ಘಟಿಕೋತ್ಸವವನ್ನು ಜ.೫ರಂದುನಡೆಸಲು ತೀರ್ಮಾನಿಸಲಾಗಿದ್ದು, ಘಟಿಕೋತ್ಸವ…

4 hours ago

ಗ್ರಾಮೀಣ ಭಾಗದಲ್ಲಿ ಚಳಿಗೆ ತತ್ತರಿಸಿದ ಜನರು

ಲಕ್ಷ್ಮೀಕಾಂತ್ ಕೊಮಾರಪ್ಪ ಶೀತಗಾಳಿಯಿಂದ ಪಾರಾಗಲು ಬೆಚ್ಚನೆಯ ಬಟ್ಟೆ, ಹೊದಿಕೆ, ಬೆಂಕಿಯ ಮೊರೆ  ಸೋಮವಾರಪೇಟೆ: ಶೀತಗಾಳಿಯಿಂದ ಚಳಿಯ ಪ್ರಮಾಣ ಹೆಚ್ಚಾಗಿದ್ದು, ಕಳೆದೆರಡು…

4 hours ago

ಒಂದೇ ವರ್ಷದಲ್ಲಿ ಕಿತ್ತು ಬಂದ ರಸ್ತೆಯ ಜಲ್ಲಿ ಕಲ್ಲು!

ಕೊಳ್ಳೇಗಾಲ: ಶಾಸಕರು ಮೊದಲಿದ್ದ ಡಾಂಬರು ರಸ್ತೆಯನ್ನು ಕಿತ್ತು ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಮುಂದಾದರೆ ಗುತ್ತಿಗೆದಾರ ನಡೆಸಿದ ಕಳಪೆಕಾಮಗಾರಿಯಿಂದ ಜಲ್ಲಿಕಲ್ಲುಗಳು ಮೇಲೆದ್ದು…

4 hours ago

ನಿರಂತರ ಹುಲಿ, ಚಿರತೆಗಳ ಹಾವಳಿ; ಕಂಗಾಲಾದ ರೈತರು

ಹನಗೋಡು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಆತಂಕ; ಜಮೀನಿಗೆ ತೆರಳಲು ಹಿಂದೇಟು ವೀರನಹೊಸಹಳ್ಳಿ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ಬಫರ್…

4 hours ago