ಎಡಿಟೋರಿಯಲ್

ನ್ಯಾಯ ವ್ಯವಸ್ಥೆಯಲ್ಲಿನ ಪಿತೃಪ್ರಧಾನ ಧೋರಣೆ

ಸಿ ಕೆ ಫೈಸಲ್
ಮಹಿಳೆಯರ ಮಟ್ಟಿಗೆ ಮಾನವ ಘನತೆಯನ್ನು ಕಾಪಾಡುವ ಭರವ–ಸೆಯು ಇನ್ನೂ ಪೊಳ್ಳಾಗಿಯೇ ಉಳಿ–ದಿದೆ. ಬ್ರಾಡ್ವೆಲ್ ವರ್ಸಸ್ ಇಲಿನಾಯಿಸ್ ಸರ್ಕಾರ (೧೮೭೨)ದ ಪ್ರಕರಣ–ವೊಂದ–ರಲ್ಲಿ ಅಮೆರಿಕದ ಸರ್ವೋಚ್ಚ ನ್ಯಾಯಾಲಯವು ‘ಭಗವಂ–ತನು ಲಿಂಗತ್ವವನ್ನು ಚಟು–ವಟಿಕೆಗಳ ವಿಭಿನ್ನ ಸ್ತರಗಳಲ್ಲಿ ಬಳಸುವ ಸಲುವಾಗಿಯೇ ಸೃಷ್ಟಿಸಿರುತ್ತಾನೆ, ಹಾಗಾಗಿ ಕಾನೂನು ರೂಪಿಸಿ, ಅನ್ವಯಿಸಿ ಜಾರಿಗೊಳಿಸುವ ಹೊಣೆ ಪುರುಷರದ್ದಾಗಿರುತ್ತದೆ – ಇದು ಸ್ವಯಂವೇದ್ಯ ಸತ್ಯ’ ಎಂದು ಹೇಳಿತ್ತು.

ಈ ಪ್ರಕರಣದ ವಿಷಯ ಎಂದರೆ, ಇಲಿನಾಯಿಸ್ ರಾಜ್ಯದ ನಿವಾಸಿಯಾಗಿದ್ದ ಮೈರಾ ಬ್ರಾಡ್ವೆಲ್ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಿ, ಕಾನೂನು ವೃತ್ತಿಯನ್ನು ಕೈಗೊಳ್ಳಲು ಪರವಾನಗಿಯನ್ನು ಕೋರಿದ್ದರು. ಸರ್ವೋಚ್ಚ ನ್ಯಾಯಾಲಯವು ಆಕೆಗೆ ಅನುಮತಿಯನ್ನು ನಿರಾಕರಿಸಿದ್ದೇ ಅಲ್ಲದೆ ‘ಮಹಿಳೆಯ ಪರಮೋಚ್ಛ ಧ್ಯೇಯ ಮತ್ತು ಗುರಿ ಪತ್ನಿಯಾಗಿ, ತಾಯಿಯಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸುವುದಷ್ಟೇ ಆಗಿರುತ್ತದೆ. ಇದು ಸೃಷ್ಟಿಕರ್ತನ ಕಾನೂನು’ ಎಂದು ಹೇಳಿತ್ತು.  ಮಹಿಳೆಯರು ಕೆಳಸ್ತರದ ದೇವರ ಸೃಷ್ಟಿ ಎಂಬ ಓಬಿರಾಯನ ಕಾಲದ ಮನೋಭಾವ ಭಾರತದ ನ್ಯಾಯವ್ಯವಸ್ಥೆಯಲ್ಲಿ ಇನ್ನೂ ಜೀವಂತವಾಗಿದೆಯೇ?

ಸಂವೇದನಾಶೀಲತೆಯ ಅವಶ್ಯಕತೆ
ಸಾಮಾಜಿಕ- ನ್ಯಾಯಿಕ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಪಿತೃಪ್ರಧಾನ ಧೋರಣೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಒಂದು ಪರಿಹಾರಾತ್ಮಕ ಮಾರ್ಗ ಎಂದರೆ ಕಾನೂನು ವಿದ್ಯಾರ್ಥಿಗಳ ಪಠ್ಯಕ್ರಮಗಳಲ್ಲಿ ಸ್ತ್ರೀವಾದಿ ನ್ಯಾಯಶಾಸ್ತ್ರವನ್ನು ಅಳವಡಿಸುವುದು ಮತ್ತು ಕಾನೂನು ವೃತ್ತಿಯಲ್ಲಿರುವವರಲ್ಲಿ, ನ್ಯಾಯಾಂಗದ ಅಧಿಕಾರಿಗಳಲ್ಲಿ ಸ್ತ್ರೀವಾದಿ ನ್ಯಾಯಶಾಸ್ತ್ರದ ಬಗ್ಗೆ  ಸಂವೇದನಾಶೀಲತೆಯನ್ನು ಉಂಟುಮಾಡುವುದು.

ಸ್ಟಾನ್‌ಫೋರ್ಡ್ ತತ್ವಶಾಸ್ತ್ರದ ವಿಶ್ವಕೋಶವು ಹೀಗೆ ಹೇಳುತ್ತದೆ : ‘ಕಾನೂನು ಸಂರಚನೆಗಳು ಪಿತೃಪ್ರಾಧಾನ್ಯತೆ ಮತ್ತು ಪುರುಷ ಪ್ರಧಾನ ನಿಯಮಗಳಿಂದ ಪ್ರಭಾವಿತವಾಗಿರುವುದನ್ನು ಸ್ತ್ರೀವಾದಿ ಕಾನೂನು ತತ್ವಶಾಸ್ತ್ರವು ಗುರುತಿಸುತ್ತದೆ.

ಇದರ ಪರಿಣಾಮವನ್ನು ಮಹಿಳೆಯರ, ಬಾಲಕಿಯರ ಹಾಗೂ ಲಿಂಗತ್ವ ನಿಯಮ–ಗಳಿಗೆ ಹೊಂದಿಕೊಳ್ಳದವರ, ಭೌತಿಕ ಸ್ಥಿತ್ಯಂತರಗಳಲ್ಲಿ ಗುರುತಿಸಬಹುದು. ಇದು ಲೈಂಗಿಕತೆ ಮತ್ತು ಕಾನೂನುಗಳ ಛೇದಕಗಳ ಸಮಸ್ಯೆಯನ್ನೂ ಪರಿಗಣಿಸಿದ್ದು, ಲಿಂಗತ್ವ ಶೋಷಣೆ, ಅನ್ಯಾಯ ಮತ್ತು ನಿರ್ಬಂಧಗಳ ಸುಧಾರಣೆಗಾಗಿ ಪ್ರಯತ್ನಿಸುತ್ತದೆ. ಈ ನಿಟ್ಟಿನಲ್ಲಿ ಸ್ತ್ರೀವಾದಿ ಕಾನೂನು ತತ್ವಶಾಸ್ತ್ರವು, ಸ್ತ್ರೀವಾದಿ ಜ್ಞಾನಮೀಮಾಂಸೆಯ ಒಳನೋಟಗಳನ್ನು ಅಳವಡಿಸುವುದೇ ಅಲ್ಲದೆ, ಸಂಬಂಧಾತ್ಮಕ ಅಧ್ಯಾತ್ಮ, ಪುರೋಗಾಮಿ ಸಾಮಾಜಿಕ ಮೂಲ ತತ್ವಗಳು, ಸ್ತ್ರೀವಾದಿ ರಾಜಕೀಯ ತತ್ವಗಳು ಮತ್ತು ಸ್ತ್ರೀವಾದಿ ತತ್ವಶಾಸ್ತ್ರಗಳ ಇತರ ಬೆಳವಣಿಗೆಗಳನ್ನು ಅನ್ವಯಿಸುವ ಮೂಲಕ ಕಾನೂನು ಸಂಸ್ಥೆಗಳು ಹೇಗೆ ಪ್ರಧಾನವಾಗಿರುವ ಲಿಂಗತ್ವದ ಹಾಗೂ ಪುರುಷತ್ವದ ನಿಯಮಗಳನ್ನು ಹೇರುತ್ತವೆ ಎನ್ನುವುದನ್ನು ವಿವೇಚಿಸುತ್ತದೆ. ಸ್ತ್ರೀವಾದಿ ಕಾನೂನು ತತ್ವಶಾಸ್ತ್ರವು ಕಾನೂನು ಮೀಮಾಂ–ಸೆಯನ್ನು ಮರುಪರಿಶೀಲ–ನೆಗೊಳಪಡಿಸಿ, ಮರು ರೂಪಿ–ಸುವ ಒಂದು ಪ್ರಯತ್ನವಾಗಿದ್ದು ತನ್ಮೂಲಕ ಹೇರಲಾದ ಪ್ರಾಚೀನ ಅಸಮಾನತೆ ಮತ್ತು ತಾರತಮ್ಯಗಳನ್ನು ಹೋಗಲಾಡಿಸುತ್ತದೆ, ಹಾಗೆಯೇ ಭವಿಷ್ಯತ್ತಿಗಾಗಿ ಮಾನವ ಪರಿಕಲ್ಪನೆಗಳನ್ನು ಮತ್ತು ಸಂಸ್ಥೆಗಳನ್ನು ರೂಪಿಸಲು ಯತ್ನಿಸುತ್ತದೆ’. ಜಟಿಲ ಕಾನೂನು ಪ್ರಶ್ನೆಗಳನ್ನು ಸ್ತ್ರೀವಾದಿ ನ್ಯಾಯಶಾಸ್ತ್ರದ ನೆರವಿನೊಂದಿಗೆ ಅರ್ಥಮಾಡಿಕೊಳ್ಳು–ವುದರ ಮೂಲಕ ಖಂಡಿತವಾಗಿಯೂ ಔನ್ನತ್ಯದ ಪಿತೃಪ್ರಧಾನ ಭ್ರಾಂತಿಯನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ.

ವ್ಯಕ್ತಿಗತ ಆಯ್ಕೆ
ಉಡುಗೆ ತೊಡುವ ಆಯ್ಕೆಯು ವ್ಯಕ್ತಿಯ ಘನತೆ ಮತ್ತು ಖಾಸಗಿತನ ಸ್ವಾತಂತ್ರ್ಯದ ಅಂಶಿಕ ಭಾಗವಾಗಿರುತ್ತದೆ.  ವ್ಯಕ್ತಿಯ ಉಡುಪನ್ನು ನಿರ್ಧರಿಸುವುದು ನ್ಯಾಯಾಧೀಶರ ಕೆಲಸ ಅಲ್ಲ. ಅಥವಾ ಮಹಿಳೆಯೊಬ್ಬರ ಉಡುಪಿನ ಶೈಲಿ ಆಕೆಯ ಶೀಲ ಭಂಗ ಮಾಡಲು ಪರವಾನಿಗೆ ನೀಡಿದಂತೆ ಎಂದು ಭಾವಿಸಲಾಗುವುದಿಲ್ಲ. ಉದಾರವಾದಿ ಪ್ರಜಾಸತ್ತಾತ್ಮಕ ಪ್ರಭುತ್ವದಲ್ಲಿ ಉಡುಗೆಯ ಆಯ್ಕೆಯು ಸ್ವಯಂ ನಿರ್ಣಯದ ವರ್ತನೆಯಾಗಿದ್ದು ಅಲ್ಲಿ ವ್ಯಕ್ತಿಯ ಸಾರ್ವಭೌಮತ್ವವೇ ಅಂತಿಮ ಎಂದು ಜಾನ್ ಸ್ಟುವರ್ಟ್ ಮಿಲ್ ಹೇಳುತ್ತಾರೆ. ಕ್ರಿಸ್ತಶಕ ೧೫೮೩ರಲ್ಲಿ ಫ್ರಾನ್ಸ್‌ನ ದೊರೆ ಹೆನ್ರಿ-೩,  ವೆಲ್ವೆಟ್, ಸ್ಯಾಟಿನ್ ಮತ್ತು ಡಮಾಸ್ಕ್ ಬಟ್ಟೆಗಳನ್ನು ಗಣ್ಯರು ಮಾತ್ರ ತೊಡತಕ್ಕದ್ದು ಎಂಬ ಆಜ್ಞೆಯನ್ನು ಹೊರಡಿಸಿದ್ದ.  ವ್ಯಕ್ತಿಯ ಸ್ಥಾನಮಾನವನ್ನು ಆತ/ಆಕೆ ತೊಟ್ಟಿರುವ ಉಡುಗೆಯ ಮೂಲಕ ಗುರುತಿಸಲಾಗುವುದಿಲ್ಲ ಎಂಬ ಕಾರಣಕ್ಕೆ ಭಗವಂತನು ಕುಪಿತನಾಗಿದ್ದಾನೆ ಎಂದು ತನ್ನ ಆಜ್ಞೆಗೆ ಸಮಜಾಯಿಷಿ ನೀಡಿದ್ದ.  ಬ್ರಿಟಾನಿಕಾದಲ್ಲಿ ಹೇಳಿರುವಂತೆ, ಇದೇ ರೀತಿಯ ರಾಜಾಜ್ಞೆಯನ್ನು ಕ್ರಿಸ್ತಶಕ ೧೪೬೩ರಲ್ಲಿ ದೊರೆ ಕಿಂಗ್ ಎಡ್ವರ್ಡ್-೪ ಸಹ ಹೊರಡಿಸಿದ್ದ. ಭಗವಂತನು  ಅತಿರೇಕದ ಮತ್ತು ಮಿತಿಮೀರಿದ ಉಡುಗೆ ತೊಡುಗೆಯಿಂದ ಅಸಮಾಧಾನಗೊಂಡಿದ್ದಾನೆ ಎಂಬ ಕಾರಣವನ್ನೂ ನೀಡಿದ್ದ. ಕ್ರಿಸ್ತಶಕ ೧೪೨೯ರಲ್ಲಿ ಜೋನ್ ಆಫ್ ಆರ್ಕ್ ಪುರುಷರ ಉಡುಗೆ ತೊಟ್ಟಿದ್ದುದರಿಂದ, ಪುರುಷರ ಉಡುಗೆ ಧರಿಸಿದ್ದುದೇ ಆಕೆಯ ವಿರುದ್ಧ ಪ್ರಮುಖ ಆಪಾದನೆಯಾಗಿತ್ತು. ಬೀವಿಷ್‌ನ ಬಿಷಪ್ ಆಕೆಯ ವಿಚಾರಣೆ ನಡೆಸಿ ಪುರುಷರ ಉಡುಗೆಯನ್ನು ತೊಡುವುದು ಮಹಿಳೆಯರ ಸೌಶೀಲ್ಯಕ್ಕೆ ವ್ಯತಿರಿಕ್ತವಾದುದು ಇದನ್ನು ದೈವೀಕ ಕಾನೂನು ನಿಷೇಧಿಸುತ್ತದೆ ಎಂದು ಘೋಷಿಸಿದ್ದರು.
ಭಾರತದ ಗಣತಂತ್ರದ ನ್ಯಾಯಾಧೀಶರೊಬ್ಬರು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳಿಗೆ ಬದ್ಧರಾಗಿರಬೇಕೇ ಹೊರತು ಈ ಚರಿತ್ರೆಯನ್ನು ಅನುಸರಿಸಬಾರದು!

ಮೂಲ- ದ ಹಿಂದೂ
(Curing the patriarchal mindset of the legal system)

ಲೇಖಕರು ಕೇರಳ ಸರ್ಕಾರದ ಅಧೀನ ಕಾರ್ಯದರ್ಶಿ
ಅನುವಾದ : ನಾ ದಿವಾಕರ
andolana

Recent Posts

ಧೋನಿ, ಕಪಿಲ್‌ ದೇವ್‌ಗೆ ಕ್ಷಮೆ ಕೇಳಿದ ಯುವರಾಜ್‌ ಸಿಂಗ್‌

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್‌ ಭಾರತದ ವಿಶ್ವಕಪ್‌ ವಿಜೇತ ನಾಯಕರುಗಳಾದ ಮಹೇಂದ್ರ ಸಿಂಗ್‌ ಧೋನಿ ಹಾಗೂ ಕಪಿಲ್‌…

26 mins ago

ರಾಜ್ಯದಲ್ಲಿ ಇಂದು ಕೂಡ ಮುಂದುವರಿಯಲಿದೆ ಮಳೆ ಆರ್ಭಟ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 22 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ…

51 mins ago

ಕಬಿನಿ ಹಿನ್ನೀರಿನಲ್ಲಿ ಯಂಗ್ ಟೈಗರ್‌ ಕೂಲ್‌ ಕೂಲ್‌

ಎಚ್.ಡಿ.ಕೋಟೆ: ಕಬಿನಿ ಹಿನ್ನೀರಿನಲ್ಲಿ ಹುಲಿಯೊಂದು ನೀರಿನಲ್ಲಿ ಮುಳುಗಿ ವಿಶ್ರಮಿಸುತ್ತಿರುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗಿದೆ. ರಾಜ್ಯದಲ್ಲಿ ದಿನದಿಂದ…

1 hour ago

ಕಬಿನಿ ಹಿನ್ನೀರು ಪ್ರದೇಶದಲ್ಲಿ ವನ್ಯಜೀವಿ ಬೇಟೆಯಾಡುತ್ತಿದ್ದವರ ಬಂಧನ

ಎಚ್.ಡಿ.ಕೋಟೆ: ಕಬಿನಿ ಹಿನ್ನೀರಿನ ಕಾಡಂಚಿನ ಪ್ರದೇಶದಲ್ಲಿ ವನ್ಯಜಜೀವಿಗಳನ್ನು ಬೇಟೆಯಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕೂತಿ ಗ್ರಾಮದ…

2 hours ago

ಪ್ರವಾಸಿ ಮಹಿಳೆ ನಾಪತ್ತೆ

ಮಡಿಕೇರಿಗೆ ಬಂದಿದ್ದ ಕೇರಳ ಮೂಲದ ಟ್ರೆಕ್ಕರ್ ಮಡಿಕೇರಿ: ಪ್ರವಾಸಕ್ಕೆ ಬಂದಿದ್ದ ಮಹಿಳೆಯೊಬ್ಬರು ಚಾರಣಕ್ಕೆ ತೆರಳಿದ್ದಾಗ ನಾಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯ…

5 hours ago

ಓದುಗರ ಪತ್ರ: ಹಿರಿಯ ನಾಗರಿಕರಿಗೆ ರೈಲ್ವೆ ರಿಯಾಯಿತಿ

ಸೌಲಭ್ಯ ಮತ್ತೆ ಮುಂದುವರಿಯಲಿ ಕಳೆದ ಆರ್ಥಿಕ ವರ್ಷದಲ್ಲಿ (೨೦೨೫-೨೬), ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ರೂ.೪೪೯.೧೩ ಕೋಟಿ ರೂಪಾಯಿಗೂ ಹೆಚ್ಚು…

5 hours ago