ಎಡಿಟೋರಿಯಲ್

ರಾಷ್ಟ್ರೀಯ ಹೆದ್ದಾರಿಗಳ ಬೆಳವಣಿಗೆ

ಪ್ರೊ.ಆರ್.ಎಂ.ಚಿಂತಾಮಣಿ

ನಮ್ಮ ಸಂವಿಧಾನದ ಪ್ರಕಾರ ದೇಶದಲ್ಲಿಯ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ ಕೇಂದ್ರ ಮತ್ತು ರಾಜ್ಯಗಳ ಜಂಟಿ ಜವಾಬ್ದಾರಿ ಪಟ್ಟಿಯಲ್ಲಿದೆ. ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು, ಜಿಲ್ಲಾ ಪ್ರಮುಖ ರಸ್ತೆಗಳು, ಗ್ರಾಮೀಣ ರಸ್ತೆಗಳು ಎಂದು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದು ಕೇಂದ್ರ ಸರ್ಕಾರದ ಹೊಣೆ, ಉಳಿದ ಮೂರನ್ನೂ ರಾಜ್ಯ ಸರ್ಕಾರಗಳು ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ನಿರ್ವಹಿಸುತ್ತವೆ. ಈ ವಿಷಯದಲ್ಲಿ ವಿಶೇಷ ಯೋಜನೆಗಳಿಗೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ವಿಶೇಷ ಅನುದಾನದ ರೂಪದಲ್ಲಿ ನೆರವನ್ನು ಒದಗಿಸುತ್ತದೆ.

ರಸ್ತೆಗಳು ಮೂಲ ಸೌಲಭ್ಯಗಳಲ್ಲಿಯೇ ಪ್ರಮುಖವಾಗಿದ್ದು ಪ್ರಾದೇಶಿಕ ಸಂಪರ್ಕ ಸಾಧನಗಳಾಗಿ ಮಹತ್ವದ ಪಾತ್ರವಹಿಸುತ್ತವೆ. ಬ್ರಿಟಿಷ್ ಕಾಲದಲ್ಲಿ ತಮ್ಮ ಆಡಳಿತದ ಅನುಕೂಲಕ್ಕಾಗಿ ರಸ್ತೆಗಳನ್ನು ನಿರ್ಮಿಸಿದರೂ ಅದು ನಮ್ಮ ಅಭಿವೃದ್ಧಿಯ ಉದ್ದೇಶಕ್ಕಾಗಿ ಇರಲಿಲ್ಲ. ದೇಶಿಯ ಸಂಸ್ಥಾನಿಕ ರಾಜರು ತಮ್ಮ ಪ್ರದೇಶಗಳ ಅಭಿವೃದ್ಧಿಗಾಗಿ ಮತ್ತು ಪಕ್ಕದ ರಾಜ್ಯಗಳ ಸಂಪರ್ಕಕ್ಕಾಗಿ ತಮ್ಮ ಮಿತಿಯಲ್ಲಿ ಸಾಕಷ್ಟು ರಸ್ತೆಗಳನ್ನು ನಿರ್ಮಿಸಿದ್ದರು. ಮೈಸೂರು ಅರಸರಿಂದ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸವಾಗಿತ್ತು.

ರಾಷ್ಟ್ರೀಯ ಹೆದ್ದಾರಿಗಳು

ಸ್ವಾತಂತ್ರ್ಯ ನಂತರ ರಸ್ತೆ ನಿರ್ಮಾಣದ ವೇಗ ಹೆಚ್ಚಾಯಿತು, ಯೋಜಿತ ಅಭಿವೃದ್ಧಿಯ ಭಾಗವಾಗಿ ಪಂಚವಾರ್ಷಿಕ ಯೋಜನೆಗಳ ಮೂಲಕ ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳ ರಾಜಧಾನಿಗಳು, ಕೈಗಾರಿಕಾ ಕೇಂದ್ರಗಳು ಮತ್ತು ವ್ಯವಹಾರ ಕೇಂದ್ರಗಳ ನಡುವೆ ಸಂಪರ್ಕ ಕಲ್ಪಿಸುವ ಅಗಲವಾದ ಸುಸ್ಥಿರ ರಸ್ತೆಗಳನ್ನು ನಿರ್ಮಿಸಿತು. ಇವುಗಳಲ್ಲಿ ಪ್ರಮುಖ ಬಂದರು, ನಗರಗಳು, ಪ್ರವಾಸಿ ಕೇಂದ್ರಗಳು ಸೇರಿಕೊಂಡಿದ್ದವು. ಇವುಗಳನ್ನೇ ರಾಷ್ಟ್ರೀಯ ಹೆದ್ದಾರಿಗಳು ಎಂದು ಕರೆಯಲಾಯಿತು. ಅವುಗಳಿಗೆ ಒಂದೊಂದು ಸಂಖ್ಯೆಯನ್ನು ಕೊಡಲಾಯಿತು. ಹೆದ್ದಾರಿಗಳಲ್ಲಿ ಚಲಿಸುವಾಗ ವಾಹನಗಳ ವೇಗವೂ ಸೇರಿದಂತೆ ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ದೂರ ಸಂಚರಿಸುವ ವಾಹನಗಳಿಗೆ ನಡುವೆ ಬರುವ ನಗರಗಳಲ್ಲಿಯ ಸಂಚಾರ ಅಡೆತಡೆಗಳಿಂದ ತೊಂದರೆಯಾಗದಂತೆ ನಗರಗಳ ಹೊರವಲಯಗಳ ಮೂಲಕ ಪ್ರತ್ಯೇಕ ಹೈವೇ ನಿರ್ಮಿಸಲಾಗಿರುತ್ತದೆ. ಜನ ಸಂಚಾರ ಮತ್ತು ಸರಕು ಸಾಗಣೆ ವಾಹನಗಳ ದಟ್ಟಣೆ ಹೆಚ್ಚಾಗಿರುವ ಎರಡು ಪ್ರಮುಖ ನಗರಗಳ ನಡುವೆ ನಿರ್ಮಿಸಲಾಗಿರುವ ‘ಎಕ್ಸ್‌ಪ್ರೆಸ್ ಹೈವೇಗಳು’ ರಾಷ್ಟ್ರೀಯ ಹೆದ್ದಾರಿಗಳಲ್ಲೇ ಸೇರಿಕೊಂಡಿರುತ್ತದೆ. ಹೀಗೆ ರಾಷ್ಟ್ರೀಯ ಹೆದ್ದಾರಿಗಳ ಜಾಲ ವಿಸ್ತರಣೆಯಾಗುತ್ತಾ ಹೋಯಿತು.

ಮುಂದೆ ಹತ್ತನೇ ಪಂಚವಾರ್ಷಿಕ ಯೋಜನೆಯಲ್ಲಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಮೂಲ ಸೌಲಭ್ಯಗಳಿಗೆ ಒತ್ತು ಕೊಟ್ಟಿದ್ದರಿಂದ ರಸ್ತೆ ನಿರ್ಮಾಣ ಮತ್ತು ಉನ್ನತೀಕರಣ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ಕೊಡಲಾಯಿತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಸ್ಥಾಪಿಸಲ್ಪಟ್ಟಿತು. ಹೆದ್ದಾರಿಗಳ ನಿರ್ಮಾಣ, ಸುಧಾರಣೆ, ವಿಸ್ತರಣೆ ಮತ್ತು ನಿರ್ವಹಣೆ (ರಿಪೇರಿಗಳು ಸೇರಿ) ಮುಂತಾದ ಎಲ್ಲ ಜವಾಬ್ದಾರಿಗಳನ್ನೂ ಎನ್‌ಎಚ್‌ಎಐ ನಿರ್ವಹಿಸಬೇಕು. ಇವೆಲ್ಲಕ್ಕಾಗಿ ಬಜೆಟ್ ಅನುದಾನ ಇರುತ್ತದಲ್ಲದೆ ಬಾಂಡ್‌ಗಳನ್ನು ಮಾರಿ ಸಾಲ ಎತ್ತುವ ಅಽಕಾರವೂ ಇದೆ. ಖಾಸಗಿಯವರ ಪಾಲುದಾರಿಕೆಯಲ್ಲಿ ರಸ್ತೆ ಆಸ್ತಿಗಳ ನಗದೀಕರಣವೂ (ಟೋಲ್ ಸಂಗ್ರಹ) ಪೂರಕವಾಗಿ ನಡೆಯುತ್ತಿತ್ತು.

ಇದೇ ಸಮಯದಲ್ಲಿ ಹುಟ್ಟಿದ್ದು ಉತ್ತರ-ದಕ್ಷಿಣ ಮತ್ತು ಪೂರ್ವ-

ಪಶ್ಚಿಮಗಳ ನಡುವೆ ದೇಶದ ಉದ್ದಗಲಕ್ಕೂ ‘ಸುವರ್ಣ ಸಂಪರ್ಕ’ ಪರಿಕಲ್ಪನೆ. ಆಗ ಈ ಹೆದ್ದಾರಿಗಳ ನಿರ್ಮಾಣ ಮತ್ತು ವಿಸ್ತರಣೆ ಇನ್ನೂ ಹೆಚ್ಚು ತೀವ್ರಗೊಂಡಿತು. ರಾಷ್ಟ್ರೀಯ ಹೆದ್ದಾರಿಗಳ ಜಾಲಕ್ಕೆ ಹೆಚ್ಚು ಶಕ್ತಿ ತುಂಬಲಾಯಿತು. ಪೂರ್ವೋತ್ತರ ರಾಜ್ಯಗಳ ರಾಜಧಾನಿಗಳೂ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ರಾಜಧಾನಿಗಳನ್ನೂ ರಾಷ್ಟ್ರೀಯ ಹೆದ್ದಾರಿಗಳಿಂದ ಜೋಡಿಸಲಾಗಿದೆ. ಇದರಿಂದ ರಸ್ತೆ ಪ್ರಯಾಣದ ಅವಽಯೂ ಕಡಿಮೆಯಾಗಿದೆ. ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿ ಮೂಲ ಸೌಲಭ್ಯ ನಿರ್ಮಾಣವಾಗಿದೆ.

ಆಗ ‘ಗ್ರಾಮ ಸಡಕ್’ ಯೋಜನೆಯೂ ಆರಂಭವಾಗಿ ಹೆದ್ದಾರಿಗಳ ಉಪಯುಕ್ತತೆ ಹೆಚ್ಚುವಂತಾಯಿತು. ಪ್ರತಿಯೊಂದು ಹಳ್ಳಿಗೂ ವಾಹನ ಓಡಾಟಕ್ಕೆ ಯೋಗ್ಯವಾದ ಪಕ್ಕಾ ರಸ್ತೆ ನಿರ್ಮಾಣ ಮಾಡುವುದಲ್ಲದೆ ಅದನ್ನು ಜಿಲ್ಲಾ ಪ್ರಮುಖ ರಸ್ತೆಗೆ ಜೋಡಿಸುವ ಕೆಲಸವು ಮುಂದುವರಿಯುತ್ತಿದೆ. ಜಿಲ್ಲಾ ರಸ್ತೆಗಳನ್ನು ಮತ್ತು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಿಗೆ ಜೋಡಿಸಿ ಜನ ಸಂಚಾರ ಮತ್ತು ಸರಕು ಸಾಗಣೆಗೆ ಅನುಕೂಲ ಕಲ್ಪಿಸುವಂತಾಯಿತು. ರೈತರ ಉತ್ಪನ್ನಗಳು ದೊಡ್ಡ ಪೇಟೆಗಳಿಗೆ ಕಡಿಮೆ ವೇಳೆಯಲ್ಲಿ ತಲುಪುವಂತಾಯಿತು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಯೋಜನೆಯಿಂದಲೂ (ನರೇಗಾದಿಂದಲೂ) ಈ ಕಾರ್ಯದಲ್ಲಿ ಅನುಕೂಲವಾಯಿತು. ದೂರದ ಗುಡ್ಡಗಾಡು ಪ್ರದೇಶದಲ್ಲಿರುವ ಸಣ್ಣ ಹಳ್ಳಿಗೂ ಸಮೀಪದ ದೊಡ್ಡ ಗ್ರಾಮ ಅಥವಾ ಪಟ್ಟಣದೊಡನೆ ಪಕ್ಕಾ ರಸ್ತೆಯಿಂದ ಜೋಡಿಸುವ ಕೆಲಸ ಯಶಸ್ವಿಯಾಗಿ ಮುಂದುವರಿದಿದೆ.

೨೦೨೩-೨೪ರಲ್ಲಿ ೧೪೦೦೦ ಕಿ.ಮೀ. ಹೈವೇ ನಿರ್ಮಾಣ ಗುರಿ ಹೊಂದಲಾಗಿದೆ ಎಂದು ಅಧಿಕೃತ ವರದಿ ಹೇಳುತ್ತದೆ ಹಾಲಿ ಹಣಕಾಸು ವರ್ಷದಲ್ಲಿ ೧.೯೯ ಲಕ್ಷ ಕೋಟಿ ರೂ.ಗಳ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಲಾಗಿತ್ತು. ಮುಂಬರುವ ಬಜೆಟ್‌ನಲ್ಲಿ ೨.೧೦ ಲಕ್ಷ ಕೋಟಿ ರೂ.ಗಳನ್ನು ನಿರೀಕ್ಷಿಸಲಾಗಿದೆ. ಟೋಲ್ ಸಂಗ್ರಹದಿಂದಲೂ ಒಂದಿಷ್ಟು ಹೆಚ್ಚು ಸಂಪನ್ಮೂಲ ಸಿಗುವ ನಿರೀಕ್ಷೆ ಇದೆ.

ನಿರ್ಮಾಣ ಮತ್ತು ಪಥ ವಿಸ್ತರಣೆ (ಅಗಲೀಕರಣ) ಕಾರ್ಯಗಳು ಹೆಚ್ಚಾಗಿ ಆರಂಭಿಸಲಾಗುತ್ತಿರುವುದಾದರೂ ನಿಗದಿತ ಸಮಯದಲ್ಲಿ ಪೂರ್ಣಗೊಂಡು ಸಂಚಾರಕ್ಕೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗುವುದು ವಿಳಂಬವಾಗುತ್ತಿದೆ. ಇದು ಅನನುಕೂಲವಷ್ಟೇ ಅಲ್ಲದೆ ದಿನೇ ದಿನೇ ವೆಚ್ಚಗಳು ಹೆಚ್ಚುವ ಅಪಾಯವಿದೆ. ಇದನ್ನು ತಪ್ಪಿಸಬೇಕು. ಇನ್ನೊಂದು ಆತಂಕವೆಂದರೆ ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಶೇ.೪೦ ರಷ್ಟು ಹೈವೇಗಳ ಮೇಲೆ ಆಗುತ್ತವೆ. ಇದಕ್ಕೆ ನಿರ್ಮಾಣ ದೋಷವೂ ಕಾರಣವಿದ್ದೀತು ಅದನ್ನು ಗಮನಿಸಲಿ.

andolanait

Recent Posts

ಓದುಗರ ಪತ್ರ: ರೈಲು ನಿಲ್ದಾಣದಲ್ಲಿ ಪ್ರೀಪೇಯ್ಡ್  ಆಟೋ ಕೌಂಟರ್ ಆರಂಭಿಸಿ

ಮೈಸೂರು ರೈಲು ನಿಲ್ದಾಣದಲ್ಲಿ ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸುವ ಪ್ರೀಪೇಯ್ಡ್ ಆಟೋ ಕೌಂಟರ್ ಇಲ್ಲದೆ ಬೆಳಗಿನ ಜಾವ ಬೇರೆ ಊರುಗಳಿಂದ…

3 hours ago

ಓದುಗರ ಪತ್ರ: ನ್ಯಾಯಾಂಗದ ಬಗ್ಗೆ ಗೌರವ ಮೂಡಿಸಿ

ಕೇಂದ್ರೀಯ ಪಠ್ಯಕ್ರಮದ (ಎನ್ ಸಿಇಆರ್ ಟಿ) ೮ನೇ ತರಗತಿಯ ಪಠ್ಯ ಪುಸ್ತಕದಲ್ಲಿ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲೂ ಭ್ರಷ್ಟಾಚಾರ ಇದೆ…

3 hours ago

ಓದುಗರ ಪತ್ರ: ಅಂಬೇಡ್ಕರ್ ಸಮುದಾಯ ಭವನ ಅಭಿವೃದ್ಧಿಪಡಿಸಿ

ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಡಾ.ಬಿ .ಆರ್.ಅಂಬೇಡ್ಕರ್ ಸಮುದಾಯ ಭವನವನ್ನು ಅಂದಿನ ಸಚಿವರಾಗಿದ್ದ ಶ್ರೀನಿವಾಸ ಪ್ರಸಾದ್…

3 hours ago

ಓದುಗರ ಪತ್ರ: ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಿ

ಸರಗೂರು ತಾಲ್ಲೂಕಿನ ಮುಳ್ಳೂರು, ಚಾಮಲಾಪುರ, ಕುಂದೂರು, ಕಲ್ಲಂಬಾಳು, ನಂಜೀಪುರ, ಕಟ್ಟೆಹುಣಸೂರು ಈ ಗ್ರಾಮಗಳ ಮಾರ್ಗವಾಗಿ ಹೆಚ್ಚಿನ ಸರ್ಕಾರಿ ಬಸ್ಸುಗಳ ಸಂಚಾರವಿಲ್ಲದೆ…

3 hours ago

ದಿ ಕೇರಳ ಸ್ಟೋರಿ-2 : ಸತ್ಯ V/S ಅಜೆಂಡಾ..!

ವಿವಾದಾಸ್ಪದ ‘ದಿ ಕೇರಳ ಸ್ಟೋರಿ-೨ ಗೋಸ್ ಬಿಯಾಂಡ್’ ಚಲನಚಿತ್ರ ಪ್ರದರ್ಶನಕ್ಕೆ ಕೇರಳದ ಹೈಕೋರ್ಟ್‌ನ ವಿಭಾಗೀಯ ಪೀಠ ಶುಕ್ರವಾರ ಹಸಿರು ನಿಶಾನೆ…

3 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಕಾವೇರುತ್ತಿರುವ ತಮಿಳುನಾಡು ವಿಧಾನಸಭೆ ಚುನಾವಣೆ

ತಮಿಳುನಾಡಿನಲ್ಲಿ ಬೇಸಿಗೆಯ ಸುಡು ಬಿಸಿಲಿಸಿನ ನಡುವೆ ವಿಧಾನಸಭೆಯ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದೆ. ಚುನಾವಣೆಯು ಏಪ್ರಿಲ್ ಕೊನೆಯ ವಾರದೊಳಗೆ…

3 hours ago