ಎಡಿಟೋರಿಯಲ್

ಮಾನ್ಸೂನ್ ತಡವಾಗಿ ಬಂದಿದ್ದರೂ ಗಾಬರಿ ಬೇಕಿಲ್ಲ

  • ಪ್ರೊ.ಆರ್.ಎಂ.ಚಿಂತಾಮಣಿ

ಇದು ನಮ್ಮ ಹವಾಮಾನ ಇಲಾಖೆಯು ಕೊಟ್ಟಿರುವ ಭರವಸೆ. ಸಾಮಾನ್ಯವಾಗಿ ಜೂನ್ ಒಂದರಂದು ಕೇರಳ ಕರಾವಳಿಯನ್ನು ತಲುಪುತ್ತಿದ್ದ ನೈಋತ್ಯ ಮಾನ್ಸೂನ್ ಮಾರುತಗಳು ಒಂದು ವಾರ ತಡವಾಗಿ ಜೂ.8ರಂದು ತಲುಪಿವೆ. ಈ ನಡುವೆ ‘ಬಿಪರ್ ಜಾಯ್’ ಚಂಡಮಾರುತ ಬೇರೆ ಅಡ್ಡ ಬಂದು ಮಾನ್ಸೂನ್ ಮುನ್ನಡೆಗೆ ತಡೆಯೊಡ್ಡಿತು. ಇದರಿಂದಾಗಿ ಇಲ್ಲಿಯವರೆಗೆ ದೇಶದಲ್ಲಿ ವಾಡಿಕೆಯಂತೆ ಬೀಳಬೇಕಾಗಿದ್ದ ಮುಂಗಾರು ಮಳೆ ಕಡಿಮೆ ಪ್ರಮಾಣದಲ್ಲಿ ಬಿದ್ದಿದೆ. ಈ ತಿಂಗಳ ೨೧ರವರೆಗೆ ದೇಶಾದ್ಯಂತ ಜೂನ್ ತಿಂಗಳಲ್ಲಿ ವಾಡಿಕೆಯಂತೆ ಬೀಳಬೇಕಾಗಿದ್ದ ಮಳೆಗಿಂತ ಶೇ.33ರಷ್ಟು ಕಡಿಮೆ ಮಳೆ ಬಿದ್ದಿದೆ ಎಂದು ಅಧಿಕೃತ ವರದಿಗಳು ಹೇಳುತ್ತಿವೆ. ಈಗ ಕಳೆದ ವಾರಾಂತ್ಯದಿಂದ ಎಲ್ಲ ಕಡೆಗೂ ಮಳೆ ಚೆನ್ನಾಗಿ ಸುರಿಯುತ್ತಿದೆ ಎಂದು ವಿವಿಧ ಮೂಲಗಳಿಂದ ವರದಿಗಳು ಬರುತ್ತಿವೆ. ಮುಂದೂಡಲ್ಪಟ್ಟಿದ್ದ ಮುಂಗಾರು ಬಿತ್ತನೆ ಕೆಲಸಗಳು ಭರದಿಂದ ಮುನ್ನಡೆಯುತ್ತಿವೆ ಎಂದೂ ಗೊತ್ತಾಗಿದೆ. ಆದರೂ ಜಲಾನಯನ ಪ್ರದೇಶಗಳಲ್ಲಿ ಸಾಕಷ್ಟು ಮಳೆ ಬೀಳದೇ ಇರುವುದರಿಂದ ಜಲಾಶಯಗಳ ನೀರಿನ ಮಟ್ಟ ಆತಂಕಕಾರಿ ಸ್ಥಿತಿಗೆ ಇಳಿದಿದೆ ಎನ್ನುವುದನ್ನೂ ಗಮನಿಸಬೇಕಾಗುತ್ತದೆ.

ಸಾಮಾನ್ಯ ಮಳೆಗಾಲದ ನಿರೀಕ್ಷೆಯಲ್ಲಿ

ನಮ್ಮ ದೇಶದಲ್ಲಿ ವರ್ಷದಲ್ಲಿ ಬೀಳುವ ಒಟ್ಟು ಮಳೆಯಲ್ಲಿ ಶೇ.74-78ರಷ್ಟು ಮಳೆ ನೈಋತ್ಯ ಮಾನ್ಸೂನ್‌ನ ನಾಲ್ಕು ತಿಂಗಳ ಅವಧಿಯಲ್ಲೇ ಬರುತ್ತದೆ. ಉಳಿದದ್ದು ಮಾನ್ಸೂನ್ ಪೂರ್ವ, ಈಶಾನ್ಯ ಮಾನ್ಸೂನ್ ಮತ್ತು ನಂತರದ ದಿನಗಳಲ್ಲಿ. ಹಿಂದಿನ 50 ವರ್ಷಗಳಲ್ಲಿ ಬಿದ್ದ ಮಳೆಯ ಮೊತ್ತಗಳನ್ನು ತೆಗೆದುಕೊಂಡು ಚಲನಶೀಲ ಸರಾಸರಿ (moving average ) ಆಧಾರದ ಮೇಲೆ ದೀರ್ಘಾವಧಿ ಸರಾಸರಿ (long period average) ಮಳೆಯನ್ನು ಲೆಕ್ಕ ಹಾಕಲಾಗುತ್ತದೆ. ಇದರಂತೆ ಈ ವರ್ಷ ನೈಋತ್ಯ ಮಾನ್ಸೂನ್ ತಿಂಗಳುಗಳಲ್ಲಿ ವಾಡಿಕೆಯ 886 ಮಿಲಿ ಮೀಟರ್ ಮಳೆ ಎಂದು ಹವಾಮಾನ ಇಲಾಖೆ ಹೇಳುತ್ತದೆ. ಇದಕ್ಕೆ ಶೇ.4ರಷ್ಟು ಹೆಚ್ಚು ಅಥವಾ ಕಡಿಮೆ ಮಳೆ ಬಿದ್ದರೂ ಅದು ಸಾಮಾನ್ಯ ಮಳೆ ಎಂದು ಪರಿಗಣಿಸಲಾಗುತ್ತದೆ. ಅತಿವೃಷ್ಟಿ ಅನಾವೃಷ್ಟಿ ನಂತರದ ಸ್ಥಿತಿಗಳು.

ಪ್ರತಿ ತಿಂಗಳು ಬೀಳುವ ಮಳೆ ದಾಖಲೆಗಳ ಆಧಾರದ ಮೇಲೆ ಆಯಾ ತಿಂಗಳ ವಾಡಿಕೆಯಂತೆ (ಸಾಮಾನ್ಯವಾಗಿ) ಬೀಳುವ ಮಳೆಯ ಪ್ರಮಾಣವನ್ನು ನಿರ್ಧರಿಸ ಲಾಗುವುದು. ಇದರೊಡನೆ ಆಯಾ ತಿಂಗಳುಗಳಲ್ಲಿ ಆಯಾ ವರ್ಷ ಬೀಳುವ ಮಳೆಯನ್ನು ಹೋಲಿಸಲಾಗುತ್ತದೆ.

ದೇಶದ 716 ಜಿಲ್ಲೆಗಳಲ್ಲಿರುವ 2100ಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳಲ್ಲಿನ ದಾಖಲೆಗಳ ಪ್ರಕಾರ ಈ ತಿಂಗಳ 21ರವರೆಗೆ ಶೇ.47ರಷ್ಟು ಕೇಂದ್ರಗಳು ವಾಡಿಕೆಗಿಂತ ಕಡಿಮೆ ಮಳೆ ಬಿದ್ದ ಬಗ್ಗೆ ವರದಿ ಮಾಡಿವೆ. ಇದರಲ್ಲಿ ಎಣ್ಣೆ ಕಾಳುಗಳು, ಬೇಳೆ ಕಾಳುಗಳು ಮತ್ತು ಭತ್ತ ಬೆಳೆಯುವ ಉತ್ತರ ಭಾರತದ ಬಹುತೇಕ ಕೃಷಿ ಪ್ರಧಾನ ರಾಜ್ಯಗಳು ಸೇರಿಕೊಂಡಿವೆ. ಮುಂದಿನ ದಿನಗಳಲ್ಲಿ ಹೆಚ್ಚು ಮಳೆ ಬರಲಿದೆ ಎಂಬ ಹವಾಮಾನ ಇಲಾಖೆಯ ಅಂದಾಜುಗಳಂತೆ ಕೃಷಿ ಇಲಾಖೆಗಳು ರೈತರಿಗೆ ಬಿತ್ತನೆ ಯನ್ನು ಸ್ಪಲ್ಪ ದಿವಸ ಮುಂದೂಡಬೇಕೆಂದು ಸಲಹೆ ನೀಡಿರುತ್ತವೆ. ನಿರೀಕ್ಷೆಗೆ ಕಾರಣಗಳನ್ನೂ ಕೊಡಲಾಗಿದೆ.

ಈ ಐದೂ ವರ್ಷಗಳಲ್ಲಿ ದೇಶದಲ್ಲಿ ಒಟ್ಟಾರೆ ನೈಋತ್ಯ ಮಾನ್ಸೂನ್ ಅವಧಿ ಯಲ್ಲಿ 2018ರಲ್ಲಿ ಮಾತ್ರ ದೀರ್ಘಾವಧಿ ಸರಾಸರಿಗಿಂತ ಶೇ.7.4ರಷ್ಟು ಕಡಿಮೆ ಮಳೆಯಾಗಿದ್ದು, ಉಳಿದ ನಾಲ್ಕು ವರ್ಷಗಳಲ್ಲಿ ಅನುಕ್ರಮವಾಗಿ ಶೇ.11, ಶೇ.10.5, ಶೇ.0.4 ಮತ್ತು ಶೇ.6.5 ಹೆಚ್ಚು ಮಳೆ ಬಿದ್ದದ್ದು ದಾಖಲೆಗಳಿಂದ ತಿಳಿಯುತ್ತದೆ. ಇನ್ನೊಂದು ವಿಶೇಷವೆಂದರೆ ಮಳೆ ಹೆಚ್ಚು ಬಿದ್ದಿರುವ ನಾಲ್ಕು ವರ್ಷಗಳ ಪೈಕಿ ಎರಡು ವರ್ಷಗಳಲ್ಲಿ (2019 ಮತ್ತು 2022) ಜೂನ್ ತಿಂಗಳಲ್ಲಿ ಕಡಿಮೆ (ಶೇ.31.3 ಮತ್ತು ಶೇ.7.9) ಮಳೆ ಸುರಿದಿತ್ತು.

ಎಲ್ ನೈನೊ ಪ್ರಭಾವ ಕಡಿಮೆಯಂತೆ

ಈ ಮೊದಲು ಮೇ ಮೊದಲ ವಾರದಲ್ಲಿ ಖಾಸಗಿ ಹವಾಮಾನ ಅಧ್ಯಯನ ಸಂಸ್ಥೆ ಸ್ಕೆ ಮೆಟ್ ತನ್ನ ಪೂರ್ವಭಾವಿ ಅಂದಾಜುಗಳನ್ನು ಪ್ರಕಟಿಸುವಾಗ ಈ ವರ್ಷ ‘ಎಲ್ ನೈನೊ’ ಹವಾಮಾನ ವೈಪರೀತ್ಯ ಉಂಟಾಗುವ ಸಾಧ್ಯತೆ ಹೆಚ್ಚಾಗಿದ್ದು, ಅದರ ಪ್ರಭಾವದಿಂದ ನಮ್ಮಲ್ಲಿ ಹೆಚ್ಚು ಮಳೆ ಬೀಳುವ ಜುಲೈ ಮತ್ತು ಆಗಸ್ಟ್ ತಿಂಗಳುಗಳ ಮಳೆಯ ಪ್ರಮಾಣ ಕಡಿಮೆಯಾಗಬಹುದೆಂದು ಶಂಕೆ ವ್ಯಕ್ತಪಡಿಸಿತ್ತು. ಮರುದಿನವೆ ನಮ್ಮ ಹವಾಮಾನ ಇಲಾಖೆ ಪ್ರಕಟಣೆ ಹೊರಡಿಸಿ ಅಂಥ ಸಾಧ್ಯತೆಗಳು ತೀರಾ ಕಡಿಮೆ (ಇಲ್ಲ ಎನ್ನುವಷ್ಟು) ಇದ್ದು, ಸಾಮಾನ್ಯ ಮಳೆಗಾಲವಿರಲಿದೆ ಎಂದು ಹೇಳಿತ್ತು. ಈಗಲೂ ನಮ್ಮ ಹವಾಮಾನ ತಜ್ಞರು ‘ಒಂದು ವೇಳೆ ಎಲ್‌ನೈನೊ ಸಂಭವಿಸಿದರೂ ಅದರಿಂದ ನಮ್ಮ ಮಳೆಗಾಲದ ಮೇಲೆ ಪ್ರಭಾವ ತೀರಾ ಕಡಿಮೆ ಇರಲಿದೆ’ ಎಂದು ಸಮರ್ಥಿಸಿಕೊಳ್ಳುತ್ತಾರೆ. ಅದಕ್ಕೆ ವಿರುದ್ಧವಾಗಿ ಅರಬ್ಬಿ ಸಮುದ್ರದಲ್ಲಿ ವಿಶಿಷ್ಟ ಉಷ್ಣಾಂಶದ ಹವಾಮಾನ ಬದಲಾವಣೆ ಉಂಟಾಗಿ ಅದರ ಪರಿಣಾಮ ಕಡಿಮೆಯಾಗುವಂತೆ ಮಾಡುತ್ತದೆ ಎಂದೂ ಹೇಳಲಾಗುತ್ತದೆ. ಅಂತೂ ನಿರೀಕ್ಷೆಯಂತೆ ಸಾಮಾನ್ಯ ಮಳೆಗಾಲವಿರಲಿದೆ ಎನ್ನೋಣ.

ಎಲ್‌ನೈನೊ ಮತ್ತು ಲಾ ನೀನಾಗಳು (ಸ್ಪಾ ನಿಶ್ ಭಾಷೆಯಲ್ಲಿ ‘ಚಿಕ್ಕ ಹುಡುಗ ಮತ್ತು ಚಿಕ್ಕ ಹುಡುಗಿ’) ಒಂದಕ್ಕೊಂದು ಹವಾಮಾನ ವೈಪರೀತ್ಯಗಳಾಗಿದ್ದು, ಶಾಂತ ಸಾಗರದಲ್ಲಿ ಉಷ್ಣ ಮತ್ತು ಶೀತಗಾಳಿಗಳು ಉದ್ಭವಿಸುವುದರಿಂದ ಉಂಟಾಗುತ್ತವೆ. ಮೊದಲನೆಯದ್ದರಿಂದ ಪೆರು ದೇಶದಿಂದ ಭಾರತ ಉಪ ಖಂಡದವರೆಗೆ ಜುಲೈ,ಆಗಸ್ಟ್‌ನಲ್ಲಿ ಮಳೆ ಕಡಿಮೆಯಾಗುವಂತೆ ಪರಿಣಾಮ ವಾಗುತ್ತದೆ. ಎರಡನೆಯದ್ದರಿಂದ ಈ ಪ್ರದೇಶಗಳಲ್ಲಿ ಹೆಚ್ಚು ಮಳೆ ಬೀಳುವಂತೆ ಆಗುತ್ತದೆ.

ಒಂದು ಮಾತು : ಪರಿಸರ ವಿಜ್ಞಾನಿಗಳು ಮತ್ತು ನಿಸರ್ಗ ಪ್ರೇಮಿಗಳ ಪ್ರಕಾರ ಅತಿಯಾದ ಕಾರ್ಬನ್ ವಾತಾವರಣಕ್ಕೆ ಸೇರುವುದರಿಂದ ನಮ್ಮ ಭೂಮಂಡಲಕ್ಕೆ ಅಂಟಿರುವ ‘ಜಾಗತಿಕ ಬಿಸಿಯಾಗುವಿಕೆ’ಯ ರೋಗದಿಂದ ಈ ಎಲ್ಲ ಹವಾ ಮಾನ ವೈಪರೀತ್ಯಗಳು, ಅಕಾಲಿಕ ಚಂಡಮಾರುತಗಳು, ಅತಿವೃಷ್ಟಿ ಮತ್ತು ಬರ ಗಾಲಗಳು ಮುಂತಾದ ನೈಸರ್ಗಿಕ ವಿಪತ್ತುಗಳು ಮೇಲಿಂದ ಮೇಲೆ ಬರುತ್ತಿವೆ. ಇವುಗಳನ್ನು ತಪ್ಪಿಸಲು ನಮ್ಮ ಆರ್ಥಿಕ, ಸಾಮಾಜಿಕ ಅಭಿವೃದ್ಧಿಯ ದಿಕ್ಕನ್ನು ಬದಲಿಸಿ ‘ಪರಿಸರ ಸ್ನೇಹಿ’ ನೀತಿಗಳನ್ನು ರೂಪಿಸಬೇಕೆಂಬುದು ಬಹುತೇಕ ಎಲ್ಲ ತಜ್ಞರ ಅಭಿಪ್ರಾಯವಾಗಿದೆ.

lokesh

Recent Posts

ಓದುಗರ ಪತ್ರ: ಮಹಿಳಾ ಪೌರಕಾರ್ಮಿಕರಿಗೆ ರೇಷ್ಮೆ ಸೀರೆ ವಿತರಣೆ ಶ್ಲಾಘನೀಯ

ಮೈಸೂರು ದಸರಾ ನಿಮಿತ್ತ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಈ ಬಾರಿ ತಲಾ ಎರಡು ಬನಾರಸ್ ರೇಷ್ಮೆ…

12 hours ago

ಓದುಗರ ಪತ್ರ: ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಖಂಡನೀಯ

ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ಸಂಸತ್ ಚಲೋ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಪ್ರಹಾರ…

12 hours ago

ಓದುಗರ ಪತ್ರ: ಸದ್ದಿಲ್ಲದೇ ನೀರಿನ ದರ ಏರಿಸಿದ ಪಾಲಿಕೆ

ಮೈಸೂರು ಮಹಾನಗರ ಪಾಲಿಕೆ ಕಳೆದ ತಿಂಗಳಿನಿಂದ ನಗರದ ನೀರು ಬಳಕೆ ಶುಲ್ಕವನ್ನು ಸದ್ದಿಲ್ಲದೇ ಏರಿಸಿದೆ. ಇದರ ಜೊತೆಗೆ ಒಳ ಚರಂಡಿ…

12 hours ago

ಆಧುನೀಕರಣದ ಭರದಲ್ಲಿ ಮೈಸೂರಿನ ಪ್ರಕೃತಿಗೆ ಧಕ್ಕೆ?

ಡಾ.ಎನ್.ಉಷಾ ಅಭಿವೃದ್ಧಿ- ಪರಂಪರೆ ಸಂರಕ್ಷಣೆ ಪರಸ್ಪರ ವಿರೋಧ ಆಗಬೇಕಿಲ್ಲ  ‘ಅರಮನೆಗಳ ನಗರ’ ಮತ್ತು ಕರ್ನಾಟಕದ ಸಾಂಸ್ಕೃತಿಕ ರಾಜ ಧಾನಿ ಎಂದು…

12 hours ago

ದಸರಾ ವೇಳೆಗೆ ಹುರಾ ಭಾಗದ ಕೆರೆಗಳಿಗೆ ನೀರು

ಎಸ್.ಎಸ್.ಭಟ್ ನಂಜನಗೂಡು: ಶಾಸಕ ದರ್ಶನ್ ಧ್ರುವನಾರಾಯಣ ಅವರ ಸಂಕಲ್ಪ  ನಂಜನಗೂಡು: ತಾಲ್ಲೂಕಿನ ೨೬ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಹುರಾ…

12 hours ago