ಎಡಿಟೋರಿಯಲ್

ಮೊಯ್ ಮೊಯ್ ‘ಪುಟ್ಟ ತಂಗಿ’ ಈಗ ಎಲ್ಲರ ದೊಡ್ಡಕ್ಕ

ಉತ್ತರಖಂಡದ ಡೆಹ್ರಾಡೂನಿನ ಘರವಾಲ್ ಎಂಬಲ್ಲಿನ ಒಂದು ಫುಟ್‌ಪಾತ್ ಪಕ್ಕದಲ್ಲಿ 1989ರ ನವೆಂಬರ್ 1ರಂದು ಹುಟ್ಟಿದ ಮೊಯ್ ಮೊಯ್ ತನ್ನ ಹೆತ್ತವರ ಹದಿಮೂರನೇ ಸಂತಾನ. ಮೊಯ್ ಮೊಯ್ ಎಂಬುದು ಚೀನಾದ ಕ್ಯಾಂಟೊನಿಸ್ ಭಾಷೆಯ ಶಬ್ದ. ಇದರರ್ಥ ‘ಪುಟ್ಟ ತಂಗಿ’ ಅಂತ. ಅವಧಿ ತುಂಬುವ ಮೂರು ತಿಂಗಳು ಮೊದಲೇ ಹುಟ್ಟಿದ ‘ಪ್ರಿಮೆಚುರ್’ ಕೂಸಾದ ಮೊಯ್ ಮೊಯ್, ಹೆತ್ತವರಿಗೆ ಬೇಡವಾಗಿ ಬಡತನ, ವೈದ್ಯಕೀಯ ನಿರ್ಲಕ್ಷ್ಯತನದಿಂದಾಗಿ ಗರ್ಭಪಾತ ಕ್ಕೊಳಗಾಗಬೇಕಿತ್ತು. ಆದರೆ, ಏನೇನೋ ಘಟನೆಗಳು ನಡೆದು, ಜನ್ಮತಳೆದು ಬದುಕುಳಿದಳು. ಅವಧಿಗೆ ಮೊದಲೇ ಹುಟ್ಟಿದವಳಾದುದರಿಂದ ಆರೋಗ್ಯದ ಸಮಸ್ಯೆ ಹುಟ್ಟಿನಿಂದಲೇ ಜೊತೆಯಾಗಿತ್ತು. ಆದರೂ, ನಾಲ್ಕು ವರ್ಷ ತುಂಬುವ ತನಕ ಅವಳಿಗೆ ಗಂಭೀರ ರೂಪದ ಸಮಸ್ಯೆಗಳು ಕಾಡಲಿಲ್ಲ. ಎಲ್ಲ ಮಕ್ಕಳಂತೆ ಆಟೋಟಗಳಲ್ಲಿ ತೊಡಗಿ, ತಮಾಷೆ ಮಾಡುತ್ತ ಸುತ್ತಲಿನವರನ್ನು ನಗಿಸುತ್ತಿದ್ದಳು, ಖುಷಿ ಪಡಿಸುತ್ತಿದ್ದಳು. ಒಂದು ತಣ್ಣಗಿನ ಆದಿತ್ಯವಾರದಂದು ಚರ್ಚ್‌ನೊಳಗೆ ಧಾರ್ಮಿಕ ಪ್ರವಚನ ನಡೆಯುತ್ತಿದ್ದಾಗ ‘ಗರಂ ಚಾಯ್’ ಎಂದು ಜೋರಾಗಿ ಕೂಗಿ ಇಡೀ ಚರ್ಚನ್ನು ನಗೆಗಡಲಲ್ಲಿ ಮುಳುಗಿಸಿದ್ದಳು.

ಆದರೆ, ಅವಳ ಐದನೇ ವರ್ಷದಲ್ಲಿ ಅವಳಿಗೆ ದೇಹದ ಬೆಳವಣಿಗೆಯನ್ನು ತೀವ್ರವಾಗಿ ಅಸ್ತವ್ಯಸ್ತಗೊಳಿಸುವ ‘ಸೆರೆಬ್ರಲ್ ಪಾಲ್ಸಿ’ ಕಾಯಿಲೆ ಇರುವುದು ಪತ್ತೆಯಾಯಿತು. ಬರಬರುತ್ತ ಅವಳು ಮೌನವಾಗತೊಡಗಿದಳು. ಅವಳ ಬಾಯಿಂದ ಮಾತುಗಳು ಹೊರಳುವುದು ನಿಂತಿತು. ಅವಳ ಕಾಲುಗಳು ನಡೆಯುವುದನ್ನು ನಿಲ್ಲಿಸಿದವು. ಉಣ್ಣುವುದು, ತಿನ್ನುವುದು ನಿಂತಿತು. ಎಷ್ಟೆಂದರೆ, ಬಾಯೊಳಗೆ ಆಹಾರವಿಟ್ಟರೂ ನುಂಗುವುದಕ್ಕೆ ಆಗದಷ್ಟು. ಬರು ಬರುತ್ತ ಮಗುವಿಗಿಂತಲೂ ಚಿಕ್ಕವಳಾದಳು. ನಳಿಕೆಯನ್ನು ಸಿಕ್ಕಿಸಿ ಅದರ ಮೂಲಕ ಅವಳ ಹೊಟ್ಟೆಗೆ ನೇರವಾಗಿ ಆಹಾರವನ್ನು ಇಳಿಸಬೇಕಾಯಿತು. ಡಾಕ್ಟರು ಅವಳು ಇನ್ನೊಂದು 5 ವರ್ಷ ಬದುಕಬಹುದು ಅಂದರು. ಆದರೆ, ಮೊಯ್ ಮೊಯ್ ೩೮ ವರ್ಷ ಬದುಕಿ, 2018ರ ಜುಲೈ 30ರಂದು ತೀರಿಕೊಂಡಳು. ಆದರೆ, ಆಕೆ ಸುಮ್ಮನೆ ಸಾಯಲಿಲ್ಲ. ತನ್ನಂತಹ ಸಾವಿರಾರು ವಿಶೇಷಚೇತನ ಮಕ್ಕಳಿಗೆ ಗೌರವಯುತ ನೆಲೆ, ಭರವಸೆಯ ಬದುಕನ್ನು ಕಟ್ಟಿಕೊಡುವ ‘ಲತಿಕಾ ಫೌಂಡೇಶನ್’ ಎಂಬ ಒಂದು ಸಾಮಾಜಿಕ ಸಂಸ್ಥೆಯು ಹುಟ್ಟಲು ಸ್ಛೂರ್ತಿಯಾಗಿ ತೀರಿಕೊಂಡಳು.

ಅಮೆರಿಕದಲ್ಲಿ ಉದ್ಯೋಗ ಮಾಡಿಕೊಂಡಿದ್ದ ಜೋ ಮ್ಯಾಕ್‌ಗೊವನ್ ಮತ್ತು ರವಿ ಚೋಪ್ರಾ ದಂಪತಿ ಭಾರತಕ್ಕೆ ಬಂದು, ಡೆಹ್ರಾಡೂನ್‌ನಲ್ಲಿ ನೆಲೆಸಿದಾಗ ಎಷ್ಟು ಕಾಲ ಅಲ್ಲಿರುತ್ತೇವೆ ಎಂದು ಅವರಿಗೆ ಅನುಮಾನವಿತ್ತು. ರಿಸರ್ಚ್ ವಿಜ್ಞಾನಿಯಾದ ರವಿ ಚೋಪ್ರಾ ಭಾರತೀಯರು. ಅವರು ಅಮೆರಿಕದ ‘ಪೀಪಲ್ಸ್ ಸೈನ್ಸ್ ಇನ್‌ಸ್ಟಿಟ್ಯೂಟ್’ನ ಡೈರೆಕ್ಟರ್ ಆಗಿ ನಿವೃತ್ತಿಯಾಗಿದ್ದರು. ಅವರ ಹೆಂಡತಿ ಜೋ ಮ್ಯಾಕ್‌ಗೊವನ್ ಅಮೆರಿಕನ್. ಈ ದಂಪತಿಗಳಿಗೆ ಆನಂದ್ ಮತ್ತು ಕ್ಯಾಥಲಿನ್ ಎಂಬ ಇಬ್ಬರು ಮಕ್ಕಳಿದ್ದರು. ಇನ್ನೊಂದು ಮಗುವನ್ನು ದತ್ತು ಪಡೆಯಬೇಕು ಎಂದು ನಿರ್ಧರಿಸಿದಾಗ ಅವರ ಮಡಿಲಿಗೆ ಬಂದವಳೇ ಮೊಯ್ ಮೊಯ್.

ಐದನೇ ವಯಸ್ಸಿನಲ್ಲಿ ಮೊಯ್ ಮೊಯ್‌ಗೆ ಸೆರೆಬ್ರಲ್ ಪಾಲ್ಸಿ ಇರುವುದು ತಿಳಿದಾಗ ಅದರ ಚಿಕಿತ್ಸೆಗೆ ಬೇಕಾದ ವೈದ್ಯಕೀಯ ಹಾಗೂ ಸಾಮಾಜಿಕ ವ್ಯವಸ್ಥೆ ಭಾರತದಲ್ಲಿಲ್ಲ ಎಂಬ ಅಂಶವೂ ಜೋ ಮ್ಯಾಕ್ ಗೊವಾನ್‌ರಿಗೆ ತಿಳಿಯಿತು. ಆಗ ಅವರು, ಮೊಂಟೆಸೆರಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡಿದ ಲತಿಕಾ ರಾಯ್ ಹೆಸರಲ್ಲಿ ಒಂದು ಶಾಲೆಯನ್ನು ಶುರು ಮಾಡುತ್ತಾರೆ. ಆ ಶಾಲೆಯ ಉದ್ದೇಶ ಪ್ರಾರಂಭದಲ್ಲಿ ಮೊಯ್ ಮೊಯ್‌ಗೆ ಸಾಮಾನ್ಯ ಶಿಕ್ಷಣ ಕೊಡುವುದಷ್ಟೇ ಆಗಿತ್ತು. ಆದರೆ, ಮುಂದೆ ಅದರ ವ್ಯಾಪ್ತಿ, ಉದ್ದೇಶಗಳು ಹಿಗ್ಗುತ್ತಾ ಹೋಗಿ ‘ಲತಿಕಾ ರಾಯ್ ಫೌಂಡೇಷನ್’ ಎಂಬ ಹೆಸರಿನಲ್ಲಿ ಒಂದು ಸಾಮಾಜಿಕ ಸಂಸ್ಥೆಯಾಗಿ ಪರಿವರ್ತನೆ ಹೊಂದಿತು. ಇಡೀ ಉತ್ತರ ಭಾರತದಲ್ಲಿ ಲತಿಕಾ ರಾಯ್ ಫೌಂಡೇಷನ್‌ನಂತಹ ಸರ್ಕಾರೇತರ ಸಂಸ್ಥೆ ಇನ್ನೊಂದಿಲ್ಲ.

‘ಲತಿಕಾ ರಾಯ್ ಫೌಂಡೇಷನ್’ನಲ್ಲಿ ಅಂಗವಿಕಲ ಮಕ್ಕಳಿಗಾಗಿ ಏನಿದೆ ಏನಿಲ್ಲ, ನವಜಾತ ಶಿಶುವಿನಿಂದ ಆರು ವರ್ಷದ ತನಕದ ವಿಶೇಷ ಚೇತನ ಮಕ್ಕಳ ಸಮಸ್ಯೆಯನ್ನು ಮೂಲದಲ್ಲೇ ಗುರುತಿಸಿ ಅವುಗಳನ್ನು ನಿವಾರಿಸುವ ಅಥವಾ ಅವುಗಳ ತೀವ್ರತೆಯನ್ನು ಕಡಿಮೆಗೊಳಿಸಲು ‘ಗುಬ್ಬಾರ’ ಎಂಬ ವಿಭಾಗವನ್ನು ನಡೆಸುತ್ತಿದೆ. ಏಳು ವರ್ಷದಿಂದ ಹದಿನಾಲ್ಕು ವರ್ಷ ಪ್ರಾಯದ ಮಕ್ಕಳ ಕಲಿಕೆಗಾಗಿ ಒಂದು ಶಾಲೆ ಮತ್ತು ಹದಿನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ ಔದ್ಯೋಗಿಕ ತರಬೇತಿ ನೀಡಲು ಇನ್ನೊಂದು ಶಾಲೆಯನ್ನು ನಡೆಸುತ್ತಿದೆ. ಇಡೀ ಸಮಾಜವೇ ವಿಶೇಷ ಚೇತನ ಮಕ್ಕಳ ಬಗ್ಗೆ ಯಾವುದೇ ಗಂಭೀರ ಕಾಳಜಿ ತೋರದ ಸಮಯದಲ್ಲಿ ‘ಲತಿಕಾ ರಾಯ್ ಫೌಂಡೇಷನ್’ ಅವರನ್ನು ತನ್ನ ಮನೆಯ ಮಕ್ಕಳಂತೆ ಪ್ರೀತಿ, ವಾತ್ಸಲ್ಯದಿಂದ ಪೋಷಿಸುತ್ತದೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲೂ ಲತಿಕಾ ರಾಯ್ ಫೌಂಡೇಷನ್‌ನ ಕಾರ್ಯಕರ್ತರು ಮಕ್ಕಳ ಮನೆಗಳಿಗೆ ಹೋಗಿ ಅವರ ಸೇವೆ ನಡೆಸಿದರು.

ಈ ಪ್ರಪಂಚದಲ್ಲಿ ಕೇವಲ ಸರ್ವಾಂಗಗಳೂ ಸುಸ್ಥಿತಿಯಲ್ಲಿರುವ ವ್ಯಕ್ತಿಗಳು ಮಾತ್ರವೇ ಅಲ್ಲ, ದುರ್ಬಲ ಅಥವಾ ನ್ಯೂನಗೊಂಡ ಅಂಗಾಂಗಗಳಿರುವ ವ್ಯಕ್ತಿಗಳೂ ಬದುಕು ನಡೆಸುತ್ತಿದ್ದಾರೆ ಎಂದು ಅರಿಯಲು ಅದರ ನೇರ ಅನುಭವವಿರಬೇಕು ಅಥವಾ ಆ ಬಗ್ಗೆ ವಿಶೇಷ ತಿಳಿವಳಿಕೆ ಇರಬೇಕಾಗುತ್ತದೆ. ಸಮಾಜದಲ್ಲಿ ವಿಶೇಷಚೇತನರ ಬದುಕು ತುಸುವಾದರೂ ಸುಧಾರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ‘ಲತಿಕಾ ರಾಯ್ ಫೌಂಡೇಷನ್’ ಅಂತಹ ಒಂದು ವಿಶೇಷ ಸಾಮಾಜಿಕ ಸಂಸ್ಥೆ. ಇದರ ಹುಟ್ಟಿಗೆ ಕಾರಣಳಾದ ಮೊಯ್ ಮೊಯ್ ಎಂಬ ಪುಟ್ಟ ತಂಗಿ ಇಂದು ಅವಳಂತಹ ಸಾವಿರಾರು ವಿಶೇಷ ಚೇತನ ಮಕ್ಕಳಿಗೆ ದೊಡ್ಡಕ್ಕಳಾಗಿ ಇನ್ನೂ ಜೀವಂತವಾಗಿದ್ದಾಳೆ.

andolanait

Recent Posts

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

31 mins ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

35 mins ago

ಅಳಿಯ ಅಲ್ಲ, ಮಗಳ ಗಂಡ!

ಸುರೇಶ ಕಂಜರ್ಪಣೆ ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ…

38 mins ago

ವಿರಾಜಪೇಟೆ: ರಸ್ತೆಯುದ್ದಕ್ಕೂ ಗುಂಡಿಗಳದ್ದೇ ಪಾರಮ್ಯ

ಕಾಂಗೀರ ಬೋಪಣ್ಣ ವಿರಾಜಪೇಟೆ: ತಾಲ್ಲೂಕಿನಲ್ಲಿನ ಮುಖ್ಯರಸ್ತೆಗಳು ವಾಹನಗಳು ಸಂಚರಿಸಲಾರದಷ್ಟು ಹಾಳಾಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ…

42 mins ago

ಇದು ಅಂತ್ಯವಲ್ಲ-ಹೊಸ ಆರಂಭ

ರೇಣುಕಾ ನಿಡುಗುಂದಿ ಜಂತರ್ ಮಂತರ್‌ನಲ್ಲಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಇಂದು ತಾತ್ಕಾಲಿಕ ನೈತಿಕ ಗೆಲುವು ದೊರೆತಿದೆ. ಕೇಂದ್ರ ಶಿಕ್ಷಣ ಸಚಿವ…

47 mins ago

ಎಸ್‌ಐಆರ್ ಅರ್ಜಿ; ಅನಿವಾರ್ಯ ಮರ್ಜಿ

ಚಿರಂಜೀವಿ ಸಿ ಹುಲ್ಲಹಳ್ಳಿ ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಹಲವು ಗ್ರಾಮಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಸಮರ್ಪಕ ಜಾಗೃತಿಯೇ…

51 mins ago