ಎಡಿಟೋರಿಯಲ್

ಧ್ಯಾನ ಕಡ್ಡಾಯಗೊಳಿಸಿದರೆ ಮಕ್ಕಳ ಶಿಕ್ಷಣ ಹಕ್ಕಿಗೆ ಧಕ್ಕೆ

ಶಾಲೆಗಳಲ್ಲಿ ಸೋರುವ ಮಾಳಿಗೆ, ನೀರು ಬಾರದ ನಲ್ಲಿ, ಬಳಸಲಾಗದ ಶೌಚಾಲಯಗಳ ದುರಸ್ತಿಯತ್ತ ಸರ್ಕಾರದ ಗಮನ ಹರಿಯಲಿ!

ಶಿವಪ್ರಸಾದ್ ಜಿ

ಶಿವಪ್ರಸಾದ್ ಜಿ

ಶಾಲೆಗಳಲ್ಲಿ ಧ್ಯಾನ ಕಡ್ಡಾಯಗೊಳಿಸುವ ಮುನ್ನ ಸರ್ಕಾರವು ಮಕ್ಕಳ ಮನೋರೋಗ ತಜ್ಞರ ಸಲಹೆಯನ್ನು ಪಡೆದಿದೆಯೇ ಎಂಬುದು ಗೊತ್ತಿಲ್ಲ. ಶಿಕ್ಷಕರ ಸಂಘವು ಧ್ಯಾನ ಕಡ್ಡಾಯಕ್ಕೆ ಮನವಿ ಮಾಡಿತು. ಅದಕ್ಕೆ ಅನುಷ್ಠಾನಗೊಳಿಸಿದ್ದಾಗಿ ಶಿಕ್ಷಣ ಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ. ಅಲ್ಲದೆ, ಹಲವು ಪ್ರಗತಿಪರರು ಈ ಧ್ಯಾನದ ವಿರುದ್ಧ ಧ್ವನಿ ಎತ್ತಿದ್ದು, ಧ್ಯಾನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸದಂತೆ ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆದಿದ್ದಾರೆ. ಅವರು ಶಾಲೆಗಳಲ್ಲಿ ಮಕ್ಕಳು ಓದಲು ಪೂರಕ ವಾತಾವರಣ ನಿರ್ಮಿಸುವಂತೆ ಸಲಹೆಯನ್ನೂ ನೀಡಿದ್ದಾರೆ. ಆದರೆ, ಸರ್ಕಾರಕ್ಕೆ ಇದು ಪಥ್ಯವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

‘ವಿದ್ಯಾರ್ಥಿಗಳು ಭತ್ತ ತುಂಬುವ ಚೀಲಗಳಾಗದೆ; ಭತ್ತ ಬೆಳೆಯುವ ಗದ್ದೆಗಳಾಗಬೇಕು’- ಇದು ರಾಷ್ಟ್ರಕವಿ ಕುವೆಂಪು ಅವರ ವಾಣಿ. ಈ ಮಾತು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿದೆ. ಶೈಕ್ಷಣಿಕ ವ್ಯವಸ್ಥೆಯ ಬದಲಾವಣೆಗೆ ರಾಜ್ಯ ಸರ್ಕಾರ ತನ್ನ ಮೂಗಿನ ನೇರಕ್ಕೆ ಯೋಜನೆಗಳು, ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ಮುಂದಾಗಿದೆ. ದೇಶದ ಒಕ್ಕೂಟ ಸರ್ಕಾರ ಜಾರಿಗೊಳಿಸಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಇದಕ್ಕೆ ಪೂರಕವಾಗಿದೆ. ಅಂದರೆ ವಿದ್ಯಾರ್ಥಿಗಳು ನಿಜವಾಗಿಯೂ ಕೇವಲ ಭತ್ತ ತುಂಬುವ ಚೀಲಗಳಂತಾಗುವ ಆತಂಕ ಇದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಅಂತ ಇದ್ದ ಹೆಸರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂದು ಬದಲಾಯಿಸಲಾಗಿದೆ. ಆ ಮೂಲಕ ರಾಜ್ಯ ಸರ್ಕಾರ ಶೈಕ್ಷಣಿಕ ಬದಲಾವಣೆಯ ಪಥದಲ್ಲಿ ಹೆಜ್ಜೆ ಆರಂಭಿಸಿತ್ತು. ಪ್ರಾಥಮಿಕ ಶಾಲಾ ಮಕ್ಕಳಿಗೆ ಬ್ಯಾಗ್ರಹಿತ ದಿನಭಿ ದಂತಹ ಸಣ್ಣಪುಟ್ಟ ಸಕಾರಾತ್ಮಕ ಯೋಜನೆಗಳನ್ನು ಬಿಟ್ಟರೆ, ಉಳಿದಂತೆ ಬಹುತೇಕ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ಸಾಮಾಜಿಕ, ಧಾರ್ಮಿಕ ಚೌಕಟ್ಟಿನಲ್ಲಿ ಸಿಲುಕಿಸುತ್ತಿವೆ. ಅದು ಸಮವಸ್ತ್ರ ಕಡ್ಡಾಯ ಪ್ರಕರಣದಲ್ಲಿ ಸಾಬೀತಾಗಿದೆ. ಇನ್ನು ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪೋಷಕರಿಗೆ ಮಾಸಿಕ ೧೦೦ ರೂ. ಸಂಗ್ರಹಕ್ಕೆ ಇಲಾಖೆ ಆದೇಶ ಹೊರಡಿಸಿದ್ದು ಹಾಸ್ಯಾಸ್ಪದ. ಸಾರ್ವಜನಿಕ ಪ್ರತಿರೋಧದ ಹಿನ್ನೆಲೆಯಲ್ಲಿ ಅದನ್ನು ವಾಪಸ್ ಪಡೆದಿರುವುದು ಸರ್ಕಾರದ ಜನಸ್ನೇಹಿಯಲ್ಲದ ನಡವಳಿಕೆಗೆ ಸಾಕ್ಷ್ಯ ಒದಗಿಸಿದೆ. ಇಂತಹ ಹಲವು ಪ್ರಕರಣಗಳು ಇವೆ.

ಈ ಎಲ್ಲ ಪೀಠಿಕೆ ನಂತರ ಮುಖ್ಯವಾದ ವಿಷಯಕ್ಕೆ ಬರೋಣ. ಇಲಾಖೆ ಸಚಿವರು ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಶಾಲೆಗಳಲ್ಲಿ ಧ್ಯಾನ ಕಾರ್ಯಕ್ರಮವನ್ನು ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಧ್ಯಾನ ‘ಎಲ್ಲ’ ವಿದ್ಯಾರ್ಥಿಗಳಿಗೂ ಕಡ್ಡಾಯ. ಇದರ ಹಿಂದೆ ಸರ್ಕಾರದ ಗುಪ್ತ ಅಜೆಂಡಾ ಇದೆ ಅಂತ ಅನುಮಾನ ಮಾನವೀಯತೆ ಲೇಪ ಇರುವ ಯಾವುದೇ ಮನುಷ್ಯನಲ್ಲಿ ಮೂಡುವುದು ಸಹಜ. ಧ್ಯಾನದಿಂದ ನಿತ್ಯ ಜೀವನ ಜಂಜಾಟದಿಂದ ನಲುಗುವ ಮಾನವರಿಗೆ ಸ್ವಲ್ಪ ಮಾನಸಿಕ ನೆಮ್ಮದಿ, ಒಂದಿಷ್ಟು ಆರೋಗ್ಯವು ಲಭಿಸುತ್ತದೆ ಎಂಬುದರಲ್ಲಿ ತಕರಾರು ಇಲ್ಲ. ಆದರೆ, ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಉಂಟುಮಾಡುವ ನಿಟ್ಟಿನಲ್ಲಿ ಧ್ಯಾನ ಅಷ್ಟೊಂದು ಪರಿಣಾಮಕಾರಿಯಾಗದು. ಹಾಗಾಗಿಯೇ ಬ್ರಿಟಿಷ್ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳಿಗೆ ಆಟೋಟ, ದೈಹಿಕ ಶಿಕ್ಷಣವನ್ನು ಅನುಷ್ಠಾನಗೊಳಿಸಲಾಗಿತ್ತು. ಅನಿಸುತ್ತದೆ. ಹಾಗೆ ನಿಷ್ಪಕ್ಷಪಾತವಾಗಿ ಹೇಳುವುದಾದರೆ ಧ್ಯಾನಕ್ಕಿಂತ, ಆಟೋಟವೇ ಮಕ್ಕಳಿ ಬುದ್ಧಿಶಕ್ತಿ, ಮುಕ್ತ ಮನಸ್ಸಿನ ಬೆಳವಣಿಗೆಗೆ ಅವಕಾಶ ಕಲ್ಪಿಸುತ್ತದೆ ಎನ್ನಬಹುದು.

ಶಾಲೆಗಳಲ್ಲಿ ಧ್ಯಾನ ಕಡ್ಡಾಯಗೊಳಿಸುವ ಮುನ್ನ ಸರ್ಕಾರವು ಮಕ್ಕಳ ಮನೋರೋಗ ತಜ್ಞರ ಸಲಹೆಯನ್ನು ಪಡೆದಿದೆಯೇ ಎಂಬುದು ಗೊತ್ತಿಲ್ಲ. ಶಿಕ್ಷಕರ ಸಂಘವು ಧ್ಯಾನ ಕಡ್ಡಾಯಕ್ಕೆ ಮನವಿ ಮಾಡಿತು. ಅದಕ್ಕೆ ಅನುಷ್ಠಾನಗೊಳಿಸಿದ್ದಾಗಿ ಶಿಕ್ಷಣ ಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ. ಅಲ್ಲದೆ, ಹಲವು ಪ್ರಗತಿಪರರು ಈ ಧ್ಯಾನದ ವಿರುದ್ಧ ಧ್ವನಿ ಎತ್ತಿದ್ದು, ಧ್ಯಾನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸದಂತೆ ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆದಿದ್ದಾರೆ. ಅವರು ಶಾಲೆಗಳಲ್ಲಿ ಮಕ್ಕಳು ಓದಲು ಪೂರಕ ವಾತಾವರಣ ನಿರ್ಮಿಸುವಂತೆ ಸಲಹೆಯನ್ನೂ ನೀಡಿದ್ದಾರೆ. ಆದರೆ, ಸರ್ಕಾರಕ್ಕೆ ಇದು ಪಥ್ಯವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಅಲ್ಲದೆ, ಧ್ಯಾನ ಕಡ್ಡಾಯ ಕಾರ್ಯಕ್ರಮವಾದರೆ, ಹಲವು ಮಕ್ಕಳಿಗೆ ವಿದ್ಯೆ ನಾಸ್ತಿಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ರಾಜ್ಯದಲ್ಲಿ ಹಲವೆಡೆ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಬಂದ್ ಆಗುತ್ತಿವೆ. ಅಂದರೆ ಅದು ಪರೋಕ್ಷವಾಗಿ ಖಾಸಗಿ ವಿದ್ಯಾಸಂಸ್ಥೆಗಳಿಗೆ ಅನುಕೂಲಕರವಾಗಿದೆ. ಹಿಂದಿನ ಸರ್ಕಾರಗಳ ಅವಧಿಯಲ್ಲೂ ಸರ್ಕಾರಿ ಶಾಲೆಗಳು ಮುಚ್ಚಿರಬಹುದು. ಆದರೆ, ಆ ಸರ್ಕಾರಗಳು ಅರ್ಥವಿಲ್ಲದ ಯೋಜನೆಗಳು, ಕಾರ್ಯಕ್ರಮಗಳ ಮೂಲಕ ಶಾಲೆಗಳ ಬಂದ್ಗೆ ಪೂರಕವಾಗಿ ವರ್ತಿಸಿರಲಿಲ್ಲ. ಸರ್ಕಾರಕ್ಕೆ ವಿದ್ಯಾರ್ಥಿಗಳನ್ನು ದೇಶದ ಆಸ್ತಿಯಾಗಿ ಅಥವಾ ಕುವೆಂಪು ಅವರ ಆಶಯದಂತೆ ಭತ್ತ ತುಂಬುವ ಚೀಲಗಳಾಗಿ ತಯಾರಿಸುವ ಇಚ್ಚಾಶಕ್ತಿ ಇದ್ದರೆ, ಶಾಲೆಗಳಲ್ಲಿ ಕಲಿಕೆಗೆ ಪೂರಕವಾದ ವಾತಾವರಣ ಕಲ್ಪಿಸಲು ಮುಂದಾಗಬೇಕು. ಮುಖ್ಯವಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು. ಅದರಲ್ಲಿಯೂ ಶೌಚಾಲಯ ವ್ಯವಸ್ಥೆಯ ಬಗ್ಗೆ ಗಮನ ಹರಿಸುವುದು ಅತ್ಯಗತ್ಯ. ಹಲವೆಡೆ ನೋಡಲು ಶೌಚಾಲಯದ ಕಟ್ಟಡ, ಅದರ ಬಗ್ಗೆ ಸೂಚನಾ ಫಲಕ ಕಾಣಿಸುತ್ತದೆ. ಆದರೆ, ಒಳಗಿನ ಸತ್ಯ ಅದಲ್ಲ. ಎಷ್ಟೋ ಶಾಲೆಗಳಲ್ಲಿ ಆಟದ ಮೈದಾನ ಇಲ್ಲ. ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರಗೆಳೆಯಲು ಬೇಕಾದ ಕಾರ್ಯಕ್ರಮಗಳೂ ಇಲ್ಲ. ಹಿಂದೆ ಸಮುದಾಯದತ್ತ ಕಾರ್ಯಕ್ರಮ ಅತ್ಯುತ್ತಮವಾಗಿ ನಡೆಯುತ್ತಿತ್ತು. ಈಗ ಬಹಳಷ್ಟು ಶಾಲೆಗಳಲ್ಲಿ ಹೆಸರಿಗೆ ಮಾತ್ರ ಈ ಕಾರ್ಯಕ್ರಮ ಎಂಬಂತಾಗಿದೆ.

ಇದಲ್ಲದೆ, ಮುಖ್ಯವಾಗಿ ರಾಜ್ಯ ಸರ್ಕಾರ ಎಲ್ಲ ಶಾಲೆಗಳಲ್ಲೂ ಮಂಜೂರಾಗಿರುವ ಶಿಕ್ಷಕರು, ಸಿಬ್ಬಂದಿ ಹುದ್ದೆಗಳನ್ನು ತಡಮಾಡದೆ ಭರ್ತಿ ಮಾಡಬೇಕು. ಶಿಕ್ಷಕರಿಗೆ ಬೋಧನೇತರ ಕೆಲಸಗಳ ಹೊರೆಯನ್ನು ತಪ್ಪಿಸಬೇಕು. ಬಹುಶಃ ಇದು ಎಲ್ಲ ಧ್ಯಾನ ಕಾರ್ಯಕ್ರಮಕ್ಕಿಂತ ಮುಖ್ಯ. ಧ್ಯಾನ ಎಂಬುದು ಮಕ್ಕಳಿಗಿಂತ ಜೀವನ ಜಂಜಾಟದಲ್ಲಿ ಬಳಲಿದವರಿಗೆ ಅಗತ್ಯ; ಮಕ್ಕಳಿಗಲ್ಲ. ಮಕ್ಕಳೊಂದಿಗೆ ಸಮಾಲೋಚಸಿ ನೋಡಿ, ಅವರಿಗೆ ಧ್ಯಾನ ಅಥವಾ ಆಟ ಎರಡರಲ್ಲಿ ಯಾವುದು ಇಷ್ಟ ಎಂಬುದು ಅರ್ಥವಾಗುತ್ತದೆ.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ, ಬೆಂಗಳೂರನ್ನು ಸಿಂಗಾರ್ಪು ಮಾದರಿಯಲ್ಲಿ ಪರಿವರ್ತನೆ ಮಾಡುವ ಭರವಸೆಯನ್ನು ನೀಡಿದ್ದರು. ಆ ಸಂದರ್ಭದಲ್ಲಿ ನಟ ಧೀರೇಂದ್ರ ಗೋಪಾಲ್ ಅವರು, ನಾಟಕವೊಂದರ ಪಾತ್ರಧಾರಿಯಾಗಿ ಹಾಸ್ಯ ಸಂಭಾಷಣೆ ಮೂಲಕ ಎಸ್.ಎಂ.ಕೃಷ್ಣ ಅವರನ್ನು ಕುಟುಕಿದ್ದರು. ಬೆಂಗಳೂರನ್ನು ಸಿಂಗಾಪುರ್ ಮಾಡುವುದು ಬಹಳ ಸುಲಭ. ಹೇಗೆಂದರೆ ‘ಬೆಂಗಳೂರು’ ಹೆಸರನ್ನು ‘ಸಿಂಗಾಪುರ್’ ಎಂದು ಬದಲಾಯಿಸಿಬಿಟ್ಟರೆ ಮುಗಿಯಿತು ಎಂದು ಹೇಳುತ್ತಿದ್ದರು. ಈಗ ಶಿಕ್ಷಣ ಸಚಿವ ವಿಷಯದಲ್ಲಿ ಧೀರೇಂದ್ರ ಗೋಪಾಲ್ ಅವರ ತಮಾಷೆಯ ಮಾತೇ ನಿಜವಾಗುತ್ತಿರುವಂತಿದೆ. ಸಚಿವರು ಇಲಾಖೆಯ ಹೆಸರನ್ನು ಬದಲಾಯಿಸಿದ್ದಾರೆ. ಆದರೆ, ಎಲ್ಲವೂ ಅವರ ಇಚ್ಚೆಯಂತೆ ನಡೆಯುತ್ತದೆ ಎನ್ನಲಾಗದು.

ವಿಷಾದದ ಸಂಗತಿಯೆಂದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಂಪುಟ ಸಚಿವರ ನಿರ್ಧಾರಗಳನ್ನು ಎರಡನೆಯ ಮಾತಿಲ್ಲದೆ ಅನುಮೋದಿಸುತ್ತಿದ್ದಾರೆ. ಕೆಲ ಸಚಿವರ ಧಾರ್ಮಿಕ ದ್ವೇಷದ ಮಾತುಗಳನ್ನೇ ಗಂಭೀರವಾಗಿ ಪರಿಗಣಿಸದ ಬೊಮ್ಮಾಯಿ ಅವರಿಗೆ ಶಿಕ್ಷಣ ಸಚಿವರ ಅರ್ಥರಹಿತ ನಿರ್ಣಯಗಳನ್ನು ಗಮನಿಸುವಷ್ಟು ಪುರುಸೊತ್ತು ಇಲ್ಲ ಅನಿಸುತ್ತದೆ. ಆದರೆ, ಪ್ರಾಥಮಿಕ ಶಾಲೆಯಲ್ಲಿ ಇಂತಹ ಕಡ್ಡಾಯ ಕಾರ್ಯಕ್ರಮ ಮಕ್ಕಳ ಶಿಕ್ಷಣ ಕಡ್ಡಾಯ ಹಕ್ಕು- ೨೦೧೨ರ ಉಲ್ಲಂಘನೆಯಾಗುತ್ತದೆ ಎಂಬುದು ಶಿಕ್ಷಣ ತಜ್ಞರ ಅಭಿಮತ. ರಾಜ್ಯದಲ್ಲಿ ಸಾಮಾಜಿಕ, ಧಾರ್ಮಿಕ, ಆರ್ಥಿಕ ಕ್ಷೇತ್ರಗಳಲ್ಲಿ ಜನರ ನಡುವೆ ಪ್ರತ್ಯೇಕತೆ ತರುವಂತಹ ಯೋಜನೆಗಳ ಕಾರ್ಯಕ್ರಮಗಳನ್ನು ರೂಪಿಸುವುದೇ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಅನಿಸತ್ತದೆ. ಅಲ್ಲದೆ, ಒಕ್ಕೂಟ ಸರ್ಕಾರದ ಅಧೀನ ಸಂಸ್ಥೆಯಂತೆ ವರ್ತಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಈ ಯಾವ ಅಂಶಗಳೂ ಮನದಟ್ಟಾಗುತ್ತಿಲ್ಲ. ಬಹುಶಃ ಇದು ಚುನಾವಣಾ ವರ್ಷ ಆಗಿರುವುದು ಸರ್ಕಾರದ ಈ ನಡೆಗಳಿಗೆ ಕಾರಣ. ಅದು ಮತಬ್ಯಾಂಕ್ ಸೃಷ್ಟಿ ನಿಟ್ಟಿನಲ್ಲಿ ಅವಾಂತರಗಳನ್ನು ಉಂಟು ಮಾಡುತ್ತಿದೆ.
ಶಿಕ್ಷಣ ಸಚಿವರು. ಶಿಕ್ಷಕರ ಸಂಘದ ಮನವಿ ಮೇರೆಗೆ ಧ್ಯಾನ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದಾರೆ. ಆದರೆ, ‘ಎಷ್ಟು ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಓದಿಸುತ್ತಿದ್ದಾರೆ?’ ಶಿಕ್ಷಣ ಸಚಿವರು ಪ್ರಾಂಜಲ ಮನಸ್ಸಿನಿಂದ ಒಮ್ಮೆ ಈ ಬಗ್ಗೆ ಯೋಚಿಸಲಿ.

andolanait

Recent Posts

ಮಳವಳ್ಳಿ| ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಮಗ

ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…

8 hours ago

ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…

8 hours ago

ರೈತ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕು: ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹ

ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…

9 hours ago

ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜ್‌ಗೆ ಬಿಗ್‌ ಶಾಕ್‌

ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್‌ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ. ಈ…

9 hours ago

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಎಚ್.ಡಿ.ಕುಮಾರಸ್ವಾಮಿ: ಕಾರಣ ಇಷ್ಟೇ

ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್‌ ಎಕ್ಸ್…

9 hours ago

ಹಾಸನ| ಮಗುವಿಗೆ ಜನ್ಮ ನೀಡಿದ ಬಾಲಕಿ: ಆರೋಪಿ ಬಂಧನ

ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್‌ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…

10 hours ago