ಕುಂದಾಪುರ ತಾಲ್ಲೂಕಿನ ಕೊಡ್ಲಾಡಿ ಅನ್ನುವುದು ತೀರಾ ಹಿಂದುಳಿದ ಒಂದು ಪುಟ್ಟ ಗ್ರಾಮ. 1995ರ ಮಳೆಗಾಲದ ಒಂದು ದಿನ ಅದೇ ಗ್ರಾಮದ ಸಾಧು ಎನ್ನುವ ಹೆಂಗಸು ಬಾವಿಗೆ ಅಡ್ಡಲಾಗಿ ಹಾಕಿದ ಮರದ ದಂಡಿಗೆ ಮೇಲೆ ನಿಂತು ನೀರು ಸೇದುತ್ತಿದ್ದಾಗ, ದಂಡಿಗೆ ಮುರಿದು ಬಾವಿಗೆ ಬಿದ್ದರು. ಅವರ ಕೂಗು ಕೇಳಿ ಆಚೀಚಿನವರು ಜಮಾಯಿಸಿದರು. ಆದರೆ ಅವರ್ಯಾರಿಗೂ ಈಜು ಬರುತ್ತಿರಲಿಲ್ಲವಾದುದರಿಂದ 20 ಅಡಿ ಆಳದ ನೀರು ತುಂಬಿದ ಬಾವಿಯೊಳಕ್ಕೆ ಇಳಿಯಲು ಯಾರೊಬ್ಬರೂ ಧೈರ್ಯ ತೋರಲಿಲ್ಲ. ಆಗ, ನೆರೆದ ಜಂಗುಳಿಯಿಂದ ಒಬ್ಬ ಯುವಕ ಮುಂದೆ ಬಂದು ಬಾವಿಗೆ ಇಳಿದು, ತಳ ಸೇರುತ್ತಿದ್ದ ಆ ಹೆಂಗಸನ್ನು ಮೇಲೆತ್ತಿ ತಂದರು. ಆಗ, ಯುವಕನಿಗೆ ಸಹಾಯ ಮಾಡಲು ಕೆಲವರು ಮುನ್ನುಗ್ಗಿದಾಗ ಅವರಲ್ಲಿ ನಾಲ್ಕು ಜನ ಅದೇ ಬಾವಿಯೊಳಕ್ಕೆ ಬಿದ್ದರು! ಆ ಯುವಕ ಪುನಃ ಬಾವಿಗೆ ಇಳಿದು, ಒಬ್ಬೊಬ್ಬರನ್ನೇ ಮೇಲೆತ್ತಿ ತಂದು ರಕ್ಷಿಸಿದರು. ಹೀಗೆ, ಒಂದೇ ದಿನ ಐವರನ್ನು ಸಾವಿನಿಂದ ಪಾರು ಮಾಡಿದ ಆ ಯುವಕ ಮುಂದೆ ಅಂತಹದೇ ದುರ್ಘಟನೆಗಳಿಗೆ ಸಿಕ್ಕಿಕೊಂಡ ನೂರಾರು ಜನರನ್ನು ಜೀವಂತವಾಗಿ, ಮತ್ತುಳಿದ ಸಂದರ್ಭಗಳಲ್ಲಿ ಸತ್ತವರ ಶವಗಳನ್ನು ಹೊರ ತರುವ ಸಾಹಸದ ಕೆಲಸ ಮಾಡುತ್ತ ಸುತ್ತಮುತ್ತಲಿನವರಿಗೆ ಆಪದ್ಬಾಂಧವರಾಗಿ ನೆರವಾಗುತ್ತಿದ್ದಾರೆ.
ಈ ಯುವಕನ ಹೆಸರು ಮಂಜುನಾಥ ನಾಯ್ಕ್ ಕನ್ನೇರಿ. ಕೊಡ್ಲಾಡಿ ಗ್ರಾಮದ ಕನ್ನೇರಿ ಎಂಬಲ್ಲಿನ ಮರಾಠಿ ಮಾತಾಡುವ ಕುಡುಬಿ ಜನಾಂಗಕ್ಕೆ ಸೇರಿದ ದೇವಪ್ಪ ನಾಯ್ಕ್ ಹಾಗೂ ಕನಕ ನಾಯ್ಕ್ ದಂಪತಿಗಳ ಮಗನಾದ ಮಂಜುನಾಥ ನಾಯ್ಕ್ ಓದಿದ್ದು ಕೇವಲ ಐದನೇ ತರಗತಿಯವರೆಗಾದರೂ ಬಾಲ್ಯದಿಂದಲೂ ಬಲು ಚೂಟಿ. ಶಾಲೆಯನ್ನು ಅರ್ಧಕ್ಕೇ ಬಿಟ್ಟ ಮಂಜುನಾಥರನ್ನು ಸೆಳೆದದ್ದು ಯಕ್ಷಗಾನದ ಬಣ್ಣದ ಲೋಕ. ಸಾಸ್ತಾನ ಎಂಬಲ್ಲಿನ ಗೋಳಿಗರಡಿ ಯಕ್ಷಗಾನ ಮೇಳವನ್ನು ಸೇರಿದ ಅವರು, ಅಲ್ಲಿ ಒಂದು ವರ್ಷ ಬಣ್ಣ ಹಚ್ಚಿದರು. ಮುಂದೆ, ಮಾರಣಕಟ್ಟೆ ಯಕ್ಷಗಾನ ಮೇಳಕ್ಕೆ ಸೇರಿ, ಅಲ್ಲಿಯೂ ಒಂದು ವರ್ಷ ಕುಣಿದು, ಮನೆಗೆ ವಾಪಸಾಗಿ, ಕೃಷಿಯಲ್ಲಿ ತೊಡಗಿಸಿಕೊಂಡರು. ಮುಂದೆ, 1995ರಲ್ಲಿ ನಡೆದ ಆ ಘಟನೆ ಅವರ ಬದುಕನ್ನು ಮತ್ತೊಂದು ದಿಕ್ಕಿಗೆ ಸೆಳೆಯಿತು.
ಮಂಜುನಾಥ ನಾಯ್ಕ್ ಈಜುವುದನ್ನು, ಮುಳುಗುವುದನ್ನು ಯಾವ ಗುರುವಿನಿಂದಲೂ ಕಲಿತದ್ದಲ್ಲ. ಕೃಷಿ ಜೊತೆಯಲ್ಲಿ ಮೀನುಗಾರಿಕೆ ಕಸುಬು ಮಾಡುತ್ತಿದ್ದಾಗ ತಾನೇ ಸ್ವಯಂ ಕಲಿತದ್ದು. ಕೊಡ್ಲಾಡಿಯಿಂದ ಕೆಲವು ಮೈಲಿ ದೂರದ ಅಂಪಾರು ಎಂಬ ಗ್ರಾಮದಲ್ಲಿ ಗಂಡ ಹೆಂಡತಿ ಜೋಡಿಯೊಂದು ಭಜನಾ ಮಂದಿರದ ಹತ್ತಿರದ ಬಹು ಆಳದ ಒಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿತ್ತು. ಅಗ್ನಿಶಾಮಕ ದಳದವರು ಬಂದು, ಬಹಳ ಹೊತ್ತು ಶೋಧ ನಡೆಸಿ, ಬಾವಿಯಲ್ಲಿ ಶವಗಳಿಲ್ಲ ಎಂದು ವಾಪಸಾಗಿದ್ದರು. ಮರುದಿನ ಮಂಜುನಾಥ್ಗೆ ಯಾರೋ ಸುದ್ದಿ ಮುಟ್ಟಿಸಿ, ಅವರು ಬಂದು ಬಾವಿಗೆ ಇಳಿದು ಶವಗಳನ್ನು ಶೋಧಿಸಿ ಮೇಲೆತ್ತಿ ತರುತ್ತಾರೆ! ಕೆಲವು ವರ್ಷಗಳ ಹಿಂದೆ, ಶಿವಮೊಗ್ಗದ ಪ್ರಭಾವಿ ಹಿರಿಯ ರಾಜಕಾರಣಿಯ ಸಂಬಂಧಿಕರ ಯುವಕನೊಬ್ಬ ಪಿಕ್ನಿಕ್ಗೆ ಹೋದಾಗ, ನದಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ, ಮುಳುಗಿ ಸತ್ತಾಗ, ಆ ಶವವನ್ನು ಮೇಲೆತ್ತಿ ತಂದವರೂ ಇದೇ ಮಂಜುನಾಥ ನಾಯ್ಕ್. ಹತ್ತಿರದ, ದೂರದ ಯಾರೇ ನೀರಿಗೆ ಬಿದ್ದು ಸತ್ತರೂ ಮಂಜುನಾಥ ನಾಯ್ಕ್ಗೆ ಫೋನ್ ಮಾಡಿ ಸುದ್ದಿ ಮುಟ್ಟಿಸಿದರೆ ಸಾಕು, ಏನೇ ಕೆಲಸ ಮಾಡುತ್ತಿರಲಿ ಅದನ್ನು ಬಿಟ್ಟು ಸಹಾಯಕ್ಕೆ ಧಾವಿಸುತ್ತಾರೆ.
‘ಪರೋಪಕಾರಾರ್ಥಂ ಇದಂ ಶರೀರಂ’ ಎಂಬ ಮಾತಿಗೆ ಮಂಜುನಾಥ ನಾಯ್ಕ್ ಒಂದು ಜೀವಂತ ಉದಾಹರಣೆ. ನೀರಲ್ಲಿ ಮುಳುಗಿದವರ ಶವಗಳನ್ನು ಮೇಲೆತ್ತುವುದು ಮಾತ್ರವಲ್ಲದೆ, ಶಾಲಾ ಬಡಮಕ್ಕಳಿಗೆ ಶಿಕ್ಷಣಕ್ಕೆ ಅವರಿವರಿಂದ ಹಣ ಹೊಂದಿಸಿ ಕೊಡುವುದು, ಅನಾರೋಗ್ಯ ಪೀಡಿತರಿಗೆ ಧನ ಸಹಾಯ ಕೊಡಿಸುವುದು ಮೊದಲಾಗಿ ಹಲವು ಸಾಮಾಜಿಕ ಸೇವೆಗಳನ್ನು ಮಾಡುತ್ತಾರೆ. ಮಂಜುನಾಥ ನಾಯ್ಕ್ ಕೇವಲ ಐದನೇ ತರಗತಿಯ ತನಕ ಶಿಕ್ಷಣ ಕಲಿತ್ತಿದ್ದರೂ ಶಾಲಾ ಕಾಲೇಜು ಮಕ್ಕಳಿಗೆ ವಾರ್ಷಿಕೋತ್ಸವ ಮೊದಲಾದ ಸಂದರ್ಭಗಳಿಗೆ ಕಂಸಾಳೆ, ಕೋಲಾಟ, ವೀರಗಾಸೆ, ಡೊಳ್ಳು ಕುಣಿತ, ಯಕ್ಷಗಾನ, ಲಂಬಾಣಿ ಕುಣಿತ, ತನ್ನ ಮರಾಠಿ ಜನಾಂಗದ ಜಾನಪದ ಹಾಡು, ನೃತ್ಯ ಇತ್ಯಾದಿಗಳ ತರಬೇತಿ ನೀಡುತ್ತಾರೆ. ಸಮಗ್ರ ಗ್ರಾಮೀಣ ಆಶ್ರಮದಂತಹ ಎನ್ಜಿಒ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ಕಾರ್ಯಕ್ರಮಗಳಲ್ಲಿ ಬೀದಿ ನಾಟಕಗಳನ್ನು ಆಡಿಸಿದ್ದಾರೆ. ಈ ಕಲೆಗಳನ್ನೂ ಮಂಜುನಾಥ ನಾಯ್ಕ್ ತಾನೇ ಸ್ವಯಂ ಕಲಿತದ್ದು. ಇವುಗಳ ತರಬೇತಿಯಿಂದ ಬರುವ ಸಣ್ಣಪುಟ್ಟ ಆದಾಯವೇ ಮಂಜುನಾಥ ನಾಯ್ಕ್ ಬದುಕಿಗೆ ಆಸರೆ. ಏಕೆಂದರೆ, ನೀರಿನಲ್ಲಿ ಮುಳುಗಿ ಸತ್ತವರ ಶವಗಳನ್ನು ಮೇಲೆತ್ತಿ ತಂದಾಗ ಇವರಿಗೆ ಹಣ ಕೊಡುವವರು ತೀರಾ ವಿರಳ. ಅಂತಹ ದುರಂತದ ಸಮಯದಲ್ಲಿ ಹಣ ಕೇಳಲೂ ಇವರಿಗೂ ಮನಸ್ಸು ಬಾರದು. ಯಾರಾದರೂ ಅವರಾಗೇ ಕೊಟ್ಟರೆ ತೆಗೆದುಕೊಳ್ಳುತ್ತಾರೆ. ಆದರೆ, ಹಾಗೆ ಕೊಡುವವರು ಕಡಿಮೆ. ಮನೆಯ ಕೃಷಿ ಚಟುವಟಿಕೆಗಳಿಂದ ಬರುವ ಆದಾಯವೂ ಭಾರೀ ದೊಡ್ಡದೇನಲ್ಲ.
ನೀರಲ್ಲಿ ಮುಳುಗಿ ಸತ್ತವರ ಶವಗಳನ್ನು ಮೇಲೆತ್ತುವುದು ತೀರಾ ಸಾಹಸದ ಹಾಗೂ ಅಪಾಯದ ಕೆಲಸ. ಈ ಸಾಹಸ ಮಾಡುವಾಗ ಎಷ್ಟೋ ಬಾರಿ ಮಂಜುನಾಥ ನಾಯ್ಕ್ರ ಜೀವವೇ ಅಪಾಯಕ್ಕೆ ಸಿಕ್ಕ ಉದಾಹರಣೆಗಳಿವೆ. ಮೇಲೆ ಹೇಳಿದ, ಶಿವಮೊಗ್ಗದ ರಾಜಕಾರಣಿಯ ಕುಟುಂಬದ ಯುವಕನ ಶವವನ್ನು ಶೋಧಿಸುವಾಗ ಇವರು ತಾವೇ ನೀರಿನ ಸುಳಿಗೆ ಸಿಕ್ಕಿ, ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿ ಬಂದಿದ್ದರು. ಮಂಜುನಾಥ ನಾಯ್ಕ್ರ ಈ ಸಾಮಾಜಿಕ ಕಾರ್ಯವನ್ನು ಗುರುತಿಸಿ ನೇಕ ಸಂಘಸಂಸ್ಥೆಗಳು ಅವರನ್ನು ಸನ್ಮಾನಿಸಿ, ಶಾಲು ಹೊದಿಸಿ, ಹೂಹಾರ ಹಾಕಿ, ಪ್ರಮಾಣ ಪತ್ರ, ಫಲಕ, ಸ್ಮರಣಿಕೆಗಳನ್ನು ನೀಡಿ ಗೌರವಿಸಿವೆ. ಅವೆಲ್ಲವನ್ನು ಅವರು ಕಪಾಟು, ಪೆಟ್ಟಿಗೆಗಳಲ್ಲಿ ಹಾಕಿ ಜೋಪಾನವಾಗಿರಿಸಿದ್ದಾರೆ. ಆದರೆ, ಅವರಿಗೆ ನಿಜಕ್ಕೂ ಅಗತ್ಯವಿರುವುದು ಜೀವರಕ್ಷಣೆ ಒದಗಿಸುವ ಸೇಫ್ಟಿ ಜಾಕೆಟ್, ಆಕ್ಸಿಜನ್ ಸಿಲಿಂಡರ್ ನಂತಹ ಕೆಲವು ರಕ್ಷಣಾ ಸಾಮಗ್ರಿಗಳು. ಸರ್ಕಾರವಾಗಲಿ ಅಥವಾ ಯಾರಾದರೂ ದಾನಿಗಳಾಗಲಿ ಇಂತಹವುಗಳನ್ನು ಅವರಿಗೆ ನೀಡಿದರೆ ಅದು ಮಂಜುನಾಥ ನಾಯ್ಕ್ರ ಸೇವೆಗೆ ಸಲ್ಲುವ ನಿಜವಾದ ಕೃತಜ್ಞತೆಯಾಗಬಹುದು.
ಬೆಂಗಳೂರು: ಕನ್ನಡ ಕವಯತ್ರಿ, ಬರಹಗಾರ್ತಿ ಸರಿತಾ ಜ್ಞಾನಾನಂದ ಅವರು ಆರ್.ಆರ್.ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಲೇಖಕಿ, ಅನುವಾದಕಿಯಾಗಿದ್ದ ಸರಿತಾ ಅವರು…
ಬೆಂಗಳೂರು: ಹೊಸ ವರ್ಷ ಹಾಗೂ ಕ್ರಿಸ್ಮಸ್ ಸಂಭ್ರಮದ ಮಧ್ಯೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಸಂಭವಿಸಿದ ಬಸ್ ಅಪಘಾತ ಇಡೀ…
ನಂಜನಗೂಡು: ಮೈಸೂರು ಅರಮನೆ ಬಳಿ ಹೀಲಿಯಂ ಗ್ಯಾಸ್ ಬ್ಲಾಸ್ಟ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜನಗೂಡಿನ ಚಾಮಲಾಪುರದ ನಿವಾಸಿ ಮಂಜುಳ ಸಾವನ್ನಪ್ಪಿರುವ…
ನಂಜನಗೂಡು: ತಾಲ್ಲೂಕಿನ ಅಳಗಂಚಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆಯೊಂದು ಸೆರೆಯಾಗಿದ್ದು, ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.…
ಮೈಸೂರು: ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣಗಳು ಮುಂದುವರಿದಿದ್ದು, ಗ್ರಾಮಸ್ಥರಲ್ಲಿ ಭಾರೀ ಆತಂಕ ಮೂಡಿಸಿದೆ. ಹುಣಸೂರು ತಾಲ್ಲೂಕಿನ ಗುರುಪುರ ಕೆರೆ ಬಳಿ…
ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಸರ್ಕಾರದಿಂದ ಆರಂಭಿಸಲ್ಪಟ್ಟಿದ್ದ ಜನ ಔಷಧ ಕೇಂದ್ರಗಳು ಹಲವು ವರ್ಷಗಳಿಂದ ರಾಜ್ಯದೆಲ್ಲೆಡೆ ಕಾರ್ಯನಿರ್ವಹಿಸುತ್ತಿವೆ. ಕಡು ಬಡಜನರಿಗೆ ಹಾಗೂ…