ಎಡಿಟೋರಿಯಲ್

ಸರ್ಕಾರ ಅಗತ್ಯ ಹುದ್ದೆಗಳನ್ನು ಭರ್ತಿ ಮಾಡಿ, ಮೈಸೂರು ವಿವಿ ಘನತೆ ಉಳಿಸಲಿ

ʼಎ-ಪ್ಲಸ್‌ʼ ಶ್ರೇಣಿಯಿಂದ ʼಎʼ- ಶ್ರೇಣಿಗೆ ಇಲಿದ ಮೈಸೂರು ವಿಶ್ವವಿದ್ಯಾಲಯ ವಿವಿಯ ಶೈಕ್ಷಣಿಕ ಗುಣಮಟ್ಟ

ಕೆ.ಬಿ.ರಮೇಶನಾಯಕ                                                                

ದಕ್ಷಿಣ ಭಾರತದಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದ ನಂತರ ಎರಡನೇ ವಿಶ್ವವಿದ್ಯಾನಿಲಯ ಎನಿಸಿಕೊಂಡು ಶತಮಾನೋತ್ಸವ ಸಂಭ್ರಮ ಆಚರಿಸಿಕೊಂಡಿರುವ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕೊರತೆ ಇರುವ ಅಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಿ ಶೈಕ್ಷಣಿಕ ಗುಟ್ಟಮಟ್ಟ, ನ್ಯಾಕ್ ರ್ಯಾಂಕ್‌ನ ಸ್ಥಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಾದ ಹೊಣೆ ಹೊತ್ತಿರುವ ರಾಜ್ಯಸರ್ಕಾರ ನಿರಾಸಕ್ತಿ ತೋರುವುದು ಸರಿಯಲ್ಲ.

ರಾಜ್ಯದ ಮೊದಲ ವಿವಿ ಎಂಬ ಹೆಗ್ಗಳಿಕೆ ಹೊಂದಿ ಎರಡು ದಶಕಗಳ ಹಿಂದೆ ಅಂದರೆ ೨೦೦೦ರಲ್ಲಿ ನ್ಯಾಕ್‌ನಿಂದ ಐದು ನಕ್ಷತ್ರ (ಫೈವ್ ಸ್ಟಾರ್)ಶ್ರೇಣಿ ಮಾನ್ಯತೆ ಪಡೆದಿದ್ದ ವಿವಿಯು ಈಗ ತನ್ನ ಮುಕುಟಮಣಿಯನ್ನು ಕಳಚಿಕೊಳ್ಳುತ್ತಿರುವುದು ಶೈಕ್ಷಣಿಕ ತಜ್ಞರು,ವಿಶ್ರಾಂತ ಕುಲಪತಿಗಳು ಸೇರಿ ಶಿಕ್ಷಣ ಕ್ಷೇತ್ರದ ತಜ್ಞರನ್ನು ಚಿಂತೆಗೀಡು ಮಾಡಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಸ್ಥಾಪಿಸಿದ ವಿವಿಯು ತನ್ನ ಮಹತ್ವವನ್ನು ಕಳೆದುಕೊಂಡು ಎಲ್ಲಾ ವಿವಿಗಳ ಪಟ್ಟಿಗೆ ಸೇರುವ ಹಂತಕ್ಕೆ ತಲುಪಲಿದೆ. ಹಾಗಾಗಿ,ರಾಜ್ಯಸರ್ಕಾರ ಹೊಣೆಗಾರಿಕೆಯಿಂದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕೊರತೆ ಇರುವ ಬೋಧಕ-ಬೋಧಕೇತರ ಸಿಬ್ಬಂದಿಗಳ ಹುದ್ದೆಯನ್ನು ತುರ್ತಾಗಿ ಭರ್ತಿ ಮಾಡಲು ಮುಂದಾಗಿ, ಮುಂದೆ ಎ ಶ್ರೇಣಿ ಕಳೆದುಕೊಂಡು ಬಿ ಶ್ರೇಣಿ ಪಡೆಯುವುದನ್ನು ತಪ್ಪಿಸಬೇಕಿದೆ.

ಮೈಸೂರು ವಿವಿಯ ಶೈಕ್ಷಣಿಕ ಗುಟ್ಟಮಟ್ಟ,ಬೋಧನೆ, ಸಂಶೋಧನೆ,ಪ್ರಬಂಧಗಳ ಮಂಡನೆ ಸೇರಿ ಹತ್ತು ಹಲವು ವಿಚಾರಗಳಿಂದಾಗಿ ಉತ್ಕೃಷ್ಟತೆಯ ಸಂಸ್ಥೆ, ಸಾಮರ್ಥ್ಯವರ್ಧಿತ ಉತ್ಕೃಷ್ಟ ಜ್ಞಾನ ಸಂಸ್ಥೆ, ಇನ್ನೋವೇಷನ್ ಯೂನಿವರ್ಸಿಟಿ ಎನ್ನುವ ಸ್ಥಾನಮಾನ ಹೊಂದಿತ್ತು. ಮೂರ್ನಾಲ್ಕು ದಶಕಗಳಿಂದ 2016 ರವರೆಗೆ ನ್ಯಾಕ್‌ನಿಂದ ಎ-ಪ್ಲಸ್ ಶ್ರೇಣಿಯನ್ನು ಪಡೆದುಕೊಳ್ಳುತ್ತಲೇ ಬಂದಿದ್ದ ಮೈಸೂರು ವಿವಿಯು ಈಗ ಎ-ಶ್ರೇಣಿಗೆ ಬಂದು ನಿಂತಿದೆ. ರಾಜ್ಯಸರ್ಕಾರ ಕಾಲಕಾಲಕ್ಕೆ ಖಾಲಿಯಾಗುತ್ತಿರುವ ಹುದ್ದೆಗಳನ್ನು ಭರ್ತಿ ಮಾಡದೆ ಉಳಿಸಿಕೊಂಡ ಪರಿಣಾಮವಾಗಿ ಶೇ.50ಕ್ಕಿಂತಲೂ ಹೆಚ್ಚು ಹುದ್ದೆಗಳು ಖಾಲಿ ಇರುವುದರಿಂದ ಶೈಕ್ಷಣಿಕ ಗುಣಮಟ್ಟ ಮತ್ತು ಸಂಶೋಧನೆಗೆ ದೊಡ್ಡ ಹೊಡೆತ ಬಿದ್ದಿದೆ. ಮೈಸೂರು ವಿ.ವಿ.ಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ, ಇತಿಹಾಸ ಸೇರಿದಂತೆ ಇನ್ನಿತರ ನಿಕಾಯಗಳು ಇದ್ದರೆ, ಸ್ನಾತಕೋತ್ತರ ಅಧ್ಯಯನ ವಿಭಾಗ,ಸ್ನಾತಕೋತ್ತರ ಕೇಂದ್ರಗಳು, ಅಧ್ಯಯನ ಪೀಠಗಳು ಇದ್ದು,ಅದಕ್ಕೆ ತಕ್ಕಂತೆ ಬೋಧಕ-ಬೋಧಕೇತರ ಸಿಬ್ಬಂದಿಗಳೂ ಇರಬೇಕಾಗಿತ್ತು. ಆದರೆ, ರಾಜ್ಯಸರ್ಕಾರ 2017ರಿಂದ 2023ರ ತನಕ ಯಾವುದೇ ಹುದ್ದೆಗಳನ್ನು ಹೊಸದಾಗಿ ನೇಮಕಾತಿ ಮಾಡಿಕೊಳ್ಳದೆ ಇರುವುದರಿಂದ ದಿನದಿಂದ ದಿನಕ್ಕೆ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಾಗಿ ಬೋಧನಾ ಗುಣಮಟ್ಟ ಕುಸಿಯುತ್ತಿದೆ. ಮೈಸೂರು ವಿವಿಯಲ್ಲಿ ಅಗತ್ಯವಾಗಿ ಬೇಕಿರುವ 81  ಪ್ರಾಧ್ಯಾಪಕರ ಪೈಕಿ ೬ ಹುದ್ದೆಗಳು ಮಾತ್ರ ಇದ್ದು,75 ಹುದ್ದೆಗಳು ಖಾಲಿ ಇವೆ. ಸಹ ಪ್ರಾಧ್ಯಾಪಕರ ೧೨೪ ಹುದ್ದೆಗಳಲ್ಲಿ49 ಹುದ್ದೆಗಳು ಖಾಲಿ ಇವೆ. ಸಹಾಯಕ ಪ್ರಾಧ್ಯಾಪಕರ(ಪಿಜಿ) 250 ಹುದ್ದೆಗಳ ಪೈಕಿ 125 ಹುದ್ದೆಗಳು ಮಾತ್ರ ಇವೆ. ಸಹಾಯಕ ಪ್ರಾಧ್ಯಾಪಕ (ಯುಜಿ) 211 ಹುದ್ದೆಗಳಲ್ಲಿ 108 ಹುದ್ದೆಗಳು ಖಾಲಿಇವೆ.ಅಂದರೆ ಮಂಜೂರಾದ 666 ಹುದ್ದೆಗಳಲ್ಲಿ ಶೇ.50 ಕ್ಕಿಂತಲೂ ಹೆಚ್ಚು ಅಂದರೆ 402 ಹುದ್ದೆಗಳು ಖಾಲಿ ಇರುವುದು ಶೈಕ್ಷಣಿಕ ಹಿನ್ನಡೆಗೆ ಕಾರಣವಾಗಲಿದೆ. ಅದೇ ರೀತಿ ಉಪ ಕುಲಸಚಿವ, ಅಧೀಕ್ಷಕ, ಹಿರಿಯ ಸಹಾಯಕರು, ಪ್ರಥಮ ದರ್ಜೆ ಸಹಾಯಕರು, 2ನೇ ದರ್ಜೆ ಸಹಾಯಕರು, ತಾಂತ್ರಿಕ ವರ್ಗ ಮೊದಲಾದ ಬೋಧಕೇತರ ಸಿಬ್ಬಂದಿಯ 1349 ಹುದ್ದೆಗಳ ಅವಶ್ಯಕತೆ ಇದ್ದು,835 ಹುದ್ದೆಗಳು ಖಾಲಿ ಇವೆ. ಬೋಧಕೇತರ ಸಿಬ್ಬಂದಿ ಹುದ್ದೆ ಖಾಲಿ ಇದ್ದರೂ ನ್ಯಾಕ್ ಅದನ್ನು ಪರಿಗಣಿಸಿಲ್ಲ. ಆದರೆ, ಬೋಧಕ ಸಿಬ್ಬಂದಿ ಕೊರತೆ ಕಾಡುತ್ತಿರುವುದರಿಂದ ನ್ಯಾಕ್ ಗಮನಿಸಲೇಬೇಕಿದೆ. ಇದರಿಂದಾಗಿ ಗುಣಮಟ್ಟದ ಬೋಧನೆ ಸಾಧ್ಯವಾಗದೆ ಅಂಕಗಳು ಕಡಿಮೆಯಾಗಲು ಕಾರಣವಾಗಿದೆ.

ವಿಜ್ಞಾನ,ವಾಣಿಜ್ಯ ನಿಕಾಯಗಳಲ್ಲಿ ಹೆಚ್ಚಿನ ಬೋಧಕ ಸಿಬ್ಬಂದಿಯ ಕೊರತೆ ಇರುವುದರಿಂದ ಪಿಎಚ್‌ಡಿ ಮಾಡುವ ಅಭ್ಯರ್ಥಿಗಳಿಗೆ ಗೈಡ್‌ಗಳ ಕೊರತೆ ಉಂಟಾಗಿದೆ. ಸ್ನಾತಕೋತ್ತರ ಪದವಿ ಮುಗಿಸಿ ಹೊರ ಬರುವ ವಿದ್ಯಾರ್ಥಿಗಳು ಪಿಎಚ್‌ಡಿ ಮಾಡಲು ಮುಂದಾದರೂ ನಿರೀಕ್ಷಿತ ಪ್ರಮಾಣದಲ್ಲಿ ಗೈಡ್ ದೊರೆಯುತ್ತಿಲ್ಲ. ಒಬ್ಬೊಬ್ಬ ಪ್ರಾಧ್ಯಾಪಕರು ಐದು ಅಥವಾ ಆರು ಮಂದಿ ಅಭ್ಯರ್ಥಿಗಳಿಗೆ ಮಾರ್ಗದರ್ಶಕರಾಗುವ ಸನ್ನಿವೇಶ ನಿರ್ಮಾಣವಾಗಿರುವುದರಿಂದ ಉತ್ತಮ ವಿಷಯ ಮಂಡನೆಗಳೂ ನಡೆಯುತ್ತಿಲ್ಲ. ಪ್ರೊ.ಕೆ.ಎಸ್.ರಂಗಪ್ಪ ಅವರು ಕುಲಪತಿಗಳಾಗಿದ್ದಾಗ ಅಧ್ಯಾಪಕರ ನೇಮಕಕ್ಕೆ ಮುಂದಾದರೂ ರಾಜ್ಯಸರ್ಕಾರ ಅನುಮತಿ ನೀಡಲಿಲ್ಲ. ನಂತರದಲ್ಲಿ ಅಧಿಕಾರ ವಹಿಸಿಕೊಂಡ ಪ್ರೊ.ಜಿ.ಹೇಮಂತ್‌ಕುಮಾರ್ ಅವರು ಅಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದರೂ ಅನುಮೋದನೆ ದೊರೆಯಲಿಲ್ಲ. ಇದರಿಂದಾಗಿ ಅತಿಥಿ ಉಪನ್ಯಾಸಕರನ್ನೇ ನೇಮಕ ಮಾಡಿಕೊಂಡು ಸ್ನಾತಕೋತ್ತರ ಅಭ್ಯರ್ಥಿಗಳಿಗೂ ಬೋಧನೆ ಮಾಡುವ ಸ್ಥಿತಿ ಉಂಟಾಗಿದೆ. ಹಾಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಲ್ಲಿ 255 ಮಂದಿ ಹತ್ತು ವರ್ಷ ಪೂರೈಸಿದವರಾಗಿದ್ದರೆ, ಉಳಿದ 500ಕ್ಕೂ ಹೆಚ್ಚು ಮಂದಿ ಐದಾರು ವರ್ಷಗಳಿಂದ ಸ್ನಾತಕೋತ್ತರ ಪದವಿ ಮುಗಿಸಿ ಹೊರ ಬಂದವರಾಗಿದ್ದಾರೆ. ಹಾಗಾಗಿಯೇ, ಪದವಿ ತರಗತಿಗಳ ಬೋಧನಾ ಗುಣಮಟ್ಟದಿಂದ ಕೂಡಿಲ್ಲ. ಕೇಂದ್ರಸರ್ಕಾರ ಜಾರಿಗೊಳಿಸಿದ ನೂತನ ಶಿಕ್ಷಣ ನೀತಿಯನ್ನು ಮೊದಲ ಬಾರಿಗೆ ಅಳವಡಿಸಿಕೊಂಡ ವಿವಿ ಎಂಬ ಹೆಸರು ಪಡೆದ ವಿವಿಯು ರಾಜ್ಯ ಸರ್ಕಾರದಿಂದ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಂಡರೂ ನೇಮಕಾತಿ ವಿಚಾರದಲ್ಲಿ ಅನುಮೋದನೆ ಪಡೆಯಲು ಸಾಧ್ಯವಾಗಿಲ್ಲ. ನ್ಯಾಕ್ ಸಂಸ್ಥೆಯು ಆಗಿಂದಾಗ್ಗೆ ಸಲಹೆ ಸೂಚನೆಗಳನ್ನು ನೀಡುತ್ತಾ ಗುಣಮಟ್ಟದಲ್ಲಿ ಅಂಕಗಳಿಗೆ ಕತ್ತರಿ ಹಾಕಿದರೆ,ಯುಜಿಸಿಯು ನೀಡುತ್ತಿರುವ ವಿಶೇಷ ಅನುದಾನವನ್ನು ಕಡಿತ ಮಾಡುತ್ತಾ ಬಂದಿದೆ. ಇದರಿಂದಾಗಿ ರಾಜ್ಯಸರ್ಕಾರ ಕೊಡುವ ಅನುದಾನದಲ್ಲೇ ನಿರ್ವಹಣೆ ಮಾಡಬೇಕಾದ ಸಂದಿಗ್ಧ ಪರಿಸ್ಥಿತಿಗೆ ವಿ.ವಿ.ಸಿಲುಕಿರುವುದರಿಂದ ಆರ್ಥಿಕ ನಿರ್ವಹಣೆಯ ಮೇಲೂ ಪರಿಣಾಮ ಬೀರಿದೆ. ಒಟ್ಟಿನಲ್ಲಿ ರಾಜ್ಯಸರ್ಕಾರ ಶೀಘ್ರದಲ್ಲೇ ಅಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಮುಂದಾಗಬೇಕಿದೆ. ಇಲ್ಲದಿದ್ದರೆ ಹಲವಾರು ಸ್ಥಾನಗಳನ್ನು ಹೊಂದಿರುವ ವಿವಿಯ ಕಿರೀಟ ಕಳಚಿ ಬೀಳಲು ಸರ್ಕಾರವೇ ಹೊಣೆಯಾಗಬೇಕಾಗುತ್ತದೆ.


ಎರಡು ದಶಕಗಳ ಹಿಂದೆ ಅಂದರೆ ೨೦೦೦ರಲ್ಲಿ ನ್ಯಾಕ್‌ನಿಂದ ಐದು ನಕ್ಷತ್ರ (ಫೈವ್ ಸ್ಟಾರ್)ಶ್ರೇಣಿ ಮಾನ್ಯತೆ ಪಡೆದಿದ್ದ ವಿವಿಯು ಈಗ ತನ್ನ ಮುಕುಟಮಣಿಯನ್ನು ಕಳಚಿಕೊಳ್ಳುತ್ತಿರುವುದು ಶೈಕ್ಷಣಿಕ ತಜ್ಞರು,ವಿಶ್ರಾಂತ ಕುಲಪತಿಗಳು ಸೇರಿ ಶಿಕ್ಷಣ ಕ್ಷೇತ್ರದ ತಜ್ಞರನ್ನು ಚಿಂತೆಗೀಡು ಮಾಡಿದೆ.

andolanait

Recent Posts

ಮೆಟ್ರೋ ಪ್ರಯಾಣಿಕರಿಗೆ ಮತ್ತೆ ದರ ಏರಿಕೆ ಶಾಕ್?

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಮತ್ತೆ ದರ ಏರಿಕೆ ಶಾಕ್ ನೀಡುವ ಸಾಧ್ಯತೆ ಇದೆ. ಪ್ರತಿ ವರ್ಷದಂತೆ ಈ ವರ್ಷವೂ ಮೆಟ್ರೊ…

9 mins ago

ಕಾಂಗ್ರೆಸ್‌ ಹೈಕಮಾಂಡ್‌ಗೆ ಕರ್ನಾಟಕ ರಾಜ್ಯವೇ ಎಟಿಎಂ: ವಿಜಯೇಂದ್ರ ಆಕ್ರೋಶ

ಬೆಂಗಳೂರು: ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿಗಳು ಅಬಕಾರಿ ವಿಚಾರದಲ್ಲಿ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂಬುದು ಬಿಜೆಪಿ ಹಾಗೂ ಜೆಡಿಎಸ್‌…

9 mins ago

ಫೆ.14ರಿಂದ 18ರವರೆಗೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆ: ಸಿದ್ಧತೆ ಪರಿಶೀಲಿಸಿದ ಎಈ ರಘು

ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆಬ್ರವರಿ.14 ರಿಂದ 18ರವರೆಗೆ…

35 mins ago

ಅಂತರರಾಷ್ಟ್ರೀಯ ವಾಣಿಜ್ಯ ಮೇಳ 2026: ಉತ್ಪಾದನೋತ್ತರ ಕೃಷಿ ಕಾರ್ಯಕ್ರಮವನ್ನು ಯಶ್ವಸಿಗೊಳಿಸಿ: ಎನ್.ಚಲುವರಾಯಸ್ವಾಮಿ

ಬೆಂಗಳೂರು: ನಮ್ಮ ಸರ್ಕಾರವು 2017ರಲ್ಲಿ ಪ್ರಾರಂಭಿಸಿದ ಸಾವಯವ ಮತ್ತು ಸಿರಿಧಾನ್ಯ ಮೇಳವು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವುದು ನಮ್ಮೆಲ್ಲರ ಹೆಮ್ಮೆ…

1 hour ago

ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ತಡೆ: ಕೇಂದ್ರ ಅರಣ್ಯ ಸಚಿವರ ಜೊತೆ ಎಚ್‌ಡಿಕೆ ಮಾತುಕತೆ

ನವದೆಹಲಿ: ಕರ್ನಾಟಕದಲ್ಲಿ ನಿರಂತರವಾಗಿ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತವಾಗಿ ತಡೆಯೊಡ್ಡಿ ಜನರ ಜೇವ ರಕ್ಷಣೆ ಮಾಡುವ ಬಗ್ಗೆ ಕೇಂದ್ರದ ಬೃಹತ್‌…

1 hour ago

ಫೆ.10ಕ್ಕೆ ಹಸಗೂಲಿ ಪಾರ್ವತಾಂಬೆ ದೇವಸ್ಥಾನ ಮೊದಲ ವರ್ಷದ ಅರಾಧನೆ ಮಹೋತ್ಸವ

ಹಳ್ಳಿಕಾರ್ ಜೋಡೆತ್ತುಗಳ ಪ್ರದರ್ಶನ ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಹಸಗೂಲಿ ಗ್ರಾಮದಲ್ಲಿ ಕಳೆದ ವರ್ಷ ಶ್ರೀ ಅಲ್ಲಹಳ್ಳಿ ಪಾರ್ವತಾಂಬೆ ನೂತನ…

1 hour ago