ಎಡಿಟೋರಿಯಲ್

ಸಂಪಾದಕೀಯ: ಕಾವೇರಿ ನದಿ ದಂಡೆಯ ಗ್ರಾಮಗಳ ಅಂಚಿನಲ್ಲಿ ತಡೆಗೋಡೆ ತ್ವರಿತ ನಿರ್ಮಾಣವಾಗಲಿ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿರುವ ಕಾವೇರಿ ನದಿ ದಂಡೆಯ ೯ ಗ್ರಾಮಗಳು ಮುಂಗಾರು ಮಳೆಗಾಲದಲ್ಲಿ ಪ್ರವಾಹ ಭೀತಿ ಎದುರಿಸುತ್ತವೆ. ಕೇರಳದ ವೈನಾಡು ಮತ್ತು ಕೊಡಗಿನಲ್ಲಿ ಧಾರಾಕಾರ ಮಳೆಯಾದರೆ ಹಾರಂಗಿ, ಕಾವೇರಿ, ಕಬಿನಿ ಜಲಾಶಯಗಳು ಭರ್ತಿಯಾಗಿ ಕಾವೇರಿ ನದಿಗೆ ೧.೫೦ ರಿಂದ ೨ ಲಕ್ಷ ಕ್ಯೂಸೆಕ್ ನೀರು ಹರಿಯ ಬಿಟ್ಟಾಗ ಉಕ್ಕಿ ಹರಿದು ಗ್ರಾಮಗಳು ಹಾಗೂ ಇವುಗಳ ವ್ಯಾಪ್ತಿಯಲ್ಲಿ ಬೆಳೆದಿರುವ ಫಸಲು ಜಲಾವೃತಗೊಳ್ಳುತ್ತವೆ. ಪ್ರತಿವರ್ಷ ೯ ಗ್ರಾಮಗಳ ಜನರು ಮುಂಗಾರು ಮಳೆಗಾಲಕ್ಕೆ ಪ್ರವಾಹ ಭೀತಿ ಎದುರಿಸುತ್ತಾರೆ.

೨೦೧೬ ಮತ್ತು ೨೦೧೯ ರಲ್ಲಿ ಕಾವೇರಿ ನದಿ ಭೋರ್ಗರೆದು ಪ್ರವಾಹ ಉಂಟಾಗಿ ಗ್ರಾಮಗಳು ಜಲಾವೃತಗೊಂಡಿದ್ದವು. ಫಸಲು ನೀರು ಪಾಲಾಗಿ ಜನರು, ಜಾನುವಾರುಗಳನು ಕೊಳ್ಳೇಗಾಲ ಪಟ್ಟಣಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆಗಾಗ ಎದುರಾಗುವ ಈ ಸಮಸ್ಯೆಯನ್ನು ಶಾಶ್ವತವಾಗಿ ನಿಯಂತ್ರಿಸಲು ಗ್ರಾಮಗಳ ಅಂಚಿನಲ್ಲಿ ತಡೆಗೋಡೆ ನಿರ್ಮಿಸಲು ಉದ್ದೇಶಿಸಿದ್ದ ಯೋಜನೆ ಕಾಗದದಲ್ಲೇ ಉಳಿದಿದೆ. ಪ್ರವಾಹ ಬಂದಾಗ ಈ ಬಗ್ಗೆ ರಾಜಕಾರಣಿಗಳು, ಅಧಿಕಾರಿಗಳು, ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗುತ್ತದೆ ನಂತರ ಮರೆತು ಸುಮ್ಮನಾಗುತ್ತಾರೆ.

೨೦೧೯ರಲ್ಲಿ ರಣಮಳೆಯಾಗಿ ಕೊಡಗು ಜಿಲ್ಲೆಯಲ್ಲಿ ಗುಡ್ಡಗಳು, ಬರೆಗಳು, ಮನೆಗಳು ಕುಸಿತವಾಗಿತ್ತು. ಕಾವೇರಿ ನದಿ ಪ್ರವಾಹ ಉಂಟಾಗಿ ಕೊಳ್ಳೇಗಾಲ ತಾಲೂಕಿನ ದಾಸನಪುರ, ಹರಳೆ, ಮುಳ್ಳೂರು, ಹಳೇ ಅಣಗಳ್ಳಿ, ಧನಗೆರೆ, ಸರಗೂರು, ಹಳೇ ಹಂಪಾಪುರ, ಶಿವನಸಮುದ್ರದ ಸಮೂಹ ದೇವಾಲಯದ ರಸ್ತೆ ಜಲಾವೃತಗೊಂಡಿದ್ದವು. ಮುಸುಕಿನಜೋಳ, ಭತ್ತ, ತರಕಾರಿ ಫಸಲು ನೀರು ಪಾಲಾಗಿದ್ದವು. ಜಾನುವಾರುಗಳು, ರಸ್ತೆಗಳು ನೀರಿನಲ್ಲಿ ಕೊಚ್ಚಿಹೋಗಿ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿ ದಿನ ಬಳಕೆ ವಸ್ತುಗಳು ನೆನೆದು ಹೋಗಿದ್ದವು. ಅಂದಿನ ಚಾಮರಾಜನಗರ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಕೊಳ್ಳೇಗಾಲ ತಾಲೂಕಿನಲ್ಲೇ ವಾಸ್ತವ್ಯ ಹೂಡಿ ಪ್ರವಾಹಪೀಡಿತರನ್ನು ಕೊಳ್ಳೇಗಾಲ ಪಟ್ಟಣದಲ್ಲಿ ತೆರೆದಿದ್ದ ಗಂಜಿಕೇಂದ್ರಗಳಿಗೆ ಸ್ಥಳಾಂತರಿದ್ದರು.

ಇದೆಲ್ಲವನ್ನು ಗಮನಿಸಿದ್ದ ಸಚಿವ ವಿ.ಸೋಮಣ್ಣ ಅವರು ಕಾವೇರಿ ನದಿ ಅಂಚಿನ ಗ್ರಾಮಗಳಲ್ಲಿ ನೆರೆ ಬಂದಾಗ ನೀರು ಗ್ರಾಮದೊಳಗೆ ನುಗ್ಗದಂತೆ ನಿಯಂತ್ರಿಸಲು ತಡೆಗೋಡೆ ನಿರ್ಮಾಣಕ್ಕೆ ಯೋಜನೆ ಸಿದ್ದಪಡಿಸಲು ಸೂಚಿಸಿದ್ದರು. ಅಧಿಕಾರಿಗಳು ೫೨ ಕೋಟಿ ರೂ. ಯೋಜನೆ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿತ್ತು ಇದು ಧೂಳು ತಿನ್ನುತ್ತ ಬಿದ್ದಿದೆ. ಯೋಜನೆ ತಯಾರಿಸಿ ೨ ವರ್ಷಗಳು ಕಳೆದಿದ್ದರೂ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಎನ್.ಮಹೇಶ್, ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸುರೇಶಕುಮಾರ್, ಸರ್ಕಾರದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗಮನಹರಿಸಲಿಲ್ಲವೇ ಅಥವಾ ಅದೊಂದು ಸಮಸ್ಯೆ ಎನ್ನುವುದು ಅವರಿಗೆ ಕಾಣಲಿಲ್ಲವೇ ಎಂಬುದು ಸ್ಥಳೀಯರ ಪ್ರಶ್ನೆ.

ನೆರೆಗೆ ತುತ್ತಾದ ಸಾಮಾನ್ಯ ಜನರು, ರೈತರು ಯಾವ ಬಗೆಯ ಕಷ್ಟ ಅನುಭವಿಸುತ್ತಾರೆ ಎಂಬುದನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಕಣ್ಣಾರೆ ಕಂಡಿರುತ್ತಾರೆ. ಆದರೂ ಶಾಶ್ವತ ಯೋಜನೆಯೊಂದನ್ನು ಅನುಷ್ಠಾನ ಮಾಡಲು ಇಚ್ಚಾಶಕ್ತಿ ಪ್ರದರ್ಶನ ಮಾಡುವುದೇ ಇಲ್ಲ. ಮಳೆಗಾಲ ಬಂದರೆ ಪೂರ್ವಭಾವಿಯಾಗಿ ಅಧಿಕಾರಿಗಳ ಸಭೆ ನಡೆಸಿ ತಾತ್ಕಾಲಿಕ ಕ್ರಮ ಕೈಗೊಳ್ಳಿ ಎಂದು ಸ್ಥಳೀಯ ಶಾಸಕರು ಸೂಚನೆ ನೀಡಿ ಕೈ ತೊಳೆದು ಕೊಳ್ಳುತ್ತಾರೆ. ಏನಾದರೂ ಅನಾಹುತವಾದರೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ.

೨೦೧೬ ರಲ್ಲೂ ಪ್ರವಾಹ ಬಂದಾಗ ಜನರು ಪರದಾಡಿದ್ದರು. ಹಿಂದೆ ಗ್ರಾಮಗಳ ಜನರು ನದಿ ಅಂಚಿನಲ್ಲಿ ಮಣ್ಣಿನ ಗೋಡೆಗಳನ್ನು ನಿರ್ಮಿಸಿಕೊಂಡಿದ್ದರು ಅದು ಹೆಚ್ಚು ಕಾಲ ಉಳಿದಿಲ್ಲ. ಧನಗೆರೆ ಗ್ರಾಮದ ಸಮುದಾಯ ಭವನದ ಬಳಿ ೧೦೦ ಮೀಟರ್ ತಡೆಗೋಡೆ ನಿರ್ಮಿಸಲಾಗಿದೆ. ಇದೊಂದನ್ನು ಬಿಟ್ಟರೆ ಎಲ್ಲಿಯೂ ತಡೆಗೋಡೆ ನಿರ್ಮಿಸಿಲ್ಲ. ಇದಕ್ಕಾಗಿ ಗ್ರಾಮಗಳ ರೈತ ಮುಖಂಡರು ಹೋರಾಟ ಮಾಡುತ್ತ ಬಂದಿದ್ದಾರೆ ಆದರೂ ದಪ್ಪ ಚರ್ಮದ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ.

ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್ ಅವರು ಈಗ ಬಿಜೆಪಿಗೆ ಸೇರಿದ್ದಾರೆ. ಅದೇ ಪಕ್ಷದ ಸರ್ಕಾರ ರಾಜ್ಯಾಡಳಿತ ನಡೆಸುತ್ತಿದೆ. ಶಾಸಕರು ಒತ್ತಡ ಹಾಕಿದರೆ ರಾಜ್ಯ ಸರ್ಕಾರದ ಮುಂದಿರುವ ಈ ತಡೆಗೋಡೆ ಯೋಜನೆಗೆ ಚಾಲನೆ ಕೊಡಿಸಬಹುದು.

ಜಿಲ್ಲೆಯ ಬಗ್ಗೆ ಕಾಳಜಿ ಇಟ್ಟುಕೊಂಡಿರುವ ವಿ.ಸೋಮಣ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ೨೦೧೯ ರಲ್ಲಿ ಕಾವೇರಿ ನದಿ ದಂಡೆಯ ಗ್ರಾಮಗಳ ಜನರು ಪ್ರವಾಹಕ್ಕೆ ಸಿಲುಕಿ ತತ್ತರಿಸಿದ್ದನ್ನು ಕಣ್ಣಾರೆ ಕಂಡಿದ್ದ ಮತ್ತು ನಿಭಾಯಿಸಿದ್ದ ಬಿ.ಬಿ.ಕಾವೇರಿ ಅವರು ಸರ್ಕಾರದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಗಿದ್ದಾರೆ. ಇವರೆಲ್ಲರು ಸಂಘಟಿತವಾಗಿ ಪ್ರಯತ್ನ ಮಾಡಿದರೆ ತಡೆಗೋಡೆ ಯೋಜನೆ ಜಾರಿಗೊಳ್ಳುವುದರಲ್ಲಿ ಅನುಮಾನವಿಲ್ಲ. ಈ ಯೋಜನೆಯ ಅವಶ್ಯಕತೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು.

ಇಲ್ಲದಿದ್ದರೆ ಕಾವೇರಿ ನದಿಯಲ್ಲಿ ಪ್ರವಾಹ ಬಂದಾಗ ಸದ್ದು ಮಾಡುವ ತಡೆಗೋಡೆ ಯೋಜನೆ ಮತ್ತೆ ಮರೆಯಾಗುತ್ತದೆ. ಅಧಿಕಾರಿಗಳು, ಜನಪ್ರತಿನಿಧಿಗಳ ಮೇಲೆ ಇಟ್ಟುಕೊಳ್ಳುವ ನಿರೀಕ್ಷೆ ಹುಸಿಯಾಗುತ್ತದೆ. ಆದ್ದರಿಂದ ಸಂಬಂಧಪಟ್ಟವರು ಯೋಜನೆ ಜಾರಿಗೆ ಕಟಿಬದ್ದರಾಗಬೇಕು. ಏನಾದರೂ ಒಳ್ಳೆಯ ಕಾರ್ಯ ಮಾಡಿದ್ದೇನೆ ಎಂಬುದನ್ನು ಹೇಳಿಕೊಳ್ಳಲಿಕ್ಕಾದರೂ ಶಾಸಕರು ಅನುಷ್ಠಾನ ಮಾಡಿಸಿದರೆ ಒಳಿತು.

 

andolana

Recent Posts

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

26 mins ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

1 hour ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

2 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

2 hours ago

ಕರ್ನಾಟಕ ಪಬ್ಲಿಕ್ ಶಾಲೆಗೆ ಮೇಲ್ದರ್ಜೇಗೇರಿಸಲು ಅಗತ್ಯ ಕ್ರಮ: ʻಜಿಟಿಡಿʼ

ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ…

2 hours ago

ಪಶ್ಚಿಮಘಟ್ಟ: 16114 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ ಮಿತಿ ಸೂಕ್ತ :ಈಶ್ವರ ಖಂಡ್ರೆ

ಪಶ್ಚಿಮಘಟ್ಟ ಕುರಿತ ಕಸ್ತೂರಿ ರಂಗನ್ ವರದಿ ಬಗ್ಗೆ ಬಾಧ್ಯಸ್ಥರ ಸಭೆ ಬೆಂಗಳೂರು: ರಾಜ್ಯದ ವಿವಿಧ ಅರಣ್ಯ ಮತ್ತು ವನ್ಯಜೀವಿ ತಾಣಗಳ ಸುತ್ತ…

3 hours ago