ಎಡಿಟೋರಿಯಲ್

ಬಿಜೆಪಿಗೆ ಪರ್ಯಾಯ ನಾಯಕನ ಕೊರತೆ; ಹೈಕಮಾಂಡ್‌ಗೆ ವಿಜಯೇಂದ್ರ ಅನಿವಾರ್ಯತೆ

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ. ವೈ. ವಿಜಯೇಂದ್ರ ಅವರು ಮುಂದುವರಿಯುವುದು ಅನಿವಾರ್ಯ ಎಂದು ಬಿಜೆಪಿ ಹೈಕಮಾಂಡ್ ವರಿಷ್ಠರು ನಿರ್ಧರಿಸಿದ್ದಾರೆ. ಅಂದ ಹಾಗೆ ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವುದು ಅನಿವಾರ್ಯ ಎಂದ ಕೂಡಲೇ ಬಿಜೆಪಿಯಲ್ಲಿ ಒಳಜಗಳ ನಿಲ್ಲುತ್ತದೆ ಅಂತೇನಲ್ಲ. ಆದರೆ ಹೀಗೆ ವಿಜಯೇಂದ್ರ ಅವರ ವಿರುದ್ಧ ಜಗಳ ಮಾಡುತ್ತಿರುವವರ ಪೈಕಿ ಒಬ್ಬನೇ ಒಬ್ಬ ಜನನಾಯಕ ಬಿಜೆಪಿ ವರಿಷ್ಠರಿಗೆ ಕಾಣಿಸುತ್ತಿಲ್ಲ. ಹಾಗಾದರೆ ಜನನಾಯಕ ಅಂದರೆ ಯಾರು? ನೇರವಾಗಿ ಹೇಳಬೇಕೆಂದರೆ ಬೇರೆ ಸಮುದಾಯದ ಅಭ್ಯರ್ಥಿಗಳಿಗೆ ತಮ್ಮ ಸಮುದಾಯದ ಮತಗಳನ್ನು ಹಾಕಿಸಬಲ್ಲವರು ಜನನಾಯಕರು. ಹಾಗೆ ನೋಡಿದರೆ ಕರ್ನಾಟಕದಲ್ಲಿ ಇಂತಹ ಶಕ್ತಿ ಇರುವುದು ಮೂವರಿಗೆ. ಒಬ್ಬರು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ. ಮತ್ತೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ, ಮಗದೊಬ್ಬರು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ.

ಅರ್ಥಾತ್, ಪಕ್ಷದ ಅಭ್ಯರ್ಥಿ ಯಾವುದೇ ಸಮುದಾಯದವರಿರಲಿ. ಅವರಿಗೆ ತಮ್ಮ ಸಮುದಾಯದ ಮತಗಳು ಬೀಳುವಂತೆ ಮಾಡುವ ಶಕ್ತಿ ಈ ಮೂವರು ನಾಯಕರಿಗಿದೆ. ಹೀಗಾಗಿ ಕರ್ನಾಟಕದ ನೆಲೆಯಲ್ಲಿ ಇವತ್ತಿಗೂ ಈ ಮೂವರಷ್ಟು ಶಕ್ತಿಶಾಲಿ ಜನನಾಯಕರು ಕಾಣಿಸುತ್ತಿಲ್ಲ. ಅಂದ ಹಾಗೆ ವಯಸ್ಸಿನ ಕಾರಣದಿಂದ ದೇವೇಗೌಡರ ಈ ಶಕ್ತಿಯನ್ನು ಕುಮಾರಸ್ವಾಮಿ ಒಂದಷ್ಟು ಮಟ್ಟಿಗೆ ಪಡೆದುಕೊಂಡಿದ್ದಾರೆ. ಇಂತಹದೇ ಕಾರಣಕ್ಕಾಗಿ ಯಡಿಯೂರಪ್ಪ ಅವರ ಶಕ್ತಿ ಮೆಲ್ಲ ಮೆಲ್ಲಗೆ ಬಿ. ವೈ. ವಿಜಯೇಂದ್ರ ಅವರಿಗೆ ವರ್ಗಾವಣೆಯಾಗುತ್ತಿದೆ. ಹೀಗೆ ಯಡಿಯೂರಪ್ಪ ಅವರ ಶಕ್ತಿ ಬಿ. ವೈ. ವಿಜಯೇಂದ್ರ ಅವರಿಗೆ ವರ್ಗಾವಣೆಯಾಗುತ್ತಿರುವ ರೀತಿಯೇ ಬಿಜೆಪಿಯಲ್ಲಿರುವ ಹಲವು ಸಿಎಂ ಅಭ್ಯರ್ಥಿಗಳಿಗೆ ಇರುಸು ಮುರಿಸಿನ ವಿಷಯ. ಇವತ್ತು ಯಡಿಯೂರಪ್ಪ ಅವರಿಗಿರುವ ಜನನಾಯಕ ಎಂಬ ಶಕ್ತಿ ವಿಜಯೇಂದ್ರ ಅವರಿಗೆ ಪರಿಪೂರ್ಣವಾಗಿ ವರ್ಗಾವಣೆಯಾದರೆ ಮುಂದಿನ ಇಪ್ಪತ್ತು-ಇಪ್ಪತ್ತೈದು ವರ್ಷಗಳ ಕಾಲ ವಿಜಯೇಂದ್ರ ರಾಜ್ಯ ಬಿಜೆಪಿಯ ಮುಂಚೂಣಿಯಲ್ಲಿರುತ್ತಾರೆ. ಹೀಗಾಗಿಯೇ ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುವ ವೇಳೆಗೆ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿರಬಾರದು ಎಂಬುದು ಹಲವು ನಾಯಕರ ಲೆಕ್ಕಾಚಾರ. ಒಂದು ವೇಳೆ ತಮ್ಮ ಲೆಕ್ಕಾಚಾರ ಈಡೇರದೆ ಹೋದರೆ ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗುವ ತಮ್ಮ ಕನಸನ್ನು ಮರೆಯುವುದು ಅನಿವಾರ್ಯ ಅಂತ ಇಂತಹವರಿಗೆ ಗೊತ್ತಿದೆ. ಹೀಗಾಗಿ ಇಂತಹ ನಾಯಕರು ಸ್ಥಳೀಯವಾಗಿ ಮಾತ್ರವಲ್ಲ, ಹೈಕಮಾಂಡ್ ಮಟ್ಟದಲ್ಲೂ ದೊಡ್ಡ ಮಟ್ಟದ ಕಸರತ್ತು ನಡೆಸುತ್ತಿದ್ದಾರೆ. ಆದರೆ ಇವರ ಒಳಕಸರತ್ತಿನ ಶಕ್ತಿ ಎಷ್ಟೇ ಶಕ್ತಿಶಾಲಿಯಾಗಿ ಕಂಡರೂ ಬಾಹ್ಯ ಶಕ್ತಿಯ ವಿಷಯ ಬಂದಾಗ ಅವರು ಯಾರೂ ವಿಜಯೇಂದ್ರ ಅವರಂತೆ ಜನನಾಯಕರಾಗುವ ಮೂಲಗುಣವನ್ನು ಹೊಂದಿಲ್ಲ.

ಇಂತಹ ಮೂಲಗುಣವನ್ನು ಸಂಶೋಧಿಸುವ ಸಲುವಾಗಿಯೇ ಬಿಜೆಪಿಯ ವರಿಷ್ಠರು ಇತ್ತೀಚಿನ ದಿನಗಳಲ್ಲಿ ಕಸರತ್ತು ನಡೆಸಿದರು. ವಿಜಯೇಂದ್ರ ಅವರ ಜಾಗಕ್ಕೆ ಯಾರನ್ನು ತಂದರೆ ಪಕ್ಷದ ಶಕ್ತಿ ಹೆಚ್ಚಬಹುದು ಅಂತ ನೋಡಿದರು. ಆದರೆ ವಿಜಯೇಂದ್ರ ಅವರ ವಿರುದ್ಧ ಹೋರಾಡುತ್ತಿರುವ ಬಹುತೇಕರ ಶಕ್ತಿ ತುಂಬ ಕಡಿಮೆ. ನಿಜ ಹೇಳಬೇಕೆಂದರೆ ಈ ನಾಯಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಭಾವಿಗಳೇ ಹೊರತು ಬೇರೆ ಜಿಲ್ಲೆಗಳಲ್ಲಿ, ಒಟ್ಟಾರೆಯಾಗಿ ರಾಜ್ಯ ಮಟ್ಟದಲ್ಲಿ ಪ್ರಭಾವಿಗಳಲ್ಲ. ಅರ್ಥಾತ್, ಇಂತಹವರನ್ನು ನಿಲ್ಲಿಸಿದರೆ ಅವರನ್ನು ಗೆಲ್ಲಿಸಿಕೊಂಡು ಬರುವ ಶಕ್ತಿ ಇರುವವರಲ್ಲ.

ಇನ್ನಷ್ಟು ವಿಸ್ತೃತವಾಗಿ ಹೇಳಬೇಕೆಂದರೆ ವಿಜಯೇಂದ್ರ ಅವರ ವಿರುದ್ಧ ಹೋರಾಡುತ್ತಿರುವ ಬಹುತೇಕ ನಾಯಕರು ತಾವು ಬಯಸಿದವರಿಗೆ ತಮ್ಮ ಸಮುದಾಯದ ಮತಗಳನ್ನು ಹಾಕಿಸುವ ಶಕ್ತಿ ಹೊಂದಿಲ್ಲ. ತೀರಾ ಹೆಚ್ಚೆಂದರೆ ಇವರಿಗೆ ಪಕ್ಷದ ಹೆಸರಿನಲ್ಲಿ, ಪ್ರಧಾನಿ ಮೋದಿಯವರ ಹೆಸರಿನಲ್ಲಿ, ಹಿಂದುತ್ವದ ಹೆಸರಿನಲ್ಲಿ ಮತ ಕೇಳುವ ಅನಿವಾರ್ಯತೆ ಇದೆಯೇ ಹೊರತು, ತಮ್ಮ ನಾಮಬಲದ ಮೇಲೆ ಒಬ್ಬರನ್ನೂ ಗೆಲ್ಲಿಸುವ ಶಕ್ತಿ ಇಲ್ಲ. ಇದು ಬಿಜೆಪಿಯ ದೈನೇಸಿ ಸ್ಥಿತಿ ಎಂದರೆ ತಪ್ಪೇನಲ್ಲ. ಅಂದರೆ, ಯಡಿಯೂರಪ್ಪ ಎಂಬ ಶಕ್ತಿಗೆ ಪರ್ಯಾಯವಾಗಿ ಮತ್ತೊಬ್ಬ ನಾಯಕನನ್ನು ಬೆಳೆಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಒಂದು ಕಾಲದಲ್ಲಿ ಯಡಿಯೂರಪ್ಪ ಅವರಿಗೆ ಎದುರಾಳಿಯಾಗಿ ಅನಂತಕುಮಾರ್ ಇದ್ದರಾದರೂ ಮತ್ತು ಸ್ಥಳೀಯವಾಗಿ ಕಾರ್ಯಕರ್ತರ ಮೇಲೆ ಹಿಡಿತವಿದ್ದರೂ ಅವರಿಗೆ ಯಡಿಯೂರಪ್ಪ ಅವರು ತಲುಪಿದ ಜನನಾಯಕನ ಪಟ್ಟಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಇದಕ್ಕೆ ಜಾತಿಯೂ ಒಂದು ಕಾರಣ.

ಏಕೆಂದರೆ ಬಿಜೆಪಿಯ ಮೂಲಶಕ್ತಿಯಾಗಿರುವ ಸಮುದಾಯದಿಂದ ಬಂದವರಾದ್ದರಿಂದ ಅನಂತಕುಮಾರ್ ಅವರಿಗೆ ಜನನಾಯಕನ ಪಟ್ಟ ದಕ್ಕಲಿಲ್ಲ. ಇದರರ್ಥ ಬೇರೇನೂ ಅಲ್ಲ. ಅನಂತಕುಮಾರ್ ಪ್ರತಿನಿಧಿಸುವ ಸಮುದಾಯವೇನಿದೆ ಅದು ಅನಂತಕುಮಾರ್ ಅವರಿದ್ದರೂ ಬಿಜೆಪಿಗೆ ಹೆಚ್ಚಿನ ಬೆಂಬಲ ನೀಡುತ್ತಿತ್ತು. ಇಲ್ಲದೆ ಇದ್ದರೂ ಬಿಜೆಪಿಗೆ ಹೆಚ್ಚಿನ ಬೆಂಬಲ ನೀಡುತ್ತಿತ್ತು. ಆದರೆ ಯಡಿಯೂರಪ್ಪ ಅವರ ಶಕ್ತಿ ಬೇರೆ. ೨೦೦೪ರ ನಂತರ ರಾಜ್ಯದ ಪ್ರಬಲ ಲಿಂಗಾಯತ ಸಮುದಾಯ ಅವರನ್ನು ತನ್ನ ನಾಯಕ ಎಂದು ಒಪ್ಪಿಕೊಂಡಿತು ಮತ್ತು ಅವರು ಬಿಜೆಪಿಯ ಮುಂಚೂಣಿಯಲ್ಲಿದ್ದಾಗಲೆಲ್ಲ ಬಿಜೆಪಿಯನ್ನು ಬೆಂಬಲಿಸಿತು. ೨೦೧೩ರಲ್ಲಿ ಯಡಿಯೂರಪ್ಪ ಬಿಜೆಪಿ ತೊರೆದಾಗ ಬಿಜೆಪಿಗೆ ತಿರುಗೇಟು ಹೊಡೆಯಿತು. ಆ ಸಂದರ್ಭದಲ್ಲಿ ನಲವತ್ತು ಸ್ಥಾನಗಳಿಗೆ ಕುಸಿದ ಬಿಜೆಪಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನವನ್ನೂ ಪಡೆಯಲಿಲ್ಲ.

ಯಾವಾಗ ಇದು ಅರ್ಥವಾಯಿತೋ ಆಗ ಬಿಜೆಪಿ ವರಿಷ್ಠರು ಬೆನ್ನು ಬಿದ್ದು ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆದುಕೊಂಡರು. ಮುಂದೆ ೨೦೧೮ರ ಚುನಾವಣೆಯಲ್ಲಿ ಬಿಜೆಪಿ ೧೦೪ ಸ್ಥಾನಗಳನ್ನು ಗೆಲ್ಲಲು, ಮರು ವರ್ಷ ಕರ್ನಾಟಕದ ಅಧಿಕಾರ ಸೂತ್ರ ಹಿಡಿಯಲು ಮುಖ್ಯ ಕಾರಣರಾದವರು ಯಡಿಯೂರಪ್ಪ.

ಮುಂದೆ ೨೦೨೧ರಲ್ಲಿ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿತಾದರೂ ನಂತರ ಬಂದ ಬಸವರಾಜ ಬೊಮ್ಮಾಯಿ ಸ್ಟೇಜ್ ಮ್ಯಾನೇಜರ್ ಆದರೇ ಹೊರತು ಜನನಾಯಕರಾಗಲಿಲ್ಲ. ಹೀಗೆ ಯಡಿಯೂರಪ್ಪ ಅವರ ಜಾಗಕ್ಕೆ ಯಾರೇ ಲಿಂಗಾಯತ ಸಮುದಾಯದ ವ್ಯಕ್ತಿಯನ್ನು ತಂದು ಕೂರಿಸಿದರೂ ಅವರು ಲಿಂಗಾಯತ ನಾಯಕರಾಗುತ್ತಿಲ್ಲ ಎಂದರೆ ಏನರ್ಥ? ಯಾರೇನೇ ಮಾಡಿದರೂ ಲಿಂಗಾಯತ ಸಮುದಾಯ ಯಡಿಯೂರಪ್ಪ ಅವರನ್ನು ಒಪ್ಪಿದಂತೆ ಮತ್ತೊಬ್ಬ ಲಿಂಗಾಯತ ವ್ಯಕ್ತಿಯನ್ನು ನಾಯಕ ಎಂದು ಒಪ್ಪುತ್ತಿಲ್ಲ.

ಈಗ ಅಂತಹ ಯಡಿಯೂರಪ್ಪ ಅವರ ಶಕ್ತಿ ವಿಜಯೇಂದ್ರ ಅವರ ಬೆನ್ನಿಗೆ ನಿಂತಿದೆ. ಪರಿಣಾಮ ವಿಜಯೇಂದ್ರ ಜನನಾಯಕನ ಪಟ್ಟಕ್ಕೆ ಹತ್ತಿರವಾಗುತ್ತಿದ್ದಾರೆ. ಒಂದು ವೇಳೆ ಜನನಾಯಕನ ಪಟ್ಟದತ್ತ ಸಾಗುತ್ತಿರುವ ಅವರು ತಮ್ಮ ಗುರಿ ತಲುಪಿದರೆ ಅನುಮಾನವೇ ಬೇಡ, ರಾಜ್ಯ ಬಿಜೆಪಿಯಲ್ಲಿ ಅವರಿಗೆ ಪರ್ಯಾಯ ನಾಯಕ ಅಂತ ಯಾರೂ ಇರುವುದಿಲ್ಲ.

ರಾಜ್ಯ ಬಿಜೆಪಿಯ ಬಹುತೇಕರ ಆತಂಕ ಇದು. ಮತ್ತು ಇದೇ ಕಾರಣಕ್ಕಾಗಿ ಅವರು ವಿಜಯೇಂದ್ರ ಅವರ ವಿರುದ್ಧ ಪಕ್ಷದ ಒಳ ಮಟ್ಟದಲ್ಲಿ ಭಾರೀ ಕುಸ್ತಿ ನಡೆಸುತ್ತಿದ್ದಾರೆ. ಇಂತಹ ಕುಸ್ತಿ ನಡೆಸುತ್ತಿರುವವರ ಚಾತುರ್ಯವನ್ನು ಕಂಡು ಬಿಜೆಪಿ ವರಿಷ್ಠರು ಕೆಲ ಕಾಲ ವಿಜಯೇಂದ್ರ ಜಾಗಕ್ಕೆ ಯಾರು? ಅಂತ ಹುಡುಕಿದ್ದು ನಿಜ. ಆದರೆ ಈ ಕ್ಷಣದವರೆಗೆ ಅವರಿಗೆ ವಿಜಯೇಂದ್ರ ಅವರಂತೆ ಜನನಾಯಕರಾಗುವ ಹೆಸರುಗಳು ಕಾಣಿಸುತ್ತಿಲ್ಲ. ಪರಿಣಾಮ ವಿಜಯೇಂದ್ರ ಅವರನ್ನೇ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮುಂದುವರಿಸುವ ಅನಿವಾರ್ಯತೆಗೆ ಅವರು ಸಿಲುಕಿದ್ದಾರೆ. ಅದೇ ಸದ್ಯದ ವಿಶೇಷ.

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ರೈಲ್ವೆ ಮೇಲ್ಸೇತುವೆ; ಭೂ ದರ ಕಗ್ಗಂಟು ಬಗೆಹರಿಯುವುದೇ?

ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…

3 hours ago

ಜನವರಿಗೆ ಚಾ.ಬೆಟ್ಟದ ಅಭಿವೃದ್ಧಿ ಕಾಮಗಾರಿ ಶುರು

ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…

3 hours ago

ಕೋಳಿ ಮೊಟ್ಟೆಗೆ ಬರ: ಏರಿದ ದರ

ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ  ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…

3 hours ago

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

12 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

13 hours ago