ಚಿತ್ರಮಂದಿರಗಳಿಗೆ ಬಂದು ಕನ್ನಡ ಚಿತ್ರಗಳನ್ನು ನೋಡುವವರ ಸಂಖ್ಯೆ ತೀರಾ ಇಳಿಮುಖವಾಗಿದೆ. ಪರಭಾಷಾ ಚಿತ್ರಗಳನ್ನು ನೋಡುವವರ ಸಂಖ್ಯೆ ಅಷ್ಟೇನೂ ಕಡಿಮೆಯಾಗಿಲ್ಲ ಎಂಬುದು ಸಾಮಾನ್ಯವಾಗಿ ಕೇಳಿಬರುತ್ತಿರುವ ಮಾತು. ನಿಜವೂ ಕೂಡ. ಕಳೆದ ವಾರದವರೆಗೆ ತೆರೆಕಂಡ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಗೆದ್ದ ಚಿತ್ರಗಳೆಷ್ಟು? ಬೆರಳೆಣಿಕೆಯವು. ಇದಕ್ಕೇನು ಕಾರಣ? ಚಿತ್ರದ ಗುಣಮಟ್ಟವೇ? ಪ್ರಚಾರದ ಕೊರತೆಯೇ? ಹೀಗೆ ಪ್ರಶ್ನೆಗಳು ಏಳುತ್ತಲೇ ಇರುತ್ತವೆ.
ಬರೇ ಪ್ರಚಾರ ಮಾತ್ರದಿಂದ ಚಿತ್ರಗಳು ಗೆಲ್ಲುತ್ತವೆ, ಪ್ರೇಕ್ಷಕರು ಚಿತ್ರಗಳನ್ನು ನೋಡುತ್ತಾರೆ, ಗಲ್ಲಾಪೆಟ್ಟಿಗೆ ತುಂಬುತ್ತದೆ ಎನ್ನುವುದಾದರೆ, ಅದ್ಧೂರಿ ಪ್ರಚಾರ ಮಾಡಿದ ಚಿತ್ರಗಳೆಲ್ಲ ಗಲ್ಲಾಪೆಟ್ಟಿಗೆ ಲೂಟಿ ಮಾಡಬೇಕಾಗಿತ್ತು. ಹಾಗಾಗುತ್ತಿಲ್ಲ. ಎರಡನೇ ಪ್ರದರ್ಶನಕ್ಕೇ ಪ್ರೇಕ್ಷಕ ವಿಮುಖನಾದ ಸಾಕಷ್ಟು ಚಿತ್ರಗಳಿವೆ.
ಕಳೆದ ವಾರ ತೆರೆಕಂಡ ‘ಆದಿಪುರುಷ್’ ಚಿತ್ರವನ್ನೇ ತೆಗೆದುಕೊಳ್ಳಿ. ವಾರಾಂತ್ಯದ ಗಳಿಕೆ ಸಾಕಷ್ಟಿತ್ತು, ನಿಜ. ಆದರೆ ಸೋಮವಾರ ದಿಢೀರನೆ ಗಳಿಕೆ ಪ್ರತಿಶತ 75ರಷ್ಟು ಇಳಿಮುಖವಾಯಿತು. ರಾಮಾಯಣವನ್ನು ಇಂದಿನ ಮಂದಿಗೆ ಬೇಕಾದಂತೆ, ತಾಂತ್ರಿಕ ಶ್ರೀಮಂತಿಕೆಯೊಂದಿಗೆ ಅದ್ಧೂರಿಯಾಗಿ ನಿರ್ಮಿಸಿ, ನೀಡಿದ್ದೇವೆ ಎಂದು ನಿರ್ಮಾಪಕ ಹಾಗೂ ನಿರ್ದೇಶಕರು ಹೇಳಿದರೇನೋ ಹೌದು. ಗ್ರಾಫಿಕ್ಸ್, ವಿಶೇಷ ಪರಿಣಾಮಗಳಿಗಾಗಿ, ಒಟ್ಟು ನಿರ್ಮಾಣ ವೆಚ್ಚದ ಅರ್ಧದಷ್ಟನ್ನು ವ್ಯಯಿಸಿದ್ದೂ ಹೌದು. ಆದರೆ ಅವೆಲ್ಲ ಬಹುತೇಕ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಹಲವಾರು ದೃಶ್ಯಗಳು ಹಾಲಿವುಡ್ ಚಿತ್ರಗಳವುಗಳನ್ನು ಹೋಲುತ್ತವೆ ಎಂದು ಆ ದೃಶ್ಯಗಳ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಗಳಿದ್ದವು. ಉಡುಗೆ ತೊಡುಗೆಗಳು, ಸಂಭಾಷಣೆಗಳ ಕುರಿತೂ.
ರಾಮಾಯಣದಂತಹ ಮಹಾಕೃತಿಗೆ ಅವಮಾನವಾಗುವಂತಹ ಚಿತ್ರ ಇದು ಎನ್ನುವವರೆಗೆ ಆಕ್ಷೇಪಗಳಿದ್ದವು. ಒಂದೆರಡು ಸಂಭಾಷಣೆಗಳು ತೀರಾ ಕೀಳು ಅಭಿರುಚಿಯವುಗಳಾಗಿದ್ದು ಅವುಗಳನ್ನು ಚಿತ್ರ ಬಿಡುಗಡೆಯ ನಂತರ ಬದಲಾಯಿಸಿದ ಪ್ರಸಂಗವೂ ನಡೆಯಿತು. ನೇಪಾಳದಲ್ಲಿ ಆ ಚಿತ್ರದ ಬಿಡುಗಡೆಗೆ ಬಿಡಲಿಲ್ಲ.
ಭಾರತದಲ್ಲಿ ಅಖಿಲ ಭಾರತೀಯ ಕಾರ್ಮಿಕರ ಸಂಘಟನೆಯೊಂದು, ಈ ಚಿತ್ರವನ್ನು ಬಹಿಷ್ಕರಿಸಬೇಕು ಎಂದು ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದೆ. ಹಿಂದೆ ದೂರದರ್ಶನದಲ್ಲಿ ಪ್ರಸಾರವಾದ ರಾಮಾಯಣ ಸರಣಿಯಲ್ಲಿ ಪಾಲ್ಗೊಂಡಿದ್ದವರಲ್ಲಿ ಹಲವರು ತರಹೇವಾರಿ ಟೀಕೆಗಳನ್ನು ಮಾಡತೊಡಗಿದ್ದಾರೆ. ಮುಖ್ಯವಾಗಿ ಚಿತ್ರದ ಸಂಭಾಷಣೆಯ ಕುರಿತಂತೆ ಹೆಚ್ಚು ವಿರೋಧ ವ್ಯಕ್ತವಾಗಿದೆ.
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿಹೆಚ್ಚು ವೆಚ್ಚವಾದ ಚಿತ್ರ ಇದು ಎನ್ನಲಾಗಿದ್ದು, ಅದರ ಗಳಿಕೆಯ ಕುರಿತಂತೆ ಈಗಾಗಲೇ ತರಹೇವಾರಿ ಅಭಿಪ್ರಾಯಗಳು ಇವೆ. ನಿರ್ಮಾಪಕರು ಚಿತ್ರದ ಪ್ರವೇಶ ದರವನ್ನು ಇಳಿಸಿದ್ದಾರೆ. ನಿನ್ನೆ ಮತ್ತು ಇಂದು ಎಲ್ಲ ಮಲ್ಟಿಪ್ಲೆಕ್ಸ್ಗಳಲ್ಲಿ ಅದರ ಪ್ರವೇಶ ದರವನ್ನು 150 ರೂ.ಗಳಿಗೆ ಇಳಿಸಿದ ಪ್ರಕಟಣೆಯನ್ನು ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಟಿ–ಸೀರೀಸ್ ಮಾಡಿದೆ!
ಚಿತ್ರ ಚೆನ್ನಾಗಿರಲಿ, ಚೆನ್ನಾಗಿಲ್ಲದೆ ಇರಲಿ, ಪ್ರೇಕ್ಷಕ ಚಿತ್ರಮಂದಿರಕ್ಕೆ ಬರಲು ಪ್ರವೇಶ ದರ ಮುಖ್ಯ ಎನ್ನುವುದನ್ನು ಟಿ ಸೀರೀಸ್ ಮನಗಂಡಿದೆ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ಇದು ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳ ಚಿತ್ರಗಳ ಪ್ರೇಕ್ಷಕರಿಗೆ ಅನ್ವಯಿಸುವ ಮಾತು. ತಮಿಳುನಾಡು ಮತ್ತು ಆಂಧ್ರಪ್ರದೇಶಗಳ ಚಿತ್ರಮಂದಿರಗಳ ಪ್ರವೇಶ ದರಕ್ಕೆ ಸರ್ಕಾರದ ನಿಯಂತ್ರಣವಿದೆ. ಮಲ್ಟಿಪ್ಲೆಕ್ಸ್ಗಳ ಸೌಲಭ್ಯಗಳಿಗೆ ಅನುಗುಣವಾಗಿ ಇದನ್ನು ಆಯಾ ಜಿಲ್ಲಾಧಿಕಾರಿಗಳು ನಿರ್ಧರಿಸುತ್ತಾರೆ. ಎಲ್ಲೂ ಪ್ರವೇಶ ದರ 200 ರೂ.ಗಳನ್ನು ಮೀರುವುದಿಲ್ಲ. ಅಷ್ಟೇ ಅಲ್ಲ, ಮುಂದಿನ ಎರಡು ಮೂರು ಸಾಲುಗಳಿಗೆ ಅದು 60 ರೂ. ಮೀರದು.
ಅದ್ಧೂರಿ ಚಿತ್ರಗಳು, ನೂರು ಕೋಟಿ ರೂ.ಗಳಿಗೂ ಅಧಿಕ ನಿರ್ಮಾಣ ವೆಚ್ಚದ ಚಿತ್ರಗಳು ಸರ್ಕಾರದ ಅನುಮತಿ ಪಡೆದು ಪ್ರವೇಶ ದರವನ್ನು ಏರಿಸಿಕೊಳ್ಳಬಹುದು. ಅದು ಕೂಡ ಸೀಮಿತ ವಾರಗಳಿಗೆ ಮಾತ್ರ. ಆ ರಾಜ್ಯಗಳಲ್ಲಿ ಇರುವಂತೆ ಇಲ್ಲಿ ಸರ್ಕಾರದ ನಿಯಂತ್ರಣ ಇಲ್ಲ. ಅದರಲ್ಲೂ ಮಲ್ಟಿಪ್ಲೆಕ್ಸ್ಗಳ ಪ್ರವೇಶ ದರ. ಅದ್ಧೂರಿ ಚಿತ್ರಗಳು ತೆರೆಕಂಡಾಗ ಮನಸೋ ಇಚ್ಛೆ ಪ್ರವೇಶದರ ಅಲ್ಲಿರುತ್ತವೆ. ಜನಸಾಮಾನ್ಯರಿಗೆ ಇದು ಎಟಕದು. ತಿಂಗಳ ಸಂಬಳ ಕೆಲವೇ ಸಾವಿರ ರೂ. ಪಡೆಯುವ ಉದ್ಯೋಗಿಗಳು ತಮ್ಮ ಕುಟುಂಬದ ಜೊತೆ ಈ ದುಬಾರಿ ಪ್ರವೇಶ ಶುಲ್ಕ ಭರಿಸಿ ವಾರಕ್ಕೊಂದು ಚಿತ್ರ ನೋಡುವುದು ಸಾಧ್ಯವಿಲ್ಲದ ಮಾತು. ಯಾವುದೇ ಚಿತ್ರ ತೆರೆಕಂಡರೂ ಕೆಲವೇ ವಾರಗಳಲ್ಲಿ ಅದು ಒಟಿಟಿಯಲ್ಲೋ, ಕಿರುತೆರೆಯಲ್ಲೋ ಪ್ರಸಾರವಾಗುತ್ತದೆ ಅಲ್ಲಿ ನೋಡಿದರಾಯಿತು ಎಂದುಕೊಳ್ಳುವವರೇ ಹೆಚ್ಚು.
ಇನ್ನು ಕನ್ನಡದ ವಿಷಯಕ್ಕೆ ಬರುವುದಾದರೆ, ಕಳೆದ 24 ವಾರಗಳಲ್ಲಿ ನೂರಕ್ಕೂ ಹೆಚ್ಚು ಕನ್ನಡ ಚಿತ್ರಗಳು ತೆರೆಕಂಡಿವೆ. ಸರಾಸರಿ ವಾರಕ್ಕೆ ನಾಲ್ಕಕ್ಕೂ ಮೀರಿ. ಚಿತ್ರರಂಗದ ಮಂದಿ, ಅದಕ್ಕೆ ಸಂಬಂಧಪಟ್ಟವರನ್ನು ಹೊರತುಪಡಿಸಿದರೆ, ಚಿತ್ರಮಂದಿರಗಳಿಗೆ ಹೋಗಿ ವಾರದಲ್ಲಿ ನಾಲ್ಕು ಚಿತ್ರಗಳನ್ನು ನೋಡುವ ಕುಟುಂಬಗಳಾಗಲೀ, ವ್ಯಕ್ತಿಗಳಾಗಲೀ ಅಪರೂಪ. ಅದು ಕೂಡ ಪ್ರತಿ ದಿನ ಕಿರುತೆರೆಯಲ್ಲಿ ಸಾಕಷ್ಟು ಚಿತ್ರಗಳನ್ನು ನೋಡಲು ಅವಕಾಶ ಇರುವ ಈ ದಿನಗಳಲ್ಲಿ!
ಅದ್ಧೂರಿ ವೆಚ್ಚದ ಚಿತ್ರಗಳಿರಲಿ, ಸಾಧಾರಣ ವೆಚ್ಚದವುಗಳಾಗಿರಲಿ, ಪ್ರಚಾರದ ಕೊರತೆ ಚಿತ್ರದ ಗಳಿಕೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಮಾತು ಈಗ ಹೆಚ್ಚಾಗಿ ಕೇಳಿಬರುತ್ತಿದೆ. ಇತ್ತೀಚಿನ ದಿನಗಳಲ್ಲಿ, ಸಾಧಾರಣ ಚಿತ್ರಕ್ಕಾಗಿ ಖರ್ಚು ಮಾಡುತ್ತಿರುವ ಮೊತ್ತಕ್ಕಿಂತಲೂ ಹೆಚ್ಚು ಹಣ ಪ್ರಚಾರಕ್ಕೆ ಬೇಕು ಎನ್ನುವುದು ಕೇಳಿಬರುತ್ತಿರುವ ಮಾತು.
ಸಾಂಪ್ರದಾಯಿಕ ಪ್ರಚಾರ ವ್ಯವಸ್ಥೆಗಳಾದ, ಭಿತ್ತಿಪತ್ರಗಳು, ಕಟೌಟ್ಗಳು, ಪತ್ರಿಕೆಗಳಲ್ಲಿ ಜಾಹೀರಾತು, ಟಿವಿಗಳಲ್ಲಿ ಜಾಹೀರಾತುಗಳ ಜೊತೆಗೆ ಈಗ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ಪ್ರತ್ಯೇಕ ವೆಚ್ಚ ಮಾಡಬೇಕಾಗಿದೆ. ಇವುಗಳನ್ನು ನೋಡಿಕೊಳ್ಳುವ ಮಧ್ಯವರ್ತಿಗಳೂ ಸಾಕಷ್ಟು ಮಂದಿ ಇದ್ದಾರೆ.
ಮೂಲಗಳ ಪ್ರಕಾರ, ಪತ್ರಿಕೆ ಜಾಹೀರಾತು, ಟಿವಿ ಜಾಹೀರಾತು, ಭಿತ್ತಿಪತ್ರಗಳ ಮುದ್ರಣ, ಕಟೌಟ್ಗಳು ಇವುಗಳ ವೆಚ್ಚ ಸಾಕಷ್ಟು ಮಂದಿ ನಿರ್ಮಾಪಕರು, ವಿತರಕರಿಗೆ ಗೊತ್ತು. ಆದರೆ ಡಿಜಿಟಲ್ ಮಾರ್ಕೆಟಿಂಗ್ ಕುರಿತಂತೆ ಇದಮಿತ್ಥಂ ಎನ್ನುವಂತೆ ಹೇಳುವವರು ಇಲ್ಲ. ಆ ಕಾರಣದಿಂದಲೇ ಡಿಜಿಟಲ್ ಪ್ರಚಾರದ ಹೆಸರಲ್ಲಿ ನಿರ್ಮಾಪಕರ ಸಾಕಷ್ಟು ಹಣ ಪೋಲಾಗುತ್ತದೆ ಎನ್ನಲಾಗಿದೆ. ಜಾಲತಾಣಗಳು, ಇನ್ಸ್ಟಾಗ್ರಾಂಗಳು, ಟ್ರೋಲ್ಗಳು, ಮೀಮ್ಗಳು, ರೀಲ್ಗಳಲ್ಲಿ ಪ್ರಚಾರಕ್ಕೆ ಕೊಡುವ ಮೊತ್ತದಿಂದ ಆಗುವ ಅನುಕೂಲಗಳ ಕುರಿತಂತೆ ಯಾರಿಗೂ ಏನೂ ಹೇಳಲಾಗದು. ಪತ್ರಿಕೆಯೊಂದರಲ್ಲಿ ಜಾಹೀರಾತು ಪ್ರಕಟವಾಗುವುದರ ಮೂಲಕ ಒಂದು ಚಿತ್ರದ ಬಿಡುಗಡೆ ಆಗಿದೆ ಎಂದು ತಿಳಿಯುತ್ತದೆ. ಅದರ ಪ್ರಸಾರದ ಮೇಲೆ ಅದು ಎಷ್ಟು ಜನರನ್ನು ತಲುಪುತ್ತದೆ ಎಂದು ಹೇಳಬಹುದು.
ಡಿಜಿಟಲ್ ಜಾಹೀರಾತುಗಳದೂ ಅದೇ ರೀತಿ ಆದರೂ, ಹೊಸ ತಂತ್ರಜ್ಞಾನ, ಈ ಸಂಖ್ಯೆಯನ್ನು ತಮಗೆ ಬೇಕಾದಂತೆ ಮಾಡಿಕೊಳ್ಳುವ ಅವಕಾಶವನ್ನೂ ಕೊಟ್ಟಿದೆ. ಉದಾಹರಣೆಗೆ ಹೊಸ ಚಿತ್ರವೊಂದರ ಹಾಡು ಅಥವಾ ಟ್ರ್ತ್ಯೈಲರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಅದನ್ನು ನೋಡಿದವರ ಸಂಖ್ಯೆ ಲಕ್ಷಗಟ್ಟಲೆ ಆಗಿದೆ ಎಂದು ತೋರಿಸಲಾಗುತ್ತದೆ. ಅಂತೆಯೇ ಪ್ರಚಾರವೂ ಆಗುತ್ತದೆ. ಅದಕ್ಕಾಗಿ ಪ್ರತ್ಯೇಕ ಮೊತ್ತ ಪಾವತಿಸಬೇಕು, ಅದಕ್ಕೂ ಒಂದು ಸ್ಲ್ಯಾಬ್ ಇದೆ ಎನ್ನಲಾಗಿದೆ. ಈ ಮಧ್ಯವರ್ತಿಗಳಿಗೆ ನಿರ್ಮಾಪಕ ಪ್ರಚಾರದ ಹೆಸರಲ್ಲಿ ಎಷ್ಟೇ ಹಣ ಕೊಟ್ಟರೂ ಅದರಿಂದ, ಚಿತ್ರ ಬಿಡುಗಡೆಯಾದಾಗ ಆಗುವ ಪರಿಣಾಮ ಅಷ್ಟಕ್ಕಷ್ಟೇ.
ಇತ್ತೀಚೆಗೆ ತೆರೆಕಂಡ ‘ಡೇರ್ ಡೆವಿಲ್ ಮುಸ್ತಫಾ’ ಮತ್ತು ‘ಪಿಂಕಿ ಎಲ್ಲಿ?’ ಚಿತ್ರಗಳನ್ನೇ ತೆಗೆದುಕೊಳ್ಳಿ. ಮುಸ್ತಫಾ ಚಿತ್ರಕ್ಕೆ ಚಿತ್ರ ತಂಡವೇ ಸಾಕಷ್ಟು ಪ್ರಚಾರವನ್ನು ತನ್ನದೇ ಆದ ರೀತಿಯಲ್ಲಿ ಮಾಡಿತು. ಕೊನೆಗಳಿಗೆಯಲ್ಲಿ ಸರ್ಕಾರವೂ ಅದಕ್ಕೆ ತೆರಿಗೆ ವಿನಾಯಿತಿ ನೀಡಿದೆ. ಈ ಹಂತದಲ್ಲಿ ಚಿತ್ರದ ಗಳಿಕೆಗೆ ಅದು ಎಷ್ಟು ನೆರವಾಗಿದೆ, ಆಗುತ್ತದೆ ಎನ್ನುವುದನ್ನು ಮುಂದಿನ ದಿನಗಳೇ ಹೇಳಬೇಕು. ‘ಪಿಂಕಿ ಎಲ್ಲಿ?’ ಚಿತ್ರದ ಡಿಜಿಟಲ್ ಪ್ರಚಾರಕ್ಕಾಗಿ ಸಾಕಷ್ಟು ಹಣ ವಿನಿಯೋಗಿಸಿದ್ದಾಗಿ ಅದರ ನಿರ್ಮಾಪಕರು ಹೇಳುತ್ತಾರೆ. ಅದರಿಂದ ಚಿತ್ರದ ಗಳಿಕೆಗೆ ಎಷ್ಟು ಅನುಕೂಲ ಆಯಿತು ಎನ್ನುವುದನ್ನು ಅವರೇ ಹೇಳಬೇಕು.
ಚಿತ್ರ ನಿರ್ಮಾಣದ ಹಂತಕ್ಕಿಂತಲೂ ಅದರ ಬಿಡುಗಡೆಯ ಹಂತ ಸಂಬಂಧಪಟ್ಟ ಎಲ್ಲರಲ್ಲೂ ಆತಂಕ ತಂದಿದೆ. ಚಿತ್ರಮಂದಿರಗಳ ಸಮಸ್ಯೆ, ಪ್ರಚಾರದ ಹೊಸ ರೀತಿ, ದುಬಾರಿ ಪ್ರವೇಶದರ ಇವೆಲ್ಲವುಗಳ ಕುರಿತಂತೆ ಉದ್ಯಮದ ಮಂದಿ ಒಟ್ಟಾಗಿ ಕುಳಿತು ಚರ್ಚಿಸಿ, ಪರಿಹಾರ ಕಂಡುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಉದ್ಯಮದ ಪ್ರಾತಿನಿಽಕ ಸಂಘಟನೆಗಳು ಮುಂದಾಗಬೇಕು.
ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…
ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…
ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…
ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…
ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್ಪೆಕ್ಟರ್ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…