ಕಾಂಗ್ರೆಸ್ ಪಕ್ಷದ ಕೇಂದ್ರಬಿಂದು ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಮರುಸ್ಥಾಪನೆ ದೇಶದ ರಾಜಕಾರಣದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆ. ಇನ್ನೂ ಎಂಟು ವರ್ಷಗಳ ಕಾಲ ಚುನಾವಣೆಗಳಿಗೆ ಸ್ಪಧಿಸುವಂತಿಲ್ಲ ಎಂಬ ಮಾರಕ ನಿಷೇಧವು ಸುಪ್ರೀಂ ಕೋರ್ಟಿನ ತಡೆಯಾಜ್ಞೆಯಿಂದ ತೆರವಾಗಿದೆ.
ಸೂರತ್ ನ್ಯಾಯಾಲಯದ ಮುಂದೆ ನಾಲ್ಕು ವರ್ಷಗಳಿಂದ ಬಾಕಿ ಇದ್ದ ಪ್ರಕರಣಕ್ಕೆ ಏಕಾಏಕಿ ಜೀವ ತುಂಬಿ ಮಿಂಚಿನ ಕಾರ್ಯಾಚರಣೆ ನಡೆಸಿ ರಾಹುಲ್ ಸದಸ್ಯತ್ವವನ್ನು ರದ್ದುಪಡಿಸಲಾಗಿತ್ತು. ಇತ್ತೀಚಿನ ತನಕ ರಾಹುಲ್ ಅವರನ್ನು ‘ಪಪ್ಪು’ ಎಂದು ಜರೆದು ವ್ಯವಸ್ಥಿತವಾಗಿ ಬೆಪ್ಪುತಕ್ಕಡಿಯಂತೆ ಬಿಂಬಿಸಿತ್ತು ಬಿಜೆಪಿ. ಇಂತಹ ‘ಪಪ್ಪು’ ಹಠಾತ್ತನೆ ಮೋದಿ ಆಡಳಿತಕ್ಕೆ ಮಾರಕವಾಗಿ ಕಂಡರು. ಸಂಸದೀಯ ರಾಜಕಾರಣದಿಂದ ಅವರನ್ನು ದಶಕದಷ್ಟು ದೀರ್ಘ ಕಾಲ ದೂರ ಇರಿಸುವ ಹುನ್ನಾರವೇ ನಡೆಯಿತು. ಮೋದಿ ಭಾರತದಲ್ಲಿ ಪ್ರತಿಪಕ್ಷಗಳ ದನಿಯನ್ನು ನಾನಾ ನಮೂನೆಗಳಲ್ಲಿ ಅಡಗಿಸಲಾಗುತ್ತಿದೆ.
ಅದಾನಿ-ಮೋದಿ ಸಂಬಂಧವನ್ನು ನಿರಂತರ ಪ್ರಶ್ನಿಸಿ ಪ್ರಧಾನಿಯವರಿಗೆ ಮುಜುಗರ ಮೂಡಿಸುತ್ತಿದ್ದ ರಾಹುಲ್ ಅವರನ್ನು ಹೇಗಾದರೂ ಮಾಡಿ ಜೈಲಿಗೆ ಕಳುಹಿಸಿಯೇ ತೀರಬೇಕೆಂದು ಮೋದಿ ಸರ್ಕಾರ ತೀರ್ಮಾನಿಸಿದಂತಿತ್ತು. ಇಲ್ಲವಾದರೆ ರಾಹುಲ್ ವಿರುದ್ಧದ ಮಾನಹಾನಿ ಮೊಕದ್ದಮೆ ಇಷ್ಟು ಅಸಹಜ ವೇಗದಲ್ಲಿ ಇತ್ಯರ್ಥ ಅಗುವುದು ಅನುಮಾನವಿತ್ತು.
ಕಳೆದ ಆರು ತಿಂಗಳ ಅವಽಯಲ್ಲಿ ಪ್ರತಿಪಕ್ಷ ರಾಜಕಾರಣದ ಕಥಾನಕದಲ್ಲಿ ರಾಹುಲ್ ಗಾಂಧಿ ರಂಗಮಧ್ಯದಲ್ಲಿ ಕಣ್ಣು ಕುಕ್ಕಿರುವುದು ಹೌದು. ನಾಲ್ಕು ಸಾವಿರ ಕಿ.ಮೀ.ಗಳ ಭಾರತ ಜೋಡೊ ಯಾತ್ರೆ ಮತ್ತು ವಿದೇಶ ಪ್ರವಾಸಗಳಲ್ಲಿ ಅವರು ಮೋ-ಶಾ ಸರ್ಕಾರಕ್ಕೆ ಎಸೆದ ಸವಾಲುಗಳು ಗಟ್ಟಿ ಪ್ರತಿಧ್ವನಿ ಪಡೆದಿವೆ. ಲೋಕಸಭೆಯಲ್ಲಿಯೂ ಮೋದಿ ಅವರ ಅಡಾಣಿ ಪಕ್ಷಪಾತದ ಮೇಲೆ ಹೊನಲು ಬೆಳಕನ್ನೇ ಹರಿಸಿ ಬಿಜೆಪಿಯ ಕೆಂಗಣ್ಣಿಗೆ ತುತ್ತಾಗಿದ್ದರು.
ಬಿಜೆಪಿ ಆಡಳಿತದಡಿ ದೇಶ ಹಿಡಿದಿರುವ ದುರ್ಗತಿಯ ಪಕ್ಷಿ ನೋಟವನ್ನು ರಾಹುಲ್ ಸಮರ್ಥವಾಗಿ ಬಿಡಿಸಿಟ್ಟಿದ್ದರು. ಲೋಕಸಭೆ ಮತ್ತು ದೇಶ ರಾಹುಲ್ ಗಾಂಽ ಅವರಲ್ಲಿ ತುಳುಕಿದ್ದ ಹೊಸ ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿತ್ತು.
ತರಾತುರಿಯಲ್ಲಿ ಬಿಜೆಪಿ ನಡೆಸಿದ ಕಾರ್ಯಾಚರಣೆ ರಾಹುಲ್ ಅವರಿಗೆ ಸಾರ್ವಜನಿಕ ಸಹಾನುಭೂತಿಯನ್ನು ಗಳಿಸಿಕೊಟ್ಟಿದ್ದು ಹೌದು. ಕೇವಲ 24 ತಾಸುಗಳಲ್ಲಿ ಅವರ ಲೋಕಸಭಾ ಸದಸ್ಯತ್ವವನ್ನು ರದ್ದು ಮಾಡಿ, ಸರ್ಕಾರಿ ನಿವಾಸವನ್ನೂ ಖಾಲಿ ಮಾಡಿಸಲಾಗಿತ್ತು. ಸದಸ್ಯತ್ವವನ್ನು ರದ್ದು ಮಾಡಿದಷ್ಟು ಚುರುಕಾಗಿ ಮರುಸ್ಥಾಪನೆ ಮಾಡುತ್ತಾರಾ ಅಥವಾ ಹೊಸ ಹುನ್ನಾರಗಳನ್ನು ಹೂಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ರಾಹುಲ್ ಅವರಿಗೆ ನೀಡಲಾದ ಶಿಕ್ಷೆ ಅತಿಯಾಯಿತು ಎಂಬುದು ಸುಪ್ರೀಂ ಕೋರ್ಟಿನ ಸ್ಪಷ್ಟ ಇಂಗಿತ. ಕೇವಲ ರಾಹುಲ್ ಹಕ್ಕುಗಳು ಮಾತ್ರವಲ್ಲ ಅವರನ್ನು ಆರಿಸಿ ಕಳಿಸಿದ ಮತದಾರರ ಹಕ್ಕುಗಳೂ ಮೊಟಕಾಗಿವೆ ಎಂದಿದೆ ಕೋರ್ಟ್. ರಾಹುಲ್ ಸದಸ್ಯತ್ವ ರದ್ದು ಮಾಡಲೆಂದೇ ಎರಡು ವರ್ಷಗಳ ಗರಿಷ್ಟ ಶಿಕ್ಷೆಯನ್ನು ವಿಽಸಲಾಗಿದೆ. ಆದರೆ ಒಂದು ದಿನವೂ ಕಮ್ಮಿಯಿಲ್ಲದಂತೆ ಎರಡು ವರ್ಷಗಳ ಗರಿಷ್ಟ ಶಿಕ್ಷೆಯನ್ನು ವಿಧಿಸಿದ್ದಕ್ಕೆ ಪಿಸುಮಾತಿನ ಸಮರ್ಥನೆಯನ್ನು ಕೂಡ ನೀಡಿಲ್ಲ. ಅಽನ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದು ನೂರಾರು ಪುಟಗಳ ತೀರ್ಪು ಬರೆದಿರುವ ಹೈಕೋರ್ಟ್ ಕೂಡ ಕಾರಣಗಳನ್ನು ನೀಡಿಲ್ಲ ಎಂಬುದು ಸುಪ್ರೀಂ ಕೋರ್ಟಿನ ಬಹುಮುಖ್ಯ ತಕರಾರು. ಅಂತೆಯೇ ಮೋದಿ ಉಪನಾಮ ಕುರಿತು ರಾಹುಲ್ ಟೀಕೆ ಸದಭಿರುಚಿಯಿಂದ ಕೂಡಿಲ್ಲ. ಸಾರ್ವಜನಿಕ ಭಾಷಣ ಮಾಡುವಾಗ ಹೆಚ್ಚು ಎಚ್ಚರ ಅಗತ್ಯ ಎಂದು ಕಿವಿ ಹಿಂಡಿದೆ ಕೂಡ. ಇತ್ತೀಚಿನ ದಿನಗಳಲ್ಲಿ ಗುಜರಾತಿನ ನ್ಯಾಯಾಲಯಗಳಿಂದ ಹೊರಬೀಳುತ್ತಿರುವ ತೀರ್ಪುಗಳು ಆಸಕ್ತಿಕರ ಎಂಬ ಸುಪ್ರೀಂ ಕೋರ್ಟಿನ ವ್ಯಂಗ್ಯೋಕ್ತಿ ಅತ್ಯಂತ ಗಮನಾರ್ಹ.
ಸುಪ್ರೀಂ ತಡೆಯಾಜ್ಞೆಯೊಂದಿಗೆ ಈ ಪ್ರಕರಣ ಆಗಸ್ಟ್ 23 ರಂದು ಪುನಃ ಸೂರತ್ ಅಧೀನ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿದೆ. ಸುಪ್ರೀಂ ಕೋರ್ಟಿನ ಟೀಕೆ ಟಿಪ್ಪಣಿಯ ಹಿನ್ನೆಲೆಯಲ್ಲಿ ಸೂರತ್ ಅಧೀನ ನ್ಯಾಯಾಲಯ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು. ಆದರೆ ಹಾಗಾಗದೆ ಸೂರತ್ ನ್ಯಾಯಾಲಯ ತನ್ನ ಹಳೆಯ ತೀರ್ಪನ್ನೇ ಪುನರುಚ್ಚರಿಸಿದರೆ ರಾಹುಲ್ ಪುನಃ ಸರ್ವೋಚ್ಚ ನ್ಯಾಯಾಲಯದ ಬಾಗಿಲು ಬಡಿಯಬೇಕಾಗುತ್ತದೆ.
ಈ ತಡೆಯಾಜ್ಞೆಯ ಫಲಿತಾಂಶಗಳು ಮುಂಬರುವ ದಿನಗಳಲ್ಲಿ ದೇಶ ರಾಜಕಾರಣದ ಮೇಲೆ ಪರಿಣಾಮ ಬೀರುವುದು ನಿಶ್ಚಿತ. ಪ್ರತಿಪಕ್ಷ ರಾಜಕಾರಣಕ್ಕೆ ರಭಸ ದೊರೆಯಲಿದೆ. ಕಾಂಗ್ರೆಸ್ ಎಚ್ಚರಿಕೆ ವಹಿಸದೆ ಹೋದರೆ ಅಡ್ಡಪರಿಣಾಮವನ್ನೂ ಬೀರಲಿದೆ.
ಮೋದಿ ಆಡಳಿತದ ವಿರುದ್ಧ ಪ್ರತಿಪಕ್ಷಗಳು ಒಟ್ಟಾಗುವ ಪ್ರಕ್ರಿಯೆಗೆ ಇತ್ತೀಚಿನ ಬೆಂಗಳೂರು ಸಮಾವೇಶದಲ್ಲಿ ಸಿಕ್ಕಿದ್ದ ಚಾಲನೆ ನಿರ್ಣಾಯಕ. ಕಾಂಗ್ರೆಸ್ ಹಿರಿಯಣ್ಣನ ಪಾತ್ರ ವಹಿಸುವುದು ಇತರೆ ಪ್ರತಿಪಕ್ಷಗಳಿಗೆ ಇಷ್ಟವಿಲ್ಲವೆಂಬುದು ಗುಟ್ಟೇನೂ ಅಲ್ಲ. ಈ ಅಂಶವೇ ಪ್ರತಿಪಕ್ಷಗಳ ಏಕತೆಗೆ ಅಡ್ಡಿಯೆಂಬ ಅಂಶವನ್ನು ಕಾಂಗ್ರೆಸ್ ಪಕ್ಷವೂ ಬಲ್ಲದು. ವಿಶೇಷವಾಗಿ ರಾಹುಲ್ ಲೋಕಸಭಾ ಸದಸ್ಯತ್ವ ರದ್ದಾದ ನಂತರ ಅಗಾಸ್ಥಾನದಿಂದ ಕೆಳಗಿಳಿದು ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಮುಂದಾಗಿತ್ತು ಕಾಂಗ್ರೆಸ್. ಖುದ್ದು ರಾಹುಲ್ ಕೂಡ ಹಿನ್ನೆಲೆಗೆ ಸರಿದಿದ್ದರು. ಪ್ರಧಾನಿ ಸ್ಥಾನಕ್ಕೆ ಕಾಂಗ್ರೆಸ್ ದಾವೇದಾರ ಅಲ್ಲವೆಂಬ ಅತ್ಯಂತ ಮಹತ್ವದ ಹೇಳಿಕೆಯನ್ನು ಪಕ್ಷದ ಅಧ್ಯಕ್ಷರು ಬೆಂಗಳೂರು ಸಮಾವೇಶದ ಉದ್ಘಾಟನೆಯ ಸಂದರ್ಭದಲ್ಲಿ ನೀಡಿದ್ದರು.
ಇದೀಗ ಲೋಕಸಭಾ ಸದಸ್ಯತ್ವ ಮರುಸ್ಥಾಪನೆಯ ನಂತರ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಆಕ್ರಮಣಕಾರಿ ರಾಜಕಾರಣಕ್ಕೆ ಮುಂದಾಗುವ ಸೂಚನೆಗಳಿವೆ. ಲೋಕಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ದಾಳಿಯ ಮುಂದಾಳತ್ವವನ್ನು ರಾಹುಲ್ ಅವರೇ ವಹಿಸಲಿದ್ದಾರೆ. ಈ ರಭಸದಲ್ಲಿ ಕಾಂಗ್ರೆಸ್ ಪಕ್ಷ ಪುನಃ ಹಿರಿಯಣ್ಣನ ಪಾತ್ರ ವಹಿಸಿ ಕಾಲು ತುಳಿಯುವ ಧೋರಣೆ ಅನುಸರಿಸಿದರೆ ಪ್ರತಿಪಕ್ಷಗಳಲ್ಲಿ ಕಾಂಗ್ರೆಸ್ ಕುರಿತು ಅಭದ್ರತೆಯ ಭಾವನೆ ಮೂಡೀತು. ಒಗ್ಗಟ್ಟಿನ ಪ್ರಕ್ರಿಯೆ ಹಿನ್ನಡೆ ಎದುರಿಸಬೇಕಾದೀತು. ಪ್ರತಿಪಕ್ಷಗಳ ಒಕ್ಕೂಟ ‘ಇಂಡಿಯಾ’ದ ಪಾಲಿಗೆ ಸಕಾರಾತ್ಮಕ ಚೈತನ್ಯ ಒದಗಿಸಿರುವ ಬೆಳವಣಿಗೆಯಿದು. ಆದರೆ ಕೂಟದ ಚಹರೆ ತಾನೇ ಆಗಬೇಕೆಂಬ ಆಕ್ರಮಣಕಾರಿ ಮಹತ್ವಾಕಾಂಕ್ಷೆ ಸಲ್ಲದು.
೨೦೦೪ರಲ್ಲಿ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿ ಯುಪಿಎ ಸರ್ಕಾರ ರಚನೆಗೆ ಕಾರಣವಾಗಿದ್ದರು. ಈ ನಡೆಯಿಂದ ಪಕ್ಷದ ಒಳಹೊರಗೆ ಬಹು ಎತ್ತರದ ನಾಯಕಿಯ ಸ್ಥಾನವನ್ನು ಆಕೆ ಗಳಿಸಿದ್ದರು. ಅಗತ್ಯ ಬಿದ್ದರೆ ರಾಹುಲ್ ಗಾಂಧಿ ಕೂಡ ತಮ್ಮ ತಾಯಿಯ ಮಾದರಿಯನ್ನು ಅನುಸರಿಸಬೇಕಾದೀತು. ರಾಹುಲ್ ಗಾಂಽಯನ್ನು ಮರಳಿ ಕೆಡವಲು ಮೋ-ಶಾ ಜೋಡಿ ಹೊಸ ಹೊಸ ತಂತ್ರಗಳನ್ನು ಹೆಣೆಯುತ್ತಿದೆ. ಸಾಮ,
ದಾನ, ದಂಡ, ಭೇದದ ಎಲ್ಲ ನಾಲ್ಕೂ ಮಾರ್ಗಗಳಿಂದ ರಾಹುಲ್ ಅವರನ್ನು ಹಣಿಯುತ್ತಿದೆ. ಲೋಕಸಭೆಯಲ್ಲಿ ಅವರು ಮಾತಾಡಲು ಬಿಡಲಿಲ್ಲ. ಅವರ ಸಂಸತ್ ಸದಸ್ಯತ್ವವನ್ನು ಕಿತ್ತುಕೊಳ್ಳಲಾಯಿತು. ವಿದೇಶಿ ನೆಲದಲ್ಲಿ ಭಾರತದ ವರ್ಚಸ್ಸನ್ನು ಕುಗ್ಗಿಸಿದರೆಂದು ಮಿಥ್ಯಾ ಪ್ರಚಾರ ಮಾಡಲಾಯಿತು. ಮುಂಬರುವ ದಿನಗಳು ಇಂತಹ ಹತ್ತಾರು ಹೊಸ ಕರಾಮತ್ತುಗಳಿಗೆ ಸಾಕ್ಷಿಯಾಗಲಿವೆ.
ಯಾವುದೇ ದಮನದ ಪರ್ವಕ್ಕೆ ಅಂತ್ಯವಿರುತ್ತದೆ. ಅದು ನಿತ್ಯ ನಿರಂತರವಲ್ಲ. ಹೊಸ ಭರವಸೆ ಮೂಡಿಸಿರುವ ಪ್ರತಿಪಕ್ಷದ ರಾಜಕಾರಣವನ್ನು ಹಾಲಿ ಮಾನಹಾನಿ ಮೊಕದ್ದಮೆಯ ವಿದ್ಯಮಾನ ಮತ್ತಷ್ಟು ಗಟ್ಟಿಗೊಳಿಸಬೇಕಿದೆ.
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…
ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…
ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…
ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…
ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…