ಎಡಿಟೋರಿಯಲ್

ದತ್ತಾತ್ರೇಯ ಹೊಸಬಾಳೆ ಪ್ರಧಾನಿ ಮೋದಿ ಆಡಳಿತದ ಬಗ್ಗೆ ಅಸಮಾಧಾನಗೊಂಡಿದ್ದಾರೆಯೇ?

ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಕುರಿತಂತೆ ಆಡಳಿತಾರೂಢ ಬಿಜೆಪಿ ನಾಯಕರು ಸಂಘಟಿತರಾಗಿ ಟೀಕೆ ಮಾಡುತ್ತಿರುವ ಹೊತ್ತಿಗೆ ಅತ್ತ, ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಮೋದಿ ಸರ್ಕಾರದ ಬಗ್ಗೆ ಇತ್ತ ಟೀಕೆಯೂ ಅಲ್ಲದ, ಅತ್ತ ಆರೋಪವೂ ಅಲ್ಲದ ಆದರೆ, ಅಸಮಾಧಾನ ಮತ್ತು ಅತೃಪ್ತಿಯನ್ನು ಪರೋಕ್ಷವಾಗಿ ಹೊರ ಹಾಕುವ ಮಾತುಗಳನ್ನಾಡಿದ್ದಾರೆ.

ನೇರವಾಗಿ ಪ್ರಧಾನಿ ಮೋದಿ ಅವರನ್ನಾಗಲೀ, ಮೋದಿ ಸಂಪುಟದ ಸಚಿವರನ್ನಾಗಲೀ ಅವರು ಪ್ರಸ್ತಾಪಿಸಿಲ್ಲ. ಆದರೆ, ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಕುರಿತಂತೆ ಅಂಕಿ ಅಂಶಗಳ ಸಮೇತ ವಸ್ತುಸ್ಥಿತಿಯನ್ನು ತೆರದಿಟ್ಟಿದ್ದಾರೆ.

ಜಾಣರಿಗೆ ಮಾತಿನ ಪೆಟ್ಟು ಎಂಬುದನ್ನು ನಂಬುವ ಎಲ್ಲರೂ ಈ ಮಾತಿನ ಪೆಟ್ಟಿನ ಗುರಿ ಎತ್ತ ಎಂಬುದನ್ನು ಅರಿಯಬಹುದಾಗಿದೆ.

‘ದಿ ಇಂಡಿಯಾ ಕೇಬಲ್’ನಲ್ಲಿ ಪ್ರಕಟವಾದ ಲೇಖನವನ್ನು ‘ದಿ ವೈರ್’ ಸುದ್ದಿಜಾಲತಾಣವು ‘ಮೋದಿ ಸರ್ಕಾರದ ವಿರುದ್ಧ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿಯ ವಾಗ್ದಾಳಿಗೆ ಕಾರಣವೇನು?’ ಎಂಬ ತಲೆಬರಹದೊಂದಿಗೆ ಪ್ರಕಟಿಸಿದೆ.

ದತ್ತಾತ್ರೇಯ ಹೊಸಬಾಳೆ ಅವರು ಸಾರ್ವಜನಿಕವಾಗಿ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಮತ್ತು ಕೇಂದ್ರ ಸರ್ಕಾರದ ಕುರಿತಾಗಿ ಮಾಡಿರುವ ಅವಲೋಕನಗಳ ಸಣ್ಣ ಟಿಪ್ಪಣಿ ಇಲ್ಲಿದೆ.

ಬಡತನವು ನಮ್ಮ ಮುಂದೆ ರಾಕ್ಷಸನಂತೆ ನಿಂತಿದೆ.

ಭಾರತದ ದೊಡ್ಡ ಭಾಗಗಳಿಗೆ ಶುದ್ಧ ನೀರು ಅಥವಾ ಪೌಷ್ಟಿಕ ಆಹಾರ ಲಭ್ಯವಾಗುತ್ತಿಲ್ಲ .

ಭಾರತದ 20 ಕೋಟಿ ಜನರು ಬಡತನ ರೇಖೆಯಿಂದ ಕೆಳಮಟ್ಟದಲ್ಲಿದ್ದಾರೆ.

ಭಾರತದ 23 ಕೋಟಿ ಜನರ ದಿನದ ಆದಾಯವು ಕೇವಲ 375ರೂಪಾಯಿಗಳು ಮಾತ್ರ.

ನಿರುದ್ಯೋಗ 7.6% ರಷ್ಟಿದೆ.

ದೇಶದ ರಾಷ್ಟ್ರೀಯ ಆದಾಯದ ಪೈಕಿ ಐದನೇ ಒಂದು ಭಾಗವನ್ನು ಶೇ. 1ರಷ್ಟು ಜನರು ಹೊಂದಿದ್ದಾರೆ. ದೇಶದ ಶೇ.50ರಷ್ಟು ಜನರು ಹೊಂದಿರುವ ರಾಷ್ಟ್ರೀಯ ಆದಾಯವು ಕೇವಲ ಶೇ.13.5ರಷ್ಟು ಮಾತ್ರ.

ನಗರ ಕೇಂದ್ರಗಳು ಮಾತ್ರ ಉದ್ಯೋಗವನ್ನು ಸೃಷ್ಟಿಸಬಲ್ಲವು ಎಂಬ ಕಲ್ಪನೆಯು ಅವುಗಳನ್ನು ನರಕವಾಗಿ ಪರಿವರ್ತಿಸುತ್ತಿದೆ.

ತಂತ್ರಜ್ಞಾನಗಳಿಂದಷ್ಟೇ ಸಮಸ್ಯೆಗಳನ್ನು ಪರಿಹರಿಸಲಾಗುವುದಿಲ್ಲ,

ದೇಶದ ಆರ್ಥಿಕ ಸಮಸ್ಯೆಗಳಿಗೆ ಅಖಿಲ ಭಾರತ ಯೋಜನೆಗಳು ಉತ್ತರವಲ್ಲ, ಹೆಚ್ಚು ಕಾರ್ಮಿಕರ ಒಳಗೊಳ್ಳುವಿಕೆ ಮಾದರಿಯ ಆರ್ಥಿಕ ಚಟುವಟಿಕೆಯ ಅಗತ್ಯವಿದೆ.

ಇಷ್ಟೆಲ್ಲ ಓದಿದ ಮೇಲೆ ಈ ಹೇಳಿಕೆಯನ್ನು ರಾಹುಲ್ ಗಾಂಧಿಯೋ ಅಥವಾ ಸರ್ಕಾರದ ಕೃಪಾಕಟಾಕ್ಷದಲ್ಲಿ ಇಲ್ಲದ ಅರ್ಥಶಾಸ್ತ್ರಜ್ಞರೋ ಹೇಳಿದ್ದಿರಬಹುದು ಎಂದು ನಿಮಗನಿಸಿದರೆ ಅದು ಸಹಜವೇ. ಆದರೆ, ಇದನ್ನು ಹೇಳಿದ್ದು ದತ್ತಾತ್ರೇಯ ಹೊಸಬಾಳೆ ಅವರು. ಅದನ್ನು ನಂಬಲು ಸಾಧ್ಯವಾಗದಿದ್ದರೂ ನಂಬಲೇ ಬೇಕು.

ಸಂಘ ಪರಿವಾರದ ನಾಯಕರು ಆಗಿಂದಾಗ್ಗೆ ಸರ್ಕಾರದ ನಡೆ ನುಡಿಗಳ ಕುರಿತಂತೆ ಸೂಚನೆ ಮತ್ತು ಮಾರ್ಗದರ್ಶನ ನೀಡುವುದಿದೆ. ಅದು ಯಾವತ್ತೂ ಸಾರ್ವಜನಿಕವಾಗಿರುವುದಿಲ್ಲ. ಚುನಾವಣಾ ಸಂದರ್ಭಗಳಲ್ಲಿ ಪಕ್ಷಕ್ಕೆ ‘ಮತಲಾಭ’ ತಂದುಕೊಡುವ ಅಂಶವಾಗಿದ್ದರೆ ಮಾತ್ರ ಅದು ಸಾರ್ವಜನಿಕವಾಗಿ ವ್ಯಕ್ತವಾಗುತ್ತದೆ. ಉಳಿದಂತೆ ಅದು ಸರ್ಕಾರದ ಮುಖ್ಯಸ್ಥರು, ಪಕ್ಷದ ಮುಖ್ಯಸ್ಥರು ಮತ್ತು ಸಂಘದ ಮುಖ್ಯಸ್ಥರ ನಡುವೆಯೇ ನಡೆಯುತ್ತದೆ.

ಪ್ರಸ್ತುತ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಸಾರ್ವಜನಿಕವಾಗಿ ದೇಶದ ಆರ್ಥಿಕತೆ ಕುರಿತಂತೆ ಅವಲೋಕನ ಮಾಡಿದ್ದಾರೆ.

ಅವರು ಎಲ್ಲವನ್ನೂ ಅಂಕಿ ಅಂಶಗಳ ಮೂಲಕವೇ ಪ್ರಸ್ತಾಪಿಸಿದ್ದಾರೆ. ಇದುವರೆಗೆ, ಆರಂಭದಲ್ಲಿ ಅರ್ಥಶಾಸ್ತ್ರಜ್ಞರು, ನಂತರದಲ್ಲಿ ತಟಸ್ಥ ಮಾಧ್ಯಮಗಳು, ಕೊನೆಗೆ ವಿರೋಧ ಪಕ್ಷಗಳ ನಾಯಕರು ಪ್ರಸ್ತಾಪಿಸುತ್ತಿದ್ದ ಮತ್ತು ಮುಖ್ಯವಾಹಿನಿ ಮಾಧ್ಯಮ ನಿರ್ಲಕ್ಷಿಸುತ್ತಿದ್ದ ವಿಷಯಗಳನ್ನೇ ಪ್ರಸ್ತಾಪಿಸಿದ್ದಾರೆ.

ಆ ಮೂಲಕ ದೇಶದ ಆರ್ಥಿಕತೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಮಾತನ್ನು ಸಂಘಪರಿವಾರದ ಪ್ರಮುಖರೇ ಒಪ್ಪಿಕೊಂಡಂತಾಗಿದೆ. ದತ್ತಾತ್ರೇಯ ಹೊಸಬಾಳೆ ಅವರು ಸರ್ಕಾರವನ್ನಾಗಲೀ, ಸರ್ಕಾರವನ್ನು ಮುನ್ನಡೆಸುತ್ತಿರುವ ಪ್ರಧಾನಿ ಮೋದಿ ಅವರನ್ನಾಗಲೀ ಎಲ್ಲೂ ಟೀಕಿಸಿಲ್ಲ.

ಇದ್ದುದ್ದನ್ನು ಇದ್ದಂಗೆ ಹೇಳಿದ್ದಾರೆ!

ಕಳೆದ ಎಂಟು ವರ್ಷಗಳಿಂದ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದೆ. ಈ ಎಂಟು ವರ್ಷಗಳಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ದಕ್ಕಿಸಿಕೊಂಡಿದೆ. ಎರಡನೇ ಅವಧಿಯಲ್ಲಿ ಅರ್ಧದಷ್ಟು ಅಧಿಕಾರವನ್ನು ಪೂರೈಸಿದೆ. ಹೀಗಿರುವಾಗ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ, ರಾಷ್ಟ್ರದ ಶೇ.50ರಷ್ಟು ಸಂಪತ್ತು ಕೇವಲ ಶೇ.1ರಷ್ಟು ಜನರ ಕೈಯಲ್ಲಿ ಕ್ರೋಢೀಕೃತವಾಗಿದೆ, ದೇಶದಲ್ಲಿ ನಿರುದ್ಯೋಗ ಹೆಚ್ಚಿದೆ, 23 ಕೋಟಿ ಜನರ ದಿನದ ಆದಾಯವು ಕೇವಲ 375ರೂಪಾಯಿಗಳಷ್ಟಿದೆ ಎಂದು ಹೇಳಿದಾಗ, ಅದರ ಹೊಣೆಯನ್ನು ಯಾರು ಹೊರಬೇಕು?

ಅದಕ್ಕೆ ಕಾರಣ ಯಾರು? ಈ ಪ್ರಶ್ನೆಗೆ ನೇರ ಉತ್ತರ- ಕೇಂದ್ರದಲ್ಲಿ ಎಂಟು ವರ್ಷಗಳಿಂದ ಅಧಿಕಾರದಲ್ಲಿರುವವವರು. ಅಂದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ.

ದೇಶದ ಆರ್ಥಿಕತೆ ಪರಿಸ್ಥಿತಿ ಕುರಿತಂತೆ ಮೂಲಭೂತ ಪ್ರಶ್ನೆಗಳನ್ನೆತ್ತಿ ದತ್ತಾತ್ರೇಯ ಹೊಸಬಾಳೆ ಅವರು ಪರೋಕ್ಷವಾಗಿ ಪ್ರಧಾನಿ ನರೇಂದ್ರಮೋದಿ ಅವರನ್ನು ಕೆಣಕಿದ್ದಾರೆಯೇ?

ಅವರು ಪ್ರಸ್ತಾಪಿಸಿರುವ ಶೇ.1ರಷ್ಟು ಶ್ರೀಮಂತರು, ಮತ್ತು ತಂತ್ರಜ್ಞಾನಗಳಿಂದ ಸಮಸ್ಯೆಗಳಿಗೆ ಪರಿಹಾರ ಸಿಗದು ಎಂಬ ಮಾತುಗಳು ಮೋದಿ ಆಪ್ತ ಉದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿಗಳನ್ನು ಕುರಿತಾಗಿಯೇ ಅಲ್ಲವೇ?

ದತ್ತಾತ್ರೇಯ ಹೊಸಬಾಳೆ ಅವರು ಪ್ರಸ್ತಾಪಿಸಿರುವ ಎಲ್ಲ

ಅಂಶಗಳೂ ಪ್ರಧಾನಿ ಮೋದಿ ಸರ್ಕಾರದ ಸಾಮರ್ಥ್ಯವನ್ನು ಪ್ರಶ್ನಿಸುವಂತಹವೇ ಆಗಿವೆ.

ದತ್ತಾತ್ರೇಯ ಹೊಸಬಾಳೆ ಅವರು ದೇಶವನ್ನು ಕಾಡುತ್ತಿರುವ ಹಣದುಬ್ಬರ, ಬೆಲೆ ಏರಿಕೆ, ರೂಪಾಯಿ ಅಪಮೌಲ್ಯ, ತೀವ್ರವಾಗಿ ಏರುತ್ತಿರುವ ಆಮದು, ತತ್ಪರಿಣಾಮ ಜಿಗಿಯುತ್ತಿರುವ ವ್ಯಾಪಾರ ಕೊರತೆ, ವಿತ್ತೀಯ ಕೊರತೆ, ಚಾಲ್ತಿ ಖಾತೆ ಕೊರತೆ, ಜತೆಗೆ ದಿನೇ ದಿನೇ ಕುಸಿಯುತ್ತಿರುವ ವಿದೇಶಿ ವಿನಿಮಯ ಮೀಸಲು ನಿಧಿ- ಈ ಯಾವ ಅಂಶಗಳನ್ನೂ ಅವರು ಪ್ರಸ್ತಾಪಿಸಿಲ್ಲ, ಆದರೆ, ಈ ಎಲ್ಲದರ ಪರಿಣಾಮವೆಂಬಂತೆ ನಿರುದ್ಯೋಗ ಹೆಚ್ಚಳವಾಗಿರುವುದನ್ನು ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದಾರೆ.

ದೇಶದ ಆರ್ಥಿಕತೆ ಕುರಿತಂತೆ ದತ್ತಾತ್ರೇಯ ಹೊಸಬಾಳೆ ಅವರ ಕಾಳಜಿಯನ್ನು ಯಾರೂ ಅನುಮಾನಿಸುವುದಿಲ್ಲ. ವಾಸ್ತವವಾಗಿ ಅತ್ಯುನ್ನತ ಹುದ್ದೆಯಲ್ಲಿದ್ದವರೊಬ್ಬರು ವಾಸ್ತವಿಕತೆಯನ್ನು ತೆರೆದಿಟ್ಟುರುವುದು ಉತ್ತಮ ಬೆಳವಣಿಗೆ. ದತ್ತಾತ್ರೇಯ ಹೊಸಬಾಳೆ ವಸ್ತುಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ವಸ್ತುಸ್ಥಿತಿಗಳೇ ಸಮಸ್ಯೆಗಳನ್ನು ಪ್ರತಿನಿಧಿಸುತ್ತಿರುವುದರಿಂದ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಪರಿಹಾರ ದಕ್ಕುವುದು ಸರ್ಕಾರ ಕೈಗೊಳ್ಳುವ ರಚನಾತ್ಮಕ ಕಾರ್ಯಕ್ರಮಗಳಿಂದ. ಹೀಗಾಗಿ ಮೋದಿ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬುದು ಕುತೂಹಲಕರವಾಗಿದೆ.

ಮತ್ತಷ್ಟು ಕುತೂಹಲ ಮುಖ್ಯವಾಹಿನಿ ಮಾಧ್ಯಮಗಳು ದತ್ತಾತ್ರೇಯ ಹೊಸಬಾಳೆ ಅವರ ಅವಲೋಕನವನ್ನು ಹೇಗೆ ಬಿಂಬಿಸುತ್ತವೆ ಎಂಬುದರಲ್ಲಿದೆ.

(ಆಧಾರ)

andolana

Recent Posts

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

13 mins ago

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

2 hours ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

3 hours ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

4 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

4 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

4 hours ago