ಮುಂಬೈಯ ಪರೇಲ್ ಎಂಬಲ್ಲಿರುವ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯ ಎದುರಿನ ಫುಟ್ಪಾತಿನಲ್ಲಿ ಮುಖದಲ್ಲಿ ಅಸಹಾಯಕತೆ, ಸಾವಿನ ಭಯ ತುಂಬಿಕೊಂಡು ನಿಂತ ಜನರ ಸಾಲು ಕಾಣಿಸುವುದು ದಿನನಿತ್ಯದ ದೃಶ್ಯ. ಅವರೆಲ್ಲ ದೇಶದ ಯಾವ ಯಾವುದೋ ಮೂಲೆಗಳಿಂದ ರಿಯಾಯಿತಿ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯಲು ಬಂದ ರೋಗಿಗಳು, ಮತ್ತು ಅವರ ಸಂಬಂಧಿಕರು ಅಥವಾ ಕುಟುಂಬಿಕರು. ಒಬ್ಬೊಬ್ಬರದು ಒಂದೊಂದು ಗೋಳಿನ ಕತೆ. ವಸತಿಗೆ ದುಡ್ಡಿಲ್ಲದೆ ವಾರ, ತಿಂಗಳುಗಟ್ಟಲೆ ಕಾಲ ಫುಟ್ಪಾತ್ಗಳಲ್ಲಿ ಮಲಗುತ್ತಾರೆ. ಊಟಕ್ಕಿಲ್ಲದೆ ಹಸಿದ ಹೊಟ್ಟೆಯಲ್ಲಿ ದಿನದೂಡುತ್ತಾರೆ. ಔಷಧಿ ಖರೀದಿಸಲು ಹಣವಿಲ್ಲದೆ ಪರದಾಡುತ್ತಾರೆ.
40 ವರ್ಷ ಪ್ರಾಯದ ಹರಕ್ ಚಂದ್ ಸಾವ್ಳ ಪ್ರತಿದಿನ ಆ ದೃಶ್ಯವನ್ನು ಕಾಣುತ್ತ ಮನೆಗೆ ಬಂದು ಮರುಗುತ್ತಿದ್ದರು. ಆದರೆ, ತಾನು ಹೀಗೆ ಬರೀ ಮರುಗುವುದರಿಂದ ಅವರಿಗೇನೂ ಪ್ರಯೋಜನವಾಗದು. ಬದಲಿಗೆ, ಆ ಬಡಪಾಯಿಗಳಿಗೆ ತಾನು ಅನುಕೂಲವಾಗುವಂತಹದೇನಾದರೂ ಮಾಡಿದರಷ್ಟೇ ಅವರ ಬಗೆಗಿನ ತನ್ನ ಅನುಕಂಪಕ್ಕೆ ಕಿಂಚಿತ್ತಾದರೂ ಅರ್ಥ ಬಂದೀತು ಎಂದು ಅನಿಸಿದ್ದೇ ಅವರು ಆ ನಿಟ್ಟಿನಲ್ಲಿ ಕಾರ್ಯತತ್ಪರರಾದರು. ಚಿಕ್ಕದೊಂದು ಅಡುಗೆ ಮನೆ ಕಟ್ಟಿಸಿ, ಅಲ್ಲಿ ಆಹಾರ ತಯಾರಿಸಿ, ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಸಂಬಂಽಕರಿಗೆ ಮಧ್ಯಾಹ್ನ ಮತ್ತು ಸಂಜೆ ಎರಡು ಹೊತ್ತು ಉಚಿತವಾಗಿ ಊಟ ಒದಗಿಸಲು ಪ್ರಾರಂಭಿಸಿದರು.
ಹೀಗೆ ಮುಂದಿನ 12 ವರ್ಷಗಳ ಕಾಲ ಹರಕ್ ಚಂದ್ ಸಾವ್ಳ ತನ್ನ ಸ್ವಂತ ಹಣದಿಂದ ಆ ಯೋಜನೆಯನ್ನು ಮುಂದುವರಿಸಿದರು. ಆದರೆ, ಪ್ರಾರಂಭದಲ್ಲಿ ಉಚಿತ ಊಟಕ್ಕೆ ಬರುತ್ತಿದ್ದ 50 ಜನ ಕ್ಯಾನ್ಸರ್ ರೋಗಿಗಳು ಮತ್ತು ಅವರ ಸಂಬಂಧಿಕರ ಸಂಖ್ಯೆ ನೂರಾಗಿ, ನೂರು ಇನ್ನೂರಾಗಿ, ಏಳು ನೂರು ದಾಟಿದಾಗ ಅವರಿಗೆ ತನ್ನೊಬ್ಬನ ಕಿಸೆ ಸಾಲದು ಎಂಬ ಅರಿವಾಯಿತು. ಹರಕ್ ಚಂದ್ ಸಾವ್ಳ ಜೀವನ ನಿರ್ವಹಣೆಗೆ ಒಂದು ಹೋಟೆಲ್ ನಡೆಸುತ್ತಿದ್ದರು. ಹೋಟೆಲು ಬಹಳ ಚೆನ್ನಾಗಿ ನಡೆಯುತ್ತಿತ್ತು. ಆ ಹೋಟೆಲನ್ನು ಬೇರೊಬ್ಬರಿಗೆ ನಡೆಸಲು ಕೊಟ್ಟು, ಅದರಿಂದ ಬಂದ ಹಣವನ್ನು ವಿನಿಯೋಗಿಸಿ, ಟಾಟಾ ಆಸ್ಪತ್ರೆ ಎದುರಿಗಿನ ಕೊಂಡಾಜಿ ಕಟ್ಟಡದಲ್ಲಿ ‘ಜೀವನ್ ಜ್ಯೋತ್ ಕ್ಯಾನ್ಸರ್ ರಿಲೀಫ್ ಅಂಡ್ ಕೇರ್ ಟ್ರಸ್ಟ್’ ಎಂಬ ಒಂದು ಸಂಸ್ಥೆಯನ್ನು ಹುಟ್ಟು ಹಾಕಿ, ರಿಜಿಸ್ಟ್ರಿಗೊಳಿಸಿದರು.
ಅಂದು ಹುಟ್ಟಿಕೊಂಡ ಜೀವನ್ ಜ್ಯೋತ್ ಟ್ರಸ್ಟ್ ಇಂದು ಪ್ರತೀ ತಿಂಗಳು ಲಕ್ಷಾಂತರ ರೂಪಾಯಿ ವ್ಯಯಿಸಿ, 80ಕ್ಕೂ ಹೆಚ್ಚು ಸಾಮಾಜಿಕ ಯೋಜನೆಗಳನ್ನು ನಡೆಸುತ್ತಿದೆ. ಅವುಗಳಲ್ಲಿ 30ಕ್ಕೂ ಹೆಚ್ಚು ಯೋಜನೆಗಳು ಕ್ಯಾನ್ಸರ್ ರೋಗಿಗಳಿಗೆ ಮುಡಿಪಾಗಿವೆ. ಬೇಸಿಗೆ ಇರಲಿ, ಚಳಿಗಾಲವಿರಲಿ, ಮಳೆಗಾಲವಿರಲಿ ಉಚಿತ ಊಟ ಒಂದು ದಿನವೂ ತಪ್ಪುವುದಿಲ್ಲ. ಕಾಯಿಲೆ ಉಲ್ಬಣಿಸಿ ಅನ್ನ ನುಂಗಲಾಗದವರಿಗೆ ಅರಿಶಿನ ಮಿಶ್ರಿತ ಹಾಲನ್ನು ನೀಡುತ್ತದೆ. ಕೇವಲ ಟಾಟಾ ಆಸ್ಪತ್ರೆ ಎದುರಲ್ಲದೆ ಜೆ.ಜೆ.ಆಸ್ಪತ್ರೆ, ಸೇಂಟ್ ಜಾರ್ಜ್ ಆಸ್ಪತ್ರೆ ಮತ್ತು ಕಾಮಾ ಆಸ್ಪತ್ರೆಗೂ ಉಚಿತ ಊಟದ ವ್ಯವಸ್ಥೆಯನ್ನು ವಿಸ್ತರಿಸಿದೆ. ಉಚಿತ ಔಷಧಿಯನ್ನು ಒದಗಿಸುವ ‘ಮೆಡಿಕಲ್ ಬ್ಯಾಂಕ್’, ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಉಚಿತ ಆಟಿಕೆಗಳನ್ನು ಒದಗಿಸುವ ‘ಟಾಯ್ ಬ್ಯಾಂಕ್’ ಮೊದಲಾದವುಗಳನ್ನು ನಡೆಸುತ್ತಿದೆ. ಕ್ಯಾನ್ಸರ್ ರೋಗಿಗಳು ಆಸ್ಪತ್ರೆಯಲ್ಲಿದ್ದರೆ ಅವರೊಂದಿಗೆ ಬರುವ ಬಡ ಸಂಬಂಧಿಗಳು ಫುಟ್ಪಾತ್ಗಳಲ್ಲಿ ಮಲಗಬೇಕಾಗುತ್ತದೆ. ಅಂತಹವರಿಗೆ ಉಳಿದುಕೊಳ್ಳಲು ಉಚಿತ ವಸತಿಯನ್ನೂ ಒದಗಿಸುತ್ತಿದೆ. ಇವುಗಳನ್ನೆಲ್ಲ ವ್ಯವಸ್ಥಿತವಾಗಿ ನಡೆಸಲು ನೂರೈವತ್ತಕ್ಕೂ ಹೆಚ್ಚು ಸ್ವಯಂ ಸೇವಕರನ್ನು ಹೊಂದಿದೆ. ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ರವಾನಿಸಲು ಆಂಬ್ಯುಲೆನ್ಸ್ಗಳನ್ನೂ ನೇಮಿಸಿದೆ. ಕಡಿಮೆ ದರದಲ್ಲಿ ಮಾರಲು ಜನರಿಕ್ ಔಷಧಿ ಅಂಗಡಿಗಳನ್ನು ತೆರೆದಿದೆ. ಕಲ್ಯಾಣ್ ಎಂಬಲ್ಲಿ 50 ಎಕರೆ ಜಮೀನನ್ನು ಖರೀದಿಸಿ, ಕೊನೆಯ ಹಂತದ ಕ್ಯಾನ್ಸರಿನಿಂದ ಬಳಲುವ ರೋಗಿಗಳಿಗೆ ಕೊನೆಗಾಲದಲ್ಲಿ ಆಶ್ರಯ ನೀಡಲು ಧರ್ಮಶಾಲೆಯೊಂದನ್ನು ತೆರೆಯುವ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ.
ಸದ್ಯ ಎರಡು ಕೋಟಿ ರೂಪಾಯಿ ಬಜೆಟ್ನಲ್ಲಿ ತನ್ನ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿರುವ ಜೀವನ್ ಜ್ಯೋತ್ ಟ್ರಸ್ಟ್, ಮುಂದೆ ಈ ಬಜೆಟನ್ನು ಐದು ಕೋಟಿ ರೂಪಾಯಿಗೆ ವಿಸ್ತರಿಸಲು ಆಲೋಚಿಸುತ್ತಿದೆ. ಜೀವನ್ ಜ್ಯೋತ್ ಟ್ರಸ್ಟಿನ ಬೆಂಬಲಕ್ಕೆ ಸುತ್ತಮುತ್ತಲ ಸಾಮಾನ್ಯರೂ ತಮ್ಮ ಕೈಲಾದ ರೀತಿಯ ಬೆಂಬಲ ನೀಡುತ್ತಾರೆ. ಅವರು ತಮ್ಮ ಹಳೆಯ ಬಟ್ಟೆ, ದಿನಪತ್ರಿಕೆ, ಮಕ್ಕಳ ಆಟಿಕೆ ಮೊದಲಾದವುಗಳನ್ನು ದಾನ ನೀಡುತ್ತಾರೆ. ಕಳೆದ ಏಳೆಂಟು ವರ್ಷಗಳಲ್ಲಿ ಜನರು ದಾನ ನೀಡಿದ ಹಳೇ ಪೇಪರನ್ನು ಮಾರಿ ಜೀವನ್ ಜ್ಯೋತ್ ಟ್ರಸ್ಟ್ 1.25 ಕೋಟಿ ರೂಪಾಯಿಗಳನ್ನು ಕಲೆ ಹಾಕಿದೆ.
ಸದಾ ಬಿಳಿ ಕುರ್ತಾ ಪೈಜಾಮಾ ಧರಿಸುವ ಹರಕ್ ಚಂದ್ ಸಾವ್ಳ ತಮ್ಮ 65ರ ಇಳಿವಯಸ್ಸಿನಲ್ಲೂ ಪ್ರತಿದಿನ ಟಾಟಾ ಆಸ್ಪತ್ರೆಯ ಆವರಣದಲ್ಲಿ ತಿರುಗಾಡುತ್ತ, ಸಾವಿನ ನೆರಳಲ್ಲಿ ಜೀವ ಹಿಡಿದುಕೊಂಡು ಕೊನೇ ದಿನಗಳನ್ನು ಎದುರು ನೋಡುವ ಕ್ಯಾನ್ಸರ್ ರೋಗಿಗಳನ್ನು ಸಂತೈಸುತ್ತಾರೆ. ನಿರ್ಗತಿಕ ರೋಗಿಗಳು ಕ್ಯಾನ್ಸರಿಗೆ ಬಲಿಯಾಗಿ ಸತ್ತರೆ ಉಚಿತವಾಗಿ ಅವರ ಶವಸಂಸ್ಕಾರವನ್ನೂ ಮಾಡುತ್ತಾರೆ. ಹರಕ್ ಚಂದ್ ಸಾವ್ಳರಿಗೆ ಮಕ್ಕಳೆಂದರೆ ಬಲು ಪ್ರೀತಿ. ಕ್ಯಾನ್ಸರ್ ರೋಗದಿಂದ ಬಳಲುವ ಮಕ್ಕಳನ್ನು ಕಂಡಾಗ ಮಮ್ಮಲ ಮರುಗುತ್ತಾರೆ. ಅಂತಹ ಮಕ್ಕಳ ನೋವನ್ನು ತುಸುವಾದರೂ ಕಡಿಮೆಗೊಳಿಸುವ ಉದ್ದೇಶದಿಂದ ಅವರನ್ನು ಆಗಾಗ್ಗೆ ವಿಹಾರಕ್ಕೆ ಕರೆದುಕೊಂಡು ಹೋಗುತ್ತಾರೆ. ಹರಕ್ ಚಂದ್ ಸಾವ್ಳರಿಗೆ ಅಸಹಾಯಕರಿಗೆ ನೆರವಿನ ಹಸ್ತ ಚಾಚುವ ಗುಣ ಬಾಲ್ಯದಿಂದಲೇ ಬಂದುದು. ಬಾಲ್ಯದಲ್ಲಿ ಶಾಲೆಗೆ ಹೋಗುವಾಗ ಬಡ ಕುಟುಂಬದಿಂದ ಬಂದ ಸಹಪಾಠಿ ಹುಡುಗನೊಬ್ಬ ಶಾಲಾ ಫೀಸು ಕಟ್ಟಲಾಗದೆ, ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವನಿದ್ದನು. ಆಗ ಹನ್ನೊಂದು ವರ್ಷ ಪ್ರಾಯದ ಹರಕ್ ಚಂದ್ ಮೂರು ವರ್ಷ ಪ್ರತಿದಿನ 5 ಕಿ.ಮೀ. ನಡೆದು ಶಾಲೆಗೆ ಹೋಗಿ, ತಂದೆ ಕೊಡುತ್ತಿದ್ದ ಬಸ್ ಟಿಕೆಟ್ ಹಣವನ್ನು ಉಳಿಸಿ, ಅದನ್ನು ಆ ಸ್ನೇಹಿತನಿಗೆ ಕೊಟ್ಟು ಅವನ ವಿದ್ಯಾಭ್ಯಾಸ ನಿಲ್ಲದಂತೆ ನೋಡಿಕೊಂಡಿದ್ದರು.
ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…
ಅಮರಾವತಿ: ಜಗತ್ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…
ಮುಂಬೈ: ಬಾಲಿವುಡ್ನ ಭಾಯಿಜಾನ್ ಸಲ್ಮಾನ್ ಖಾನ್ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…
ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…
ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…
ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…