ಎರಡು ವರ್ಷಗಳ ಹಿಂದೆ, ಕೊಯಂಬತೂರು ಸಮೀಪ, ಕೇರಳ–ತಮಿಳುನಾಡು ಗಡಿ ಪ್ರದೇಶದಲ್ಲಿರುವ ಚಿನ್ನಂಪಟ್ಟಿ ಎಂಬ ಕುಗ್ರಾಮದ ಕಲ್ಕೊತಿಯಾ ಬುಡಕಟ್ಟಿಗೆ ಸೇರಿದ ಸಂಧ್ಯಾ ಷಣ್ಮುಗಂ (ಚಿತ್ರದಲ್ಲಿರುವವರು), ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಷಯದಲ್ಲಿ ಬ್ಯಾಚ್ಯುಲರ್ ಡಿಗ್ರಿ ಗಳಿಸಿದಾಗ ಇಡೀ ಗ್ರಾಮ ಸಂಭ್ರಮಾಚರಣೆ ನಡೆಸಿತು. ಏಕೆಂದರೆ, ಸಂಧ್ಯಾ ಷಣ್ಮುಗಂ ಆ ಹಳ್ಳಿಯ ಕಲ್ಕೊತಿಯಾ ಜನಾಂಗದಲ್ಲಿ ಕಾಲೇಜು ಡಿಗ್ರಿ ಪಡೆದ ಪ್ರಪ್ರಥಮ ಮತ್ತು ಏಕಮಾತ್ರ ವ್ಯಕ್ತಿ!
ಇತರ ಅದೆಷ್ಟೋ ಬುಡಕಟ್ಟು ಜನಾಂಗಗಳಂತೆ ಕಲ್ಕೊತಿಯಾ ಜನಾಂಗದಲ್ಲೂ ಜನ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವ ಮಹತ್ವ ಅಷ್ಟಕ್ಕಷ್ಟೇ. ಬಡತನ ಮತ್ತು ಅರಿವಿನ ಕೊರತೆಯ ಕಾರಣ ಹೆತ್ತವರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸದೆ ತಮ್ಮೊಂದಿಗೆ ಕೂಲಿನಾಲಿ ಮಾಡಲು ಕರೆದುಕೊಂಡು ಹೋಗುತ್ತಾರೆ. ಹೀಗಾಗಿ, ಕಲ್ಕೊತಿಯಾ ಜನಾಂಗದಲ್ಲಿ ಮಕ್ಕಳು ಐದನೇ ತರಗತಿ ದಾಟಿ ವಿದ್ಯಾಭ್ಯಾಸ ಮಾಡುವುದು ಅಪರೂಪ. ಅಂತಹದೊಂದು ಸಮುದಾಯದಲ್ಲಿ ಹುಟ್ಟಿ ಬೆಳೆದ ಸಂಧ್ಯಾ, ಕಂಪ್ಯೂಟರ್ ಅಪ್ಲಿಕೇಷನ್ಸ್ ನಂತಹ ಅತ್ಯಾಧುನಿಕ ವಿಷಯದಲ್ಲಿ ಡಿಗ್ರಿ ಪಡೆದಿರುವುದು ಅವಳ ಮಟ್ಟಿಗೆ ಒಂದು ಅಮೋಘ ಸಾಧನೆಯೇ!
ಸಂಧ್ಯಾ ಈ ಸಾಧನೆಗೈದ ದಾರಿ ಸುಲಭವೇನಾಗಿರಲಿಲ್ಲ. ಇದರಲ್ಲಿ ಮುಖ್ಯ ಪಾತ್ರ ವಹಿಸಿದವರು ಅವಳ ತಾಯಿ. ಆಕೆ ಇತರ ಮಕ್ಕಳ ತಾಯಿಯಂತಲ್ಲದೆ ತನ್ನ ಮಗಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವಲ್ಲಿ ಅಪಾರ ನಿಗಾ ವಹಿಸಿದರು. ಅವರು ವಾಸಿಸುವ ಪರಿಸರದಲ್ಲಿ ಸಂಚರಿಸುವ ಒಂದೇ ಒಂದು ಸರ್ಕಾರಿ ಬಸ್ಸಿನ ಮೂಲಕ ಸಂಧ್ಯಾ ಶಾಲೆ ತಲುಪಬೇಕಿತ್ತು. ಮಳೆಗಾಲದ ಸಮಯದಲ್ಲಿ ಆ ಬಸ್ಸು ಬಾರದಿರುವುದು, ಬಂದರೂ ಸರಿಯಾದ ಸಮಯಕ್ಕೆ ಬಾರದಿರುವುದು ಸಾಮಾನ್ಯವಾಗಿತ್ತು. ಯಾವುದೇ ಕಾರಣಕ್ಕೆ ಆ ಬಸ್ಸು ಬಾರದ ದಿನ, ಹೆಜ್ಜೆ ಹೆಜ್ಜೆಗೂ ಕಾಡು ಪ್ರಾಣಿಗಳ ಭಯದಲ್ಲಿ ಜೀವ ಕೈಯಲ್ಲಿ ಹಿಡಿದು ಕಾಡಿನ ನಡುವೆ ಏಳು ಕಿ.ಮೀ. ನಡೆದು ಶಾಲೆಗೆ ಹೋಗಬೇಕಾಗುತ್ತಿತ್ತು. ಇದೆಲ್ಲದರ ನಡುವೆಯೂ ಸಂಧ್ಯಾ ತನ್ನೊಬ್ಬಳ ಶಿಕ್ಷಣಕ್ಕಷ್ಟೇ ತನ್ನ ಸಾಧನೆಯನ್ನು ಮಿತಿಗೊಳಿಸಲಿಲ್ಲ. ಅವಳು ತನ್ನ ಗ್ರಾಮದ ಇತರ ಮಕ್ಕಳೂ ತನ್ನಂತೆಯೇ ಶಿಕ್ಷಿತರಾಗುವಂತೆ ಮಾಡಲು ಅವರನ್ನು, ಅವರ ಹೆತ್ತವರನ್ನು ಪ್ರೇರೇಪಿಸುತ್ತಿದ್ದಾಳೆ. ಸುಮಾರು ಮೂವತ್ತು ಮಕ್ಕಳನ್ನು ಒಂದೆಡೆ ಕಲೆಹಾಕಿ, ಅವರಿಗೆ ದಿನಾ ಆಟ ಪಾಠ ಹೇಳಿಕೊಡುತ್ತಿದ್ದಾಳೆ. ಮತ್ತು, ಮುಂದೆ ತಾನೊಬ್ಬಳು ಐಎಎಸ್ ಅಽಕಾರಿಯಾಗುವ ಗುರಿ ಹಾಕಿಕೊಂಡು, ಪರೀಕ್ಷೆಗೆ ತಯಾರಿ ನಡೆಸಿದ್ದಾಳೆ.
***
ಕಟ್ಟುನಾಯಕನ್ ಎಂಬುದು ಕೇರಳದ ಪುರಾತನ ಬುಡಕಟ್ಟು ಜನಾಂಗಗಳಲ್ಲಿ ಒಂದು. ವಯನಾಡಿನಲ್ಲಿ ಅವರನ್ನು ಕಟ್ಟು ನಾಯಕನ್ ಎಂದು ಕರೆದರೆ, ಮಲ್ಲಪುರಂ ಜಿಲ್ಲೆಯಲ್ಲಿ ಅವರನ್ನು ಚೋಳನಾಯಕನ್ ಮತ್ತು ಪಟ್ಟಿನಾಯಕನ್ ಎಂಬ ಹೆಸರುಗಳಿಂದ ಕರೆಯುತ್ತಾರೆ. ಇಂದಿಗೂ ಹೆಚ್ಚುಕಡಿಮೆ ಅರಣ್ಯವಾಸಿಗಳಾಗಿರುವ ಕಟ್ಟು ನಾಯಕನ್ ಬುಡಕಟ್ಟಿನ ಮಕ್ಕಳು ಶಾಲೆಗೆ ಹೋಗುವುದು ಅಪರೂಪದ ವಿದ್ಯಮಾನ. ಇಂತಹ ಜನಸಮುದಾಯಕ್ಕೆ ಸೇರಿದ ಶ್ರುತಿ ರಾಜ್ ಎಂಬ ಹೆಣ್ಣು ಮಗಳೊಬ್ಬಳು ಇಂಜಿನಿಯರಿಂಗ್ ಪದವಿ ಪಡೆದಿರುವುದು ಎಂತಹ ಸಾಧನೆ ಎಂಬುದು ಯಾರಿಗೂ ಅರ್ಥವಾದೀತು!
ಶ್ರುತಿ ರಾಜ್, ಕೇರಳದ ಕಟ್ಟಿಕುಲಂ ಎಂಬಲ್ಲಿನ ಚೇಳೂರಿನ ರಾಜು ಮತ್ತು ಸುನೀತಾ ಎಂಬ ಕೂಲಿಕಾರ ದಂಪತಿಯ ಮಗಳು. ಕಟ್ಟಿಕುಲಂನ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ 86% ಮಾರ್ಕುಗಳನ್ನು ಪಡೆದು, ಸ್ಕಾಲರ್ಶಿಪ್ ಗಿಟ್ಟಿಸಿ, ವಯನಾಡಿನ ಸರ್ಕಾರಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ವಿಷಯದಲ್ಲಿ ಇಂಜಿನಿಯರಿಂಗ್ ತರಗತಿಗೆ ಸೇರಿದಳು. ಆದರೆ, ಮೊದಲ ವರ್ಷ ಎರಡು ಬಾರಿ ಮೈಕ್ರೊಪ್ರೊಸೆಸ್ಸರ್ ಮತ್ತು ಕಂಟ್ರೋಲರ್ ವಿಷಯದಲ್ಲಿ ಅನುತ್ತೀರ್ಣಳಾದಳು. ಆದರೂ ಛಲ ಬಿಡದೆ ಮೂರನೇ ಪ್ರಯತ್ನದಲ್ಲಿ ಅವುಗಳನ್ನು ಪಾಸು ಮಾಡುವಲ್ಲಿ ಯಶಸ್ವಿಯಾದಳು. ಈಗ ಶ್ರುತಿ ರಾಜ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಗೆ ತಯಾರಾಗುತ್ತಿದ್ದಾಳೆ. ಮುಂದೆ ಯಾವುದಾದರೂ ಸರ್ಕಾರಿ ಹುದ್ದೆ ಪಡೆದು, ತನ್ನ ಕುಟುಂಬದ ಮತ್ತು ಸಮುದಾಯದ ಇತರರಿಗೆ ಆರ್ಥಿಕವಾಗಿ ನೆರವಾಗುವುದು ಅವಳ ಗುರಿ.
***
ಇರುಳರು ಅಥವಾ ಇರುಳಿಗರು ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹಂಚಿ ಹೋಗಿರುವ ಒಂದು ಬುಡಕಟ್ಟು ಜನಾಂಗ. ಈ ಸಮುದಾಯಕ್ಕೆ ಸೇರಿದ ಚಿನ್ನ ಸ್ವಾಮಿ ಬಡತನದ ಕಾರಣ ಏಳನೇ ತರಗತಿಗೇ ಶಾಲಾ ಕಲಿಕೆಗೆ ವಿದಾಯ ಹೇಳಿ, ಒಂದು ಇಟ್ಟಿಗೆ ಕಾರ್ಖಾನೆಯಲ್ಲಿ ಜೀತದಾಳಾಗಿ ಕೆಲಸಕ್ಕೆ ಸೇರಬೇಕಾಯಿತು. ಇಟ್ಟಿಗೆ ಕಾರ್ಖಾನೆಯು ಅವರ ಹಳ್ಳಿಯಿಂದ ದೂರವಿದ್ದುದರಿಂದ ಆತ ತನ್ನ ಕುಟುಂಬದಿಂದ ದೂರವಾಗಿ ಬದುಕುತ್ತಿದ್ದನು. ಅಲ್ಲಿ ಅನೇಕ ವರ್ಷಗಳಿಂದ ಜೀತದಾಳಾಗಿ ದುಡಿದ ಚಿನ್ನ ಸ್ವಾಮಿ, ಒಂದು ದಿನ ಅಧಿಕಾರಿಗಳು, ಸಮಾಜ ಸೇವಾ ಕಾರ್ಯಕರ್ತರು ಆ ಇಟ್ಟಿಗೆ ಕಾರ್ಖಾನೆಯ ಮೇಲೆ ನಡೆಸಿದ ದಾಳಿಯ ಪರಿಣಾಮವಾಗಿ ಇತರ ಹಲವರು ಜೀತದಾಳುಗಳೊಂದಿಗೆ ತಾನೂ ಬಿಡುಗಡೆ ಹೊಂದಿ, ತನ್ನ ಮನೆಗೆ ವಾಪಸ್ಸಾದನು. ಆಗ ಅವನ ಹಿರಿ ಮಗಳು ಸಂಗೀತಾಳಿಗೆ ಏಳು ವರ್ಷ ಪ್ರಾಯ.
ಚಿನ್ನಸ್ವಾಮಿ ಜೀತದಾಳು ಆಗಿದ್ದಾಗಲೂ, ಮತ್ತು ಜೀತಮುಕ್ತನಾಗಿ ಮನೆಗೆ ಬಂದ ನಂತರವೂ ತನ್ನ ಮೂವರು ಹೆಣ್ಣು ಮಕ್ಕಳ, ಮುಖ್ಯವಾಗಿ ಸಂಗೀತಾಳ ವಿದ್ಯಾಭ್ಯಾಸದ ಬಗ್ಗೆ ಅಪಾರ ಕಾಳಜಿ ವಹಿಸುತ್ತಿದ್ದನು. ಅವರಿವರಿಂದ ಸಾಲ ಮಾಡಿಯಾದರೂ ಸಕಾಲಕ್ಕೆ ಆಕೆಯ ಶಿಕ್ಷಣಕ್ಕೆ ಬೇಕಾದ ಹಣಕಾಸಿನ ನೆರವು ಸಿಗುವಂತೆ ನೋಡಿಕೊಳ್ಳುತ್ತಿದ್ದನು. ಉಳಿದ ತಂದೆತಾಯಂದಿರು ತಮ್ಮ ಹೆಣ್ಣು ಮಕ್ಕಳ ಮದುವೆಗೆ ಸಾಲಸೋಲ ಮಾಡಿ ಸಾಲಗಾರರಾದರೆ, ಚಿನ್ನಸ್ವಾಮಿ ತನ್ನ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಾಲ ಮಾಡಿ ಸಾಲಗಾರನಾದನು. ಸಂಗೀತಾಳೂ ತಾನೂ ಅಪ್ಪನಗೇನೂ ಕಡಿಮೆ ಇಲ್ಲವೆಂಬಂತೆ, ಬಹಳ ಶ್ರಮಪಟ್ಟು ಕಲಿಯುತ್ತಿದ್ದಳು. ಎಷ್ಟೋ ಬಾರಿ ಮನೆಯಲ್ಲಿ ಉಣ್ಣಲು ಏನೂ ಇಲ್ಲದೆ ಹಸಿದ ಹೊಟ್ಟೆಯಲ್ಲಿ ಅವಳು ಶಾಲೆಗೆ ಹೋದದ್ದೂ ಇದೆ. ಅದರ ಫಲವೋ ಎಂಬಂತೆ ಸಂಗೀತಾ ಶೈಕ್ಷಣಿಕವಾಗಿ ತನ್ನ ಬುಡಕಟ್ಟಿನ ಇತರ ಯಾವ ಮಕ್ಕಳೂ ಸಾಧಿಸದನ್ನು ತಾನು ಸಾಧಿಸಿದಳು. ಶಾಲಾ ಶಿಕ್ಷಣ ಮುಗಿಸಿ, ನರ್ಸಿಂಗ್ನಲ್ಲಿ ಬಿಎಸ್ಸಿ ಮಾಡಿ, ಆ ಮೂಲಕ ಅವಳು ಶಾಲೆ ಮತ್ತು ಕಾಲೇಜು ಮೆಟ್ಟಲು ಹತ್ತಿದ ಪ್ರಪ್ರಥಮ ಇರುಳ ಹುಡುಗಿ ಎನಿಸಿಕೊಂಡಳು!
ಸಂಗೀತಾ ಚಿನ್ನಸ್ವಾಮಿ ಕೇವಲ ತಾನೊಬ್ಬಳು ಮಾತ್ರ ಶಿಕ್ಷಿತಳಾಗುವುದಕ್ಕೆ ತನ್ನ ಸಾಧನೆಯನ್ನು ಮಿತಿಗೊಳಿಸಲಿಲ್ಲ. ಬದಲಿಗೆ, ತನ್ನ ಬುಡಕಟ್ಟಿನ ಇತರ ಹೆಣ್ಣು ಮಕ್ಕಳೂ ತನ್ನಂತೆಯೇ ಶಿಕ್ಷಣ ಪಡೆಯುವಂತೆ ಮಾಡಲು ಅವರನ್ನು ಮತ್ತು ಅವರ ಹೆತ್ತವರನ್ನು ಉತ್ತೇಜಿಸುತ್ತಿದ್ದಾಳೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…