ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯನ್ನು (ಸಂಸತ್ತು) ಇದೇ ಬುಧವಾರ ಅಧ್ಯಕ್ಷ ಅರೀ- ಅಲ್ವಿ ವಿಸರ್ಜಿಸಿದ್ದಾರೆ. ಹೊರಹೋಗಲಿರುವ ಷಹಬಾಜ್ ಷರೀ- ನಾಯಕತ್ವದ ಸರ್ಕಾರ ಅಧಿಕಾರದ ಅವ ಮುಗಿಯುವ ಮೂರುದಿನಗಳ ಮೊದಲೇ ರಾಷ್ಟ್ರೀಯ ಅಸೆಂಬ್ಲಿ ವಿಸರ್ಜನೆಗೆ ಶಿಫಾರಸು ಮಾಡಿರುವುದರಿಂದ ಕಾನೂನಿನ ಪ್ರಕಾರ ಮುಂದಿನ 90 ದಿನಗಳೊಳಗೆ ಚುನಾವಣೆ ನಡೆಯಬೇಕಿದೆ. ಮುಂದಿನ ಮೂರು ದಿನಗಳಲ್ಲಿ ಉಸ್ತುವಾರಿ ಸರ್ಕಾರವನ್ನು ರಚಿಸಬೇಕಿದೆ. ಉಸ್ತುವಾರಿ ಸರ್ಕಾರವನ್ನು ಷಹಬಾಜ್ ಷರೀ- ಅವರೇ ರಚಿಸಲು ಕಾನೂನಿನಲ್ಲಿ ಅವಕಾಶ ಇರುವುದರಿಂದ ಯಾರು ಉಸ್ತುವಾರಿ ಪ್ರಧಾನಿಯಾಗುತ್ತಾರೆ ಎನ್ನುವುದು ಕುತೂಹಲಕಾರಿ.
ರಾಜಕೀಯ ಬಿಕ್ಕಟ್ಟಿನ ಜೊತೆಗೆ ಸರ್ಕಾರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಅಪಾರ ಹಣ ವೆಚ್ಚವಾಗುವ ರಾಷ್ಟ್ರೀಯ ಚುನಾವಣೆಯನ್ನು ನಡೆಸುವುದು ಅಷ್ಟು ಸರಳವಾದ ಕೆಲಸವಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇಮ್ರಾನ್ ಖಾನ್ ಅವರನ್ನು ಜೈಲಲ್ಲಿ ಇರಿಸಿ ಚುನಾವಣೆ ನಡೆಸುವುದು ಕಷ್ಟ. ಇಮ್ರಾನ್ ಖಾನ್ ಅವರನ್ನು ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು ಐದು ವರ್ಷಗಳು ಚುನಾವಣೆಗಳಲ್ಲಿ ಭಾಗವಹಿಸದಂತೆ ಕೋರ್ಟ್ ತೀರ್ಪು ನೀಡಿದೆ. ಈ ತೀರ್ಪಿನ ಆಧಾರದ ಮೇಲೆ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಖಾನ್ ಬೆಂಬಲಿಗರು ಈಗಾಗಲೇ ಇಮ್ರಾನ್ ಖಾನ್ ಬಿಡುಗಡೆಗಾಗಿ ಸಾಕಷ್ಟು ಪ್ರದರ್ಶನಗಳನ್ನು ನಡೆಸಿದ್ದಾರೆ. ಆ ಸಂದರ್ಭದಲ್ಲಿ ನಡೆದ ಹಿಂಸಾಚಾರ ಹಿಂದೆಂದೂ ಕಾಣದ್ದು. ಉಸ್ತುವಾರಿ ಸರ್ಕಾರಕ್ಕೆ ಖಾನ್ ಬೆಂಬಲಿಗರನ್ನು ನಿಯಂತ್ರಿಸುವುದೇ ಸಮಸ್ಯೆಯಾಗಬಹುದು. ತಾಲಿಬಾನ್ ಹಿಂಸಾಚಾರ ಹೆಚ್ಚುತ್ತಿದೆ. ಬಲೂಚಿಸ್ತಾನ್ ಪ್ರತ್ಯೇಕತಾ ಚಳವಳಿಯೂ ಉಗ್ರ ಸ್ವರೂಪ ತಾಳುತ್ತಿದೆ. ಈ ಕಾರಣಗಳನ್ನು ಮುಂದೆ ಮಾಡಿ ಉಸ್ತುವಾರಿ ಸರ್ಕಾರ ಚುನಾವಣೆಗಳನ್ನು ಮುಂದೂಡಬಹುದಾದ ಸಾಧ್ಯತೆಯೂ ಇದೆ. ಚುನಾವಣೆ ಮುಂದೂಡಿದರೆ ಬಂದೊದಗಬಹುದಾದ ಸಮಸ್ಯೆಗಳನ್ನು ಪರಿಹರಿಸುವಷ್ಟು ಚಾಕಚಕ್ಯತೆ ಉಸ್ತುವಾರಿ ಸರ್ಕಾರಕ್ಕೆ ಇದೆಯೇ ಎನ್ನುವುದು ಕೂಡ ಕಾದು ನೋಡಬೇಕಾದ ಪ್ರಶ್ನೆ.
ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹರೀಕ್ ಇ ಇನ್ಸಾಫ್ ಪಕ್ಷ (ಪಿಟಿಐ) ಕಳೆದ 2018ರ ರಾಷ್ಟ್ರೀಯ ಚುನಾವಣೆಗಳಲ್ಲಿ ಅತ್ಯಧಿಕ ಸ್ಥಾನಗಳನ್ನು ಗಳಿಸಿತ್ತು. ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ ಪಕ್ಷವಾಗಿ ಮೂಡಿದ್ದ ಪಿಟಿಐಗೆ ಬಹುಮತ ಗಳಿಸಲು ಖೈಬರ್ ಫಕ್ತೂನ್ವಾ ಮತ್ತು ಬಲೂಚಿಸ್ತಾನ್ ಪಕ್ಷಗಳು ಬೆಂಬಲ ನೀಡಿದ್ದರಿಂದ ಇಮ್ರಾನ್ ಖಾನ್ ಸರ್ಕಾರ ರಚಿಸಲು ಸಾಧ್ಯವಾ ಯಿತು. ಇಮ್ರಾನ್ ಖಾನ್ ಹೊಸ ಪ್ರಧಾನಿಯಾಗಿ ಸರ್ಕಾರ ರಚಿಸಿದ್ದರು. ಇಮ್ರಾನ್ ಪ್ರಧಾನಿಯಾಗಿದ್ದನ್ನು ಸಹಿಸದ ವಿರೋಧ ಪಕ್ಷಗಳು ಸತತವಾಗಿ ಚಳವಳಿ ನಡೆಸಿದವು. ವಿರೋದಿ ಚಳವಳಿಗಳನ್ನು ನಿಭಾಯಿಸುವುದೇ ಇಮ್ರಾನ್ ಖಾನ್ಗೆ ದೊಡ್ಡ ಸಮಸ್ಯೆಯಾಗಿತ್ತು.
ಪಾಕಿಸ್ತಾನದಲ್ಲಿ ಮಿಲಿಟರಿ ಮೊದಲಿನಿಂದಲೂ ಆಡಳಿತದ ಮೇಲೆ ಹಿಡಿತ ಇಟ್ಟುಕೊಂಡೇ ಬಂದಿದೆ. ಸಮಸ್ಯೆಯಾದಾಗಲೆಲ್ಲಾ ಕ್ಷಿಪ್ರಕ್ರಾಂತಿ ನಡೆಸಿ ಅಧಿಕಾರವನ್ನು ಕಬಳಿಸಿದೆ. ಸ್ವಾತಂತ್ರ್ಯಾ ನಂತರದಲ್ಲಿ ಮೂರು ಬಾರಿ ಅಂಥ ಕ್ಷಿಪ್ರಕ್ರಾಂತಿಗಳು ನಡೆದಿವೆ. ತಮಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ ಎಂದು ಪ್ರಸ್ತುತ ಮಿಲಿಟರಿ ಅಧಿಕಾರಿಗಳು ಹೇಳಿದ್ದರೂ ದೇಶದ ಪರಿಸ್ಥಿತಿ ನೋಡಿದರೆ ಅಧಿಕಾರ ಕಬಳಿಸಲು ಸೂಕ್ತ ಪರಿಸ್ಥಿತಿ ಇರುವಂತಿದೆ. ಹಾಗೆ ನೋಡಿದರೆ ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದದ್ದು ಮಿಲಿಟರಿ ಅಧಿಕಾರಿಗಳ ನೆರವಿನಿಂದಲೇ. ಆದರೆ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಮಿಲಿಟರಿ ಅಧಿಕಾರಗಳ ಜೊತೆ ಭಿನ್ನಾಭಿಪ್ರಾಯ ಸಿಡಿಯಿತು. ಸೇನಾಧಿಕಾರಿಗಳ ವಿರುದ್ಧ ಇಮ್ರಾನ್ ಖಾನ್ ಬಹಿರಂಗವಾಗಿಯೇ ಕಿಡಿಕಾರಿದರು. ಗುಪ್ತಚರ ಇಲಾಖೆ ತಮ್ಮನ್ನು ಮುಗಿಸಲು ಯತ್ನಿಸುತ್ತಿದೆ ಎಂದು ಇಮ್ರಾನ್ ಆಪಾದಿಸಿದರು. ಕಳೆದ ನವೆಂಬರ್ ತಿಂಗಳಲ್ಲಿ ತಮ್ಮ ಕಾಲಿಗೆ ಗುಂಡೇಟು ಬಿದ್ದ ಪ್ರಕರಣದ ಹಿಂದೆ ಗುಪ್ತಚರ ವಿಭಾಗದ ಅಧಿಕಾರಿಯೊಬ್ಬರು ಇದ್ದರೆಂದು ಅವರ ಹೆಸರನ್ನು ಬಹಿರಂಗ ಮಾಡಿದರು. ಮಿಲಿಟರಿಯೊಡನೆ ಭಿನ್ನಾಭಿಪ್ರಾಯ ಹೆಚ್ಚುತ್ತಿದ್ದ ಸಂದರ್ಭ ಬಳಸಿಕೊಂಡು ವಿರೋಧ ಪಕ್ಷಗಳು ಇಮ್ರಾನ್ ವಿರುದ್ಧ ಮೊಕದ್ದಮೆಗಳ ಮೇಲೆ ಮೊಕದ್ದಮೆಗಳನ್ನು ಹೂಡಿದರು. ಅಂತಿಮವಾಗಿ ಅವಿಶ್ವಾಸ ಗೊತ್ತುವಳಿ ಸೂಚನೆ ಮಂಡಿಸಿ ಅವರನ್ನು ಅಽಕಾರದಿಂದ ಕೆಳಗಿಳಿಸುವ ಪ್ರಯತ್ನ ನಡೆಸಿ ಅದರಲ್ಲಿ ಯಶಸ್ವಿಯಾದರು. ಇಮ್ರಾನ್ ಖಾನ್ ಬೇರೆ ದಾರಿ ಇಲ್ಲದೆ ರಾಜೀನಾಮೆ ನೀಡಬೇಕಾಯಿತು. ಆಗ ಬಂದದ್ದು ನವಾಜ್ ಷರೀಫ್ ಅವರ ಸೋದರ ಷಹಬಾಜ್ ಷರೀಫ್ ನೇತೃತ್ವದ ಸರ್ಕಾರ. ಅವರಿಗೆ ದಿವಂಗತ ಬೆನಜಿರ್ ಭುಟ್ಟೋ ನೇತೃತ್ವದ ಪಕ್ಷವೂ ಬೆಂಬಲ ನೀಡಿತು. ಒಂಬತ್ತು ಪಕ್ಷಗಳು ಸೇರಿದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಷರೀಫ್ ನೇತೃತ್ವದ ಸರ್ಕಾರಕ್ಕೆ ಆರಂಭದಲ್ಲಿಯೇ ಎದುರಾದದ್ದು ಆರ್ಥಿಕ ಬಿಕ್ಕಟ್ಟು. ಸಾಲಗಳ ಕಂತು ಕಟ್ಟಲಾಗದ್ದರಿಂದ ಹೊಸ ಸಾಲ ಸಿಗದೆ ಹಣಕ್ಕಾಗಿ ಶ್ರೀಮಂತ ದೇಶಗಳನ್ನು ಬೇಳಾಡುವಂಥ ಸ್ಥಿತಿಗೆ ಸರ್ಕಾರ ತಲುಪಿತ್ತು. ಐಎಂಎಫ್ ಹೇಳಿದ ನಿರ್ಬಂಧಗಳನ್ನೆಲ್ಲಾ ಒಪ್ಪಿ ಕೊನೆಗೂ ಮೂರು ಬಿಲಿಯನ್ ಡಾಲರ್ ಹಣ ಸಾಲ ತಂದಾಯಿತು. ಅಷ್ಟೇ ಹಣವನ್ನು ಸೌದಿ ಅರೇಬಿಯಾ ನೀಡಿತು. ಚೀನಾ ಕೂಡ ಸಾಲ ಮರುಪಾವತಿಯನ್ನು ಮುಂದಕ್ಕೆ ಹಾಕಿ ಐನೂರು ಮಿಲಿಯನ್ ಡಾಲರ್ ನೆರವು ನೀಡಿತು. ಹೀಗಾಗಿ ಸರ್ಕಾರ ಕುಸಿಯಲಿಲ್ಲ. ಆದರೆ ದೇಶದ ಪರಿಸ್ಥಿತಿ ಹದಗೆಟ್ಟಿತು. ಅಗತ್ಯ ವಸ್ತುಗಳ ಬೆಲೆ ಏರಿತು. ಔಷಧಗಳ ಅಭಾವ ತಲೆದೋರಿತು. ಸಾಮಾನ್ಯ ಜನರು ಬದುಕುವುದೇ ಕಷ್ಟವಾಯಿತು. ತೈಲ ಅಭಾವವನ್ನು ನೀಗಿಸಲು ರಷ್ಯಾ ಅಗ್ಗದ ದರದಲ್ಲಿ ತೈಲವನ್ನು ಕೊಡಲು ಒಪ್ಪಿತು. ಹೀಗೆಲ್ಲಾ ಸರ್ಕಸ್ ಮಾಡಿ ದೇಶ ದಿವಾಳಿಯಾಗುವುದನ್ನು ತಪ್ಪಿಸಿ ಇದೀಗ ಷಹಬಾಜ್ ಷರೀಫ್ ಸರ್ಕಾರ ನಿಗದಿತ ಅವಽಯಲ್ಲಿಯೇ ಚುನಾವಣೆ ಘೋಷಣೆ ಮಾಡಿದೆ. 15 ತಿಂಗಳ ಷರೀಫ್ ಸರ್ಕಾರ ಅತ್ಯಂತ ಕೆಟ್ಟ ಸರ್ಕಾರ ಎಂಬ ಕುಖ್ಯಾತಿಯೊಂದಿಗೆ ನಿರ್ಗಮಿಸಿದೆ. ಉಸ್ತುವಾರಿ ಸರ್ಕಾರ ಮುಂದಿನ ಮೂರು ತಿಂಗಳೊಳಗೆ ಚುನಾವಣೆ ನಡೆಸಬೇಕಿದೆ. ಆದರೆ ಚುನಾವಣೆ ನಡೆಯಬಹುದಾದ ಸಾಧ್ಯತೆಗಳ ಬಗ್ಗೆಯೇ ಅನುಮಾನ ಕೇಳಿಬಂದಿದೆ.
ಪಾಕಿಸ್ತಾನದಲ್ಲಿ ಡಿಜಿಟಲ್ ಜನಗಣತಿ ಪ್ರಕ್ರಿಯೆ ಇದೀಗ ತಾನೆ ಮುಗಿದಿದೆ. 2017ನೇ ವರ್ಷಕ್ಕೆ ಪಾಕಿಸ್ತಾನದ ಜನಸಂಖ್ಯೆ 24.1 ಕೋಟಿ. ಆ ಹಿಂದೆ ಪಾಕ್ನ ಜನಸಂಖ್ಯೆ 20.7 ಕೋಟಿ ಇತ್ತು. ಒಮ್ಮೆ ಜನಗಣತಿ ಮುಗಿದರೆ ಅದರ ಆಧಾರದ ಮೇಲೆಯೇ ಚುನಾವಣೆ ನಡೆಯಬೇಕಿದೆ. ಚುನಾವಣೆ ನಡೆಯಬೇಕಾದರೆ ಮೊದಲು ಹೊಸ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರಗಳ ಮರುವಿಂಗಡಣೆ ಆಗಬೇಕು ಎಂಬುದು ಕಾನೂನು. ಹೀಗಾಗಿ ಮೊದಲು ಕ್ಷೇತ್ರ ಮರುವಿಂಗಡಣೆ ಆಗಬೇಕಿದೆ. ಅದನ್ನು ಮಾಡಲು ಕನಿಷ್ಠ ನಾಲ್ಕು ತಿಂಗಳು ಬೇಕಾಗಬಹುದೆಂದು ಚುನಾವಣಾ ಆಯೋಗ ತಿಳಿಸಿದೆ. ಹೀಗಾಗಿ ನವೆಂಬರ್ ೮ರ ಒಳಗೆ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ ಎಂದು ಒಳಾಡಳಿತ ಸಚಿವ ರಾಣಾ ಸನಾವುಲ್ಲಾ ಹೇಳಿದ್ದಾರೆ.
ಇಮ್ರಾನ್ ಖಾನ್ಗೆ ದೇಶದಲ್ಲಿ ಸಾಕಷ್ಟು ಬೆಂಬಲ ಇದ್ದು ಅವರನ್ನು ಜೈಲಲ್ಲಿಟ್ಟು ಚುನಾವಣೆ ನಡೆಸುವುದು ಅಪಾಯಕಾರಿ ಎಂದು ಅಮೆರಿಕ ಸೇರಿದಂತೆ ಬಹಳಷ್ಟು ದೇಶಗಳು ಅಭಿಪ್ರಾಯಪಟ್ಟಿವೆ. ಆದಾಯ ಮತ್ತು ಆಸ್ತಿಯ ವಿವರವನ್ನು ಬಹಿರಂಗ ಮಾಡದೆ ಸುಳ್ಳು ಘೋಷಣೆ ಮಾಡಿದ ಆರೋಪದ ಮೇಲೆ ಇಮ್ರಾನ್ ಖಾನ್ ಅವರನ್ನು ಚುನಾವಣಾ ಆಯೋಗ ಐದು ವರ್ಷಗಳ ಕಾಲ ಚುನಾವಣೆಗೆ ಸ್ಪಽಸದಂತೆ ನಿಷೇಧ ಹೇರಿತ್ತು. ಈ ಪ್ರಕರಣವನ್ನು ಇಸ್ಲಾಮಾಬಾದ್ನಲ್ಲಿರುವ ಸೆಷನ್ಸ್ ಕೋರ್ಟ್ ವಿಚಾರಣೆ ನಡೆಸಿ ಚುನಾವಣಾ ಆಯೋಗದ ನಿರ್ಧಾರವನ್ನು ಎತ್ತಿ ಹಿಡಿದು ಮೂರು ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಿತ್ತು. ಈ ತೀರ್ಪನ್ನು ಇಮ್ರಾನ್ ಖಾನ್ ವಕೀಲರು ಹೈಕೋರ್ಟಿನಲ್ಲಿ ಈಗಾಗಲೇ ಪ್ರಶ್ನಿಸಿದ್ದಾರೆ. ಆದರೆ ಆ ತೀರ್ಪಿಗೆ ತಡೆ ತರಲು ಈವರೆಗೆ ಸಾಧ್ಯವಾಗಿಲ್ಲ. ಈ ಪ್ರಕರಣ ಮುಂದೆ ಸುಪ್ರೀಂಕೋರ್ಟ್ ತಲುಪಬಹುದು. ಅಲ್ಲಿ ಅವರಿಗೆ ಪರಿಹಾರ ಅಂದರೆ ಸ್ಟೇ ಸಿಗಬಹುದು. ಆದರೆ ಅಷ್ಟರಲ್ಲಿ ಚುನಾವಣೆ ನಡೆಸಲು ಉಸ್ತುವಾರಿ ಸರ್ಕಾರ ಪ್ರಯತ್ನಿಸಿದರೆ ದೇಶದಲ್ಲಿ ಅಲ್ಲೋಲ ಕಲ್ಲೋಲ ಆಗಬಹುದು ಮತ್ತು ಗಲಭೆಗಳು ನಡೆಯಬಹುದಾದ ಸಾಧ್ಯತೆಗಲೂ ಇವೆ. ಈ ಸಮಸ್ಯೆಯೇ ಬೇಡ ಎಂದು ಮಿಲಿಟರಿ ಅಽಕಾರಿಗಳು ಆಡಳಿತವನ್ನು ವಶಮಾಡಿಕೊಳ್ಳುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಆದರೆ ದೇಶದ ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ನೋಡಿದರೆ ಮಿಲಿಟರಿ ಅಽಕಾರ ವಹಿಸಿಕೊಳ್ಳದಿರುವ ಸಾಧ್ಯತೆಯೂ ಇದೆ.
ಪಾಕಿಸ್ತಾನದಲ್ಲಿ ಏನೇ ಬದಲಾವಣೆಯಾದರೂ ಅದು ಭಾರತದ ಮೇಲೆ ಪರಿಣಾಮ ಬೀರುತ್ತದೆ. ಈಗಾಗಲೇ ಎರಡೂ ದೇಶಗಳ ನಡುವೆ ಬಾಂಧವ್ಯ ಕೆಟ್ಟಿದೆ. ಭಾರತದ ಜೊತೆಗೆ ಮಾತುಕತೆ ಪುನರಾರಂಭಿಸುವ ಮಾತನ್ನು ಷಹಬಾಜ್ ಷರೀಫ್ ಆಡಿರುವರಾದರೂ ಅದು ತೋರಿಕೆಯ ಮಾತು ಮಾತ್ರ ಆಗಿರಲು ಸಾಧ್ಯ. ಕಾಶ್ಮೀರ ಗಡಿಯಲ್ಲಿ ಉಗ್ರರು ನುಸುಳುವುದು ನಿಂತಿಲ್ಲ. ಅವರಿಗೆ ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ಬೆಂಬಲ ನಿಂತಿಲ್ಲ. ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಚೋದಿತ ಉಗ್ರರ ಹಿಂಸಾಚಾರವೂ ನಿಂತಿಲ್ಲ. ಹೀಗಿರುವಾಗ ಪಾಕಿಸ್ತಾನದ ಜೊತೆ ಭಾರತದ ಮಾತುಕತೆ ಸಾಧ್ಯತೆಗಳು ಇಲ್ಲವೇ ಇಲ್ಲ. ಷಹಬಾಜ್ ಷರೀಫ್ ಸರ್ಕಾರ ರಾಷ್ಟ್ರೀಯ ಅಸೆಂಬ್ಲಿ ವಿಸರ್ಜಿಸಿ ಚುನಾವಣೆ ಘೋಷಿಸಿರುವುದರಿಂದ ಮಾತುಕತೆ ಪ್ರಶ್ನೆ ಉದ್ಭವಿಸುವುದಿಲ್ಲ. ಏನಿದ್ದರೂ ಮುಂದೆ ಯಾವ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಅದರ ನೀತಿಗಳು ಏನು ಎನ್ನುವುದರ ಮೇಲೆ ಎರಡೂ ದೇಶಗಳ ಸಂಬಂಧ ಅಡಗಿದೆ.
ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…
ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…
ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…
ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…
ಅಮರಾವತಿ: ಜಗತ್ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…