ಎಡಿಟೋರಿಯಲ್

ಕಬ್ಬು ಅರೆಯಲಾರಂಭಿಸಿದರೂ ರೈತರ ಪಾಲಿಗೆ ಕಹಿಯಾಗಿಯೇ ಇರುವ ಮೈಷುಗರ್

ಮಂಡ್ಯ ಜಿಲ್ಲೆಯ ಆರ್ಥಿಕ ಜೀವನಾಡಿಯಾಗಿದ್ದ ಮೈಷುಗರ್ ಮತ್ತೆ ಕಬ್ಬು ಅರೆಯಲು ಆರಂಭಿಸಿದೆ. ರೈತರ ಪಾಲಿಗೆ ಸಿಹಿಯಾಗಬೇಕಿದ್ದ ಈ ಬೆಳವಣಿಗೆ ಕಹಿಯಾಗಿಯೇ ಉಳಿದಿದೆ. ಅದಕ್ಕೆ ಮುಖ್ಯ ಕಾರಣ ಸರ್ಕಾರ ಮತ್ತು ಆಡಳಿತ ಮಂಡಳಿಯ ರೈತ ವಿರೋಧಿ ನಿಲುವುಗಳು. ಮೈಷುಗರ ನಷ್ಟಕ್ಕೀಡಾದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಅದನ್ನು ಖಾಸಗಿಯವರಿಗೆ ವಹಿಸುವ ತೀವ್ರ ಪ್ರಯತ್ನಗಳೂ ನಡೆದಿದ್ದವು. ಆದರೆ, ಸರ್ಕಾರ ತಾನೇ ನಿರ್ಹವಹಿಸುವ ಹೊಣೆ ಹೊತ್ತು ಅದಕ್ಕೆ ಬಜೆಟ್‌ನಲ್ಲಿ ಅನುದಾನ ಒದಗಿಸಿದೆ. ಇದೀಗ ಕಾರ್ಖಾನೆ ಕಬ್ಬು ಅರೆಯಲು ಆರಂಭಿಸಿದೆ. ಆದರೆ, ಪೂರ್ವಸಿದ್ಧತೆ ಇಲ್ಲದೆಯೇ ಕಬ್ಬು ಅರೆಯಲು ಆರಂಭಿಸಿದ್ದರಿಂದಾಗಿ ರೈತರಿಗೆ ನೆರವಾಗುವ ಬದಲು ಸಂಕಷ್ಟಗಳೇ ಎದುರಾಗುತ್ತಿವೆ. ಈ ಸಮಸ್ಯೆ ಒಂದು ಕಡೆಯಾದರೆ, ಲೆಕ್ಕಪತ್ರಗಳನ್ನು ಪಾರದರ್ಶಕವಾಗಿ ನೀಡಲು ಹಿಂದೇಟು ಹಾಕುವ ಮೂಲಕ ಆಡಳಿತ ಮಂಡಳಿ ರೈತರನ್ನು ಹಾದಿ ತಪ್ಪಿಸುತ್ತಿದೆ ಎಂಬುದು ಬೆಳೆಗಾರರ ಆರೋಪ. ಪಾರದರ್ಶಕತೆ ಕಾಪಾಡಿಕೊಳ್ಳಲಾಗದ ವೈಫಲ್ಯವನ್ನು ಮುಚ್ಚಿಕೊಳ್ಳುವ ಸಲುವಾಗಿ ಆಡಳಿತ ಮಂಡಳಿಯು ನೇರವಾಗಿ ಷೇರುದಾರರ ಸಭೆ ನಡೆಸುವ ಬದಲು ವಿಡಿಯೋಕಾನ್ಫರೆನ್ಸ್ ಮೂಲಕ ಸಭೆ ನಡೆಸಿದೆ. ಇಂತಹ ಸಭೆ ನಡೆಸಲು ರೈತರು ವಿರೋಧ ವ್ಯಕ್ತಪಡಿಸಿದ್ದರೂ ಅದನ್ನು ಆಡಳಿತ ಮಂಡಳಿ ಲೆಕ್ಕಿಸಿಲ್ಲ.

ವಿಡಿಯೋ ಕಾನ್ಫರೆನ್ಸ್ ಮೂಲಕ ಇಂತಹ ಪ್ರಮುಖ ಸಭೆ ನಡೆಸುವುದರಿಂದ ಕಬ್ಬು ಬೆಳೆಗಾರರು ತಮ್ಮ ಸಂಕಷ್ಟಗಳನ್ನು ವಿವರವಾಗಿ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ, ಅಲ್ಲದೇ ತಾಂತ್ರಿಕ ಕಾರಣಗಳಿಂದಾಗಿ ರೈತರಿಗೆ ಇಂತಹ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗದು. ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸುವ ಮುನ್ನ ರೈತರಿಗೆ ಮಾಹಿತಿ ನೀಡಿ ಅರಿವು ಮೂಡಿಸುವ ಕೆಲಸವೂ ಆಗಿಲ್ಲ. ಹೀಗಾಗಿ ರೈತರು ಆಕ್ರೋಶ ವ್ಯಕ್ತಪಡಿಸಿರುವುದು ಸಹಜವೇ.

ಕಂಪೆನಿಯ ೮೧ನೇ ವಾರ್ಷಿಕ ವರದಲ್ಲಿಯಲ್ಲಿ ಇತ್ತೀಚಿನ ಲಾಭ-ನಷ್ಟದ ವಿವರಗಳು ಇಲ್ಲ. ೨೦೧೪-೧೫ನೇ ಸಾಲಿನಲ್ಲೇ ೪೦೨ ಕೋಟಿ ರೂ.ನಷ್ಟದಲ್ಲಿತ್ತು ಎಂಬ ಹಳೆಯ ಅಂಕಿಅಂಶಗಳನ್ನೇ ವಾರ್ಷಿಕ ವರದಿಯಲ್ಲಿ ಪ್ರಸ್ತಾಪವಾಗಿದೆ. ನಂತರದ ವರ್ಷಗಳಲ್ಲಿ ಕಾರ್ಖಾನೆ ನಡೆಯದೇ ಇದ್ದರೂ ನಿರ್ವಹಣೆ, ಮೇಲ್ವಿಚಾರಣೆ ಸೇರಿದಂತೆ ವಿವಿಧ ರೀತಿಯ ವೆಚ್ಚಗಳಾಗಿವೆ. ಅವುಗಳೆಲ್ಲವೂ ಪ್ರಸ್ತಾಪವಾಗದೇ ಇರುವುದರಿಂದ ರೈತರು ಆಕ್ಷೇಪ ಎತ್ತಿದ್ದಾರೆ.
ಕಾರ್ಖಾನೆ ಆಡಳಿತ ಮಂಡಳಿ ರೈತರೊಂದಿಗೆ ನೇರವಾಗಿ ಸಭೆ ನಡೆಸಿ, ಅಗತ್ಯ ವಿವರ ಮತ್ತು ಸ್ಪಷ್ಟನೆಗಳನ್ನು ನೀಡಬೇಕಿತ್ತು. ಆದರೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದು, ಆಡಳಿತ ಮಂಡಳಿ ಏನನ್ನೋ ಮುಚ್ಚಿಡಲು ಯತ್ನಿಸುತ್ತಿದೆ ಎಂಬ ಅನುಮಾನ ಬಂದು, ಸಭೆಯ ವೇಳೆ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ರೈತರು ಎತ್ತಿದ ಹಲವು ಪ್ರಶ್ನೆಗಳಿಗೆ ಆಡಳಿತ ಮಂಡಳಿ ಸಮರ್ಪಕ ಉತ್ತರ ನೀಡುವ ಪ್ರಯತ್ನವನ್ನೂ ಮಾಡಿಲ್ಲ. ಹೀಗಾಗಿ ಸಭೆಯಲ್ಲಿ ಗೊಂದಲವಾಗಿ ರೈತರು ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ನೇರವಾಗಿ ಸಭೆ ನಡೆಸದ ಆಡಳಿತ ಮಂಡಳಿ ನಿಲುವು ಖಂಡಿಸಿ ಸಭೆಯಿಂದ ಹೊರ ನಡೆದಿದ್ದಾರೆ.

ಒಂದು ವೇಳೆ ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ಸಭೆ ನಡೆಸದೇ, ನೇರವಾಗಿ ರೈತರೊಂದಿಗೆ ಸಭೆ ನಡೆಸಿದ್ದರೆ, ಆಡಳಿತ ಮಂಡಳಿ ರೈತರ ಮನವೊಲಿಸಬಹುದಿತ್ತು.

ಅಸಲಿಗೆ ೨೦೧೪ರಲ್ಲೇ ಕಂಪೆನಿಯು ೪೦೨ ಕೊಟಿ ರೂ. ನಷ್ಟವನ್ನು ದಾಖಲಿಸಿದೆ. ಆದರೆ ಇಲ್ಲಿಯವರೆಗೆ ಎಷ್ಟು ನಷ್ಟವಾಗಿದೆ ಎಂಬುದರ ವಿವರಗಳೇ ಇಲ್ಲ. ಮಾತ್ರವಲ್ಲ ಮೈಶುಗರ್ ಹೊಂದಿರುವ ಆಸ್ತಿಯ ಇಂದಿನ ಮೌಲ್ಯದ ಬಗ್ಗೆಯೂ ನಿಖರ ಮಾಹಿತಿ ಬಹಿರಂಗಪಡಿಸಿಲ್ಲ. ಆಂತರಿಕ ಲೆಕ್ಕಪರಿಶೋಧಕರನ್ನು ನೇಮಕಗೊಳಿಸದೆ ಯಾವ ದಾಖಲಾತಿಗಳನ್ನು ಮಂಡಿಸಿ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂಬ ಪ್ರಶ್ನೆ ಷೇರುದಾರರದು. ಇದು ಕಂಪನಿ ಕಾಯ್ದೆಗೂ ವಿರುದ್ಧವಾದ ನಡೆಯೂ ಹೌದು.

ಕಳೆದ ಸೆಪ್ಟೆಂಬರ್ ೧ರಿಂದ ಕಬ್ಬು ಅರೆಯಲು ಆರಂಭಿಸಿದ ಕಾರ್ಖಾನೆಗೆ ಪ್ರತಿನಿತ್ಯ ೫ ಸಾವಿರ ಟನ್ ಅರೆಯುವ ಸಾಮರ್ಥ್ಯ ಇದೆ ಎಂದು ಹೇಳಲಾಗಿತ್ತು. ಆದರೆ ಮೊದಲ ೬೦ ದಿನಗಳಲ್ಲಿ ಅರೆದಿದ್ದು ಕೇವಲ ೪೦ ಸಾವಿರ ಟನ್ ಮಾತ್ರ. ಮೈಶುಗರ್ ಕಂಪನಿಯ ಅಧ್ಯಕ್ಷ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಅವರು. ಗುಂಜನ್‌ಕೃಷ್ಣ, ಬಿ.ಶರತ್, ಎಚ್.ಶಿವಾನಂದ ಕಲಕೇರಿ, ಡಾ.ಜಿ.ಎಸ್.ಮಂಗಳಾ ಹಾಗೂ ಪಾಟೀಲ್ ಅಪ್ಪಾಸಾಹೇಬ್ ಆಡಳಿತ ಮಂಡಳಿ ನಿರ್ದೇಶಕರಾಗಿದ್ದಾರೆ. ನುರಿತ ಆಡಳಿತಗಾರರು ಕಾರ್ಖಾನೆ ನಡೆಸಿದರೂ ಕೂಡ ಸಾಮರ್ಥ್ಯಕ್ಕನುಗುಣವಾಗಿ ಕಬ್ಬು ಅರೆದಿಲ್ಲ. ಅಲ್ಲದೇ, ಕಬ್ಬು ಸರಬರಾಜು ಮಾಡಿದ ರೈತರಿಗೆ ಮುಂಗಡವಾಗಿ ೧೫೦೦ ರೂ. ಮಾತ್ರ ನೀಡಿದ್ದಾರೆ. ಕಾರ್ಖಾನೆ ಪ್ರಾರಂಭವಾದಾಗ ಜಿಲ್ಲಾ ಉಸ್ತುವಾರಿ ಸಚಿವರು ಕಬ್ಬು ಸರಬರಾಜು ಮಾಡಿದ ೧೫ ದಿನಗಳಲ್ಲೇ ಹಣ ಪಾವತಿಸುವ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಹಾಗೆಯೇ ಉಳಿದಿದೆ.

ಕಾರ್ಖಾನೆ ಆಡಳಿತ ಮಂಡಳಿ ಕಬ್ಬು ಸರಬರಾಜು ಮಾಡಿದವರಿಗೆ ತ್ವರಿತವಾಗಿ ಪೂರ್ಣ ಪ್ರಮಾಣದಲ್ಲಿ ಹಣ ಪಾವತಿಸಬೇಕು. ಹಾಗೂ ಕಾರ್ಖಾನೆಯ ಪ್ರತಿ ವರ್ಷದ ಲಾಭ ನಷ್ಟ ವಿವರಗಳನ್ನು ರೈತರ ಮುಂದಿಡಬೇಕು. ಆಗ ಮಾತ್ರವೇ ರೈತರು ಕಾರ್ಖಾನೆಯ ಮಂಡಳಿ ಬಗ್ಗೆ ವಿಶ್ವಾಸ ಬೆಳೆಸಿಕೊಳ್ಳಲು ಸಾಧ್ಯ.

andolana

Recent Posts

ಹಾಸನ: ಆಟೋ ಪಲ್ಟಿಯಾಗಿ ತಾಯಿ-ಮಗ ಸಾವು

ಹಾಸನ: ಮಗನನ್ನು ಶಾಲೆಗೆ ಸೇರಿಸಲಯ ಪತ್ರಕ್ಕಾಗಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಾಲಕನ ಅತಿಬೇಗ ಮತ್ತು ನಿರ್ಲಕ್ಷ್ಯದಿಂದ ಪಲ್ಟಿಯಾದ ಪರಿಣಾಮ ಅಮ್ಮ…

3 hours ago

ಚಾಮುಂಡಿಬೆಟ್ಟಕ್ಕೆ ಬಾಲಿವುಡ್ ನಟ ರಣವೀರ್ ಸಿಂಗ್ ಭೇಟಿ ವಿಚಾರ: ಅರ್ಚಕ ಸುನೀಲ್ ದೀಕ್ಷಿತ್ ಪ್ರತಿಕ್ರಿಯೆ

ಮೈಸೂರು: ನಾಡ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಭೇಟಿ ನೀಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಚಾಮುಂಡಿಬೆಟ್ಟದ…

3 hours ago

ರೈತರ ಆದಾಯ ಹೆಚ್ಚಿಸುವುದೇ ನಮ್ಮ ಸರ್ಕಾರದ ಗುರಿ: ಎನ್.ಚಲುವರಾಯಸ್ವಾಮಿ.

ಬೆಂಗಳೂರು: ಇಂದು ಕೃಷಿ ಕ್ಷೇತ್ರ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಹವಾಮಾನ ವೈಪರೀತ್ಯ, ಉತ್ಪಾದನಾ ವೆಚ್ಚದ ಏರಿಕೆ, ಮಾರುಕಟ್ಟೆ ಅಸ್ಥಿರತೆ ಮತ್ತು…

4 hours ago

ಸಿಎಂ ಬದಲಾದರೆ ಪರಮೇಶ್ವರ್‌ ಸಿಎಂ ಆಗಲಿ: ಮಾಜಿ ಸಚಿವ ಕೆ.ಎನ್.ರಾಜಣ್ಣ

ಬೆಂಗಳೂರು: ಸಿಎಂ ಬದಲಾವಣೆ ಆದರೆ ಪರಮೇಶ್ವರ್‌ ಮುಖ್ಯಮಂತ್ರಿಯಾಗಲಿ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಇಂದು…

5 hours ago

ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯ ವಿರೋಧಿಸಿ ಪ್ರತಿಭಟನೆ

ಮೈಸೂರು: ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯ ಮಾಡಿರುವುದನ್ನು ವಿರೋಧಿಸಿ ರೈತ ಮುಖಂಡರು ಪ್ರತಿಭಟನೆ ನಡೆಸಿದರು. ಮೈಸೂರಿನ ಕಾಡಾ ಕಛೇರಿ ಆವರಣದಲ್ಲಿರುವ…

6 hours ago

ಕಾಂತಾರ ದೈವಕ್ಕೆ ಅಪಮಾನ: ಚಾಮುಂಡಿ ತಾಯಿ ಮುಂದೆ ಕಡೆಗೂ ಕ್ಷಮೆ ಕೇಳಿದ ರಣವೀರ್‌ ಸಿಂಗ್‌

ಮೈಸೂರು: ಕಾಂತಾರ ದೈವದ ಪಾತ್ರಕ್ಕೆ ಅಪಮಾನ ಮಾಡಿದ್ದ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ…

6 hours ago