ಎಡಿಟೋರಿಯಲ್

ವಿದ್ಯುತ್ ಅವಘಡ: ಜೀವ ಹಾನಿ ತಪ್ಪಿಸಲು ಸೆಸ್ಕ್ ತುರ್ತು ಕ್ರಮ ಕೈಗೊಳ್ಳಬೇಕು

ವಿದ್ಯುತ್ ಅವಘಡಗಳಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಜೀವ ಹಾನಿಗೆ ಹೊಣೆ ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟರೆ ವಿದ್ಯುತ್ ಸರಬರಾಜು ನಿಗಮಗಳ ನಿರ್ಲಕ್ಷ್ಯ ಧೋರಣೆ ಒಂದೆಡೆಯಾದರೆ ನಮ್ಮ ಅಜಾಗರೂಕತೆಯೂ ಅವಘಡಗಳಿಗೆ ಕಾರಣವಾಗುತ್ತಿರುವುದು ಕಂಡುಬರುತ್ತಿದೆ. ಬೆಂಕಿಯ ಜೊತೆ ಸರಸ ಬೇಡ ಎಂಬ ಮಾತಿನಂತೆ ವಿದ್ಯುತ್ ಜೊತೆಗೆ ಹುಡುಗಾಟಿಕೆ ಬಿಟ್ಟು, ಮುಂಜಾಗ್ರತೆವಹಿಸಿದರೆ ಮುಂದಾಗುವ ಅನಾಹುತವನ್ನು ತಪ್ಪಿಸಬಹುದಾಗಿದೆ. ಇದರಲ್ಲಿ ನಿಗಮದ ಹೊಣೆಗಾರಿಕೆಯೂ ದೊಡ್ಡದಿದೆ. ಜೀವ ಹಾನಿ ಉಂಟಾದಾಗ ಸಂತಾಪ ಸೂಚಿಸಿ, ಮೃತನ ಕುಟುಂಬಕ್ಕೆ ಪರಿಹಾರ ಧನ ನೀಡಿ ಕೈತೊಳೆದು ಕೊಳ್ಳುವುದು ಮಾನವೀಯತೆಯಲ್ಲ. ಆದಷ್ಟು ಜೀವ ಹಾನಿ ಉಂಟಾಗದಂತೆ ಕ್ರಮವಹಿಸುವ ಕೆಲಸವಾಗಬೇಕಿದೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ವ್ಯಾಪ್ತಿಯೊಂದರಲ್ಲೇ ಕಳೆದ ೨೫ ದಿನಗಳಲ್ಲಿ ವಿದ್ಯುತ್ ಸ್ಪರ್ಶದಿಂದ ಏಳು ಮಂದಿ ಮೃತ ಪಟ್ಟಿರುವುದು ಜನರಲ್ಲಿ ಆತಂಕದ ಜೊತೆಗೆ ಸೆಸ್ಕ್ ಕಾರ್ಯ ವೈಖರಿ ಬಗ್ಗೆ ಜನಾಕ್ರೋಶಕ್ಕೂ ಕಾರಣವಾಗಿದೆ.

೧೯೫೭ರಲ್ಲಿ ಮೈಸೂರು ಪ್ರಾಂತ್ಯದ ವಿದ್ಯುತ್ ಪ್ರಸರಣ ಮತ್ತು ವಿತರಣಾ ವ್ಯವಸ್ಥೆಗಾಗಿ ಮೈಸೂರು ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯನ್ನು ರಚಿಸಲಾಗಿತ್ತು. ಕರ್ನಾಟಕ ರಾಜ್ಯ ಉದಯವಾದ ನಂತರದ ದಿನಗಳಲ್ಲಿ ಇತರೆ ಖಾಸಗಿ ವಿತರಣಾ ಕಂಪನಿಗಳನ್ನು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯೊಂದಿಗೆ ವಿಲೀನಗೊಳಿಸಲಾಗಿತ್ತು. ವಿದ್ಯುತ್ ಕ್ಷೇತ್ರಗಳ ಕಾರ್ಯನಿರ್ವಹಣೆಯನ್ನು ಉತ್ತಮಪಡಿಸುವ ಜತೆಗೆ ಕೇಂದ್ರ ಸರ್ಕಾರದ ಸುಧಾರಣಾ ಕಾಯ್ದೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ರಚನೆಯಾದ ನಂತರ ೧೯೯೯ರಿಂದ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯು ನಿಗಮವಾಗಿ ಪರಿವರ್ತನೆಯಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ರಚನೆಯಾಯಿತು. ಭೌಗೋಳಿಕ ಪ್ರದೇಶಗಳನ್ನಾಧರಿಸಿ ೨೦೦೨ರಿಂದ ರಾಜ್ಯದಲ್ಲಿ ಬೆಸ್ಕಾ, ಮೆಸ್ಕಾಂ, ಹೆಸ್ಕಾಂ ಹಾಗೂ ಗೆಸ್ಕಾಂ ರಚನೆಯಾಗಿದೆ. ಬಳಿಕ ೨೦೦೫ರಲ್ಲಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ಬೇರ್ಪಡಿಸಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಅಸ್ತಿತ್ವಕ್ಕೆ ಬಂದಿದ್ದು, ಮೈಸೂರು, ಮಂಡ್ಯ, ಚಾಮರಾಜ ನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಯ ಜವಾಬ್ದಾರಿ ಹೊತ್ತಿದೆ.

ವಿದ್ಯುತ್ ಅವಘಡಗಳ ಬಗ್ಗೆ ಸೆಸ್ಕ್ ಕಾಲ ಕಾಲಕ್ಕೆ ಜನ ಜಾಗೃತಿ ಹೆಸರಲ್ಲಿ ಮಾಧ್ಯಮಗಳಲ್ಲಿ ಪ್ರಸಾರ ಮಾಡಿ ಕೈ ತೊಳೆದುಕೊಳ್ಳುವ ಬದಲಿಗೆ ನಿಗಮದ ಸಿಬ್ಬಂದಿ ಕ್ಷೇತ್ರಗಳಲ್ಲಿ ಸಂಚರಿಸಿ ಜನರಿಗೆ ವಿದ್ಯುತ್ ಅವಘಡಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ. ಜತೆಗೆ ವಿದ್ಯುತ್ ಅಡಚಣೆ ಸಂಬಂಧದ ದೂರುಗಳಿಗೆ ನಗರ ಪ್ರದೇಶಗಳಲ್ಲಿ ತ್ವರಿತಗತಿಯಲ್ಲಿ ಸ್ಪಂದಿಸುವಂತೆಯೇ ಗ್ರಾಮೀಣ ಪ್ರದೇಶಗಳ ಜನರ ಅದರಲ್ಲೂ ರೈತಾಪಿ ವರ್ಗದವರ ದೂರಿಗೆ ತಕ್ಷಣವೇ ಸ್ಪಂದಿಸಿದರೆ ಮಾನವ ಮತ್ತು ವನ್ಯಪ್ರಾಣಿಗಳ ಜೀವ ಹಾನಿಯನ್ನು ತಡೆಗಟ್ಟಬಹುದಾಗಿದೆ.

ನಗರ ಪ್ರದೇಶಗಳಲ್ಲಿ ಬಹುತೇಕ ಸಂದರ್ಭಗಳಲ್ಲಿ ಮನೆಯ ಮುಂದೆ ಹಾದು ಹೋಗಿರುವ ವಿದ್ಯುತ್ ಮಾರ್ಗಗಳನ್ನು ಆಜಾಗರೂಕತೆಯಿಂದ ಸ್ಪರ್ಶಿಸಿ ಜೀವ ಹಾನಿಯಾದರೆ, ಗ್ರಾಮೀಣ ಪ್ರದೇಶಗಳಲ್ಲಿ ಉಂಟಾಗುವ ವಿದ್ಯುತ್ ಅವಘಡಗಳಿಗೆ ವಿದ್ಯುತ್ ಸರಬರಾಜು ನಿಗಮವೇ ನೇರ ಹೊಣೆ. ಬೇಸಿಗೆ ಸಂದರ್ಭದಲ್ಲಿ ವಿದ್ಯುತ್ ಮಾರ್ಗಗಳು ಹಿಗ್ಗಿ ಕೃಷಿ ಜಮೀನಿನ ಮೇಲೆ ಜೋತು ಬಿದ್ದಿರುವ ಬಗ್ಗೆ ದೂರುಗಳು ಬಂದರೂ ಸಕಾಲಕ್ಕೆ ಸ್ಪಂದಿಸದಿರುವುದು ಒಂದೆಡೆಯಾದರೆ, ಕೃಷಿ ಪಂಪ್‌ಸೆಟ್‌ಗಳಿಗೆ ರಾತ್ರಿ ವೇಳೆ ವಿದ್ಯುತ್ ಸರಬರಾಜು ಮಾಡುವುದಲ್ಲದೆ, ಅಗತ್ಯ ಲೋಡ್ ನೀಡದಿರುವ, ಪರಿವರ್ತಕ (ಟಿಸಿ)ಗಳು ಹಾಳಾದರೂ ಸಕಾಲಕ್ಕೆ ಬದಲಾಯಿಸದ ಬಹುತೇಕ ಸಂದರ್ಭಗಳಲ್ಲಿ ಕಷ್ಟಪಟ್ಟು ಸಾಲ ಮಾಡಿ ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲೇ ಬೇಕಾದ ಅನಿವಾರ್ಯತೆಯಲ್ಲಿ ರೈತರೇ ದುರಸ್ತಿಗೆ ಮುಂದಾದಾಗ ಜೀವಹಾನಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಜತೆಗೆ ಬೇಸಿಗೆ ಸಂದರ್ಭದಲ್ಲಿ ಆಹಾರ ಮತ್ತು ನೀರನ್ನರಸಿ ನಾಡಿಗೆ ಲಗ್ಗೆಯಿಡುವ ವನ್ಯಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳುವ ಸಲುವಾಗಿ ಜಮೀನಿನ ಸುತ್ತ ಹರಿಸುವ ಅಕ್ರಮ ವಿದ್ಯುತ್ ಪ್ರವಹಿಸಿ ವನ್ಯಪ್ರಾಣಿಗಳು ಸಾವನ್ನಪ್ಪಿರುವ ಪ್ರಕರಣಗಳೂ ಇವೆ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೆ ಮನುಷ್ಯನ ಜೀವಕ್ಕೆ ಎರವಾಗುವುದೂ ಖಂಡಿತ.

ಸೆಸ್ಕ್ ಅಧಿಕಾರಿಗಳು ಹೇಳುವ ಪ್ರಕಾರ ಬೆಳೆ ಮತ್ತು ರೈತರ ಹಿತದೃಷ್ಟಿಯಿಂದ ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ಅವಘಡಗಳ ಕುರಿತು ಜನ ಜಾಗೃತಿ ಮತ್ತು ಜಾಥಗಳನ್ನು ನಡೆಸಿ ಅರಿವು ಮೂಡಿಸಲಾಗುತ್ತಿದೆ. ಆದರೂ ಅಲ್ಲಲ್ಲಿ ಅವಘಡಗಳು ಉಂಟಾಗುತ್ತಿವೆ. ವಿದ್ಯುತ್ ಮಾರ್ಗಗಳಲ್ಲಿ ದಿನದ ೨೪ ಗಂಟೆಯೂ ನಿರಂತರವಾಗಿ ವಿದ್ಯುತ್ ಪ್ರವಹಿಸುತ್ತಿರುತ್ತದೆ. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಕಲ್ಪಿಸುವ ಮಾರ್ಗಗಳಲ್ಲಿ ೧೧ ಕೆ.ವಿ.ವಿದ್ಯುತ್ ಪ್ರವಹಿಸುತ್ತಿದ್ದು, ಈ ತೀವ್ರತರವಾದ ವಿದ್ಯುತ್ ಪ್ರವಹಿಸುವ ಮಾರ್ಗಗಳಲ್ಲಿ ಮಳೆ-ಗಾಳಿಗೆ ತಂತಿಗಳು ಜೋತು ಬೀಳುವುದು, ತುಂಡಾಗಿ ಕೆಳಗೆ ಬೀಳುವ ಸಾಧ್ಯತೆ ಹೆಚ್ಚು. ಈ ವಿದ್ಯುತ್ ಪ್ರವಹಿಸುವ ತಂತಿಗಳು ತುಂಡಾಗಿ ಭೂಮಿಗೆ ಬೀಳುತ್ತಿದ್ದಂತೆ ಪರಿವರ್ತಕಗಳು(ಟಿಸಿ) ಜಾಮ್ ಆಗಿ ಸೆಸ್ಕ್‌ಗೆ ಮಾಹಿತಿ ರವಾನೆಯಾಗುತ್ತದೆ. ಸೆಸ್ಕ್ ಸಿಬ್ಬಂದಿ ಸ್ವಯಂಪ್ರೇರಿತವಾಗಿ ಸ್ಥಳಕ್ಕೆ ತೆರಳಿ ಸರಿಪಡಿಸುತ್ತಾರೆ. ಆದರೆ, ಬಹುತೇಕ ನಗರ ಪ್ರದೇಶಗಳಲ್ಲಿ ೨೨೦ ವೋಲ್ಟ್ಸ್ ವಿದ್ಯುತ್ ಪ್ರವಹಿಸುವ ತಂತಿಗಳು ತುಂಡಾಗಿ ಕೆಳಗಡೆ ಬಿದ್ದಾಗ ಸ್ವಯಂಪ್ರೇರಿತವಾಗಿ ಮಾಹಿತಿ ದೊರೆಯುವ ಯಾವುದೇ ವ್ಯವಸ್ಥೆ ಇಲ್ಲ. ಹೀಗಾಗಿ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿದ್ದನ್ನು ಕಂಡು ಬಂದಲ್ಲಿ ಸಾರ್ವಜನಿಕರೇ ಸಹಾಯವಾಣಿ ೧೯೧೨ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕಾದ ಅವಶ್ಯಕತೆ ಇದೆ.

 

andolana

Recent Posts

ಚಾ.ನಗರ | ಬೇಡರಪುರದಲ್ಲಿ ಮತ್ತೊಂದು ಚಿರತೆ ಸೆರೆ

ಚಾಮರಾಜನಗರ : ತಾಲ್ಲೂಕಿನ ಬೇಡರಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಇನ್ನೂ ಒಂದು ಚಿರತೆ ಸೆರೆಯಾಗಿದೆ. ಗ್ರಾಮದ ಮಲ್ಲಣ್ಣ…

2 hours ago

ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಿಸಿ : ಡಿಸಿ, ಸಿಇಓಗಳಿಗೆ ಮಧು ಬಂಗಾರಪ್ಪ ಸೂಚನೆ

ಬೆಂಗಳೂರು : 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಅಭಿಯಾನ ಯಶಸ್ವಿಯಾಗಿ ನಡೆಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು…

2 hours ago

ಕಾರು-ಬೈಕ್‌ ನಡುರೆ ಭೀಕರ ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು

ಸಿದ್ದಾಪುರ : ಎರಡು ಬೈಕ್‌ಗಳು ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ…

3 hours ago

ವಾಣಿಜ್ಯ ಬಳಕೆಯ ಸಿಲಿಂಡರ್‌ ಪೂರೈಕೆಯಲ್ಲಿ ಶೇ20 ರಷ್ಟು ಹೆಚ್ಚಳ

ಹೊಸದಿಲ್ಲಿ : ಎಲ್‌ಪಿಜಿ ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ಸಂಸ್ಕರಣಾ ಘಟಕಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು…

3 hours ago

ಇರಾನ್‌ ಡ್ರೋನ್‌ ಉತ್ಪಾದನಾ ಘಟಕದ ಮೇಲೆ ಅಮೆರಿಕ ದಾಳಿ : ಚಿತ್ರ ಬಿಡುಗಡೆ

ಟೆಹ್ರಾನ್ : ಇರಾನ್‌ನ ಡ್ರೋನ್ ಉತ್ಪಾದನಾ ಘಟಕದ ಮೇಲೆ ಅಮೆರಿಕ ಸೇನೆ ನಡೆಸಿದ ನಿಖರ ದಾಳಿಗೆ ಸಂಬಂಧಿಸಿದಂತೆ ಮಹತ್ವದ ಉಪಗ್ರಹ…

4 hours ago

ಹೊಸ ಜಾಹೀರಾತು ನೀತಿ ಮೂಲಕ ಪತ್ರಿಕೆಗಳ ದಮನಕ್ಕೆ ಮುಂದಾದ ಸರ್ಕಾರ : ಪುನರ್‌ ಪರಿಶೀಲನೆಗೆ ಒತ್ತಾಯ

ಮೈಸೂರು : ರಾಜ್ಯ ಸರ್ಕಾರವು ಜಾರಿಗೆ ತರಲು ಮುಂದಾಗಿರುವ ʻಕರ್ನಾಟಕ ಜಾಹೀರಾತು ನೀತಿ-2026ʼ ವಾರ್ತಾ ಇಲಾಖೆ ಅಧಿಕಾರಿಗಳ ವಕ್ರ ದೃಷ್ಟಿಯ…

4 hours ago