ಎಡಿಟೋರಿಯಲ್

ವಿದ್ಯುತ್ ಅವಘಡ: ಜೀವ ಹಾನಿ ತಪ್ಪಿಸಲು ಸೆಸ್ಕ್ ತುರ್ತು ಕ್ರಮ ಕೈಗೊಳ್ಳಬೇಕು

ವಿದ್ಯುತ್ ಅವಘಡಗಳಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಜೀವ ಹಾನಿಗೆ ಹೊಣೆ ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟರೆ ವಿದ್ಯುತ್ ಸರಬರಾಜು ನಿಗಮಗಳ ನಿರ್ಲಕ್ಷ್ಯ ಧೋರಣೆ ಒಂದೆಡೆಯಾದರೆ ನಮ್ಮ ಅಜಾಗರೂಕತೆಯೂ ಅವಘಡಗಳಿಗೆ ಕಾರಣವಾಗುತ್ತಿರುವುದು ಕಂಡುಬರುತ್ತಿದೆ. ಬೆಂಕಿಯ ಜೊತೆ ಸರಸ ಬೇಡ ಎಂಬ ಮಾತಿನಂತೆ ವಿದ್ಯುತ್ ಜೊತೆಗೆ ಹುಡುಗಾಟಿಕೆ ಬಿಟ್ಟು, ಮುಂಜಾಗ್ರತೆವಹಿಸಿದರೆ ಮುಂದಾಗುವ ಅನಾಹುತವನ್ನು ತಪ್ಪಿಸಬಹುದಾಗಿದೆ. ಇದರಲ್ಲಿ ನಿಗಮದ ಹೊಣೆಗಾರಿಕೆಯೂ ದೊಡ್ಡದಿದೆ. ಜೀವ ಹಾನಿ ಉಂಟಾದಾಗ ಸಂತಾಪ ಸೂಚಿಸಿ, ಮೃತನ ಕುಟುಂಬಕ್ಕೆ ಪರಿಹಾರ ಧನ ನೀಡಿ ಕೈತೊಳೆದು ಕೊಳ್ಳುವುದು ಮಾನವೀಯತೆಯಲ್ಲ. ಆದಷ್ಟು ಜೀವ ಹಾನಿ ಉಂಟಾಗದಂತೆ ಕ್ರಮವಹಿಸುವ ಕೆಲಸವಾಗಬೇಕಿದೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ವ್ಯಾಪ್ತಿಯೊಂದರಲ್ಲೇ ಕಳೆದ ೨೫ ದಿನಗಳಲ್ಲಿ ವಿದ್ಯುತ್ ಸ್ಪರ್ಶದಿಂದ ಏಳು ಮಂದಿ ಮೃತ ಪಟ್ಟಿರುವುದು ಜನರಲ್ಲಿ ಆತಂಕದ ಜೊತೆಗೆ ಸೆಸ್ಕ್ ಕಾರ್ಯ ವೈಖರಿ ಬಗ್ಗೆ ಜನಾಕ್ರೋಶಕ್ಕೂ ಕಾರಣವಾಗಿದೆ.

೧೯೫೭ರಲ್ಲಿ ಮೈಸೂರು ಪ್ರಾಂತ್ಯದ ವಿದ್ಯುತ್ ಪ್ರಸರಣ ಮತ್ತು ವಿತರಣಾ ವ್ಯವಸ್ಥೆಗಾಗಿ ಮೈಸೂರು ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯನ್ನು ರಚಿಸಲಾಗಿತ್ತು. ಕರ್ನಾಟಕ ರಾಜ್ಯ ಉದಯವಾದ ನಂತರದ ದಿನಗಳಲ್ಲಿ ಇತರೆ ಖಾಸಗಿ ವಿತರಣಾ ಕಂಪನಿಗಳನ್ನು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯೊಂದಿಗೆ ವಿಲೀನಗೊಳಿಸಲಾಗಿತ್ತು. ವಿದ್ಯುತ್ ಕ್ಷೇತ್ರಗಳ ಕಾರ್ಯನಿರ್ವಹಣೆಯನ್ನು ಉತ್ತಮಪಡಿಸುವ ಜತೆಗೆ ಕೇಂದ್ರ ಸರ್ಕಾರದ ಸುಧಾರಣಾ ಕಾಯ್ದೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ರಚನೆಯಾದ ನಂತರ ೧೯೯೯ರಿಂದ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯು ನಿಗಮವಾಗಿ ಪರಿವರ್ತನೆಯಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ರಚನೆಯಾಯಿತು. ಭೌಗೋಳಿಕ ಪ್ರದೇಶಗಳನ್ನಾಧರಿಸಿ ೨೦೦೨ರಿಂದ ರಾಜ್ಯದಲ್ಲಿ ಬೆಸ್ಕಾ, ಮೆಸ್ಕಾಂ, ಹೆಸ್ಕಾಂ ಹಾಗೂ ಗೆಸ್ಕಾಂ ರಚನೆಯಾಗಿದೆ. ಬಳಿಕ ೨೦೦೫ರಲ್ಲಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ಬೇರ್ಪಡಿಸಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಅಸ್ತಿತ್ವಕ್ಕೆ ಬಂದಿದ್ದು, ಮೈಸೂರು, ಮಂಡ್ಯ, ಚಾಮರಾಜ ನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಯ ಜವಾಬ್ದಾರಿ ಹೊತ್ತಿದೆ.

ವಿದ್ಯುತ್ ಅವಘಡಗಳ ಬಗ್ಗೆ ಸೆಸ್ಕ್ ಕಾಲ ಕಾಲಕ್ಕೆ ಜನ ಜಾಗೃತಿ ಹೆಸರಲ್ಲಿ ಮಾಧ್ಯಮಗಳಲ್ಲಿ ಪ್ರಸಾರ ಮಾಡಿ ಕೈ ತೊಳೆದುಕೊಳ್ಳುವ ಬದಲಿಗೆ ನಿಗಮದ ಸಿಬ್ಬಂದಿ ಕ್ಷೇತ್ರಗಳಲ್ಲಿ ಸಂಚರಿಸಿ ಜನರಿಗೆ ವಿದ್ಯುತ್ ಅವಘಡಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ. ಜತೆಗೆ ವಿದ್ಯುತ್ ಅಡಚಣೆ ಸಂಬಂಧದ ದೂರುಗಳಿಗೆ ನಗರ ಪ್ರದೇಶಗಳಲ್ಲಿ ತ್ವರಿತಗತಿಯಲ್ಲಿ ಸ್ಪಂದಿಸುವಂತೆಯೇ ಗ್ರಾಮೀಣ ಪ್ರದೇಶಗಳ ಜನರ ಅದರಲ್ಲೂ ರೈತಾಪಿ ವರ್ಗದವರ ದೂರಿಗೆ ತಕ್ಷಣವೇ ಸ್ಪಂದಿಸಿದರೆ ಮಾನವ ಮತ್ತು ವನ್ಯಪ್ರಾಣಿಗಳ ಜೀವ ಹಾನಿಯನ್ನು ತಡೆಗಟ್ಟಬಹುದಾಗಿದೆ.

ನಗರ ಪ್ರದೇಶಗಳಲ್ಲಿ ಬಹುತೇಕ ಸಂದರ್ಭಗಳಲ್ಲಿ ಮನೆಯ ಮುಂದೆ ಹಾದು ಹೋಗಿರುವ ವಿದ್ಯುತ್ ಮಾರ್ಗಗಳನ್ನು ಆಜಾಗರೂಕತೆಯಿಂದ ಸ್ಪರ್ಶಿಸಿ ಜೀವ ಹಾನಿಯಾದರೆ, ಗ್ರಾಮೀಣ ಪ್ರದೇಶಗಳಲ್ಲಿ ಉಂಟಾಗುವ ವಿದ್ಯುತ್ ಅವಘಡಗಳಿಗೆ ವಿದ್ಯುತ್ ಸರಬರಾಜು ನಿಗಮವೇ ನೇರ ಹೊಣೆ. ಬೇಸಿಗೆ ಸಂದರ್ಭದಲ್ಲಿ ವಿದ್ಯುತ್ ಮಾರ್ಗಗಳು ಹಿಗ್ಗಿ ಕೃಷಿ ಜಮೀನಿನ ಮೇಲೆ ಜೋತು ಬಿದ್ದಿರುವ ಬಗ್ಗೆ ದೂರುಗಳು ಬಂದರೂ ಸಕಾಲಕ್ಕೆ ಸ್ಪಂದಿಸದಿರುವುದು ಒಂದೆಡೆಯಾದರೆ, ಕೃಷಿ ಪಂಪ್‌ಸೆಟ್‌ಗಳಿಗೆ ರಾತ್ರಿ ವೇಳೆ ವಿದ್ಯುತ್ ಸರಬರಾಜು ಮಾಡುವುದಲ್ಲದೆ, ಅಗತ್ಯ ಲೋಡ್ ನೀಡದಿರುವ, ಪರಿವರ್ತಕ (ಟಿಸಿ)ಗಳು ಹಾಳಾದರೂ ಸಕಾಲಕ್ಕೆ ಬದಲಾಯಿಸದ ಬಹುತೇಕ ಸಂದರ್ಭಗಳಲ್ಲಿ ಕಷ್ಟಪಟ್ಟು ಸಾಲ ಮಾಡಿ ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲೇ ಬೇಕಾದ ಅನಿವಾರ್ಯತೆಯಲ್ಲಿ ರೈತರೇ ದುರಸ್ತಿಗೆ ಮುಂದಾದಾಗ ಜೀವಹಾನಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಜತೆಗೆ ಬೇಸಿಗೆ ಸಂದರ್ಭದಲ್ಲಿ ಆಹಾರ ಮತ್ತು ನೀರನ್ನರಸಿ ನಾಡಿಗೆ ಲಗ್ಗೆಯಿಡುವ ವನ್ಯಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳುವ ಸಲುವಾಗಿ ಜಮೀನಿನ ಸುತ್ತ ಹರಿಸುವ ಅಕ್ರಮ ವಿದ್ಯುತ್ ಪ್ರವಹಿಸಿ ವನ್ಯಪ್ರಾಣಿಗಳು ಸಾವನ್ನಪ್ಪಿರುವ ಪ್ರಕರಣಗಳೂ ಇವೆ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೆ ಮನುಷ್ಯನ ಜೀವಕ್ಕೆ ಎರವಾಗುವುದೂ ಖಂಡಿತ.

ಸೆಸ್ಕ್ ಅಧಿಕಾರಿಗಳು ಹೇಳುವ ಪ್ರಕಾರ ಬೆಳೆ ಮತ್ತು ರೈತರ ಹಿತದೃಷ್ಟಿಯಿಂದ ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ಅವಘಡಗಳ ಕುರಿತು ಜನ ಜಾಗೃತಿ ಮತ್ತು ಜಾಥಗಳನ್ನು ನಡೆಸಿ ಅರಿವು ಮೂಡಿಸಲಾಗುತ್ತಿದೆ. ಆದರೂ ಅಲ್ಲಲ್ಲಿ ಅವಘಡಗಳು ಉಂಟಾಗುತ್ತಿವೆ. ವಿದ್ಯುತ್ ಮಾರ್ಗಗಳಲ್ಲಿ ದಿನದ ೨೪ ಗಂಟೆಯೂ ನಿರಂತರವಾಗಿ ವಿದ್ಯುತ್ ಪ್ರವಹಿಸುತ್ತಿರುತ್ತದೆ. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಕಲ್ಪಿಸುವ ಮಾರ್ಗಗಳಲ್ಲಿ ೧೧ ಕೆ.ವಿ.ವಿದ್ಯುತ್ ಪ್ರವಹಿಸುತ್ತಿದ್ದು, ಈ ತೀವ್ರತರವಾದ ವಿದ್ಯುತ್ ಪ್ರವಹಿಸುವ ಮಾರ್ಗಗಳಲ್ಲಿ ಮಳೆ-ಗಾಳಿಗೆ ತಂತಿಗಳು ಜೋತು ಬೀಳುವುದು, ತುಂಡಾಗಿ ಕೆಳಗೆ ಬೀಳುವ ಸಾಧ್ಯತೆ ಹೆಚ್ಚು. ಈ ವಿದ್ಯುತ್ ಪ್ರವಹಿಸುವ ತಂತಿಗಳು ತುಂಡಾಗಿ ಭೂಮಿಗೆ ಬೀಳುತ್ತಿದ್ದಂತೆ ಪರಿವರ್ತಕಗಳು(ಟಿಸಿ) ಜಾಮ್ ಆಗಿ ಸೆಸ್ಕ್‌ಗೆ ಮಾಹಿತಿ ರವಾನೆಯಾಗುತ್ತದೆ. ಸೆಸ್ಕ್ ಸಿಬ್ಬಂದಿ ಸ್ವಯಂಪ್ರೇರಿತವಾಗಿ ಸ್ಥಳಕ್ಕೆ ತೆರಳಿ ಸರಿಪಡಿಸುತ್ತಾರೆ. ಆದರೆ, ಬಹುತೇಕ ನಗರ ಪ್ರದೇಶಗಳಲ್ಲಿ ೨೨೦ ವೋಲ್ಟ್ಸ್ ವಿದ್ಯುತ್ ಪ್ರವಹಿಸುವ ತಂತಿಗಳು ತುಂಡಾಗಿ ಕೆಳಗಡೆ ಬಿದ್ದಾಗ ಸ್ವಯಂಪ್ರೇರಿತವಾಗಿ ಮಾಹಿತಿ ದೊರೆಯುವ ಯಾವುದೇ ವ್ಯವಸ್ಥೆ ಇಲ್ಲ. ಹೀಗಾಗಿ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿದ್ದನ್ನು ಕಂಡು ಬಂದಲ್ಲಿ ಸಾರ್ವಜನಿಕರೇ ಸಹಾಯವಾಣಿ ೧೯೧೨ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕಾದ ಅವಶ್ಯಕತೆ ಇದೆ.

 

andolana

Recent Posts

ಬನ್ನೇರುಘಟ್ಟದ ಕಾಸಾಗ್ರ್ಯಾಂಡ್‌ನಲ್ಲಿ ಇಂದು ಸಂಜೆ ಉದ್ಯಮಿ ಸಿ.ಜೆ.ರಾಯ್ ಅಂತ್ಯಕ್ರಿಯೆ

ಬೆಂಗಳೂರು: ಖ್ಯಾತ ಉದ್ಯಮಿ ಮತ್ತು ಕಾನ್ಪಿಡೆಂಟ್‌ ಗ್ರೂಪ್‌ ಸಂಸ್ಥಾಪಕ ಹಾಗೂ ಅಧ್ಯಕ್ಷರಾಗಿದ್ದ ಸಿ.ಜೆ.ರಾಯ್‌ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು,…

22 mins ago

ಓದುಗರ ಪತ್ರ: ಮೈಸೂರಿನಲ್ಲಿ ಮಳೆ ನೀರು ಕೊಯ್ಲು ಥೀಮ್ ಪಾರ್ಕ್ ಕನ್ನಡಿಯೊಳಗಿನ ಗಂಟು

ಮೈಸೂರು ನಗರದಲ್ಲಿ ಮಳೆನೀರು ಕೊಯ್ಲು ಥೀಮ್ ಪಾರ್ಕ್ ಸ್ಥಾಪಿಸುವ ಹಿಂದಿನ ಹಾಗೂ ಈಗಿನ ಸರ್ಕಾರಗಳ ಭರವಸೆ ಇನ್ನೂ ಕನ್ನಡಿಯೊಳಗಿನ ಗಂಟಾಗಿಯೇ…

4 hours ago

ಓದುಗರ ಪತ್ರ: ಅಂಕೇಗೌಡರಿಗೆ ಸಿಕ್ಕ ಪದ್ಮಶ್ರೀ ಸಾರಸ್ವತ ಲೋಕಕ್ಕೆ ಸಂದ ಗೌರವ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯ ಪುಸ್ತಕ ಪ್ರೇಮಿ ೭೮ ವರ್ಷದ ಅಂಕೇಗೌಡ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ಕನ್ನಡ…

4 hours ago

ಓದುಗರ ಪತ್ರ: ರಾಮಕೃಷ್ಣನಗರಕ್ಕೆ ಮತ್ತಷ್ಟು ಬಸ್ ಸೌಲಭ್ಯ ಕಲ್ಪಿಸಿ

ಮೈಸೂರಿನ ರಾಮಕೃಷ್ಣನಗರ ಮಾರ್ಗಕ್ಕೆ ಪ್ರತಿದಿನ ನಗರ ಸಾರಿಗೆ ಬಸ್ಸುಗಳು ಸಂಚರಿಸುತ್ತವೆ. ಆದರೆ ಈ ಮಾರ್ಗದಲ್ಲಿ ಓಡಾಡುವ ಬಸ್ಸುಗಳ ಸಂಖ್ಯೆ ಮಾತ್ರ…

4 hours ago

ವಿಜೃಂಭಣೆಯಿಂದ ನಡೆದ ಸಂತೆ ಮಾಸ್ತಮ್ಮನವರ ಜಾತ್ರೆ

ಸರಗೂರು: ಪಟ್ಟಣದಲ್ಲಿ ಗ್ರಾಮದೇವತೆ ಶ್ರೀ ಸಂತೆ ಮಾಸ್ತಮ್ಮನವರ ೩೧ನೇ ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ಜಾತ್ರಾ…

4 hours ago

ಕಬಿನಿ ಹಿನ್ನೀರಿನ ರೆಸಾರ್ಟ್‌ಗಳ ದಾಖಲಾತಿ ಪರಿಶೀಲನೆ

ರೆಸಾರ್ಟ್‌ಗಳು, ಹೋಂಸ್ಟೇಗಳಿಗೆ ಅಕ್ರಮ ರೆಸಾರ್ಟ್‌ಗಳ ತನಿಖಾ ಸಮಿತಿಯವರ ದಿಢೀರ್ ಭೇಟಿ ಹೆಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಹಿನ್ನೀರಿನ ನಾಗರಹೊಳೆ ಮತ್ತು ಬಂಡೀಪುರ…

4 hours ago