ರಾಜಕೀಯ ಪ್ರವೇಶಿಸುವ ತಾರೆಯರ ಸುದ್ದಿ ಒಂದೆಡೆಯಾದರೆ, ಚುನಾವಣಾ ಕಾಲದಲ್ಲಿ ಪ್ರಚಾರಕ್ಕಾಗಿ ತಮ್ಮ ಕಾಲವನ್ನು ಮೀಸಲಿಡುವವರ ಸುದ್ದಿ ಇನ್ನೊಂದೆಡೆ. ಪಕ್ಷಗಳಲ್ಲಿ ಸಕ್ರಿಯರಾಗಿದ್ದುಕೊಂಡು ಸಾಕಷ್ಟು ಕಾಲ ಕೆಲಸ ಮಾಡಿ ಚುನಾವಣೆಗೆ ಸ್ಪರ್ಧಿಸುವ ತಾರೆಯರು ನಮ್ಮಲ್ಲೂ ಸಾಕಷ್ಟು ಮಂದಿ ಇದ್ದಾರೆ. ಈಗಾಗಲೇ ವಿವಿಧ ಪಕ್ಷಗಳಲ್ಲಿ ಕೆಲಸ ಮಾಡಿರುವ, ಮಾಡುತ್ತಿರುವವರಲ್ಲಿ ಈಗ ಸಂಸದರಾಗಿರುವ ಜಗ್ಗೇಶ್, ಸುಮಲತಾ, ಸಚಿವರಾಗಿರುವ ಬಿ.ಸಿ.ಪಾಟೀಲ್, ಮುನಿರತ್ನ, ಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್, ಉಮಾಶ್ರೀ, ಡಾ.ಜಯಮಾಲ, ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ, ತಾರಾ, ಶ್ರುತಿ, ಭಾವನಾ, ಹಿರಿಯ ನಟ ಶ್ರೀನಾಥ್ ಹೀಗೆ ಪಟ್ಟಿ ಬೆಳೆಯುತ್ತದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವೃತ್ತಿ ಆರಂಭಿಸಿದ್ದು ಚಿತ್ರೋದ್ಯಮಿಯಾಗಿಯೇ. ಪ್ರದರ್ಶಕ, ವಿತರಕ, ನಿರ್ಮಾಪಕರಾಗಿ.
ಚುನಾವಣೆಯ ಸಂದರ್ಭದಲ್ಲಿ ಪಕ್ಷದ ತತ್ವ–ಕಾರ್ಯಕ್ರಮಗಳನ್ನು ಒಪ್ಪಿಕೊಂಡು ಬರುವವರದು ಒಂದು ವರ್ಗವಾದರೆ, ತಮ್ಮ ಆತ್ಮೀಯರಿಗಾಗಿ, ಕಷ್ಟಕಾಲದಲ್ಲಿ ನೆರವಾದವರಿಗಾಗಿ ಪ್ರಚಾರದಲ್ಲಿ ತೊಡಗುವವರದು ಇನ್ನೊಂದು ವರ್ಗ. ಇದು ಬಹಳ ಚಿಕ್ಕ ಬಳಗ. ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಪ್ರಚಾರಕ್ಕೆ ತಾರಾ ಆಕರ್ಷಣೆಯನ್ನು ಬಯಸುತ್ತವೆ. ಅದಕ್ಕೆ ಸಹಜವಾದ ಕಾರಣವೂ ಇರುತ್ತದೆನ್ನಿ. ಆಡಳಿತ ಪಕ್ಷಗಳಿಗೆ ತಮ್ಮ ಆಡಳಿತಾವಧಿಯಲ್ಲಿ ಮಾಡಿದ ಜನಪರ ಕೆಲಸಗಳನ್ನು ಈ ಸಂದರ್ಭದಲ್ಲಿ ಮತದಾರರಿಗೆ ತಲುಪಿಸುವ ಕೆಲಸ ಆಗಬೇಕು. ಪ್ರಚಾರದ ಸಭೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಬೇಕು. ಜನಪ್ರಿಯ ತಾರೆಯರು ಹೀಗೆ ಜನರನ್ನು ಸೆಳೆಯಬಲ್ಲರು ಎನ್ನುವ ಕಾರಣಕ್ಕಾಗಿ ಅವರ ಬೆನ್ನುಬೀಳುವುದೂ ಉಂಟು. ವಿರೋಧಪಕ್ಷಗಳಿಗೆ, ಆಡಳಿತ ವಿರೋಧಿ ಪ್ರಚಾರ ಮಾಡಿ ಆ ಮೂಲಕ ಮತದಾರರನ್ನು ಸೆಳೆಯಬೇಕು. ಇದಕ್ಕೂ ತಾರೆಯರಿದ್ದರೆ ಚೆನ್ನ ಅನ್ನೋ ಯೋಚನೆ.
ಕಳೆದ ಲೋಕಸಭಾ ಚುನಾವಣೆಯ ಸಮಯ. ರಾಜಕೀಯ ಪಕ್ಷದ ಹುರಿಯಾಳು ಒಬ್ಬರು ತಮ್ಮ ಪಕ್ಷದ ಪ್ರಚಾರಕ್ಕೆ ತಾರೆಯರನ್ನು ಕರೆಸಲು ಉದ್ದೇಶಿಸಿದ್ದರು. ಅದಕ್ಕಾಗಿ ಸಂಬಂಧಪಟ್ಟವರನ್ನು ಸಂಪರ್ಕಿಸಿದರಂತೆ. ‘ಕಳೆದ ಚುನಾವಣೆಯಲ್ಲಿ ನಾವು ದಿನಕ್ಕೆ ಇಷ್ಟು ಅಂತ ಪಡೆದುಕೊಳ್ಳುತ್ತಿದ್ದೆವು. ಸಾಧ್ಯವಾದರೆ ಸ್ವಲ್ಪ ಸೇರಿಸಿ ಕೊಡಿ. ಮನೆಗೆ ಕಾರು ಕಳುಹಿಸಿಕೊಡಿ. ಎಷ್ಟು ದಿನ ಬೇಕಾದರೂ ಬರುತ್ತೇವೆ, ಯಾವ ಪಕ್ಷವಾದರೂ ಪರವಾಗಿಲ್ಲ’ – ಇದು ಅವರಿಗೆ ಸಿಕ್ಕ ಉತ್ತರ. ಅವರ ಈ ಮಾತುಗಳನ್ನು ಕೇಳಿದಾಗ, ಎಲ್ಲ ಪಕ್ಷಗಳ ಭಿತ್ತಿಪತ್ರ, ಬ್ಯಾನರ್, ಮತ್ತಿತರ ಪ್ರಚಾರ ಸಾಮಗ್ರಿಗಳನ್ನು ಪಕ್ಷಭೇದವಿಲ್ಲದೆ ಒದಗಿಸುವ ಮುದ್ರಣ ಕೇಂದ್ರಗಳ ನೆನಪಾದದ್ದಂತೂ ಸುಳ್ಳಲ್ಲ.
ಅದು ಹಾಗಿರಲಿ, ಈ ಚುನಾವಣೆಯ ಪ್ರಕಟಣೆಗೆ ಮೊದಲೇ ಆಡಳಿತ ಪಕ್ಷ ಜನಪ್ರಿಯ ಕಲಾವಿದರನ್ನು ತಮ್ಮ ಪಕ್ಷದ ಕಕ್ಷೆಗೆ ಸೇರಿಸಲು ಪ್ರಯತ್ನಿಸಿದ್ದು ಗುಟ್ಟಾಗಿ ಉಳಿದಿಲ್ಲ. ಮಂಡ್ಯದ ಸಂಸದೆ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಿಸಿದ ತಾರೆ ಸುಮಲತಾ ಅಂಬರೀಶ್ ಅವರ ಬೆಂಬಲ ಪಡೆಯುವುದರಲ್ಲಿ ಪಕ್ಷ ಯಶಸ್ವಿಯಾಗಿದೆ. ಆ ಪಕ್ಷಕ್ಕೆ ತಮ್ಮ ಬೆಂಬಲವನ್ನು ಅವರು ಘೋಷಿಸಿದ್ದಾರೆ. ಒಂದು ವೇಳೆ ಪಕ್ಷವನ್ನು ಸೇರುವುದೇ ಆದರೆ, ಸಂಸದೆ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸೇರಬೇಕಾಗಿರುವುದರಿಂದ ಸದ್ಯದ ಮಟ್ಟಿಗೆ ಅವರು ಬೆಂಬಲವನ್ನು ಪ್ರಕಟಿಸಿದ್ದಾರೆ. ತಮ್ಮ ಬೆಂಬಲಿಗರ ಸಲಹೆ ಪಡೆದು ಈ ನಿಲುವು ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ನಟರಾದ ದರ್ಶನ್ ಮತ್ತು ಯಶ್ ಅವರ ಜೊತೆಯಾಗಿದ್ದರು. ಅವರೀಗ ಆಡಳಿತ ಪಕ್ಷಕ್ಕೆ ಬೆಂಬಲ ಘೋಷಿಸಿದ ನಂತರ ದರ್ಶನ್ ಮತ್ತು ಯಶ್ ಅವರು, ಸುಮಲತಾ ಅವರ ರಾಜಕೀಯ ನಿಲುವನ್ನು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಕಾದು ನೋಡಬೇಕು. ಕುಮಾರಸ್ವಾಮಿ ಅವರ ಮಗ, ನಟ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸುಮಲತಾ ವಿರುದ್ಧ ಸ್ಪರ್ಧಿಸಿದ್ದರು.
ಆಡಳಿತ ಪಕ್ಷಕ್ಕೆ ಸೇರಿಯೇ ಸೇರುತ್ತಾರೆ ಎಂದು ಪ್ರಚಾರವಾಗಿ, ಆ ಸುದ್ದಿ ಸುಳ್ಳಾದದ್ದು ಹಿರಿಯ ನಟ ಅನಂತನಾಗ್ ವಿಚಾರದಲ್ಲಿ. ‘ಅನಂತನಾಗ್ ಅವರು ಇಂದು ಬಿಜೆಪಿ ಸೇರಲಿದ್ದಾರೆ’ ಎಂದು ಎಲ್ಲ ಮಾಧ್ಯಮಗಳಲ್ಲೂ ಪ್ರಸಾರ/ಪ್ರಕಟಣೆ ಆಯಿತು. ಅನಂತನಾಗ್ ಅವರು ಈ ಹಿಂದೆ ರಾಜಕೀಯದಲ್ಲಿ ಇದ್ದವರು. ಸಚಿವರಾಗಿ ಕೆಲಸ ಮಾಡಿದವರು. ಹಾಗಾಗಿ ಈ ಸುದ್ದಿ ನಿಜ ಇದ್ದರೂ ಇರಬಹುದು ಎಂದು ನಂಬಿದವರೇ ಹೆಚ್ಚು. ಆದರೆ ಆ ಸುದ್ದಿ ಸುಳ್ಳಾಯಿತು.
ಹಾಗಾದರೆ ಆ ಸುದ್ದಿ ಹೇಗೆ ಬಂತು? ಅನಂತನಾಗ್ ಅವರು ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಒಂದೆರಡು ಕಡೆ ಬಹಿರಂಗವಾಗಿ ಅದನ್ನು ಹೇಳಿದ್ದೂ ಇದೆ. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷಕ್ಕೆ ಸೇರುವಂತೆ ಒತ್ತಾಯವನ್ನೂ ಮಾಡಲಾಗಿತ್ತು. ಆದರೆ ಅವರು ಪಕ್ಷ ಸೇರುತ್ತೇನೆ ಎಂದು ಹೇಳಿರಲಿಲ್ಲವಂತೆ. ಹಾಗಾದರೆ ಅನಂತನಾಗ್ ಪಕ್ಷ ಸೇರುತ್ತಾರೆ ಎನ್ನುವ ಸುದ್ದಿ ಹೇಗೆ ಬಂತು? ಯಾರಾದರೂ ಖಚಿತಪಡಿಸಿರಲೇ ಬೇಕಲ್ಲ? ಇದಕ್ಕೆ ಯಾರಿಂದಲೂ ಉತ್ತರ ಇಲ್ಲ. ಮಾಧ್ಯಮಗಳು ಪ್ರಕಟಿಸುವ ಸುದ್ದಿಯ ಸತ್ಯಾಸತ್ಯತೆಯ ಬಗ್ಗೆ ಅನುಮಾನ ಬರುವ ಇಂತಹ ಎಷ್ಟೋ ಪ್ರಸಂಗಗಳಿವೆ.
ಮೊನ್ನೆ ಸುದೀಪ್ ಕುರಿತ ವರ್ತಮಾನ ಬಂದಾಗಲೂ ಅವರನ್ನು ಹತ್ತಿರದಿಂದ ಬಲ್ಲವರು, ‘ಸುದೀಪ್ ಪಕ್ಷ ಸೇರುವ ಸಾಧ್ಯತೆ ಕಡಿಮೆ’ ಎಂದೇ ಹೇಳುತ್ತಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪತ್ರಿಕಾಗೋಷ್ಠಿ ಕರೆದದ್ದು, ಅವರ ಪಕ್ಷದ ಕಚೇರಿಯಲ್ಲಿ ಅಲ್ಲ. ಅಲ್ಲಿ ಶಾಲು, ಧ್ವಜಗಳೂ ಇರಲಿಲ್ಲ. ಅಷ್ಟರ ಮಟ್ಟಿಗೆ ಅದು ಪಕ್ಷದ ಪತ್ರಿಕಾಗೋಷ್ಠಿ ಅಲ್ಲ ಎನ್ನುವಂತೆ ಇತ್ತು.
ತಮ್ಮ ಕಷ್ಟದ ದಿನಗಳಲ್ಲಿ ತಮಗೆ ನೆರವಾದವರಲ್ಲಿ ಬಸವರಾಜ ಬೊಮ್ಮಾಯಿ ಅವರೂ ಒಬ್ಬರು. ಅವರನ್ನು ‘ಮಾಮ’ ಎಂದು ಕರೆಯುವ ಸುದೀಪ್, ಕೃತಜ್ಞತೆಯ ಕುರುಹಾಗಿ, ಚುನಾವಣೆಯಲ್ಲಿ ಅವರ ಪರವಾಗಿ, ಅವರು ಹೇಳುವ ವ್ಯಕ್ತಿಗಳ ಪರವಾಗಿ ಪ್ರಚಾರ ಮಾಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ಎಂದರೆ, ಅದು ಪಕ್ಷಕ್ಕೆ ಬೆಂಬಲ ಎಂದೇ ಅರ್ಥ ಎಂದೂ ಅಲ್ಲಿ ವ್ಯಾಖ್ಯಾನಿಸಲಾಯಿತು, ಪ್ರಶ್ನಿಸಲಾಯಿತು. ಹಣ ಪಡೆದುಕೊಂಡು ಪ್ರಚಾರಕ್ಕೆ ಬಂದಿರಾ, ಎಂದು ಕೇಳಿದವರಿಗೆ, ಸಿನಿಮಾ ರಂಗದಿಂದಲೇ ಸಾಕಷ್ಟು ದುಡ್ಡು ಬರುವುದಿದೆ ಎಂದು ಚಿತ್ರೋದ್ಯಮದ ಮುಖಕ್ಕೂ ಅಲ್ಲಿ ಕನ್ನಡಿ ಹಿಡಿದರು. ಆ ಪತ್ರಿಕಾಗೋಷ್ಠಿ ಅಲ್ಲಿನವರ ಭಾವಕ್ಕೆ ತಕ್ಕಂತೆ ಆಯಿತೆನ್ನಿ. ತಮಗೆ ಕಷ್ಟಕಾಲದಲ್ಲಿ ನೆರವಾದವರು, ಚುನಾವಣೆಯಲ್ಲಿ ಸ್ಪಧಿರ್ಸಿದರೆ, ಅವರು ಬೇರೆ ಪಕ್ಷದಲ್ಲಿದ್ದರೂ ಪ್ರಚಾರಕ್ಕೆ ಹೋಗುತ್ತೇನೆ ಎನ್ನುವುದರ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು ಸುದೀಪ್.
ತಮ್ಮ ಆತ್ಮೀಯರಿಗಾಗಿ ಪಕ್ಷಕ್ಕೆ ಸೇರದೆಯೂ ಪ್ರಚಾರ ಮಾಡಿದವರಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ನಂತರ ಚುನಾಯಿತರಾದ, ವಿಷ್ಣುವರ್ಧನ್ರ ಅಭಿಮಾನಿಯಾಗಿ, ಆತ್ಮೀಯ ಮಿತ್ರರಾಗಿದ್ದ ವಿಜಯಕುಮಾರ್ ಅವರು ಒಮ್ಮೆ ಚೆನ್ನಪಟ್ಟಣ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚುನಾವಣಾ ಪ್ರಚಾರಕ್ಕೆ ವಿಷ್ಣುವರ್ಧನ್ ಅವರು ತೆರಳಿದ್ದರು. “ನಾನು ಬಿಜೆಪಿ ಪಕ್ಷದವನಲ್ಲ. ನನ್ನ ಸ್ನೇಹಿತ ವಿಜಯಕುಮಾರ್ಗಾಗಿ ಪ್ರಚಾರಕ್ಕೆ ಹೋಗುತ್ತಿದ್ದೇನೆ’ ಎಂದು ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು.
ಭಾರತೀಯ ಚಿತ್ರರಂಗದಲ್ಲಿ ಬಹುದೊಡ್ಡ ಹೆಸರಾಗಿರುವ ಅಮಿತಾಭ್ ಬಚ್ಚನ್ ರಾಜೀವ್ ಗಾಂಧಿ ಪ್ರಧಾನಿಯಾದ ಮೇಲೆ, ಅವರಿಗೆ ನೆರವಾಗಲು ರಾಜಕೀಯಕ್ಕೆ ಇಳಿದದ್ದು, ಲೋಕಸಭೆಗೆ ಸ್ಪರ್ಧಿಸಿ, ಚುನಾವಣಾ ಇತಿಹಾಸದಲ್ಲೇ ಅತ್ಯಽಕ ಮತಗಳನ್ನು ಪಡೆದು ಗೆದ್ದದ್ದು, ಅತ್ಯಲ್ಪ ಸಮಯದಲ್ಲೇ ರಾಜಕೀಯದಿಂದ ದೂರ ಸರಿದು ಅದನ್ನು ದೂರಿದ್ದು ಎಲ್ಲವೂ ಇತಿಹಾಸ. ವ್ಯವಹಾರದಲ್ಲಿ ಇನ್ನಿಲದ ನಷ್ಟ ಅನುಭವಿಸಿದ ಅಮಿತಾಭ್ ಅವರ ಮನೆಗಳು ಏಲಂ ಆಗುವ ಸ್ಥಿತಿ ಬಂದಾಗ, ಅಮರ್ ಸಿಂಗ್ ನೆರವಿಗೆ ಬಂದರು. ಅಮಿತಾಭ್ ಬಚ್ಚನ್ ಮತ್ತೆ ರಾಜಕೀಯವನ್ನು ಅಪ್ಪಿಕೊಳ್ಳಲಿಲ್ಲ. ಆದರೆ ಅವರಿಬ್ಬರೂ ಈಗ ಆಪ್ತಮಿತ್ರರು. ಕಷ್ಟಕಾಲದಲ್ಲಿ ನೆರವಿಗೆ ಬಂದ ಅಮರ್ ಸಿಂಗ್ ಅವರನ್ನು ಕೃತಜ್ಞತೆಯಿಂದ ನೆನೆಯುತ್ತಾರೆ ಅಮಿತಾಭ್.
ಚಾಮರಾಜನಗರ: ಇಟ್ಟಿಗೆ ಬೇಯಿಸಲು ಮರಗಳ ಮಾರಣಹೋಮ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿ ನಡೆದಿದೆ. ಇಲ್ಲಿನ ಹಲವು ಗ್ರಾಮಗಳಲ್ಲಿ…
ಮೈಸೂರು: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ದಲಿತ ಮುಖ್ಯಮಂತ್ರಿ ಕೂಗು ಜೋರಾಗಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಸಿಎಂ ಮಾಡುವಂತೆ…
ಮೈಸೂರು : ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ನಿಷೇಧಿಸಬೇಕೆಂದು ಆಗ್ರಹಿಸಿ ಮೈಸೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.…
ಮಂಡ್ಯ: ಆಧುನಿಕ ಜೀವನದ ಒತ್ತಡದ ಬದುಕಿನಲ್ಲಿ ಎಲ್ಲರಿಗೂ ಅವರದ್ದೇ ಆದ ಅವಸರಗಳು. ತನ್ನ ಸುತ್ತಮುತ್ತಲಿನ ನೊಂದವರು, ಸಂಕಷ್ಟದಲ್ಲಿರುವವರ ಕಡೆ ಕಣ್ಣೆತ್ತಿಯೂ…
ಬೆಂಗಳೂರು: ಹೊಸ ವರ್ಷದ ಆಚರಣೆಗೆ ಜನ ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ. ಕರ್ನಾಟಕದ ಪ್ರವಾಸಿ ತಾಣಗಳು ಜನ ಜಂಗುಳಿಯಿಂದ ತುಂಬಿ…
ಮೈಸೂರು: ಅರಮನೆ ಬಳಿ ಹೀಲಿಯಂ ಸಿಲಿಂಡರ್ ಸ್ಫೋಟ ಸಂಭವಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು,…