ಕೇರಳದ ಮಲ್ಲಪುರ ಜಿಲ್ಲೆಯ ಕೊಂಡೊಟ್ಟಿಯ ಹತ್ತಿರದ ಎಡವನ್ನಾಪಾರ ಎಂಬ ಒಂದು ಕುಗ್ರಾಮದಲ್ಲಿ ಹುಟ್ಟಿದ ಮೊಹಮ್ಮದ್ ಅಲಿ ಶಿಹಾಬ್ ತನ್ನ ನೆರೆ ಹೊರೆಯ ಉಳಿದ ಮಕ್ಕಳಂತೆಯೇ ಒಬ್ಬ ಪೋಕರಿ ಹುಡುಗ. ಶಾಲೆಗೆ ಚಕ್ಕರ್ ಹೊಡೆಯುವುದೆಂದರೆ ಅವನಿಗೆ ಎಲ್ಲಿಲ್ಲದ ಸಂತೋಷ. ಶಾಲೆ ತಪ್ಪಿಸಲು ನೆಪ ಹುಡುಕುವುದರಲ್ಲಿ ಅವನನ್ನು ಯಾರೂ ಮೀರಿಸಲಾರರು. ಆದರೆ, ಕೆಲವೊಮ್ಮೆ ಶಾಲೆ ತಪ್ಪಿಸಲು ಅವನಿಗೆ ನಿಜವಾದ ಕಾರಣವೂ ಇರುತ್ತಿತ್ತು. ಅವನ ತಂದೆ ಕೊರೋತ್ ಅಲಿ ಒಂದು ಪಾನ್ ಬೀಡಾ ಅಂಗಡಿ ನಡೆಸುತ್ತಿದ್ದರು. ಅಸ್ತಮಾ ರೋಗಿಯಾದ ಅವರಿಗೆ ಆರೋಗ್ಯ ಹದಗೆಟ್ಟಾಗಲೆಲ್ಲ ಮೊಹಮ್ಮದ್ ಶಿಹಾಬ್ ಅಂಗಡಿಯಲ್ಲಿ ಕುಳಿತು ಅವರಿಗೆ ಸಹಾಯ ಮಾಡಲು ಶಾಲೆಗೆ ಚಕ್ಕರ್ ಹೊಡೆಯಬೇಕಾಗುತ್ತಿತ್ತು. ಅಪ್ಪ ಬೀಡಾ ಅಂಗಡಿ ನಡೆಸುತ್ತಿದ್ದ ಕಾರಣಕ್ಕೋ ಏನೋ, ದೊಡ್ಡವನಾದ ಮೇಲೆ ತಾನೂ ಅಂತಹದೇ ಒಂದು ಅಂಗಡಿ ಹಾಕುತ್ತೇನೆಂದು ಕನಸು ಕಾಣುತ್ತಿದ್ದನು.
ಆದರೆ, 1991ರಲ್ಲಿ ಮೊಹಮ್ಮದ್ ಅಲಿ ಶಿಹಾಬ್ ಹನ್ನೊಂದು ವರ್ಷದವನಾಗಿದ್ದಾಗ ಅವನ ತಂದೆ ತೀರಿಕೊಂಡು ಕುಟುಂಬ ದುರಂತದ ಸುಳಿಗೆ ಸಿಲುಕಿತು. ಆಗ ತಾನು ಮತ್ತು ಐದು ಮಕ್ಕಳಿದ್ದ ಕುಟುಂಬವನ್ನು ನಡೆಸುವ ಜವಾಬ್ದಾರಿ ಅವನ ತಾಯಿ ಫಾತಿಮಾರ ಮೇಲೆ ಬಿದ್ದಿತು. ಆದರೆ, ಆರ್ಥಿಕ ಮುಗ್ಗಟ್ಟು ಎಷ್ಟು ತೀವ್ರವಾಯಿತೆಂದರೆ, ಗಂಡ ತೀರಿಕೊಂಡ ಎರಡು ತಿಂಗಳ ನಂತರ ಫಾತಿಮಾ ಹನ್ನೊಂದು ವರ್ಷದ ಶಿಹಾಬ್, ಎಂಟು ವರ್ಷದ ಸೌರಾಭಿ ಮತ್ತು ಐದು ವರ್ಷದ ನಸೀಬಾಳನ್ನು ಕೋಝಿಕೋಡೆಯ ಒಂದು ಮುಸ್ಲಿಂ ಅನಾಥಾಶ್ರಮಕ್ಕೆ ಸೇರಿಸಬೇಕಾಯಿತು. ಹೀಗೆ ಆನಾಥಾಶ್ರಮ ಸೇರಿದ ಮೊಹಮ್ಮದ್ ಶಿಹಾಬ್ ಮತ್ತು ಅವನ ತಂಗಿಯರು ಮುಂದಿನ ಹತ್ತು ವರ್ಷಗಳನ್ನು ಅಲ್ಲಿಯೇ ಕಳೆದರು.
ಆದರೆ, ಅನಾಥಾಶ್ರಮಕ್ಕೆ ಸೇರಿಸಲ್ಪಟ್ಟದ್ದು ಮೊಹಮ್ಮದ್ ಅಲಿ ಶಿಹಾಬ್ರ ಜೀವನದ ಅತಿಮುಖ್ಯ ತಿರುವಾಗಿ ಪರಿಣಮಿಸಿತು. ಅಲ್ಲಿ ಅವರ ಜೀವನ ಒಂದು ನಿಶ್ಚಿತ ಶಿಸ್ತಿಗೆ ಒಳಪಟ್ಟಿತು. ಅವರ ಶಾಲಾ ಕಲಿಕೆಗೆ ಒಂದು ಸ್ಪಷ್ಟ ರೂಪುರೇಷೆ ಬಂದಿತು. ಎಷ್ಟೆಂದರೆ, ರಾತ್ರಿ ಎಂಟು ಗಂಟೆಗೆ ಊಟ ಮುಗಿಸಿ, ಮಲಗಿ, ಪುನಃ ನಡು ರಾತ್ರಿ ಎದ್ದು ಓದಲು ಕುಳಿತುಕೊಳ್ಳುತ್ತಿದ್ದರು. ಅಕ್ಕಪಕ್ಕದಲ್ಲಿ ಮಲಗಿದ ಇತರ ಮಕ್ಕಳ ನಿದ್ರೆಗೆ ತೊಂದರೆಯಾಗದಂತೆ ಹೊದಿಕೆಯ ಒಳಗೆ ಮಂದ ಬೆಳಕಿನ ಟಾರ್ಚಲ್ಲಿ ಓದುತ್ತಿದ್ದರು. ಆ ಶ್ರಮ ಮತ್ತು ಸಾಧನೆಯ ಫಲವಾಗಿ, ಅವರು ಹತ್ತನೇ ಕ್ಲಾಸನ್ನು ಬಹಳ ಒಳ್ಳೆಯ ಅಂಕಗಳೊಂದಿಗೆ ಪಾಸು ಮಾಡಿದರು.
ಮುಂದೆ, ರೆಗ್ಯುಲರ್ ಕಾಲೇಜಿನಲ್ಲಿ ಗ್ರ್ಯಾಜುಯೇಷನ್ ನಡೆಸಲು ತೀರ್ಮಾನಿಸಿ, ಮೊಹಮ್ಮದ್ ಶಿಹಾಬ್ ಆಶ್ರಮವನ್ನು ಬಿಟ್ಟು ಊರಿಗೆ ಮರಳುತ್ತಾರೆ. ಆದರೆ, ಅವರ ಕುಟುಂಬ ಇನ್ನೂ ಆರ್ಥಿಕ ಸಂಕಷ್ಟದಿಂದ ಹೊರಬಾರದ ಕಾರಣದಿಂದಾಗಿ ಅವರ ಮನೆಯಲ್ಲಿ ನಿರೀಕ್ಷಿತ ಬೆಂಬಲ ಸಿಗದೆ ಅವರು ಒಂದು ಪ್ರೈಮರಿ ಶಾಲೆಯಲ್ಲಿ ಶಿಕ್ಷಕ ಕೆಲಸಕ್ಕೆ ಸೇರುತ್ತಾರೆ. ಮತ್ತು, ಶಿಕ್ಷಕ ವೃತ್ತಿಮಾಡುತ್ತಲೇ ಕೇರಳ ರಾಜ್ಯದ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆ ಬರೆದು ಪಾಸಾಗುತ್ತಾರೆ. ನಂತರ, ಶಿಕ್ಷಕ ಉದ್ಯೋಗ ಬಿಟ್ಟು, ಕೇರಳ ವಾಟರ್ ಅಥಾರಿಟಿ ಇಲಾಖೆಯಲ್ಲಿ ಪೀವನ್ ಕೆಲಸಕ್ಕೆ ಸೇರುತ್ತಾರೆ. ಹಾಗೆಯೇ, ಮುಂದಿನ ಮೂರು ವರ್ಷಗಳ ಕಾಲ ಕೇರಳ ಸರ್ಕಾರದ ವಿವಿಧ ಇಲಾಖೆಗಳಲ್ಲಿ ರೈಲ್ವೆ ಟಿಸಿ, ಜೈಲ್ ವಾರ್ಡನ್ ಮೊದಲಾದ ಕೆಳ ಹಂತದ ಉದ್ಯೋಗಗಳನ್ನು ಮಾಡುತ್ತ, ಕ್ಯಾಲಿಕಟ್ ವಿಶ್ವವಿದ್ಯಾಲಯದಿಂದ ಹಿಸ್ಟ್ರಿಯಲ್ಲಿ ಬಿಎ ಪದವಿ ಪಡೆಯುತ್ತಾರೆ. ಆಗ ಅವರಿಗೆ ಇಪ್ಪತ್ತೇಳು ವರ್ಷ ಪ್ರಾಯ.
ಮೊಹಮ್ಮದ್ ಅಲಿ ಶಿಹಾಬ್ ಕೇರಳ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆ ಪಾಸ್ ಮಾಡಿದ್ದು ತಿಳಿದಿದ್ದ ಅವರ ಅಣ್ಣ ಒಂದು ದಿನ ಅವರಿಗೆ ಐಎಎಸ್ ಪರೀಕ್ಷೆ ಕಟ್ಟಲು ಸಲಹೆ ನೀಡುತ್ತಾರೆ. ಆದರೆ, ಮೊಹಮ್ಮದ್ ಶಿಹಾಬ್ ತಯಾರಿದ್ದರೂ ಅದಕ್ಕೆ ಬೇಕಾದ ಆರ್ಥಿಕ ಅನುಕೂಲತೆಗಳು ಅವರಿಗಿರಲಿಲ್ಲ. ಆಗ ಅವರು ಸೇರಿದ್ದ ಬಾಲಾಶ್ರಮವೇ ಅವರಿಗೆ ಬೇಕಾದ ಆರ್ಥಿಕ ಬೆಂಬಲ ನೀಡಲು ಮುಂದೆ ಬಂದಿತು. ಮತ್ತು, ದೆಹಲಿ ಮೂಲದ ಝಕಾತ್ ಫೌಂಡೇಷನ್ ಅವರಿಗೆ ಉಚಿತ ಕೋಚಿಂಗ್ಗೆ ವ್ಯವಸ್ಥೆ ಮಾಡಿಕೊಟ್ಟಿತು. ಮೊಹಮ್ಮದ್ ಅಲಿ ಶಿಹಾಬ್ 2007ರಲ್ಲಿ ಮೊದಲ ಬಾರಿ ಐಎಎಸ್ ಪರೀಕ್ಷೆಗೆ ಕುಳಿತರು. ಆದರೆ ಪಾಸಾಗಲಾಗಲಿಲ್ಲ. ಮುಂದೆ 2008ರಲ್ಲಿ ಕುಳಿತರು. ಆಗಲೂ ವಿಫಲರಾದರು.
ಈ ಮಧ್ಯೆ ಅವರ ಮದುವೆಯಾಗಿ, ಒಂದು ಮಗುವೂ ಆಗಿತ್ತು. ಸಾಂಸಾರಿಕ ಜವಾಬ್ದಾರಿ ಮತ್ತು ಪರೀಕ್ಷೆ ತಯಾರಿಯ ನಡುವೆ ಅವರಿಗೆ ಮೂವತ್ತರ ಪ್ರಾಯ ಸಮೀಪಿಸಿತು. ಮುಂದೆ ತನಗೆ ಪರೀಕ್ಷೆಗೆ ಕುಳಿತುಕೊಳ್ಳಲು ಹೆಚ್ಚು ಅವಕಾಶವಿಲ್ಲ ಎನ್ನುವುದನ್ನು ಮನಗಂಡ ಮೊಹಮ್ಮದ್ ಅಲಿ ಶಿಹಾಬ್ 2011ರಲ್ಲಿ ಪುನಃ ಯುಪಿಎಸ್ಸಿ ಪರೀಕ್ಷೆಗೆ ಕುಳಿತುಕೊಂಡರು. ಆ ಬಾರಿ ಅವರು 226 ಅಂಕಗಳನ್ನು ಪಡೆದು ಪಾಸು ಮಾಡಿ, ನಾಗಾಲ್ಯಾಂಡ್ ಕೇಡರಿನ ಐಎಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾದರು. ಅವರು ಐಎಎಸ್ ಅಧಿಕಾರಿಯಾದುದರಲ್ಲಿ ಇನ್ನೊಂದು ವಿಶೇಷತೆಯೇನೆಂದರೆ, ಅವರ ಇಂಗ್ಲಿಷ್ ಅಷ್ಟೇನೂ ಚೆನ್ನಾಗಿಲ್ಲದ ಕಾರಣ, ಒಬ್ಬರು ಅನುವಾದಕರ ಸಹಾಯ ಪಡೆದು ಸಂದರ್ಶನ ಎದುರಿಸಿ, ೩೦೦ರಲ್ಲಿ 201 ಮಾರ್ಕುಗಳನ್ನು ಪಡೆದುದು.
ಬಡತನ ತಮ್ಮ ಹಣೆಬರಹ, ಪೂರ್ವ ಜನ್ಮದ ಕರ್ಮ ಎಂದು ತಮ್ಮನ್ನು ತಾವೇ ಹಳಿದುಕೊಳ್ಳುವವರಿಗೆ ಮೊಹಮ್ಮದ್ ಅಲಿ ಶಿಹಾಬ್ರ ಜೀವನಗಾಥೆ ಒಂದು ಸ್ಛೂರ್ತಿದಾಯಕ ಪಾಠವಾಗಬಹುದು. ಮಲಯಾಳಂನಲ್ಲಿ ‘ವಿರಳಟ್ಟಂ (ಬೆರಳ ತುದಿ)’ ಎಂಬ ಹೆಸರಲ್ಲಿ ಶಿಹಾಬ್ರ ಆತ್ಮಕತೆಯೂ ಪ್ರಕಟವಾಗಿದೆ. ಅವರ ಹೆಂಡತಿ ಆಯೆಷಾ ಫೆಮಿನಾ, ಅಕ್ಕ ಮೈಮೂನಾ ಮತ್ತು ಅವರೊಂದಿಗೆ ಅನಾಥಾಶ್ರಮ ಸೇರಿದ್ದ ತಂಗಿಯರಾದ ಸೌರಾಭಿ ಮತ್ತು ನಸೀಬಾ ಸರ್ಕಾರಿ ಶಾಲಾ ಶಿಕ್ಷಕಿಯರಾಗಿದ್ದಾರೆ. ಅಣ್ಣ ಗಫೂರ್ ಅಬ್ದುಲ್ ಆಯುರ್ವೇದ ವೈದ್ಯರಾಗಿದ್ದಾರೆ.
ವಾಷಿಂಗ್ಟನ್ : ಹೊರ್ಮುಜ್ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸದಿದ್ದರೆ ಇರಾನ್ನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕದ…
ಬೆಂಗಳೂರು : ಕೊಡಗು ಜಿಲ್ಲೆಯ ತಡಿಯಾಂಡಮೋಳ್ ಶಿಖರಕ್ಕೆ ಕೇರಳದಿಂದ ಚಾರಣಕ್ಕಾಗಿ ಬಂದು ಏಪ್ರಿಲ್ 2 ರಂದು ನಾಪತ್ತೆಯಾಗಿದ್ದ ಜಿ.ಎಸ್. ಶರಣ್ಯ…
ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾಕುಮಾರಿ ಅವರನ್ನು ಸರ್ಕಾರ ನೇಮಕ ಮಾಡಿದೆ. ಈವರೆಗೆ…
ಮೈಸೂರು : ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಕರ್ನಾಟಕ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಏ.9ರವರೆಗೆ ಯಲ್ಲೋ…
ದಾವಣಗೆರೆ : ಕಾಂತರಾಜು ವರದಿ ಈಗ ನಿಮ್ಮ ಬಳಿಯೇ ಇದೆ. ಜಯಪ್ರಕಾಶ ಹೆಗಡೆ ಅವರ ವರದಿಯು ಸ್ವೀಕರಿಸಿದ್ದೀರಿ. ಎರಡು ವರದಿಗಳನ್ನು…
ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮತ್ತು ಕುರ್ಚಿ ಉಳಿಸಿಕೊಳ್ಳಲು ತಮ್ಮನ್ನು ಬೆಳೆಸಿದ್ದ ಅಹಿಂದ ವರ್ಗವನ್ನೇ…