ಎಡಿಟೋರಿಯಲ್

ಧಮ್ಮಪದ ಜನಪದದೆಡೆಗೆ ಸಾಗಬೇಕು

ಆರ್. ಮಹದೇವಪ್ಪ

ಇಂದು ಧಮ್ಮಚಕ್ಕ ಪವತ್ತನ ದಿನ- ಅಂದರೆ ಬುದ್ಧರು ಮೊದಲ ಬಾರಿಗೆ ಬುದ್ಧಧಮ್ಮವನ್ನು ಬೋಧಿಸಿದ ದಿನ!-

ಜನಪದ ಮಾಡಿದವರು ಯಾರು? ಯಾವಾಗ? ಈ ಪ್ರಶ್ನೆಯನ್ನು ಇದರ ಬಗ್ಗೆ ಸಂಶೋಧನೆ ಮಾಡಿದವರನ್ನು ಕೇಳಬೇಕು. ಆದರೆ ನನ್ನ ಪ್ರಶ್ನೆ ಸಂಶೋಧನೆಯನ್ನು ಬೆನ್ನತ್ತಿ ಹೋಗುವುದಲ್ಲ. ಅದರ ಮೇಲ್ಮೈ ತಿಳಿದರೆ ಧಮ್ಮಪದವನ್ನು ಆ ದಿಕ್ಕಿನಲ್ಲಿ ಕೊಂಡೊಯ್ಯಬಹುದು ಎನ್ನುವ ಉದ್ದೇಶದಿಂದ ಅದರ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ.

ಜನಪದದ ಅನೇಕ ಪ್ರಕಾರಗಳಲ್ಲಿ ಜಾನಪದ ಕಾವ್ಯ(ಹಾಡು), ಪದಗಳು, ತಾಳ, ತಂಬೂರಿ, ತಮಟೆ, ಮದ್ದಳೆ ಕುಣಿತ ಮುಂತಾದವುಗಳು ಭಕ್ತಿ-ಭಾವದ ಭಾಗವಾಗಿ, ಜನಪದರು ನಂಬಿದ ದೈವದ ಭಾಗವಾಗಿ ಇರುತ್ತವೆ . ಇವುಗಳನ್ನು ಮುನ್ನಡೆಸುವ ಜನರೇ ಬೇರೆ, ಅನುಸರಿಸಿ ನಡೆಯುವ ಜನರೇ ಬೇರೆ. ಮುನ್ನಡೆಸುವ ಜನರಲ್ಲಿ ನೀಲಗಾರರು, ದೇವರಗುಡ್ಡಯ್ಯ, ದಾಸಯ್ಯ ಇನ್ನೂ ಕೆಲವು ಅರ್ಪಿತಾ ಜನರು ಸೇರಿದ್ದಾರೆ. ಇವರ ಶ್ರದ್ಧೆ, ಭಕ್ತಿ, ನಿಷ್ಠೆ ಬಗ್ಗೆ ಸಂದೇಹ ಪಡುವ ಅಗತ್ಯವಿಲ್ಲ. ಅಷ್ಟೊಂದು ಕಟ್ಟುನಿಟ್ಟಾಗಿ ನಡೆದುಕೊಳ್ಳುತ್ತಾರೆ. ಕೆಲವು ಸಂದರ್ಭಗಳಲ್ಲಿ ಮೈಮೇಲೆ ದೇವರು ಬಂದಂತೆ ನಡೆದುಕೊಳ್ಳುತ್ತಾರೆ. ಹಬ್ಬ ಹರಿದಿನ, ಅಮಾವಾಸ್ಯೆ, ಹುಣ್ಣಿಮೆ, ಸೋಮವಾರ ಹೀಗೆ ವಿಶೇಷ ದಿನಗಳಲ್ಲಿ ನಂಬಿದ ದೈವಕ್ಕೆ ನಡೆದುಕೊಳ್ಳುತ್ತಾರೆ. ಜನರನ್ನು ದೈವಕ್ಕೆ ನಡೆದುಕೊಳ್ಳುವಂತೆ ಪ್ರೇರೇಪಿಸುತ್ತಾರೆ. ಇದು ತಲತಲಾಂತರದಿಂದ ನಡೆದುಕೊಂಡು ಬಂದಿದೆ. ಈ ಜಿಡ್ಡುಗಟ್ಟಿದ ವ್ಯವಸ್ಥೆಯನ್ನು ಜನರು ಬಿಡಲು ಸಿದ್ಧರಿಲ್ಲ. ಇದರೊಂದಿಗೆ ಜಾತಿವ್ಯವಸ್ಥೆಯೂ ಸೇರಿಕೊಂಡಿದೆ.

 

ಧಮ್ಮಪದ ಶರಣರ ವಚನಗಳಿದ್ದಂತೆ ಅಥವಾ ಯಾವುದೇ ಧರ್ಮದ ನೀತಿ ಬೋಧನೆಯ ಗ್ರಂಥವಿದ್ದಂತೆ. ಬುದ್ಧರು ತಮ್ಮ ಜೀವಿತದ ಅವಧಿಯಲ್ಲಿ ನೋಡಿದ, ಕಂಡ ಘಟನೆಗಳ ಸಂದರ್ಭದಲ್ಲಿ ಉದ್ಘರಿಸಿದ ನೀತಿ, ನಡವಳಿಕೆಗಳಿಗೆ ಸಂಬಂಧಪಟ್ಟ ಬೋಧನೆಗಳು. ಧಮ್ಮ ಅನುಯಾಯಿಗಳಿಗೆ ದಾರಿದೀಪ. ಮಾನವ ಪ್ರೀತಿ, ಕ್ಲೇಶ, ದ್ವೇಷ, ಮೋಹ, ಮದ-ಮತ್ಸರ ಮುಂತಾದವುಗಳ ವಿವರಗಳಿವೆ. ಇವುಗಳಲ್ಲಿ ತಮ್ಮ ಜೀವನದಲ್ಲಿ ಒಳ್ಳೆಯದನ್ನು ಅಳವಡಿಸಿಕೊಂಡು ಜನರಿಗೆ ತಲುಪಿಸುವ ಜವಾಬ್ದಾರಿ ಯಾರದು?

 

ಬಿಜ್ಜಳನ ಆಸ್ಥಾನದಲ್ಲಿ ವಿನಾಶಕಾರಿ ಘಟನೆಗಳು ನಡೆದಾಗ ಗುಂಡು ಹೊಡೆದ ಶಬ್ದಕ್ಕೆ ಮರದ ಮೇಲಿದ್ದ ಹಕ್ಕಿಗಳು ಹೆದರಿ ದಿಕ್ಕಾಪಾಲಾಗಿ ಹಾರಿದಂತೆ, ಶರಣರು ರಾಜ್ಯದ ನಾನಾ ಭಾಗಗಳಿಗಲ್ಲದೆ ಅಕ್ಕಪಕ್ಕದ ರಾಜ್ಯಗಳಿಗೂ ಮಹಾಮನೆಯಲ್ಲಿ ಕಲಿತ, ಕನಲಿದ ವಚನಗಳೊಡನೆ ನಡೆದರು. ದಾರಿಯಲ್ಲಿ ತಮಗೆ ಅನುಕೂಲವಾದ ಸ್ಥಳದಲ್ಲಿ ನೆಲೆಯೂರಿ, ಜನರೊಡನೆ ಸಂಪರ್ಕ ಬೆಳೆಸಿ, ವಚನಗಳ ಸಾರವನ್ನು ಹೇಳುತ್ತಾ ಜನಮಾನಸದಲ್ಲಿ ಬೆರೆತು ಲಿಂಗಾಯತ ಧರ್ಮ ಸ್ಥಾಪನೆಗೆ ಕಾರಣೀಭೂತರಾಗುತ್ತಾರೆ. ಸ್ವಾಮೀಜಿಗಳು, ಜಂಗಮರು, ತಮ್ಮಡಿಗಳು, ಆರಾಧ್ಯ ರೆಂದು ಕರೆಸಿಕೊಳ್ಳುವ ಈ ಜನ ತಮ್ಮ ತ್ಯಾಗ, ನಿಷ್ಠೆಯಿಂದ ಸಾಧನೆಯ ಶಿಖರವನ್ನು ಸೃಷ್ಟಿಸಿ ಅಸಮಾನ್ಯರೆನಿಸುತ್ತಾರೆ. ಜನರಲ್ಲಿನ ಮೌಢ್ಯ ನಿವಾರಣೆ ಮಾಡಿ, ಸುಜ್ಞಾನವ ಬಿತ್ತಿ ಭಕ್ತಿಯ ಸಾಗರವನ್ನೇ ನಿರ್ಮಿಸುತ್ತಾರೆ. ತ್ರಿವಿಧ ದಾಸೋಹಗಳ ಮೂಲಕ ಜನರನ್ನು ಸಂಘಟಿಸಿ ಲಿಂಗಾಯತ ಸಮಾಜ ನಿರ್ಮಾಣದಲ್ಲಿ ಯಶಸ್ವಿಯಾಗಿ ಶತಮಾನಗಳಿಂದ ಮುಂದುವರೆಸಿಕೊಂಡು ಬರುತ್ತಿದ್ದಾರೆ.

 

ಈಗ ಹೇಳಿ ಧಮ್ಮಪದ ಏನು ಮಾಡಬೇಕು? ಯಾರು ಪ್ರಚಾರ ಮಾಡಬೇಕು? ಹೇಗೆ ಪ್ರಚಾರ ಮಾಡಬೇಕು? ಹೇಗೆ ಜನಪರವಾಗಿಸಬೇಕು. ಜಾನಪದದಲ್ಲಿ ಪ್ರಚಾರ ಮಾಡುವ ಪ್ರಭಾವ ಬೀರುವ ನೀಲಗಾರರು, ದೇವರಗುಡ್ಡಯ್ಯ, ದಾಸಯ್ಯರಂತೆ ವಚನಕಾರರು ಲಿಂಗಾಯತ ಧರ್ಮ ಪ್ರಚಾರಕ್ಕೆ ಕಾರಣರಾದಂತೆ ಧಮ್ಮಪದ ಪ್ರಚಾರ ಕಾರ್ಯವನ್ನು ಭಿಕ್ಕುಗಳು, ಧಮ್ಮಚಾರಿಗಳು, ಧಮ್ಮ ಪೋಷಕರು, ಉಪಾಸಕರು ಕ್ರಿಯಾಶೀಲರಾಗಬೇಕು. ಜನರ ನಡುವೆ ಆಚರಣೆಯಲ್ಲಿರುವ ಮೌಢ್ಯ, ಮೂಢನಂಬಿಕೆ, ಜಾತೀಯತೆ, ಅಸಮಾನತೆ ಬಗ್ಗೆ ತಿಳಿಸಿ ಹೇಳಬೇಕು. ಜಾತಿಯ ಅಸಮಾನತೆಯಿಂದ ವ್ಯಕ್ತಿ ಗೌರವ, ಘನತೆಗೆ ಹೇಗೆ ಧಕ್ಕೆ ಉಂಟಾಗಿದೆ. ಸಾಮಾಜಿಕ ಸಮಾನ ಸ್ಥಾನಮಾನ ಇಲ್ಲದೆ ವ್ಯಕ್ತಿಯ ಏಳಿಗೆ ಸಾಧ್ಯವಾಗದಿರುವುದು ಮುಂತಾದ ವಿಷಯಗಳನ್ನು ಮನವರಿಕೆ ಮಾಡುತ್ತಾ, ಧಮ್ಮಪದವನ್ನು ಜನರ ನಡುವೆ ಬಿತ್ತಬೇಕು, ಜನಪ್ರಿಯಗೊಳಿಸಬೇಕು. ಧಮ್ಮಪದ ಹೇಳುವ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಮಾನಸಿಕ ಸ್ಥೈರ್ಯ, ಕಾಯಕ ದುಡಿಮೆಯ ಶ್ರೇಷ್ಠತೆ ಇವುಗಳು ಹೇಗೆ ಆಚರಣೆಯಲ್ಲಿರುವ ಪದ್ಧತಿಗಳಿಗೆ ಭಿನ್ನವಾಗಿವೆ, ವಿರುದ್ಧವಾಗಿವೆ ಎಂಬುದನ್ನು ತಿಳಿಸುವ ಅಗತ್ಯವಿದೆ. ಈಗಿನ ವ್ಯವಸ್ಥೆಯಲ್ಲಿ ಏನಿದೆ? ಅದರ ಉಪಯುಕ್ತತೆ ಏನು? ಬದುಕಿನ ಮೌಲ್ಯಗಳು, ಸಾಮಾಜಿಕ ಸ್ಥಾನಮಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಬಳಕೆ, ಬದಲಾದ ಸಂದರ್ಭದಲ್ಲಿ ಅವುಗಳು ತಂದುಕೊಡುವ ನೈತಿಕತೆ ಇವುಗಳ ಬಗ್ಗೆ ತಿಳಿಸುವ ಅಗತ್ಯವಿದೆ.

 

ದೇವರು, ಧರ್ಮದ ಹೆಸರಿನಲ್ಲಿ ಪುರೋಹಿತರು ಮಾಡುವ ಶೋಷಣೆಯನ್ನು ಮನವರಿಕೆ ಮಾಡಿಕೊಡಬೇಕು. ವೈದಿಕ ಸಂಸ್ಕ ತಿ ಬದುಕಿನ ಎಲ್ಲ ಸಂದರ್ಭಗಳಲ್ಲಿಯೂ ಬೆರೆತು, ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆ ಮಾಯವಾಗಿದೆ. ಜನರು ನಂಬಿರುವ ದೈವಕ್ಕೂ-ಜಾತಿಗೂ ಸಂಬಂಧವಿರುವುದನ್ನು ಮನಗಾಣಿಸಬೇಕು. ಒಬ್ಬ ದಲಿತ ಮಹಿಳೆ ಹೇಳುತ್ತಾರೆ ಮಾರಮ್ಮ ದೇವರಲ್ಲ, ಪಾರ್ವತಿ ಮಾತ್ರ ದೇವರು ಎಂದು. ಮಾರಮ್ಮನನ್ನು ಏಕೆ ಪೂಜಿಸುತ್ತೀರಿ ಎಂದು ಕೇಳಿದರೆ, ಕೇಡು ಮಾಡದಿರಲಿ ಎಂದು ಹೇಳುತ್ತಾರೆ. ಇಂತಹ ಅಜ್ಞಾನಿಗಳಿಗೆ ಧಮ್ಮ ಬೋಧಿಸುವಾಗ ಜಾಗರೂಕರಾಗಿರಬೇಕು. ಇದನ್ನು ತಪ್ಪಿಸಲು ಧಮ್ಮಪದದಿಂದ ಮಾತ್ರ ಸಾಧ್ಯವಾಗಿಸಬಹುದು.

 

ಭಿಕ್ಕುಗಳು ತ್ರಿಪಿಟಕವನ್ನು ಯಥಾವತ್ತಾಗಿ ಅಧ್ಯಯನ ಮಾಡಿ, ಮನನ ಮಾಡಿಕೊಂಡು ಲಿಂಗಾಯತ ಸ್ವಾಮೀಜಿಗಳು ಪ್ರಾರಂಭದಲ್ಲಿ ಕಂತೆ ಭಿಕ್ಷೆಗೆ ಮನೆಮನೆಯ ಬಾಗಿಲಿಗೆ ಹೋದಂತೆ ಪಿಂಡಪಾತ ಮಾಡಬೇಕು. ಬುದ್ಧ ವಿಹಾರವನ್ನು ವಿಶ್ರಾಂತಿಗಾಗಿ ಬಳಸಿಕೊಂಡು ಕಾಯಕಂಗಿಯಂತೆ ಜನರ ನಡುವೆ ಬದುಕು ಸವೆಸಬೇಕು. ಧಮ್ಮಪದ ಜನಪದ ವಾಗಿಸಬೇಕು. ಜಾನಪದದಲ್ಲಿ ಸಾಂಸ್ಕತಿಕ ಮಾಧ್ಯಮ ಬಹಳ ಪ್ರಭಾವಶಾಲಿಯಾಗಿ ಬಳಕೆಯಾಗುತ್ತದೆ. ಅದೇ ಸಾಂಸ್ಕ ತಿಕ ಮಾಧ್ಯಮವನ್ನು ಧಮ್ಮಪದದಲ್ಲಿ ಬಳಕೆ ಮಾಡಲು ಪ್ರಯತ್ನಿಸಬೇಕು. ಆಗ ಪ್ರಚಾರ ಕಾರ್ಯ ಸುಲಭವಾಗುತ್ತದೆ. ಧಮ್ಮ ಅಧ್ಯಯನ ಮಾಡಿರುವ ಬರಹಗಾರರು, ಸಾಹಿತಿಗಳು, ಚಿಂತಕರು ತಮ್ಮ ತಮ್ಮ ಶಕ್ತಾನುಸಾರ ಧಮ್ಮಪದದ ವಿವರಗಳನ್ನು ಸರಳಗನ್ನಡದಲ್ಲಿ ಬರೆದು ಜನರ ನಾಲಿಗೆಯಲ್ಲಿ ನಲಿದಾಡುವಂತೆ ಮಾಡಬೇಕು.

 

ಧಮ್ಮಪದ ಕಾಲ್ಪನಿಕವಲ್ಲ. ಕಪೋಲಕಲ್ಪಿತವಲ್ಲ. ಬುದ್ದರು ತಮ್ಮನ್ನು ಎದುರಾದ ವ್ಯಕ್ತಿಗಳಿಗೆ ಮತ್ತು ಅವರು ಕೇಳಿದ ಪ್ರಶ್ನೆಗಳಿಗೆ ಸಂದರ್ಭೋಚಿತವಾಗಿ ಹೇಳಿದ ಮಾತು, ಬೋಧನೆಗಳು, ಇವು ನೈಜ ಘಟನೆಗಳು. ಚಿತ್ತಶುದ್ಧಿ ಮಾರ್ಗಗಳು, ಪ್ರೀತಿ-ಪ್ರೇಮದ ಮಾತುಗಳು, ಮದ-ಮತ್ಸರ, ಮೋಹಕರಗಿ ಕರುಣೆಯ ಕಡಲಾಗಿ ಹೊಮ್ಮುವ ಸಂದೇಶಗಳು, ಮಾನವೀಯತೆಯ ಸತ್ಯ ದರ್ಶನ ಈ ಸಂದೇಶಗಳಲ್ಲಿ ಕಂಡುಬರುತ್ತದೆ. ಬೆಂಕಿಯ ಶಾಖ ತಂಪಾದಂತೆ, ಬಿಸಿ ಗಾಳಿ ತಂಗಾಳಿಯಾದಂತೆ, ಕ್ರೋಧ ಸ್ನೇಹವಾಗಿ, ವಿರಸ-ಸರಸವಾಗಿ, ಭಾವ-ಬಸೀರಾಗಿ ಜೀವ ಪ್ರೀತಿ ಹುಟ್ಟುತ್ತದೆ. ಇಂತಹ ಮೌಲ್ಯಯುತ ಸಂದೇಶಗಳನ್ನು ಜನಮಾನಸದಲ್ಲಿ ಬಿತ್ತಿ, ಇಂದು ವಿಷಮವಾಗಿರುವ ಪರಿಸರವನ್ನು, ಅಸಮಾನತೆಯ ಸಮಾಜವನ್ನು ಆರೋಗ್ಯಕರ ಸಮಾಜವಾಗಿ ಪರಿವರ್ತಿಸುವ ಅಗತ್ಯವಿದೆ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

7 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

7 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

8 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

8 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

9 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

10 hours ago