ಎಡಿಟೋರಿಯಲ್

ಮಳೆ ಅಬ್ಬರಕ್ಕೆ ಚಾ.ನಗರ ಜಿಲ್ಲೆಯಲ್ಲಿ ಅಪಾರ ಹಾನಿ; ತುರ್ತು ಪರಿಹಾರ ಅಗತ್ಯ

ಚಾಮರಾಜನಗರ ಜಿಲ್ಲಾದ್ಯಂತ ಕಳೆದ ಒಂದು ವಾರ ಕಾಲ ಸತತವಾಗಿ ಸುರಿದ ಧಾರಾಕಾರ ಮಳೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಸಾವಿರಾರು ಮನೆಗಳು, ರಸ್ತೆ, ಸೇತುವೆ, ಕೆರೆ, ಶಾಲೆ, ಆಸ್ಪತ್ರೆ ಕಟ್ಟಡಗಳು ಹಾನಿಗೊಂಡಿವೆ. ಒಟ್ಟು ೪೮ ಗ್ರಾಮಗಳು ಜಲಾವೃತಗೊಂಡು ಜನಜೀವನ ಸಂಕಷ್ಟಕ್ಕೆ ಸಿಲುಕಿತ್ತು.   

ಕಳೆದ ವಾರದಲ್ಲಿ ೧೧೯ ಮಿ.ಮೀ.ವಾಡಿಕೆ ಮಳೆಯಾಗಬೇಕಿತ್ತು.

ಆದರೆ, ೫೧೩ ಮಿ.ಮೀ. ಹೆಚ್ಚು ಮಳೆಯಾಗಿ ಜಿಲ್ಲೆಯ ಜನರನ್ನು ಸಂಕಷ್ಟಕ್ಕೆ ನೂಕಿತ್ತು. ೧೧೪೨ ಮನೆಗಳು ಹಾನಿಗೊಂಡಿವೆ. ೭೭ ಶಾಲಾ ಕಟ್ಟಡಗಳು, ೧೪೩ ಲೋಕೋಪಯೋಗಿ ಇಲಾಖೆ ರಸ್ತೆಗಳು, ೧೬ ಸೇತುವೆಗಳು, ೧೧ ಕಲ್ವರ್ಟ್ಗಳು, ೬ ಆಸ್ಪತ್ರೆಗಳು ಹಾಳಾಗಿವೆ. ೫ ದೊಡ್ಡ ಕೆರೆಗಳ ಏರಿ ಒಡೆದು ಅಪಾರ ಪ್ರಮಾಣದ ನೀರು ಜಮೀನುಗಳಿಗೆ ನುಗ್ಗಿ ಫಸಲು ಹಾನಿಗೊಂಡಿವೆ. ೯ ಮೇಕೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ೧೩೦೦ ಕೋಳಿಗಳು ನೀರು ಪಾಲಾಗಿವೆ. ೧೭೩೧ ಹೆಕ್ಟೇರ್ ಕೃಷಿ ಭೂಮಿ ಹಾನಿಗೊಂಡಿದೆ. ೩೫೦ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ತೋಟದ ಬೆಳೆಗಳು ಜಲಾವೃತಗೊಂಡಿವೆ. ಈ ಪೈಕಿ ೧೨೬ ಹೆಕ್ಟೇರ್ ಫಸಲು ಸಂಪೂರ್ಣ ಹಾನಿಗೊಂಡಿದೆ.

೬೧ ಹೆಕ್ಟೇರ್ ಬಾಳೆ, ೩೦ ಹೆ.ಅರಿಶಿನ, ೨೦ ಹೆ.ಟೊಮ್ಯಾಟೋ ಫಸಲು ನಷ್ಟವಾಗಿದೆ. ಚಾಮರಾಜನಗರ ತಾಲ್ಲೂಕಿನ ಕಾಡಹಳ್ಳಿ, ಮಸಗಾಪುರ, ಹೊಂಗನೂರು, ಗಂಗವಾಡಿ, ಬೆಟ್ಟಹಳ್ಳಿ, ಜ್ಯೋತಿಗೌಡನಪುರ, ಕರಳಮೋಳೆ, ಸರಗೂರು, ಆಲೂರು, ಹೊಂಡರಬಾಳು, ಕಾಗಲವಾಡಿ, ಚಂದಕವಾಡಿ ಭಾಗಗಳಲ್ಲಿ ತೋಟದ ಬೆಳೆಗಳು ಹಾಳಾಗಿವೆ. ಇದರಿಂದ ಸುಮಾರು ೨೯.೬೧ ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತೋಟಗಾರಿಕೆ ಇಲಾಖೆ ಅಂದಾಜಿಸಿದೆ.

ಇದಲ್ಲದೆ ೧೧೫೬ ಹೆಕ್ಟೇರ್ ಪ್ರದೇಶದಲ್ಲಿದ್ದ ಭತ್ತ, ಕಬ್ಬು, ಮುಸುಕಿನ ಜೋಳದ ಫಸಲು ಜಲಾವೃತಗೊಂಡಿದೆ.

ಇದರ ಪೂರ್ಣ ಪ್ರಮಾಣದ ನಷ್ಟ ತಿಳಿಯಲು ಕಾಲಾವಕಾಶ ಬೇಕಿದೆ. ಇನ್ನು ೨ ದಿನಗಳು ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಆದ್ದರಿಂದ ನಿಖರವಾಗಿ ಬೆಳೆ ನಷ್ಟದ ಅಂದಾಜು ಸಾಧ್ಯವಾಗುತ್ತಿಲ್ಲ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ನೀರಿನಿಂದ ಹೆಚ್ಚು ತೊಂದರೆಗೆ ಒಳಗಾದ ಯಳಂದೂರು ತಾಲ್ಲೂಕಿನ ಅಗರ, ಮಾಂಬಳ್ಳಿ, ಯಳಂದೂರಿನಲ್ಲಿ ಒಟ್ಟು ೪ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ೯೫೦ ಜನರು ಈ ಕೇಂದ್ರಗಳಲ್ಲಿ ವಾಸ್ತವ್ಯವಿದ್ದಾರೆ.

ಧಾರಾಕಾರ ಮಳೆಯಿಂದ ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ಹೆಚ್ಚು ನಷ್ಟವಾಗಿದೆ. ಚಾಮರಾಜನಗರ ತಾಲ್ಲೂಕಿನ ಕಥಾನಾಯಕನ ಕೆರೆ, ಗುಂಬಳ್ಳಿ ಕೆರೆ, ಯಲಕ್ಕೂರಿನ ಹೊಸಕೆರೆ, ಯರಗಂಬಳ್ಳಿ ಸಮೀಪದ ಹುಳುಗೆರೆಗಳ ಏರಿ ಒಡೆದು ಹಾನಿಯಾಗಿದೆ. ಇದೆಲ್ಲವೂ ಪ್ರಾಥಮಿಕ ವರದಿಯಾಗಿದೆ. ಇನ್ನು ಪೂರ್ಣ ಪ್ರಮಾಣದ ವರದಿ ಬರಬೇಕಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ಧಾರೆ.

ಮಳೆ ಅಬ್ಬರದಿಂದ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದ ತಪ್ಪಲಿನಲ್ಲಿರುವ ಅವಳಿ ಜಲಾಶಯಗಳಾದ ಸುವರ್ಣಾವತಿ ಮತ್ತು ಚಿಕ್ಕಹೊಳೆಗಳು ಭರ್ತಿಯಾಗಿ ಸುವರ್ಣಾವತಿ ಹೊಳೆಗೆ ೨ ಸಾವಿರ ಕ್ಯೂಸೆಕ್ಸ್ ಗೂ ಹೆಚ್ಚು ನೀರು ಹರಿಸಲಾಯಿತು. ಜೊತೆಗೆ ಮಳೆಯೂ ಹೆಚ್ಚಾದ್ದರಿಂದ ಈ ಹೊಳೆ ಅಂಚಿನಲ್ಲಿರುವ ಆಲೂರು, ಹೊಮ್ಮ, ಅಂಬಳೆ, ಯಳಂದೂರು, ಯರಿಯೂರು, ಗಣಿಗನೂರು, ಮದ್ದೂರು, ಬೂದಿತಿಟ್ಟು, ಅಗರ, ಮಾಬಳ್ಳಿ ಗ್ರಾಮಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೆ ತುತ್ತಾಗಿದ್ದರು. ಮನೆಗಳಿಗೆ ನೀರು ನುಗ್ಗಿ ದಿನಸಿ ಪದಾರ್ಥ ನೀರು ಪಾಲಾದವು. ಜಾನುವಾರುಗಳು ಮೇವಿಗೆ ಪರದಾಡಬೇಕಾಯಿತು. ಮಳೆಯ ಹೊಡೆತದಿಂದ ಊಟಕ್ಕೂ ಪರದಾಡುವಂತಾಯಿತು. ಯಳಂದೂರು ತಾಲ್ಲೂಕಿನಲ್ಲಿ ಹೆಚ್ಚಾಗಿ ಕಬ್ಬು, ಭತ್ತ, ಮುಸುಕಿನ ಜೋಳದ ಫಸಲು ಜಲಾವೃತಗೊಂಡು ಹಾನಿಯಾಗಿದೆ.

ಇನ್ನು ೨-೩ ದಿನಗಳು ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸದ್ಯಕ್ಕೆ ಆಗಿರುವ ಹಾನಿಯ ಬಗ್ಗೆ ತಕ್ಷಣ ಸರ್ವೆ ಮಾಡಿಸಿ ತುರ್ತು ಪರಿಹಾರ ಕೈಗೊಳ್ಳಬೇಕಿದೆ. ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಶಾಸಕ ಎನ್.ಮಹೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಕೊಳ್ಳೇಗಾಲ, ಯಳಂದೂರು, ಚಾಮರಾಜನಗರ ತಾಲ್ಲೂಕುಗಳಲ್ಲಿ ಮಳೆ ಹಾನಿ ಪ್ರದೇಶವನ್ನು ಪರಿಶೀಲನೆ ನಡೆಸಿದ್ಧಾರೆ. ಶುಕ್ರವಾರ ಬೆಳಿಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸಿಲ್ದಾರರು, ತಾಪಂ ಇಒಗಳು, ಪಿಡಿಒಗಳ ಸಭೆ ನಡೆಸಿ ಸಮರೋಪಾದಿಯಲ್ಲಿ ಪರಿಹಾರ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.

ಈಗಾಗಲೇ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಆಹಾರ ಕಿಟ್ ವಿತರಿಸಲಾಗಿದೆ. ಮನೆ ಹಾನಿಗೊಂಡು ತೊಂದರೆಗೆ ಈಡಾದವರಿಗೆ ೧೦ ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ.

ಬೆಳೆ ಹಾನಿ ಬಗ್ಗೆ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಬೇಕಿದೆ. ಇದು ಬೇಗ ಆರಂಭ ಆಗಬೇಕಿದೆ. ಜಮೀನುಗಳಲ್ಲಿ ನಿಂತಿರುವ ನೀರು ಇಂಗಿಹೋದ ನಂತರ ಸರ್ವೆ ಮಾಡಿದರೆ ಏನೂ ಪ್ರಯೋಜನವಿಲ್ಲ.

ಮಳೆ ಹಾನಿಯನ್ನು ಸರಿಪಡಿಸಲು ಸಾಕಷ್ಟು ಅನುದಾನದ ಅವಶ್ಯಕತೆಯಿದೆ. ಸಚಿವ ವಿ.ಸೋಮಣ್ಣ ಅವರು ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸಂತ್ರಸ್ತರಿಗೆ ಪೂರ್ಣಪ್ರಮಾಣದಲ್ಲಿ ಪರಿಹಾರ ಬಿಡುಗಡೆ ಮಾಡಿಸಿ ಹಾನಿಯಿಂದಾಗಿರುವ ನಷ್ಟವನ್ನು ಸರಿದೂಗಿಸಬೇಕಿದೆ.

andolana

Share
Published by
andolana

Recent Posts

ಚಲನಚಿತ್ರ ವಿಮರ್ಶೆಗಳ ಹೆಸರಿನ ಅನಿಸಿಕೆಗಳೂ ಚಿತ್ರೋದ್ಯಮವೂ

ಇದು ಕಳೆದ ಒಂದು ವರ್ಷದಿಂದೀಚಿನ ಬೆಳವಣಿಗೆ. ಬೇರೆ ರಾಜ್ಯಗಳಲ್ಲಿ ಇದು ನಡೆದಿತ್ತೋ ಏನೋ ಮಾಹಿತಿ ಇಲ್ಲ. ಆದರೆ ಕೇರಳದಲ್ಲಿ ಈ…

17 seconds ago

ಜಂಬೂಸವಾರಿ ಮುಗಿದಿದೆ; ʼಅಂಬಾರಿʼಗೆ ಬೇಡಿಕೆ ಏರಿದೆ!

ಮೈಸೂರು: ದಸರಾ ಹಬ್ಬ ಮುಗಿದಿದೆ... ಚಿನ್ನದ ಅಂಬಾರಿ ಹೊತ್ತ ಜಂಬೂಸವಾರಿಯೂ ಸಂಪನ್ನವಾಗಿದೆ. ಆದರೆ, ನಗರದಲ್ಲಿ ಈಗಲೂ ‘ಅಂಬಾರಿ’ಯೊಂದರಲ್ಲಿ ಸಂಚರಿಸಲು ಪ್ರವಾಸಿಗರು…

19 mins ago

ಮಂಡ್ಯ ಟು ಇಂಡಿಯಾ: ಬೃಹತ್‌ ಉದ್ಯೋಗ ಮೇಳ

ಮಂಡ್ಯ: ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರು ಹಾಗೂ ಕ್ಷೇತ್ರದ ಸಂಸದರೂ ಆಗಿರುವ ಎಚ್. ಡಿ. ಕುಮಾರಸ್ವಾಮಿ…

2 hours ago

ಮೈಮುಲ್‌: ನಿರೀಕ್ಷೆಗೂ ಮೀರಿ ಕ್ಷೀರಧಾರೆ

ಮೈಸೂರು: ದುಡಿಯಲು ಉದ್ಯೋಗ ಇಲ್ಲದೆ ನಗರ ಪ್ರದೇಶಗಳತ್ತ ಯುವ ಸಮುದಾಯ ವಲಸೆ ಹೋಗುತ್ತಿರುವುದು ಹೆಚ್ಚುತ್ತಿರುವ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ…

2 hours ago

ಮೇಲುಕೋಟೆಯಲ್ಲಿ ಸರಣಿ ಕಳ್ಳತನ

ಬೀಗ ಹಾಕಿದ್ದ ಮನೆಗಳೇ ಕಳ್ಳರ ಟಾರ್ಗೆಟ್, ಲಾಕರ್‌ಗಳನ್ನು ಒಡೆದು ನಗ,ನಾಣ್ಯ ದೋಚಿದ ದುಷ್ಕರ್ಮಿಗಳು ಮೇಲುಕೋಟೆ: ಇಲ್ಲಿನ ಒಕ್ಕಲಿಗರ ಬೀದಿಯ ಸುತ್ತಮುತ್ತಲ…

2 hours ago

ಕಾರ್ಯಾಚರಣೆ ತಂಡವನ್ನೇ ಹಿಮ್ಮೆಟ್ಟಿಸಿದ ಕಾಡಾನೆಗಳು!

ದಾ. ರಾ. ಮಹೇಶ್ ವೀರನಹೊಸಹಳ್ಳಿ: ಮೂರು ದಿನಗಳಿಂದ ತೋಟಗಳಲ್ಲಿ ಬೀಡುಬಿಟ್ಟಿರುವ ಆನೆಗಳ ಹಿಂಡನ್ನು ಓಡಿಸಲು ಹೋದ ಜನರ ಗುಂಪನ್ನೇ ಆನೆಗಳು…

2 hours ago