– ಪ್ರೊ.ಆರ್.ಎಂ.ಚಿಂತಾಮಣಿ
ಮೊದಲಿನಿಂದಲೂ ಭಾರತದ ಉದ್ಯಮ ರಂಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಂಪೆನಿಗಳು ಸ್ವಯಂ ಸ್ಫೂರ್ತಿಯಿಂದ ತಮ್ಮ ವಾರ್ಷಿಕ ಲಾಭದಲ್ಲಿ ಸ್ವಲ್ಪ ಭಾಗವನ್ನು ಸಮಾಜದ ಅವಶ್ಯಕತೆಗಳಿಗಾಗಿ ಖರ್ಚು ಮಾಡುತ್ತಲೇ ಬಂದಿವೆ. ಟಾಟಾ ಗುಂಪಿನ ನಿಯಂತ್ರಕ ಕಂಪೆನಿ ಟಾಟಾ ಸನ್ಸ್ನಲ್ಲಿ ಏಳು ಟಾಟಾ ಸೇವಾ ಟ್ರಸ್ಟ್ಗಳು ಬಹುಪಾಲು (ಶೇ.67) ಷೇರುಗಳನ್ನು ಹೊಂದಿವೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸೇರಿದಂತೆ ದೇಶದ ಪ್ರಸಿದ್ಧ ಸಂಶೋಧನಾ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಗೆ ಈ ಗುಂಪಿನ ಕೊಡುಗೆ ಅಪಾರ. ಬಿರ್ಲಾ ಗುಂಪು ಇತರ ಸಾಮಾಜಿಕ ಸೇವೆಗಳೊಂದಿಗೆ ದೇಶಾದ್ಯಂತ ಬಿರ್ಲಾ ಮಂದಿರಗಳನ್ನು ಕಟ್ಟಿಸಿರುವುದು ಎಲ್ಲರಿಗೂ ಗೊತ್ತು. ವಿಪ್ರೊ ಕಂಪೆನಿಯ ಅಜೀಂ ಪ್ರೇಮ್ಜಿ ಅವರು ತಮ್ಮ ಕುಟುಂಬದ ಒಡೆತನದ ಅರ್ಧದಷ್ಟು ಷೇರುಗಳನ್ನು ಸೇವಾ ಸಂಸ್ಥೆ ಅಜೀಂ ಪ್ರೇಮ್ಜಿ ಫೌಂಡೇಶನ್ಗೆ ವರ್ಗಾಯಿಸಿ ಗ್ರಾಮೀಣ ಅಭಿವೃದ್ಧಿಗಾಗಿ ವ್ಯಯಿಸುತ್ತಿದ್ದಾರೆ. ಇನ್ಫೋಸಿಸ್ ಫೌಂಡೇಶನ್ ಸೇವೆ ಮತ್ತು ಅದರ ಚುಕ್ಕಾಣಿ ಹಿಡಿದಿರುವ ಸುಧಾ ನಾರಾಯಣಮೂರ್ತಿ ಬಗ್ಗೆ ಬೇರೆ ಹೇಳಬೇಕಿಲ್ಲ. ಕೊಡುಗೈ ದಾನಿ ಉದ್ಯಮಿ ವ್ಯಕ್ತಿಗಳ ಪೈಕಿ ನಂದನ್ ನಿಲೆಕಾಣಿಯವರ ಹೆಸರನ್ನು ಸ್ಮರಿಸಬಹುದು. ಇವು ಕೇವಲ ಕೆಲವು ಉದಾಹರಣೆಗಳು. ಇದನ್ನೇ ಕಂಪೆನಿಗಳ ಸಾಮಾಜಿಕ ಜವಾಬ್ದಾರಿ ನಿರ್ವಹಣೆ (corporate social responsibility CSR) ಎಂದು ಕರೆಯಲಾಗುತ್ತದೆ. ಕಂಪೆನಿ ನೈತಿಕ ಆಡಳಿತ ಸಿದ್ಧಾಂತದಲ್ಲಿ ಇದೂ ಒಂದು ಭಾಗ.
ಸಮಾಜಕ್ಕೆ ಕೊಡುವ (paying back to society) ಪ್ರಕ್ರಿಯೆಯನ್ನು ಸಾರ್ವತ್ರೀಕರಣಗೊಳಿಸುವ ಉದ್ದೇಶದಿಂದ ಸರ್ಕಾರ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಷೇರುಗಳ ಪೇಟೆಯಲ್ಲಿ ವ್ಯವಹರಿಸಲ್ಪಡುವ ದೊಡ್ಡ ಕಂಪೆನಿಗಳು ಕಡ್ಡಾಯವಾಗಿ ಸಾಮಾಜಿಕ ಜವಾಬ್ದಾರಿ ನಿರ್ವಹಣೆಗಾಗಿ ನಿರ್ದಿಷ್ಟ ಮೊತ್ತವನ್ನು ಖರ್ಚು ಮಾಡಬೇಕೆಂದು ಹೇಳುತ್ತದೆ. ಅದರಂತೆ ಕಂಪೆನಿಯ ನಿಕಟಪೂರ್ವ ಮೂರು ವರ್ಷಗಳ ನಿವ್ವಳ ಲಾಭದ ಸರಾಸರಿ ಮೊತ್ತ ಶೇ.೦೨ರಷ್ಟು ಖರ್ಚು ಮಾಡಬೇಕೆಂದು ಕಾಯ್ದೆ ಹೇಳುತ್ತದೆ. ಆರೋಗ್ಯ ಸೇವೆ, ಶಿಕ್ಷಣ, ಪರಿಸರ ಸಂರಕ್ಷಣೆ ಮತ್ತು ಗ್ರಾಮೀಣಾಭಿವೃದ್ಧಿಗಳಿಗಾಗಿ ಸಿಎಸ್ಆರ್ ಅಡಿಯಲ್ಲಿ ಖರ್ಚು ಮಾಡಬಹುದೆಂದು ನಿಗದಿಪಡಿಸಲಾಗಿದೆ. ಪೂರಕ ಚಟುವಟಿಕೆಗಳೂ ಇವುಗಳಲ್ಲಿ ಸೇರಿಕೊಳ್ಳುತ್ತವೆ. ಕಂಪೆನಿಗಳು ತಾವೇ ಸ್ವತಃ ಖರ್ಚು ಮಾಡಬಹುದು. ತಮ್ಮದೇ ಸೇವಾ ಟ್ರಸ್ಟ್ ಮೂಲಕವೂ ನಿರ್ವಹಿಸಬಹುದು. ಅಥವಾ ಈ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇವಾ ಸಂಸ್ಥೆಗಳಿಗೆ ದೇಣಿಗೆ ಕೊಡಬಹುದು. ಅಲ್ಲದೆ ಸರ್ಕಾರಿ ಇಲಾಖೆಗಳೊಡನೆ ಸಹಭಾಗಿತ್ವದಲ್ಲಿ (publicpublic private partnership) ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು. ಈಗ ಕಾರ್ಪೊರೇಟ್ ವಲಯದಿಂದ ಉನ್ನತಿಗಾಗಿ ಸಾಕಷ್ಟು ಹಣ ಹರಿದುಬರುತ್ತಿದೆ. ಕೇಂದ್ರದ ಕಂಪೆನಿ ವ್ಯವಹಾರಗಳ ಸಚಿವಾಲಯದ ಪ್ರಕಟಣೆಯಲ್ಲಿರುವ ಕಂಪೆನಿಗಳ ಸಿಎಸ್ಆರ್ ವೆಚ್ಚಗಳ ಹಿಂದಿನ ಮೂರು ವರ್ಷಗಳ ವಿವರಗಳನ್ನು ಇಲ್ಲಿರುವ ಸಂಖ್ಯಾ ಪಟ್ಟಿಯಲ್ಲಿ ಕೊಡಲಾಗಿದೆ.2021-22ರಲ್ಲಿ ಸ್ವಲ್ಪ ಕಡಿಮೆಯಾದದ್ದೂ ಉಂಟು.
ಕಂಪೆನಿಗಳ ಸಿಎಸ್ಆರ್ ವೆಚ್ಚಗಳು (ಕೋಟಿ ರೂ.ಗಳಲ್ಲಿ)
ವಿವರ : 2019-20 2020-21 2021-22
ಆರೋಗ್ಯ ಸೇವೆಗಳು 6841 9277 9987
ಶಿಕ್ಷಣ 9635 8559 8382
ಪರಿಸರ ರಕ್ಷಣೆ 1805 1337 2837
ಗ್ರಾಮೀಣಾಭಿವೃದ್ಧಿ 2301 2851 1801
ಪೂರಕ ಸೇವೆಗಳು 4384 4288 926
ಒಟ್ಟು 24966 26211 25933
ಆಧಾರ : ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವಾಲಯದ ವರದಿಗಳು
ಕೋವಿಡ್-19 ರೋಗ ತೀವ್ರವಾಗಿದ್ದ ವರ್ಷಗಳಲ್ಲಿ ಕಂಪೆನಿಗಳೂ ಆ ಕಡೆಗೆ ಹೆಚ್ಚು ಗಮನಹರಿಸಿದ್ದು ಅಂಕಿ ಸಂಖ್ಯೆಗಳಿಂದ ಕಂಡುಬರುತ್ತದೆ. 2021-22ರಲ್ಲಿ ಅತಿ ಹೆಚ್ಚು ಸಿಆರ್ಎಚ್ ವೆಚ್ಚ ಮಾಡಿರುವುದು
ರಿಯಲನ್ಸ್ ಇಂಡಸ್ಟ್ರೀಸ್ (₹812 ಕೋಟಿ ರೂ.), ನಂತರದ ಸ್ಥಾನ ಎಚ್ಡಿಎಫ್ಸಿ ಬ್ಯಾಂಕಿನದ್ದು (723 ಕೋಟಿ ರೂ.), 720 ಕೋಟಿ ರೂ.ಗಳೊಡನೆ ಟಾಟಾ ಕನ್ಸಲ್ಟಿನ್ಸಿ ಸರ್ವೀಸಸ್ ಮೂರನೇ ಸ್ಥಾನದಲ್ಲಿದ್ದು, ನಾಲ್ಕನೇ ಮತ್ತು ಐದನೇ ಸ್ಥಾನಗಳಲ್ಲಿ ಅನುಕ್ರಮವಾಗಿ 436 ಕೋಟಿ ರೂ. ಮತ್ತು 357 ಕೋಟಿ ರೂ. ಖರ್ಚು ಮಾಡಿರುವ ಓಎನ್ಜಿಸಿ ಮತ್ತು ಎನ್ಟಿಪಿಸಿ ನಿಲ್ಲುತ್ತವೆ. ಹೀಗೆ ಮೂರು ಖಾಸಗಿ ಮತ್ತು ಎರಡು ಸರ್ಕಾರಿ ಕಂಪೆನಿಗಳು ಮೇಲಿನ ಸ್ಥಾನಗಳಲ್ಲಿವೆ.
ಅಧಿಕೃತ ದಾಖಲೆಗಳಂತೆ ಅದೇ ವರ್ಷ 10,443 ಕಂಪೆನಿಗಳು ನಿಯಮದಂತೆ ಆಯಾ ಕಂಪೆನಿಯು ವೆಚ್ಚ ಮಾಡಲೇಬೇಕಾದ ನಿಗದಿತ ಮೊತ್ತಕ್ಕಿಂತ ಹೆಚ್ಚು ಹಣವನ್ನು ಸಿಎಸ್ಆರ್ನಡಿ ವೆಚ್ಚ ಮಾಡಿದರೆ 1,187 ಕಂಪೆನಿಗಳು ನಿಗದಿತ ಮೊತ್ತವನ್ನು ಮಾತ್ರ ವೆಚ್ಚ ಮಾಡಿವೆ. 3,065 ಕಂಪೆನಿಗಳು ತಮ್ಮದೇ ಕಾರಣ ತೋರಿಸಿ ಕಡಿಮೆ ಖರ್ಚು ಮಾಡಿದ್ದು 3,925 ಕಂಪೆನಿಗಳು ಸಿಎಸ್ಆರ್ ವೆಚ್ಚ ಮಾಡಿಲ್ಲವೆಂದು ವರದಿ ಹೇಳುತ್ತದೆ.
ವೆಚ್ಚಗಳು ಪರಿಣಾಮಕಾರಿ ಆಗಬೇಕಾದರೆ…
ಕಂಪೆನಿಗಳಿಂದ ಉದ್ದೇಶಿತ ವಲಯಗಳಿಗೆ ಸಂಪನ್ಮೂಲವೇನೋ ಬರುತ್ತಲಿದೆ. ಹೆಚ್ಚುತ್ತಲೂ ಇದೆ. ಇದರ ಉಪಯೋಗ ಹೇಗಾಗುತ್ತಿದೆ ಎಂಬುದು ಇಲ್ಲಿ ಮುಖ್ಯ. ವಿಪ್ರೊದಂತಹ ಕೆಲವು ಕಂಪೆನಿಗಳ ಫೌಂಡೇಶನ್ಗಳು ತಾವೇ ನಿರ್ವಹಣೆ ಮಾಡುತ್ತಿರುವುದರಿಂದ ಉತ್ತಮ ಪರಿಣಾಮಗಳು ಬರುತ್ತವೆ ಎಂಬುದನ್ನು ಒಪ್ಪಿಕೊಳ್ಳಬಹುದಾದರೂ ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ.
ಒಂದು ಅಂಶವನ್ನು ಇಲ್ಲಿ ಹೇಳಲೇಬೇಕು. 2021-22ನೇ ಸಾಲನ್ನೇ ತೆಗೆದುಕೊಳ್ಳುವುದಾದರೆ ಸಿಎಸ್ಆರ್ ವೆಚ್ಚದ ಮೊತ್ತದ ಮೇಲೆ ಸರ್ಕಾರಕ್ಕೆ ಕನಿಷ್ಠ ಐದಾರು ಕೋಟಿ ರೂ.ಗಳಾದರೂ ತೆರಿಗೆ ಬರುತ್ತಿತ್ತು. ಸಿಎಸ್ಆರ್ ಖರ್ಚಾದ ಕಡೆಯಲ್ಲಿ ಸರ್ಕಾರದ ವೆಚ್ಚ ಅಷ್ಟರ ಮಟ್ಟಿಗಾದರೂ ಕಡಿಮೆಯಾಗುವಂತಾಗಬೇಕು. ಸುಸ್ಥಿರ (sustainable) ಬೆಳವಣಿಗೆಯಾಗಬೇಕು. ಸಿಎಸ್ಆರ್ ಯೋಜನೆಗಳು ಅನುಷ್ಠಾನಗೊಂಡಲ್ಲೆಲ್ಲ ಮುಂಬರುವ ದಿನಗಳಲ್ಲಿ ಬೇಕಾಗುವ ಬಂಡವಾಳ ವೆಚ್ಚಗಳು ಮತ್ತು ನಿತ್ಯದ ರೆವೆನ್ಯೂ ವೆಚ್ಚಗಳು (ಸಂಬಳ ಸಾರಿಗೆ ಇತ್ಯಾದಿ) ಮುಂತಾದವುಗಳಿಗಾಗಿ ಹಣ ಅಲ್ಲಿಂದಲೇ ಉತ್ಪತ್ತಿಯಾಗಬೇಕು. ಒಂದು ಅರ್ಥದಲ್ಲಿ ದತ್ತಿಗಳಂತೆ (endowment) ಉಪಯೋಗವಾಗಿ ಬರುವ ದಿನಗಳಲ್ಲಿ ಬಡ್ಡಿ ದರಗಳಲ್ಲಿ ಏರಿಳಿತಗಳಾದಾಗ ತಡೆದುಕೊಳ್ಳಲು ನಿಧಿಯೂ ಉಳಿದುಕೊಳ್ಳುವಂತಾಗಬೇಕು. ಆಗ ಸರ್ಕಾರ ಅವಶ್ಯವಿದ್ದೆಡೆಗಳಲ್ಲಿ ತನ್ನ ದೃಷ್ಟಿಯನ್ನು ಕೇಂದ್ರೀಕರಿಸಬಹುದು.
ಪಾಶ್ಚಿಮಾತ್ಯ ದೇಶಗಳಲ್ಲಿ ವಿಶ್ವವಿದ್ಯಾನಿಲಯಗಳು, ಆಸ್ಪತ್ರೆಗಳು, ಸಂಶೋಧನಾ ಸಂಸ್ಥೆಗಳು ಮುಂತಾದವುಗಳು ತಮ್ಮ ವೆಚ್ಚಗಳಲ್ಲಿ ಬಹು ಭಾಗವನ್ನು ಕಂಪೆನಿಗಳು ಮತ್ತು ದಾನಿಗಳು ಇಟ್ಟಿರುವ ದತ್ತಿಗಳಿಂದಲೇ ನಿರ್ವಹಿಸುತ್ತವೆ. ಎಲ್ಲದಕ್ಕೂ ಸರ್ಕಾರದ ಮುಂದೆ ಕೈಯೊಡ್ಡುವ ಪ್ರಶ್ನೆಯೇ ಇಲ್ಲ. ಬೆಳವಣಿಗೆಗೆ ಅಲ್ಲಿಂದ ಅನುಕೂಲ ಪಡೆದವರು ಮತ್ತು ವಿದ್ಯಾರ್ಥಿಗಳು ಕೊಡುವ (paying back) ದತ್ತಿಗಳು ಬರುತ್ತಲೇ ಇರುತ್ತವೆ.
ನಾವು ಇಂಥ ಸ್ಥಿತಿಯನ್ನು ಇಂದೇ ತಲುಪಲಿಕ್ಕಾಗುವುದಿಲ್ಲವಾದರೂ ನಾಳೆಯಾದರೂ ಗುರಿ ತಲುಪುವ ವಿಶ್ವಾಸದೊಂದಿಗೆ ಮುನ್ನಡೆಯಬೇಕಿದೆ. ಏನಿಲ್ಲವೆಂದರೂ ಒಂದು ಸ್ಕಾಲರ್ಶಿಪ್ ಕೊಡಲು, ಒಂದು ಹಳ್ಳಿಯಲ್ಲಿ ಕುಡಿಯುವ ನೀರಿನ ಸುಸ್ಥಿರ ವ್ಯವಸ್ಥೆ ಮಾಡಲು ನಮ್ಮ ಪ್ರಜ್ಞಾವಂತರು ಯೋಚಿಸಬೇಕು. ಈ ದಿಕ್ಕಿನಲ್ಲಿ ನಮ್ಮ ಸರ್ಕಾರಗಳು, ಕಂಪೆನಿಗಳು ಮತ್ತು ಸಂಖ್ಯೆಯಲ್ಲಿ ಮತ್ತು ಆಸ್ತಿಗಳ ಗಾತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ನಮ್ಮ ಶತಕೋಟ್ಯಧೀಶರು ಮತ್ತು ಕೋಟ್ಯಧೀಶರು ಚಿಂತಿಸುವ ಅವಶ್ಯಕತೆ ಇದೆ.
ನವೀನ್ ಡಿಸೋಜ ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳ ಸಾಧನೆ ಜಿಲ್ಲೆಯಾದ್ಯಂತ ನಿರಂತರ ವ್ಯಾಪಕ ತಪಾಸಣಾ ಕ್ರಮ ಮಡಿಕೇರಿ: ಪ್ರಾದೇಶಿಕ…
ನಾಗರಹೊಳೆ ಅರಣ್ಯದ ಮಧ್ಯಭಾಗದಲ್ಲಿರುವ ದೇವಸ್ಥಾನಕ್ಕೆ ವಿವಿಧೆಡೆಯಿಂದ ಸಾವಿರಾರು ಮಂದಿ ಭೇಟಿ ಪಿರಿಯಾಪಟ್ಟಣ: ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಚೌಕೂರು ಮೀಸಲು…
ಎಂ.ಗೂಳೀಪುರ ನಂದೀಶ್ ಕೆಸ್ತೂರು ಪ್ರೌಢಶಾಲೆಯ ಸುತ್ತುಗೋಡೆಯಲ್ಲಿ ಕನ್ನಡ ಸಾಹಿತಿಗಳ, ಸಾಧಕರ ಸೊಗಸಾದ ಚಿತ್ರಗಳ ಚಿತ್ತಾರ ಯಳಂದೂರು: ಶಾಲೆಯ ಸುತ್ತುಗೋಡೆಯಲ್ಲಿ ರಾರಾಜಿಸುತ್ತಿರುವ…
ಎಂ.ಬಿ.ರಂಗಸ್ವಾಮಿ ಮೂಗೂರಿನ ತ್ರಿಪುರ ಸುಂದರಿ ದೇಗುಲದ ನೂತನ ಕಲ್ಯಾಣಿಯಲ್ಲಿ ೪ ವರ್ಷಗಳಿಂದ ನಡೆಯದ ತೆಪ್ಪೋತ್ಸವ ಮೂಗೂರು: ಐತಿಹಾಸಿಕ ಹಿನ್ನೆಲೆಯುಳ್ಳ ಧಾರ್ಮಿಕ…
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್…