ಕೊಳ್ಳೇಗಾಲ ಪಟ್ಟಣದಿಂದ ೨೮ ಕಿ.ಮೀ. ದೂರದಲ್ಲಿರುವ ಚಿಕ್ಕಲ್ಲೂರು
ಪ್ರಸಾದ್ ಲಕ್ಕೂರು
ಹೊಸ ಸಂವತ್ಸರದ ಮೊದಲ ಪೌರ್ಣಿಮೆಯಿಂದ 5 ದಿನಗಳ ಕಾಲ ವಿಭಿನ್ನವಾಗಿ ಆಚರಣೆಗೊಳ್ಳುವ ಹಾಗೂ ಮಾಗಿಯಾ ಚಳಿಯಲ್ಲಿ ಲಕ್ಷಾಂತರ ಭಕ್ತರು ಒಂದೆಡೆ ಸೇರಿಸಿ ನಾಡಿಗೆ ಭಾವೈಕ್ಯತೆ ಸಂದೇಶ ಸಾರುವ ಜಾತ್ರೆ ಎಂದರೇ ಅದು ಮಂಟೇಸ್ವಾಮಿ ಪರಂಪರೆಯ ಚಿಕ್ಕಲ್ಲೂರು ಜಾತ್ರೆ.
ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಇಡೀ ನಾಡಿಗೇ ಚಿರಪರಿಚಿತ. ಇಲ್ಲಿ ದೇಹಾಂತ್ಯಗೊಂಡಿದ್ದಾರೆ ಎಂದು ಹೇಳಲಾಗಿರುವ ಮಂಟೇಸ್ವಾಮಿಯವರ ಶಿಷ್ಯರಾದ ಘನನೀಲಿ ಶ್ರೀ ಸಿದ್ದಪ್ಪಾಜಿಯ ಗದ್ದುಗೆಗೆ ಪೂಜೆ ಹಾಗೂ ಸಿದ್ದಪ್ಪಾಜಿ ದೇಗುಲದ ಆವರಣದಲ್ಲಿ 5 ದಿನಗಳು ನಡೆಯುವ ವಿವಿಧ ಪೂಜಾ ಕೈಂಕರ್ಯಗಳ ವೈಶಿಷ್ಟ್ಯವಾಗಿದೆ. ಶತಮಾನಗಳಿಂದಲೂ ವರ್ಷಕ್ಕೊಮ್ಮೆ ನಡೆಯುವ ಬೃಹತ್ ಚಿಕ್ಕಲ್ಲೂರು ಜಾತ್ರೆಯು ಜ.6 ರಿಂದ ಜ.10 ರವರೆಗೆ ಮೇಳೈಸಲಿದೆ.
2020ರಲ್ಲಿ ಕೋವಿಡ್ ಭೀತಿಯಿಂದ ಜಾತ್ರೆ ರದ್ದುಪಡಿಸಿ ಸಾಂಪ್ರಾದಾಯಿಕ ಆಚರಣೆಗೆ ಅವಕಾಶ ನೀಡಲಾಗಿತ್ತು. 2021 ದರಿಂದ ಮತ್ತೆ ಜಾತ್ರೆ ಆರಂಭಗೊಂಡಿದ್ದು, ಈ ಬಾರಿ ಜ.6 ರಂದು ರಾತ್ರಿ 10 ಗಂಟೆಗೆ ಜಾತ್ರೆ ಕಳೆಗಟ್ಟಲಿದೆ. ಜ.7 ರಂದು ಹುಲಿವಾಹನೋತ್ಸವ, ಜ.8ರಂದು ರುದ್ರಾಕ್ಷಿ ಮಂಟಪೋತ್ಸವ (ಮುಡಿಸೇವೆ), ಜ.9 ರಂದು ಗಜ ವಾಹನೋತ್ಸವ (ಪಂಕ್ತಿಸೇವೆ) ಹಾಗೂ ಜ.10 ರಂದು ಮುತ್ತುರಾಯನ ಸೇವೆಯೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ.
ಚಿಕ್ಕಲ್ಲೂರು ಕ್ಷೇತ್ರದ ಸುತ್ತಲಿನ 7 ಗ್ರಾಮದವರು ಸೇರಿ ಆಚರಿಸುವ ಜಾತ್ರೆಯಾಗಿದ್ದು, ತೆಳ್ಳನೂರು ಗ್ರಾಮ ಪಂಚಾಯಿತಿ ಆಡಳಿತಕ್ಕೆ ಚಿಕ್ಕಲ್ಲೂರಿಗೆ ಜಾತ್ರೆಯಲ್ಲಿ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸುವ ಜವಾಬ್ದಾರಿ. ಶ್ರೀಮಠದ ಆಡಳಿತದ ಶ್ರಮ, ಪೊಲೀಸರ ಸೂಕ್ತ ಬಂದೋಬಸ್ತಿನೊಂದಿಗೆ ಜಾತ್ರೆಯೂ ಭಾವೈಕ್ಯತೆಯ ಸಂದೇಶಗಳೊಂದಿಗೆ ಆಚರಣೆಯಾಗುತ್ತದೆ.
ಚಂದ್ರಮಂಡಲೋತ್ಸವ:
ಜಾತ್ರೆಯು ಚಂದ್ರ ಮಂಡಲೋತ್ಸವದ ವಿಶೇಷ ಪೂಜೆೊಂಂದಿಗೆ ಆರಂಭಗೊಳ್ಳುತ್ತದೆ. ಸಿದ್ದಪ್ಪಾಜಿ ದೇವಸ್ಥಾನದ ಎದುರಿನಲ್ಲಿರುವ ಚಂದ್ರಮಂಡಲ ಕಟ್ಟೆಯಲ್ಲಿ ಹುಣ್ಣಿಮೆ ರಾತ್ರಿಯಂದು ಬಿದಿರಿನ ತುಂಡುಗಳು, ಹೂಗಳು, ಬಾಳೆ ಕಂಬ, ಎಣ್ಣೆಯಿಂದ ನೆನೆಸಿದ ಬಟ್ಟೆಗಳಿಂದ ಅಲಂಕರಿಸಲ್ಪಟ್ಟ ಎತ್ತರದ ಕಂಬ (ಕಳಸಾಕೃತಿ ಹೋಲುತ್ತದೆ) ಆಗಿರುತ್ತದೆ. ವಿಶೇಷ ಪೂಜೆ ಸಲ್ಲಿಸಿ ಹೊತ್ತಿಸುವ ಬೆಂಕಿ ಧಗಧಗನೆ ಉರಿದು ಬೂದಿಯಾಗುತ್ತದೆ. ಉರಿದ ಬೂದಿಯನ್ನು ಮಂಟೇಸ್ವಾಮಿ, ಸಿದ್ದಪ್ಪಾಜಿ ಅನುಯಾಯಿಗಳಾದ ನೀಲಗಾರರು ಹಣೆಗೆ ಹಚ್ಚಿಕೊಳ್ಳುವ ಸಂಪ್ರದಾಯವಿದೆ.
ಸಿದ್ದಪ್ಪಾಜಿ ತನ್ನ ಮೊದಲು ಗುರು ಶ್ರೀ ಮಂಟೇಸ್ವಾಮಿ ಅವರ ಆದೇಶದಂತೆ ಮಂಡ್ಯ ಜಿಲ್ಲೆಯ ಹಲಗೂರಿನ ಪಾಂಚಾಳ ಪಾಳೇಗಾರರನ್ನು ಗೆದ್ದರು ಎನ್ನಲಾಗಿದೆ. ಹಾಗಾಗಿ, ಈ ಭಾಗದ ಏಳು ಹಳ್ಳಿಗಳ 18 ಜನಾಂಗದವರು ವಿಜಯೋತ್ಸವದ ಸಂಕೇತವಾಗಿ ತಮ್ಮ ಗ್ರಾಮದಲ್ಲಿ ಚಂದ್ರ ಮಂಡಲೋತ್ಸವ ಆಚರಿಸುತ್ತಾರೆ. ತೆಳ್ಳನೂರು ನಿವಾಸಿಗಳು ಕಾಡಿನಿಂದ ಕಂಬ, ಬಿದಿರು ತುಂಡುಗಳು ಹಾಗೂ ಅಚ್ಚೆಗಳನ್ನು ತಂದುಕೊಟ್ಟರೆ, ಇಕ್ಕಡಹಳ್ಳಿ ಗ್ರಾಮಸ್ಥರು ಎಣ್ಣೆ, ಹತ್ತಿಗಳನ್ನು ಕಾಣಿಕೆ ನೀಡುತ್ತಾರೆ. ಬಾಣೂರು ಮತ್ತು ಬಾಳಗುಣಸೆ ಜನರು ವಸ್ತ್ರವನ್ನು, ಶಾಗ್ಯ ಗ್ರಾಮಸ್ಥರು ಇವೆಲ್ಲವನ್ನು ಒಟ್ಟಿಗೆ ಸೇರಿಸಿಕೊಂಡು ಕಳಸಾಕೃತಿಯ ಚಂದ್ರಮಂಡಲವನ್ನು ರಚಿಸಿಕೊಡುತ್ತಾರೆ.
ಚಂದ್ರ ಮಂಡಲೋತ್ಸವ 2 ಗಂಟೆಗಳಿಗೂ ಹೆಚ್ಚು ಕಾಲ ನಡೆಯುತ್ತದೆ. ಇದನ್ನು ನೋಡಲು ಚಾಮರಾಜನಗರ ಜಿಲ್ಲೆಯವರಲ್ಲದೆೇ, ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ಸಾಕಷ್ಟು ಅನ್ಯ ಜಿಲ್ಲೆಗಳ ಜನರು ಬರುತ್ತಾರೆ.
ಚಿಕ್ಕಲ್ಲೂರಿನಲ್ಲಿ ನಡೆಯುವ ವಿಶೇಷ ಪೂಜಾ ಕೈಂಕರ್ಯಗಳಿಗೆ ದೇವಸ್ಥಾನದ ಸುತ್ತಲಿನ 3ಕಿ.ಮೀ. ವ್ಯಾಪ್ತಿಯ ಮೈದಾನ, ಜಮೀನುಗಳಲ್ಲಿ ಜನರು ಸಣ್ಣ ಟೆಂಟ್ ಹಾಕಿಕೊಂಡು ಕುಟುಂಬದವರೊಂದಿಗೆ ಇರುತ್ತಾರೆ. ಸಿದ್ದಪ್ಪಾಜಿ ಒಕ್ಕಲಿನವರು ಸಂಪ್ರದಾಯದಂತೆ ತಮ್ಮ ಕುಟುಂಬದ ಗಂಡು ಸಂತತಿಗೆ ಶ್ರೀ ಸಿದ್ದಪ್ಪಾಜಿ ದೇವರ ಗುಡ್ಡನ ಬಿಡಿಸುತ್ತಾರೆ. ಸಾರ್ವಜನಿಕರೊಂದಿಗೆ ಕುಟುಂಬಸ್ಥರು ಸಾಮೂಹಿಕ ಭೋಜನ (ಪಂಕ್ತಿಸೇವೆ) ಮಾಡುವುದು ವಾಡಿಕೆ.
ಪಂಕ್ತಿಸೇವೆ :
ಜಾತ್ರೆಯ 4ನೇ ದಿನ ಪಂಕ್ತಿಸೇವೆಯಂಬ ವಿಶೇಷ ಪೂಜೆ ಹಿನ್ನೆಲೆಯಲ್ಲಿ ಇಲ್ಲಿಗೆ ಬರುವ ಜನರು ಬಿಡಾರದಲ್ಲಿ ಮೇಕೆ, ಕುರಿ, ಕೋಳಿ ತಂದು ಮಾಂಸದ ಅಡುಗೆ ತಯಾರಿಸುತ್ತಾರೆ. ಇನ್ನು ಕೆಲವರು ಸಿಹಿ ಊಟ ತಯಾರಿಸುತ್ತಾರೆ. ಬಳಿಕ ತಮ್ಮಲ್ಲಿರುವ ನಾಗಬೆತ್ತ ಹಾಗೂ ಸಣ್ಣ ಕಂಡಾಯವನ್ನು ಬಿಡಾರದಲ್ಲಿಯೇ ಪ್ರತಿಷ್ಠಾಪಿಸಿ, ಅದಕ್ಕೆ ತಾವು ತಯಾರಿಸಿದ ಅಡುಗೆ ನೈವೇದ್ಯವಿಟ್ಟು ಪೂಜೆ ಸಲ್ಲಿಸುತ್ತಾರೆ. ಜಾತ್ರೆಯಲ್ಲಿ ಭಾಗಿಯಾಗಿರುವ ಜನರನ್ನು ಆಹ್ವಾನಿಸಿ ಸಾಮೂಹಿಕವಾಗಿ ಅವರೊಂದಿಗೆ ತಾವೂ ಕುಳಿತು ಭೋಜನ ಸ್ವೀಕರಿಸುತ್ತಾರೆ.
ಚಿಕ್ಕಲ್ಲೂರು ಜಾತ್ರೆ ಆಚರಣೆಯಲ್ಲಿ 3ನೇ ದಿನ ರುದ್ರಾಕ್ಷಿ ಮಂಟಪೋತ್ಸವ ಎಂಬ ಹೆಸರಿನಲ್ಲಿ ಮುಡಿಸೇವೆಯನ್ನು ಆಚರಿಸುತ್ತಾರೆ. ಈ ನಡುವೆ ಕೆಲವರು ಇದೇ ದಿನ ಗಂಡು ಮಕ್ಕಳ ಕೊರಳಿಗೆ ರುದ್ರಾಕ್ಷಿಮಣಿ ಕಟ್ಟಿಸಿ ದೇವರ ಗುಡ್ಡರನ್ನಾಗಿಸುವ ಆಚರಣೆಯುಂಟು.
ಕೊಳ್ಳೇಗಾಲ ಪಟ್ಟಣದಿಂದ ಸುಮಾರು 28 ಕಿ.ಮೀ. ದೂರದಲ್ಲಿರುವ ಚಿಕ್ಕಲ್ಲೂರು ಕ್ಷೇತ್ರ, ಕಾವೇರಿ ನದಿ ಬಲದಂಡೆಯಲ್ಲಿದೆ. ಕೊಳ್ಳೇಗಾಲದಿಂದ ಬೆಂಗಳೂರಿಗೆ ತೆರಳುವ ಮುಖ್ಯ ರಸ್ತೆಯಲ್ಲಿರುವ ನರೀಪುರ ಹಾಗೂ ಸತ್ತೇಗಾಲದಿಂದ ಉಗನೀಯ ಮಾರ್ಗವಾಗಿ ಚಿಕ್ಕಲ್ಲೂರಿಗೆ ತೆರಳು ಮುಖ್ಯ ರಸ್ತೆಗಳಿವೆ. ಪಟ್ಟಣದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯೆ ಸಿಗುವ ದೊಡ್ಡಿಂದುವಾಡಿ ಗ್ರಾಮದಿಂದ ಇಕ್ಕಡಹಳ್ಳಿ, ಮತ್ತಿಪುರ ಕ್ರಾಸ್ ಮೂಲಕ ಚಿಕ್ಕಲ್ಲೂರಿಗೆ ಹೋಗಬಹುದಾಗಿದೆ.
‘ಪ್ರಾಣಿಬಲಿಯಲ್ಲ ಆಹಾರ ಪದ್ಧತಿ’
ಸಿದ್ದಪ್ಪಾಜಿ ದೇವಸ್ಥಾನದ ಎದುರು ಪ್ರಾಣಿ ಬಲಿ ಆಚರಣೆ ಹಾಗೂ ಬಲಿಪೀಠವೂ ಇಲ್ಲ. ಬದಲಾಗಿ ಭಕ್ತರ ಆಹಾರ ಪದ್ದತಿಯಿದೆೆ. ಅವರಿಗೊಪ್ಪಿದ ಕುರಿ, ಕೋಳಿಗಳನ್ನು ತಂದು ಆಹಾರ ತಯಾರಿಸಿ, ಪಂಕ್ತಿಸೇವೆ ಮಾಡುತ್ತಾರೆ. ಆದರೆ, ಸುಪ್ರಿಂಕೋರ್ಟ್ ಪ್ರಾಣಿ ಬಲಿಗೆ ನಿಷೇಧ ನೀಡಿದ್ದು, ಜಿಲ್ಲಾಡಳಿತ ಜಾತ್ರೆಯ ದಿನದಿಂದಲೂ ಯಾರೊಬ್ಬರು ಪ್ರಾಣಿ ಸಾಗಣೆ ಮಾಡದಂತೆ ತಡೆಯುತ್ತದೆ.
ʼಜಾತ್ರೆ ಮೈದಾನದ ಗಡಿ ಗುರುತಿಸಲು ಒತ್ತಾಯʼ
ಮಾಂಸದೂಟ ತಯಾರಿಸಲು ಬೇಕಾದ ಪ್ರಾಣಿಗಳ ಸಾಗಣೆಗೆ ಜಿಲ್ಲಾಡಳಿತ ಅವಕಾಶ ನೀಡದ್ದನ್ನು ಈ ಭಾಗದ ಪ್ರಗತಿಪರರು ವಿರೋಧಿಸುತ್ತಿದ್ದು, ಮೊದಲು ಜಾತ್ರಾ ಆವರಣದ ಗಡಿ ಗುರುತಿಸಬೇಕು ಹಾಗೂ ಪ್ರಾಣಿ ವಧೆಗೆ ಪ್ರತ್ಯೇಕ ಸ್ಥಳ ನೀಡಬೇಕು ಎಂದು 2017ರಿಂದಲೂ ಒತ್ತಾಯಿಸುತ್ತಲೇ ಬಂದಿದೆ. ಆದರೆ, ಅದು ಈಡೇರಿಲ್ಲ.
ಬೆಂಗಳೂರು: ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಏರ್ಪಟ್ಟಿರುವ ಪರಿಣಾಮ ಕನ್ನಡಿಗರ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ…
ನಾಪೋಕ್ಲು: ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಾಗ್ದಾಳಿ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಳಸಿಕೆರೆ ಗ್ರಾಮದ…
ಬೆಂಗಳೂರು: ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಸರ್ಕಾರದ ಲೋಪದೋಷಗಳನ್ನು ಚರ್ಚಿಸಲಾಗುವುದು. ರಾಜ್ಯದ ಆರ್ಥಿಕ ದುಸ್ಥಿತಿಯ ವಿರುದ್ಧ ಹೋರಾಟ ಮಾಡಲಾಗುವುದು ಎಂದು…
ಕೊಡಗು: ನಾಳೆ ವರ್ಷದ ಮೊದಲ ಚಂದ್ರಗ್ರಹಣ ಹೋಳಿ ಹುಣ್ಣಿಮೆಯ ದಿನದಂದು ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಾಲಯಗಳ ಪೂಜಾ…
ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನು ಸ್ಥಳೀಯರ ಆಶಯಗಳಿಗೆ ವಿರುದ್ಧವಾಗಿ ಮದ್ದೂರು…