ಎಡಿಟೋರಿಯಲ್

ಬೆಂಗಳೂರು ಡೈರಿ-ಯಡಿಯೂರಪ್ಪನವರ ಭೀಷ್ಮನ ಪೋಷಾಕಿನೊಳಗಿನ ಅಸಲೀ ವ್ಯಕ್ತಿ ಯಾರು?

ಆರ್‌. ಟಿ.ವಿಠ್ಠಲಮೂರ್ತಿ

ಪಂಜಾಬ್ ನಲ್ಲಿ ಹೇಳಿ ಕೇಳಿ ನಡೆಯುತ್ತಿರುವುದು ಅಮ್ ಆದ್ಮಿ ದರ್ಬಾರು. ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಎಷ್ಟೇ ಹೋರಾಡಿದರೂ ೨೦೧೯ ರ ಚುನಾವಣೆಯಲ್ಲಿ ಗೆದ್ದಷ್ಟು ಸೀಟುಗಳನ್ನು ಗೆಲ್ಲುವ ವಿಶ್ವಾಸ ಬಿಜೆಪಿಗಿಲ್ಲ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವಿದ್ದರೂ ಕಳೆದ ಬಾರಿಯ ಸಾಧನೆ ಪುನರಾವರ್ತನೆ ಆಗುವುದು ಕಷ್ಟ. ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ ಘಡ ರಾಜ್ಯಗಳಲ್ಲಿ ಅದರ ಗಳಿಕೆ ಏರಿಕೆಯಾಗುವುದಿರಲಿ, ಇಳಿಕೆಯ ಪ್ರಮಾಣವನ್ನು ತಡೆದರೆ ಸಾಕು ಎಂಬ ಪರಿಸ್ಥಿತಿ ಇದೆ. ಹೀಗೆ ಇಡೀ ದೇಶದ ಒಟ್ಟಾರೆ ಚಿತ್ರಣವನ್ನು ನೋಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವಯಂಬಲದ ಮೇಲೆ ಗೆದ್ದು ಅಧಿಕಾರ ಹಿಡಿಯುವುದು ಕಷ್ಟ!

ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಎಂಬಂತೆ ಆ ಬೆಳವಣಿಗೆ ಕರ್ನಾಟಕದ ರಾಜಕಾರಣವನ್ನು ಕಾಡುತ್ತಿದೆ. ಅಂದ ಹಾಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಬಿಜೆಪಿ ವರಿಷ್ಟರು ಅಕರಾಸ್ಥೆ ತೋರಿಸುತ್ತಿರುವುದು ಈ ಬೆಳವಣಿಗೆ. ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕವನ್ನು ಮರಳಿ ಗೆದ್ದುಕೊಳ್ಳಬೇಕು. ಆ ಮೂಲಕ ಮರು ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಯ ಸಾಧನೆ ಪುನರಾವರ್ತನೆ ಆಗುವಂತೆ ನೋಡಿಕೊಳ್ಳಬೇಕು ಎಂಬ ಬಿಜೆಪಿ ವರಿಷ್ಟರ ಯೋಚನೆ ರಹಸ್ಯದ್ದೇನಲ್ಲ. ಆದರೆ ಈ ಯೋಚನೆ ಕಾರ್ಯಗತವಾಗಬೇಕು ಎಂದರೆ ಕರ್ನಾಟಕದಲ್ಲಿ ಬಿಜೆಪಿ ಸೈನ್ಯದ ಮುಂದೆ ಯಡಿಯೂರಪ್ಪ ಅವರನ್ನೇ ನಿಲ್ಲಿಸುವುದು ಅನಿವಾರ್ಯ ಎಂಬುದು ಮೋದಿ- ಅಮಿತ್ ಶಾ ಜೋಡಿಗೆ ಮನದಟ್ಟಾಗಿದೆ. ಹೀಗಾಗಿ ಇದ್ದಕ್ಕಿದ್ದಂತೆ ಯಡಿಯೂರಪ್ಪ ಅವರ ವಿಷಯದಲ್ಲಿ ಈ ಜೋಡಿ ವಿಪರೀತ ಅಕರಾಸ್ಥೆ ತೋರಿಸತೊಡಗಿದೆ. ಈ ಅಕರಾಸ್ಥೆಯ ಹಿಂದಿನ ಕಾರಣಗಳೇ ಈಗ ಕರ್ನಾಟಕದ ರಾಜಕಾರಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆಯಲ್ಲದೆ, ೨೦೨೪ ರ ಲೋಕಸಭಾ ಚುನಾವಣೆಯ ನಂತರ ಪಡೆಯಲಿರುವ ತಿರುವುಗಳು ಹೇಗಿರಬಹುದು?ಎಂಬ ಕುತೂಹಲಕ್ಕೂ ಕಾರಣವಾಗಿದೆ.

ಅಂದ ಹಾಗೆ ನಿರ್ದಾಕ್ಷಿಣ್ಯವಾಗಿ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದ್ದ ಮೋದಿ- ಅಮಿತ್ ಶಾ ಜೋಡಿ ಇತ್ತೀಚಿನ ಬೆಳವಣಿಗೆಗಳಿಂದ ನಿದ್ರೆ ಕಳೆದುಕೊಂಡಿದೆ. ಶುರುವಿನಲ್ಲಿ ಕರ್ನಾಟಕ, ಮಹಾರಾಷ್ಟ್ರ, ಬಿಹಾರ ರಾಜ್ಯಗಳ ಪರಿಸ್ಥಿತಿಯನ್ನೇ ನೋಡಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಮೂರು ರಾಜ್ಯಗಳಲ್ಲಿರುವ ಒಟ್ಟು ೧೧೬ ಸೀಟುಗಳ ಪೈಕಿ ೧೦೬ ಸೀಟುಗಳು ಅದಕ್ಕೆ ದಕ್ಕಿದ್ದವು. ಈ ಪೈಕಿ ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಇಪ್ಪತ್ತೈದು ಸೀಟುಗಳನ್ನು ಬಿಜೆಪಿ ಸ್ವಯಂಬಲದ ಮೇಲೆ ಗೆದ್ದಿತ್ತು. ಇನ್ನು ಮಹಾರಾಷ್ಟ್ರ ಮತ್ತು ಬಿಹಾರ ರಾಜ್ಯಗಳಲ್ಲಿ ಮಿತ್ರ ಪಕ್ಷಗಳ ಜತೆ ಸೇರಿ ಎಂಭತ್ತೊಂದು ಮಂದಿಯ ಬೆಂಬಲ ದಕ್ಕುವಂತೆ ನೋಡಿಕೊಂಡಿತ್ತು. ಆದರೆ ಇವತ್ತು ಮೂರೂ ರಾಜ್ಯಗಳಲ್ಲಿ ಪರಿಸ್ಥಿತಿ ತಿರುವು ಮುರುವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಈ ಎತ್ತರಕ್ಕೆ ಬೆಳೆಯಲು ಕಾರಣರಾದ ಯಡಿಯೂರಪ್ಪ ಅವರಿಗೆ ಅಧಿಕಾರದಿಂದ ಗೇಟ್ ಪಾಸ್ ಕೊಡಲಾಯಿತು.
ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳನ್ನು ಒಳಗಿಂದೊಳಗೇ ಮುಗಿಸಲು ಹೋಗಿ ಬಕಾಬರಲೆ ಬಾರಿಸಿಕೊಂಡಿದ್ದಾಯಿತು. ಇನ್ನು ಮಹಾರಾಷ್ಟ್ರದಲ್ಲಿ ತಾನು ತಲೆ ಎತ್ತಲು ನೆರವು ನೀಡಿದ ಶಿವಸೇನೆಯನ್ನೇ ಒಡೆದು ಏಕನಾಥ ಶಿಂಧೆ ನೇತೃತ್ವದಲ್ಲಿ ಸರ್ಕಾರ ರಚಿಸಿದ ಮೇಲೆ ಅಲ್ಲಿ ದಂಗೆಯ ವಾತಾವರಣ ಶುರುವಾಗಿದೆ. ಅಲ್ಲೀಗ ಆದಿತ್ಯ ಠಾಕ್ರೆಯ ರ್ಯಾಲಿಗಳಿಗೆ ಲಕ್ಷಗಟ್ಟಲೆ ಜನ ಸೇರುತ್ತಿರುವ ಪರಿಯೇ ಬಿಜೆಪಿಯ ವಿಶ್ವಾಸವನ್ನೆ ಅಲುಗಾಡುವಂತೆ ಮಾಡಿದೆ.

ಹೀಗೆ ಮೂರು ರಾಜ್ಯಗಳಲ್ಲಿನ ಪರಿಸ್ಥಿತಿ ನೋಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಲವತ್ತರಿಂದ ಐವತ್ತು ಸೀಟುಗಳ ಶಕ್ತಿ ಕಡಿಮೆಯಾಗಬಹುದು ಎಂಬುದು ಸಧ್ಯದ ಅಂದಾಜು. ಇನ್ನು ಪ್ರಧಾನಮಂತ್ರಿ ನರೇಂದ್ರಮೋದಿಯವರ ಸ್ವಂತ ರಾಜ್ಯ ಗುಜರಾತ್ ನಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಅಮ್ ಆದ್ಮಿ ಪಕ್ಷದ ಹವಾ ಜೋರಾಗಿದೆ.
ಈ ಹವಾ ಬಿಜೆಪಿ ಮಿದುಳನ್ನು ತವಾ ಫ್ರೈ ಮಾಡುವ ಆತಂಕದಿಂದ ದೆಹಲಿ ಸರ್ಕಾರವನ್ನು ಉರುಳಿಸಲು ಬಿಜೆಪಿ ನಡೆಸಿದ ಪ್ರಯತ್ನ ಇಡೀ ದೇಶವನ್ನೇ ನಿಬ್ಬೆರಗಾಗಿಸಿದೆ.

ಉಳಿದಂತೆ ಪಂಜಾಬ್ ನಲ್ಲಿ ಹೇಳಿ ಕೇಳಿ ನಡೆಯುತ್ತಿರುವುದು ಅಮ್ ಆದ್ಮಿ ದರ್ಬಾರು. ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಎಷ್ಟೇ ಹೋರಾಡಿದರೂ ೨೦೧೯ ರ ಚುನಾವಣೆಯಲ್ಲಿ ಗೆದ್ದಷ್ಟು ಸೀಟುಗಳನ್ನು ಗೆಲ್ಲುವ ವಿಶ್ವಾಸ ಬಿಜೆಪಿಗಿಲ್ಲ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವಿದ್ದರೂ ಕಳೆದ ಬಾರಿಯ ಸಾಧನೆ ಪುನರಾವರ್ತನೆ ಆಗುವುದು ಕಷ್ಟ. ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ ಘಡ ರಾಜ್ಯಗಳಲ್ಲಿ ಅದರ ಗಳಿಕೆ ಏರಿಕೆಯಾಗುವುದಿರಲಿ, ಇಳಿಕೆಯ ಪ್ರಮಾಣವನ್ನು ತಡೆದರೆ ಸಾಕು ಎಂಬ ಪರಿಸ್ಥಿತಿ ಇದೆ. ಹೀಗೆ ಇಡೀ ದೇಶದ ಒಟ್ಟಾರೆ ಚಿತ್ರಣವನ್ನು ನೋಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವಯಂಬಲದ ಮೇಲೆ ಗೆದ್ದು ಅಧಿಕಾರ ಹಿಡಿಯುವುದು ಕಷ್ಟ.ಕಳೆದ ಬಾರಿ ಅದು ಸ್ವಂತ ಶಕ್ತಿಯಲ್ಲಿ ೩೦೩ ಸೀಟು ಗೆದ್ದರೆ, ಮಿತ್ರಪಕ್ಷಗಳ ಬಲ ಸೇರಿ ಅದರ ಗ್ರಾಫು ೩೫೩ ಕ್ಕೇರಿತ್ತು. ಆದರೆ ಈಗ ಅದರ ಗಳಿಕೆ ೨೨೦ ರಿಂದ ೨೪೦ ರ ರೇಂಜಿಗೆ ತಲುಪಬಹುದು. ಮಿತ್ರ ಪಕ್ಷಗಳ ಬಲ ಸೇರಿದರೆ ಅಲ್ಪ ಬಹುಮತದ ಸರ್ಕಾರ ಗಳಿಸಬಹುದು ಎಂಬುದು ಸಧ್ಯದ ಮ್ಯಾಥಮ್ಯಾಟಿಕ್ಸು.

ಇದೇ ಕಾರಣಕ್ಕಾಗಿ ಮೋದಿ- ಅಮಿತ್ ಶಾ ಜೋಡಿ ದೇಶದ ಹಲ ರಾಜ್ಯಗಳಲ್ಲಿ ಮಿತ್ರರನ್ನು ಗಳಿಸಲು ಪರದಾಡುತ್ತಿದೆ.
ಆಂಧ್ರದ ಚಂದ್ರಬಾಬು ನಾಯ್ಡು, ಜಾರ್ಖಂಡ್ ನಲ್ಲಿ ಹೇಮಂತ್ ಸೊರೇನ್, ಪಂಜಾಬ್ ನಲ್ಲಿ ಮೇಡಂ ಕೌರ್ ಸೇರಿದಂತೆ ಹಲವರನ್ನು ಪ್ರೀತಿಯಿಂದ, ಕೆಲವರನ್ನು ಬೆದರಿಕೆಯ ತಂತ್ರದಿಂದ ಹತ್ತಿರ ಮಾಡಿಕೊಳ್ಳಲು ನೋಡುತ್ತಿದೆ. ಆದರೆ ಮೋದಿ- ಅಮಿತ್ ಶಾ ಜತೆಗಿನ ಮಿತ್ರತ್ವವನ್ನು ಬಹುತೇಕರು ಬಯಸುತ್ತಿಲ್ಲ.

ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಈ ಜೋಡಿ ಅಕರಾಸ್ಥೆ ತೋರಿಸಲು ಇದೂ ಮುಖ್ಯ ಕಾರಣ. ಆದರೆ ಈ ಅಕರಾಸ್ಥೆಗೆ ಯಡಿಯೂರಪ್ಪ ಮನಸೋತಂತೆ ಈಗ ಕಾಣಿಸುತ್ತಿರಬಹುದು. ಆದರೆ ಅದು ನಿಜವಲ್ಲ ಎಂಬುದು ಈಗ ಚರ್ಚೆಯಾಗುತ್ತಿರುವ ವಿಷಯ.
೨೦೨೪ ರ ತನಕ ಮೋದಿ- ಅಮಿತ್ ಶಾ ಜೋಡಿಯ ಕೈಲಿ ಕೇಂದ್ರ ಸರ್ಕಾರದ ಹಿಡಿತ ಇರುತ್ತದಲ್ಲ? ಹೀಗಾಗಿ ಆ ಶಕ್ತಿಗೆ ತಿರುಗೇಟು ಹೊಡೆಯುವುದು ಯಡಿಯೂರಪ್ಪ ಅವರಿಗೆ ಅಸಾಧ್ಯ. ಆದ್ದರಿಂದ ಸಧ್ಯದ ಪರಿಸ್ಥಿತಿಯಲ್ಲಿ ಅವರು ಬಿಜೆಪಿ ಸೈನ್ಯದ ಮುಂದೆ ಭೀಷ್ಮನ ಪೋಷಾಕು ತೊಡಬಹುದು.ಹೀಗೆ ತತ್ಕಾಲಕ್ಕೆ ಅವರು ಬೀಷ್ಮನ ಪೋಷಾಕು ತೊಟ್ಟರೂ ಆ ಪೋಷಾಕಿನ ಒಳಗಿರುವುದು ಮಾತ್ರ ಧೃತರಾಷ್ಟ್ರ. ಸಹಜವಾಗಿ ಅವರು ಪುತ್ರ ವಿಜಯೇಂದ್ರ ಅವರ ಉನ್ನತಿಗೆ ಪೂರಕವಾದ ವಾತಾವರಣ ಸೃಷ್ಟಿಸಲು ಹಾತೊರೆಯುತ್ತಿದ್ದಾರೆ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ತಮ್ಮ ಬೆಂಬಲಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬರುವಂತಾಗಬೇಕು ಎಂದು ಬಯಸುತ್ತಾರೆ.ನಾಳೆ ಚುನಾವಣೆಯ ಕಾಲದಲ್ಲಿ ತಾವು ಹೇಳಿದವರಿಗೆ ಗಣನೀಯ ಸಂಖ್ಯೆಯ ಟಿಕೆಟನ್ನು ಅವರು ಕೇಳುತ್ತಾರೆ. ಹಾಗವರು ಕೇಳಿದಾಗ ಅದನ್ನು ನಿರಾಕರಿಸುವುದು ಕಷ್ಟ.ಒಂದು ವೇಳೆ ನಿರಾಕರಿಸಿದರೆ ಆಯಾ ಕ್ಷೇತ್ರಗಳ ಸೋಲಿಗೆ ನಾನು ಜವಾಬ್ದಾರನಲ್ಲ ಅಂತ ಹೇಳುವುದು ಅವರಿಗೆ ಸುಲಭ.

ಹೀಗೆ ಅವರು ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮವರು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವಂತೆ ನೋಡಿಕೊಂಡರೂ ಕರ್ನಾಟಕದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬರುತ್ತದೆ ಎಂದಲ್ಲ!
ಒಂದು ವೇಳೆ ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಬಿಜೆಪಿ- ಜೆಡಿಎಸ್ ಕೈಗೂಡಿಸುವಂತಾದರೂ ೨೦೨೪ ರ ಲೋಕಸಭಾ ಚುನಾವಣೆಯ ನಂತರದ ಪರಿಸ್ಥಿತಿ ಯಡಿಯೂರಪ್ಪ ಅವರಿಗೆ ಪ್ಲಸ್ ಆಗಬಹುದು. ಯಾಕೆಂದರೆ ಆಗವರು ತಮ್ಮ ಬೆಂಬಲಿಗರ ಜತೆ ಸೇರಿ ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್ ಜತೆ ಕೈ ಜೋಡಿಸಬಹುದು. ಪುತ್ರ ವಿಜಯೇಂದ್ರ ಉಪಮುಖ್ಯಮಂತ್ರಿ ಹುದ್ದೆಗೇರುವಂತೆ ನೋಡಿಕೊಳ್ಳಬಹುದು.ಹಾಗಾಗದೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವೇ ಸ್ವಯಂಬಲದ ಮೇಲೆ ಅಧಿಕಾರ ಗಳಿಸಿದರೆ ರಾಜ್ಯ ಬಿಜೆಪಿಯ ಮೇಲೆ ನಿಯಂತ್ರಣ ಸಾಧಿಸಿ ವಿಜಯೇಂದ್ರ ಕೇಂದ್ರ ಮಂತ್ರಿಯಾಗುವಂತೆ ನೋಡಿಕೊಳ್ಳಬಹುದು ಎಂಬುದು ಈಗಿನ ಚರ್ಚೆಯ ಕೇಂದ್ರ ಬಿಂದು.ಹೀಗಾಗಿ ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಎಂಬಂತೆ ಯಡಿಯೂರಪ್ಪ ಎಪಿಸೋಡು ರಾಜ್ಯ ರಾಜಕಾರಣ ಪಡೆಯಬಹುದಾದ ತಿರುವುಗಳ ಬಗ್ಗೆ ಕುತೂಹಲ ಮೂಡಿಸಿದೆ.
ಮುಂದೇನಾಗುತ್ತದೋ ಗೊತ್ತಿಲ್ಲ. ಆದರೆ ಈ ಕುರಿತ ಚರ್ಚೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಲೇ ಇದೆ!

andolanait

Recent Posts

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 21 ಶುಕ್ರವಾರ

2 hours ago

911 ಅಕ್ರಮ ವಿದೇಶಿ ನುಸುಳುಕೋರರು ಪತ್ತೆ : ಗೃಹ ಸಚಿವ ಖರ್ಗೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ನಗರದಲ್ಲಿ 911 ಅಕ್ರಮ ವಿದೇಶ ನುಸುಳುಕೋರರು ಇರೋದಾಗಿ ಖುದ್ದು…

14 hours ago

ಕಾವೇರಿ ವನ್ಯಧಾಮದಲ್ಲಿ 8 ಕಳ್ಳಬೇಟೆ ಶಿಬಿರ ಧ್ವಂಸ : ಎಫ್‌ಐಆರ್ ದಾಖಲು, ತನಿಖೆ ಚುರುಕು

ಹನೂರು : ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯ ವ್ಯಾಪ್ತಿಯಲ್ಲಿ ಆಗಸ್ಟ್ 15ರಿಂದ 19ರವರೆಗೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಇಲಾಖಾ…

15 hours ago

1984 ಸಿಖ್‌ ವಿರೋಧಿ ದಂಗೆ ಪ್ರಕರಣ; ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸಜ್ಜನ್‌ ಕುಮಾರ್‌ ನಿಧನ

ಹೊಸದಿಲ್ಲಿ : ಸಾವಿರಾರು ಜನರ ಸಾವಿಗೆ ಕಾರಣವಾದ 1984ರ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಐವರು ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲಿ…

17 hours ago

ನಾರಾಯಣಸ್ವಾಮಿಗೆ ಕಮಾಂಡೆಂಟ್‌ ಬೆಳ್ಳಿ ಪದಕ

ಮೈಸೂರು: ನಗರದ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಅವರು ಮೈಸೂರು ೩ ಕರ್ನಾಟಕ ರಾಷ್ಟ್ರೀಯ ಕೆಡೆಟ್…

17 hours ago

ಹನೂರು ಎನ್‌ಕೌಂಟರ್‌ ಬೆನ್ನಲ್ಲೇ ಕಳ್ಳಬೇಟೆ ಕಡಿವಾಣಕ್ಕೆ ಸರ್ಕಾರದ ಚಿಂತನೆ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದ ಎನ್‌ಕೌಂಟರ್‌ ಪ್ರಕರಣದ ಬೆನ್ನಲ್ಲೇ ಆ ಭಾಗದಲ್ಲಿ ನಡೆಯುತ್ತಿರುವ ಕಳ್ಳಬೇಟೆ ಪ್ರಕರಣಗಳನ್ನು ರಾಜ್ಯ…

21 hours ago