ಎಡಿಟೋರಿಯಲ್

ಬೆಂಗಳೂರು ಡೈರಿ : ಸಚಿವಾಕಾಂಕ್ಷಿ ತ್ರಿಮೂರ್ತಿಗಳಿಂದ ಸಿಎಂ ಬೊಮ್ಮಾಯಿವರಿಗೆ ಹೊಸ ತಲೆನೋವು!

ಆರ್ ಟಿ ವಿಠ್ಠಲಮೂರ್ತಿ

ಮರಳಿ ಪಕ್ಷವನ್ನು ಅಧಿಕಾರಕ್ಕೆ ತರಲು ಜನಸಂಕಲ್ಪ ಯಾತ್ರೆ ಹೊರಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದಿನದಿಂದ ದಿನಕ್ಕೆ ತಲೆನೋವು ಹೆಚ್ಚಾಗುತ್ತಿದೆ. ಕಾರಣ? ಅವರು ರಾಜ್ಯದಲ್ಲಿ ಪಕ್ಷವನ್ನು ಬಲಿಷ್ಟಗೊಳಿಸಲು ಅವಿರತವಾಗಿ ಶ್ರಮಿಸುತ್ತಿದ್ದರೆ ರಾಜ್ಯ ಬಿಜೆಪಿಯ ಹಲವರು ತಮ್ಮದೇ ಚಿಂತೆಗಳಲ್ಲಿ ಮುಳುಗಿ ಅವರ ಮೇಲೆ ಒತ್ತಡ ಹೇರುತ್ತಿದ್ದಾರಂತೆ. ಈ ಪೈಕಿ ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ರಮೇಶ್‌ ಜಾರಕಿಹೊಳಿ ಮತ್ತು ಸಿ.ಪಿ.ಯೋಗೀಶ್ವರ್‌ ಪ್ರಮುಖರು.

ಅಂದ ಹಾಗೆ ಈಶ್ವರಪ್ಪ ಅವರು ಹೇಳಿ ಕೇಳಿ ಸಂಘಂ ಶರಣಂ ಗಚ್ಚಾಮಿ ಬ್ರಾಂಡಿನ ನಾಯಕ. ಬಿಜೆಪಿಯ ಪ್ರಮುಖ ಎದುರಾಳಿ ಕಾಂಗ್ರೆಸ್‌ ಪಕ್ಷಕ್ಕೆ ಟಕ್ಕರ್‌ ಕೊಡಲು ತಮ್ಮಂತಹ ಸಮರ್ಥ ನಾಯಕರು ಕಡಿಮೆ ಎಂಬುದು ಈಶ್ವರಪ್ಪ ಅವರ ಲೆಕ್ಕಾಚಾರ. ಕಳೆದ ವಾರ ಈಶ್ವರಪ್ಪ ಅವರ ಪರವಾಗಿ ಮಾಧ್ಯಮಗಳ ಜತೆ ಮಾತನಾಡಿದ ಪ್ರದೇಶ ಕುರುಬರ ಸಂಘದ ಪ್ರಮುಖರು, ಇವತ್ತು ರಾಜ್ಯದ ಮೂರನೇ ಅತಿ ದೊಡ್ಡ ಶಕ್ತಿ ಎನ್ನಿಸಿಕೊಂಡ ಕುರುಬರು ಕಾಂಗ್ರೆಸ್‌ ಕಡೆ ವಾಲಿದ್ದಾರೆ. ಹೀಗೆ ವಾಲಿರುವ ಅವರನ್ನು ಒಂದು ಪ್ರಮಾಣದಲ್ಲಾದರೂ ಬಿಜೆಪಿಗೆ ಸೆಳೆಯುವ ಶಕ್ತಿ ಅಂತಿದ್ದರೆ ಅದು ಈಶ್ವರಪ್ಪ ಅವರಿಗೆ ಮಾತ್ರ. ಒಂದು ವೇಳೆ ಅವರು ಮರಳಿ ಮಂತ್ರಿಯಾಗದಿದ್ದರೆ ಕುರುಬರು ಕಾಂಗ್ರೆಸ್‌ ಕಡೆ ಸಂಪೂರ್ಣವಾಗಿ ವಾಲುತ್ತಾರೆ ಎಂಬರ್ಧದಲ್ಲಿ ಅವರು ಮಾತನಾಡಿದ ರೀತಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ನೀಡಿದ ಎಚ್ಚರಿಕೆಯಲ್ಲದೆ ಬೇರೇನಲ್ಲ.

ವಾಸ್ತವವಾಗಿ ರಾಜ್ಯ ಕುರುಬರ ಸಂಘ ಮಾಧ್ಯಮಗಳಿಗೆ ಇಂತಹ ಹೇಳಿಕೆ ನೀಡಲು ಯಾರು ಕಾರಣ? ಎಂಬುದು ಊಹೆಗೆ ಸಿಲುಕದ್ದೇನಲ್ಲ. ಆದರೆ ಏನೇ ಆಗಲಿ, ಇಂತಹ ಹೇಳಿಕೆ ಬಿಜೆಪಿಗೆ ಮುಜುಗರ ತಂದಿರುವುದು ಮಾತ್ರ ನಿಜ. ಆದರೆ ಕುರುಬರ ಸಂಘ ಇಂತಹ ಮಾಧ್ಯಮ ಗೋಷ್ಟಿ ನಡೆಸುವುದರ ಹಿಂದೆ ಖುದ್ದು ಈಶ್ವರಪ್ಪ ಅವರಿಗಿರುವ ಅಸಮಾಧಾನವೂ ಕಾರಣ. ಯಾಕೆಂದರೆ ಆರೋಪ ಹೊತ್ತು ಮಂತ್ರಿಗಿರಿಗೆ ರಾಜೀನಾಮೆ ನೀಡಿದ್ದಾಯಿತು. ನಂತರ ಈ ಪ್ರಕರಣದಲ್ಲಿ ತಾವು ನಿರಪರಾಧಿ ಎಂಬುದೂ ಸಾಬೀತಾಯಿತು.

ಆದರೆ ತಾವು ನಿರಪರಾಧಿಯಾಗಿ ಹೊರಹೊಮ್ಮಿದರೂ ತಮಗೆ ಮಂತ್ರಿಗಿರಿ ಕೊಡುತ್ತಿಲ್ಲ ಎಂಬುದು ಈಶ್ವರಪ್ಪ ಅವರ ಸಿಟ್ಟು. ಸಾಲದೆಂಬಂತೆ ಇನ್ನೇನು ಇಂತಹ ದಿನದಂದು ಮಂತ್ರಿ ಮಂಡಲ ವಿಸ್ತರಣೆಯಾಗುತ್ತದೆ. ನೀವು ಮಂತ್ರಿಯಾಗುತ್ತೀರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡೇಟುಗಳ ಮೇಲೆ ಡೇಟು ಕೊಟ್ಟಿದ್ದೇ ಬಂತು.
ಆದರೆ ಬೊಮ್ಮಾಯಿ ಅವರು ಕೊಟ್ಟ ಒಂದು ಡೇಟೂ ನಿಜವಾಗಲಿಲ್ಲ. ಯಾಕೆ ಹೀಗೆ ಅಂತ ಮೊನ್ನೆ ಕೇಳಲು ಹೋದರೆ: ಗುಜರಾತ್‌ ವಿಧಾನಸಭೆ ಚುನಾವಣೆ ಮುಗಿದ ಕೂಡಲೇ ಸಂಪುಟ ವಿಸ್ತರಿಸಲು ರೆಡಿ ಇರಿ ಅಂತ ವರಿಷ್ಟರು ಹೇಳಿದ್ದಾರೆ. ಯಾವ ಕಾರಣಕ್ಕೂ ಈ ಸಲ ಡೌಟೇ ಇಲ್ಲ ಸಾರ್‌ ಎಂದರಂತೆ.

ಬೊಮ್ಮಾಯಿ ಅವರ ಮಾತು ಕೇಳಿ ಈಶ್ವರಪ್ಪ ಅವರ ಪಿತ್ತ ನೆತ್ತಿಗೇರಿದೆ. ಈಗಾಗಲೇ ಡೇಟುಗಳ ಮೇಲೆ ಡೇಟುಗಳನ್ನು ಕೊಟ್ಟಿದ್ದಾಯಿತು. ಈಗ ನೋಡಿದರೆ ಗುಜರಾತ್‌ ಚುನಾವಣೆ ಮುಗಿಯಲಿ ಎನ್ನುತ್ತಿದ್ದಾರೆ. ಅಂದರೆ ನವೆಂಬರ್‌ ಕಳೆದು ಡಿಸೆಂಬರ್‌ ಬರುತ್ತದೆ. ಆಗ ಮಂತ್ರಿಯಾದರೆ ಏನು ಫಲ? ವಿಧಾನಸಭೆ ಚುನಾವಣೆಗೆ ಬಾಕಿ ಉಳಿಯುವುದೇ ನಾಲ್ಕೈದು ತಿಂಗಳು ಎಂಬುದು ಈಶ್ವರಪ್ಪ ಅವರ ಸಿಟ್ಟು. ಅವರ ಸಿಟ್ಟಿನ ಬೆನ್ನಲ್ಲೇ ಕುರುಬ ಸಮುದಾಯದ ಪ್ರಮುಖರು ಬೊಮ್ಮಾಯಿ ವಿರುದ್ದ ಸಿಡಿದೆದ್ದಿದ್ದಾರೆ. ಬೊಮ್ಮಾಯಿಯವರ ಲೇಟೆಸ್ಟು ತಲೆನೋವಿಗೆ ಇದು ಕೂಡಾ ಒಂದು ಕಾರಣ.
**
ಇದೇ ರೀತಿ ಲೈಂಗಿಕ ಹಗರಣದ ಅರೋಪ ಹೊತ್ತು ಮಂತ್ರಿಗಿರಿಗೆ ರಾಜೀನಾಮೆ ನೀಡಿದ ರಮೇಶ್‌ ಜಾರಕಿಹೊಳಿ ಅವರಿಗೂ ಇತ್ತೀಚಿನ ದಿನಗಳಲ್ಲಿ ಬೊಮ್ಮಾಯಿ ವಿರುದ್ಧ ಕೋಪ ಹೆಚ್ಚಾಗಿದೆ.
2019 ರಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಕಾಂಗ್ರೆಸ್‌ ಸರ್ಕಾರವನ್ನು ಪದಚ್ಯುತಗೊಳಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಯಡಿಯೂರಪ್ಪ ಅವರಿಗೆ ನೆರವು ನೀಡಿದ್ದೇ ತಾವು.
ತಮ್ಮ ನೆರವಿಲ್ಲದೆ ಹೋಗಿದ್ದರೆ ಅವತ್ತು ಯಡಿಯೂರಪ್ಪ ಅವರು ಸರ್ಕಾರ ರಚಿಸಲು ಸಾಧ್ಯವಿರಲಿಲ್ಲ. ಅವತ್ತು ಸರ್ಕಾರ ರಚನೆಗೆ ಕಾರಣರಾದ ತಮಗೇ ಮಂತ್ರಿಗಿರಿ ಇಲ್ಲ ಎಂದರೆ ಏನರ್ಥ? ಆರೋಪದ ಹಿನ್ನೆಲೆಯಲ್ಲಿ ತಾವು ರಾಜೀನಾಮೆ ನೀಡಿದ್ದೇನೋ ನಿಜ. ಆದರೆ ಇಷ್ಟು ಕಾಲ ಉರುಳಿದರೂ ತಮ್ಮನ್ನು ಮರಳಿ ಮಂತ್ರಿ ಮಾಡುವಮಾತೇ ಕೇಳಿ ಬರದಿರುವುದು ರಮೇಶ್‌ ಜಾರಕಿಹೊಳಿ ಅವರಿಗೆ ಅಸಾಧ್ಯ ಕೋಪ ತರಿಸಿದೆ.

ಹೀಗಾಗಿ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ: ಇನ್ನೂ ಎಷ್ಟು ದಿನ ಅಂತ ಕಾಯಿಸುತ್ತೀರಿ? ಈ ಸರ್ಕಾರ ಅಸ್ತಿತ್ವಕ್ಕೆ ಬರಲು ನಾನು ಕಾರಣ. ಆದರೆ ನನ್ನನ್ನು ದೂರವಿಟ್ಟು ಉಳಿದವರು ಮಜಾ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರಂತೆ.
ಅದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು: ನೀವು ಬೇಗ ಮಂತ್ರಿಯಾಗಬೇಕು ಎಂಬುದು ನನ್ನಾಸೆ. ಆದರೆ ಪಕ್ಷದ ಹೈಕಮಾಂಡ್‌ ಸೂಚನೆ ನೀಡದೆ ನಾನೇನು ಮಾಡಲು ಸಾಧ್ಯ? ಅಂತ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರಂತೆ. ಆದರೆ ಇದನ್ನೊಪ್ಪದ ರಮೇಶ್‌ ಜಾರಕಿಹೊಳಿ: ನೀವು ದೆಹಲಿಗೆ ಹೋಗಿ ವರಿಷ್ಟರ ಬಳಿ ಸಂಪುಟ ವಿಸ್ತರಣೆಯ ಅನಿವಾರ್ಯತೆ ಏನು? ಅಂತ ವಿವರಿಸಬೇಕು. ಒಪ್ಪಿಗೆ ಪಡೆಯಬೇಕು. ಹಾಗೆ ಮಾಡದೆ ಎಲ್ಲವನ್ನೂ ವರಿಷ್ಟರ ಮೇಲೆ ಹಾಕಿ ಕುಳಿತುಕೊಂಡರೆ ಏನರ್ಥ? ಅಂತ ಅಸಮಾಧಾನ ವ್ಯಕ್ತಪಡಿಸಿದರಂತೆ.
ಪಾಪ, ಬೊಮ್ಮಾಯಿ ಅವರೇನು ಮಾಡಲು ಸಾಧ್ಯ? ಅವರು ಕೂಡಾ ಸಾಧ್ಯವಾದಾಗಲೆಲ್ಲ ದೆಹಲಿಗೆ ಹೋಗಿ ವರಿಷ್ಟರನ್ನು ಭೇಟಿ ಮಾಡಿ ಬರುತ್ತಲೇ ಇದ್ದಾರೆ. ಆದರೆ ಮಂತ್ರಿ ಮಂಡಲ ವಿಸ್ತರಣೆಗೆ ವರಿಷ್ಟರಿಂದ ಗ್ರೀನ್‌ ಸಿಗ್ನಲ್‌ ಸಿಗುತ್ತಲೇ ಇಲ್ಲ. ಅವರು ನೋಡಿದರೆ ಹಾಗೆ, ಇಲ್ಲಿ ನೋಡಿದರೆ ಹೀಗೆ ಎಂಬ ಕಾರಣ ಬಸವರಾಜ ಬೊಮ್ಮಾಯಿ ಅವರ ತಲೆನೋವಿಗೆ ಕಾರಣವಾಗಿದೆ. ಸಾಲದೆಂಬಂತೆ ರಮೇಶ್‌ ಜಾರಕಿಹೊಳಿ ಅವರು: ನನ್ನನ್ನು ಮಂತ್ರಿ ಮಾಡದಿದ್ದರೆ ನಮ್ಮ ಭಾಗಕ್ಕೆ ನಿಮ್ಮ ಜನಸಂಕಲ್ಪ ಯಾತ್ರೆ ಬಂದಾಗ ಗೈರು ಹಾಜರಾಗುತೇನೆ ಎಂದರಂತೆ. ಇದೇ ರೀತಿ ಬಸವರಾಜ ಬೊಮ್ಮಾಯಿ ಅವರಿಗೆ ತಲೆನೋವು ತಂದ ಮತ್ತೊಬ್ಬರೆಂದರೆ ಸಿ.ಪಿ.ಯೋಗೀಶ್ವರ್. ಮೂರು ವರ್ಷಗಳ ಹಿಂದೆ ಯಡಿಯೂರಪ್ಪ ಅವರು ಸರ್ಕಾರವನ್ನು ರಚಿಸಲು ತಮ್ಮಿಂದಾದ ನೆರವು ನೀಡಿದ್ದ ಯೋಗೀಶ್ವರ್‌, ಇದೀಗ ಅದನ್ನೆಲ್ಲ ಹೇಳಿ ಬೊಮ್ಮಾಯಿ ಅವರೆದುರು ಕೂಗಾಡಿದ್ದಾರೆ.

ಹೀಗೆ ಒಂದು ಕಡೆಯಿಂದ ಮಂತ್ರಿ ಪದವಿ ಅಕಾಂಕ್ಷಿಗಳು ಕೂಗಾಡುತ್ತಿದ್ದರೆ ಬೊಮ್ಮಾಯಿ ಅವರೇನು ಮಾಡಬೇಕು? ಹಾಗಂತಲೇ ಅವರು ಗುಜರಾತ್‌ ಚುನಾವಣೆ ಮುಗಿಯಲಿ ಸುಮ್ಮನಿರಿ ಎಂದು ಮಂತ್ರಿ ಪದವಿ ಆಕಾಂಕ್ಷಿಗಳಿಗೆ ಪೌಡರು ಹಚ್ಚಲು ಹೊರಟಿದ್ದಾರೆ. ಆದರೆ ಅವರ ಮಾತನ್ನು ಯಾರೂ ನಂಬುವ ಸ್ಥಿತಿಯಲ್ಲಿಲ್ಲ.
**
ಈ ಮಧ್ಯೆ ಬಸವರಾಜ ಬೊಮ್ಮಾಯಿ ಅವರಿಗೆ ಅಚ್ಚರಿ ತಂದಿರುವ ವಿಷಯವೆಂದರೆ ಮೊನ್ನೆ ಬಂದ ಸರ್ವೆ ರಿಪೋರ್ಟು. ಮುಂದಿನ ಚುನಾವಣೆಯ ಹಿನ್ನೆಲೆಯಲ್ಲಿ ಹಲವು ಸಂಸ್ಥೆಗಳಿಂದ ನಿರಂತರವಾಗಿ ಸರ್ವೇ ಮಾಡಿಸುತ್ತಿರುವ ಬಿಜೆಪಿ ಈಗ ನಡೆಸಿರುವ ಸಮೀಕ್ಷೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ಅರವತ್ತು ಸ್ಥಾನ ಸಿಗಲಿದೆ ಎಂಬ ಮಾಹಿತಿ ಬಂದಿದೆ. ಮುಂದಿನ ಚುನಾವಣೆಯಲ್ಲಿ ಸ್ವಯಂಬಲದ ಮೇಲೆ ಗೆಲ್ಲಬೇಕು, ಇಲ್ಲವಾದರೆ ಜೆಡಿಎಸ್‌ ಜತೆ ಸೇರಿ ಮೈತ್ರಿ ಸರ್ಕಾರ ರಚಿಸಬೇಕು ಎಂಬ ಲೆಕ್ಕಾಚಾರ ದಿಲ್ಲಿಯ ಬಿಜೆಪಿ ನಾಯಕರಲ್ಲೇನೋ ಇದೆ. ಆದರೆ ಬೊಮ್ಮಾಯಿ ಮತ್ತಿತರ ಸ್ಥಳೀಯ ನಾಯಕರು: ಜೆಡಿಎಸ್‌ ಪಕ್ಞವನ್ನು ನುಂಗಿ ನೊಣೆದರೂ ಪರವಾಗಿಲ್ಲ. ಮುಂದಿನ ಚುನಾವಣೆಯಲ್ಲಿ ನಾವು ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರಲೇಬೇಕು ಎಂದು ಪಣ ತೊಟ್ಟಿದ್ದಾರಂತೆ. ಹೀಗಿರುವಾಗ ಜೆಡಿಎಸ್‌ ಪಕ್ಷದ ಗಳಿಕೆ ಅರವತ್ತು ಸೀಟುಗಳನ್ನು ಮೀರುತ್ತದೆ ಎಂದಾದರೆ ಅನಿವಾರ್ಯವಾಗಿ ಅವರ ಜತೆ ಸೇರಿ ಸರ್ಕಾರ ರಚಿಸಲು ಸಿದ್ಧರಾಗಬೇಕು.

ಇಂತಹ ಎಚ್ಚರಿಕೆಯಿಂದಲೇ ಬಸವರಾಜ ಬೊಮ್ಮಾಯಿ ಅವರು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌ ಸೇರಿದಂತೆ ಪ್ರಮುಖ ನಾಯಕರಿಗೆ ಸಿಗ್ನಲ್ಲು ಕೊಟ್ಟು: ಸ್ವಯಂಬಲದ ಮೇಲೆ ನಾವು ಅಧಿಕಾರ ವಶಪಡಿಸಿಕೊಳ್ಳಲು ನೆರವಾಗಬೇಕು ಎಂದು ಹೇಳಿದ್ದಾರೆ.
ಹೀಗೆ ಹೇಳಿದ್ದಕ್ಕೆ ಪ್ರತಿಯಾಗಿ ಸುಧಾಕರ್‌, ಮುನಿರತ್ನ ಮತ್ತಿತರರು ಯಸ್‌ ಎಂದಿದ್ದಾರೆ. ಅಷ್ಟೇ ಅಲ್ಲ, ಈ ಕಡೆ ಅಶ್ವಥ್ಥನಾರಾಯಣ ಅವರಂತವರೂ ಧ್ವನಿಗೂಡಿಸಿದ್ದಾರೆ. ಆದರೆ ಏನೇ ಮಾಡಿದರೂ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯ ಗ್ರಾಫು ಏರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜೆಡಿಎಸ್‌ ಗಳಿಕೆ ಅರವತ್ತಕ್ಕೆ ತಲುಪಿದರೆ ತಮ್ಮ ಪಕ್ಷದ ಗ್ರಾಫು ಕಡಿಮೆಯಾಗಬಹುದು ಎಂಬುದು ಬಸವರಾಜ ಬೊಮ್ಮಾಯಿ ಅವರ ಆತಂಕ.
ಈಗಿನ ಗ್ರಾಫು ಪಕ್ಷಕ್ಕೆ ಎಪ್ಪತ್ತರಿಂದ ಎಂಭತ್ತು ಸೀಟುಗಳು ಬರುತ್ತವೆ ಎಂದೇನೋ ಹೇಳಿದೆ. ಆದರೆ ಚುನಾವಣೆಗೂ ಮುಂಚೆಯೇ ಅತಂತ್ರ ವಿಧಾನಸಭೆಯ ಸಾಧ್ಯತೆಗಳನ್ನು ಹೇಳಿದರೆ ಚುನಾವಣೆಯಲ್ಲಿ ಅದರ ವ್ಯತಿರಿಕ್ತ ಪರಿಣಾಮವಾಗುತ್ತದೆ ಎಂಬುದು ಬೊಮ್ಮಾಯಿ ಅವರ ಯೋಚನೆ.

ಹೀಗಾಗಿ ತಮ್ಮ ಆತಂಕ ನಿವಾರಿಸಿಕೊಳ್ಳುವ ಸಲುವಾಗಿ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೊರೆ ಹೋಗಿದ್ದಾರಂತೆ.

ಎಷ್ಟೇ ಆದರೂ ರಾಜ್ಯ ಬಿಜೆಪಿ ಪಾಲಿಗೆ ನೀವೇ ಪರಮಶಕ್ತಿ. ಹೀಗಾಗಿ ನಿಮ್ಮ ಕಣ್ಣ ಮುಂದೆಯೇ ಪಕ್ಷ ಅಧಿಕಾರ ಕಳೆದುಕೊಳ್ಳುವ ಸ್ಥಿತಿ ಬರೆದಂತೆ ನೋಡಿಕೊಳ್ಳಬೇಕು ಎಂದು ಬೊಮ್ಮಾಯಿ ಪರಿಪರಿಯಾಗಿ ಕೇಳಿದ್ದಾರಂತೆ. ಅರ್ಥಾತ್‌,ರಾಜ್ಯ ಬಿಜೆಪಿ ಎಂಬ ರಥ ತಾವು ಬಯಸಿದಂತೆ ನಡೆಯುತ್ತಿಲ್ಲ ಎಂಬುದು ಅವರ ನೋವು. ಆದರೆ ಅದಕ್ಕೆ ಮದ್ದು ನೀಡುವವರು ಯಾರು? ಬೊಮ್ಮಾಯಿ ಅವರಿಗೆ ನೆಮ್ಮದಿ ಸಿಗುವಂತೆ ಮಾಡುವವರು ಯಾರು?

andolanait

Recent Posts

ಡಿಕೆಶಿ ಸರ್ಕಾರಕ್ಕೆ ಶತದಿನಗಳ ಸಂಭ್ರಮ ; ಬಣ್ಣ ಬಣ್ಣದ ಬೆಳಕಿನಲ್ಲಿ ಝಗಮಗಿಸಲಿದೆ ಮೈಸೂರು ಅರಮನೆ

ಮೈಸೂರು :  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಸೆ.10ಕ್ಕೆ ನೂರು ದಿನಗಳ ಸಂಭ್ರಮ. ಈ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಸೆ.10…

9 hours ago

ದಸರಾ ಮಹೋತ್ಸವದಲ್ಲಿ ಕನ್ನಡ ಚಲನಚಿತ್ರ ರಂಗದ ಪ್ರಖ್ಯಾತ ಕಲಾವಿದರು ಭಾಗಿ ; ಜಿಲ್ಲಾಧಿಕಾರ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ

ಮೈಸೂರು : ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯ ವೇಳೆ ಕನ್ನಡ ಚಲನಚಿತ್ರ ರಂಗದ ಪ್ರಖ್ಯಾತ ಕಲಾವಿದರು ಭಾಗಿಯಾಗುವರು ಎಂದು…

14 hours ago

ಹೊಸ ಪರಿಕಲ್ಪನೆಯೊಂದಿಗೆ ದೀಪಾಲಂಕಾರ ರೂಪಿಸಿ ; ರಮೇಶ್‌ ಬಂಡಿಸಿದ್ದೇಗೌಡ

ಮೈಸೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿದ್ಯುತ್ ದೀಪಾಲಂಕಾರಕ್ಕೆ ಈ ಬಾರಿ ಹೊಸ ಮೆರುಗು ನೀಡುವುದರ ಜತೆಗೆ ಆಕರ್ಷಕ…

14 hours ago

ದಸರಾ ಮಹೋತ್ಸವದಲ್ಲಿ ಕನ್ನಡ ಚಲನಚಿತ್ರ ರಂಗದ ಪ್ರಖ್ಯಾತ ಕಲಾವಿದರು ಭಾಗಿ: ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ

ಮೈಸೂರು: ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯ ವೇಳೆ ಕನ್ನಡ ಚಲನಚಿತ್ರ ರಂಗದ ಪ್ರಖ್ಯಾತ ಕಲಾವಿದರು ಭಾಗಿಯಾಗುವರು ಎಂದು ಜಿಲ್ಲಾಧಿಕಾರಿ…

17 hours ago

ಅಬಕಾರಿ ಅಕ್ರಮ ಕೇಸ್‌: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಗೆ ED ಶಾಕ್‌

ಬೆಂಗಳೂರು: ಅಬಕಾರಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಶಾಕ್ ನೀಡಿದೆ.…

19 hours ago

ಓದುಗರ ಪತ್ರ: ಬಂದೂಕು ಹಿಡಿದಿರುವ ನಾಯಕನ ಚಿತ್ರದ ಜಾಹೀರಾತಿಗೆ ‘ಇಲ್ಲೂ’ ಪ್ರೋತ್ಸಾಹ ಏಕೆ?

ಇತ್ತೀಚೆಗೆ ಬಿಡುಗಡೆಯಾದ ಟಾಕ್ಸಿಕ್ ಚಲನಚಿತ್ರವು ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ಪೋಸ್ಟರ್ ಅನ್ನು…

23 hours ago