ಎಡಿಟೋರಿಯಲ್

ಹೃದಯಾಘಾತ ಹೃದಯಸ್ತಂಭನಗಳ ಸುತ್ತ ಮುತ್ತ

ಡಾ.ಮಾದೇಶ್ ಮಂಜುನಾಥ, ವೈದ್ಯರು

ಇತ್ತೀಚೆಗಷ್ಟೆ ವರದಿಯಾದ ಆತಂಕಕಾರಿ ಘಟನೆಯೊಂದರಲ್ಲಿ ೩೯ ವರ್ಷದ ಹೃದಯ ಶಸ್ತ್ರಚಿಕಿತ್ಸಕ ಡಾ. ಗ್ರಾಡ್ಲಿನ್ ರಾಯ್, ಚೆನ್ನೈನ ಸವಿತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬೆಳಗಿನ ರೌಂಡ್ಸ್ ಸಮಯದಲ್ಲಿ ಹಠಾತ್ ಕುಸಿದು ಬಿದ್ದರು ಮತ್ತು ಅವರ ಸಹೋದ್ಯೋಗಿಗಳ ತ್ವರಿತ ಮತ್ತು ಹತಾಶ ಪ್ರಯತ್ನಗಳ ಹೊರತಾಗಿಯೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಇಂತಹ ಎಷ್ಟೊ ಯುವಕ -ಯುವತಿಯರ ಹಠಾತ್ ಸಾವುಗಳು ಹೃದಯಾಘಾತ ಮತ್ತು ಹಠಾತ್ ಹೃದಯ ಸ್ತಂಭನದಿಂದ ದೇಶದೆಲ್ಲೆಡೆ ನಿತ್ಯ ಸಂಭವಿಸುತ್ತಿರುವುದು ತೀವ್ರ ಆಘಾತಕಾರಿ ವಿಚಾರವಾಗಿದೆ.

ಹೃದಯಾಘಾತ ಅಥವಾ (ಹಾರ್ಟ್ ಅಟ್ಯಾಕ್) ಎಂದರೇನು?:  ಹೃದಯಾಘಾತ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಮಯೋಕಾರ್ಡಿಯಲ್ ಇನ್ಛಾರ್ಕ್ಷನ್ (MI), ಇದು ಹೃದಯದ ಪರಿಧಮನಿಯ ಅಪಧಮನಿಗಳಲ್ಲಿ ಒಂದರಲ್ಲಿ ರಕ್ತದ ಹರಿವು ಕಡಿಮೆಯಾದಾಗ ಅಥವಾ ಸಂಪೂರ್ಣವಾಗಿ ನಿಂತಾಗ ಆಗುವ ಘಟನೆಗೆ ಹೃದಯಾಘಾತ ಎನ್ನಲಾಗುತ್ತದೆ. ಇದರಿಂದಾಗಿ ಹೃದಯ ಸ್ನಾಯುವಿಗೆ ಇನ್ಛಾರ್ಕ್ಷನ್ (ಅಂಗಾಂಶ ಸಾವು) ಸಂಭವಿಸುತ್ತದೆ.

ಹೃದಯ ಸ್ತಂಭನ ಅಥವಾ ಹಠಾತ್ ಹೃದಯ ಸ್ತಂಭನ (Sudden Cardiac Arrest) ಎಂದರೇನು?: ಹೃದಯದ ವಿದ್ಯುತ್ ವ್ಯವಸ್ಥೆಯಲ್ಲಿನ ಅಸಮರ್ಪಕ ಕಾರ್ಯ, ಹೃದಯವು ಅನಿಯಮಿತವಾಗಿ ಬಡಿಯಲು ಕಾರಣವಾಗುತ್ತದೆ (ವೆಂಟ್ರಿಕ್ಯುಲರ್ ಫಿಬ್ರಿಲೇಷನ್ ಅಥವಾ flutter) ಅಥವಾ ಬಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ (ಎಸಿಸ್ಟೋಲ್). ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ನಿಮಿಷಗಳಲ್ಲಿ ಹಠಾತ್ ಸಾವು ಸಂಭವಿಸಬಹುದು.

ಹೃದಯಾಘಾತಕ್ಕೆ ಕಾರಣಗಳೇನು ಅದು ಹೇಗಾಗುತ್ತದೆ?: ಹೃದಯ ರಕ್ತನಾಳಗಳ ಕಾಯಿಲೆ (CAD) ಎಂಬುದು ಪರಿಧಮನಿ ಅಪಧಮನಿಗಳಲ್ಲಿ ಪ್ಲೇಕ್ ನಿರ್ಮಾಣ ವಾಗುವ, ಅವುಗಳನ್ನು ಕಿರಿದಾಗಿಸುವ ಮತ್ತು ಹೃದಯ ಸ್ನಾಯುಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುವ ಮೂಲ ಸ್ಥಿತಿಯಾಗಿದೆ.

ಈ ಶೇಖರಣೆ ಕ್ರಮೇಣ ಅಪಧಮನಿಗಳ ಕಿರಿದಾಗುವಿಕೆ ಯು ಆಂಜೈನಾ (ಎದೆ ನೋವು) ಗೆ ಕಾರಣವಾಗಬಹುದು. ಪ್ಲೇಕ್ ಛಿದ್ರವು ರಕ್ತ ಹೆಪ್ಪುಗಟ್ಟುವಿಕೆಯನ್ನು ಪ್ರಚೋದಿಸ ಬಹುದು, ಇದು ಅಪಧಮನಿಯನ್ನು ಸಂಪೂರ್ಣವಾಗಿ ನಿರ್ಬಂಧಿಸುತ್ತದೆ, ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ.

ಹೃದಯಾಘಾತಕ್ಕೆ ಕಾರಣಗಳು: 

೧)ಆನುವಂಶಿಕ ಅಂಶಗಳು

೨) ಧೂಮಪಾನ

೩) ಮದ್ಯಪಾನ

೪) ಅಧಿಕ ರಕ್ತದ ಒತ್ತಡ

೫) ಬೊಜ್ಜು

೬) ಮಧುಮೇಹ

೭) ಜಡ ಜೀವನ ಶೈಲಿ

೮) ಅಧಿಕ ರಕ್ತದ ಕೊಲೆಸ್ಟ್ರಾಲ್‌ಗಳ ಮಟ್ಟ

೯) ನಿದ್ರಾಹೀನತೆ

ಹೃದಯಾಘಾತದ ಲಕ್ಷಣಗಳು:  ಹೃದಯಾಘಾತದ ಸಾಮಾನ್ಯ ಲಕ್ಷಣವೆಂದರೆ ಎದೆ ನೋವು, ಕೆಲವು ವೇಳೆ ಎದೆಯಲ್ಲಿ ಹಿಸುಕುವಿಕೆ, ಒತ್ತುವುದು ಎದೆ ಭಾರವಾಗುವ ಹಾಗೆ ಅನಿಸುತ್ತದೆ ಎದೆಯ ಮಧ್ಯಭಾಗದಲ್ಲಿ ಅಥವಾ ಪಕ್ಕೆಲುಬಿನ ಮಧ್ಯಭಾಗದ ಕೆಳಗೆ ಕೇಂದ್ರೀಕೃತವಾಗಿರುತ್ತದೆ ಮತ್ತು ಅದು ತೋಳುಗಳು, ಹೊಟ್ಟೆ, ಕೆಳದವಡೆ ಅಥವಾ ಕುತ್ತಿಗೆಗೆ ಹರಡಬಹುದು.

ಇತರ ಲಕ್ಷಣಗಳು:  ಸುಸ್ತು, ಬೆವರುವುದು, ವಾಕರಿಕೆ, ವಾಂತಿ, ಉಸಿರಾಟದ ತೊಂದರೆ ಅಥವಾ ತಲೆತಿರುಗುವಿಕೆ ಒಳಗೊಂಡಿರಬಹುದು. ಕೆಲವೊಮ್ಮೆ, ಹೃದಯಾಘಾತದಿಂದ ಎದೆಯಲ್ಲಿ ಉರಿಯುವ ನೋವು, ವಾಕರಿಕೆ ಮತ್ತು ವಾಂತಿ ಸಹ ಉಂಟಾಗಬಹುದು.

ಹಠಾತ್ ಹೃದಯ ಸ್ತಂಭನ (Sudden cardiac arrest): 

ಕಾರಣಗಳು:  ಹೃದಯವು, ಹೃದಯ ಬಡಿತದ ವೇಗ ಮತ್ತು ಲಯವನ್ನು ನಿಯಂತ್ರಿಸುವ ಒಂದು ವಿದ್ಯುತ್ ವ್ಯವಸ್ಥೆಯನ್ನು ಹೊಂದಿರುತ್ತದೆ. ಹೃದಯದ ವಿದ್ಯುತ್ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಮತ್ತು ಅನಿಯಮಿತ ಹೃದಯ ಬಡಿತಗಳಿಗೆ ಕಾರಣವಾದಾಗ ಹಠಾತ್ ಹೃದಯ ಸ್ತಂಭನವಾಗುತ್ತದೆ. ಅನಿಯಮಿತ ಹೃದಯ ಬಡಿತಗಳನ್ನು ಅರಿಧಿಮಿಯ ಎನ್ನಲಾಗುತ್ತದೆ.

ಹಠಾತ್ ಹೃದಯ ಸ್ತಂಭನದ ಲಕ್ಷಣಗಳು: 

೧.ಹಠಾತ್ ಕುಸಿತ

೨.ನಾಡಿಮಿಡಿತವಿಲ್ಲದಿರುವುದು

೩.ಉಸಿರಾಟವಿಲ್ಲದಿರುವುದು

೪.ಪ್ರಜ್ಞೆ ಕಳೆದುಕೊಳ್ಳುವುದು

ಹೃದಯಾಘಾತವನ್ನು ಕಂಡುಹಿಡಿಯಲು ECG, ಏಕೋ ಕಾರ್ಡಿಯೋಗ್ರಫಿ ಮತ್ತು ಕಾರ್ಡಿಯಕ್ ಮಾರ್ಕ್ ಕರ್ ರಕ್ತ ಪರೀಕ್ಷೆಗಳಿಂದ((TropI TropT) ಕಂಡು ಹಿಡಿಯಬಹುದು ಮತ್ತು ಹೃದಯದ ರಕ್ತನಾಳಗಳ ಬ್ಲಾಕ್ ಗಳನ್ನು ತಿಳಿದುಕೊಳ್ಳಲು ಕರೋನರಿ ಆಂಜಿಯೋಗ್ರಾಮ್ ಪರೀಕ್ಷೆಯ ಅವಶ್ಯಕತೆಯಿರುತ್ತದೆ.

ಹೃದಯಾಘಾತವಾದ ನಂತರದ ಮೊದಲ ೬೦ ನಿಮಿಷಗಳನ್ನು ಗೋಲ್ಡನ್ ಹವರ್ ಎಂದು ಕರೆಯಲಾಗುತ್ತದೆ. ಹೃದ್ರೋಗ ತಜ್ಞರು ಈ ಅವಧಿಯನ್ನು ಚಿಕಿತ್ಸೆಗೆ ಅತ್ಯಂತ ನಿರ್ಣಾಯಕ ಅವಧಿ ಎಂದು ಪರಿಗಣಿಸುತ್ತಾರೆ. ಈ ಸಮಯದಲ್ಲಿ ಸಮಯೋಜಿತ ವೈದ್ಯಕೀಯ ಆರೈಕೆಯನ್ನು ಪಡೆಯುವ ಮುಖಾಂತರ ರೋಗಿಯು ಬದುಕುಳಿಯುವ ಸಾಧ್ಯತೆಯನ್ನು ಗಮನಾರ್ಹವಾಗಿ ಹೆಚ್ಚಿಸಬಹುದು. ಮತ್ತು ಹೃದಯದ ಸ್ನಾಯುಗಳಿಗೆ ಆಗುವ ಹಾನಿಯನ್ನು ಕಡಿಮೆ ಮಾಡಬಹುದು.

ಹಠಾತ್ ಹೃದಯ ಸ್ತಂಭನಕ್ಕೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದೆ ಇದ್ದಲ್ಲಿ ಶೇ.೯೦ರಷ್ಟು ಸಾವು ಕೆಲವೇ ನಿಮಿಷಗಳಲ್ಲಿ ಸಂಭವಿಸಬಹುದು. ಆದ್ದರಿಂದ ಹಠಾತ್ ಹೃದಯ ಸ್ತಂಭನದ ಚಿಕಿತ್ಸೆ ಬಹಳ ಮುಖ್ಯವಾಗಿದೆ. CPR ಅಥವಾ ಹೃದಯ ಶ್ವಾಸಕೋಶದ ಪುನರುಜ್ಜೀವನವು ಹೃದಯ ಸ್ತಂಭನದ ರೋಗಿಗಳಿಗೆ ಪ್ರಾಥಮಿಕ ಚಿಕಿತ್ಸಾ ವಿಧಾನವಾಗಿದೆ.

ಹೃದಯ ಸ್ತಂಭನಕ್ಕೆ ಪ್ರಮುಖ ಕಾರಣಗಳು:

* ವೆಂಟ್ರಿಕ್ಯುಲರ್ ಫಿಬ್ರಿಲೇಷನ್: ಇದು ಒಂದು ರೀತಿಯ ಅರಿಧಿಮಿಯ, ಇಲ್ಲಿ ಹೃದಯದ ಬಡಿತವು ನಿಮಿಷಕ್ಕೆ ೨೦೦ ರಿಂದ ೩೦೦ ಕ್ಕಿಂತ ಹೆಚ್ಚು ವೇಗವಾಗಿ ಬಡಿದು ಹಠಾತ್ ಹೃದಯ ಬಡಿತ ನಿಂತು ಹೋಗುತ್ತದೆ. ಶೇ.೭೦ ರಷ್ಟು ಹಠಾತ್ ಸಾವಿಗೆ ಕಾರಣವಾಗಿರುತ್ತದೆ

* ಪರಿಧಮನಿಯ ಅಪಧಮನಿ ಕಾಯಿಲೆ (CAD) , ಇದನ್ನು ಇಸ್ಕೆಮಿಕ್ ಹೃದಯ ಕಾಯಿಲೆ ಎಂದೂ ಕರೆಯುತ್ತಾರೆ

* ಕೆಲವು ರೀತಿಯ ದೈಹಿಕ ಒತ್ತಡಗಳು ಹೃದಯದ ವಿದ್ಯುತ್ ವ್ಯವಸ್ಥೆಯು ವಿಫಲಗೊಳ್ಳಲು ಕಾರಣವಾಗಬಹುದು

* ಕಾರ್ಡಿಯೊ ಮೈಯೋಪತಿ

* ಹೃದಯ ಕವಾಟದ ಕಾಯಿಲೆ

* ಹುಟ್ಟಿನಿಂದಲೇ ಇರುವ ಹೃದಯ ಕಾಯಿಲೆ ತಡೆಗಟ್ಟುವಿಕೆ

* ಕುಟುಂಬದಲ್ಲಿ ಯಾರಿಗಾದರೂ ಹೃದಯಕ್ಕೆ ಸಂಬಂಧಿತ ತೊಂದರೆ ಇದೆಯೇ ಎಂದು ತಿಳಿದುಕೊಂಡು ಆದಾದ ನಂತರ ಮಕ್ಕಳಿರಲಿ, ವಯಸ್ಕರಿರಲಿ, ವಯೋವೃದ್ಧರಿರಲಿ ಹೃದ್ರೋಗ ತಜ್ಞರ ಸಲಹೆ ಪಡೆಯುವುದು ಸೂಕ್ತ.

* ನಿಯಮಿತ ಸರಳ ವ್ಯಾಯಾಮ ಮತ್ತು ನಡಿಗೆ, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು, ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸುವುದು.

* ಧ್ಯಾನ, ಯೋಗ ಮತ್ತು ಸಂಗೀತ ಕೇಳುವ ಮುಖಾಂತರ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು.

* ಸಾಕಷ್ಟು ನಿದ್ರೆ: ರಾತ್ರಿ ೭-೮ ಗಂಟೆಗಳ ಗುಣಮಟ್ಟದ ನಿದ್ರೆ ಬಹು ಮುಖ್ಯ.

* ಆರೋಗ್ಯಕರ ಆಹಾರ: ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ಬಳಕೆ ಮಾಡಬೇಕು. ಆದರೆ ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬುಗಳು, ಉಪ್ಪು ಮತ್ತು ಸೇರಿಸಿದ ಸಕ್ಕರೆಗಳನ್ನು ಮಿತಿಗೊಳಿಸಬೇಕು.

” ಮಧುಮೇಹ, ಅಧಿಕ ರಕ್ತದ ಒತ್ತಡ ಮತ್ತು ಅಧಿಕ ರಕ್ತದ ಕೊಲೆಸ್ಟ್ರಾಲ್‌ಗಳ ರೋಗಿಗಳು ನಿಯಮಿತವಾಗಿ ವರ್ಷಕ್ಕೆ ಒಮ್ಮೆ ಯಾದರೂ ಇಸಿಜಿ, ಏಕೋ ಕಾರ್ಡಿಯಕ್ ಪರೀಕ್ಷೆಗೆ ಒಳಪಡುವುದು, ಹೃದ್ರೋಗ ತಜ್ಞರಲ್ಲಿ ನಿಯಮಿತ ತಪಾಸಣೆಗೆ ಒಳಪಟ್ಟು ಸಕ್ಕರೆ, ರಕ್ತದ ಒತ್ತಡ ಮತ್ತು ರಕ್ತದ ಕೊಲೆಸ್ಟ್ರಾಲ್‌ಗಳನ್ನು ನಿಯಂತ್ರಣದಲ್ಲಿಡುವುದು ಮುಖ್ಯ.”

(ಮಾಹಿತಿ ನೀಡಿದವರು – ಡಾ.ಗುರುಪ್ರಸಾದ್, ಹಿರಿಯ ಹೃದ್ರೋಗ ತಜ್ಞ, ಅಪೊಲೋ ಆಸ್ಪತ್ರೆ, ಮೈಸೂರು )

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಬಂಡಾಯದ ಹೊಳೆ

ಬಂಡಾಯದ ಹೊಳೆ ಮಿಂಚು ಹೂಮಳೆ ! ಅತಿವೃಷ್ಟಿ,ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ, ಕಾರಣ,…

18 hours ago

ಓದುಗರ ಪತ್ರ: ಆತಂಕಕಾರಿ ವಿಚಾರ

ರಾಜ್ಯದಲ್ಲಿ ಎಂಟು ಸಾವಿರಕ್ಕೂ ಅಧಿಕ ಪೋಕ್ಸೊ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ…

18 hours ago

ಓದುಗರ ಪತ್ರ: ಜ್ಞಾಪಿಸಿಕೊಳ್ಳಬೇಕಿತ್ತು, ಕೃತಜ್ಞತೆ ಹೇಳಬೇಕಿತ್ತು…

ಮೈಸೂರಿನ ನಾರಾಯಣ ಶಾಸಿ ರಸ್ತೆಯಲ್ಲಿ, ಕಳೆದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ವಿವೇಕ ಸ್ಮಾರಕದ ಜಗವು ಕೆಲವು…

18 hours ago

ಮನುಕುಲದ ಏರಿಳಿತಗಳಿಗೆ ಸಾಕ್ಷಿದಾರರಾದ ಈ ಪೀಳಿಗೆಗಳು

ಶುಭಾ ಖಟಾವಕರ ಮ್ಹೆತ್ರಸ್ ಹೊಸ ಇತಿಹಾಸ ಸೃಷ್ಟಿಸಿದ ‘ಜೆನ್ ಝೀ’ ಪೀಳಿಗೆ ಸಂಪ್ರದಾಯಗಳನ್ನು ಪ್ರಶ್ನಿಸಿದ ‘ಬೂಮರ್ಸ್’ ಯುವಜನ ೧೯೦೦ ರಿಂದ…

18 hours ago

ನನೆಗುದಿಗೆ ಬಿದ್ದ ರಾಜ್‌ಘಾಟ್ ಮಾದರಿ ಗಾಂಧಿ ಸ್ಮಾರಕ

ಪುನೀತ್ ೩ ವರ್ಷ ಕಳೆದರೂ ಮುಗಿಯದ ಕಾಮಗಾರಿ: ಶೀಘ್ರ ಪೂರ್ಣಗೊಳಿಸಲು ಒತ್ತಾಯ ಮಡಿಕೇರಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾಷಣ ಮಾಡಿದ್ದ…

19 hours ago

ಅನಿಲ್ ಚಿಕ್ಕಮಾದುಗೆ ಕೈತಪ್ಪಿದ ಸಚಿವ ಸ್ಥಾನ; ಕ್ಷೇತ್ರದ ಜನರಿಗೆ ನಿರಾಸೆ

ಮಂಜು ಕೋಟೆ ಕೋಟೆ: ಸಚಿವ ಸ್ಥಾನ ದೊರೆತಿದ್ದರೆ ಹಿಂದುಳಿದ ಕ್ಷೇತ್ರದ ಅಭಿವೃದ್ಧಿಯಾಗುತ್ತಿತ್ತು ಎಂಬ ನಿರೀಕ್ಷೆ ಎಚ್.ಡಿ.ಕೋಟೆ: ಮೈಸೂರು ಪ್ರಾಂತ್ಯದ ನಾಯಕ…

19 hours ago