ಎಡಿಟೋರಿಯಲ್

ಆಂದೋಲನ ಓದುಗರ ಪತ್ರ: 13 ಬುಧವಾರ 2022

ಪಂಚಾಯಿತಿ ಕಟ್ಟೆ ತೀರ್ಮಾನಕ್ಕೆ ಕಾನೂನು ಮಾನ್ಯತೆ ಸರಿಯಲ್ಲ

ಹಳ್ಳಿಗಳಲ್ಲಿ ತಿಳಿವಳಿಕೆ ಇರುವ ಕೆಲವೇ ವ್ಯಕ್ತಿಗಳಿಂದ ಆಗುವ ನ್ಯಾಯ ತೀರ್ಮಾನಗಳಿಗೂ ಕಾನೂನು ಮಾನ್ಯತೆ ನೀಡಲು ಅಗತ್ಯ ಕ್ರಮಕ್ಕೆ ಚಿಂತನೆ ನಡೆದಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧು ಸ್ವಾಮಿ ಅವರು ಹೇಳಿರುವುದಾಗಿ ವರದಿಯಾಗಿದೆ. ಅವರು ಮುಂದುವರಿದು ಲೋಕ ಅದಾಲತ್ ತೀರ್ಮಾನಗಳನ್ನೂ ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗುತ್ತಿದೆ. ಆದ್ದರಿಂದ ಅದಾಲತ್ ತೀರ್ಮಾನಗಳಿಗೂ ನ್ಯಾಯಾಲಯದ ತೀರ್ಪಿನ ಮಾನ್ಯತೆ ನೀಡಲು ನ್ಯಾಯಾಧೀಶರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದಿದ್ದಾರೆ. ಪಂಚಾಯಿತಿ ಮಾಡುವ ವ್ಯಕ್ತಿಗಳು ರಾಜಕೀಯ ಪ್ರೇರೇಪಿತರಾಗಿ ಯಾವುದೋ ಒಂದು ಪಕ್ಷದ ವ್ಯಕ್ತಿಯ ಪರವಾಗಿ ತೀರ್ಮಾನಗಳನ್ನು ನೀಡುವ ಸಂಭವವೇ ಹೆಚ್ಚಿರುತ್ತದೆ. ಬಹಳಷ್ಟು ವೇಳೆ ಪಂಚಾಯಿತಿಯ ತೀರ್ಮಾನಗಳು ಎದುರಾಳಿ ವ್ಯಕ್ತಿಗೆ ತೀರ್ಪು ಒಪ್ಪಿಗೆ ಇಲ್ಲದಿದ್ದರೂ ಅಲ್ಲಿ ಬಲವಂತವಾಗಿ ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಗುತ್ತದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ಆದ್ದರಿಂದ ಈಗ ಹಳ್ಳಿಗಳಲ್ಲಿ ನಡೆಯುತ್ತಿರುವ ನ್ಯಾಯ ಪಂಚಾಯಿತಿಗಳ ತೀರ್ಮಾನ ಮುಂದುವರಿಯಲಿ. ಒಪ್ಪಿಗೆಯಾಗದಿದ್ದರೆ ಈಗಿರುವಂತೆ ಪೊಲೀಸ್ ಠಾಣೆ ಅಥವಾ ಲೋಕ ಅದಾಲತ್‌ನಲ್ಲಿ ಪ್ರಶ್ನಿಸುವ ಅಥವಾ ನ್ಯಾಯಾಲಯದ ಮೊರೆ ಹೋಗುವ ಹಕ್ಕಿಗೆ ಧಕ್ಕೆಯಾಗದಿರಲಿ.

ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು.


ನೆಹರು ಪ್ರಧಾನಿ ಮಾತ್ರವಲ್ಲ ಸ್ವಾತಂತ್ರ್ಯ ಹೋರಾಟಗಾರರೂ ಹೌದು

ಮೈಸೂರಿನ ರಂಗಾಯಣದಲ್ಲಿ ನಡೆದ ಬಹುರೂಪಿ ರಾಷ್ಟ್ರೀಯ ವಿಚಾರಸಂಕಿರಣದ ಸಮಾರೋಪದಲ್ಲಿ ಬಾಬು ಕೃಷ್ಣಮೂರ್ತಿ ಎಂಬವರು ನಮ್ಮ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು “ಭಾರತೀಯತೆಯನ್ನು ನಾಶಗೊಳಿಸಲು ಯತ್ನಿಸಿದವರು” ಎಂದು ಆರೋಪಿಸಿದ್ದಾಗಿ ಕೆಲ ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ. ಗಣ್ಯರೆನಿಸಿಕೊಳ್ಳಲು ಯಾರೇ ಆಗಲಿ ತಮ್ಮ ಮಾತು ಮತ್ತು ಕೃತಿಗಳಲ್ಲಿ ವಾಸ್ತವಿಕೆಯನ್ನು ಅಳವಡಿಸಿಕೊಂಡಿರಬೇಕಲ್ಲವೆ? ಬಾಬು ಅವರ ತಲೆಬುಡವಿಲ್ಲದ ಇಂತಹ ಮಾತುಗಳಿಂದ ಐತಿಹಾಸಿಕ ಸತ್ಯಗಳು ಬದಲಾಗುವುದಿಲ್ಲ. ನೆಹರು ಅವರು ಕೇವಲ ಭಾರತದ ಮೊದಲ ಪ್ರಧಾನಿಯಷ್ಟೇ ಅಲ್ಲ, ಅದಕ್ಕಿಂತ ಹೆಚ್ಚಾಗಿ ಈ ದೇಶ ಕಂಡ ಒಬ್ಬ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರರು. ‘ಸ್ವಾತಂತ್ರ್ಯ ಹೋರಾಟ’ವೆಂದರೆ ಅದು ಯಾವುದೋ ಮಂದಿರ ಕಟ್ಟಲು ಇನ್ಯಾವುದೋ ಮಸೀದಿ ಕೆಡಹುವ ಹೋರಾಟವಾಗಿರಲಿಲ್ಲ. ಅದು ಭಾರತವನ್ನು ಒಡೆದು ಆಳುವ ನೀತಿಯ ಮೂಲಕ ಭಾರತೀಯರ ಐಕ್ಯತೆಯನ್ನು ಮುರಿಯಲು ಯತ್ನಿಸಿದ ಬ್ರಿಟಿಷ್ ಆಡಳಿತವನ್ನು ಕೊನೆಗಾಣಿಸಿ “ಭಾರತೀಯತೆ”ಯನ್ನು ಸ್ಥಾಪಿಸುವುದಕ್ಕಾಗಿ ನಡೆಸಿದ ಹೋರಾಟ. ಇದು ಸುಳ್ಳೆ?

ಅಯ್ಯಪ್ಪ ಹೂಗಾರ್, ಹೂಟಗಳ್ಳಿ, ಮೈಸೂರು


ಗುಂಡಿಕ್ಕಿ ಕೊಂದುಬಿಟ್ಟರೆ ಚಿರತೆಗಳ ಹಾವಳಿ ಕೊನೆಯಾಗುವುದೇ

ಅರಣ್ಯ ಪ್ರದೇಶದಲ್ಲಿ ನೀರನ್ನು ಶೇಖರಿಸುವ, ಇಂಗಿಸುವ ಯೋಜನೆಗಳು ಜಾಸ್ತಿಯಾದರೆ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯಬಹುದಾಗಿದೆ. ಆದರೆ ಇತ್ತೀಚೆಗೆ ಕಾಡುಪ್ರಾಣಿಗಳ ದಾಳಿ ಹೆಚ್ಚಾಗಿದೆ. ದಾಳಿಯ ತೀವ್ರತೆ ಹೆಚ್ಚಾದಾಗ ಅವುಗಳನ್ನು ಗುಂಡಿಕ್ಕಿ ಕೊಲ್ಲುವ ಹಕ್ಕು ನಮಗಿದೆ ಎನ್ನುವುದಾದರೆ ಕಾಡುಪ್ರಾಣಿಗಳ ನೆಲೆಯನ್ನು ಧ್ವಂಸ ಮಾಡಿ ಅವುಗಳ ಅಸ್ತಿತ್ವವನ್ನೇ ನಾಶಪಡಿಸಿರುವ ಮನುಷ್ಯರಿಗೆ ಯಾವ ಶಿಕ್ಷೆಯಾಗಬೇಕು? ಪ್ರಾಣಿಗಳನ್ನು ಗುಂಡಿಕ್ಕಿ ಕೊಲ್ಲುವ ಬದಲು ಅರಿವಳಿಕೆ ಮದ್ದು ನೀಡಿ ಸೆರೆಹಿಡಿದು ಕಾಡಿಗೋ ಅಥವಾ ಮೃಗಾಲಯಕ್ಕೋ ಬಿಡಬಹುದಲ್ಲವೇ? ಒಂದು ಚಿರತೆಯನ್ನು ಕೊಂದು ಸೇಡು ತೀರಿಸಿಕೊಂಡರೆ ಇಂತಹ ಸಂಘರ್ಷ ತಪ್ಪುವುದೇ? ಒಂದು ಪ್ರಾಣಿಗೆ ದಿನವೊಂದಕ್ಕೆ ಬೇಕಾದ ಆಹಾರ ಮತ್ತು ನೀರು ಕಾಡಿನಲ್ಲಿ ದೊರೆಯುತ್ತಿದೆಯೇ ಎಂಬುದನ್ನು ಯೋಚಿಸಬೇಕಿದೆ. ಅರಣ್ಯ ನಾಶವಾಗದೆ ಪ್ರಾಣಿಗಳಿಗೆ ಕಾಡಿನಲ್ಲಿಯೇ ಆಹಾರ, ನೀರು ಸಿಗುವಂತಿದ್ದರೆ ಅವು ಏಕೆ ನಾಡಿನತ್ತ ಬರುತ್ತಿದ್ದವು? ಪ್ರಜ್ಞಾವಂತರಾಗಿ ನಾವು ಯೋಚಿಸಬೇಕು. ಗೇಣುದ್ದ ಹೊಟ್ಟೆ ಇರುವ ನಮಗೆ ‘ಆಹಾರ ಭದ್ರತಾ ಕಾಯ್ದೆ’ಗಳು ಇರುವಾಗ, ಮೂಕ ಪ್ರಾಣಿಗಳಿಗೆ ಯಾಕೆ ಅಂತಹ ಕಾಯ್ದೆ ಇರಬಾರದು? ಆದ್ದರಿಂದ ಪ್ರಾಣಿಗಳನ್ನು ಕೊಲ್ಲುವ ಬದಲು ಅರಣ್ಯ ಸಂರಕ್ಷಣೆಗೆ ಮಹತ್ವ ನೀಡಬೇಕಿದೆ.

ಪಿ.ಮಲ್ಲಿಕಾರ್ಜುನಪ್ಪ, ಪತ್ರಿಕೋದ್ಯಮ ವಿದ್ಯಾರ್ಥಿ,

ಮಹಾರಾಜ ಕಾಲೇಜು, ಮೈಸೂರು.


ಚಾ.ನಗರಕ್ಕೆ ಸಿಎಂ ಭೇಟಿ ವ್ಯತ್ಯಾಸ ಏನೂ ಆಗದು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಮರಾಜನಗರಕ್ಕೆ ಭೇಟಿ ನೀಡಿದ್ದಾರೆ. ಈಗಾಗಲೇ ಚಾಮರಾಜನಗರಕ್ಕೆ ಭೇಟಿ ನೀಡಿದ ಈ ಹಿಂದಿನ ಕೆಲ ಮುಖ್ಯಮಂತ್ರಿಗಳಂತೆ ಅವರು ಕೂಡ ತಮ್ಮ ಅಧಿಕಾರವನ್ನು ಕಳೆದುಕೊಳ್ಳಬಹುದೇ ಎನ್ನುವ ಆತಂಕ ಕೆಲವರಲ್ಲಿ ಮೂಡಿದೆ. ಒಂದು ವೇಳೆ ಅವರ ಈ ಆತಂಕ ಸತ್ಯವಾದರೂ ಬೊಮ್ಮಾಯಿಯವರು ತಮ್ಮ ಅಧಿಕಾರದ ಕೊನೆಯ ಗಳಿಗೆಯಲ್ಲಿರುವುದರಿಂದ ಆ ಮಾತಿನಿಂದ ಅವರು ಕಳೆದುಕೊಳ್ಳುವುದು ಏನೂ ಇಲ್ಲ. ಇನ್ನು ಮುಖ್ಯಮಂತ್ರಿ ಬದಲಾವಣೆಯ ವದಂತಿಗಳು ಹರಿದಾಡುತ್ತಿದ್ದು, ಇದು ‘ಕಾಗೆ ಕೂರುವುದಕ್ಕೂ ಟೊಂಗೆ ಬೀಳುವುದಕ್ಕೂ ಸರಿಯಾಯಿತು’ ಎಂಬ ಮಾತಿನಂತೆ ಎಂದು ಭಾವಿಸಬಹುದು. ಕಾಕತಾಳೀಯವಾಗಿ ಬಸವರಾಜ ಬೊಮ್ಮಾಯಿಯವರು ಅಧಿಕಾರವನ್ನು ಬಿಡುವ ಸನ್ನಿವೇಶವೇನಾದರೂ ಎದುರಾದರೆ ಅದನ್ನು ಮೌಢ್ಯ ಪ್ರತಿಪಾದಕರು ಸಂಭ್ರಮಿಸಬಹುದು ಅಷ್ಟೆ. ಅದರ ಹೊರತಾಗಿ ಗಂಭೀರ ಪರಿಣಾಮವೇನೂ ಉಂಟಾಗುವುದಿಲ್ಲ.

ರಮಾನಂದ ಶರ್ಮಾ, ಜೆ.ಪಿ.ನಗರ, ಮೈಸೂರು.

andolanait

Recent Posts

ಮದುವೆ ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ಚಾಕು ಇರಿತ ; ವಧು ಮಾಜಿ ಲವರ್‌ನಿಂದ ಕೃತ್ಯ ಶಂಕೆ

ಕೊಳ್ಳೇಗಾಲ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಮದುವೆಯ ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಏಕಾಏಕಿ ದಾಳಿ…

35 mins ago

ಚಿರತೆ ದಾಳಿ : ರೈತನಿಗೆ ಗಾಯ

ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ರಾಜಶೇಖರ ಮೂರ್ತಿ ಎಂಬುವವರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದ್ದು, ಅದೃಷ್ಟವಶಾತ್ ರೈತ…

1 hour ago

ಮಹಾತ್ಮ ಗಾಂಧಿ ಪುಣ್ಯತಿಥಿ | ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ, ಖರ್ಗೆ ಸೇರಿ ಗಣ್ಯರ ನಮನ

ಹೊಸದಿಲ್ಲಿ : ರಾಷ್ಟ್ರಪಿತಿ ಮಹಾತ್ಮ ಗಾಂಧಿ ಅವರ 78ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಇಂದು ರಾಷ್ಟ್ರಪತಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ…

2 hours ago

ಡ್ರಗ್ಸ್‌ ಗುಮಾನಿ | ಎನ್‌ಸಿಬಿ ಅಧಿಕಾರಿಗಳ ದಾಳಿ ಫಾಲೋಅಪ್‌ ಅಷ್ಟೇ : ಗೃಹ ಸಚಿವ

ಮೈಸೂರು : ಮೈಸೂರಿನಲ್ಲಿ ಡ್ರಗ್ಸ್‌ ತಯಾರು ಮಾಡುವ ಯಾವ ವಸ್ತುಗಳ ಸಹ ಸಿಕ್ಕಿಲ್ಲ. ಎನ್‌.ಸಿ.ಬಿ ಅಧಿಕಾರಿಗಳು ದಾಳಿ ಮಾಡಿರುವುದು ಫಾಲೋಅಪ್‌…

3 hours ago

ಓದುಗರ ಪತ್ರ: ಮಾನಸ ಗಂಗೋತ್ರಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿ

ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿವಿಯ ಆವರಣದಲ್ಲಿ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆಯೂ ಇದೆ. ಸ್ಥಳೀಯ…

6 hours ago

ಓದುಗರ ಪತ್ರ: ಶಾಂತಿ, ಸೌಹಾರ್ದ ಸಭೆಗಳು ಹೆಚ್ಚು ಹೆಚ್ಚು ನಡೆಯಲಿ

ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಜಾತಿ ಸಂಘರ್ಷ, ಧರ್ಮ ಸಂಘರ್ಷ, ಜನಾಂಗೀಯ ಸಂಘರ್ಷಗಳು ನಡೆಯುತ್ತಲೇ ಇವೆ. ‘ಸರ್ವ ಜನಾಂಗದ ಶಾಂತಿಯ ತೋಟ’…

6 hours ago