ಆಂದೋಲನ ವಿ4: 29 ಸೋಮವಾರ 2022

ಅವಳಿ ಕಟ್ಟಡಗಳನಾಶ!

ಉತ್ತರ ಪ್ರದೇಶದ ನೋಯ್ಡಾದಲ್ಲಿ ಸೂಪರ್‌ಟೆಕ್ ರಿಯಲ್ ಎಸ್ಟೇಟ್ ಸಂಸ್ಥೆಗೆ ಸೇರಿದ ಅವಳಿ ಕಟ್ಟಡಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಾಶ ಮಾಡಲಾಗಿದೆ. ೩೦ ಅಂತಸ್ತುಗಳ ಈ ಕಟ್ಟಡವನ್ನು ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿತ್ತು. ನಿಯಮ ಉಲ್ಲಂಘಿಸಿದ್ದರಿಂದ ಕಟ್ಟಡವನ್ನೇ ಹೊಡೆದುರುಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದೇಶವನ್ನು ಈಗ ಅನುಷ್ಠಾನ ಮಾಡಲಾಗಿದೆ. ಇಂತಹದ್ದೊಂದು ಬೃಹತ್ ಕಟ್ಟಡವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಾಶ ಮಾಡುತ್ತಿರುವುದು ದೇಶದಲ್ಲಿ ಇದೇ ಮೊದಲು. ಸುತ್ತಮುತ್ತಲೆಲ್ಲ ವಸತಿ ಪ್ರದೇಶಗಳಿವೆ. ಹೀಗಾಗಿ ಅತ್ಯಂತ ಎಚ್ಚರಿಕೆಯಿಂದ ಕಟ್ಟಡ ನಾಶ ಮಾಡಲಾಗಿದೆ. ೭೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಈ ಅವಳಿ ಗೋಪುರಗಳ ನಾಶ ಮಾಡಲಿಕ್ಕೆ ಆಗಿರುವ ವೆಚ್ಚ ಸುಮಾರು ೨೦ ಕೋಟಿ ರೂಪಾಯಿಗಳು. ಈ ಪೈಕಿ ೫ ಕೋಟಿ ರೂಪಾಯಿಗಳನ್ನು ಅಕ್ರಮ ಎಸಗಿದ ಸೂಪರ್ ಟೆಕ್ ಕಂಪೆನಿಯೇ ನೀಡುತ್ತಿದೆ. ಉಳಿದ ೧೫ ಕೋಟಿ ರೂ.ಗಳನ್ನು ಕಟ್ಟಡದ ಅವಶೇಷಗಳನ್ನು ಮಾರಾಟ ಮಾಡಿ ಸಂಗ್ರಹಿಸಲಾಗುತ್ತದೆ.


ಮೇಕಪ್ ಇಲ್ಲದ ಮೊದಲ ಸುಂದರಿ!

ಮೇಕಪ್ಪಿಲ್ಲದೇ ಮನೆಯಿಂದ ಹೊರಗೆ ಬರಲು ಅಳುಕುವ ಈ ಕಾಲದಲ್ಲಿ, ಸೌಂದರ್ಯ ಸ್ಪರ್ಧೆಗೆ ಹೋಗುವುದು ಸಾಧ್ಯವೇ? ಅಂತಹದ್ದೊಂದು ಅದ್ಭುತ ನಡೆದಿದೆ! ಇದು ನಡೆದಿದ್ದು ಲಂಡನ್‌ನಲ್ಲಿ. ಮಿಸ್ ಇಂಗ್ಲೆಂಡ್ ಸ್ಪರ್ಧೆಯಲ್ಲಿ ಪಾಲ್ಗೊಂಡ ೨೦ ವರ್ಷದ ಯುವತಿ ಮೇಕಪ್ಪೇ ಇಲ್ಲದೇ ಕ್ಯಾಟ್ ವಾಕ್ ಮಾಡಿ ತೀರ್ಪುಗಾರರ ಮನಗೆದ್ದು ಸ್ಪರ್ಧೆಯ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದಾಳೆ. ಆಕೆ ಹೆಸರು ಮೆಲಿನಾ ರವೂಫ್. ಸಿಎನ್‌ಎನ್ ವರದಿ ಪ್ರಕಾರ, ಮೆಲಿನಾ ರವೂಫ್ ಸೆಮಿಫೈನಲ್ ಸ್ಪರ್ಧೆಯಲ್ಲಿ ಮೇಕಪ್ಪಿಲ್ಲದೇ ಹೆಜ್ಜೆ ಹಾಕಿದ್ದಾಳೆ. ಅಕ್ಟೋಬರ್ ತಿಂಗಳಲ್ಲಿ ಮಿಸ್ ಇಂಗ್ಲೆಂಡ್ ಅಂತಿಮ ಸ್ಪರ್ಧೆ ನಡೆಯಲಿದೆ. ಆ ಸ್ಪರ್ಧೆಯಲ್ಲೂ ಆಕೆ ಮೇಕಪ್ಪಿಲ್ಲದೇ ಕ್ಯಾಟ್ ವಾಕ್ ಮಾಡುತ್ತಾಳೆಯೇ ಇಲ್ಲವೇ ಎಂಬುದು ಗೊತ್ತಾಗಿಲ್ಲ. ಆದರೆ, ಶತಮಾನದಷ್ಟು ಇತಿಹಾಸ ಇರುವ ಸೌಂದರ್ಯ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ಮೆಲಿನಾ ರಪೂಫ್ ಮೇಕಪ್ಪಿಲ್ಲದೇ ಸ್ಪರ್ಧಿಸಿ ಹೊಸ ಇತಿಹಾಸ ಬರೆದಿದ್ದಾಳೆ! ಆಕೆಯ ಸೌಂದರ್ಯಕ್ಕಿಂತ ಆಕೆಯ ಆತ್ಮವಿಶ್ವಾಸಕ್ಕೆ ಬಹಳಷ್ಟು ಜನರು ಮನಸೋತಿದ್ದಾರೆ. ಮೇಕಪ್ ಸುಂದರಿಯರಿಗೆ ಈರ್ಷೆ ಆಗಿದ್ದರೆ ಅದು ಅಸಹಜವೇನಲ್ಲ ಬಿಡಿ!


ಟಿಆರ್‌ಎಸ್- ಬಿಜೆಪಿ ಜಿದ್ದಾ ಜಿದ್ದಿ!

ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಮತ್ತು ಬಿಜೆಪಿ ನಡುವೆ ಮಾತಿನ ಯುದ್ಧ ಮುಗಿಯುತ್ತಲೇ ಇಲ್ಲ. ಆರೋಪ ಪ್ರತ್ಯಾರೋಪಗಳ ಸರಣಿ ಮುಂದುವರಿದೇ ಇದೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ಆರಂಭಿಸಿದ ನಂತರ ಬಿಜೆಪಿ ಪ್ರತಿದಾಳಿ ಆರಂಭಿಸಿದೆ. ನಿತ್ಯ ಒಂದಿಲ್ಲೊಂದು ಕಾರಣಕ್ಕೆ ಉಭಯ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಲೇ ಇವೆ. ಇದು ಪರಸ್ಪರ ನಿಂದನೆಯ ಮಟ್ಟಕ್ಕೂ ಇಳಿದಿದೆ. ಇತ್ತೀಚಿನ ಆರೋಪ ಎಂದರೆ, ಟಿಆರ್‌ಎಸ್ ಸರ್ಕಾರವು ಕೇಂದ್ರ ಸರ್ಕಾರ ನೀಡಿದ ಅನುದಾನವನ್ನು ಅಭಿವೃದ್ಧಿಗೆ ಬಳಸದೇ ಬೇರೆ ಉದ್ದೇಶಕ್ಕೆ ಬಳಸುತ್ತಿದೆ ಎಂದು ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದ್ದಾರೆ. ಟಿಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್, ಬಿಜೆಪಿ ದೇಶದ ಜನತೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬದಲು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ, ಉದ್ಯಮಿಗಳ ಪರವಾಗಿ ಆಡಳಿತ ನಡೆಸುತ್ತಿದೆ. ಜನಸಾಮಾನ್ಯರನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ. ಬರುವ ದಿನಗಳಲ್ಲಿ ಮತ್ತಷ್ಟು ಆರೋಪ – ಪ್ರತ್ಯಾರೋಪ ನಿರೀಕ್ಷಿಸಬಹುದು.


ಸಾಲದ ಸುಳಿಯಲ್ಲಿ ಮೋದಿ ಆಪ್ತ ಉದ್ಯಮಿ

ಎಂಟು ವರ್ಷಗಳ ಹಿಂದೆ ಶ್ರೀಮಂತರ ಪಟ್ಟಿಯಲ್ಲಿ ಹೆಸರೇ ಇಲ್ಲದ ಅದಾನಿ ಸಮೂಹದ ಗೌತಮ್ ಅದಾನಿ ಈಗ ವಿಶ್ವದ ನಾಲ್ಕನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಇವರ ಸಂಪತ್ತು ಕ್ಷಿಪ್ರವೇಗದಲ್ಲಿ ವೃದ್ದಿಸಿದೆ. ಮೋದಿ ಸರ್ಕಾರ ಅವಧಿಯಲ್ಲಿ ರಸ್ತೆ, ರೈಲು, ವಿಮಾನ ನಿಲ್ದಾಣ, ಬಂದರು ಸೇರಿದಂತೆ ಸಿಕ್ಕಸಿಕ್ಕದ್ದನ್ನೆಲ್ಲ ಖರೀದಿ ಮಾಡಿದ್ದಾರೆ. ಭಾರತ ಸರ್ಕಾರದ ಹಲವು ವಿಮಾನ ನಿಲ್ದಾಣಗಳೀಗ ಅದಾನಿ ಸಮೂಹಕ್ಕೆ ಸೇರಿವೆ. ಇಂತಹ ಗೌತಮ್ ಅದಾನಿ ಅವರ ಕಂಪೆನಿಗಳು ತೀವ್ರವಾದ ಸಾಲ ಮಾಡಿವೆ. ಈ ಬೃಹತ್ ಸಾಲ ತೀರಿಸುವುದು ಕಷ್ಟವೆಂದು ಎಸ್‌ಅಂಡ್‌ಪಿ ಜಾಗತಿಕ ರೇಟಿಂಗ್ ಏಜೆನ್ಸಿ ತಿಳಿಸಿದೆ. ೨,೧೮,೨೭೧ ಕೋಟಿ ರೂಪಾಯಿ ಸಾಲದ ಹೊರೆ ಅದಾನಿ ಕಂಪೆನಿಗಳ ಮೇಲಿದೆ. ದೇಶದ ಬಹುತೇಕ ಎಲ್ಲಾ ಕಾರ್ಪೊರೇಟ್ ಕಂಪೆನಿಗಳೂ ಸಾಲ ಮಾಡುತ್ತವೆ, ತೀರಿಸುತ್ತವೆ. ಅದರಲ್ಲಿ ವಿಶೇಷವೇನೂ ಇಲ್ಲ. ಆದರೆ, ಅದಾನಿ ಸಮೂಹದ ಕಂಪೆನಿಗಳು ಮಾಡಿರುವ ಸಾಲ ತೀರಿಸಲು ಕಷ್ಟ ಸಾಧ್ಯ ಅಥವಾ ತೀರಿಸಲು ಸಾಧ್ಯವೇ ಆಗುವುದಿಲ್ಲ ಎಂಬುದು ರೇಟಿಂಗ್ ಏಜೆನ್ಸಿಯ ಅಂದಾಜು. ಸಾಲ ತೀರಿಸಲಾಗದಿದ್ದರೆ, ಕೇಂದ್ರ ಸರ್ಕಾರ ಮನ್ನಾ ಮಾಡುತ್ತದೆ ಎಂಬ ವಿಶ್ವಾಸ ಅದಾನಿ ಸಮೂಹಕ್ಕೆ ಇದ್ದಿರಬಹುದೇನೋ?

andolana

Recent Posts

ಮಡಿಕೇರಿ: ವಿದ್ಯುತ್ ತಂತಿ ಮೇಲೆ ಮರ ಬೀಳಿಸಿ ಕಾಡಾನೆಗಳ ಪುಂಡಾಟ

ಮಡಿಕೇರಿ: ಕೊಡಗಿನಲ್ಲಿ ವನ್ಯಜೀವಿ–ಮಾನವ ಸಂಘರ್ಷ ಮತ್ತೆ ಮುಂದುವರಿದಿದೆ. ಈ ಬಾರಿ ಕಾಡಾನೆಗಳ ಬುದ್ಧಿವಂತಿಕೆ ಹಾಗೂ ಉಪಾಯದಿಂದ ನಡೆದ ಘಟನೆ ಗ್ರಾಮಸ್ಥರಲ್ಲಿ…

2 hours ago

ಶ್ರೀಲಂಕಾ ಜೈಲಿನಲ್ಲಿ ಗ್ಯಾಂಗ್‌ ವಾರ್:‌ 25 ಕೈದಿಗಳು ಸಾವು

ಕೊಲಂಬೊ: ಶ್ರೀಲಂಕಾದ ಜೈಲಿನಲ್ಲಿ ಕೈದಿಗಳ ಎರಡು ಗುಂಪಿನ ಮಧ್ಯೆ ಗಲಾಟೆ ನಡೆದ ಪರಿಣಾಮ 25 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು…

2 hours ago

ಜನತೆಗೆ ಮತ್ತೊಂದು ಬ್ಯಾಡ್‌ನ್ಯೂಸ್:‌ ದುಬಾರಿಯಾಗಲಿದೆ ಸೇಬು

ನವದೆಹಲಿ: ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನರಿಗೆ ಈಗ ಮತ್ತೊಂದು ಬ್ಯಾಡ್‌ ನ್ಯೂಸ್‌ ಸಿಕ್ಕಿದೆ. ಹವಾಮಾನ ವೈಪರೀತ್ಯದಿಂದಾಗಿ ಸೇಬು ಹಣ್ಣಿನ ಇಳುವರಿ…

2 hours ago

ಮೊಬೈಲ್‌ ಟಾರ್ಚ್‌ ಹಿಡಿದು ಬಸ್‌ ಚಾಲನೆ: ಮೂವರು ಅಮಾನತು

ಕಲಬುರ್ಗಿ: ಟಾರ್ಚ್‌ ಹಿಡಿದು ಬಸ್‌ ಚಾಲನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್‌ ಡ್ರೈವರ್‌ ಸೇರಿದಂತೆ ಮೂವರನ್ನು ಅಮಾನತು ಮಾಡಲಾಗಿದೆ. ತಾಂತ್ರಿಕ…

2 hours ago

ರಾಜ್ಯದಲ್ಲಿ ಚುರುಕು ಪಡೆದುಕೊಂಡ ಮಳೆ: ಜಲಾಶಯಗಳ ಒಳಹರಿವಿನಲ್ಲಿ ಏರಿಕೆ

ಬೆಂಗಳೂರು: ಕರ್ನಾಟಕದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಮಳೆ ದಾಖಲಾಗದಿದ್ದರೂ, ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಉತ್ತರ…

3 hours ago

ಧಾರಾಕಾರ ಮಳೆಗೆ ತತ್ತರಿಸಿದ ಮುಂಬೈ

ಮುಂಬೈ: ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದೇಶದ ವಾಣಿಜ್ಯ ರಾಜಧಾನಿ ಮುಂಬೈ ತತ್ತರಿಸಿದೆ. ಮಳೆಯ ಆರ್ಭಟಕ್ಕೆ ನಗರದ…

3 hours ago