ಎಡಿಟೋರಿಯಲ್

ಸಂಪಾದಕೀಯ : ಜ್ವಲಂತ ಸಮಸ್ಯೆಗಳಿಂದ ವಿಮುಖವಾಗಿರುವ ರಾಜಕೀಯ ಪಕ್ಷಗಳು

ಜ್ವಲಂತ ಸಮಸ್ಯೆಗಳಿಂದ
ವಿಮುಖವಾಗಿರುವ ರಾಜಕೀಯ ಪಕ್ಷಗಳು

ರಾಜ್ಯ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸುತ್ತಿವೆ. ಸಿದ್ಧತೆ ನಡೆಸುವುದರಲ್ಲಿ ತಪ್ಪೇನೂ ಇಲ್ಲ. ಆದರೆ, ರಾಜ್ಯದಲ್ಲಿ ಆಡಳಿತಾರೂಢ ಪಕ್ಷ ಮತ್ತು ವಿರೋಧ ಪಕ್ಷಗಳು ಅಭಿವೃದ್ಧಿ ಆಧಾರಿತ ಸಿದ್ಧತೆಯ ಬದಲಿಗೆ ಮತ್ತೊಬ್ಬರ ಹುಳುಕುಗಳನ್ನೇ ಬಂಡವಾಳ ಮಾಡಿಕೊಳ್ಳುವ ಹುನ್ನಾರದೊಂದಿಗೆ ಚುನಾವಣಾ ಸಿದ್ಧತೆ ನಡೆಸಿರುವುದು ಆತಂಕದ ಸಂಗತಿ.
ರಾಜ್ಯದ ಅಭಿವೃದ್ಧಿ ಕುರಿತಂತೆ ರಾಜಕೀಯ ಪಕ್ಷಗಳು ಯಾವುದೇ ಆರೋಗ್ಯಕರ ಚರ್ಚೆಯಾಗಲೀ, ಸಂವಾದವನ್ನಾಗಲೀ ಮಾಡುತ್ತಲೇ ಇಲ್ಲ. ಅಭಿವೃದ್ಧಿ ಕುರಿತಂತೆ ಸಮನ್ವಯತೆಯೂ ಇಲ್ಲ. ಎಲ್ಲ ಪಕ್ಷಗಳೂ ಕ್ರೆಡಿಟ್ ಗಾಗಿ ಸಮರಸಿದ್ಧತೆ ನಡೆಸಿವೆ. ಆ ಮೂಲಕ ರಾಜ್ಯದ ಜನತೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಂದ ವಿಮುಖವಾಗಿವೆ. ರಾಜ್ಯದ ಜನತೆ ನಿರೀಕ್ಷಿಸುತ್ತಿರುವುದೇನು ಎಂಬುದನ್ನು ಅರಿಯಲಾರದಷ್ಟೂ ವೇಗದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪ, ಸುಳ್ಳು ಆರೋಪಗಳಲ್ಲಿ ಮುಳುಗಿವೆ.
ಇಡೀ ರಾಜ್ಯ ಮಳೆಯಿಂದ ತೊಯ್ದುಹೋಗಿದೆ. ನದಿ ಕೆರೆ, ಕಟ್ಟೆಗಳು ತುಂಬಿ ಉಕ್ಕಿ ಹರಿದಿವೆ. ಪ್ರವಾಹಕ್ಕೆ ಸಿಲುಕಿ ಜನರ ಕನಸುಗಳೂ ಕೊಚ್ಚಿ ಹೋಗಿವೆ. ರಾಜ್ಯದ ಲಕ್ಷಾಂತರ ಅತಿವೃಷ್ಟಿ ಸಂತ್ರಸ್ತರ ಸಂಕಷ್ಟಗಳೇ ಹತ್ತಾರು. ಕೆಲವರ ಮನೆ ಕುಸಿದಿದ್ದರೆ, ಕೆಲವರ ಬದುಕೇ ಕುಸಿದು ಹೋಗಿದೆ. ಮಳೆಯಿಂದ ವಿವಿಧ ಹಂತದಲ್ಲಿದ್ದ ಬಿತ್ತನೆ ಕಾರ್ಯ, ಬೆಳೆಯೂ ಹಾಳಾಗಿದೆ. ರಾಜ್ಯ ಸರ್ಕಾರದ ಪ್ರಾಥಮಿಕ ಅಂದಾಜಿನಂತೆಯೇ ಮಳೆ ಮತ್ತು ಮಳೆ ಸಂಬಂಧಿತ ಪ್ರಕರಣಗಳಲ್ಲಿ ಪ್ರಾಣ ತೆತ್ತವರ ಸಂಖ್ಯೆ ನೂರರ ಗಡಿದಾಟಿದೆ. ೩೫೫೯ ಮನೆಗಳು ಸಂಪೂರ್ಣವಾಗಿ ಹಾನಿಯಾಗಿವೆ. ೧೭೨೧೨ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ೩೧೬೨  ಕಿ.ಮೀ. ಪ್ರಮುಖ ರಸ್ತೆಗಳು ೮೪೪೫ ಕಿ.ಮೀ. ಉದ್ದದ ಗ್ರಾಮೀಣ  ರಸ್ತೆಗಳಿಗೆ ತೀವ್ರ ಹಾನಿಯಾಗಿದೆ. ೧೦೬೮ ಸೇತು ವೆಗಳು ಕುಸಿದಿವೆ. ೪೫೩೧ ಶಾಲಾ ಕಟ್ಟಡಗಳು, ಶಾಲಾ ಕೊಠಡಿಗಳಿಗೆ ಹಾನಿ ಯಾಗಿದೆ. ಸುಮಾರು ೧.೫೦ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದರೆ, ೮೦೦೦ ಹೆಕ್ಟೇರ್ ಪ್ರದೇಶದಲ್ಲಿ ತೋಟದ ಬೆಳೆಗಳಿಗೆ ಹಾನಿಯಾಗಿದೆ. ನಿತ್ಯವೂ ಮಳೆ ಹಾನಿಯಿಂದಾಗುವ ಅನಾಹುತಗಳ ಬಗ್ಗೆ ವರದಿಯಾಗುತ್ತಲೇ ಇದೆ. ಸಾವಿನ ಸಂಖ್ಯೆ, ಸಂತ್ರಸ್ತರ ಸಂಖ್ಯೆ ಏರುತ್ತಲೇ ಇದೆ.
ಈ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಎಷ್ಟು ಗಂಭೀರವಾಗಿ ಪರಿಗಣಿಸ ಬೇಕಿತ್ತೋ ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಇಂತಹ ಪರಿಸ್ಥಿತಿ ಎದುರಾದಾಗ, ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ವಾಸ್ತವ್ಯವಿದ್ದು ಪರಿಹಾರ ಕಾರ್ಯದ ಮೇಲ್ವಿಚಾರಣೆ ವಹಿಸುವ ಸೌಜನ್ಯ ನಡೆಯನ್ನು ಪ್ರದರ್ಶಿಸದಿರುವುದು ನೋವಿನ ಸಂಗತಿ. ಮುಖ್ಯಮಂತ್ರಿಗಳೇನೋ ಪರಿಹಾರವಾಗಿ ೨೦೦ ಕೋಟಿ ರೂಪಾಯಿಗಳನ್ನು ಘೋಷಿಸಿದ್ದಾರೆ. ಪರಿಹಾರ ಘೋಷಣೆಯಿಂದಷ್ಟೇ ಎಲ್ಲ ಸಮಸ್ಯೆಗಳೂ ಪರಿಹಾರವಾಗಲಾರವು.
ತುರ್ತಾಗಿ ಆಗಬೇಕಿರುವ ಕೆಲಸ ಎಂದರೆ ಮನೆಕಳೆದುಕೊಂಡವರಿಗೆ ತ್ವರಿತವಾಗಿ ಮನೆ ಕಟ್ಟಿಸಿಕೊಡುವುದು. ಮನೆ ಕಟ್ಟಿಕೊಡುವವರೆಗೆ   ತಾತ್ಕಾಲಿಕ ವಸತಿ ವ್ಯವಸ್ಥೆ ಒದಗಿಸಬೇಕಿದೆ. ಮಳೆ ಸಂತ್ರಸ್ತರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾರದಷ್ಟೂ ರಾಜ್ಯದ ಆರ್ಥಿಕತೆಯೇನೂ ಹದಗೆಟ್ಟಿಲ್ಲ.
ವಾಸ್ತವವಾಗಿ ಏನಾಗಿದೆ? ಫ್ಲೆಕ್ಸ್ ಹಾಕುವ ವಿಚಾರಗಳು ದೇಶಭಕ್ತಿ ಮತ್ತಿತರ ವಿಷಯಗಳು ಮುನ್ನೆಲೆಗೆ ಬಂದು, ಗಂಭೀರವಾದ ಪ್ರವಾಹ ಸಂತ್ರಸ್ತರ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಪ್ರವಾಹದಿಂದ ಏನೂ ಸಮಸ್ಯೆಯೇ ಎದುರಾಗಿಲ್ಲ ಎನ್ನುವಂತೆ ರಾಜ್ಯ ಸರ್ಕಾರ ಇನ್ನಿತರ ವಿಷಯಗಳತ್ತ ಗಮನ ಕೇಂದ್ರೀಕರಿಸುತ್ತಿದೆ. ಆ ಗಮನವೆಲ್ಲವೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಮತಲಾಭ ತರುವುದಕ್ಕೆ ಸೀಮಿತವಾಗುತ್ತಿದೆ. ಈ ದೂರು ಆಡಳಿತಾರೂಢ ಪಕ್ಷಕ್ಕಷ್ಟೇ ಮಾತ್ರ ಸೀಮಿತವಾಗಿಲ್ಲ. ವಿರೋಧಪಕ್ಷಗಳದ್ದು ಇದೇ ಹಣೆಬರಹ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಂತ್ರಸ್ತರಿಗೆ ಸಾಂತ್ವನ ಹೇಳಲು ಕೊಡಗಿಗೆ ತೆರಳಿದ್ದಾಗ ಮೊಟ್ಟೆ ಎಸೆದ ಘಟನೆಯನ್ನು ಕಾಂಗ್ರೆಸ್ ದೊಡ್ಡದಾಗಿ ಮಾಡಿದೆ. ಅದನ್ನು ರಾಜ್ಯ ಸರ್ಕಾರದ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದೆ.
ಕಾಂಗ್ರೆಸ್ ಪಕ್ಷದ ಈ ನಡೆಯಿಂದಾಗಿ ನೆರೆ ಸಂತ್ರಸ್ತರ ಗಂಭೀರ ಸಮಸ್ಯೆಗಳು ಮತ್ತೆ ಹಿನ್ನೆಲೆಗೆ ಸರಿದಿವೆ. ನೆರೆ ಸಂತ್ರಸ್ತರ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಇದ್ದ ಕಾಳಜಿಯ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವಂತಹ ಪರಿಸ್ಥಿತಿ ತಲೆದೋರಿದೆ. ಜನರ ಸಂಕಷ್ಟಗಳನ್ನು ಮುಂದಿಟ್ಟುಕೊಂಡು ಅವುಗಳ ಪರಿಹಾರಕ್ಕೆ ಹೋರಾಟ ಮಾಡಿದರೆ ಹೋರಾಟದ ಹಿಂದಿನ ಪ್ರಾಮಾಣಿಕತೆ ಯನ್ನು ಯಾರೂ ಪ್ರಶ್ನಿಸುವುದಿಲ್ಲ. ಆದರೆ, ಜನರ ಸಂಕಷ್ಟಗಳನ್ನು ಮುಂದಿಟ್ಟುಕೊಂಡು ಮಾಡುವ ಹೋರಾಟದ ಹಿಂದೆ ಪಕ್ಷದ ಪುನಶ್ಚೇತನವೋ ಅಥವಾ ವ್ಯಕ್ತಿ ಪ್ರತಿಷ್ಠೆಯೋ ಇದ್ದರೆ ಅದರ  ಹಿಂದಿನ ಪ್ರಾಮಾಣಿಕತೆಯನ್ನು ಅನುಮಾನಿಸುವುದು, ಪ್ರಶ್ನಿಸುವುದು ಸಹಜ.
ಅದು ಆಡಳಿತಾರೂಢ ಪಕ್ಷವೇ ಆಗಲೀ ವಿರೋಧಪಕ್ಷವೇ ಆಗಲಿ ಜನರ ಬಗ್ಗೆ ತೋರ್ಪಡಿಸುವ ಕಾಳಜಿ ಜನರ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿರಬೇಕು. ಆ ಪ್ರಾಮಾಣಿಕತೆಯನ್ನೇ ಅನುಮಾನಿಸುವಂತಹ, ಪ್ರಶ್ನಿಸುವಂತಹ ನಡವಳಿಕೆ ಪ್ರದರ್ಶಿಸುವುದು ಯಾರಿಗೂ ಶೋಭೆ ತರದು. ಪ್ರಾಮಾಣಿಕತೆ ಎಂಬುದು ನಡವಳಿಕೆಯೇ ಹೊರತು ರಾಜಕೀಯ ಹೇಳಿಕೆಯಲ್ಲ ಎಂಬುದನ್ನು ಎಲ್ಲ ರಾಜಕೀಯ ನಾಯಕರೂ ಅರಿಯಬೇಕು.
andolanait

Recent Posts

ನನ್ನ ಅಜ್ಜನ ರೀತಿ ಅಜಾತಶತ್ರು ಆಗುತ್ತೇನೆ: ನೂತನ ಶಾಸಕ ಸಮರ್ಥ್‌ ಶಾಮನೂರು

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ನೂತನ ಶಾಸಕರಾಗಿ ಆಯ್ಕೆಯಾಗಿರುವ ಸಮರ್ಥ್‌ ಶಾಮನೂರು ತಮ್ಮ ಗೆಲುವಿನ…

12 mins ago

ಉಪಚುನಾವಣೆಯಲ್ಲಿ ವಿಪಕ್ಷಗಳ ಷಡ್ಯಂತ್ರ ನಡೆಯಲಿಲ್ಲ, ನಾವೇ ಗೆದ್ದಿದ್ದೇವೆ: ಸಿಎಂ ಸಿದ್ದರಾಮಯ್ಯ

ಮೈಸೂರು: ಉಪಚುನಾವಣೆಯಲ್ಲಿ ವಿಪಕ್ಷಗಳ ಷಡ್ಯಂತ್ರ ಏನೂ ನಡೆಯಲಿಲ್ಲ. ನಾನೇ ಗೆಲುವು ಸಾಧಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಯದ…

2 hours ago

ಖಾಲಿ ಕಾಂಪೌಂಡ್‌ಗಳ ಮುಂದೆ ನಿಂತು ಮೂತ್ರ ವಿಸರ್ಜನೆ ಮಾಡುವವರೇ ಎಚ್ಚರ ಎಚ್ಚರ.

ನಿಮ್ಮ ತಪ್ಪನ್ನು ನಿಮಗೇ ತೋರಿಸಲಿದೆ ಕನ್ನಡಿ! ಮೈಸೂರು: ಖಾಲಿ ಕಾಂಪೌಂಡ್ ಬಳಿ ಮೂತ್ರ ವಿಸರ್ಜನೆಯ ದುರ್ವಾಸನೆ ತಪ್ಪಿಸಲು ಮೈಸೂರು ಮಹಾನಗರ…

2 hours ago

ಜನಗಣತಿ ಮಾಡುವ ವೇಳೆಯೇ ಹೃದಯಾಘಾತ: ಶಿಕ್ಷಕ ಸಾವು

ಕೆ.ಆರ್.ನಗರ: ಜನಗಣತಿ ಮಾಡುವ ವೇಳೆ ಸರ್ಕಾರಿ ಶಾಲೆಯ ಶಿಕ್ಷಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಪಟ್ಟಣದ ಕುವೆಂಪು ಬಡಾವಣೆಯಲ್ಲಿ ನಡೆದಿದೆ. ಮೃತಪಟ್ಟ…

3 hours ago

ಓದುಗರ ಪತ್ರ: ಪಂಚ.. ತಂತ್ರ !

ಪಂಚ.. ತಂತ್ರ ! ಚುನಾವಣೆಯಲ್ಲಿ ಗೆದ್ದವರಿಗೆ ಸಿಎಂ ಚಿಂತೆ, ಸೋತವರಿಗೆ ಇವಿಎಂನದೇ ಚಿಂತೆ ! -ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು

5 hours ago

ಓದುಗರ ಪತ್ರ: ಮರದ ಕೊಂಬೆಯನ್ನು ತೆರವುಗೊಳಿಸಿ

ಮೈಸೂರಿನ ಕುವೆಂಪುನಗರದ ‘ಎಂ’ ಬ್ಲಾಕ್‌ನ ನೃಪತುಂಗ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದ ಪಕ್ಕದಲ್ಲಿ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಹೊಸ…

5 hours ago