ಕೆರೆಗಳಿಗೆ ಮತ್ತೆ ನ್ಯಾಯ ಸಿಕ್ಕಿದೆ!
ಬೆಂಗಳೂರು ಸೇರಿದಂತೆ
ರಾಜ್ಯದ ಹಲವೆಡೆ
ಬಿದ್ದ ಭಾರೀ
ಮಳೆಗೆ ನಗರಗಳೇ ಮುಳುಗಿವೆ!
ಬಡಾವಣೆಗಳು ಕೆರೆಯಂತಾಗಿವೆ.
ಇದನ್ನೆಲ್ಲ ನೋಡಿದಾಗ ಅನಿಸಿದಿಷ್ಟು-
ಕೆರೆಗಳು ಯಾವ ಕೋರ್ಟಿಗೂ ಹೋಗಿ ಕೇಸ್ ಹಾಕದೇ,
ಯಾವ ಪೊಲೀಸ್ ಸ್ಟೇಷನ್ ಮೇಟ್ಟಿಲೇರದೇ,
ತಮ್ಮೆಲ್ಲಾ ಒತ್ತುವರಿ ಭೂಮಿಯನ್ನು
ಖುದ್ದಾಗಿ ತಾವೇ ಬಿಡಿಸಿಕೊಂಡಿವೆ!!
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.
ಜನರ ಸಮಸ್ಯೆಗಿಂತ ಚುನಾವಣೆ ಮುಖ್ಯವಾಯ್ತೆ?
ರಾಜ್ಯದಲ್ಲಿ ಮಳೆ ಬಂದು ಜನರು ಸಂಕಷ್ಟದಲ್ಲಿದ್ದಾರೆ. ಸುಮಾರು ೭ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ವರದಿಗಳು ಹೇಳುತ್ತಿವೆ. ಬೆಂಗಳೂರಿನಲ್ಲೂ ಮಳೆಯಿಂದಾಗಿ ಸಮಸ್ಯೆಯಾಗಿದೆ. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರೋ ಜನರಿಗೆ ಸ್ಪಂದನೆ ಮಾಡೋದು ಬಿಟ್ಟು ಸಮಾವೇಶ, ಯಾತ್ರೆ ಮಾಡ್ತಿದಾರೆ. ಮಳೆಯಿಂದ ಸಂಕಷ್ಟಕ್ಕೊಳಗಾದ ಜನರಿಗೆ ಪರಿಹಾರ ಕೊಡ್ತೀವಿ ಎಂದು ನಾಮಕಾವಸ್ತೆ ಮಾತುಗಳನ್ನಾಡುತ್ತಿದ್ದಾರೆ. ಪರಿಹಾರ ಬಂತೋ ಇಲ್ಲವೋ ಏನೂ ಕೇಳುತ್ತಿಲ್ಲ. ಇವರಿಗೆ ಚುನಾವಣೆಯೇ ಮುಖ್ಯವಾಗಿದೆ. ಚುನಾವಣೆಗೆ ಇನ್ನೂ ಬಹಳ ದಿನಗಳಿರುವಾಗಲೇ ಅನುದಾನ ಕೊಡ್ತೀವಿ ಎಂದು ಹೇಳುತ್ತಿದ್ದಾರೆ. ನಂತರ ಎಲ್ಲ ಪರಿಹಾರವನ್ನು ಅದು ಇದು ಕಾರಣ ಕೊಟ್ಟು ರದ್ದು ಮಾಡ್ತಾರೆ. ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡದೇ ಇದ್ರೆ ಚುನಾವಣೆಯಲ್ಲಿ ತಕ್ಕ ಪಾಠ ಜನರೇ ಕಲಿಸ್ತಾರೆ.
-ಹರ್ಷಿತ ಬಿ.ಸಿ., ವಿದ್ಯಾರ್ಥಿನಿ, ಮೈಸೂರು.
ಪ್ರಥಮ ಪ್ರಜೆಗೆ ಸುಸ್ವಾಗತ
ಈ ಬಾರಿಯ ವಿಶ್ವ ವಿಖ್ಯಾತ ದಸರಾ ಮಹೋತ್ಸವವನ್ನು ದೇಶದ ಪ್ರಥಮ ಪ್ರಜೆಯಾದ ರಾಷ್ಟಪತಿ ದ್ರೌಪದಿ ಮುರ್ಮು ಉದ್ಘಾಟಿಸಲಿರುವುದು ಸಂತೋಷಕರ ಸಂಗತಿ. ಇದೇ ಪ್ರಥಮ ಬಾರಿಗೆ ದೇಶದ ರಾಷ್ಟಪತಿಗಳು ದಸರಾ ಮಹೋತ್ಸವವನ್ನು ಉದ್ಘಾಟಿಸುವ ಮೂಲಕ ನಾಡಹಬ್ಬ ದಸರಾದ ಹಿರಿಮೆಯನ್ನು ಹೆಚ್ಚಿಸಲಿದ್ದಾರೆ. ರಾಷ್ಟಪತಿಗಳ
ಆಗಮನದ ಕಾರಣದಿಂದ ಈ ಬಾರಿಯ ದಸರಾ ಹಿಂದೆಂದೂ ಕಾಣದಿರುವಷ್ಟು ಭದ್ರತೆಯ ದಸರಾವಾಗಲಿದೆ.
ವರ್ಷದಿಂದ ವರ್ಷಕ್ಕೆ ದಸರಾ ಹಬ್ಬದ ಹಿರಿಮೆ ಹೆಚ್ಚುತ್ತಲೇ ಇದೆ. ಕೋವಿಡ್ ಸೋಂಕಿನಿಂದಾಗ ಕಳೆದ ಎರಡು ವರ್ಷಗಳಿಂದ ಸರಳ ದಸರಾ ಆಚರಿಸಿದ್ದ ರಾಜ್ಯ ಸರ್ಕಾರವು ಈ ಬಾರಿ ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಹಿಂದೆಯೂ, ಅತಿವೃಷ್ಟಿ, ಅನಾವೃಷ್ಟಿ ಮುಂತಾದ ಕಾರಣಗಳಿಂದ ಸರಳ ರೀತಿಯಲ್ಲಿ ಅಥವಾ ಸಾಂಕೇತಿಕವಾಗಿ ಆಚರಿಸಿದ್ದೂ ಇದೆ. ದಸರಾ ಹಬ್ಬ ನಾಡಹಬ್ಬ ಮಾತ್ರವಲ್ಲದೇ ನಾಡಿನ ಐತಿಹಾಸಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿರಿಮೆಯ ಪ್ರದರ್ಶನವೂ ಆಗಿದೆ.
-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು.
ಐತಿಹಾಸಿಕ ನಡೆ
ಈ ಬಾರಿಯ ನಾಡಹಬ್ಬ ದಸರಾ ಉದ್ಘಾಟನೆ ಮಾಡಲು ಸಮ್ಮತಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಇಂತಹ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರದ ವಿಶಿಷ್ಟ ನಡೆ ಶ್ಲಾಘನೀಯ. ಇತಿಹಾಸ ಅವಲೋಕಿಸಿದಾಗ ಕವಿಗಳು, ಸಾಹಿತಿಗಳು, ಕಲಾವಿದರು, ಪ್ರಗತಿಪರ ಚಿಂತಕರು, ರಾಜಕೀಯ ನಾಯಕರುಗಳು, ಸಾಮಾನ್ಯ ರೈತರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರು ಪಾರಂಪರಿಕ ದಸರಾ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಸದ್ಯ, ದೇಶದ ಪ್ರಥಮ ಪ್ರಜೆ ಬುಡಕಟ್ಟು ಮಹಿಳೆಯಾದ ದ್ರೌಪದಿ ಮುರ್ಮು ಅವರ ಆಯ್ಕೆಯು ಸಂತಸ ತಂದಿದೆ.
೨೦೧೫ರಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನ ಸಾಮಾನ್ಯ ರೈತ ಮಲಾರ ಕಾಲೋನಿಯ ಪುಟ್ಟಯ್ಯ ಉದ್ಘಾಟಿಸಿದ್ದರು. ಆಗ, ಅಂದಿನ ಸರ್ಕಾರದ ನಿರ್ಧಾರಕ್ಕೆ ಸಾಕಷ್ಟು ಮೆಚ್ಚುಗೆ ಸಿಕ್ಕಿತು. ಈಗ, ಅಸಾಮಾನ್ಯ, ಪ್ರತಿಷ್ಠಿತ ಹುದ್ದೆಯಲ್ಲಿರುವ ದೇಶದ ಪ್ರಥಮ ಪ್ರಜೆ ಅವರಿಂದ ಚಾಲನೆ ಸಿಗುತ್ತಿದೆ. ಕಳೆದ ಒಂದು ದಶಕದಲ್ಲಿ ಈ ಎರಡು ಚಾರಿತ್ರಿಕ ಹೆಜ್ಜೆಗಳು ಸಾಮಾನ್ಯ- ಅಸಾಮಾನ್ಯರನ್ನು ಒಂದೇ ಕಡೆ ಕಟ್ಟಿಕೊಟ್ಟ ರಂಗಿನ ಮೈಸೂರು ದಸರಾ ವೈಭವವು ಇತಿಹಾಸದ ಪುಟಗಳಲ್ಲಿ ಎಂದಿಗೂ ಮಾಸದೆ ಉಳಿಯುತ್ತವೆ. ಇಂತಹ ಆಲೋಚನಾ ಕ್ರಮ ಕೈಗೊಳ್ಳುವ ಯಾವುದೇ ಸರ್ಕಾರದ ದಿಟ್ಟ ಹೆಜ್ಜೆಯ ನಡೆಗಳು ಸುಂದರ ಗಣರಾಜ್ಯದ ಮಾದರಿ ಪ್ರಜಾಪ್ರಭುತ್ವಕ್ಕೆ ಇನ್ನಷ್ಟು ಮೆರುಗು ತರಲಿದೆ.
– ಅನಿಲ್ ಕುಮಾರ್, ನಂಜನಗೂಡು.