ಕೀಳರಿಮೆಯಿಂದ ಹೊರಬರಲು ದಲಿತ ಸಮುದಾಯಕ್ಕೆ ಸಿಎಂ ಸ್ಥಾನ ಸಿಗಲಿ
ಇನ್ನೇನು ರಾಜ್ಯ ವಿಧಾನಸಭಾ ಚುನಾವಣೆ ಬರಲಿದೆ. ಪ್ರತಿ ಚುನಾವಣೆಯ ಸಂದರ್ಭದಲ್ಲಿಯೂ ದಲಿತರಿಗೆ ಸಿಎಂ ಸ್ಥಾನ ನೀಡಬೇಕೆಂಬ ಮಾತು ಕೇಳಿಬರುತ್ತಿದೆ. ಆದರೆ ಸ್ವಾತಂತ್ರ್ಯ ಬಂದಾಗಿನಿಂದಲೂ ದಲಿತ ಸಮುದಾಯಕ್ಕೆ ಸಿಎಂ ಸ್ಥಾನದ ಅವಕಾಶ ಸಿಕ್ಕಿಲ್ಲ. ನಮ್ಮಲ್ಲಿನ ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಅನೇಕ ಸಮಾಜ ಸುಧಾರಕರು ಚಳವಳಿ ಮಾಡಿದ್ದಾರೆ. ಆದರೆ ಕರ್ನಾಟಕದಲ್ಲಿ ಈಗಲೂ ಪ್ರಬಲ ಜಾತಿಗಳು ಮಾತ್ರ ರಾಜಕೀಯದಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಗಿದೆ. ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಹಾಗೂ ಹಿಂದುಳಿದ ವರ್ಗದವರು ಮುಖ್ಯಮಂತ್ರಿಯಾಗಿದ್ದಾರೆ. ಆದರೆ ತುಳಿತಕ್ಕೊಳಪಟ್ಟ ದಲಿತ ಸಮುದಾಯಕ್ಕೆ ಮಾತ್ರ ಮುಖ್ಯಮಂತ್ರಿ ಸ್ಥಾನ ಕನಸಾಗಿಯೇ ಉಳಿದಿದೆ. ಯಾವ ಪಕ್ಷವೂ ದಲಿತ ಸಮುದಾಯದವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಮುಂದಾಗಿಲ್ಲ.
ದಲಿತ ನಾಯಕರೊಬ್ಬರು ಮುಖ್ಯಮಂತ್ರಿಯಾದರೆ ದಲಿತರೆಲ್ಲರೂ ಆರ್ಥಿಕವಾಗಿ ಮುಂದುವರಿಯುತ್ತಾರೆ ಎಂಬುದಕ್ಕಿಂತ ಮುಖ್ಯಮಂತ್ರಿ ಸ್ಥಾನ ಸಿಕ್ಕರೆ ಅವರಲ್ಲಿನ ಕೀಳರಿಮೆಯ ಭಾವ ಕಡಿಮೆಯಾಗುತ್ತದೆ. ಆಗ ದಲಿತರಿಗೆ ತಮ್ಮ ಸಮುದಾಯದ ಮೇಲೆ ಗೌರವ ಹೆಚ್ಚಾಗುತ್ತದೆ. ಇದು ಈ ಸಮುದಾಯದ ಬೆಳವಣಿಗೆಗೆ ಪೂರಕವಾಗಲಿದೆ.
2013ರಲ್ಲಿ ದಲಿತ ನಾಯಕರೊಬ್ಬರಿಗೆ ರಾಜ್ಯದ ಮುಖ್ಯಮಂತ್ರಿ ಯಾಗುವ ಅವಕಾಶ ಒದಗಿ ಬಂದಿತ್ತಾದರೂ ಅದೇ ಪಕ್ಷದ ಹಿಂದುಳಿದ ವರ್ಗದ ನಾಯಕರೊಬ್ಬರು ಅವರ ವಿರುದ್ಧ ಚುನಾವಣೆಯಲ್ಲಿ ಕೆಲಸ ಮಾಡಿದ್ದರಿಂದ ಸೋಲುಂಟಾಗಿ ಅವಕಾಶ ಕೈತಪ್ಪಿಸಿದರು ಎಂಬ ಆರೋಪವಿದೆ. ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡಲು ಮುಂದಾದರೆ ಆ ಆರೋಪದಿಂದ ಮುಕ್ತರಾಗಬಹುದು.
ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷಕ್ಕೆ ಬಂದ ಅಲ್ಪಾವಧಿಯಲ್ಲೇ ಎರಡು ಬಾರಿ ವಿರೋಧ ಪಕ್ಷದ ನಾಯಕ ಹಾಗೂ ಒಂದು ಬಾರಿ ಪೂರ್ಣಾವಧಿ ಮುಖ್ಯಮಂತ್ರಿಯಾಗಿದ್ದಾರೆ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡಲಿ.
–ಹೊರಳವಾಡಿ ನಂಜುಂಡಸ್ವಾಮಿ, ಆರ್.ಟಿ.ನಗರ, ಮೈಸೂರು.
ವೇದಿಕೆಗಳ ಮೇಲೆ ರಾಜಕಾರಣಿಗಳ ಮಾತು ಸಭ್ಯವಾಗಿರಲಿ
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಕಾವು ಏರುತ್ತಿದ್ದಂತೆ ಸಭೆ ಸಮಾರಂಭಗಳಲ್ಲಿ ರಾಜಕಾರಣಿಗಳು ಆಡುವ ಮಾತು ಮಿತಿ ಮೀರುತ್ತಿದೆ. ವೈಚಾರಿಕ ಟೀಕೆಗಳನ್ನು ಮೀರಿ ಕೆಲ ರಾಜಕಾರಣಿಗಳು ವೈಯಕ್ತಿಕ ಟೀಕೆಗಳನ್ನು ಮಾಡುವುದು, ಅನ್ಯ ಪಕ್ಷದ ಜನನಾಯಕರನ್ನು ಏಕವಚನದಿಂದ ಸಂಬೋಧಿಸುವುದು, ಜಾತಿನಿಂದನೆ, ಅವರ ಸಾಂಸಾರಿಕ ಗುಟ್ಟು ಹಾಗೂ ಅನೈತಿಕ ಸಂಬಂಧಗಳ ಚರ್ಚೆ ಇಂತಹ ವಿಚಾರಗಳೇ ರಾಜಕಾರಣಿಗಳ ಚುನಾವಣಾ ಭಾಷಣಕ್ಕೆ ವಸ್ತುಗಳಾಗಿವೆ.
ರಾಜಕಾರಣಿಗಳು ಜನನಾಯಕರೇ ಹೊರತು ಸಿನಿಮಾ ನಾಯಕರಲ್ಲ. ಕೇವಲ ಶಿಳ್ಳೆ ಚಪ್ಪಾಳೆಗಳಿಗಾಗಿ ಜನರೆದುರು ಚಿಕ್ಕವರಾಗಬೇಡಿ. ನಿಮ್ಮ ಭಾಷಣದ ಭರಾಟೆಯಲ್ಲಿ ಇತರ ಪಕ್ಷಗಳ ರಾಜಕೀಯ ನಾಯಕರನ್ನು ಟೀಕಿಸುವುದು ನೋಡುಗರಿಗೆ ಹಾಸ್ಯಾಸ್ಪದವಾಗಿಯೂ ಕಾಣುತ್ತಿದೆ.
ಒಬ್ಬ ಸಾಮಾನ್ಯ ಪ್ರಜೆಗೆ ಅಥವಾ ನಿಮ್ಮದೇ ಪಕ್ಷದ ಕಟ್ಟ ಕಡೆಯ ಕಾರ್ಯಕರ್ತನಿಗೂ ನೀವು ಚರ್ಚಿಸಿದ ಅಥವಾ ಹರಿಬಿಟ್ಟ ವಿಷಯಗಳ ಉಪಯೋಗವಿದೆಯೆ ಎಂಬುದನ್ನು ಒಮ್ಮೆ ವಿಮರ್ಶಿಸಿ. ಒಬ್ಬರು ಮತ್ತೊಬ್ಬರನ್ನು ಬೈಯುವ ವಿಚಾರಗಳಿಂದ ಜನರಿಗೆ ಏನು ಉಪಯೋಗ? ಉತ್ತಮ ಸಿದ್ಧಾಂತ, ಒಳ್ಳೆಯ ಕೆಲಸ ಕಾರ್ಯಗಳು, ನಿಮ್ಮ ಯೋಜನೆಗಳು, ನಿಮ್ಮ ಭವಿಷ್ಯದ ಯೋಚನೆಗಳು ಜನರಿಗೆ ತಲುಪಬೇಕೇ ಹೊರತು, ವೇದಿಕೆಯ ಮೇಲೆ ವೈಯಕ್ತಿಕ ಟೀಕೆ, ಜಾತಿ ನಿಂದನೆ, ಏಕವಚನ ಪದ ಪ್ರಯೋಗಗಳಲ್ಲ. ಮೊದಲು ರಾಜಕಾರಣಿಗಳು ಇವುಗಳಿಂದ ಹೊರಬಂದು ಜನರಿಗೆ ಉಪಯುಕ್ತವಾದ ಮಾಹಿತಿ ನೀಡಬೇಕಿದೆ. ತನ್ನ ಮಾತು, ಸಂಸ್ಕಾರ, ನಡವಳಿಕೆಯನ್ನು ಉನ್ನತವಾಗಿಟ್ಟುಕೊಳ್ಳುವುದೇ ಒಬ್ಬ ರಾಜಕಾರಣಿಯ ಶ್ರೇಷ್ಠ ಗುಣ.
– ಹರಳಹಳ್ಳಿ ಪುಟ್ಟರಾಜು, ಪಾಂಡವಪುರ ತಾ.
ವನ್ಯಜೀವಿಗಳಿಗೆ ಕಂಟಕವಾದ ಉರುಳು
ಕಳೆದ ನವೆಂಬರ್ 12ರಂದು ನಾಗರಹೊಳೆ ವ್ಯಾಪ್ತಿಯ ತಾರಕ ಗಸ್ತಿನ ಬಳಿ ತಾಯಿ ಹುಲಿಯೊಂದು ಉರುಳಿಗೆ ಸಿಲುಕಿ ತನ್ನ ಮೂರು ಮರಿಗಳನ್ನು ಬಿಟ್ಟು ಸಾವನ್ನಪ್ಪಿದ ಪ್ರಕರಣ ಮಾಸುವ ಮುನ್ನವೇ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಉಪವಿಭಾಗದ ಕುಂದಕೆರೆ ವಲಯದ ಕೆಬ್ಬೇಪುರ ಗ್ರಾಮದಲ್ಲಿನ ಮಲ್ಲಯ್ಯನಕಟ್ಟೆ ಕೆರೆಯಲ್ಲಿ ಹುಲಿಯೊಂದರ ಕಳೇಬರ ಕುತ್ತಿಗೆ ಮತ್ತು ಕಾಲಿನ ಭಾಗಕ್ಕೆ ತಂತಿ ಸುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹುಲಿಯನ್ನು ಯಾರೋ ಸಾಯಿಸಿ ಬಳಿಕ ಅದಕ್ಕೆ ತಂತಿಯನ್ನು ಬಿಗಿದು ಕಲ್ಲುಕಟ್ಟಿ ಕೆರೆಯಲ್ಲಿ ಮುಳುಗಿಸಿರುವ ಶಂಕೆ ವ್ಯಕ್ತವಾಗಿದೆ.
ಉರುಳಿಗೆ ಸಿಲುಕಿ ಹುಲಿಗಳು ಸಾವನ್ನಪ್ಪಿರುವ ಪ್ರಕರಣಗಳು ದಶಕಗಳಿಂದ ಸಾಕಷ್ಟು ಕೇಳಿಬಂದಿವೆ. ಇದರೊಂದಿಗೆ ಚಿರತೆ, ಜಿಂಕೆ, ಮೊಲ, ಕಾಡುಹಂದಿಗಳಂತಹ ಪ್ರಾಣಿಗಳು ಕಳ್ಳಬೇಟೆಗಾರರ ಉರುಳಿಗೆ ಆಗಾಗ್ಗೆ ಬಲಿಯಾಗುತ್ತಲೇ ಇವೆ. ಇವುಗಳಿಗೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಶ್ರಮಿಸುತ್ತಿದ್ದರೂ ಉರುಳು ಪ್ರಕರಣವನ್ನು ಸಂಪೂರ್ಣ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮವಹಿಸಿ ಅರಣ್ಯದ ಸುತ್ತಲೂ ಉರುಳು ಪತ್ತೆ ಕಾರ್ಯಾಚರಣೆಯನ್ನು ಚುರುಕುಗೊಳಿಸಬೇಕಿದೆ. ಕಾಡಿನಿಂದ ಹೊರಬರುವ ಪ್ರಾಣಿಗಳು ಅದರಲ್ಲಿಯೂ ಹುಲಿಯಂತಹ ಪ್ರಾಣಿಗಳ ಮೇಲೆ ಸಂಪೂರ್ಣ ನಿಗಾವಹಿಸಿ ಅವುಗಳ ರಕ್ಷಣೆಗೆ ಜವಾಬ್ದಾರಿಯುತ ಕ್ರಮವಹಿಸಬೇಕಿದೆ. ಕಾಡಿನಿಂದ ಹೊರಬಂದ ಹುಲಿಗಳ ರಕ್ಷಣೆಗೆ ಮುಂದಾದರೆ ಅಲ್ಲಿನ ಸ್ಥಳೀಯರಿಗೂ ಹುಲಿಯಿಂದ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಬಹುದಾಗಿದೆ. ಇದರಿಂದ ಅರಣ್ಯ ಇಲಾಖೆಯ ಮೇಲೆಯೂ ಸ್ಥಳೀಯರಿಗೆ ವಿಶ್ವಾಸ ಬರಲಿದೆ. ಆದ್ದರಿಂದ ಇಲಾಖೆಯ ಸಿಬ್ಬಂದಿಗಳು ಆಯಾ ಬೀಟ್ಗಳ ಹೊರಭಾಗದಲ್ಲಿಯೂ ಉರುಳು ಪತ್ತೆ ಕಾರ್ಯಾಚರಣೆ ಮಾಡಬೇಕು. ಈ ವೇಳೆ ಹುಲಿ, ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾದಲ್ಲಿ ಕೂಡಲೇ ಕ್ರಮವಹಿಸಬೇಕು. ಆಗ ಮಾತ್ರ ಪ್ರಾಣಿಗಳಿಂದ ಮನುಷ್ಯನಿಗೆ ಹಾಗೂ ಮನುಷ್ಯನಿಂದ ಪ್ರಾಣಿಗಳಿಗೆ ಎದುರಾಗಬಹುದಾದ ಅಪಾಯಗಳನ್ನು ತಪ್ಪಿಸಬಹುದು.
–ಭೂಮಿಕ ಪೂಜಾರಿ, ಪತ್ರಿಕೋದ್ಯಮ ವಿಭಾಗ, ಮಾನಸಗಂಗೋತ್ರಿ, ಮೈಸೂರು
ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದ 106ನೇ ಘಟಿಕೋತ್ಸವವು ಜ.5ರಂದು ಬೆಳಿಗ್ಗೆ 11:30ಕ್ಕೆ ಕ್ರಾಫರ್ಡ್ ಭವನದಲ್ಲಿ ನಡೆಯಲಿದೆ. ಒಟ್ಟು 30,966 ವಿದ್ಯಾರ್ಥಿಗಳಿಗೆ…
ಬಳ್ಳಾರಿ : ಬಳ್ಳಾರಿಯಲ್ಲಿ ವಾಲ್ಮೀಕಿ ಬ್ಯಾನರ್ ಕಟ್ಟುವ ವಿಚಾರವಾಗಿ ಗುಂಪುಗಳ ನಡುವೆ ನಡೆದ ಮಾರಮಾರಿಯಲ್ಲಿ ವೇಳೆ ಗುಂಡು ತಗುಲಿ ಮೃತಪಟ್ಟಿದ್ದ…
ಕೊಳ್ಳೇಗಾಲ : ಸುಪ್ರಸಿದ್ಧ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯಲ್ಲಿ ಮೊದಲನೇ ದಿನವಾದ ಶನಿವಾರ ತಡರಾತ್ರಿ ಚಂದ್ರ ಮಂಡಲೋತ್ಸವದ ಮೂಲಕ ವಿದ್ಯುಕ್ತ ಚಾಲನೆ…
ಹೊಸದಿಲ್ಲಿ : ವೇಗ, ಸೌಲಭ್ಯ, ಆರಾಮಕ್ಕಾಗಿಯೇ ಜನಪ್ರಿಯವಾಗಿರುವ ವಂದೇ ಭಾರತ್ ಇದೀಗ ಸ್ಲೀಪರ್ ಆವೃತ್ತಿ ಮೂಲಕವೂ ಹಳಿಗಿಳಿಯಲು ಸಜ್ಜಾಗಿದೆ. ಪ್ರಯಾಣಿಕರ…
ರಾಯಚೂರು : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮ-ನರೇಗಾ) ಕಾಯ್ದೆಯನ್ನು ಹೊಸ ಹೆಸರಲ್ಲಿ ಹೊಸ ಕಾಯ್ದೆಯೆಂದು ಘೋಷಿಸಿರುವ…
ಕ್ಯಾರಕಾಸ್ : ವೆನೆಜುವೆಲಾ ಮೇಲಿನ ವೈಮಾನಿಕ ದಾಳಿ ಬಳಿಕ ಅಮೆರಿಕ ಪಡೆಗಳು ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು…