ಎಡಿಟೋರಿಯಲ್

ಆಂದೋಲನ ಓದುಗರ ಪತ್ರ: 12 ಗುರುವಾರ 2023

ಎಫ್‌ಡಿ ಬಡ್ಡಿದರ ಹೆಚ್ಚಳ ಸ್ವಾಗತಾರ್ಹ

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಜೀವನದಲ್ಲಿ ದುಡಿದ ಹಣದಲ್ಲಿ ಕುಟುಂಬ ನಿರ್ವಹಣೆಯ ಜೊತೆಗೆ ಉಳಿಸಿದ ಒಂದಿಷ್ಟು ಹಣವನ್ನು ಬ್ಯಾಂಕ್‌ನ ನಿಖರ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಖಾತೆಯಲ್ಲಿ ತಮ್ಮ ಜೀವನದ ಸಂಧ್ಯಾ ಸಮಯದಲ್ಲಿನ ಕಷ್ಟಗಳಿಗೆ ನೆರವಾಗಲಿ ಎಂಬ ಉದ್ದೇಶದಿಂದ ಉಳಿತಾಯ ಮಾಡಿರುತ್ತಾರೆ. ಇವರ ಎಫ್‌ಡಿ ಉಳಿತಾಯದ ಬಡ್ಡಿ ದರವನ್ನು ಪ್ರಸ್ತುತ ಹೆಚ್ಚಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಕೊರೊನಾ ಸಮಯದಲ್ಲಿ ಬ್ಯಾಂಕುಗಳು ಬಡ್ಡಿ ದರವನ್ನು ಶೇ.5.5 ಕ್ಕೆ ಇಳಿಸಿದ್ದವು. ಇದರಿಂದಾಗಿ ಬಡ್ಡಿಯ ಹಣವನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದವರಿಗೆ ಸಮಸ್ಯೆಯಾಗಿತ್ತು.ಆದರೆ 2022ರ ಹೊಸ ವರ್ಷದ ಉಡುಗೊರೆಯಾಗಿ ಬ್ಯಾಂಕುಗಳು ಬಡ್ಡಿಯ ದರವನ್ನು ಏರಿಕೆ ಮಾಡಿದ್ದು, ಹಿರಿಯ ನಾಗರಿಕರಿಗೆ ನೆಮ್ಮದಿ ತಂದಿದೆ. ವಿವಿಧ ಬ್ಯಾಂಕುಗಳಲ್ಲಿನ ಹಿರಿಯ ನಾಗರಿಕರ ನಿಖರ ಠೇವಣಿಯ ಬಡ್ಡಿದರದಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸವಿದ್ದರೂ ಬಡ್ಡಿಯ ದರ ಕಡಿಮೆಯಾಗಿಲ್ಲ. ಉದಾಹರಣೆಗೆ ಡಿಸಿಬಿಯಲ್ಲಿ ಶೇ.8.25, ಪಿಎನ್‌ಬಿ ಶೇ.8, ಐಡಿಎಫ್‌ಸಿ -ಸ್ಟ್ ಬ್ಯಾಂಕ್ ಶೇ.3-8 ಇಂಡಸ್ ಇಂಡ್ ಬ್ಯಾಂಕ್ ಶೇ.7.85, ಸೆಂಟ್ರಲ್ ಬ್ಯಾಂಕ್ ಶೇ.7.85 ಎಚ್‌ಡಿಎಫ್‌ಸಿ ಶೇ.7.75 ಆಕ್ಸಿಸ್ ಬ್ಯಾಂಕ್ ಶೇ.7.75, ಬ್ಯಾಂಕ್ ಆಫ್ ಬರೋಡಾ ಶೇ.7.75 ಎಸ್‌ಬಿಐನ ಬಡ್ಡಿದರ ಶೇ.7.75 ರಷ್ಟು ಹೆಚ್ಚಾಗಿರುವುದು ಹಿರಿಯ ನಾಗರಿಕರ ಪಾಲಿಗೆ ಸಂತಸದ ವಿಷಯವಾಗಿದೆ.ಈ ಬಡ್ಡಿದರ ಮುಂದೆ ಇಳಿಕೆಯಾಗದಂತೆ ಸ್ಥಿರತೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದುಕೊಳ್ಳಬೇಕಿದೆ.

ಆರ್.ಅಜಿತ್‌ಕುಮಾರ್, ಪತ್ರಿಕೋದ್ಯಮ ವಿಭಾಗ, ಮಹಾರಾಜ ಕಾಲೇಜು.


ಶ್ರೀ ಸಿದ್ದೇಶ್ವರ ಶ್ರೀಗಳಿಗೆ ನುಡಿ ನಮನ

‘ಶ್ರೀ’ ಶನಂತೆ ವಿಶ್ವವನೆಲ್ಲಾ ವ್ಯಾಪಿಸಿದವರು

‘ಸಿ’ ದ್ದೇಶ್ವರ ಯತಿಶ್ರೇಷ್ಠರೆನಿಸಿ ನಿಜ ಸಿ

‘ದ್ದೇ’ ಶ್ವರರಾಗಿ ಧರೆಗಿಳಿದು ಬಂದವರು

‘ಶ್ವ’ ಪಚರನ್ನೂ ಸಹ ತನ್ನವರೆಂದು ತಿಳಿದವರು

‘ರ’ ಜನೀಶನಂತೆ ಲೋಕಕ್ಕೆ ಆಹ್ಲಾದ ನೀಡಿದವರು

‘ಮ’ ಹಾಜ್ಞಾನ ಭಂಡಾರವೇ ಆಗಿದ್ದವರು

‘ಹಾ’ ತೊರೆಯದೆ ಲೌಕಿಕ ಭೋಗಕ್ಕೆ ಪಾರಮಾರ್ಥಕ್ಕೇರಿದವರು

‘ಸ್ವಾ’ ರ್ಥ ತೊರೆದು ನಿಸ್ವಾರ್ಥಿಯಾಗಿ ಬದುಕಿ ತೋರಿದವರು

‘ಮಿ’ ತಿಯಿಲ್ಲದೆಯೇ ಜ್ಞಾನದ ಬೆಳಕನ್ನು ಪಸರಿಸಿದವರು

‘ಯ’ ತಿ, ಯೋಗಿ, ಸಾಧು, ಸಂತ, ಜಂಗಮ, ವೇದಾಂತಿ ಎನಿಸಿದವರು

‘ವ’ ಚನ ಸಾಹಿತ್ಯ, ವೇದೋಪನಿಷತ್ತು, ಗೀತೆಯ ಮರ್ಮಗಳ ಅರ್ಥೈಸಿದವರು

‘ರು’ ದ್ರ ಮೆಚ್ಚುವಂದದಿ ಬದುಕಿ ಸ್ವರ್ಗಾರೋಹಣವೇರಿದವರು

ಎಸ್.ಪುಟ್ಟಪ್ಪ ಮುಡಿಗುಂಡ, ಮೈಸೂರು


ವಿದ್ಯುತ್ ನಿರ್ವಹಣೆ ಸಮರ್ಪಕವಾಗಿರಲಿ!

ಇತ್ತೀಚೆಗೆ ವಿವಿಧ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ತೀವ್ರಗೊಂಡಿದೆ. ಅದರಲ್ಲಿಯೂ ಬೇಸಿಗೆ ಆರಂಭವಾಗುತ್ತಿದ್ದಂತೆ ವಿದ್ಯುತ್ ಕ್ಷಾಮ ಉಲ್ಬಣಿಸುತ್ತದೆ. ಆದರೆ ಇದೇ ವೇಳೆ ಕೆಲ ಪ್ರದೇಶಗಳಲ್ಲಿ ವಿದ್ಯುತ್ ನಿರ್ವಹಣೆ ತೀರಾ ಹದಗೆಟ್ಟಿದ್ದು, ನಗರದ ವಿವಿಧ ಭಾಗಗಳೂ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿಯೂ ಬೀದಿಯ ಕಂಬಗಳಲ್ಲಿ ಹಗಲು ಹೊತ್ತಿನಲ್ಲೂ ವಿದ್ಯುತ್ ದೀಪ ಉರಿಯುತ್ತಿರುತ್ತದೆ. ಅದನ್ನು ನಂದಿಸುವವರು ಮಾತ್ರ ಯಾರೂ ಇರುವುದಿಲ್ಲ. ರಾತ್ರಿ ವೇಳೆ ಉರಿಯುವ ವಿದ್ಯುತ್ ಕಂಬಗಳಲ್ಲಿನ ವಿದ್ಯುತ್ ದೀಪವನ್ನು ಬೆಳಗಿನ ವೇಳೆ ಆರಿಸುವ ಸಮರ್ಪಕ ವ್ಯವಸ್ಥೆ ಬಹುತೇಕ ಭಾಗಗಳಲ್ಲಿ ಇಲ್ಲವಾಗಿದೆ. ಹೀಗಾಗಿ ಸಾಕಷ್ಟು ಕಡೆ ಹಗಲು ಹೊತ್ತಿನಲ್ಲೂ ಸಾರ್ವಜನಿಕವಾಗಿ ವಿದ್ಯುತ್ ದೀಪಗಳು ಉರಿಯುವುದರಿಂದ ವಿದ್ಯುತ್ ಪೋಲಾಗುತ್ತಿದ್ದು, ಇದರಿಂದಾಗಿ ವಿದ್ಯುತ್ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತಿದೆ. ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ರಾತ್ರಿವೇಳೆ ಮಾತ್ರ ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ಸಾರ್ವಜನಿಕ ವಿದ್ಯುತ್ ದೀಪಗಳನು ಬೆಳಗಿಸಿ, ಹಗಲುವೇಳೆ ಆರಿಸುವ ವ್ಯವಸ್ಥೆಯ ಬಗ್ಗೆ ಗಮನ ನೀಡಬೇಕಾಗಿದೆ. ಈ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ವಿದ್ಯುತ್ ಉಳಿತಾಯದ ಕಡೆ ಹೆಚ್ಚು ಗಮನ ಕೊಡುವುದು ಅವಶ್ಯವಾಗಿದೆ.

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.


ಮೆಟ್ರೋ ಕಾಮಗಾರಿಯಿಂದ ಹೋದ ಜೀವಗಳಿಗೆ ಹೊಣೆ ಯಾರು?

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ, ಅತಿ ಕಡಿಮೆ ಸಮಯದಲ್ಲಿ ವೇಗವಾಗಿ ಹೆಚ್ಚಿನ ದೂರವನ್ನು ತಲುಪಲು ಅವಕಾಶವಿದೆ ಎನ್ನುವುದಾದರೆ ಅದು ಮೆಟ್ರೋ. ಆದರೆ ಬೃಹತ್ ಬೆಂಗಳೂರಿನಲ್ಲಿ ಅತೀ ಹೆಚ್ಚು ಜನರಿಗೆ ಉಪಯೋಗವಿರುವ ಮೆಟ್ರೋ ಕಾಮಗಾರಿಯ ವಿಳಂಬ ಮತ್ತು ನಿರ್ಲಕ್ಷ್ಯತನದಿಂದ ಜಗತ್ತನ್ನೇ ನೋಡದ ಮಗು ಮತ್ತು ಮಗುವಿನ ತಾಯಿ ಮಂಗಳವಾರ ಬಲಿಯಾದ ದಾರುಣ ಘಟನೆ ನಡೆದಿದೆ. ಹೆಬ್ಬಾಳದ ಕೆ.ಆರ್.ಪುರಂ ಮಾರ್ಗದ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದ್ದು, ಪಿಲ್ಲರ್‌ಗಾಗಿ ಸಿದ್ಧಪಡಿಸುತ್ತಿದ್ದ ಕಬ್ಬಿಣದ ರಾಡುಗಳು ವಾಹನವೊಂದರಲ್ಲಿ ತೆರಳುತ್ತಿದ್ದ ಕುಟುಂಬದವರ ಮೇಲೆ ಬಿದ್ದು ತಾಯಿ ಮತ್ತು ಮಗು ಸಾವನ್ನಪ್ಪಿದರೆ, ತಂದೆ ಮತ್ತು ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂತ್ರಜ್ಞಾನ ಇಷ್ಟೆಲ್ಲ ಮುಂದುವರಿದಿದ್ದರೂ ಸೂಕ್ತ ಕ್ರಮವಹಿಸದೆ ಮೆಟ್ರೋ ಕಾಮಗಾರಿ ನಡೆಯುವ ವೇಳೆ ಈ ರೀತಿಯ ಅವಘಡಗಳು ಸಂಭವಿಸುತ್ತಿರುವುದಕ್ಕೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣ ಎನ್ನಬಹುದಾಗಿದೆ.ಸಂಬಂಧಪಟ್ಟ ಅಧಿಕಾರಿಗಳು ಮತ್ತು ಈ ಕಾಮಗಾರಿಯಲ್ಲಿ ನೇರವಾಗಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಂಡಾಗ ಮಾತ್ರ ಈ ರೀತಿಯ ಅವಘಡಗಳು ಮುಂದೆ ನಡೆಯದಂತೆ ತಪ್ಪಿಸಬಹುದು.

ಎಚ್.ಎಂ.ದಿವ್ಯಶ್ರೀ, ಪತ್ರಿಕೋದ್ಯಮ ವಿಭಾಗ, ಮಾನಸ ಗಂಗೋತ್ರಿ.

andolanait

Recent Posts

ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಂಡೀಪುರ-ನಾಗರಹೊಳೆ ಸಫಾರಿ ಆರಂಭಿಸಿ: ಸಿಎಂ ಡಿ.ಕೆ.ಶಿವಕುಮಾರ್‌ ಸೂಚನೆ

ಬೆಂಗಳೂರು: ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಂಡೀಪುರ ಹಾಗೂ ನಾಗರಹೊಳೆ ಉದ್ಯಾನಗಳಲ್ಲಿ ಸಫಾರಿ ಆರಂಭಿಸಿ ಎಂದು ಸಿಎಂ ಡಿ.ಕೆ.ಶಿವಕುಮಾರ್‌…

7 hours ago

ವೆನೆಜುವೆಲಾ ಭೂಕಂಪ: ಮೃತರ ಸಂಖ್ಯೆ 1700ಕ್ಕೆ ಏರಿಕೆ

ವೆನೆಜುವೆಲಾ: ಇಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 1700ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 5000ಕ್ಕೂ…

8 hours ago

ರಾಜಸ್ಥಾನದಲ್ಲಿ ಪ್ಯಾರಾಮೆಡಿಕಲ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ನಾಲ್ವರು ಅರೆಸ್ಟ್‌

ಜೈಪುರ: ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ಯಾರಾಮೆಡಿಕಲ್‌ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಯುತ್ತಿದ್ದ ವೇಳೆಯೇ ಪರೀಕ್ಷೆ ಹಾಲ್‌ ಮೇಲೆ ಪೊಲೀಸರು…

8 hours ago

ಎಸ್‌ಐಆರ್‌ ಬಗ್ಗೆ ಗಾಬರಿ ಬೇಡ: ಬಾನು ಮುಷ್ತಾಕ್‌

ಹಾಸನ: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಆರಂಭವಾಗಿದೆ. ಹಾಸನದಲ್ಲಿ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌…

9 hours ago

ನಾಡಿನ ಖ್ಯಾತ ಕಲಾವಿದ ಕೆ.ಟಿ.ಶಿವಪ್ರಸಾದ್‌ ನಿಧನ

ಬೆಂಗಳೂರು: ನಾಡಿನ ಖ್ಯಾತ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತ ‌ಕೆ.ಟಿ. ಶಿವಪ್ರಸಾದ್(77) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.…

9 hours ago

ಕೈಕೊಟ್ಟ ಮುಂಗಾರು: 126 ವರ್ಷಗಳಲ್ಲೇ ಮೂರನೇ ಬಾರಿ ದೇಶದಲ್ಲಿ ಮಳೆ ಕೊರತೆ

ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ಕಳೆದ 126 ವರ್ಷಗಳ ಇತಿಹಾಸದಲ್ಲೇ ಜೂನ್‌ ತಿಂಗಳಿನಲ್ಲಿ ಮೂರನೇ…

10 hours ago