ಎಡಿಟೋರಿಯಲ್

ಆಂದೋಲನ ಓದುಗರ ಪತ್ರ: 10 ಗುರುವಾರ 2022

ಗ್ರಹಣದ ವೈಜ್ಞಾನಿಕ ಕಾರಣ ತಿಳಿಸಿ

ಗ್ರಹಣದ ಬಗ್ಗೆ ವೈಜ್ಞಾನಿಕ ಕಾರಣಗಳನ್ನು ಶಾಲೆಯ ಪುಸ್ತಕದಲ್ಲಿ ನಾವು ಓದಿದ್ದೇವೆ. ನಮ್ಮ ದೇಶದಲ್ಲಿ ಗ್ರಹಣ ಕಾಣಿಸಿಕೊಂಡರೆ ಎಲ್ಲಾ ಸುದ್ದಿವಾಹಿನಿಗಳಲ್ಲಿ ಜೋತಿಷ್ಯ ಶಾಸ್ತ್ರ ತಿಳಿಸುತ್ತಾ ಗ್ರಹಣ ಗ್ರಹಚಾರ ಎಂದು ಜನರಲ್ಲಿ ಭೀತಿ ಹುಟ್ಟಿಸುತ್ತಾರೆ. ಕೆಲ ಪೋಷಕರು ಜೋತಿಷ್ಯ ಶಾಸ್ತ್ರವನ್ನು ನಂಬಿ ಮಕ್ಕಳಿಗೆ ತಲೆ ತುಂಬತ್ತಾರೆ. ಇದರಿಂದ ಜನರು ಮೂಢ ನಂಬಿಕೆಗಳಿಗೆ ಬಲಿಯಾಗಿ ಅನೇಕ ಆಚರಣೆ ಮಾಡಿ ತೊಂದರೆಗೆ ಒಳಪಟ್ಟಿರುತ್ತಾರೆ. ಆದ್ದರಿಂದ ಎಲ್ಲಾ ಸುದ್ದಿವಾಹಿನಿಗಳು ವಿಜ್ಞಾನಿಗಳನ್ನು ಕರೆಸಿ ಗ್ರಹಣ ಕುರಿತು ವೈಜ್ಞಾನಿಕ ಮಾಹಿತಿ ನೀಡಲಿ. ಇದರಿಂದ ನಮ್ಮಂತಹ ಮಕ್ಕಳು ಜ್ಞಾನವಂತರಾಗಿ ಬೆಳೆಯಲು ಸಹಕಾರವಾಗುತ್ತದೆ. ಮುಂದೆ ವಿಜ್ಞಾನಿಗಳಾಗಿ ದೇಶಕ್ಕೆ ಉತ್ತಮ ಕೊಡುಗೆ ನೀಡುವ ಪ್ರಜೆಗಳಾಗುತ್ತೇವೆ.

ಎಂ.ಎಸ್.ಇಂಚರದತ್, ೯ನೇ ತರಗತಿ, ದೂರವಾಣಿ ನಗರ, ಮೈಸೂರು.


ಶಿಕ್ಷಣ ವ್ಯಾಪಾರವಲ್ಲ!

ಉನ್ನತ ಶಿಕ್ಷಣ ಎನ್ನುವುದು ಹಣ ಇದ್ದವರಿಗೆ ಮಾತ್ರ ಎನ್ನುವಂತಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಒಬ್ಬ ಮನುಷ್ಯನಿಗೂ ಆರೋಗ್ಯ, ಶಿಕ್ಷಣ, ಮತ್ತು ವಸತಿ ಕಲ್ಪಿಸಿ ಕೊಡಬೇಕಾದದ್ದು ಆಡಳಿತ ನಡೆಸುವ ಸರ್ಕಾರದ ಧರ್ಮ. ಆದರೆ ಪ್ರಸ್ತುತ ದಿನಗಳಲ್ಲಿ ಆರೋಗ್ಯ ತಪಾಸಣೆ, ಶಿಕ್ಷಣ, ವಸತಿ ಹಣ ಉಳ್ಳವರಿಗೆ ಮಾತ್ರ ಎನ್ನುವಂತಾಗಿದ್ದೆ. ಇಂತಹ ಪ್ರಸ್ತುತ ದಿನಗಳಲ್ಲಿ ಎಂಬಿಬಿಎಸ್ ಶಿಕ್ಷಣ ಬೋಧನಾ ಶುಲ್ಕವನ್ನು ೭ ಲಕ್ಷ ರೂಪಾಯಿಗಳಿಂದ ೨೪ ಲಕ್ಷ ರೂಪಾಯಿಗಳಿಗೆ ಏರಿಸಿರುವ ಆಂಧ್ರಪ್ರದೇಶ ಸರ್ಕಾರದ ಕ್ರಮ ಅಸಮರ್ಥನೀಯ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಷಾ ಮತ್ತು ಸುಧಾಂಶು ಧುಲಿಯಾ ಅವರು ಹೇಳಿರುವುದು ಗಮನಾರ್ಹ. ಶಿಕ್ಷಣ ಲಾಭ ಮಾಡುವ ವ್ಯಾಪಾರವಲ್ಲ ಬೋಧನಾ ಶುಲ್ಕ ಕೈಗೆಟುಕುವಂತಿರಬೇಕು ಎಂದು ಹೇಳಿ, ಆಂಧ್ರ ಸರ್ಕಾರ ನಿರ್ಧಾರವನ್ನು ತಳ್ಳಿಹಾಕಿದ ಆಂಧ್ರ ಪ್ರದೇಶದ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿರುವುದು ಸ್ವಾಗತಾರ್ಹ.

ಕಂಗಾಣಿಸೋಮು ಪಿ ಸಿ, ಕ್ಯಾತಮಾರನಹಳ್ಳಿ, ಮೈಸೂರು.


ಮೀಸಲಾತಿ ಗೊಂದಲ?

ಮೀಸಲಾತಿ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಕೆಲವರು ಸ್ವಾಗತಿಸಿದ್ದಾರೆ. ಕೆಲವರು ಸಂವಿಧಾನದ ಆಶಯಕ್ಕೆ ಧಕ್ಕೆ ಎಂದಿದ್ದಾರೆ. ಆರ್ಥಿಕವಾಗಿ ದುರ್ಬಲರಾದವರಿಗೆ ಶೇ.೧೦ರಷ್ಟು ಮೀಸಲಾತಿ ನೀಡಿರುವುದು ಇಂದಿರಾ ಸಹನಿ ಪ್ರಕರಣದಂತೆ ಭಿನ್ನವಾಗಿದೆ. ಆರ್ಥಿಕ ಸ್ಥಿತಿ ಕಲಾನುಕ್ರಮದಂತೆ ಬದಲಾಗುತ್ತಾ ಹೋಗುತ್ತದೆ, ಅದರ ಅನ್ವಯದಂತೆ ಮೀಸಲಾತಿ ನೀಡಿದ್ದು ಸ್ವಲ್ಪ ಮಟ್ಟಿಗೆ ಗೊಂದಲ ಸೃಷ್ಟಿಸಿದೆ. ಸಾಮಾಜಿಕ ಹಾಗೂ ಶೈಕ್ಷಣಿಕ ದುರ್ಬಲರಿಗೆ ಮೀಸಲಾತಿ ಎಂದು ಸ್ಪಷ್ಟವಾಗಿ ಇಂದಿರಾ ಸಹನಿ ಪ್ರಕರಣದಲ್ಲಿ ಉಲ್ಲೇಖವಾಗಿದೆ . ಆದರೆ ಈಗಿನ ತೀರ್ಪು ಇನ್ನಷ್ಟು ಅಸಮಾನತೆಗೆ ಪುಷ್ಟೀಕರಿಸಿದಂತೆ ಅಲ್ಲವೇ? ಈ ನಿಟ್ಟಿನಲ್ಲಿ ಮತ್ತೊಮ್ಮೆ ಈ ಪ್ರಕರಣದ ರೂಪರೇಷೆಗಳ ಅಲೋಚಿಸಲಿ. ಸರ್ಕಾರವು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಮೀಸಲಾತಿ ಜಾರಿ ಮಾಡಲಿ.

-ಸಾಗರ್ ದ್ರಾವಿಡ್, ಹಿರಿಯೂರು.


ರಾಜ್ಯೋತ್ಸವ ಪ್ರಶಸ್ತಿ

ಕನ್ನಡದ ಮೇಷ್ಟ್ರು ಪ್ರೊ. ಕೃಷ್ಣೇಗೌಡರು ಅವರ ಪ್ರತಿ ಹಂತದ ಬೆಳವಣಿಗೆಗೆ ಕನ್ನಡವೇ ಕಾರಣ ಎಂದು ಹೇಳುತ್ತಲೇ ಇರುತ್ತಾರೆ. ಕನ್ನಡ ನನಗೆ ಸರ್ವಸ್ವವನ್ನು ನೀಡಿದೆ ಎಂದು ಹೇಳುವ ಮಾತನ್ನು ಮೆಚ್ಚಲೇಬೇಕು. ಕನ್ನಡದ ಬಳಕೆಯ ಬಗ್ಗೆ ಅವರಿಗೆ ಇರುವ ಪ್ರೀತಿ ಅಪಾರವಾದದ್ದು. ಈ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವುದು ಸ್ವಾಗತಾರ್ಹ ಮತ್ತು ತುಂಬಾ ಸಂತೋಷದ ವಿಷಯ.

ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.


ಹೆಚ್ಚಿನ ಬೆಂಬಲ ಬೆಲೆ ನೀಡಿ

ಕಬ್ಬಿಗೆ ಹೆಚ್ಚಿನ ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಿ ರೈತರು ಒಂಭತ್ತು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಲೀ ಧರಣಿ ನಿರತರ ಸಮಸ್ಯೆ ಆಲಿಸುವ ಸೌಜನ್ಯ ತೋರಿಸದೇ ಇರುವುದು ಉತ್ತಮ ನಡವಳಿಕೆ ಅಲ್ಲ. ಅನ್ನದಾತರಾದ ರೈತರ ಸಮಸ್ಯೆ ಬಗೆಹರಿಸದ ಸರ್ಕಾರ, ಬೇರೆ ಯಾರ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ? ಕೂಡಲೇ ಸರ್ಕಾರ ಧರಣಿ ನಿರತರ ಬೇಡಿಕೆಯನ್ನು ಪರಿಶೀಲಿಸಿ ಈಡೇರಿಸಬೇಕು.

-ಶಿವಕುಮಾರ ಎಸ್, ಮಹಾರಾಜ ಕಾಲೇಜು, ಮೈಸೂರು.

andolanait

Recent Posts

ಮೈಸೂರು | ವಿವಿಧೆಡೆ ವಿಷ್ಣುವರ್ಧನ್‌ ಅವರ ಪುಣ್ಯ ಸ್ಮರಣೆ

ಮೈಸೂರು : ಕರ್ನಾಟಕ ರತ್ನ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ 16 ನೇ ವರ್ಷದ ಸ್ಮರಣೆಯನ್ನು ನಗರದ ವಿವಿಧೆಡೆ ವಿಷ್ಣುವರ್ಧನ್…

45 mins ago

ಉತ್ತರಾಖಂಡದ ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್:‌ 7 ಮಂದಿ ಪ್ರಯಾಣಿಕರು ಸಾವು

ಉತ್ತರಾಖಂಡ: ಇಲ್ಲಿನ ಅಲ್ಮೋರಾದ ಭಿಕಿಯಾಸೈನ್‌ ಪ್ರದೇಶದಲ್ಲಿ ಪ್ರಯಾಣಿಕರಿದ್ದ ಬಸ್‌ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದು, 12 ಮಂದಿ…

2 hours ago

ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್‌ ವಾದ್ರಾ ನಿಶ್ಚಿತಾರ್ಥ

ನವದೆಹಲಿ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಹಾಗೂ ಉದ್ಯಮಿ ರಾಬರ್ಟ್‌ ವಾದ್ರಾ ಪುತ್ರ ರೈಹಾನ್‌ ವಾದ್ರಾ ತಮ್ಮ ಬಹುಕಾಲದ ಗೆಳತಿ…

2 hours ago

ಬಂಗಾಳದಲ್ಲಿ ಬಿಜೆಪಿಗೆ ಒಂದು ಅವಕಾಶ ಕೊಡಿ: ಅಮಿತ್‌ ಶಾ ಮನವಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಲು ಬಿಜೆಪಿಗೆ ಒಂದು ಅವಕಾಶ ಕೊಡಿ. ಭಯ, ಭ್ರಷ್ಟಾಚಾರ ಹಾಗೂ ದುರಾಡಳಿತವನ್ನು ಉತ್ತಮ ಆಡಳಿತದೊಂದಿಗೆ…

2 hours ago

ಕರ್ನಾಟಕದಲ್ಲೂ ಎಸ್‌ಐಆರ್‌ ಜಾರಿ ಆಗಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹ

ಬೆಂಗಳೂರು: ದೇಶದಾದ್ಯಂತ ಕೇಂದ್ರ ಚುನಾವಣಾ ಆಯೋಗ ಕೈಗೆತ್ತಿಕೊಂಡಿರುವ ವಿಶೇಷ ಮತದಾರರ ಪರಿಷ್ಕರಣೆ (ಎಸ್‌ಐಆರ್)ಯನ್ನು ಕರ್ನಾಟಕದಲ್ಲೂ ನಡೆಸಬೇಕೆಂದು ಕೇಂದ್ರ ಸಚಿವೆ ಶೋಭಾ…

3 hours ago

ಹುಣಸೂರು: ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌

ಹುಣಸೂರು: ಮೈಸೂರು ಜಿಲ್ಲೆ ಹುಣಸೂರು ಪಟ್ಟಣದಲ್ಲಿ ನಡೆದ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಇದೀಗ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಮಾಹಿತಿ ಪ್ರಕಾರ…

4 hours ago