ಓದುಗರ ಪತ್ರ
ಗುರವೇ ನಮಃ!
ಸಾವಿನಲ್ಲೂ ಸಾರ್ಥಕತೆ ಮೆರೆದ ಶಿಕ್ಷಕಿ (ಆಂ.ಸುದ್ದಿ,ಅ.೧೨)
ಅಂಗಾಂಗ ದಾನ ಮಾಡಿ
ಏಳೆಂಟು
ಮಂದಿಯ ಬಾಳಿಗೆ
’ಆಶಾ’ದೀಪವಾದರು
ಸಂಕಟದಲ್ಲಿರುವ ವಿದ್ಯಾರ್ಥಿಗಳಿಗೆ
‘ ವೆಂಕಟರಮಣ’ನಂತಾಗಿದ್ದಾರೆ!
ಸಿದ್ದಯ್ಯನಪುರದ ಶಿಕ್ಷಕ ನಾರಾಯಣ!
ಗುರುಗಳ ಉದಾರ ಗುಣಕೆ
ಹೇಳೋಣ ನಮೋ ನಮಃ
–ಮ ಗು ಬಸವಣ್ಣ, ಜೆಎಸ್ಎಸ್ ಸಂಸ್ಥೆ, ಸುತ್ತೂರು.
ಯಾತ್ರೆಗಳ ಜಾತ್ರೆ
ರಾಜ್ಯದಲ್ಲೀಗ ಯಾತ್ರೆಗಳ ಜಾತ್ರೆಯೇ ನಡೆಯುತ್ತಿದೆ. ಒಂದು ಕಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಪಾದಯಾತ್ರೆ ಮೂಲಕ ಯಾತ್ರೆ ಮುಂದುವರೆದಿದೆ. ಈಗ ಆಡಳಿತಾರೂಢ ಬಿಜೆಪಿ ನಾಯಕರು ರಾಯಚೂರಿನಿಂದ ಜನಸಂಕಲ್ಪ ಯಾತ್ರೆ ಆರಂಭಿಸಿದ್ದಾರೆ. ಯಾತ್ರೆಗಳ ಉದ್ದೇಶ ಜನರ ಉದ್ದಾರಕ್ಕಾಗಿಯೇ ಇರಬಹುದು. ಆದರೆ, ಚುನಾವಣೆ ಸಮೀಪಿಸುತ್ತಿರುವುದರಿಂದ ಯಾತ್ರೆಗಳನ್ನು ಮತಗಳಿಕೆಗಾಗಿ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಬರುತ್ತದೆ. ಏರಿರುವ ಬೆಲೆ ಇಳಿದರೆ, ಜನರಿಗೆ ನೆಮ್ಮದಿ. ಆಡಳಿತಾರೂಢ ಪಕ್ಷವು ತೆರಿಗೆಗಳನ್ನು ಕಡಿತ ಮಾಡಿ ಏರಿರುವ ಬೆಲೆಯನ್ನು ಇಳಿಸುವ ಮೂಲಕ ಜನಸಂಕಲ್ಪ ಮಾಡಿದರೆ ಒಳಿತು. ಆಗ ಯಾತ್ರೆಯನ್ನು ಯಾರೂ ಅನುಮಾನದಿಂದ ನೋಡುವುದಿಲ್ಲ.
–ನಂದಕುಮಾರ್, ಸರಸ್ವತಿ ಪುರಂ, ಮೈಸೂರು.
ಬೇಲಿಯೇ ಎದ್ದು ಹೊಲ ಮೇಯ್ದರೆ?
ಕಂಪೆನಿಯೊಂದರ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರಿಗೆ ಖಾತೆ ಮಾಡಿ ವಂಚಿಸಿರುವ ಪ್ರಕರಣದಲ್ಲಿ ತಹಶೀಲ್ದಾರ್, ರೆವಿನ್ಯೂ ಇನ್ಸ್ಪೆಕ್ಟರ್, ಗ್ರಾಮ ಲೆಕ್ಕಿಗ ಸೇರಿದಂತೆ ಐವರ ವಿರುದ್ಧ ದೂರು ದಾಖಲಾಗಿರುವ ಸುದ್ದಿ ಓದಿ ಅಚ್ಚರಿಯೇನೂ ಆಗಲಿಲ್ಲ. ಬೇಲಿಯೇ ಎದ್ದು ಹೊಲ ಮೇಯುವುದಿಲ್ಲಿ ಸಾಮಾನ್ಯವಾಗಿಬಿಟ್ಟಿದೆ. ನಕಲಿ ದಾಖಲೆ ಸೃಷ್ಟಿಸಿ ಆಸ್ತಿಯನ್ನು ಪರಭಾರೆ ಮಾಡುವ ಅಕ್ರಮ ವ್ಯವಹಾರಗಳಲ್ಲಿ ತಹಶೀಲ್ದಾರ್, ರೆವಿನ್ಯೂ ಇನ್ಸ್ಪೆಕ್ಟರ್, ಗ್ರಾಮಲೆಕ್ಕಗರು ಸೇರಿದಂತೆ ಕಂದಾಯ ಇಲಾಖೆಯವರ ಪಾತ್ರ ದೊಡ್ಡದು. ಅವರಿಗೆ ನಕಲಿ ಯಾವುದು ಅಸಲಿ ಯಾವುದು ಗೊತ್ತಿರುತ್ತದೆ. ಗೊತ್ತಿದ್ದೇ ಅಕ್ರಮ ವ್ಯವಹಾರ ಮಾಡುತ್ತಾರೆ. ಕೆಲವು ಪ್ರಕರಣಗಳಲ್ಲಿ ಸಿಕ್ಕಿ ಬೀಳುತ್ತಾರೆ. ಸರ್ಕಾರಿ ಭೂಮಿಗಳನ್ನು ಪರಭಾರೆ ಮಾಡಿದ ಪ್ರಕರಣಗಳಲ್ಲಿ ಸಿಕ್ಕಿ ಬೀಳುವುದು ಅಪರೂಪ. ಏನೇ ಆಗಲಿ, ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಆಗಮಾತ್ರ ಬೇಲಿಯೇ ಎದ್ದು ಹೊಲ ಮೇಯುವುದು ನಿಲ್ಲುತ್ತದೆ.
-ಚಂದ್ರಶೇಖರ್, ತಿಲಕ್ ನಗರ, ಮೈಸೂರು.
ಶುಚಿಪ್ಯಾಡ್ ವಿತರಣೆ ನಿಲ್ಲಿಸಿದ್ದೇಕೆ?
ಹಿಂದಿನ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಅನೇಕ ಸೌಲಭ್ಯಗಳು ದೊರಕುತ್ತಿದ್ದವು. ಮಹಿಳೆಯರ ಶುಚಿತ್ವಕ್ಕಾಗಿ ಸ್ಯಾನಿಟರಿ ಪ್ಯಾಡ್ಗಳನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ವಿತರಿಸಲಾಗುತ್ತಿತ್ತು. ಕೋವಿಡ್ ನಂತರದಲ್ಲಿ ಸ್ಯಾನಿಟರಿ ಪ್ಯಾಡ್ ಗಳನ್ನು ವಿತರಿಸುತ್ತಿಲ್ಲ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳು, ಮಹಿಳೆಯರಿಗೆ ಅನನಕೂಲವಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಿ ತ್ವರಿತವಾಗಿ ಕ್ರಮಕೈಗೊಳ್ಳಬೇಕು.
– ನಾಗೇಶ್, ಮಾನಸಗಂಗೋತ್ರಿ, ಮೈಸೂರು.
ಶಾಲೆಗಳು ಮಕ್ಕಳ ದಸರಾ ರಜೆ ಕಡಿತ!
ರಾಜ್ಯಸರ್ಕಾರ ಈ ಬಾರಿಯ ೨೦೨೨-೨೩ ರ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕಾ ವರ್ಷವನ್ನಾಗಿ ಆಚರಿಸುತ್ತಿದೆ. ಈ ಕಾರಣದಿಂದಾಗಿಯೇ ಈ ಹಿಂದೆ ಇದ್ದಂತಹ ಒಂದು ತಿಂಗಳ ದಸರಾ ರಜೆಯನ್ನು ೧೪ ದಿನಗಳಿಗೆ ಕಡಿತಗೊಳಿಸಿ ಮಕ್ಕಳ ಕಲಿಕೆಗೆ ಹೆಚ್ಚು ಒತ್ತನ್ನು ಸರ್ಕಾರ ನೀಡಿದೆ. ಆದರೆ ಕೆಲವು ಖಾಸಗಿ ಶಾಲೆಗಳು ಸರ್ಕಾರ ನೀಡಿರುವ ೧೪ ದಿನಗಳ ದಸರಾ ರಜೆಯನ್ನು ಸಹ ಕಡಿತಗೊಳಿಸಿ, ಮಕ್ಕಳಿಗೆ ಕೇವಲ ಏಳೆಂಟು ದಿನಗಳಷ್ಟೇ ದಸರಾ ರಜೆಯನ್ನು ನೀಡಿ ಈಗಾಗಲೇ ಶಾಲೆಗಳನ್ನು ಪುನರಾರಂಭಿಸಿವೆ.
ರಾಜ್ಯಸರ್ಕಾರ ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುವಂತೆ ಅಕ್ಟೋಬರ್ ೩ ರಿಂದ ೧೬ ರವರೆಗೆ ಅಂದರೆ ೧೪ ದಿನಗಳ ದಸರಾ ರಜೆಯನ್ನು ನೀಡಿ, ಅಕ್ಟೋಬರ್ ೧೭ರಿಂದ ಶಾಲೆಗಳನ್ನು ಪುನರಾರಂಭಿಸುವಂತೆ ಸೂಚಿಸಿದೆ. ಆದರೆ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ನಿಯಮವನ್ನು ಗಾಳಿಗೆ ತೂರಿ, ಮಕ್ಕಳಿಗೆ ಕೊಟ್ಟಿರುವ ದಸರಾರಜೆಯನ್ನು ಕಡಿತಗೊಳಿಸಿ ಈಗಾಗಲೇ ಶಾಲೆಗಳನ್ನು ಒಂದು ವಾರ ಮುಂಚಿತವಾಗಿಯೇ ಆರಂಭಿಸಿವೆ!
ಸರ್ಕಾರ ನೀಡಿರುವ ೧೪ ದಿನಗಳ ದಸರಾ ರಜೆಯನ್ನು ಮೊಟುಕುಗೊಳಿಸಿ ಒಂದು ವಾರ ಮುಂಚಿತವಾಗಿ ಶಾಲೆಗಳನ್ನು ಆರಂಭಿಸಿರುವುದು ಮಕ್ಕಳ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತಾಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಲಿ.
-ಹರಳಹಳ್ಳಿಪುಟ್ಟರಾಜು, ಪಾಂಡವಪುರ.
ಮಹಾದೇಶ್ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಬಾಲಕನ…
ಮಡಿಕೇರಿ: ಕೊಡಗು ಜಿಲ್ಲೆಯ ಸೈಬರ್ ಕ್ರೈಂ ಪೊಲೀಸರು ಒಂದು ತಿಂಗಳ ಕಾಲ ಕ್ಷಿಪ್ರ ಕಾರ್ಯಾಚರಣೆ ಮಾಡುವ ಮೂಲಕ ನಾಗರಿಕರು ಕಳೆದುಕೊಂಡ…
ಎಚ್.ಡಿ.ಕೋಟೆ: ಮಾದಾಪುರ ಗ್ರಾಮದ ಚಂದ್ರಮೌಳೇಶ್ವರ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಪ್ರಯುಕ್ತ ಅರಣ್ಯ ಮತ್ತು…
ಮಂಡ್ಯ: ಕಾಯಕ ಶರಣರು ಸಮಾಜಕ್ಕೆ ವಚನಗಳ ಮೂಲಕ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಯುವ ಜನತೆಯೂ ಕಾಯಕ ಶರಣರ ಆದರ್ಶ, ಮೌಲ್ಯಗಳನ್ನು…
ಮಂಡ್ಯ: ಪ್ರಸ್ತುತ ಕಾಲದಲ್ಲಿ ಮಕ್ಕಳು ಅಂತರ್ಜಾಲ ಬಳಕೆಯನ್ನು ಹೆಚ್ಚು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿದ್ದಾರೆ ಇದರಿಂದ ಮಕ್ಕಳ ಮನಸ್ಥಿತಿ…
ಮಂಡ್ಯ: ಪೌತಿ ಖಾತೆ ಪ್ರಕ್ರಿಯೆಯನ್ನು ಮಂಡ್ಯ ಜಿಲ್ಲೆಯು ಈ ಪೌತಿ ಖಾತೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಈ ಪೌತಿ ಖಾತೆಯನ್ನು…