ಏನಿರಬಹುದು ಕಾರಣ?!
ಅಬ್ಬಾ, ಆ ಜನಸಾಗರದ ನಡುವೆ
ಸಾಗಿತು
ಅದ್ಧೂರಿ ಜಂಬೂಸವಾರಿ
750 ಕೆ.ಜಿ. ತೂಕದ ಅಂಬಾರಿ
ಹೊತ್ತ ಮೂರನೇ ಬಾರಿ
ಅಭಿಮನ್ಯು,
ಎಲ್ಲೂ ಮಾಡಲಿಲ್ಲ
ಕಿರಿ ಕಿರಿ
ಏನಿರಬಹುದು ಕಾರಣ ?!
ಜೊತೆ ಜೊತೆಯಲೇ
ಇದ್ದರು
ಈರ್ವರು ಅಕ್ಕ ಪಕ್ಕ
ಕರಿ- ಸುಂದರಿಯರು
ಚೈತ್ರ-ಕಾವೇರಿ !!
-ಮ ಗು ಬಸವಣ್ಣ, ಜೆಎಸ್ಎಸ್ ಸಂಸ್ಥೆ, ಸುತ್ತೂರು.
ಅದ್ಧೂರಿ ದಸರಾ ‘ಪಾಸು’ಆಯ್ತೆ?
ರಾಜಪಥದಲ್ಲಿ ಗಜಗಾಂಭೀರ್ಯದಿಂದ ವಿದ್ಯುತ್ ಬೆಳಕಿನಡಿ ಸಾಗಿದ ಅದ್ಧೂರಿ ದಸರಾವನ್ನು ರಸ್ತೆಯುದ್ದಕ್ಕೂ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಸೇರಿದ್ದ ಜನರು ಕಣ್ತುಂಬಿಕೊಂಡು ಪುಳಕಿತಗೊಂಡರು, ಚಾಮುಂಡೇಶ್ವರಿ ಎಲ್ಲರಿಗೂ ದರ್ಶನ ನೀಡಿ ಆಶೀರ್ವದಿಸಿದಳು. ಅವರ್ಯಾರಿಗೂ ಜಿಲ್ಲಾಡಳಿತ ಮುದ್ರಿಸುವ ಪಾಸುಗಳ ಬಗ್ಗೆ ಚಿಂತೆ ಇರಲಿಲ್ಲ. ಆದರೆ ಚುನಾಯಿತ ಜನಪ್ರತಿನಿಧಿಗಳ ಕೂಗು ಒಂದೇ.. ನಮಗೆ ಹೆಚ್ಚು ಪಾಸುಗಳನ್ನು ಕೊಡಲಿಲ್ಲ ಎಂಬುದು. ಪ್ರತೀ ದಸರಾದಲ್ಲೂ ಪಾಸುಗಳನ್ನು ನೀಡುವಲ್ಲಿ ಆಗುವ ತಾರತಮ್ಯದ ಜಟಾಪಟಿ ಗಜಕಾಳಗದಂತಿರುತ್ತದೆ. ಮೊದಲು ಬಂದವರಿಗೆ ಮೊದಲ ಆದ್ಯತೆಯ ನಿಯಮದಂತೆ ಪಾಸು ರಹಿತವಾಗಿ ಸಾರ್ವಜನಿಕ ದಸರಾ ಮಾಡಿದರೆ ಒಳಿತಲ್ಲವೆ? ದಸರಾ ಹಬ್ಬದಲ್ಲಿ ಯಾವಾಗಲೂ ಕಪ್ಪುಚುಕ್ಕೆಯಾಗಿ ಕಾಡುವ ಪ್ರವೇಶಪಾಸುಗಳನ್ನು ಕೈಬಿಡಬಾರದೇಕೆ? ಜಿಲ್ಲೆಯ ಸಂಸದರು, ಶಾಸಕರು ಮತ್ತು ನಗರಪಾಲಿಕೆ ಸದಸ್ಯರನ್ನು ಹೊರತುಪಡಿಸಿ ಎಲ್ಲರೂ ಒಂದೇ ಎಂದು ಪರಿಗಣಿಸಿ, ಇದರಿಂದ ಸ್ವಪಕ್ಷಿಯರಿಂದಲೇ ಉದಭವಿಸುವ ಪ್ರತಿಭಟನೆಗಳಿಗೆ ಆಸ್ಪದ ಇರುವುದಿಲ್ಲ. ಜನಪ್ರತಿನಿಧಿಗಳು ಭಿನ್ನಾಭಿಪ್ರಾಯ ಇಲ್ಲದೆ ಸ್ವಚ್ಛ ಮನಸ್ಸಿನಿಂದ ಭಾಗವಹಿಸಿ ನಿರಾತಂಕವಾಗಿ ದಸರಾ ನಡೆಯುವಂತೆ ಕಟ್ಟನಿಟ್ಟಿನ ನಿಯಮ ಜಾರಿಯಾಗಲಿ.
-ಮಿರ್ಲೆ ಚಂದ್ರಶೇಖರ, ಲೇಖಕರು, ಮೈಸೂರು.
ರಾಸುಗಳ ಆಹಾರ ಕಸದ ರಾಶಿಗೆ ಸೇರಿಬಿಟ್ಟಿತು
ಆಯುಧ ಪೂಜೆಗೆಂದು ಮಾರಾಟ ಮಾಡಲು ತಂದು ಉಳಿದ ಬೂದುಗುಂಬಳ ಮತ್ತು ಬಾಳೆ ಕಂದುಗಳನ್ನು ರಸ್ತೆ ಬದಿಯಲ್ಲಿಯೇ ಬಿಟ್ಟು ಹೋಗುತ್ತಿದ್ದರು. ಅದನ್ನು ಗಮನಿಸಿದ್ದ ನಾನು ಕೆಲ ಸಮಾನ ಮನಸ್ಕ ವಕೀಲರುಗಳು ಮತ್ತು ಮೈಸೂರಿನ ಪಿಂಜರಾಪೋಲ್ನ ಆಡಳಿತ ಮಂಡಳಿಯ ಸದಸ್ಯರೊಡಗೂಡಿ ಸಂಗ್ರಹಿಸಿ ಪಿಂಜರಾಪೋಲ್ನ ಅಶಕ್ತ ರಾಸುಗಳಿಗೆಂದು ಕಳೆದ ವರ್ಷ ಸಾಗಿಸಿದ್ದೆವು. ಅದೇ ಕಾರ್ಯವನ್ನು ಮುಂದುವರೆಸುವ ಉದ್ದೇಶದಿಂದ ಈ ಬಾರಿ ಇನ್ನೂ ಹೆಚ್ಚಿನ ತಯಾರಿಯೊಡನೆ ಮಂಗಳವಾರ ಸಂಜೆ ಬೀದಿಗಿಳಿದೆವು. ಆದರೆ ದುರದೃಷ್ಟಕ್ಕೆ ನಗರಪಾಲಿಕೆಯ ಸಿಬ್ಬಂದಿ ರಾಸುಗಳ ಆಹಾರವಾಗಬಲ್ಲ ಕುಂಬಳ ಮತ್ತು ಬಾಳೆಕಂದುಗಳನ್ನು ಕಸದ ರಾಶಿಗೆ ಸೇರಿಸಿ ಸಾಗಿಸಿಬಿಟ್ಟಿದ್ದರು. ಇದರಲ್ಲಿ ಸಿಬ್ಬಂದಿಯ ತಪ್ಪಿಲ್ಲ. ಮರುದಿನ ದಸರಾಗೆ ಅಧಿಕ ಜನ ಸೇರುವ ಕಾರಣ ತುರ್ತಾಗಿ ಸ್ವಚ್ಛತಾ ಕಾರ್ಯ ನಿರ್ವಹಿಸಿದ ಪಾಲಿಕೆಯ ಕಾರ್ಯ ಶ್ಲಾಘನೀಯವೇ, ಆದರೆ ಅನ್ಯಾಯವಾಗಿ ಬೆಲೆ ಬಾಳುವ ರಾಸಿನ ಆಹಾರ ಕಸದ ರಾಶಿ ಸೇರಿತಲ್ಲ ಎಂಬುದು ಬೇಸರದ ಸಂಗತಿ. ಇದೇ ತ್ಯಾಜ್ಯ ಪಿಂಜರಾಪೋಲ್ ಸೇರಿದ್ದರೆ ಅಲ್ಲಿನ ರಾಸುಗಳ ಒಂದು ದಿನದ ಮೇವಾಗುತಿತ್ತು. ಪಿಂಜರಾಪೋಲ್ನ ದಿನದ ಮೇವಿನ ವೆಚ್ಚ ಎರಡು ಲಕ್ಷ ರೂ. ಗಳಿಗೂ ಅಧಿಕವಾಗಿದೆ. ಇನ್ನು ಮುಂದೆ ಈ ರೀತಿ ಸಂಗ್ರಹಿಸಿದ ತ್ಯಾಜ್ಯವನ್ನು ಪಿಂಜರಾಪೋಲ್ ಗೆ ಸಾಗಿಸಿದರೆ ಅಲ್ಲಿನ ಅಶಕ್ತ ರಾಸುಗಳಿಗೆ ಆಹಾರವಾದಂತಾಗುವುದು. ಪ್ರತಿದಿನ ದೇವರಾಜ ಮಾರುಕಟ್ಟೆಯ ತರಕಾರಿ,ಹಣ್ಣುಗಳ ಅಂಗಡಿಗಳಿಂದ ಸಂಗ್ರಹಿಸುವ ಟನ್ ಗಟ್ಟಲೇ ತ್ಯಾಜ್ಯವು ಪಿಂಜರಾಪೋಲ್ ತಲುಪಿದರೆ ಅಲ್ಲಿನ ರಾಸುಗಳಿಗೆ ಸಹಾಯವಾಗುತ್ತದೆ ಹಾಗೂ ಕಸದ ಉಪಯುಕ್ತ ವಿಲೇವಾರಿಯಾದಂತಾಗುವುದು. ಈ ಬಗ್ಗೆ ಪಾಲಿಕೆಯ ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕು.
-ಎಸ್.ರವಿ, ವಕೀಲ, ಮೈಸೂರು.