ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 27 ಬುಧವಾರ 2022

 

ವಸೂಲಿ ಮಾಡಬೇಡಿ!

ಭಾರತದ ಸ್ವತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಮನೆಗೂ ಭೇಟಿಕೊಟ್ಟು ಭಾರತದ ಧ್ವಜವನ್ನು ವಿತರಿಸುವ ಕಾರ್ಯಕ್ರಮದ ಬಗ್ಗೆ ಈಗ ಮಾಧ್ಯಮಗಳಲ್ಲಿ ಕೇಳುತ್ತಿದ್ದೇವೆ. ಈ ಸಂಬಂಧ ನನ್ನ ಸಲಹೆಗಳು ಹೀಗಿವೆ: ೧- ದೇಶಪ್ರೇಮದ ಭಾವನಾತ್ಮಕ ಜಾಗೃತಿ ಮತ್ತು ಜನರ ಐಕ್ಯತೆಯ ಪ್ರಾಮಾಣಿಕ ಸದುದ್ದೇಶವನ್ನು ಈ ಕಾರ್ಯಕ್ರಮವು ಹೊಂದಿರುವುದಾದರೆ, ತ್ರಿವರ್ಣ ಧ್ವಜವನ್ನು ಜನರಿಗೆ ಕೊಡುವಾಗ ಧ್ವಜದ ವೆಚ್ಚವೆಂದು ಅವರಿಂದ ಯಾವುದೇ ಮೊತ್ತದ ಹಣವನ್ನು ಪಡೆಯಬಾರದು. ಮತ್ತು ಯಾರೇ ಸ್ವಯಂ ಪ್ರೇರಿತರಾಗಿ ಎಷ್ಟೇ ಮೊತ್ತದ ಹಣವನ್ನು ಕೊಡಲು ಮುಂದಾದರೂ ಅದನ್ನು ಸ್ವೀಕರಿಸಬಾರದು.

೨- ತ್ರಿವರ್ಣ ಧ್ವಜದೊಂದಿಗೆ ಭಾರತದ ನಿವೃತ್ತ ನ್ಯಾಯಮೂರ್ತಿಗಳಾದ ನ್ಯಾ. ನಾಗಮೋಹನ್ ದಾಸ್ ಅವರು ಭಾರತದ ಸಂವಿಧಾನದ ಬಗ್ಗೆ ಬರೆದಿರುವ ಜನಪ್ರಿಯ ಪುಸ್ತಕ ‘ಸಂವಿಧಾನದ ಓದು ’ ಪ್ರತಿಯೊಂದನ್ನು ಯಾವುದೇ ಬೆಲೆಯನ್ನು ಪಡೆಯದೆ ಜನರಿಗೆ ಕೊಡಬೇಕು. ಇವುಗಳ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಈ ಕಾರ್ಯಕ್ರಮವನ್ನು ಎಲ್ಲಾ ರಾಜಕೀಯ ಪಕ್ಷಗಳ ಸಹಯೋಗದೊಂದಿಗೆ ಮಾತ್ರ ಮಾಡಬೇಕು. ಹಾಗಿಲ್ಲದೆ ಹೋದರೆ ಇಂಥ ಉನ್ನತ ಉದ್ದೇಶವುಳ್ಳ ಕಾರ್ಯಕ್ರಮವು ಅಪ್ರಾಮಾಣಿಕ ಮತ್ತು ಕುಯುಕ್ತಿಯ ಚುನಾವಣಾ ಪ್ರಚಾರದ ಕಾರ್ಯಕ್ರಮವಾಗಿಬಿಡುವ ಅಪಾಯವಿದೆ.
-ವಿ. ಎನ್. ಲಕ್ಷ್ಮೀನಾರಾಯಣ, ಮೈಸೂರು.


ಒಡೆಯರ್ ಪ್ರತಿಮೆಯೇ ಸೂಕ್ತ

ಪ್ರಮೋದ ದೇವಿ ಒಡೆಯರ್ ಅವರು ಸುತ್ತೂರು ಶ್ರೀಗಳಿಗೆ ಪತ್ರ ಬರೆದು ಶ್ರೀ ಕಂಠದತ್ತ ಒಡೆಯರ್ ಪ್ರತಿಮೆ ಸ್ಥಾಪಿಸುವುದು ಸೂಕ್ತ ಎಂದು ಬರೆದಿರುವುದು ಸರಿಯಾಗಿದೆ. ಅರಮನೆಯ ಸುತ್ತ ಮಹಾರಾಜರ ಪ್ರತಿಮೆ ಇಡುವುದು ಸರಿ. ವಾಸ್ತವಿಕ ಸಂಗತಿ ಎಂದರೆ ಈಗಿರುವ ಸುತ್ತೂರು ಮಠ, ಆಸ್ಪತ್ರೆ ಇರುವ ಸ್ಥಳದಲ್ಲಿ ಅರಮನೆಗೆ ಸೇರಿದ ಪೂರ್ಣಯ್ಯನವರ ಛತ್ರ ಮತ್ತು ಆನೆ ಕರೋಟಿ ಇತ್ತು. ಆ ಜಾಗ ಅರಮನೆಯಿಂದಲೇ ಕೊಟ್ಟಿದ್ದಾರೆ. ಈ ವಿಷಯ ಸರಿಯಾಗಿ ಯೋಚಿಸಿ ತೀರ್ಮಾನ ಮಾಡುವ ಶಕ್ತಿ ನಮ್ಮ ಈಗಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳಿಗೆ ಇದೆ. ಅವರು ಸೂಕ್ತ ತೀರ್ಮಾನ ಮಾಡುತ್ತಾರೆ ಎಂಬ ನಂಬಿಕೆ ಇದೆ.
– ಎಸ್.ಪದ್ಮವತಿ ಬಾಯಿ, ಮೈಸೂರು


ಚಿಂತನಾರ್ಹ ಲೇಖನ

‘ಆಂದೋಲನ’ದಲ್ಲಿ ಎರಡು ಕಂತುಗಳಲ್ಲಿ ಪ್ರಕಟವಾದ ನಾ ದಿವಾಕರ ಅವರ ‘ನಾಗರೀಕತೆಯತ್ತ ಸಾಗಲು ಒಂದು ನೀತಿ ಸಂಹಿತೆ ಬೇಕಿದೆ’ ಎನ್ನುವ ಲೇಖನ ಚಿಂತಾನಾರ್ಹವಾಗಿದೆ. ಕಳೆದರಡು ಮೂರು ದಶಕದಿಂದ ನಮ್ಮ ನಾಗರಿಕ ಸಮಾಜ ಯಾರಿಗೂ ಹೇಳುವ ನೈತಿಕತೆಯನ್ನೇ ಕಳೆದುಕೊಂಡಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಶಿಕ್ಷಣ, ರಾಜಕೀಯ, ಸ್ವಲ್ಪ ಮಟ್ಟಿಗೆ ನ್ಯಾಯಾಂಗ ವ್ಯವಸ್ಥೆ ಯೂ ಹೌದು. ಇಂದಿನ ಸಮಾಜದ ಸಂಸ್ಕಾರರಹಿತ ನಡವಳಿಕೆಗೆ ನಾವೆಲ್ಲರೂ ಹೊಣೆಗಾರರೇ. ದುರಹಂಕಾರಿಗಳಿಗೆ, ನಾಗರೀಕ ಸಮಾಜ ತಲೆತಗ್ಗುವಂತೆ ಮಾಡುವ ಅನಾಗರಿಕರಿಗೆ ಪಾಠ ಕಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕಾಗಿದೆ
-ಶಿವಮೊಗ್ಗ ನಾ. ದಿನೇಶ್ ಅಡಿಗ, ಮೈಸೂರು.


ಹೆಸರಿನಗಷ್ಟೇ ಜೈ ಕಿಸಾನ್!

ರೈತನನ್ನು ದೇಶದ ಬೆನ್ನೆಲೆಬು ಎನ್ನುತ್ತಾರೆ. ‘ಜೈ ಜವಾನ್- ಜೈ ಕಿಸಾನ್’ ಎಂದು ಆದರಿಸುತ್ತಾರೆ. ವಾಸ್ತವವಲ್ಲಿ ರೈತರಿಗೆ ದಕ್ಕಬೇಕಾದ ಗೌರವವೂ ದಕ್ಕುತ್ತಿಲ್ಲ. ರೈತರು ಬೆಳೆದ ಬೆಳೆಗಳಿಗೆ ಗೌರವಯುತವಾದ ಬೆಲೆಯೂ ದಕ್ಕುತ್ತಿಲ್ಲ. ಅತಿವೃಷ್ಟಿ, ಬರ ಮತ್ತಿತರ ಪ್ರಕೃತಿ ಪ್ರಕೋಪಗಳ ಜತೆ ಸೆಣೆಸುತ್ತ ದೇಶಕ್ಕೆ ಆಹಾರ ಉತ್ಪಾದಿಸುವ ರೈತನಿಗೆ ಆಹಾರ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಬೆಳೆಗಳಿಗೆ ನಿರ್ಧಿಷ್ಟ ದರ ನಿಗದಿ ಮಾಡಿ, ಆ ದರದಲ್ಲೇ ಖರೀದಿ ಮಾಡಬೇಕು. ಆಗ ಮಾತ್ರ ರೈತರಿಗೆ ನ್ಯಾಯ ದೊರೆಯುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲ್ಲಾ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ, ಕಾನೂನು ಮೂಲಕ ಜಾರಿ ಮಾಡಬೇಕು.
-ಅಯತಿಂಕ ಕುಂಡು, ಮಹಾರಾಜ ಕಾಲೇಜು, ಮೈಸೂರು.


ಆಪರೇಷನ್ ವಿಜಯ್

ಜುಲೈ ೨೬ ಭಾರತೀಯರೆಲ್ಲರೂ ಹೆಮ್ಮೆ ಪಡುವ ದಿನ. ೨೩ ವರ್ಷಗಳ ಹಿಂದೆ, ಪಾಕಿಸ್ತಾನದ ಸೇನೆ ಕುತಂತ್ರದಿಂದ ಲೇಹ್ ಹೆದ್ದಾರಿವರೆಗೆ ಆಕ್ರಮಿಸಿಕೊಂಡಿದ್ದ ಕಾರ್ಗಿಲ್ ಪ್ರದೇಶಗಳನ್ನು ಭಾರತೀಯ ಯೋಧರು ಶೌರ್ಯ, ಪರಾಕ್ರಮ, ತ್ಯಾಗ ಬಲಿದಾನದಿಂದ ಮರಳಿ ವಶಕ್ಕೆ ಪಡೆದರು. ಈ ಕಾರ್ಗಿಲ್ ಯುದ್ಧದಲ್ಲಿ ಸೇನೆಯ ಅಧಿಕಾರಿಗಳು ಸೇರಿದಂತೆ ೫೨೭ ಮಂದಿ ಭಾರತೀಯ ಯೋಧರು ಹುತಾತ್ಮರಾದರು, ಈ ಕಾರ್ಯಾಚರಣೆಗೆ ‘ಆಪರೇಷನ್ ವಿಜಯ್’ ಎಂದು ಹೆಸರಿಡಲಾಗಿತ್ತು, ಹುತಾತ್ಮರಾಗಿರುವ ಯೋಧರು ಇಂದು ನಮಗೆ ಪ್ರೇರಣೆಯಾಗಿದ್ದಾರೆ.
-ಪರಶಿವಮೂರ್ತಿ ಎನ್.ಪಿ, ಶಿ ನಂಜೀಪುರ, ಸರಗೂರು ತಾಲ್ಲೂಕು,


ಕೊಡಗನ್ನು ಉಳಿಸಿ

ಅಲ್ಪ ಸ್ವಲ್ಪ ಉಳಿದಿರುವ ಹಸಿರನ್ನು ಹಂಚಿ ಕೊಡಗನ್ನು ಹಸಿರು ಮುಕ್ತ ಮಾಡುವುದು ಸರಿಯೆ? ಈಗಾಗಲೆ ಅಭಿವೃದ್ಧಿ ಹೆಸರಲ್ಲಿ ಕೊಡಗು ತತ್ತರಿಸಿದೆ, ಭೂ ಕುಸಿತ, ಅಂತರ್ಜಲ ಕೊರತೆ ಕಾಡುತ್ತಿದೆ, ಕರ್ನಾಟಕದ ಸಿಟ್ಟರ್ಲ್ಯಾಂಡ್ ತನ್ನ ಮೂಲಸ್ವರೂಪ ಹಾಗೇ ಉಳಿಸಿ ಕೊಳ್ಳಲು ಬಿಡಿ. ಪ್ರಕೃತಿ ಯ ಮೇಲಿನ ಅತ್ಯಾಚಾರ ಕೈ ಬಿಡಿ.
-ತೇಜಸ್ ಕುಮಾರ್ ಎ, ಮಹಾರಾಜ ಕಾಲೇಜು, ಮೈಸೂರು.

 

andolana

Recent Posts

ಹೊರ್ಮುಜ್‌ ಬಿಕ್ಕಟ್ಟು | ಇರಾನ್‌ನ ಬಂದರುಗಳಿಗೆ ಅಮೆರಿಕದ ದಿಗ್ಬಂಧನ ಪ್ರಾರಂಭ

ಟೆಹ್ರಾನ್‌ : ಇರಾನಿನ ಬಂದರುಗಳು ಸಾಗುವ ಸಮುದ್ರ ಸಂಚಾರದ ಮೇಲೆ ಅಮೆರಿಕ ಮಿಲಿಟರಿ ದಿಗ್ಬಂಧನವನ್ನು ನಿಗದಿತ ಗಡುವಿನಂತೆ ಆರಂಭಿಸಿದೆ. ಈ…

6 hours ago

ರೋಹಿಣಿ ಸಿಂಧೂರಿ ವಿರುದ್ಧ ತನಿಖೆ : ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

ನವದೆಹಲಿ : ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ಆರೋಪ ಸಂಬಂಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಮಧ್ಯಂತರ…

6 hours ago

ಅನಗತ್ಯ ಹೇಳಿಕೆ ನೀಡಿದರೆ ಶಿಸ್ತುಕ್ರಮ ; ಕೈ ಶಾಸಕರಿಗೆ ಡಿ.ಕೆ.ಶಿ ಎಚ್ಚರಿಕೆ

ಬೆಂಗಳೂರು : ಪಕ್ಷದ ಶಾಸಕರು ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ. ಅನವಶ್ಯಕವಾಗಿ ಏನೇನೋ ಹೇಳಿಕೆ ನೀಡಿದರೆ ಶಿಸ್ತು ಕ್ರಮ…

7 hours ago

ಹೆದ್ದಾರಿ ತಡೆದು ಪ್ರತಿಭಟನೆ : ಬಂಡೀಪುರ ರಾತ್ರಿ ಸಂಚಾರ ತೆರವು ಮಾಡದಂತೆ ಆಗ್ರಹ

ಚಾಮರಾಜನಗರ : ವಯನಾಡು ಸಂಸದೆ ಪ್ರಿಯಾಂಕ ವಾದ್ರಾ ಅವರು ಬಂಡೀಪುರ ರಾತ್ರಿ ಸಂಚಾರ ನಿಷೇಧ ಮುಕ್ತ ಮಾಡುವುದಾಗಿ ಹೇಳಿರುವುದು ಮತ್ತು…

7 hours ago

ಕೊಡಗು | ತೆರೆದ ಬಾವಿಗೆ ಬಿದ್ದ ಕಾಡಾನೆ ಮರಿ , ರಕ್ಷಣೆ

ಮಡಿಕೇರಿ : ಕಾಡಾನೆ ಮರಿಯೊಂದು ಬಾವಿಗೆ ಬಿದ್ದು ನರಳಾಡಿದ ಘಟನೆ ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಪೆರಾಜೆ ಸಮೀಪದ ಕಲ್ಚೆರ್ಪೆಯಲ್ಲಿ…

8 hours ago

ಹೊರ್ಮುಜ್‌ ಬಿಕ್ಕಟ್ಟು | ಅಮೆರಿಕ ದಿಗ್ಬಂಧನ ಬೆನ್ನಲ್ಲೇ ಇರಾನ್‌ ವಾರ್ನಿಂಗ್‌

ಟೆಹ್ರಾನ್ : ಕದನ ವಿರಾಮ ಒಪ್ಪಂದಕ್ಕೆ ಬರಲು ವಿಫಲವಾದ ನಂತರ, ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳಿಗೆ ದಿಗ್ಬಂಧನ ವಿಧಿಸುವುದಾಗಿ…

8 hours ago