ಎಡಿಟೋರಿಯಲ್

ಆಂದೋಲನ ನಾಲ್ಕು ದಿಕ್ಕಿನಿಂದ : 21 ಸೋಮವಾರ 2022

ರಾಹುಲ್ ಕುಟುಕಿದ ಮೋದಿ

ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ನರ್ಮದಾ ಬಚಾವೋ ಆಂದೋಲನದ ಮೇಧಾ ಪಾಟ್ಕರ್ ಹೆಜ್ಜೆ ಹಾಕಿದ್ದರ ಬಗ್ಗೆ ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ. ಗುಜರಾತ್‌ನ ಜೀವನಾಡಿಯಾಗಿರುವ ನರ್ಮದಾ ಅಣೆಕಟ್ಟೆ ಯೋಜನೆ ವಿರುದ್ಧ ಅಭಿಯಾನ ನಡೆಸಿದ್ದವರು ಮೇಧಾ ಪಾಟ್ಕರ್. ಮೂರು ದಶಕಗಳಿಂದ ನರ್ಮದಾ ಅಣೆಕಟ್ಟೆ ಯೋಜನೆಯನ್ನು ಸ್ಥಗಿತಗೊಳಿಸಿದ ಮಹಿಳೆಯೊಂದಿಗೆ ಕಾಂಗ್ರೆಸ್ ನಾಯಕರೊಬ್ಬರು ಪಾದಯಾತ್ರೆ ನಡೆಸುತ್ತಿರುವುದು ಕಂಡುಬಂದಿದೆ ಎಂದು ಮೋದಿ ಟೀಕಿಸಿದ್ದಾರೆ. ಗುಜರಾತ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ ಅವರು ಪರೋಕ್ಷವಾಗಿ ‘ಭಾರತ್ ಜೋಡೊ ಯಾತ್ರೆ’ ನಡೆಸುತ್ತಿರುವ ರಾಹುಲ್ ಗಾಂಧಿ ಅವರನ್ನು ಟೀಕಿಸಿದರು. ಗುಜರಾತ್ ಅಭಿವೃದ್ಧಿಗೆ ನಾವು ಶ್ರಮಿಸಿದ್ದೇವೆ ಮುಂದೆಯೂ ಗುಜರಾತ್ ಅನ್ನು ಶ್ರೇಷ್ಠರಾಜ್ಯವನ್ನಾಗಿ ರೂಪಿಸುತ್ತೇವೆ ಎಂದು ಮೋದಿ ಹೇಳಿದರು. ಗುಜರಾತ್ ನಲ್ಲೀಗ ಚುನಾವಣಾ ಪ್ರಚಾರ ತಾರಕಕ್ಕೇರಿದ್ದು, ಬಿಜೆಪಿ- ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಹಣಾಹಣಿಗೆ ಇಳಿದಿವೆ.


ಚಿಕ್ಕಪ್ಪನಿಗೆ ಶಿರಸಾಷ್ಟಾಂಗ ನಮಸ್ಕಾರ

ಸಮಾಜವಾದಿ ಪಕ್ಷದ ನೇತಾರ ಮುಲಾಯಂ ಸಿಂಗ್ ಯಾದವ್ ಅವರ ನಿಧನದಿಂದ ತೆರವಾಗಿರುವ ಮೈನ್‌ಪುರಿ ಲೋಕಸಭಾ ಉಪಚುನಾವಣೆಯ ಪ್ರಚಾರ ತಾರಕಕ್ಕೇರಿದೆ. ಸಮಾಜವಾದಿ ಪಕ್ಷದ ತೆಕ್ಕೆಯಲ್ಲಿರುವ ಈ ಕ್ಷೇತ್ರವನ್ನು ಹೇಗಾದರೂ ವಶಪಡಿಸಿಕೊಳ್ಳುವ ಇರಾದೆ ಆಡಳಿತಾರೂಢ ಬಿಜೆಪಿಗೆ ಇದೆ. ಆದರೆ, ತಮ್ಮ ಕೋಟೆಯನ್ನು ರಕ್ಷಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ಅಖಿಲೇಶ್ ಯಾದವ್ ತಮ್ಮ ಪತ್ನಿ ಡಿಂಪಲ್ ಯಾದವ್ ಅವರನ್ನೇ ಕಣಕ್ಕೆ ಇಳಿಸಿದ್ದಾರೆ. ಅಲ್ಲದೇ ರಾಜಕೀಯ ಕೌಟುಂಬಿಕ ಕಲಹದಿಂದಾಗಿ ದೂರವಿದ್ದ ಚಿಕ್ಕಪ್ಪ ಶಿವಪಾಲ್ ಯಾದವ್ ಅವರ ನೆರವನ್ನು ಅಖಿಲೇಶ್ ಯಾದವ್ ಪಡೆದಿದ್ದಾರೆ. ಚುನಾವಣಾ ಪ್ರಚಾರದ ಸಭೆಯಲ್ಲೇ ಅಖಿಲೇಶ್ ಯಾದವ್ ಅವರು ಚಿಕ್ಕಪ್ಪ ಶಿವಪಾಲ್ ಯಾದವ್ ಅವರ ಪಾದಗಳಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ. ತಮ್ಮ ಮತ್ತು ಚಿಕ್ಕಪ್ಪನವರ ಸಂಬಂಧದಲ್ಲಿ ಯಾವುದೇ ಒಡಕು ಉಂಟಾಗಿಲ್ಲ ಎಂದು ಬಹಿರಂಗವಾಗಿ ಸಾರಿದ್ದಾರೆ. ಕೌಟುಂಬಿಕ ಕಲಹದ ಮತಲಾಭ ಪಡೆಯಲು ಮುಂದಾಗಿದ್ದ ಬಿಜೆಪಿಗೆ ಈ ಬೆಳವಣಿಗೆಯಿಂದ ಕೊಂಚ ಹಿನ್ನಡೆಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.


ಹಿಮಾಚಲಕ್ಕೆ ಪ್ರವಾಸಿಗರ ಪ್ರವಾಹ

ಈಗಷ್ಟೇ ಮತದಾನ ನಡೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಸೇಬಿನ ಸಾಮ್ರಾಜ್ಯ ಹಿಮಾಲಯ ಪ್ರದೇಶದಲ್ಲೀಗ ಪ್ರವಾಸಿಗರ ಪ್ರವಾಹವೇ ಹರಿಯುತ್ತಿದೆ. ಕೋವಿಡ್ ಕಾರಣಕ್ಕಾಗಿ ಪ್ರವಾಸಿಗರ ಸಂಖ್ಯೆ ಕಳೆದ ವರ್ಷ ಕುಂಠಿತಗೊಂಡಿತ್ತು. ಈ ವರ್ಷ ಜನವರಿಯಿಂದೀಚೆಗೆ ೧.೩೦ ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದು ಕೋವಿಡ್ ಪೂರ್ವದಲ್ಲಿದ್ದ ಪ್ರಮಾಣಕ್ಕಿಂತಲೂ ಹೆಚ್ಚಿದೆ. ಕಳೆದ ವರ್ಷ ಭೇಟಿ ಕೊಟ್ಟವರ ಸಂಖ್ಯೆಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು. ಹಿಮಾಚಲ ಪ್ರದೇಶದ ಪ್ರವಾಸೋದ್ಯಮವು ಕೋವಿಡ್-ಪ್ರೇರಿತ ವಿರಾಮದ ನಂತರ ತೀವ್ರ ವೇಗವನ್ನು ಪಡೆದುಕೊಂಡಿದೆ ಮತ್ತು ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್ ೩೧ ರವರೆಗೆ ಮೂರು ಪಟ್ಟು ಹೆಚ್ಚಾಗಿದೆ. ಅತಿಯಾದ ಚಳಿ ಇರುವ ಜನವರಿ ತಿಂಗಳಲ್ಲೇ ೭.೭೦ ಲಕ್ಷ ಜನರು ಬಂದಿದ್ದರು. ಜೂನ್ ತಿಂಗಳಲ್ಲಿ ಬಂದವರ ಸಂಖ್ಯೆ ೨೦ ಲಕ್ಷ ದಾಟಿತ್ತು. ಪ್ರವಾಸೋದ್ಯಮ ಇಲಾಖೆಯ ಅಂಕಿಅಂಶಗಳ ಪ್ರಕಾರ ಜನವರಿ ೧ ರಿಂದ ಅಕ್ಟೋಬರ್ ೩೧ ರ ನಡುವೆ ೨೮,೨೩೨ ವಿದೇಶಿಯರು ಭೇಟಿ ನೀಡಿದ್ದಾರೆ.


ಅಲ್ಪ ಬಡ್ಡಿ ಏರಿಕೆ ನಿರೀಕ್ಷೆ

ಹಣದುಬ್ಬರ ಕೊಂಚ ಪ್ರಮಾಣದಲ್ಲಿ ತಗ್ಗಿರುವುದರಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಡಿಸೆಂಬರ್‌ನಲ್ಲಿ ನಡೆಯಲಿರುವ ಹಣಕಾಸು ನೀತಿ ದ್ವೈಮಾಸಿಕ ಸಭೆಯಲ್ಲಿ ಹಿಂದಿನಂತೆ ಶೇ.೦.೫೦ರಷ್ಟು ಬಡ್ಡಿ ಏರಿಸುವ ಸಾಧ್ಯತೆ ಇಲ್ಲ. ಆದರೆ, ಏರಿಕೆ ಪ್ರಮಾಣವು ಶೇ.೦. ೩೫ರಷ್ಟು ಇರಲಿದೆ. ಹಣದುಬ್ಬರ ನಿಯಂತ್ರಿಸುವ ಸಲುವಾಗಿ ಈಗಾಗಲೇ ಶೇ.೧.೯೦ರಷ್ಟು ಬಡ್ಡಿದರ ಏರಿಕೆ ಮಾಡಲಾಗಿದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಿದೆ. ಹಣದುಬ್ಬರ ನಿಗದಿತ ಪ್ರಮಾಣಕ್ಕೆ ತಗ್ಗುವವರೆಗೂ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವ ಅಥವಾ ತಗ್ಗಿಸುವ ಸ್ಥಿತಿಯಲ್ಲಿ ಆರ್‌ಬಿಐ ಇಲ್ಲ. ಹೀಗಾಗಿ ಹಣಕಾಸು ನೀತಿ ಸಮಿತಿ ಶೇ.೦.೩೫ರಷ್ಟು ಬಡ್ಡಿದರ ಏರಿಸಲಿದೆ ಎಂಬುದು ಮಾರುಕಟ್ಟೆ ತಜ್ಞರ ಅಂದಾಜು. ೨೦೨೩ರ ಉತ್ತರಾರ್ಧದೊಳಗೆ ಹಣದುಬ್ಬರ ನಿಗದಿತ ಮಿತಿಯೊಳಗೆ ಬರಲಿದೆ ಎಂದ ನಿರೀಕ್ಷೆ ಆರ್‌ಬಿಐ ಗವರ್ನರ್ ಶಕ್ತಿಕಾಂತದಾಸ್ ಅವರದು. ಅಲ್ಲಿಯವರೆಗೆ ಅಲ್ಪಪ್ರಮಾಣದ ಬಡ್ಡಿದರ ಏರಿಕೆ ಅನಿವಾರ್ಯ. ಆನಂತರ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ.

andolana

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

15 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

19 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

19 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

19 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

19 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

19 hours ago